Author: anupamamasika@gmail.com

  • ಬಂಧನ: ಕಥೆ

    ಬಂಧನ: ಕಥೆ

    ಇವತ್ತು ಗುರುವಾರ. ನನಗೆ ಅಲ್ಲಿಗೆ ಹೋಗಬೇಕಮ್ಮಾ… ಮಗಳು ಶಾಲೆಯಿಂದ ಬೇಗ ಬಂದರೆ… ಎಂದಿನಂತೇ ಏನಾದರೂ ಕಾರಣ ಹೇಳಿ ಬಿಡು ಅಮ್ಮಾ. ಅವಳಿಗಿಷ್ಟದ ತಿಂಡಿ ಮಾಡಿದ್ದೇನೆ…

    ಸಾಯಿರಾ ಸಿಂಗರಿಸಿಕೊAಡು ಬುರ್ಖಾ ಧರಿಸಿ ಹೊರಟಾಗ ತಾಯಿ ಫಾತೀಮಾ ಟಿಫಿನ್ ಬಾಕ್ಸ್ನ್ನು ಮಗಳ ಕೈಗೆ ಕೊಡುತ್ತಾ ಇದರಲ್ಲಿ ಶೇವಿಗೆ ಪಾಯಸ ಇದೆ, ಆತನಿಗೆ ತುಂಬಾ ಇಷ್ಟ ತಾನೆ… ಕೊಡು.. ಎಂದರು ನಗುತ್ತಾ, ಅಂಗಳದಲ್ಲಿಟ್ಟ ಸ್ಕೂಟರ್ ಹತ್ತಿ ಆಕೆ ಕೈಯಾಡಿಸಿದಳು.

    ಶಾಂತ ಲಾಡ್ಜ್’ನೊಳಗೆ ಸಾಯಿರಾ ಬಂದಾಗ ವಾಚ್‌ಮ್ಯಾನ್ ಪರಿಚಯದ ನಗೆ ಬೀರಿ ಸಲಾಮ್ ಹೇಳಿದ. ಸಾರ್… ಬಂದಿದ್ದರಾ? ಸಾಯಿರಾ ಕೇಳಿದಾಗ, ವಾಚ್‌ಮ್ಯಾನ್ ನಸುನಗುತ್ತಾ ಹೌದು ಮ್ಯಾಡಮ್… ಅವರು ಬಂದು ಆದಾಗಲೇ ಅರ್ಧ ಗಂಟೆ ಆಗಿರಬಹುದು. ಸಾಯಿರಾ ಅವಸರದಲ್ಲಿ ಲಿಫ್ಟ್ನೊಳಗೆ ನುಸುಳಿಕೊಂಡು ಉಸಿರು ಬಿಟ್ಟಳು. ರೂಮ್ ನಂಬರ್ ನೂರಹನ್ನೊಂದರ ಮುಂದೆ ನಿಂತ ಸಾಯಿರಾ ಮೆಲ್ಲನೆ ಬಾಗಿಲು ತಟ್ಟಿದಳು. ಮೆಲ್ಲನೆ ಬಾಗಿಲು ತೆರೆಯಿತು. ಸಾಯಿರಾ ನಸು ನಗುತ್ತಾ ತನ್ನೆದುರು ನಿಂತವನನ್ನು ನೋಡಿದಳು. ಸಲಾಮ್ ಹೇಳಿದ ಆತ ಅವಳನ್ನು ಬರಸೆಳೆದುಕೊಳ್ಳುತ್ತಾ, “ಯಾಕಿಷ್ಟು ತಡ ಮಾಡಿದೆ ಚಿನ್ನಾ?” ಎಂದ ನಸು ಮುನಿಸು ತೋರಿಸುತ್ತಾ. ಸ್ಸಾರೀ… ಮಗಳನ್ನು ಶಾಲೆಗೆ ಕಳುಹಿಸಿ ಬರಬೇಕಲ್ಲವೇ? ಬೇಸರ ಮಾಡಬೇಡಿ… ಬರುವ ವಾರ ನಿಮಗಿಂತಲೂ ಮುಂಚೆ ನಾನೇ ಬಂದು ನಿಮ್ಮನ್ನು ಕಾಯುತ್ತೇನೆ… ಸರಿನಾ? ಅಂದಹಾಗೆ ಅಮ್ಮ ನಿಮಗೆ ಪಾಯಸ ಕೊಟ್ಟು ಕಳುಹಿಸಿದ್ದಾಳೆ. ನೀವು ನಿಮ್ಮ ಬಾಹುಗಳ ಬಿಗಿತವನ್ನು ಸಡಲಿಸಿದರೆ… ನಾನು ಟಿಫಿನ್ ಬಿಚ್ಚಬಹುದೂ… ಸಾಯಿರಾ ತುಂಟ ನೋಟದೊಂದಿಗೆ ಹೇಳಿದಾಗ ಅವನು ಆಕೆಯ ಸೊಂಟದಿಂದ ಕೈ ತೆಗೆದ.

    ವಾಹ್! ಅತ್ತೆಯ ಕೈ ರುಚಿ ಅದ್ಭುತ! ನನ್ನ ಅಮ್ಮನೂ ಇದೇ ರೀತಿ ಪಾಯಸ ಮಾಡುತ್ತಿದ್ದರು… ಪಾಯಸವನ್ನು ಚಪ್ಪರಿಸುತ್ತಾ ಪತಿ ಹೇಳಿದಾಗ ಸಾಯಿರಾ ಖುಶಿಗೊಂಡಳು. ಹನೀಫ್ ತಾನು ತಂದ ಮಲ್ಲಿಗೆಯನ್ನು ಪತ್ನಿಯ ತಲೆಗೆ ತಾನೇ ಮುಡಿಸುತ್ತಾ, “ನೀನು ಸದಾ ಮದುಮಗಳಂತೇ ನನ್ನ ಮುಂದೆ ಇರಬೇಕು ಸಾಯಿರಾ, ನಿನ್ನ ಮಗಳ ಹುಟ್ಟಿದ ಹಬ್ಬ ನಾಳೆ ತಾನೆ. ನನಗೆ ದಾರಿಯಲ್ಲಿ ಬರುತ್ತಿರಬೇಕಾದರೆ ನೆನಪಾಯಿತು. ಹೋದ ವರ್ಷ ಅವಳಿಗೆ ಕಾಲಿನ ಗೆಜ್ಜೆ ನೀಡಿದ್ದೆ. ಈ ಬಾರಿ ನಾನು ಏನು ಖರೀದಿಸಲಿ…” ಎಂದು ಚಿಂತಿಸುತ್ತಿದ್ದಾಗ ಸುಂದರವಾದ ಡ್ರೆಸ್ ಶೋಕೇಸ್‌ನಲ್ಲಿ ಕಂಡು ಬಂತು. ಅದನ್ನೇ ಉಡುಗೊರೆಯಾಗಿ ತಂದೆ. ನೀವು… ಅವಳನ್ನು ಪ್ರೀತಿಸುತ್ತೀರಿ… ಆದರೆ… ಆಕೆಗೆ ನಿಮ್ಮ ಪರಿಚಯವೂ ಇಲ್ಲ! ಅವಳ ಶಾಲೆಯ ಫೀಸ್, ಆಕೆಗೆ ವಸ್ತ್ರ, ಉಡುಗೊರೆ ಎಲ್ಲವನ್ನೂ ನೀವು ಕೊಡುತ್ತಿದ್ದೀರಿ, ಅವಳಿಗೆ ಅದನ್ನೆಲ್ಲಾ ನೀಡುತ್ತಿರುವ ವ್ಯಕ್ತಿಯ ಕುರಿತು ಏನೂ ತಿಳಿದಿಲ್ಲ. ನಾನು ಏನು ಮಾಡಲಿ ಹನೀಫ್? ಯಾವಾಗ ಅವಳಿಗೆ ತಿಳಿಸುವುದು? ಆಕೆಯ ಅಮ್ಮನ ಬದುಕಲ್ಲಿ ಪತಿ’ ಎಂಬ ಓರ್ವನಿದ್ದಾನೆ… ಆಕೆಗೆ ಮಲ ತಂದೆ ಇದ್ದಾರೆಂದು ಹೇಗೆ ತಿಳಿಸಲಿ?

    ಅವಳ ಅಪ್ಪ ಆಕ್ಸಿಡೆಂಟ್‌ನಲ್ಲಿ ತೀರಿ ಹೋದ ನಂತರ ನಾನು ಬೇರೆ ಮದುವೆನೇ ಆಗಲಾರೆ ಎಂದು ನಿರ್ಧಾರ ಮಾಡಿದ್ದೆ. “ಅಮ್ಮಾ… ನಿಮ್ಮನ್ನು ನಾನೇ ಸಾಕುತ್ತೇನೆ, ನಾನು ಕಲಿತು ಉದ್ಯೋಗ ಮಾಡ್ತೇನೆ, ಅಪ್ಪನನ್ನು ನೆನೆದು ಕಣ್ಣೀರು ಹಾಕುತ್ತಿರಬೇಡಿ…!” ಎಂದು ನನ್ನನ್ನು ಅಂದು ಸಂತೈಯಿಸಿದಾಗ ಪಿಂಕಿಗೆ ಎಂಟು ವರ್ಷ. ಈಗ ಹದಿನಾಲ್ಕು ವರ್ಷಕ್ಕೆ ಕಾಲಿಡುತ್ತಿದ್ದಾಳೆ. ನಿಮ್ಮನ್ನು ಮದುವೆ ಆಗಿ ಎರಡು ವರ್ಷ ಆಯಿತು. ಪಿಂಕಿಗೆ ಅವಳ ಅಮ್ಮನ ಬದುಕಲ್ಲಿ ಬೇರೊಬ್ಬ ಬರುವುದೇ ಇಷ್ಟವಿಲ್ಲ ಎಂಬ ಸತ್ಯ ನನಗೆ ತಿಳಿದಿತ್ತು. ಅಮ್ಮನ ಬಲವಂತ ಹಾಗೂ ತನ್ನ ಭವಿಷ್ಯದ ಚಿಂತೆ ಮಾಡಿಕೊಂಡು ನಾನು ಮರು ವಿವಾಹಕ್ಕೆ ಮನಸ್ಸು ಮಾಡಿದ್ದೆ. ಇಪ್ಪತೆಂಟರ ಹರೆಯಕ್ಕೇ ನಾನು ಗಂಡನನ್ನು ಕಳೆದುಕೊಂಡಾಗ ಮಗಳಿಗಾಗಿ ಮಾತ್ರ ಅಂದು ಬದುಕಿದ್ದೆ. ವರ್ಷ ಕಳೆದಂತೇ ರಾತ್ರಿಯು ನನ್ನನ್ನು ನಿದ್ರಾಹೀನಳನ್ನಾಗಿಸಿತು. ಬಯಕೆಗಳನ್ನು ತಡೆದುಕೊಳ್ಳಲು ನಾನು ಬಚ್ಚಲು ಕೋಣೆಯೊಳಗೆ ಹೊಕ್ಕು ತಣ್ಣೀರನ್ನು ತಲೆಮೇಲೆ ಹೊಯ್ದುಕೊಳ್ಳುತ್ತಿದ್ದೆ. ಉಪವಾಸ ವ್ರತ ಮಾಡುತ್ತಿದ್ದೆ. ಯಾರೊಂದಿಗು ಹೇಳಲಾಗದ ಈ ಒಂಟಿಯಾತನೆಯಲ್ಲಿ ನಾನು ಬೆಂದು ಹೋಗುತ್ತಿದ್ದಾಗ ನನ್ನ ದೊಡ್ಡಪ್ಪನನ್ನು ಭೇಟಿ ಆಗಲು ನೀವು ಮನೆಗೆ ಬಂದಿರಿ. ನನ್ನನ್ನು ನೋಡಿದಿರಿ. ನನ್ನ ಕಥೆಯೆಲ್ಲಾ ನಿಮಗೆ ತಿಳಿಯಿತು. ಪಿಂಕಿಗೆ ಈಗ ತಿಳಿಯುವುದೇ ಬೇಡಾ, ಪ್ರಾಯಕ್ಕೆ ಬಂದಾಗ ತಿಳಿದೇ ತಿಳಿಯುತ್ತದೆ… ಎಂದೆಲ್ಲಾ ಅಮ್ಮ ಸಮಧಾನಿಸಿ ನಿಮ್ಮೊಂದಿಗೆ ಮದುವೆಗೆ ಒಪ್ಪಿಸಿದರು. ನಾವಿಂದು ಗುಟ್ಟಾಗಿ ದಾಂಪತ್ಯ ನಡೆಸುತ್ತಿದೇವೆ… ಇನ್ನು ಎಷ್ಟು ಸಮಯ ಹನೀಫ್…? ಈ ರೀತಿ ಗುಟ್ಟು ಇಡುವುದು? ಪ್ರತೀ ಗುರುವಾಗ ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ಪ್ರಶ್ನಿಸುತ್ತಿದ್ದಾಳೆ ಮಗಳು. ಸುಳ್ಳು ಹೇಳಿ ಬರುವುದೇ ಕಷ್ಟವಾಗುತ್ತಿದೆ. ನಾನು ನಿಮ್ಮೊಂದಿಗೆ ಮೊಬೈಲ್‌ನಲ್ಲಿ ಹರಟುತ್ತಿದ್ದರೆ ಸಂಶಯದಿಂದ ನೋಟ ಹರಿಸುತ್ತಿದ್ದಾಳೆ. ಅವಳಿಗೆ ಸತ್ಯ ತಿಳಿಸಿ ಬಿಡಬೇಕು ಎಂದು ಈಗೀಗ ಅನಿಸುತ್ತಿದೆ. ಆಕೆ ದೊಡ್ಡವಳಾಗಿದ್ದಾಳೆ… ಅರ್ಥ ಮಾಡಿಕೊಳ್ಳಬಹುದೂ…

    ಸಾಯಿರಾಳ ಮಾತುಗಳನ್ನು ಮೌನವಾಗಿ ಆಲಿಸುತ್ತಿದ್ದ ಹನೀಫ್ ಪತ್ನಿಯನ್ನು ಸಮಧಾನಿಸಿದ. ಪಿಂಕಿಗೆ ಮದುವೆ ಸಮಯ ಬಂದಾಗ ನಾನು ಮುಂದೆ ಬರಲೇಬೇಕಲ್ಲವೇ? ಸಹನೆ ವಹಿಸು.. ಅವಳು ಈ ಸತ್ಯವನ್ನು ಒಪ್ಪಿಕೊಳ್ಳುವಳು. ಸಾಯಿರಾ ಅವನ ಎದೆಗೆ ಮುಖ ಒತ್ತಿ ಕಣ್ಣು ಮುಚ್ಚಿದಳು. ಪುರುಷನ ಆಸರೆ ಇಲ್ಲದೇ ಬದುಕುವುದೇ ಕಷ್ಟ… ನಿಮ್ಮಂತಹ ಒಳ್ಳೆಯ ಸಂಗಾತಿಯನ್ನು ನಾನು ಪಡೆದುಕೊಂಡದ್ದು ನನ್ನ ಪುಣ್ಯ. ಮನಸ್ಸಲ್ಲೇ ಪಿಸುಗುಟ್ಟಿಕೊಂಡಳು.

    ಮಮ್ತಾಜ್ ಮಲಗಿದ್ದಲ್ಲಿಂದಲೇ ಮೊಬೈಲ್‌ಗೆ ಕರೆ ಮಾಡಿದಳು. ಪತ್ನಿಯ ನಂಬರ್ ನೋಡಿ ಹನೀಫ್ ಆತುರದಿಂದ ರಿಸೀವ್ ಮಾಡಿದ.

    ರೀ… ನೀವು ಬರುವಾಗ ನನಗೆ ಎರಡು ನೈಟ್ ಡ್ರೆಸ್ ತನ್ನಿ. ಮಂಗಳೂರಿನಲ್ಲಿ ಒಳ್ಳೆಯ ನೈಟಿ ಸಿಗುತ್ತದೆ. ಬರಲು ತುಂಬಾ ತಡಮಾಡ ಬೇಡಿ… ನನ್ನ ಮಾತ್ರೆಗಳನ್ನೂ ಮರೆಯದೇ ತಂದು ಬಿಡಿ.
    ಓ.ಕೆ… ಮಮ್ತಾ, ಡ್ರೆಸ್ ರ‍್ತೇನೆ. ಬೇರೆ ಏನಾದರೂ ಬೇಕಾ? ಊಟ ಮಾಡು… ನನ್ನನ್ನು ಕಾಯುತ್ತಾ ಕುಳಿತಿರಬೇಡಾ… ಹನೀಫ್ ಪತ್ನಿಗೆ ಹೇಳುತ್ತಿರುವುದನ್ನು ಕೇಳಿ ಸಾಯಿರಾ ಶಬ್ದವಾಗದಂತೇ ಕುಳಿತಳು.
    ಹನೀಫ್ ಸಾಯಿರಾಳತ್ತ ತಿರುಗಿ, “ಚಿನ್ನಾ… ನನಗೆ ಎರಡು ನೈಟ್ ಡ್ರೆಸ್ ಖರೀದಿ ಮಾಡಬೇಕು ನಿನಗೆ ತಿಳಿದಿರುತ್ತದೆ… ಹೆಂಗಸರು ಯಾವ ರೀತಿಯ ಡ್ರೆಸ್ ಹಾಕುವುದೆಂದೂ…”
    ನಿಮ್ಮ ಪತ್ನಿ ತುಂಬಾ ದಪ್ಪದ ಹೆಂಗಸಾ? ಸಾಯಿರಾ ಕೇಳಿದಳು.

    ಹೌದೂ… ಇದೀಗ ದಪ್ಪ ಆಗಿರುವುದು, ಪಕ್ಷವಾತಕ್ಕೆ ಈಡಾದ ಬಳಿಗೆ ಹಾಸಿಗೆಯ ರೋಗಿಯಾಗಿ ಮಲಗಿದ್ದಲ್ಲೇ ಇದ್ದಾಗ ವ್ಯಾಯಾಮ ಇಲ್ಲ… ದಪ್ಪ ಆಗುತ್ತಾ ಹೋದಳು. ಮೂರು ವರ್ಷದಿಂದ ನಾನೇ ಅವಳ ಸೇವೆ ಮಾಡುತ್ತಿರುವುದು. ಮಗ ಸೊಸೆ ಅಮೇರಿಕಾದಿಂದ ಎಂದಾದರೂ ಬಂದಾಗ ತುಂಬಾ ಖುಶಿಯಲ್ಲಿರುತ್ತಾಳೆ. ಈಗ ನಾನು ಅವಳ ಕಣ್ಣ ಮುಂದೆನೇ ಇರಬೇಕು. ಅದಕ್ಕೇ ಎಲ್ಲಾ ವ್ಯಾಪಾರವನ್ನು ತಮ್ಮಂದಿರಿಗೆ ವಹಿಸಿ ಅವಳೊಂದಿಗೆ ಇರುವುದು. ಗುರುವಾರದ ದಿನ ಮಾತ್ರ ಮಂಗಳೂರಿನಲ್ಲಿ ಕೆಲಸ ಇದೆಯೆಂದು ಹೇಳಿ ಬರುತ್ತೇನೆ. ನಿನ್ನನ್ನು ಒಮ್ಮೆ ನಮ್ಮ ಕಾರ್ಕಳದ ಮನೆಗೆ ಕರೆದೊಯ್ಯ ಬೇಕೆಂದು ಆಸೆ ಇದೆ. ಆದ್ರೆ… ಮಮ್ತಾಳಿಗೆ ನಿನ್ನನ್ನು ಏನೆಂದು ಪರಿಚಯಿಸುವುದು? ಅವಳ ಪತಿ ಎಂದಿಗೂ ಇನ್ನೊಂದು ಹೆಂಗಸಿನತ್ತ ನೋಡದಂತಹ ಏಕಪತ್ನೀ ವ್ರತನಾಗಿರಬೇಕೆಂದು ಅವಳು ಬಯಸುತ್ತಾಳೆ. ನಮ್ಮ ದಾಂಪತ್ಯ ಮಧುರವಾಗಿದೆ. ನಾನು ಹೆಣ್ಣಿನ ಸಂಗ ಇಲ್ಲದೇ ಹೇಗೆ ಜೀವಿಸುತ್ತಿದ್ದೇನೆಂದು ಅವಳು ಯೋಚಿಸುವುದೇ ಇಲ್ಲ. ಅವಳ ಮಟ್ಟಿಗೆ ನಾನು ಐವತ್ತರ ಪ್ರಾಯದವನು ನನಗೆ ಸೆಕ್ಸ್ನ ಅಗತ್ಯವಿಲ್ಲ ಎಂದು ತಿಳಿದರಲೂ ಬಹುದು. ಅವಳಿಗೆ ಶುಗರ್, ಬಿ.ಪಿ. ಕೂಡಾ ಇದೆ. ಆದರಿಂದ ನಾನು ಅವಳಿಗೆ ಯಾವುದೇ ಮಾನಸಿಕ ನೋವು ಕೊಡದೇ ಸತ್ಯವನ್ನು ಮುಚ್ಚಿಟ್ಟು ಬಿಟ್ಟೆ. ಕೆಲವು ವೇಳೆ ಒಬ್ಬರ ಸುಳ್ಳು ಮುಚ್ಚುಮರೆಯ ಇನ್ನೋರ್ವರಿಗೆ ಬದುಕಲ್ಲಿ ಸಂತಸ ನೀಡುತ್ತದೆ. ಅವಳು ಆಕೆಯ ನಂಬಿಕೆಯಲ್ಲಿ ನೆಮ್ಮದಿಯಲ್ಲಿದ್ದಾಳೆ ಎಂದಾದರೂ ತಿಳಿಯಬಹುದೂ… ನೋಡುವ.

    ಪಿಂಕಿ ಹದಿಹರೆಯಕ್ಕೆ ಕಾಲಿಟ್ಟಳು. ಹನೀಫ್‌ನ ಗೆಳೆಯನ ಮಗ ಇಂಜಿನಿಯರ್ ತನ್ನ ಮಲ ಮಗಳಾದ ಪಿಂಕಿಯ ಫೋಟೋವನ್ನು ಹನೀಫ್ ತೋರಿಸಿದಾಗ ಖುಶಿಯಿಂದಲೇ ವಧುವನ್ನು ಒಪ್ಪಿಕೊಂಡ. ಹೆಣ್ಣು ನೋಡುವ ಶಾಸ್ತçವೂ ಮುಗಿದು ಮದುವೆಗೆ ದಿನ ನಿಗದಿಯಾಯಿತು. ಮಲ ಮಗಳ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಹನೀಫ್ ವಹಿಸಿಕೊಂಡಿದ್ದ. ಮದುವೆಯ ಕಾಗದ ಪ್ರಿಂಟ್ ಆಗಲು ಬಾಕಿ ಇತ್ತು. ಪಿಂಕಿ ತಾನೇ ಮದುವೆ ಕಾಗದದ ರೂಪರೇಖೆಯನ್ನು ಸಿದ್ಧಪಡಿಸಿ ಅಮ್ಮನ ಕೈಗೆ ನೀಡಿದಳು.

    ಅಮ್ಮಾ… ಇದರಲ್ಲಿ ಬರೆದಂತೇ ಪ್ರಿಂಟ್ ಆಗಲಿ. ನನ್ನ ಗೆಳತಿಯರೆಲ್ಲಾ ಬರುತ್ತಾರೆ. ನಾವು ಹೆಚ್ಚು ಜನರನ್ನು ಆಮಂತ್ರಿಸುವುದು ಬೇಡಾ. ಮದುವೆಗೆ ಬಹಳ ಖರ್ಚು ಆಗುತ್ತಾ ಇದೆ. ಈಗಲೇ ನನ್ನ ಬಂಗಾರ, ವಸ್ತçಕ್ಕೆಂದೇ ಎರಡುವರೆ ಲಕ್ಷ ಖರ್ಚು ಮಾಡಿದ್ದಿ. ಅದ್ಧೂರಿ ಮದುವೆ ಬೇಡಾ…

    ಮಗಳು ಹೇಳಿದಾಗ ಸಾಯಿರಾ ಮದುವೆಯ ಕಾಗದತ್ತ ಕಣ್ಣು ಹಾಯಿಸಿದಳು. ಪಿಂಕಿ ಹಾಗೂ ವರನ ಹೆಸರಿನ ಕೆಳಗೆ ಮಿಸ್ಟರ್ ಹನೀಫ್ ಮಿಸೆಸ್ ಸಾಯಿರಾ ಎಂದು ಪ್ರಿಂಟಾಗಿರುವ ಅಕ್ಷರಗಳನ್ನು ನೋಡಿ ಸಾಯಿರಾ ದಿಗ್ಭçಮೆಯಿಂದ ಮಗಳತ್ತ ನೋಡಿದಳು.

    ಯಾಕಮ್ಮಾ… ಈ ರೀತಿ ಹೆದರಿ ಬಿಟ್ಟೆ! ನನಗೆ ಎಲ್ಲಾ ಗೊತ್ತಾಗಿದೆ. ನನ್ನನ್ನು ಬೆನ್ನ ಹಿಂದೆ ನಿಂತು ಪೋಷಿಸುವ ಓರ್ವ ಅಪ್ಪ ಇರುವುದು ನೀನು ತಿಳಿಸದೇ ಹೋದ್ರೂ ನಾನು ಪತ್ತೆ ಹಚ್ಚಿದೆ. ಇಂದು ನಾನು ವಿದ್ಯಾವಂತಳಾಗಿ ನಿಂತು, ಒಳ್ಳೆಯ ಗಂಡು ನನ್ನನ್ನು ಮದುವೆ ಆಗಲು ಸಿದ್ಧವಾದದ್ದು ನನ್ನ ಮದುವೆಯ ಜವಾಬ್ದಾರಿ ಎಲ್ಲವನ್ನೂ ನಿರ್ವಹಿಸಿದ ಆ ಪುಣ್ಯಾತ್ಮ ನನಗೆ ಜನ್ಮ ನೀಡದ ತಂದೆ ಆಗಿರಬಹುದೂ… ಆದ್ರೆ ನನ್ನ ಅಮ್ಮನ ಬದುಕಿಗೆ ಆಸರೆಯಾಗಿ ನಿಂತ ಅವರು ನನಗೆ ತಂದೆ ಸಮಾನ ತಾನೆ? ನಾನು ಅಜ್ಜಿಯೊಂದಿಗೆ ಎಲ್ಲಾ ಕೇಳಿ ತಿಳಿದುಕೊಂಡೆ. ನಾನು ಎಷ್ಟು ಸ್ವಾರ್ಥಿ ಮಗಳಲ್ಲಾ… ಅಮ್ಮಾ… ಬುದ್ಧಿ ಇಲ್ಲದ ವಯಸ್ಸಲ್ಲಿ ನಾನು ಏನೋ ಅಂದಿದ್ದಕ್ಕೆ ನೀನು ನನ್ನ ಮುಂದೆ ರಹಸ್ಯ ಬಾಯಿ ಬಿಡಲಿಲ್ಲ. ಅಮ್ಮಾ… ನಾನು ಅವರನ್ನು ಅಪ್ಪಾ’ ಎಂದು ಕರೆಯಬಹುದೇ? ಸಾಯಿರಾ ಕುಳಿತಲ್ಲಿಂದ ಒಮ್ಮೆಲೇ ಎದ್ದು ನಿಂತು ಮಗಳನ್ನು ಬಿಗಿಯಾಗಿ ಅಪ್ಪಿ ಹಿಡಿದು ಬಿಕ್ಕಳಿಸಿದಳು. ಅಮ್ಮಾ… ನನಗೆ ನೆಮ್ಮದಿಯಾಯಿತು. ನಾನು ವಿವಾಹ ಆಗಿ ಹೋದ ನಂತರ ನೀನು ಒಂಟಿಯಾಗಿರಲಾರೆ. ನನಗೆ ಅವರನ್ನು ನೋಡಬೇಕಮ್ಮಾ… ಸಾಯಿರಾಳ ಮೊಬೈಲ್ ರಿಂಗಾಯಿತು. ಹನೀಫ್‌ನ ನಂಬರ್ ನೋಡಿ ಖುಶಿಯಿಂದ ಸಾಯಿರಾ ಮಗಳತ್ತ ನೋಡಿ, “ನೀನು ಕೇಳುವಾಗಲೇ ನಿನ್ನ ಅಪ್ಪನ ಕರೆ ಬಂತು… ಮಾತನಾಡು ಮಗಳೇ…” ಎಂದು ಮೊಬೈಲ್ ನೀಡಿದಳು. ಪಿಂಕಿ ನಡುಗುವ ಕೈಯಿಂದ ಮೊಬೈಲ್ ತಗೊಂಡು ಕಿವಿಗೆ ಒತ್ತಿಕೊಂಡಳು.

    ಹಲೋ… ಆಚೆಯಿಂದ ಧನಿ ಕೇಳಿ ಬಂತು. ಪಿಂಕಿ ಹೆದರುತ್ತಲೇ… “ಹಲೋ ಅಸ್ಸಾಲಾಮ್ ಅಲೈಕುಮ್ ಡ್ಯಾಡ್… ನಾನು ಪಿಂಕಿ ಮಾತನಾಡುವುದೂ…” ಎಂದಳು. ಏನೆAದೇ…! ಡ್ಯಾಡ್!? ಇನ್ನೊಮ್ಮೆ ಹೇಳೂ ಪಿಂಕೀ… ಹನೀಫ್‌ನ ಧ್ವನಿ ಭಾರವಾಗಿ ಗದ್ಗದಿತವಾಗಿತ್ತು. ಹಾಯ್… ಡ್ಯಾಡ್! ಹೌ ಆರ್ ಯೂ? ನನಗೆ ಎಲ್ಲಾ ವಿಷಯ ತಿಳಿದಿದೆ. ನಿಮ್ಮನ್ನು ಭೇಟಿ ಆಗಲು ಕಾತುರಿಸುತ್ತಿದ್ದೇನೆ ಡ್ಯಾಡ್… ಥ್ಯಾಂಕ್ಸ್, ಅಲ್‌ಹಮ್ದುಲಿಲ್ಲಾಹ್! ನನ್ನ ಎದೆಯ ಭಾರ ಕಡಿಮೆ ಆಯಿತು. ಅಂದಹಾಗೇ… ಒಂದು ವಿಷಯ ಹೇಳಲು ಕಾಲ್ ಮಾಡಿದ್ದೆ, ಅರ್ಜೆಂಟ್… ಅಮ್ಮನಿಗೆ ಸೆಲ್ ನೀಡೂ… ಬೇಗಾ… ಎಂದರು ಆತುರದಿಂದ. ಅಮ್ಮಾ… ಅಪ್ಪನಿಗೆ ಏನೋ ಅರ್ಜೆಂಟ್ ಮಾತನಾಡಬೇಕಂತೇ ನಿನ್ನ ಬಳಿ… ಹಲೋ… ಏ… ಏನೂರೀ…? ಸಾಯಿರಾ ಗಾಬರಿಯಿಂದ ಕೇಳಿದಳು. ನೀನು ಬೇಗನೇ ಹೊರಟು ಸಿಟಿ ಆಸ್ಪತ್ರೆಗೆ ಬಾ. ಮಮ್ತಾಜ್ ಸೀರಿಯಸ್ ಆಗಿದ್ದಾಳೆ. ಒಮ್ಮೆ ಅವಳನ್ನು ನೋಡು, ಡಾಕ್ಟರ್ ಭರವಸೆ ಬಿಟ್ಟಿದ್ದಾರೆ. ನಿಮ್ಮವರಿಗೆ ಸುದ್ಧಿ ಮುಟ್ಟಿಸಲು ಹೇಳಿದ್ರು… ನೀನು ಪಿಂಕಿ ಒಟ್ಟಿಗೇ ಬೇಗನೇ ಬಂದು ಬಿಡು. ಸಾಯಿರಾ

    ಮಗಳೊಂದಿಗೆ ಆಸ್ಪತ್ರೆಗೆ ಬಂದಾಗ ಐ.ಸಿ. ರೂಮಲ್ಲಿ ಹನೀಫ್ ಅಳುತ್ತಾ ಮಮ್ತಾಜ್‌ನ ಪಕ್ಕ ನಿಂತಿದ್ದರು. ಸಾಯಿರಾ ಮೆಲ್ಲನೇ ಮಮ್ತಾಜ್‌ನ ಹತ್ತಿರ ನಡುಗುತ್ತಾ ನಿಂತಳು. ಮಮ್ತಾಜ್‌ನ ಕಣ್ಣು ನಿರೀಕ್ಷಿಸುತ್ತಿತ್ತು… ಆಕೆಯನ್ನೂ ಸಾಯಿರಾಳನ್ನು ಸನ್ನೆಯಿಂದ ಹತ್ತಿರ ಕರೆದಳು. ನೀನೂ.. ಸಾ…ಯಿ…ರಾ… ತಾನೆ? ಆಕೆಯ ಕೈಗಳನ್ನು ಮೆಲ್ಲನೇ ಮೇಲೆತ್ತಿ ಕೇಳಿದಳು. ನನಗೆ ಗೊತ್ತಿದೇ… ಹನೀಫ್‌ನತ್ತ ಕೈ ತೋರಿಸಿ ಆಕೆ ನಸು ನಗು ಬೀರಿದಳು. ಮೊಬೈಲ್‌ನಲ್ಲಿತ್ತು ನಿನ್ನ ಹೆಸರು. ತುಂಬಾ ಒಳ್ಳೆಯವರು ನನ್ನ ಗಂಡ. ಅವರನ್ನು ಕೈ ಬಿಡಬೇಡಾ… ಒಂದು ವರುಷದಿಂದ ನಿನ್ನನ್ನು ನೋಡಲು ಬಯಸುತ್ತಿದ್ದೆ… ಇಂದು ಕೊನೆಗಳಿಗೆಯಲ್ಲಿ ಕಾಣುವಂತಾಯಿತೂ… ನನ್ನ ಮಗ… ಸಲ್ಮಾನ್‌ಗೆ ನೀನುಅಮ್ಮ’ ಆಗಬೇಕೂ… ನನ್ನ ಮನೆಯಲ್ಲಿ… ಇರಬೇಕೂ… ಮಮ್ತಾಜ್ ಏದುರಿಸಿರು ಬಿಡ ತೊಡಗಿದಳು. ಕಣ್ಣುಗಳು ನೋಟ ನೆಟ್ಟಿರುವಂತೇ ದೇಹ ತಟಸ್ಥವಾಯಿತು.

    ಸಾಯಿರಾಳ ಕೈಯನ್ನು ಬಿಗಿಯಾಗಿ ಹಿಡಿದು ಮಮ್ತಾಜ್‌ಳ ತೆರೆದ ಕಣ್ಣನ್ನು ಮುಚ್ಚಿದ ಸಾಯಿರಾ ಕಂಬನಿ ಒರೆಸಿಕೊಂಡು ಪತಿಯತ್ತ ನೋಡಿದಳು. ದುಃಖದಿಂದ ಕುಸಿದ ಹನೀಫ್‌ರನ್ನು ಪಿಂಕಿ ಹಿಡಿದುಕೊಂಡು ಸಂತೈಯಿಸುತ್ತಿರುವುದು ಕಾಣಿಸಿತೂ… ಡ್ಯಾಡ್… ಧೈರ್ಯ ವಹಿಸಿಕೊಳ್ಳಿ… ಮಗಳ ಮಾತುಗಳು ಅವರ ಮನಸ್ಸಿಗೆ ಹಾಯೆನಿಸಿದವು.

    ಶಹನಾಝ್ ಎಂ.

  • ಹೆಣ್ಣಿನ ನೋವು

    ಹೆಣ್ಣಿನ ನೋವು

    ಮನಬಿಚ್ಚಿ ಹೇಳುವ ಹಾಗಿಲ್ಲ
    ಕಣ್ಣಂಚಿ ನಲ್ಲಿ ಕಣ್ಣೀರು ಮಾತ್ರ
    ನಿನ್ನದೇನು ಮಹಾನ್ ನೋವುಗಳೇ
    ಎಲ್ಲರ ಹಾಗೆ ನೀನೂ ಕೂಡ

    ಅತ್ತರೇನು ನಕ್ಕರೇನು ನಿನ್ನ ಕೇಳುವವರಾರು
    ನಾಲ್ಕು ಗೋಡೆಗಳ ಮಧ್ಯವಷ್ಟೆ ನಿನ್ನ ರೋದನ
    ಕೈಗೆ ಕೋಳ ಕಟ್ಟಬೇಕಾಗಿಲ್ಲ
    ಮಾತಿನ ಸರಪಳಿಯೇ ಸಾಕಲ್ಲವೇ?

    ಶತಮಾನಗಳೇನೋ ಕಳೆದಿವೆ
    ಹೆಣ್ಣಿನ ಬಾಳಿಗೆ ತೂಕವೇನೋ ಬಂದಿದೆ
    ನೋಟಗಳಲ್ಲಿ ಅದೇ ಭಾವನೆಯಲ್ಲವೇ

    ಇಲ್ಲವೆನ್ನಲ್ಲ ಸ್ವಾತಂತ್ರ‍್ಯ ವಿದೆ, ಹಕ್ಕೂ ಇದೆ
    ಕಾನೂನಿದೆ, ನ್ಯಾಯವಿದೆ
    ಎಲ್ಲ ಅದರದರ ಸ್ಥಾನದಲ್ಲಿದೆ
    ಎಲ್ಲರಿಗೂ ಎಟುಕುವುದು ಅನುಮಾನ
    ಹಣಬಲವಲ್ಲವೇ ಇಲ್ಲಿಯ ಪರಿಮಾಣ

    ಹೂವಾಗಿ ಅರಳಬೇಕಿತ್ತು
    ಹಕ್ಕಿಗಳಾಗಿ ಹಾರಾಡಬೇಕಿತ್ತು
    ನೀರಾಗಿ ಹರಿಯಬೇಕಿತ್ತು
    ಗಂಡಾಗಿ ಹುಟ್ಟಬೇಕಿತ್ತು
    ಹೆಣ್ಣು ಅಂದುಕೊಂಡದ್ದು ಅಂತು ನಿಜ
    ಎಲ್ಲಿದೆ ಸಾರ್ಥಕ ಬದುಕು
    ನಮ್ಮೊಳಗೇ ಪ್ರಶ್ನಿಸಬೇಕಿದೆ???

    ರುಮಾನ, ಮುಂಡೋಳಿ

  • ಕಾಡಿನಿಂದ ನಾಡಿಗೆ ಬಂದ ಆನೆಗಳು…

    ಕಾಡಿನಿಂದ ನಾಡಿಗೆ ಬಂದ ಆನೆಗಳು…

    ಇಂದು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಕಾಡಾನೆಗಳದ್ದೇ ಸುದ್ದಿ. ಅವು ಕಾಡಿನಿಂದ ನಾಡಿಗೆ ಕಾಲಿಟ್ಟು ದಾಂಧಲೆ ನಡೆಸಿದ ಘಟನೆಗಳೇ ಹೆಚ್ಚು. ಕೆಲವೊಮ್ಮೆ ಸಾವು-ನೋವಿನ ವಿಷಾದಕರ ಸುದ್ದಿಯೂ ಇರುತ್ತದೆ.

    ಆಳವಾದ ಚಿಂತನೆ ಮಾಡಿದರೆ, ಈ ಆನೆಗಳನ್ನು ನಾಡಿಗೆ ಬರ ಮಾಡಿಕೊಂಡದ್ದೇ ನಮ್ಮವರು. ತಮ್ಮ ಸ್ವಾರ್ಥಕ್ಕೆ ಅವರು ನಾನಾ ಕಾರಣಗಳಿಗೆ ಕಾಡನ್ನು ಕಡಿದು ಉರುಳಿಸಿದರು. ಅಭಿವೃದ್ಧಿಯ ನಾಮದಲ್ಲಿ ಜಲ ವಿದ್ಯುತ್, ಗಣಿಕಾರಿಕೆ, ರೈಲ್ವೆ ಹಳಿ, ರಿಸಾರ್ಟ್, ಸುರಂಗ, ಹೆದ್ದಾರಿ ಅನ್ನುತ್ತಾ ಎಲ್ಲಡೆ ಕೊಡಲಿ ಬೀಸಿದರು. ಕೃಷಿ ಭೂಮಿಯ ಒತ್ತುವರಿಯೆಂದು ಸಾಕಷ್ಟು ಅರಣ್ಯವನ್ನು ಧ್ವಂಸ ಮಾಡಿದರು. ಈಗ ಮೂಕ ಪ್ರಾಣಿ-ಪಕ್ಷಿಗಳು ದಿಕ್ಕುಪಾಲಾಗಿ ಚದುರಿಕೊಂಡವು. ಅದರಲ್ಲಿ ವಿಶೇಷವಾಗಿ ಈ ಗಜಪಡೆಯಂತೂ ತಾವು ತಮ್ಮ ಹಿರಿಯರಿಂದ ಗುರುತಿಸಿಕೊಂಡಿದ್ದ ಹಾದಿಯನ್ನು ಮರೆತು ಹೋದವು. ಈ ಸೇಡನ್ನು ತೀರಿಸಿಕೊಳ್ಳುವ ಅವು ಕಾಡಿನಿಂದ ನಾಡಿನತ್ತ ನುಗ್ಗಿದವು. ಅವುಗಳಿಗೆ ಕಬ್ಬಿನ ತೋಟ, ಪಚ್ಚೆ ಪೈರಿನ ಹೊಲಗದ್ದೆ, ಕಾಫಿ ತೋಟ, ಬಾಳೆಗಿಡಗಳ ಕೃಷಿ ಇತ್ಯಾದಿಗಳೇ ರುಚಿ ಅನಿಸಿದವು. ಸರಕಾರವು ಕಾಡು ಕಡಿದು ಕೃತಕವಾಗಿ ಸೃಷ್ಟಿಸಿದ ಗಿಡ-ಮರಗಳನ್ನು ಅವು ಮೂಸಿಯೂ ನೋಡಲಿಲ್ಲ.

    ಆನೆಗಳು ಯಾವತ್ತೂ ಕಾಡಿನ ಒಂದೇ ನೆಲೆಯಲ್ಲಿ ವಾಸವಾಗಿರುವುದಿಲ್ಲ. ಅವು ಆಹಾರವನ್ನು ಹುಡುಕುತ್ತಾ ಸಾವಿರಾರು ಕಿ.ಮೀ. ದೂರಕ್ಕೆ ಚಲಿಸಿಕೊಂಡೇ ಸಾಗುತ್ತವೆ. ಮನುಷ್ಯರಂತೆ ಆನೆಗಳು ಸಂಘ ಜೀವಿಗಳು. ಅವು ಒಗ್ಗಟ್ಟಿನಿಂದಲೇ ಜೀವನ ಸಾಗಿಸುತ್ತವೆ. ತಾತ-ಮುತ್ತಾತ, ಮಾವ-ಮಾಮಿ, ಚಿಕ್ಕಪ್ಪ-ಚಿಕ್ಕಮ್ಮ, ಅವರ ಮಕ್ಕಳು ಮರಿಗಳೆಂದು ಸುಮಾರು 60 ರಿಂದ 70 ಮಂದಿ ಸದಸ್ಯರು ಇರುತ್ತಾರೆ. ಈ ಗುಂಪಿಗೆ ಹೆಣ್ಣು ಆನೆಯೇ ಯಜಮಾನಿ- ನಾಯಕಿ. ಆಕೆ ಹೇಳಿದಂತೆ ಅವು ಎಲ್ಲಾ ನೀತಿ-ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ಕುಟುಂಬದಿAದ ಹೊರ ದೂಡುತ್ತವೆ.

    ಈ ಬಂಧು-ಬಳಗವು ದಿನದ ಹದಿನೆಂಟು ತಾಸುಗಳನ್ನು ಆಹಾರ ತಿನ್ನವುದರಲ್ಲಿಯೇ ಕಳೆದುಕೊಳ್ಳುತ್ತವೆ. ಅವರ ದೈತ ದೇಹಕ್ಕೆ ಹಸಿವು ಹೆಚ್ಚು. ದಿನನಿತ್ಯ ಅವುಗಳಿಗೆ ಸುಮಾರು 25 ರಿಂದ 30 ಕೆ.ಜಿ.ಯಷ್ಟು ಆಹಾರಬೇಕು. ಹಾಗೆ 150 ರಿಂದ 180 ಲೀಟರ್‌ನಷ್ಟು ನೀರು ಬಾಯಾರಿಕೆಗೆ ಬೇಕು. ಬೇಸಿಗೆಯಲ್ಲಿ ಸ್ಥಳೀಯ ಜಲಧಾರೆಯು ಬತ್ತಿಕೊಂಡರೆ, ಮುಂದೆ ಎಲ್ಲಿ ನೀರು ಸಿಗುತ್ತದೆ ಅನ್ನುವ ಪರಿಜ್ಞಾನ ಅವುಗಳ ಹಿರಿಯರಿಗಿದೆ. ಈಗ ಅವು ಮೇವುವನ್ನು ಹುಡುಕುತ್ತಾ, ನೀರು ಅರಸುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತವೆ.

    ಕೆಲವು ಬಾರಿ ಅವು ಒಂದು ಪಶ್ಚಿಮ ಘಟ್ಟದಿಂದ, ಇನ್ನೊಂದು ಪಶ್ಚಿಮ ಘಟ್ಟಕ್ಕೆ ಪ್ರಯಾಣ ಬೆಳೆಸುತ್ತವೆ. ದಿನಕ್ಕೆ ಸುಮಾರು 20 ರಿಂದ 25 ಕಿ.ಮೀ. ದೂರ ಸಾಗುತ್ತ, ಸಾವಿರಾರು ಕಿ.ಮೀ. ಕ್ರಮಿಸುತ್ತವೆ. ಕರ್ನಾಟಕದಿಂದ ಕೇರಳದ ದಟ್ಟಡವಿಯಲ್ಲಿ ಸಾಗಿದರೂ ಅವು ಮತ್ತೆ ಹಿಂತಿರುಗಿ ಬರುವ ದಾರಿಯನ್ನು ಯಾವತ್ತೂ ಮರೆಯುವುದಿಲ್ಲ. ನಮ್ಮಂತಹ ಮನುಷ್ಯರಿಗೆ ಹೀಗೆ ಕಾಡಿನಲ್ಲಿ ದಾರಿ ತಪ್ಪುವುದೇ ಹೆಚ್ಚು. ಆಗ ಹುಡುಕಾಡಲು ಆಧುನಿಕ ಸೌಲಭ್ಯಗಳು ಬೇಕು. ಇಲ್ಲದಿದ್ದರೆ ಈ ಚಕ್ರವ್ಯೂಹದಿಂದ ಹೊರಬರುವುದೇ ಕಷ್ಟ. ಆದರೆ ಆನೆಗಳು ಈ ಹಾದಿಯನ್ನು ತಮ್ಮ ಹಿರಿಯರಿಂದ ಅರಿತುಕೊಳ್ಳುತ್ತವೆ. ಯಾವ ಋತುಮಾನದಲ್ಲಿ ಯಾವ ಕಡೆ ಸಾಗಬೇಕು ಅನ್ನುವುದು ಕಲಿತುಕೊಂಡಿರುತ್ತವೆ. ಇದು ಅವರಿಗೆ ಅನುಭವದಲ್ಲಿ ದಕ್ಕಿದ ಪಾಠ. ಪರಂಪರೆಯ ಜ್ಞಾನ!

    ಈಗ ಮನುಷ್ಯ ಈ ಹಾದಿಯನ್ನೇ ಕಡಿದು ಹಾಕಿದರೆ ಆನೆಗಳು ಏನು ಮಾಡಬೇಕು? ಯಾರ ತಂಟೆಗೂ ಹೋಗದೆ ಕಾಡಿನಲ್ಲಿ ಹಾಯಾಗಿದ್ದ ಅವು ದಿಕ್ಕು ತಪ್ಪಿ ಎತ್ತ ಸಾಗಬೇಕು? ಆಗ ಕಾಣಿಸಿಕೊಳ್ಳುವುದೇ ನಮ್ಮ ನಾಡು! ನಮ್ಮ ಕಾಡ ಹತ್ತಿರದ ಊರು!

    ಆನೆಗಳಲ್ಲಿ ಏಷ್ಯಾ ಖಂಡದ ಆನೆಗಳು ಮತ್ತು ಆಫ್ರಿಕಾ ಖಂಡದ ಆನೆಗಳು ಅನ್ನುವ ಎರಡು ವರ್ಗಗಳಿವೆ. ನಮ್ಮ ಆನೆಗಳ ಬೆನ್ನು ಹೊರ ಉಬ್ಬಿಕೊಂಡರೆ, ಅವುಗಳ ಹುಬ್ಬು ಒಳಗಡೆ ಬಾಗಿಕೊಂಡಿರುತ್ತದೆ. ನಮ್ಮಲ್ಲಿ ಗಂಡಿಗೆ ಮಾತ್ರ ದಂತವಿದ್ದರೆ ಆಫ್ರಿಕಾದ ಗಂಡು-ಹೆಣ್ಣಿಗೂ ದಂತಗಳಿವೆ. ಆದರೆ ಎರಡು ಖಂಡದ ಆನೆಗಳ ಜೀವಿತ ಅವಧಿ 60 ರಿಂದ 70 ವರ್ಷಗಳು.

    ಹೆಣ್ಣು ಆನೆ ಯೌವನಕ್ಕೆ ಕಾಲಿಡಲು 10 ರಿಂದ 12 ವರುಷಗಳು ಬಏಕು. ಅವುಗಳ ಗರ್ಭಧಾರಣೆಗೆ ಯಾವುದೇ ಋತುಮಾನದ ಅಗತ್ಯವಿಲ್ಲ. ಆದರೆ ಮರಿ ಆನೆ ತಾಯಿಯ ಗರ್ಭದಿಂದ ಹೊರಬರಲು 22 ರಿಂದ 23 ಮಾಸಗಳ ವರೆಗೆ ಕಾಯಬೇಕು. ಅಂದರೆ ಸುಮಾರು ಎರಡು ವರುಷಗಳಿಗೆ ಹತ್ತಿರ! ಹೆಚ್ಚಾಗಿ ಒಂದೇ ಮರಿ ನೀಡುವ ಆನೆಯೂ ಕೆಲವು ಬಾರಿ ಮಾತ್ರ ಅವಳಿಗಳಿಗೆ ಜನ್ಮ ನೀಡುತ್ತವೆ. ವಿಶೇಷವೆಂದರೆ ಆಗ ತಾನೆ ಹುಟ್ಟಿದ ಮರಿಯಾನೆಯೂ ಎದ್ದು ನಿಲ್ಲುತ್ತದೆ.

    ಗಜಲಕ್ಷ್ಮಿ ಈ ಮಗುವನ್ನು ಬಹು ಜಾಗ್ರತೆಯಿಂದ ಲಾಲನೆ-ಪಾಲನೆ ಮಾಡುತ್ತದೆ. ಸದಾ ಇವುಗಳನ್ನು ಗುಂಪಿನ ನಡುವೆ ಇಟ್ಟುಕೊಂಡೇ ಸಾಗುತ್ತವೆ. ಏಕೆಂದರೆ ಹುಲಿ ಮತ್ತು ಕತ್ತೆ ಕಿರುಬ ಇವುಗಳ ಅಜಾತ ಶತ್ರುಗಳು. ಇದನ್ನು ತಿಂದು ಮುಗಿಸಲು ಅವು ಸದಾ ಹೊಂಚು ಹಾಕಿರುತ್ತವೆ. ಹೀಗಾಗಿ ಬಾಣಂತಿಯಾದ ತಾಯಿಯೂ ಅದರ ರಕ್ಷಣೆಯಲ್ಲಿ ರಾತ್ರಿ ನಿದ್ದೆಯೂ ಸರಿಯಾಗಿ ಮಾಡದು.

    ಅಂದ ಹಾಗೆ ಆನೆಗಳಿಗೆ ನಿದ್ರೆ ಕಡಿಮೆ. ಇಡೀ ದಿನದಲ್ಲಿ ಅವು 4-5 ತಾಸು ಮಲಗಿದರೆ ಅದೇ ಹೆಚ್ಚು. ಬಹುತೇಕ ಅವು ನಿಂತುಕೊಂಡೇ ನಿದ್ರಿಸುತ್ತವೆ. ಅನುಕೂಲ ಕಂಡರೆ ಮಾತ್ರ ನೆಲಕ್ಕೆ ಒರಗಿಕೊಳ್ಳುತ್ತವೆ. ಇವುಗಳ ಶ್ರವಣ ಶಕ್ತಿ ಅದೆಷ್ಟು ತೀವ್ರವೆಂದರೆ, ಕಾಡಿನ ಮರದಿಂದ ಸಣ್ಣ ಕಾಯಿ ಬಿದ್ದರೂ ಅವು ಗ್ರಹಿಸಿಕೊಳ್ಳಬಹುದು. ಅದೇ ರೀತಿ ವಾಸನೆ ಗ್ರಂಥಿಯೂ ಸೂಕ್ಷ್ಮ. ಅದೇಷ್ಟು ದೂರದ ಮರದಲ್ಲಿ ಹಲಸಿನ ಹಣ್ಣುಗಳು ಪಕ್ವವಾದರೆ ಅದು ತಿಳಿದುಕೊಳ್ಳಬಹುದು. ನೆಲ್ಲಿಕಾಯಿ, ಬಿದಿರು, ಹುಣಸೆಕಾಯಿ, ಮಾವು ಮತ್ತು ಕಬ್ಬು ಇವುಗಳಿಗೆ ಪ್ರಿಯವಾದ ತಿನಿಸು. ಊರಿನ ಬೆಲ್ಲವೆಂದರೂ ಇಷ್ಟ.

    ಆನೆಗಳಿಗೆ ನೀರಾಟವೆಂದರೆ ತುಂಬಾ ಸಂತೋಷ. ಹೀಗಾಗಿ ಅವು ನದಿ ತೀರದಲ್ಲಿ, ಸರೋವರದ ಬಳಿ ಹೆಚ್ಚಾಗಿ ಕಾಣಿಸಕೊಳ್ಳುತ್ತವೆ. ಅವುಗಳಿಗೆ ಬೆವರು ಗ್ರಂಥಿಗಳಿಲ್ಲದ ಕಾರಣ, ಅವು ದೇಹದ ಉಷ್ಣತೆಯನ್ನು ತನ್ನ ವಿಶಾಲವಾದ ಕಿವಿಗಳಿಂದ ಚಾಮರದಂತೆ ಬೀಸಿಕೊಂಡು ತಂಪು ಮಾಡಿಕೊಳ್ಳುತ್ತವೆ. ಕೆಲವು ಬಾರಿ ಇಂತಹ ನೀರಿನಲ್ಲಿ ಮುಳುಗಿ ಪರಿಹಾರ ಹುಡುಕುತ್ತವೆ. ಅದರ ಸೊಂಡಿಲು ಬಲಿಷ್ಠವಾದರೂ, ತುಂಬಾ ಮೃದುವಾಗಿದೆ. ಸೊಂಡಲಿನ ತುದಿಯಲ್ಲಿ ಅದಕ್ಕೆ ನಮ್ಮ ಬೆರಳಿನಂತಹ ಅಂಗವಿದೆ. ಇದರಿಂದ ಅದು ಸಣ್ಣ ಅಡಿಕೆಯನ್ನೂ ಹೆಕ್ಕಿ ಕೊಡಬಲ್ಲದು. ಕಣ್ಣುಗಳು ಅತೀ ಚಿಕ್ಕದಿದ್ದರೂ, ಬಲು ದೂರದವರೆಗೆ ನೋಟ ಹರಿಸಬಹುದು. ತನ್ನ ಜೊತೆಗೆ ಶತ್ರುತ್ವವನ್ನು ಬೆಳೆಸಿದವರ ಪರಿಚಯವನ್ನು ಬಹಳಷ್ಟು ಕಾಲ ಮರೆಯದೆ ಇಡಬಹುದು. ಎರಡು ಹೊರ ದಂತಗಳAತೂ ಹುಲಿಯಂತಹ ಶತ್ರುಗಳನ್ನು ಎದುರಿಸಲು, ಮರದ ತೊಗಟೆಯನ್ನು ಸೀಳಿ ತೆಗೆಯಲು ನೆರವು ನೀಡುತ್ತದೆ. ಆದರೆ ದವಡೆಗಳಂತೂ ತನ್ನ ಜೀವಿತ ಅವಧಿಯಲ್ಲಿ ಆರು ಬಾರಿ ಉದುರಿ ಮತ್ತೆ ಹುಟ್ಟಿಕೊಳ್ಳುತ್ತವೆ. ದಿನದಲ್ಲಿ ಸುಮಾರು 16-18 ತಾಸುಗಳು ಅವು ಮೇಯುವ ಕಾರ್ಯದಲ್ಲಿ ನಿರಂತರವಾಗಿರುವಾಗ, ಅವು ಸವೆದು ಹೋಗುತ್ತವೆ. ಏಳನೇ ಬಾರಿ ಈ ಹಲ್ಲುಗಳು ಹುಟ್ಟಿಕೊಳ್ಳುವುದಿಲ್ಲ. ಅಷ್ಟರಲ್ಲಿ ಅದಕ್ಕೆ ಮುದಿತನ ಆವರಿಸಿಕೊಂಡಿರುತ್ತದೆ. ಆಗ ಅದಕ್ಕೆ ಜಗಿಯುವ ಶಕ್ತಿಯೇ ಇರದು. ಕೆಲವು ಬಾರಿ ಅವು ಈ ಕಾರಣವಾಗಿಯೇ ಉಪವಾಸ ಬಿದ್ದು ಸಾವನ್ನು ಅಪ್ಪುತ್ತವೆ. ಅದು ಪ್ರಕೃತಿ ನಿಯಮ.

    ಆನೆಯು ಅದೆಷ್ಟೇ ದೈತ ಇರಲಿ, ಮನುಷ್ಯನು ಮಾತ್ರ ಅದಕ್ಕಿಂತ ಬುದ್ಧಿವಂತ. ಅನಾದಿ ಕಾಲದಿಂದಲೂ ಆತ ಆನೆಯ ಬಲ, ಸಾಮರ್ಥ್ಯ ಶಕ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದಾನೆ. ಇದನ್ನು ವಶಪಡಿಸಿಕೊಂಡರೆ ತನಗೆ ಆಗದಿರುವ ಅನೇಕ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದೆಂದು ಲೆಕ್ಕಾಚಾರ ಹಾಕಿದ್ದಾನೆ. ಹೀಗಾಗಿ ಆ ಬೆಟ್ಟದಂತಹ ಆ ಕಾಡು ಪ್ರಾಣಿಯನ್ನೇ ತನ್ನ ಅಂಕುಶದಲ್ಲಿ ಬಂಧಿಸಿ ನೆಲಕ್ಕೆ ಕೆಡವಿದ್ದಾಣೆ. ಮನುಷ್ಯನ ಮೋಹದ ಜಾಲದ ಖೆಡ್ಡಾ'ಕ್ಕೆ ಬಿದ್ದ ಆನೆಯಂತೂ ಮೋಸ ಹೋಗಿದೆ. ಅದು ಮಾವುತನಿಂದ ತರಬೇತಿ ಪಡೆದು, ತನ್ನ ಪ್ರತಿಭಟನೆ, ಒರಟುತನ, ಆಕ್ರೋಶ, ಸಿಟ್ಟು, ಆವೇಶ ಎಲ್ಲವನ್ನೂ ತ್ಯಜಿಸಿ ಸಾಧುವಾಗಿದೆ. ಆತನ ಎಲ್ಲಾ ಕೆಲಸಕ್ಕೂಜೀ ಹುಜೂರ್’ಯೆಂದು ಒಪ್ಪಿಕೊಂಡಿದೆ. ತನ್ನ ದೈತ್ಯ ಬಲದ ಶಕ್ತಿಯನ್ನು ಮರೆತು ಬಾಲ ಮುದುಡಿ ಮೌನವಾಗಿದೆ. ತನ್ನ ಕಂಬದAತಹ ಕಾಳಿಗೆ ಜುಜುಬಿ ಹಗ್ಗ ಕಟ್ಟಿದರೂ ಅದು ಕಬ್ಬಿಣದ ಸರಪಳಿಯೆಂದೇ ಭಾವಿಸಿಕೊಂಡಿದೆ. ಐದಡಿ-ಆರಡಿ ಮನುಷ್ಯನಿಗೆ, ಆತ ಕುಬ್ಬ, ಅಲ್ವ ಅನ್ನುವುದೇ ಮರೆತು ಹೋಗಿದೆ.

    ಒಂದು ವೇಳೆ ಅದು ತನ್ನ ನೈಜ ಕೋಪದಲ್ಲಿ ಸೊಂಡಿಲು ಬಳಸಿದರೆ, ಮನುಷ್ಯನ ದೇಹದ ಮೂಳೆಗಳು ಲಟಲಟನೆ ಮುರಿದು ಹೋಗಬಹುದು. ತಲೆಯು ಬಲವಾದ ಪಾದದ ಅಡಿಯಲ್ಲಿ ಬಂದರೆ ಬುರುಡೆಯೇ ಇರದು. ಕೂಡಲೇ ಅಪ್ಪಚ್ಚಿಯಾಗಿ ಸಿಡಿದು ಹೋಗಬಹುದು!

    ಆದರೆ ಬುದ್ಧಿವಂತ ಮನುಷ್ಯನು ಅದನ್ನೂ ರಾಜ-ಮಹಾರಾಜರ ಕಾಲದಿಂದಲೂ ಯೋಗ್ಯವಾಗಿ ಬಳಸಿಕೊಂಡಿದ್ದಾನೆ. ಘೋರ ಕಾಳಗವೇ ಇರಲಿ, ಸಣ್ಣ ಪುಟ್ಟ ಯುದ್ಧಗಳೇ ಇರಲಿ, ಅದರ ಮೇಲೆ ಹತ್ತಿ ಶತ್ರುಗಳನ್ನು ಸದೆ ಬಡೆದಿದ್ದಾನೆ- ಯಾರೂ ಸಾಗದ ನದಿ, ಬೆಟ್ಟ, ಗುಡ್ಡ, ಕಾಡುಗಳನ್ನು ಬಳಸಿ ದುರ್ಗಮ ಹಾದಿಯನ್ನೂ ಸವೆದಿದ್ದಾನೆ. ಯುದ್ಧದ ಸಾಮಗ್ರಿ ಹಾಗೂ ಆಹಾರ ವಸ್ತುಗಳ ಭಾರವಾದ ವಸ್ತುಗಳನ್ನು ಅದರ ಬೆನ್ನು ಮೇಲೆ ಏರಿಕೊಂಡು ಅದರ ಉಪಯೋಗ ಪಡೆದಿದ್ದಾನೆ. ಕೆಲವೊಮ್ಮೆ ಅದರ ಮೇಲೆ ಅಂಬರಿಯನ್ನೂ ಕಟ್ಟಿ ರಾಜ-ಮಹಾರಾಜರಿಗೆ ಊರ ಸವಾರಿಯನ್ನೂ ಮಾಡಿಸಿದ್ದಾನೆ.

    ದೊಡ್ಡ ದೊಡ್ಡ ಮರದ ದಿಮ್ಮಿಗಳಾಗಲಿ, ದೇವಸ್ಥಾನ ನಿರ್ಮಾಣದ ಕಲ್ಲು ಬಂಡೆಗಳಾಗಲಿ ಅದನ್ನು ಸಾಗಿಸಲು ಈ ಆನೆಗಳನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸೈನಿಕ ಪಡೆಯಲ್ಲಿ ಆನೆಗಳ ಸಂಖ್ಯೆಯೇ ದೊಡ್ಡ ಬಲವಾಗಿತ್ತು. ಈ ಆನೆಗಳು ಭಾರತದಿಂದ ಮುಂದೆ ಅನೇಕ ರಾಷ್ಟçಗಳಿಗೆ ಪ್ರಯಾಣವೂ ಬೆಳೆಸಿದವು. ಅವು ಅಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡವು.

    ಇರ್ಶಾದ್ ಮೂಡಬಿದ್ರೆ

  • ಮಹಿಳೆ ಮಸೀದಿ ಪ್ರವೇಶಿಸಬಹುದೇ..?

    ಮಹಿಳೆ ಮಸೀದಿ ಪ್ರವೇಶಿಸಬಹುದೇ..?

    ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿದ್ದರೂ ಅದರ ಧರ್ಮಗ್ರಂಥ ಕುರ್‌ಆನ್ ಮತ್ತು ಆರಾಧನಾ ಕೇಂದ್ರವಾಗಿರುವ ಮಸೀದಿಗಳು, ಉಪವಾಸ ವ್ರತ, ಹಬ್ಬಗಳು ಮತ್ತು ಮುಸ್ಲಿಮರ ಆಚಾರ-ವಿಚಾರಗಳೆಲ್ಲ ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ, ಅವರ ಗ್ರಂಥದ ಬಗ್ಗೆ ಮತ್ತು ಸಾಂಸ್ಕೃತಿಕ, ಸಂಗತಿಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳುಳ್ಳ ಅಭಿಪ್ರಾಯ ಸೃಷ್ಟಿಯಾಗುವುದಕ್ಕೆ ಕಾರಣವಾಗಿದೆ. ಆರೋಪಗಳಿಗೂ ಕೊರತೆ ಇಲ್ಲ. ಮುಚ್ಚಿಟ್ಟ ಯಾವುದೇ ವಸ್ತು ಕುತೂಹಲಕ್ಕೂ ಅನುಮಾನಗಳಿಗೂ ಕಾರಣವಾಗುವುದು ಸಹಜ. ಆದ್ದರಿಂದಲೇ ಈ ವಿಷಯದಲ್ಲಿ ಸಮಾಜವನ್ನು ವಿಶ್ವಾಸಕ್ಕೆ ಪಡಕೊಳ್ಳಬೇಕು ಮತ್ತು ಎಲ್ಲವುಗಳು ಬಗ್ಗೆ ತೆರೆದ ಮನಸ್ಸಿನಿಂದ ಸಮಾಜಕ್ಕೆ ತಿಳಿಸಬೇಕು ಎಂದು ತೀರ್ಮಾನಿಸಿ “ಮಸೀದಿ ದರ್ಶನ” ಎಂಬ ಕಾರ್ಯಕ್ರಮಗಳನ್ನು ದೇಶದ ಹಲವೆಡೆ ಏರ್ಪಡಿಸಲಾಯಿತು.

    ಮಸೀದಿ ಹೇಗಿದೆ, ಏನಿದೆ, ಏನಿಲ್ಲ, ಅಲ್ಲಿ ನಡೆಯುವ ಪ್ರಾರ್ಥನೆ ಹೇಗಿರುತ್ತದೆ, ಅದನ್ನು ಯಾಕೆ ಕಟ್ಟಲಾಯಿತು, ಮಸೀದಿಯಿಂದ ಕೊಡುವ ಅಝಾನ್ (ಪ್ರಾರ್ಥನಾ ಕರೆ) ಹಿನ್ನಲೆ ಏನು, ಅದನ್ನು ಕೊಡುವುದಕ್ಕೆ ಕಾರಣ ಏನು, ಅದರ ಅರ್ಥ ಏನು, ವುಝೂ (ಅಂಗಸ್ನಾನ) ಹೇಗೆ ಮಾಡುವುದು, ಇತ್ಯಾದಿ ಹಲವು ಸಂಗತಿಯನ್ನು ದೇಶ ಬಾಂಧವರಿಗಾಗಿ ತಿಳಿಸುವ ಅಗತ್ಯ ಇದೆ.

    ಈ ಹಿನ್ನಲೆಯಲ್ಲಿ ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಜಾಮಿಯಾ ಮಸೀದಿಯನ್ನು ದರ್ಶನಕ್ಕಾಗಿ ತೆರೆದಿಡಲಾಯಿತು. ಸರ್ವ ಧರ್ಮೀಯರು ಈ ಒಂದು ಅವಕಾಶವನ್ನು ಪಡೆದುಕೊಂಡರು. ಸಂದರ್ಶಕರಿಗೆ ಕಾರ್ಯಕರ್ತರಾದ ಪುರುಷರೂ, ಮಹಿಳೆಯರೂ ಸಂಭ್ರಮದಿಂದ ವಿವರಣೆ ನೀಡಿದರು. ಸಮಾಜ ಸೇವಕರು, ಸಾಹಿತಿಗಳು, ರಾಜಕೀಯದಲ್ಲಿರುವವರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು ಮಸೀದಿಯ ಸಂದರ್ಶನ ಮಾಡಿದರು. ಮಸೀದಿಯಲ್ಲಿ ಅಂದು ನಡೆದ ಸಾಮೂಹಿಕ ನಮಾಝ್‌ನ ಶಿಸ್ತುಬದ್ಧ ಸಾಲು, ಭಕ್ತಿಯ ವಾತಾವರಣ ನೋಡಿದರು. ಮಸೀದಿ ಎಂಬುವುದು ನಿಗೂಢ ಸ್ಥಳ ಎಂಬ ಭಾವನೆ ಇದ್ದ ಹಲವರಿಗೆ ಅಲ್ಲಿಯ ತೆರೆದ ಪ್ರಾರ್ಥನಾ ಸ್ಥಳದ ಪವಿತ್ರತೆ ನೋಡಿ ಮನಸ್ಸು ತಿಳಿಯಾಗಿತ್ತು. ದೇಶಬಾಂಧವರು ಸಂಭ್ರಮದಿAದ ಒಳಗೆ ಓಡಾಡಿ ಪ್ರತಿಯೊಂದು ಸ್ಥಳವನ್ನೂ ವೀಕ್ಷಿಸಿ ವಿವರ ಪಡೆದುಕೊಂಡದ್ದು ಮಾತ್ರವಲ್ಲ ಟಿ.ವಿ. ಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾಗಳ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಅನುಭವಗಳನ್ನು ಹಂಚಿಕೊAಡರು. ಬಹಳಷ್ಟು ಗಣ್ಯ ಪುರುಷರೂ ಆಗಮಿಸಿದ್ದರು.

    ಇಲ್ಲಿ ಮುಖ್ಯವಾಗಿ ಪುರುಷರಿಂದ ಹಾಗೂ ಮಹಿಳೆಯರಿಂದ ಬಂದ ಒಂದು ಪ್ರಶ್ನೆ ಮಸೀದಿಗೆ ಮಹಿಳೆಯರಿಗೆ ಪ್ರವೇಶ ಇದೆಯೇ?” ಎಂದಾಗಿತ್ತು. ಯಾಕಾಗಿ ಒಟ್ಟಿಗೆ ನಮಾಝಿಲ್ಲ ಎಂದಾಗಿತ್ತು. ಸಂದರ್ಶಕರ ಪ್ರಶ್ನೆ ನಮಗೆ ಅನಿರೀಕ್ಷಿತವೂ ಆಗಿರಲಿಲ್ಲ. ಸಹಜವಾಗಿಯೇ ಅವರ ಮನಸ್ಸಿನಲ್ಲಿದ್ದ ಸಂಶಯ! ಆಕ್ಷೇಪನೂ ಇದಾಗಿತ್ತು. ಮಸೀದಿ ಒಳಗೆ ಅಂದು ಇದ್ದ ಅಪಾರ ಸಂಖ್ಯೆಯ ಬುರ್ಖಾಧಾರಿಣಿಗಳ ಸಂಖ್ಯೆಯನ್ನು ನೋಡಿ ಅವರಿಗೂ ಆಶ್ಚರ್ಯವಾಗಿತ್ತು.

    ನಮ್ಮ ಪ್ರವಾದಿ ಮುಹಮ್ಮದ್(ಸ)ರ ಬಳಿ ಇದೇ ಪ್ರಶ್ನೆಯನ್ನು ಸಾವಿರದ ನಾನೂರೈವತ್ತು ವರ್ಷದ ಹಿಂದೆ ಅಂದಿನ ಮಹಿಳೆಯರು ಕೇಳಿದ್ದರು. ಆಗ ಪ್ರವಾದಿಯವರು(ಸ) ಹೇಳಿದರು, ದೇವನ ಆರಾಧಾನಾಲಯ ಎಲ್ಲರಿಗೂ ಸೇರಿದ್ದು. ಪುರುಷರಂತೆಯೇ ಮಹಿಳೆಯರಿಗೂ ಮಸೀದಿಗೆ ಬರುವ ಸ್ವಾತಂತ್ರ್ಯ ಇದೆ. ಆದ್ರೆ ಮಹಿಳೆಯರಿಗೆ ಈ ಬಗ್ಗೆ ಕಡ್ಡಾಯ’ ವಿಧಿಸಲಾಗಿಲ್ಲ. ಪುರುಷರು ಐದು ಹೊತ್ತು ಮಸೀದಿಗೆ ಬಂದು ನಮಾಝ್ ಮಾಡುವಂತೆ ಮಹಿಳೆಯರಿಗೂ ಒಂದು ವೇಳೆ ಕಡ್ಡಾಯ ಮಾಡಿರುತ್ತಿದ್ದರೆ ಮಹಿಳೆಯರಿಗೆ ಅದು ಕಷ್ಟಕರವಾಗುತ್ತಿತ್ತು. ಕಾರಣ ಪ್ರಥಮವಾಗಿ ಮಹಿಳೆಯರ ದೈಹಿಕವಾದ ಮಾಸಿಕ ಮುಟ್ಟು, ಬಾಣಂತನ, ಬಸುರಿ ಇತ್ಯಾದಿ ಆರೋಗ್ಯ ಸಮಸ್ಯೆಗಳು ಮಹಿಳೆಯರಿಗೆ ಮಸೀದಿಯ ಪ್ರಾರ್ಥನೆಗೆ ಅನುಕೂಲವಾಗಿರದು. ಮಹಿಳೆಯರು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಲು ಬಯಸಿದರೆ ಅವರನ್ನು ತಡೆಯಬಾರದು, ಹೋಗಲು ಇಷ್ಟ ಪಡದಿದ್ದರೆ ಅವರನ್ನು ಒತ್ತಾಯಿಸಲೂ ಬಾರದು, ಅವರಿಗೆ ಮಸೀದಿಗಿಂತಲೂ ಮನೆಯ ಒಳ ಕೋಣೆಯೇ ಹೆಚ್ಚು ಅನುಕೂಲ ಆಗಿರುತ್ತದೆ” ಎಂದರು ಪ್ರವಾದಿ(ಸ).

    ರಾಜಕಾರಣಿಗಳು ಮತ್ತು ಧರ್ಮದ್ವೇಷಿಗಳು “ಮಸೀದಿಗೆ ಮುಸ್ಲಿಮ್ ಮಹಿಳೆಯರಿಗೆ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ” ಎಂದು ಅಪಪ್ರಚಾರ ಮಾಡುತ್ತಾರೆ. ಇಂತಹ ತಪ್ಪು ಭಾವನೆಯನ್ನು ಹೋಗಲಾಡಿಸಲು ಈ ಮಸೀದಿ ಸಂದರ್ಶನ ಕಾರ್ಯಕ್ರಮ ಪ್ರಯೋಜನವಾಗುತ್ತದೆ. ಪುರುಷರೊಂದಿಗೇ ಯಾಕೆ ಮಹಿಳೆಯರಿಗೂ ಒಂದೇ ಜಾಗದಲ್ಲಿ ನಮಾಝ್‌ಗೆ ಅವಕಾಶ ಇರಲ್ಲ… ಎಂದು ಓರ್ವರು ಕೇಳಿದರು. ಅದಕ್ಕೆ ನಮ್ಮ ಉತ್ತರ ಮುಸ್ಲಿಮರ ನಮಾಝ್ ರೀತಿ ತಲೆ ಬಾಗುವುದು ಮತ್ತು ನೆಲಕ್ಕೆ ಸಾಷ್ಟಾಂಗವಾಗಿ ಎರಗುವ ಶೈಲಿಯು ಪುರುಷರು ಮುಂದೆ ನಿಂತು ನಮಾಝ್ ಮಾಡಿದರೆ ಮಹಿಳೆಯರು ಪುರುಷರ ಹಿಂದೆ ನಿಂತು ನಮಾಝ್ ಮಾಡುವುದು ಹೆಚ್ಚು ಅನುಕೂಲ ಹಾಗೂ ಒಳಿತು ಅನಿಸುತ್ತದೆ. ಮಹಿಳೆಯರು ಯಾವುದೇ ಸಂಕೋಚ, ಮುಜುಗರ, ಸಂದೇಹದ ಒದ್ದಾಟವಿಲ್ಲದೆ ನಿರಾಳವಾಗಿ ನಮಾಝ್ ಮಾಡಬಹುದು. ಹೆಚ್ಚಾಗಿ ಪರ್ಧಾಧಾರಿಣಿ ಮಹಿಳೆಯರು ಪ್ರತ್ಯೇಕವಾಗಿಯೇ ನಮಾಝ್ ನಿರ್ವಹಿಸಲು ಬಯಸುತ್ತಾರೆ. ಆರಾಧನೆಗೆ ಯಾವುದೇ ತೊಂದರೆ ಆಗದೇ ಇರುವುದು ಮುಖ್ಯ.

    ಮಸೀದಿಯನ್ನು ಒಂದು ನಿಗೂಢವಾಗಿ ಎಂದೂ ಇರಿಸಬಾರದು, ನಾವು ಪರಸ್ಪರ ಎಲ್ಲರ ಧರ್ಮದ ಆಚಾರ, ವಿಚಾರವನ್ನು ಅರಿಯಬೇಕು. ನಮ್ಮ ನಡುವೆ ಇರುವ ಒಂದು ಭೀತಿಯ ಗೋಡೆ ತೊಲಗಬೇಕು, ಇಗರ್ಜಿ, ಮಂದಿರ, ದೇವಸ್ಥಾನ ಎಲ್ಲರ ಪಾಲಿಗೂ ತೆರೆದ ಮನೆಯಾಗಬೇಕು. ಒಬ್ಬಕ್ರೈಸ್ತ ಸಮುದಾಯದ ಸಹೋದರಿ ಉಪನ್ಯಾಸಕಿ ಕೇಳಿದರು, “ನಿಮ್ಮ ಮಸೀದಿಯಲ್ಲಿ ಕೇವಲ ಆರಾಧನೆ ಮಾತ್ರವೇ ನಿರ್ವಹಿಸುವುದೇ? ಯಾಕೆ ಇಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸಕ್ಕೆ ಪ್ರೇರಣೆ ಕೊಡಬಾರದು, ಉದಾ: ಮುಸ್ಲಿಮ್ ಸಮುದಾಯದ ಯುವಕರು ಹೆಚ್ಚಾಗಿ ಡ್ರಗ್ಸ್ ಪೀಡಿತರೆಂಬ ಅಪವಾದ ಇದೆ. ಇಂತಹ ಡ್ರಗ್ಸ್’ನ ಅಪಾಯದ ಬಗ್ಗೆ ಇಲ್ಲಿ ಏನೂ ಕ್ರಮ ಕೈಗೊಳ್ಳುವುದಿಲ್ಲವೇ? ಎಂದರು. ನಾವು ಇದಕ್ಕೆ ಅವರಿಗೆ ಹೇಳಿದೆವು, “ಮಸೀದಿಯಲ್ಲಿ ಕೇವಲ ನಮಾಝ್ ಮಾತ್ರವಲ್ಲ, ಶುಕ್ರವಾರದ ದಿವಸ ಜುಮಾ ಪ್ರವಚನ ಇರುತ್ತದೆ. ಅಂದು ಸಾಮಾಜಿಕವಾದ ವಿಷಯಗಳ ಉಪನ್ಯಾಸ ಕೂಡಾ ಇರುತ್ತದೆ. ಸಮಾಜದಲ್ಲಿದ್ದ ಕೆಡುಕಿನ ವಿರುದ್ಧ ಜನ ಜಾಗೃತಿ ಹುಟ್ಟಿಸುವ ಪ್ರವಚನ ಕಾರ್ಯ ನೀಡಲ್ಪಡುತ್ತದೆ.

    ಅದೇ ರೀತಿ ಮಸೀದಿಯಲ್ಲಿ ಸಮುದಾಯದ ಕೌಟುಂಬಿಕ ಸಮಸ್ಯೆಗಳ ಕೌನ್ಸಿಲಿಂಗ್ ಕೂಡಾ ಇಲ್ಲಿಯ ಧರ್ಮ ಗುರುಗಳು ನಡೆಸುತ್ತಾರೆ. ಡ್ರಗ್ಸ್ನ ನಿರ್ಮೂಲನೆ ಜನ ಜಾಗೃತಿ ಕಾರ್ಯಕ್ರಮವನ್ನು ಎಲ್ಲಾ ಕಡೆ ಮುಸ್ಲಿಮ್ ಸಮುದಾಯದ ಸಮಾಜ ಸೇವಾ ಘಟಕದವರು ನಡೆಸುತ್ತಾ ಬಂದಿದ್ದಾರೆ ಎಂದೆವು.ಮಸೀದಿ’ ಎಂಬುವುದು ದೇವನ ಸ್ತುತಿ, ಸ್ತೋತ್ರ ಮಾಡುವ ಪವಿತ್ರ ಸ್ಥಳ. ನಿರ್ಮಲ ಮನಸ್ಸು ಎಲ್ಲರಲ್ಲೂ ಮುಖ್ಯ. ಇಲ್ಲಿ ಮದ್ರಸಾ' ಇದೆ. ಈಮದ್ರಸಾ’ದಲ್ಲಿ ಮಕ್ಕಳಿಗೆ ಕುರ್‌ಆನ್ ಮತ್ತು ಧಾರ್ಮಿಕ ವಿಧಿ, ವಿಧಾನ ಕಲಿಸಲಾಗುತ್ತದೆ. ಒಳಿತು ಮತ್ತು ಕೆಡುಕಿನ ವ್ಯತ್ಯಾಸ ಕಲಿಸಲಾಗುತ್ತದೆ. ಸತ್ಯ, ನ್ಯಾಯ, ನೀತಿ ಕಲಿಸಲಾಗುತ್ತದೆ. ಮೊಸರಿನಲ್ಲೂ ಕಲ್ಲು ಹುಡುಕುವ ದುಷ್ಟ ಮನಃಸ್ಥಿತಿಯನ್ನು ತೊರೆದಾಗಲೇ ನಾವು ನೈಜ ಮಾನವರಾಗಲು ಸಾಧ್ಯ ಅಲ್ಲವೇ?

    ಸಾರ್ವಜನಿಕರಿಗೆ ಮಸೀದಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಇಂತಹ ಅದ್ಭುತ ಕಾರ್ಯಕ್ರಮ ಸಂಘಟಿಸಿದ ಕುದ್ರೋಳಿ ಜಾಮಿಯಾ ಮಸೀದಿ ಕಮಿಟಿ, ಮುಸ್ಲಿಮ್ ಐಕ್ಯತಾ ವೇದಿಕೆ ಕುದ್ರೋಳಿ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕ ನಿಜಕ್ಕೂ ಅಭಿನಂದನಾರ್ಹರು.

    ಶಮು

  • “ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): 
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

    “ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

    ಬೆಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕದ ವತಿಯಿಂದ ನಗರದ ಕ್ವೀನ್ಸ್‌ರೋಡ್‌ನ ಬಿಫ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಅರಿವು – ಮಾನವೀಯತೆಯ ಜಾಗೃತಿ” ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ, ರಾಜ್ಯಾದ್ಯಂತ ಅಭಿಯಾನದ ಅಂಗವಾಗಿ ನಡೆಯಲಿರುವ ಕಾರ್ಯಚಟುವಟಿಕೆಗಳ ಕುರಿತು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

    ‘ಅರಿವು’ ಕರ್ನಾಟಕದಾದ್ಯಂತ ಅಕ್ಟೋಬರ್ 2 ರಿಂದ ಅಕ್ಟೋಬರ್ 12ರವರೆಗೆ ನಡೆಯುವ ಅಭಿಯಾನವಾಗಿದ್ದು, ವಿಭಿನ್ನ ಸಮುದಾಯಗಳಲ್ಲಿ ದಯೆ, ಸಹಾನುಭೂತಿ ಮತ್ತು ಏಕತೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ.

    “ಅರಿವು” ಕೇವಲ ಒಂದು ಅಭಿಯಾನವಲ್ಲ –ಇದು ಪರಸ್ಪರ ಮಾನವೀಯತೆಯನ್ನು ಅಳವಡಿಸಿಕೊಳ್ಳಲಿಕ್ಕಾಗಿ ಒಂದು ಕರೆಯಾಗಿದೆ,” ಎಂದು GIO ಕರ್ನಾಟಕದ ರಾಜ್ಯಾಧ್ಯಕ್ಷೆ ನವೀದಾ ಅಸ್ಸಾದಿ ಹೇಳಿದರು.
    “ಯಾವುದೇ ಭೇದಭಾವಗಳಿಲ್ಲದೆ ಪರಸ್ಪರರ ಕಾಳಜಿವಹಿಸುದರಲ್ಲಿ ನಿಜವಾದ ಶಕ್ತಿಯಿದೆ ಎಂದು ನಾವು ನಂಬುತ್ತೇವೆ.”

    ಅವರು ಕುರ್‌ಆನ್‌ನ ಸೂಕ್ತವನ್ನು ಉಲ್ಲೇಖಿಸುತ್ತಾ ಅಭಿಯಾನದ ತತ್ತ್ವವನ್ನು ವಿವರಿಸಿದರು: “ಜನರೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು, ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನು ಮತ್ತು ಗೋತ್ರಗಳನ್ನು ಮಾಡಿದೆವು.” (ಕುರ್‌ಆನ್- 49: 13)
    “ಅರಿವು” ಇಂದಿನ ಅಸಹಿಷ್ಣುತೆ, ಭಿನ್ನತೆ ಮತ್ತು ಹಿಂಸೆಯ ಸವಾಲುಗಳಿಗೆ ಉತ್ತರವಾಗಿ ಚಿಂತನೆ, ಸುಧಾರಣೆ ಮತ್ತು ಸೇವೆಗಳನ್ನು ಉತ್ತೇಜಿಸುತ್ತದೆ.

    “ಅಂತರ್ಧರ್ಮೀಯ ಸಂವಾದವನ್ನು ಉತ್ತೇಜಿಸುವುದು, ಮಾನವೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು., ಸಂವಾದ, ಬೆಂಬಲ ಮತ್ತು ಸಾಮಾಜಿಕ ಗುಣಮುಖತೆಗೆ ಸಮಗ್ರ ವೇದಿಕೆಗಳನ್ನು ಒದಗಿಸುವುದು, ಮಾನವೀಯತೆಯ ಕಾರ್ಯಗಳ ಮೂಲಕ ಇಸ್ಲಾಂ ನ ಸಂದೇಶವನ್ನು ಸಾಕಾರ ಗೊಳಿಸುವ ಉದ್ದೇಶಗಳನ್ನು ಈ ಅಭಿಯಾನ ಹೊಂದಿದೆ” ಎಂದವರು ತಿಳಿಸಿದರು.

    “ಅಭಿಯಾನದ ಅಂಗವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆಗಳಾದ ,ಅಂತರ್ಧರ್ಮೀಯ ಸಂವಾದಗಳು ಮತ್ತು ಶಾಂತಿ ವಲಯಗಳು (Peace Circles), ಮಾನಸಿಕ ಆರೋಗ್ಯ ಕಾರ್ಯಾಗಾರಗಳು, ಕಲೆ,ಕವನ ಮತ್ತು ಪೋಸ್ಟರ್ ಸ್ಪರ್ಧೆಗಳು, ಸಾಮಾಜಿಕ ಮಾಧ್ಯಮ ರೀಲ್ಸ್ ಗಳು ಮತ್ತು ಜಾಗೃತಿ ವಿಡಿಯೋಗಳು, ಮಾಹಿತಿ ಪುಸ್ತಕ ಮತ್ತು ಕರಪತ್ರಗಳ ವಿತರಣೆ, ಮನೆಮನೆಗೆ ಜಾಗೃತಿ ಭೇಟಿ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ” ಎಂದು ತಿಳಿಸಿದರು.

    ಇಸ್ಲಾಮಿನ ಬೋಧನೆಗಳಿಂದ ಪ್ರೇರಣೆ ಪಡೆದ ‘ಅರಿವು’:

    “ಯಾರಾದರು ಒಬ್ಬ ಮನುಷ್ಯನನ್ನು ವಧಿಸಿದರೆ , ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ. ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೇ ಜೀವದಾನ ಮಾಡಿದಂತೆ.” (ಕುರ್‌ಆನ್ 5:32) ಎಂಬ ಸಂದೇಶವನ್ನು ನೀಡಿದರು.

    “GIO ಕರ್ನಾಟಕವು ದೈವಿಕ ಮಾರ್ಗದರ್ಶನದ ಬೆಳಕಿನಲ್ಲಿ ಯುವತಿಯರು ಮತ್ತು ವಿದ್ಯಾರ್ಥಿನಿಯರ ವೈಯಕ್ತಿಕ ಶ್ರೇಷ್ಠತೆ ಮತ್ತು ಸಮಾಜದ ಬದಲಾವಣೆಗೆ ಮೀಸಲಾಗಿರುವ ಸೈದ್ಧಾಂತಿಕ ಸಂಘಟನೆಯಾಗಿದೆ. ನಾವು ಸರ್ವ ಧರ್ಮದ ಮತ್ತು ಸಮುದಾಯದ ಜನರನ್ನು ನಮ್ಮೊಂದಿಗೆ ಸೇರಲು ಆಹ್ವಾನಿಸುತ್ತೇವೆ,” ಎಂದು ನವೀದಾ ಅಸ್ಸಾದಿ ಹೇಳಿದರು.

    “ನಾವು ದಯೆಯನ್ನು ಪುನಃ ನಮ್ಮ ಸುತ್ತಮುತ್ತಲೂ ಸ್ಥಾಪಿಸೋಣ ಮತ್ತು ಮುಂದಿನ ಪೀಳಿಗೆಗಳಿಗೆ ಮಾದರಿಯಾಗೋಣ” ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಲಾಯಿತು.
    ಈ ಸಂದರ್ಭದಲ್ಲಿ ಅಭಿಯಾನದ ಸಂಯೋಜಕಿ ಅಫ್ರಾ ಫತೀನ್, GIO ಕರ್ನಾಟಕದ ಉಪಾಧ್ಯಕ್ಷೆ ಅನೀಸ್ ಫಾತಿಮಾ, JIH ಕರ್ನಾಟಕ ಕಾರ್ಯದರ್ಶಿ ತಶ್ಕೀಲ್ ಖಾನಂ, ಅನುಪಮಾ ಮಾಸಪತ್ರಿಕೆಯ ಉಪಸಂಪಾದಕಿ ಕುಲ್ಸೂಮ್ ಅಬೂಬಕ್ಕರ್ ಉಪಸ್ಥಿತರಿದ್ದರು.

    ಹೆಚ್ಚಿನ ಮಾಹಿತಿಗಾಗಿ ಅಥವಾ ಅಭಿಯಾನದಲ್ಲಿ ಪಾಲ್ಗೊಳ್ಳಲು:

    ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್, ಕರ್ನಾಟಕ
    ಶಾಂತಿ ಸದನ್, #52, 2ನೇ ಮೆೈನ್, 1ನೇ ಬ್ಲಾಕ್, ಆರ್‌ಟಿ ನಗರ, ಬೆಂಗಳೂರು – 560032
    ✉️ ಇಮೇಲ್: giokarnataka@anupamamasikagmail-com

    ಅಭಿಯಾನ ಸಂಯೋಜಕಿ:
    ಅಫ್ರಾ ಫತೀನ್, ಸಲಹಾ ಸಮಿತಿ ಸದಸ್ಯೆ, GIO ಕರ್ನಾಟಕ

  • ವೃದ್ಯಾಪ್ಯವು ಆನಂದವಾಗಿರಲಿ

    ವೃದ್ಯಾಪ್ಯವು ಆನಂದವಾಗಿರಲಿ

    ಮಾನವನ ಜೀವನಕ್ಕೆ ನಾಲ್ಕು ಹಂತಗಳು ಇವೆ. ಅದೃಷ್ಟವಂತರು ಈ ನಾಲ್ಕು ಹಂತಗಳನ್ನು ಅನುಭವಿಸುತ್ತಾರೆ- ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ. ಬಾಲ್ಯವು ಜೀವನದ ಅತಿ ಸೊಗಸಾದ ಹಂತ. ಕುತೂಹಲ ಮತ್ತು ಕಲಿಕೆಯ ಆಸಕ್ತಿ ಬಾಲ್ಯದ ವೈಶಿಷ್ಟ್ಯ. ಈ ಹಂತದಲ್ಲಿ ವ್ಯಕ್ತಿ ಭವಿಷ್ಯಕ್ಕೆ ಭದ್ರವಾದ ಅಡಿಕಲ್ಲುಗಳನ್ನು ಇಡುವುದು ಮುಖ್ಯ.

    ಯೌವ್ವನವು ಉತ್ಸಾಹದ ಹಾಗೂ ಕನಸುಗಳ ಹಂತ. ಒಳ್ಳೆಯ ಚಿಂತನೆಗಳು, ಕೆಟ್ಟ ಚಿಂತನೆಗಳು, ಉತ್ತಮ ಸ್ನೇಹಿತರು, ಕೆಟ್ಟ ಸ್ನೇಹಿತರು ಹಾಗೂ ಜೀವನದ ಗುರಿಗಳನ್ನು ನಿರ್ಧರಿಸುವ ಹಂತ. ಪ್ರೌಢಾವಸ್ಥೆ ಜೀವನದ ಹೊಣೆಗಾರಿಕೆಯ ಹಂತ. ಕುಟುಂಬ, ಸಮಾಜ, ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಪ್ರಮುಖ ಹಂತ. ಅನುಭವಗಳನ್ನು ಪಡೆಯುವುದು. ಇತರರ ಅನುಭವಗಳನ್ನು ಅವಲೋಕಿಸಿ ಅದರ ಬೆಳಕಿನಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೇ ಹಂತದಲ್ಲಿ ಆಗುತ್ತದೆ.
    ವೃದ್ಧಾಪ್ಯವು ಮಾನವ ಜೀವನದ ಅಂತಿಮ ಹಂತ. ಈ ಹಂತದಲ್ಲಿ ದೈಹಿಕ ಶಕ್ತಿ ಕುಂದುತ್ತದೆ. ವೃದ್ಧಾಪ್ಯವು ಮಾನವ ಜೀವನದ ಅತ್ಯಂತ ಮಹತ್ವದ ಹಂತ. ಏಕೆಂದರೆ ಈ ಹಂತದಲ್ಲಿ ವ್ಯಕ್ತಿ ತನ್ನ ಹಿಂದಿನ ಜೀವನದ ಅನುಭವಗಳನ್ನು ಮುಂದಿಟ್ಟು ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತಾನೆ.

    ಮಾನವ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುಖ-ಸಂತೋಷ, ಜಯ-ಸೋಲು, ಏರುಪೇರುಗಳು… ಅಂಗಗಳು. ಆದರೆ, ಪ್ರತಿಯೊಬ್ಬರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರಲಾರರು.

    ಕೆಲವರಲ್ಲಿ ಸ್ವಾಭಾವಿಕವಾಗಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ ಇರುತ್ತದೆ. ಅವರು ಕಷ್ಟಗಳನ್ನು ಹೊಸ ಅವಕಾಶಗಳೆಂದು ನೋಡುತ್ತಾರೆ ಮತ್ತು ಸೋಲುಗಳಿಂದ ಪಾಠ ಕಲಿಯುತ್ತಾರೆ. ಇನ್ನೂ ಕೆಲವರಿಗೆ ಈ ಸಾಮರ್ಥ್ಯಗಳನ್ನು ಬೆಳೆಸಲು ತರಬೇತಿಯ ಅಗತ್ಯವಿರುತ್ತದೆ. ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆ ದೊರೆತರೆ ಅವರು ಸಹ ಸಮರ್ಥ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.

    ಒಬ್ಬ ವ್ಯಕ್ತಿ ತನ್ನ ಜೀವನದ ಅರವತ್ತು ವರ್ಷಗಳನ್ನೂ ದಾಟಿದನು ಅಂದರೆ, ಅವನು ತನ್ನ ಜೀವನದ ಬಹು ದೊಡ್ಡ ಹಂತವನ್ನು ದಾಟಿದ್ದಾನೆ ಎಂದರ್ಥ. ಈ ಹಂತವು ಕೇವಲ ವಯಸ್ಸಿನ ಅಂಕಿ ಅಂಶ ಅಷ್ಟೇ ಅಲ್ಲ. ಅದು ಜೀವನದ ಅನುಭವದ ಮಹಾ ಸಂಪತ್ತು.

    ಮಾನವನನ್ನು ಮಣ್ಣಿನಿಂದ ಸೃಷ್ಟಿಸಿ, ನಂತರ ವೀರ್ಯದಿಂದ, ಬಳಿಕ ರಕ್ತಪಿಂಡದಿಂದ ರೂಪಿಸಿ, ಶಿಶುವಾಗಿ ಜನಿಸಿ, ಬಾಲ್ಯವನ್ನು ದಾಟಿ, ಯುವಕನಾಗಿ ಬೆಳೆಸಿ. ನಂತರ ಅತಿ ವೃದ್ಧಾಪ್ಯಕ್ಕೆ ತಲುಪಿ, ಕೊನೆಯಲ್ಲಿ ತಿಳಿಯದವನಾಗುವ ವರೆಗೂ ಹಾದು ಹೋಗುತ್ತಾನೆ ಎಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸುತ್ತದೆ. ಆತ ತನ್ನನ್ನು, ತನ್ನವರನ್ನು, ಎಲ್ಲವನ್ನು, ಎಲ್ಲರನ್ನೂ ಮರೆಯುತ್ತಾನೆ. ಅಂದರೆ ಆತ `ಡೆಮಿನ್ಶಿಯ’ ಎಂಬ ರೋಗಕ್ಕೆ ತುತ್ತಾಗಿದ್ದಾನೆ ಎಂದರ್ಥ.
    ಆಯುಷ್ಯ ಇದ್ದಲ್ಲಿ ವೃದ್ಧಾಪ್ಯವು ಮಾನವನ ಜೀವನದಲ್ಲಿ ತಪ್ಪಿಸಲಾಗದ ಸಹಜ ಹಂತ. ಶರೀರದ ಶಕ್ತಿ ಕ್ಷೀಣಿಸಿದರೂ, ಮನಸ್ಸು ಚುರುಕಾಗಿರಲು ಮತ್ತು ಆತ್ಮಬಲ ಹೆಚ್ಚಿಸಲು ಸಾಧ್ಯ. ವೃದ್ಧಾಪ್ಯವನ್ನು ಭಾರವೆಂದು ಭಾವಿಸುವ ಬದಲು, ಅದನ್ನು ಅನುಭವಗಳ ಸಂಪತ್ತಿನAತೆ ಆಗಲು ಯೌವ್ವನದಲ್ಲಿ ಪ್ರಯತ್ನಿಸುವುದು ಮುಖ್ಯ. ವೃದ್ಧಾಪ್ಯದಲ್ಲಿಯೂ ಮಾನವನಿಗೆ ತನ್ನದೇ ಆದ ಮಹತ್ವವಿದೆ. ಯಶಸ್ವೀ ಜೀವನ ಎಂದರೆ ಕೇವಲ ಯೌವ್ವನದಲ್ಲಿ ಮಾತ್ರ ಸಾಧನೆಗಳನ್ನು ಮಾಡುವುದಲ್ಲ, ವೃದ್ಧಾಪ್ಯದಲ್ಲಿಯೂ ಸಂತೋಷ, ಶಾಂತಿ ಮತ್ತು ಆಧ್ಯಾತ್ಮಿಕ ಸಮಾಧಾನವನ್ನು ಕಂಡುಕೊಳ್ಳುವುದು.

    ಪ್ರವಾದಿ ಮುಹಮ್ಮದ್(ಸ)ರು ಹೇಳುತ್ತಾರೆ, “ಅಂತಿಮವು ಒಳ್ಳೆಯದಾದರೆ ಎಲ್ಲವೂ ಒಳ್ಳೆಯದು”. ಅಂದರೆ ಮನುಷ್ಯನ ಜೀವನದ ಕೊನೆಯ ಹಂತವೇ ಅವನ ಜೀವನದ ನಿಜವಾದ ಮೌಲ್ಯವನ್ನು ನಿರ್ಧರಿಸುತ್ತದೆ.
    ಕೆಲವರು ಪ್ರಪಂಚದಲ್ಲಿ ತುಂಬಾ ಒಳ್ಳೆಯವರಂತೆ ಕಾಣಬಹುದು. ಜನರ ಕಣ್ಣಿಗೆ ಅವರು ಧಾರ್ಮಿಕರೂ, ಸಜ್ಜನರೂ, ಸಮಾಜದಲ್ಲಿ ನಿಷ್ಠಾವಂತರೂ ಆಗಿ ತೋರುತ್ತಾರೆ. ಆದರೆ ಅವರ ಅಂತರAಗ ಬೇರೆ ರೀತಿಯದ್ದಾಗಿರುತ್ತದೆ. ಅವರ ಕೊನೆಯ ವಾಸ ಸ್ಥಳ ನರಕವಾಗಬಹುದು. ಆ ಸಮಯದಲ್ಲಿ ಅವರ ಜೀವನದ ಬಾಹ್ಯ ಗೌರವ, ಹೆಸರು-ಮೆಚ್ಚುಗೆ ಎಲ್ಲವೂ ಅರ್ಥವಿಲ್ಲದಂತಾಗುತ್ತದೆ.

    ಇನ್ನು ಕೆಲವರು ಸಮಾಜದ ದೃಷ್ಟಿಯಲ್ಲಿ ಕೆಟ್ಟವರಾಗಿರಬಹುದು. ಜನರಿಂದ ತಪ್ಪಾಗಿ ಅರ್ಥೈಸಲ್ಪಟ್ಟವರಾಗಿರಬಹುದು. ಆದರೆ ಅವರ ಹೃದಯದಲ್ಲಿದ್ದ ಸತ್ಯತೆ, ಪಶ್ಚಾತ್ತಾಪ ಮತ್ತು ದಯೆಯ ಕಾರಣದಿಂದ ಅವರ ಅಂತಿಮ ಹಂತ ಶ್ರೇಷ್ಠವಾಗಬಹುದು. ಅಂತಹವರಿಗೆ ಸ್ವರ್ಗವೇ ಅಂತಿಮ ವಾಸ ಸ್ಥಳವಾಗಬಹುದು.

    ಒಂದು ವೇಳೆ ನಮ್ಮ ಜೀವನವು ಹಲವು ತಪ್ಪುಗಳು, ದೋಷಗಳು, ಕೆಟ್ಟ ಕೆಲಸಗಳಿಂದ ಕೂಡಿದ್ದರೂ, ನಿರಾಶರಾಗುವ ಅಗತ್ಯವಿಲ್ಲ. ಏಕೆಂದರೆ ಅಲ್ಲಾಹನು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನವನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. “ಇಂದು” ಮಾಡಿದ ಸುಧಾರಣೆ ನಾಳೆಯ ಸುಂದರ ಅಂತ್ಯಕ್ಕೆ ದಾರಿ ತೆರೆದುಕೊಡುತ್ತದೆ.

    ಹಾಗಾದರೆ ನಮ್ಮ ವೃದ್ಧಾಪ್ಯ ಹೇಗಿರಬೇಕು? ಚೆನ್ನಾಗಿರಲು ಏನು ಮಾಡಬೇಕು? ಕೆಲವರ ವೃದ್ಧಾಪ್ಯ ದುಃಖಭರಿತವಾಗಿರುತ್ತದೆ. ಅವರ ಜೀವನದ ಕೊನೆಯ ಹಂತವು ವೃದ್ಧಾಶ್ರಮದಲ್ಲಿ ಕೊನೆಗೊಳ್ಳುತ್ತದೆ. ತಮ್ಮ ಮನೆ, ಕುಟುಂಬದಿAದ ದೂರವಾಗಿ ನೆನಪುಗಳೊಂದಿಗೆ ಏಕಾಂತದಲ್ಲಿ ದಿನ ಕಳೆಯುತ್ತಾರೆ.

    ಇನ್ನು ಕೆಲವರ ವೃದ್ಧಾಪ್ಯ ಉಲ್ಲಾಸದಿಂದ ಕೂಡಿರುತ್ತದೆ. ಅವರು ತಮ್ಮ ಮಕ್ಕಳ, ಮೊಮ್ಮಕ್ಕಳ ಜೊತೆಗಿದ್ದು ಪ್ರೀತಿ ಮತ್ತು ಗೌರವವನ್ನು ಅನುಭವಿಸುತ್ತಾರೆ. ಕುಟುಂಬ ಸಾನಿಧ್ಯವು ಅವರಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ.

    ಮುಸ್ಲಿಮ್ ಸಮುದಾಯದಲ್ಲಿ ಕೌಟುಂಬಿಕ ಜೀವನಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮ್ ಧರ್ಮವು ತಂದೆ-ತಾಯಿ ಮತ್ತು ಹಿರಿಯರ ಸೇವೆಗೆ ಬಹಳ ಮಹತ್ವವನ್ನು ಕೊಡುತ್ತದೆ. ಆದ್ದರಿಂದ ವೃದ್ಧರನ್ನು ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳುತ್ತಾರೆ.

    ನಮ್ಮ ವೃದ್ಧಾಪ್ಯದ ಬಗ್ಗೆ ನಮಗೆ ಕಾಳಜಿ ಇರಬೇಕು. ಯೌವ್ವನದಲ್ಲಿಯೇ ದೂರದೃಷ್ಟಿಯೊಂದಿಗೆ ಬದುಕಿದರೆ ವೃದ್ಧಾಪ್ಯವನ್ನು ಸಂತೋಷಭರಿತವಾಗುವAತೆ ರೂಪಿಸಬಹುದು. ಸಕಾರಾತ್ಮಕ ಚಿಂತನೆ, ಆರೋಗ್ಯದ ಕಾಳಜಿ, ಅಧ್ಯಾತ್ಮಿಕತೆ ಮತ್ತು ಕುಟುಂಬದೊAದಿಗೆ ಒಗ್ಗಟ್ಟಿನಿಂದ ಬಾಳುವ ಜೀವನವೇ ವೃದ್ಧಾಪ್ಯದ ನೆಮ್ಮದಿ, ಗೌರವ ಮತ್ತು ಸಂತೋಷಕ್ಕೆ ದಾರಿ.

    ವೃದ್ಧಾಪ್ಯದಲ್ಲಿ ನಮ್ಮ ಬದುಕು ಇತರರಿಗೆ ಆದರ್ಶವಾಗುವಂತಿರಬೇಕು. ನಮ್ಮ ಮಾತು, ನಡೆ-ನುಡಿ, ಪ್ರಾಮಾಣಿಕತೆ ಮತ್ತು ಅನುಭವದಿಂದ ಮುಂದಿನ ಪೀಳಿಗೆಗೆ ದಾರಿ ತೋರಿಸಬೇಕು. ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾವು ಜ್ಞಾನ, ಮೌಲ್ಯಗಳು ಮತ್ತು ಧರ್ಮನಿಷ್ಠೆಯ ಮಾದರಿಯಾಗಿದ್ದರೆ ನಮ್ಮ ಜೀವನ ಉತ್ತಮವಾಗುತ್ತದೆ.
    ಮನೋ ವೈದ್ಯರು ಹೇಳುವಂತೆ, ವೃದ್ಧಾಪ್ಯವನ್ನು ಆರೋಗ್ಯಕರವಾಗಿಯೂ ಸುಂದರವಾಗಿಯೂ ನಡೆಸಲು ಮೂರು ಮುಖ್ಯ ಅಂಶಗಳನ್ನು ಅಳವಡಿಸಬೇಕು.

    1. ಶಾರೀರಿಕ ಆರೋಗ್ಯದ ಕಾಳಜಿ.
    ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ತಕ್ಕ ಮಟ್ಟದ ವಿಶ್ರಾಂತಿ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಪರೀಕ್ಷೆಗಳು ವೃದ್ಧಾಪ್ಯದಲ್ಲಿ ದೇಹವನ್ನು ಚುರುಕಾಗಿಡುತ್ತದೆ.
    ಆರೋಗ್ಯದ ವೃದ್ಧಾಪ್ಯಕ್ಕಾಗಿ ರೋಗಗಳು ಬಂದು ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅವುಗಳನ್ನು ಮುಂಚಿತವಾಗಿ ತಡೆಗಟ್ಟುವುದು ಅತ್ಯಂತ ಮುಖ್ಯ.

    ಜಾಗ್ರತೆ- ರೋಗಗಳು ಉಂಟಾಗುವ ದಾರಿಯನ್ನು ತಿಳಿದುಕೊಳ್ಳುವುದು. ಆಹಾರದಲ್ಲಿ ಅಸಮತೋಲನ, ವ್ಯಾಯಾಮದ ಕೊರತೆ, ಒತ್ತಡ, ಕೆಟ್ಟ ಅಭ್ಯಾಸಗಳು ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
    ಅದನ್ನು ತಡೆಗಟ್ಟಲು ಸರಿಯಾದ ಜೀವನ ಶೈಲಿ, ಶುದ್ಧ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಮಾನಸಿಕ ಶಾಂತಿ ಅತಿ ಮುಖ್ಯ. ರೋಗಗಳಿಗೆ ತುತ್ತಾಗದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆ ಮತ್ತು ಉತ್ತಮ ಜೀವನ ಶೈಲಿ ಅತಿ ಮುಖ್ಯ.

    ವೃದ್ಧಾಪ್ಯದಲ್ಲಿ ಈ ಜಾಗ್ರತೆಗೆ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ವಯಸ್ಸಿನೊಂದಿಗೆ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಗೆ ಹೆಚ್ಚಿನ ಮಹತ್ವ ಕೊಡಬೇಕು.
    ಮಾನಸಿಕ ಆರೋಗ್ಯವು ಬಹಳ ಮಹತ್ವಪೂರ್ಣವಾಗಿದೆ. ಕೆಲವೊಮ್ಮೆ ವೃದ್ಧಾಪ್ಯದಲ್ಲಿ ಮಾನಸಿಕ ಒತ್ತಡ, ಡಿಪ್ರೇಶನ್, ಪಶ್ಚಾತ್ತಾಪ ಅಥವಾ ಅಪರಾಧ ಭಾವನೆಗಳು ಕಾಡುತ್ತದೆ. ಇಂತಹ ನಕಾರಾತ್ಮಕ ಭಾವನೆಗಳು ಮಾನವನನ್ನು ರೋಗಿಗಳನ್ನಾಗಿ ಮಾಡುತ್ತದೆ. ಮನಸ್ಸಿನ ಆಶಾಂತಿ ದೇಹದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ಜಾಗ್ರತೆಗಳಿಂದ ವೃದ್ಧಾಪ್ಯವನ್ನು ಆರೋಗ್ಯಕರ, ಸಂತೋಷಕರ ಮತ್ತು ಶಾಂತಿಯುತವಾಗಿಸಬಹುದು.

    2. ಯಶಸ್ವಿ ಅಥವಾ ಸುಂದರವಾದ ವೃದ್ಧಾಪ್ಯವನ್ನು ಪಡೆಯಬೇಕೆಂದರೆ, ಬದುಕಿನ ಎಲ್ಲಾ ವಿಷಯಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ. ಶರೀರವನ್ನು ಚುರುಕಾಗಿಡುವ ಶಿಸ್ತಿನ ಜೀವನ.

    ಮನಸ್ಸಿಗೆ ನೆಮ್ಮದಿ ನೀಡುವ ಸಕಾರಾತ್ಮಕ ಚಿಂತನೆ.

    ಸಮಾಜದೊAದಿಗೆ ಬೆಸೆದುಕೊಳ್ಳುವ ಒಡನಾಟ ಮತ್ತು ಆಧ್ಯಾತ್ಮಿಕತೆಯಿಂದ ಆತ್ಮಶಾಂತಿ ಪಡೆಯುವುದು. ಇವೆಲ್ಲವನ್ನು ಸಮಾನವಾಗಿ ಪಾಲಿಸಿದಾಗ ವೃದ್ಧಾಪ್ಯವು ನಿಜವಾಗಿಯೂ ಯಶಸ್ವಿ ಮತ್ತು ಸುಂದರವಾಗಲು ಸಾಧ್ಯ.

    ವೃದ್ಧಾಪ್ಯದಲ್ಲಿ ಅನೇಕರು ತಮ್ಮ ಉದ್ಯೋಗದಿಂದ ನಿವೃತ್ತಿಯಾಗುತ್ತಾರೆ. “ಆಫೀಸಿನಿಂದ ನಿವೃತ್ತಿಯಾದರೂ, ಜೀವನದಿಂದ ನಿವೃತ್ತಿಯಾಗಬಾರದು.” ಸಮಾಜಕ್ಕೆ ಸೇವೆ ಸಲ್ಲಿಸುವ ಅನೇಕ ಅವಕಾಶಗಳು ನಮ್ಮ ಸುತ್ತಲಿವೆ.

    ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ವೃದ್ಧಾಪ್ಯ ಚೈತನ್ಯದಿಂದ ಕೂಡಿರುತ್ತದೆ. ಧಾರ್ಮಿಕ ಕೇಂದ್ರಗಳು, ಶಾಲೆಗಳು, ಸ್ವಯಂ ಸೇವಾ ಸಂಘಟನೆಗಳು, ಕುಟುಂಬಸ್ಥರನ್ನು ಭೇಟಿ ಆಗುವುದು. ನೆರೆ ಹೊರೆಯ ಸಮಿತಿಗಳು ಎಲ್ಲೆಡೆ ಹಿರಿಯ ಮಾರ್ಗದರ್ಶನ ಮತ್ತು ಅನುಭವ ಅಗತ್ಯ. ನಿವೃತ್ತಿ ಹೊಂದಿದರೂ, ಇದು ಹೊಸ ರೀತಿಯ ಬದುಕಿನ ಆರಂಭ- ಯುವಕರಿಗೆ ದಾರಿದೀಪ ಆಗಬಹುದು. ತಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಹೀಗೆ, ವೃದ್ಧಾಪ್ಯದಲ್ಲಿ “ನಾನು ನಿವೃತ್ತ” ಎಂಬ ಯೋಚನೆಯ ಬದಲು ನಾನು ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳುವುದು, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವುದರಿಂದ ಪ್ರಗತಿಶೀಲರಾಗಿರಲು ನೆರವಾಗುತ್ತದೆ.

    ಪೋಷಕರ ಸೇವೆ ಎಂಬುದು ಕೇವಲ ಅವರು ಬದುಕಿದ್ದಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿಲ್ಲ. ಅವರ ಮರಣಾ ನಂತರವೂ ಮಾಡಬಹುದು ಎಂದು ಇಸ್ಲಾಮಿನ ಈ ಶಿಕ್ಷಣದಿಂದ ಸ್ಪಷ್ಟವಾಗುತ್ತದೆ.

    ಇಂದಿನ ಸ್ವಾರ್ಥಪರ ಸಮಾಜದಲ್ಲಿ, ತಮಗೆ ಜೀವನವನ್ನು ನೀಡಿದ ತಂದೆ-ತಾಯಿಗಳಿಗೆ ಗೌರವ, ಕಾಳಜಿ ತೋರಿಸದೆ ಇರುವಾಗ, ತಮ್ಮ ಆಪ್ತ ಬಂಧುಗಳ ಬಗ್ಗೆ ಕಾಳಜಿ ವಹಿಸುವರೆ!

    ತಂದೆ-ತಾಯಿಗಾಗಿ ಖರ್ಚು ಮಾಡುವುದು ಮಕ್ಕಳ ಕರ್ತವ್ಯ. ಅವರಿಗೆ ಮಾಸಿಕವಾಗಿ ಹಣ ನೀಡುವುದು, ಅವರ ಅಗತ್ಯಗಳನ್ನು ಪೂರೈಸುವುದು ಮಕ್ಕಳ ಜವಾಬ್ದಾರಿಯಾಗಿದೆ. ಪೋಷಕರಿಗೆ ಪಿಂಚಣಿ ಸಿಗುತ್ತಿದ್ದರು, ಅದನ್ನು ಕಾರಣವನ್ನಾಗಿ ಮಾಡದೆ ಮಕ್ಕಳು ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕು. ಅವರಿಗೆ ನೀಡಿದ ಪ್ರೀತಿ ಮತ್ತು ಕಾಳಜಿ ಯಾವತ್ತೂ ವ್ಯರ್ಥವಾಗುವುದಿಲ್ಲ.

    ವೃದ್ಧಾಪ್ಯದಲ್ಲಿ ದೈಹಿಕವಾಗಿಯೂ, ಮಾನಸಿಕವಾಗಿಯೂ ದುರ್ಬಲರಾಗುವುದು ಸಹಜ. ಆದರೆ ದೈಹಿಕವಾಗಿಯೂ, ಮಾನಸಿಕವಾಗಿಯು ಬಲಿಷ್ಠರಾಗಿರುವುದು ಜೀವನ ನಿಜವಾದ ಶಕ್ತಿ ಮತ್ತು ಯಶಸ್ಸು. ಇದರ ಅತ್ಯುತ್ತಮ ಉದಾಹರಣೆ ಪ್ರವಾದಿ ಮುಹಮ್ಮದ್(ಸ)ರು.

    ಪ್ರವಾದಿ ಮುಹಮ್ಮದ್(ಸ)ರು ವೃದ್ಧಾಪ್ಯದಲ್ಲಿಯೂ ದೈಹಿಕವಾಗಿ ಚುರುಕಾಗಿದ್ದು, ಮಾನಸಿಕವಾಗಿ ದೃಢವಾಗಿದ್ದರು. ತಮ್ಮ ಜೀವನದ ಅಂತಿಮ ಹಂತದಲ್ಲಿಯೂ ಸಮಾಜವನ್ನು ಮುನ್ನಡೆಸುವ ಶಕ್ತಿ, ಧೈರ್ಯ ಮತ್ತು ತಾಳ್ಮೆ ಅವರಲ್ಲಿತ್ತು.

    ಇದರಿಂದ ಹುದೈಬಿಯಾ, ಖೈಬರ್ ಯುದ್ಧಗಳಲ್ಲಿ ಜಯಗೊಳಿಸಿದರು, ಹುನೈನ್ ಯುದ್ಧ ಆ ಕಾಲದ ಪ್ರಮುಖ ಯುದ್ಧಗಳಲ್ಲಿ ಒಂದು. ಇದನ್ನು ಜಯಗೊಳಿಸಿದ್ದು, ತನ್ನ ಜೀವನದ ಕೊನೆಯ ಐದು ವರ್ಷಗಳಲ್ಲಿ. ಇದೇ ಸಮಯದಲ್ಲಿ ತಾಯಿಫನ್ನು ವಶಪಡೆದು ಕೊಂಡರು. ಅದೇ ಸಮಯದಲ್ಲಿ “ಯುದ್ಧವಿಲ್ಲದೆಯೇ ಮಕ್ಕಾ ವಿಜಯವನ್ನು ಸಾಧಿಸಲಾಯಿತು.” ಹಜ್ಜ್ನ ಸಮಯ ವಿದಾಯ ಭಾಷಣದಲ್ಲಿ 1,40,000 ಸಂಗಾತಿಗಳೆದುರು ಭಾಷಣ ಮಾಡಿದರು. ಈ ಉದಾಹರಣೆಗಳನ್ನು ಮುಂದಿಟ್ಟು ನೋಡಿದಾಗ, ಪ್ರವಾದಿವರ್ಯರ(ಸ) ಜೀವನ ಯಾವಾಗಲೂ ಮೇಲೇರುತ್ತಾ ಹೋದದಲ್ಲದೆ, ಕೆಳಕ್ಕೆ ಇಳಿಯಲಿಲ್ಲ. ಅವರು ಯಶಸ್ಸು ಸಾಧಿಸುತ್ತಾ ಹೋದರು. ಅವರ(ಸ) ಜೀವನ ನಮಗೆ ಪಾಠದಾಯಕವಾಗಿದೆ.

    “ಹಿರಿಯರು ದೈಹಿಕ ಚಟುವಟಿಕೆಗಳನ್ನು ಸತತವಾಗಿ ಮಾಡಬೇಕು. ಸಮಾಜದಲ್ಲಿ ಸೇವೆಗೆ ಸಿದ್ಧ” ಎಂಬ ಮನೋಭಾವನೆ ಬೆಳೆಸಿಕೊಳ್ಳುವುದು ಯಶಸ್ವಿ ವೃದ್ಧಾಪ್ಯದ ಗುಟ್ಟು.

    3. ವೃದ್ಧಾಪ್ಯದಲ್ಲಿ ಹಿರಿಯರಿಗೆ ಭಾವನಾತ್ಮಕ ಬೆಂಬಲವೂ ಅತ್ಯಂತ ಮುಖ್ಯ.
    ಭಾವನಾತ್ಮಕ ಬೆಂಬಲದ ಕೊರತೆಯಿಂದ ವೃದ್ಧರು ಏಕಾಂತತೆ, ಒತ್ತಡ ಮತ್ತು ನಿರಾಶೆಗೆ ಒಳಗಾಗುತ್ತಾರೆ. ಆದರೆ ಮನೆಯವರ ಗೌರವ, ಪ್ರೀತಿ ದೊರೆತರೆ, ಮನೆಯವರು ಅವರನ್ನು ಗೌರವಿಸಿದರೆ, ಅವರೊಂದಿಗೆ ಸಮಯ ಕಳೆದರೆ, ಅವರ ಸೇವೆ ಮಾಡಿದರೆ ಅವರಿಗೆ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ.

    ವೃದ್ಧರು, ವೃದ್ಧಾಪ್ಯವನ್ನು ಆರೋಗ್ಯಕರವಾಗಿ ಕಳೆಯಲು ಅಧ್ಯಯನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆಗಳನ್ನು ಓದುವುದು, ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ಹೊಸ ವಿಷಯಗಳನ್ನು ಕಲಿಯುವುದು, ವಿಚಾರ ವಿನಿಮಯಗಳಂತಹ ಚಟುವಟಿಕೆಗಳನ್ನು ಮಾಡುತ್ತಿದ್ದರೆ, ಮಾನಸಿಕವಾಗಿ ಸಕ್ರಿಯರಾಗಿರುತ್ತಾರೆ. ಬುದ್ಧಿಹೀನತೆಗೆ ಒಳಗಾಗುವುದಿಲ್ಲ. ಅವರ ಸ್ಮರಣ ಶಕ್ತಿ ಕುಗ್ಗುವುದಿಲ್ಲ. ಮಾನಸಿಕ ದುರ್ಬಲತೆಗೆ ತುತ್ತಾಗುವುದಿಲ್ಲ.

    ಕೆಲವರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಉದ್ಯೋಗ ಮುಗಿದ ನಂತರ ಉದ್ಯಮ ಇಲ್ಲ. ಪಿಂಚಣಿ ಸಿಗುವುದಿಲ್ಲ. ಆದಾಯದ ಮೂಲವಿಲ್ಲ, ಇಂತಹ ಸ್ಥಿತಿಯಲ್ಲಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೆಲವೊಮ್ಮೆ ಕುಟುಂಬದವರು ಸಹ ವೃದ್ಧರನ್ನು ನಿರ್ಲಕ್ಷಿಸಿ ಮನೆಯಿಂದ ಹೊರಹಾಕುವ ಘಟನೆಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ವೃದ್ಧರು ಆಶ್ರಯವಿಲ್ಲದೆ ಫುಟ್‌ಪಾತ್‌ಗಳಲ್ಲಿ ವಾಸಿಸುವಂತಾಗುತ್ತದೆ. ನೀವು ನಗರಗಳಲ್ಲಿ ಭಿಕ್ಷೆ ಬೇಡುವ ವೃದ್ಧರನ್ನು ನೋಡಬಹುದು.

    ಪ್ರವಾದಿ ಶುಯೈಬ್(ಅ)ರು ವೃದ್ಧಾಪ್ಯದಲ್ಲಿ ದುಡಿಯಲು ಅಸಮರ್ಥರಾದಾಗ, ಅವರಿಬ್ಬರು ಪುತ್ರಿಯರು ತಂದೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ತಂದೆಗೆ ಆರ್ಥಿಕವಾಗಿ ಸಹಕರಿಸಲು ಮೇಕೆಗಳನ್ನು ಮೇಯಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡರು.

    ತAದೆ ವೃದ್ಧರಾದಾಗ ಮಕ್ಕಳು ಅವರನ್ನು ಆರ್ಥಿಕವಾಗಿ ಸಹಕರಿಸಬೇಕು. ಅವರ ಆವಶ್ಯಕತೆಗಳನ್ನು ಗಮನಿಸಿ ಪೂರೈಸುವುದು ಕೇವಲ ನೈತಿಕ ಕರ್ತವ್ಯವಷ್ಟೇ ಅಲ್ಲ ಇಸ್ಲಾಮಿನ ಬೋಧನೆಯೂ ಆಗಿದೆ.
    ಪ್ರವಾದಿ ಮುಹಮ್ಮದ್(ಸ)ರು ಹೇಳಿದ್ದಾರೆ- “ಮಾತಾಪಿತರು ಮರಣ ಹೊಂದಿದ ಬಳಿಕವೂ ಅವರ ಆಪ್ತ ಸಂಬAಧಿಕರ ಬಗ್ಗೆ ಕಾಳಜಿ ತೋರಿಸುವುದು, ಸಹಾಯ ಮಾಡುವುದು ಮತ್ತು ಅವರ ಸ್ನೇಹಿತರಿಗೆ ಗೌರವ ನೀಡುವುದು ಪೋಷಕರಿಗೆ ಮಾಡಿದ ಸೇವೆಯಂತೆಯೇ ಆಗುತ್ತದೆ.”

    ಸಕ್ರಿಯರಾಗಿರಿ. ಮಾನಸಿಕವಾಗಿ ನಿವೃತ್ತರಾಗಬೇಡಿ. 40 ವರ್ಷಗಳಿಂದ ಸೇವಿಸಿದ ಆಹಾರವನ್ನು ಬದಲಾಯಿಸಿ. ಆರೋಗ್ಯಕರ ಆಹಾರ, ನಿದ್ರೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ. ವಯಸ್ಸಿಗೆ ತಕ್ಕ ಆಹಾರ ಸೇವಿಸಿ. ಜೀವನಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಳ್ಳಿ. ಸಾಮಾಜಿಕ ಜೀವನ, ಧಾರ್ಮಿಕತೆ, ಸಮಾಜದ ಹಿತಕ್ಕಾಗಿ ದುಡಿಯುವ ಉದ್ದೇಶಗಳನ್ನು ಮುಂದಿಟ್ಟಾಗ ವೃದ್ಧಾಪ್ಯವು ಉತ್ತಮವಾಗಬಹುದು ಮತ್ತು ಸಮಾಜದಲ್ಲಿ ಗೌರವಿಸಲ್ಪಡುವಿರಿ. ಸಂತೋಷ ನೆಮ್ಮದಿ ನಿಮ್ಮ ಜೀವನದ ಪಾಲಾಗುವುದು.

    ಸಜ್‌ರೂನ್

  • “ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: 
ಇದು ದಸರಾದ ಪರಿಕಲ್ಪನೆ

    “ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: ಇದು ದಸರಾದ ಪರಿಕಲ್ಪನೆ

    [ಭಾರತ ಬಹುಸಂಸ್ಕೃತಿಯ ಆಚರಣೆಗಳ ದೇಶ. ಕರ್ನಾಟಕದಲ್ಲಿ ದಸರಾ’ವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ನವರಾತ್ರಿಗಳ ಈ ಉತ್ಸವದ ಹಿನ್ನೆಲೆಯು ಹಿಂದೂ ಬಾಂಧವರಲ್ಲಿ ಶುಭ ದಿನಗಳಾಗಿವೆ. ದುಷ್ಟ ಶಕ್ತಿಯ ದಮನ, ಸಂಕಷ್ಟ ನಿವಾರಣೆಯ ನಂಬಿಕೆಯಲ್ಲಿ ಈ ಉತ್ಸವ ಆಚರಿಸುತ್ತಾರೆ. ಅಂತೆಯೇ ಇದೇ ತಿಂಗಳಲ್ಲಿ ದೀಪಾವಳಿ’ಯ ಬೆಳಕಿನ ಹಬ್ಬದ ಸಂಭ್ರಮವನ್ನೂ ದೇಶಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ನಾವು ಎಲ್ಲಾ ಧರ್ಮವನ್ನೂ ಗೌರವಿಸುವವರಾಗಬೇಕು. ಪರಸ್ಪರ ಧಾರ್ಮಿಕ ಅರಿವು’ ಉಳ್ಳವರಾಗಬೇಕು. ಹಬ್ಬಗಳು ಮನಸ್ಸನ್ನು ಬೆಸೆಯುವ, ಸೌಹಾರ್ದತೆಯನ್ನು ಹುಟ್ಟಿಸುವ ಆಚರಣೆಯಾಗುತ್ತದೆ. ದಸರಾ ಮತ್ತು ದೀಪಾವಳಿಯ ಹಿನ್ನಲೆಯ ಬಗ್ಗೆ ಲೇಖಕಿ ಸುಖಲಾಕ್ಷಿ ವೈ. ಸುವರ್ಣರವರು ಬರೆದಿರುವ ಈ ಲೇಖನವನ್ನು ಓದುಗರಿಗಾಗಿ ಇಲ್ಲಿ ಕೊಡುತ್ತಿದ್ದೇವೆ. ಅಂತೆಯೇ ದೇಶ ಬಾಂಧವರಿಗೆ ಶುಭಾಶಯಗಳನ್ನೂ ಕೋರುತ್ತೇವೆ.] -ಸಂಪಾದಕಿ.

    ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತಾರೆ. ಪ್ರಕೃತಿಯನ್ನು ವಿಕೃತಿಗೊಳಿಸುವ ದುಷ್ಟಶಕ್ತಿಗಳ ದಮನ ಮಾತೃಶಕ್ತಿಯಿಂದ ಮಾತ್ರ ಸಾಧ್ಯ. ಒಟ್ಟಿನಲ್ಲಿ ದುಷ್ಟರ ಶಿಕ್ಷೆ ಶಿಷ್ಟ ರಕ್ಷಣೆಗಾಗಿ ಒಂಭತ್ತು ಅವತಾರಗಳನ್ನೆತ್ತಿದ ದುರ್ಗಾಮಾತೆ ಸಕಲ ಸಂಕಷ್ಟ ನಿವಾರಕಳೆಂದು ಕರೆಯಲ್ಪಟ್ಟು ಆದಿಶಕ್ತಿಯ ರೂಪದಲ್ಲಿ ದೇಶದೆಲ್ಲೆಡೆ ಪೂಜಿಸಲ್ಪಡುತ್ತಿದ್ದಾಳೆ.

    ‘ದಸರಾ’ ಎಂದು ಕರೆಯಲ್ಪಡುವ ನವರಾತ್ರಿಯನ್ನು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಒಂಬತ್ತು ರಾತ್ರಿಗಳ ದುರ್ಗೆಯ ಆರಾಧನೆಯ ಬಳಿಕ ಹತ್ತನೆಯ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ವಿಜಯದಶಮಿಯನ್ನು ದಶಶಿರನಾದ ರಾವಣ ಸಂಹಾರ ಮಾಡಿದ ವಿಜಯದ ದ್ಯೋತಕವಾಗಿ ದಶಹರ/ದಸರಾ ಎಂದು ಕರೆಯುತ್ತಾರೆ. ಈ ದಿನವನ್ನು ಶ್ರೀರಾಮಚಂದ್ರ ರಾವಣ ಸಂಹಾರ ಮಾಡಿದ ದಿನವೆಂದು ನಂಬಲಾಗುತ್ತಿದ್ದು, ಉತ್ತರಭಾರತದಲ್ಲಿ ನವರಾತ್ರಿಯನ್ನು ‘ರಾಮ್ ಲೀಲಾ’ ಎಂದೇ ಪೂಜಿಸಲಾಗುತ್ತಿದೆ. ವಿಜಯ ದಶಮಿಯಂದು ರಾವಣ ಸಂಹಾರದ ದ್ಯೋತಕವಾಗಿ ಉದ್ದನೆಯ ಮರದ ತುಂಡಿಗೆ ರಾವಣನ ಆಕಾರ ನೀಡಿ ಅದಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಇದನ್ನು ‘ಲಂಕಾ ದಹನ’ ಎಂದು ಕರೆದು ಜನ ಸಂಭ್ರಮಿಸುತ್ತಾರೆ. ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ನಂಬಲಾಗುತ್ತದೆ. ಪಾಂಡವರು ವೇಷ ಬದಲಾಯಿಸಿ ವಿರಾಟ ನಗರಕ್ಕೆ ತೆರಳಿದ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀ ಮರದೊಳಗೆ ಸಂರಕ್ಷಿಸಿಟ್ಟಿದ್ದು ಅವರ ವಿಜಯದ ಸಂಕೇತವಾಗಿ ವಿಜಯದಶಮಿಯಂದು ಆಯುಧ ಪೂಜೆ ಮತ್ತು ಶಮೀ ಮರವನ್ನು ಪೂಜಿಸಲಾಗುತ್ತದೆ.

    ಗುಜರಾತಿನಲ್ಲಿ ನವರಾತ್ರಿಯನ್ನು ಸಂಗೀತ-ನೃತ್ಯಗಳಿಂದ ಆರಾಧಿಸಲಾಗುತ್ತದೆ. ಗುಜರಾತಿಗಳು ಘಟಸ್ಥಾಪನೆಯ ದಿನದಿಂದ ಒಂಭತ್ತು ದಿನಗಳವರೆಗೆ ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡುತ್ತಾರೆ. ಅಗತ್ಯವುಳ್ಳವರಿಗೆ ಉಚಿತ ಖಾದ್ಯ ವಿತರಣೆ ಮಾಡಿ ಸಹಾಯ ಮಾಡಲಾಗುತ್ತದೆ. ಒಂಭತ್ತು ರಾತ್ರಿಗಳಲ್ಲಿ ಸಾವಿರಾರು ಜನ ಸೇರಿ ವರ್ತುಲ ರೂಪಿಸಿ ಗಾರ್ಭ ನೃತ್ಯ ಸೇವೆ ನಡೆಯುತ್ತದೆ. ಹೆಣ್ಣುಮಕ್ಕಳು ಬಣ್ಣಬಣ್ಣದ ಛನಿಯಾ ಚೋಲಿ, ಗಾಗರಾ ಹಾಗೂ ಪುರುಷರು ಕುರ್ತಾ ಪ್ಶೆಜಾಮದಂತಹ ಸಾಂಪ್ರದಾಯಿಕ ಉಡುಪು ತೊಟ್ಟು ಆವೇಶದಿಂದ ಕುಣಿಯುತ್ತಾ ಗಾರ್ಭಾ ನೃತ್ಯದ ಮೂಲಕ ದುರ್ಗಾಮಾತೆಯನ್ನು ಆರಾಧಿಸುತ್ತಾರೆ.
    ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ದೊಡ್ಡಹಬ್ಬ. ಈ ದಿನಗಳಲ್ಲಿ ಕೋಲ್ಕತ್ತಾದ ಗಲ್ಲಿಗಲ್ಲಿಗಳಲ್ಲಿ ದುರ್ಗಾಮಾತೆಯ ಪೆಂಡಾಲ್‌ಗಳನ್ನು ಹಾಕಲಾಗುತ್ತದೆ. ದುರ್ಗಾಪೂಜೆಯ ಒಂಬತ್ತು ದಿನಗಳಲ್ಲಿಯೂ ಇಡೀ ಕೋಲ್ಕತ್ತಾ ನಗರ ಸಂಭ್ರಮದ ನಗರಿಯಾಗಿ ಬದಲಾಗುತ್ತದೆ. ಪಶ್ಚಿಮಬಂಗಾಳ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಅಶ್ವಯುಜ ಶುಕ್ಲ ಪಂಚಮಿಯಿAದ ತೊಡಗಿ ದಶಮಿಯವರೆಗಿನ ಆರು ದಿನಗಳ ತನಕ ದುರ್ಗಾಪೂಜೆ ನಡೆಯುತ್ತದೆ.

    ಕರ್ನಾಟಕದಲ್ಲಿ ನಾಡಹಬ್ಬ

    ಅಥವಾ ‘ದಸರಾ’ ಎಂದು ಕರೆಯಲ್ಪಡುತ್ತಿರುವ ನವರಾತ್ರಿ ಮಹೋತ್ಸವ ರಾಜ್ಯದ ಹೆಮ್ಮೆಯ ಮತ್ತು ಪ್ರಮುಖ ಹಬ್ಬವಾಗಿದೆ. ಮೈಸೂರು ದಸರಾ ಎಂದೇ ಖ್ಯಾತಿ ಹೊಂದಿರುವ ಮೈಸೂರಿನಲ್ಲಿ ವಿಜಯನಗರ ಕಾಲದಿಂದಲೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನವೆಂದು ವಿಜಯದಶಮಿಯನ್ನು ‘ಕೆಟ್ಟದರ ಮೇಲೆ ಒಳ್ಳೆಯವರ ವಿಜಯ’ ಎಂದು ಸಾಂಕೇತಿಸುವ ಹಬ್ಬವಾಗಿದೆ. ರಾಜ್ಯದ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕಾಗಿ ದಸರಾ ಮಹೋತ್ಸವವನ್ನು ‘ನಾಡ ಹಬ್ಬ’ವೆಂದು ಕರೆಯಲಾಗುತ್ತದೆ. ವಿಶ್ವ ವಿಖ್ಯಾತವಾದ ಮೈಸೂರು ದಸರಾ 10 ದಿನಗಳ ಕಾಲ ಸಂಭ್ರಮದಿAದ ಆಚರಿಸಲಾಗುತ್ತಿದ್ದು, ನಾಡಿನ ಎಲ್ಲಾ ದೇವಾಲಯಗಳಲ್ಲಿ ದುರ್ಗೆಯನ್ನು ನವರೂಪಗಳಲ್ಲಿ ಅಲಂಕರಿಸಿ ನವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಲಾಗುತ್ತದೆ.

    ತುಳುನಾಡಿನಲ್ಲಿ ನವರಾತ್ರಿಯನ್ನು ‘ಮಾರ್ನೆಮಿ’ ಎಂದು ಕರೆಯುತ್ತಾರೆ. ಒಂಭತ್ತು ರಾತ್ರಿಯ ಹಬ್ಬವಾದ ನವರಾತ್ರಿಯ ಒಂಭತ್ತನೆಯ ದಿನ ‘ಮಹಾನವಮಿ’ ತುಳುಭಾಷೆಯಲ್ಲಿ ‘ಮಾರ್ನೆಮಿ’ ಎಂದಾಗಿದೆ. ದುರ್ಗೆ ಹತ್ತು ರಾಕ್ಷಸರನ್ನು ಸಂಹರಿಸಿದ ರಾತ್ರಿಯೆಂದು ದಶಹರ/ದಸರಾ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. ತುಳುನಾಡಿನ ದೇವಾಲಯಗಳಲ್ಲಿ ಮಾರ್ನೆಮಿಯ ಪ್ರಥಮ ದಿನದಂದು ‘ಕೊಪ್ಪರಿಗೆ’ ಏರಿಸಲಾಗುತ್ತದೆ. ಕೊಪ್ಪರಿಗೆ ಅಂದ್ರೆ ‘ನಿಧಿ’ ಎಂದರ್ಥ. ಭತ್ತಬೇಸಾಯ ಸಂಸ್ಕçತಿಯ ತುಳುನಾಡಿನಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ಧಾರ್ಮಿಕ ಕೇಂದ್ರಗಳಲ್ಲಿ ‘ಅನ್ನಪ್ರಸಾದ’ ಸೇವೆ ನಡೆಯುತ್ತದೆ. ಅನ್ನದಾನ ಎಂಬುದು ಪುಣ್ಯದಾನವೆಂದು ನಂಬಲಾಗುತ್ತಿದ್ದು ‘ಅನ್ನಪ್ರಸಾದ’ದ ಸೇವೆಗೆ ದೊಡ್ಡ ‘ಕಟಾರ’ದ ಅವಶ್ಯಕತೆ ಇದ್ದು ತುಳುವಿನಲ್ಲಿ ‘ಕೊಪ್ಪರಿಗೆ ಏರಾವುನಿ’ ಎಂದು ಶ್ರದ್ಧಾಭಕ್ತಿಯಿಂದ ಪೂಜಿಸಿ ಅನ್ನ ಬೇಯಿಸಲಾಗುತ್ತದೆ. ಮಾರ್ನೆಮಿಯ ಒಂಭತ್ತು ದಿನಗಳಲ್ಲಿಯೂ ವಿವಿಧ ವೇಷಗಳಿಂದ ವಿಶೇಷವಾಗಿ ಹುಲಿವೇಷ ಹಾಕಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿ ಉತ್ಸವಕ್ಕೆ ಮತ್ತು ಹುಲಿವೇಷಕ್ಕೆ ನೇರವಾದ ಸಂಬಂಧವಿದೆ. ಹುಲಿ ದುರ್ಗಾದೇವಿಯ ವಾಹನ. ದುರ್ಗಾಮಾತೆ ಹುಲಿಯ ಮೇಲೆ ಕುಳಿತುಕೊಂಡು ರಕ್ಕಸರನ್ನು ಸಂಹರಿಸಿದ ಸಂಕೇತವಾಗಿ ಹುಲಿವೇಷ ಹಾಕಿ ದೇವಿಯನ್ನು ಆರಾಧಿಸುತ್ತಾರೆ. ಇದು ದುಷ್ಟಶಕ್ತಿಗಳನ್ನು ನಿಗ್ರಹಿಸಿದ ಸಂಕೇತವೂ ಆಗಿದೆ.

    ತುಳುನಾಡಿನಲ್ಲಿ ಹುಲಿ ವೇಷದ ಹಿಂದೆ ಜನಪದ ಕತೆ ಇದ್ದು ಮಕ್ಕಳಲ್ಲಿ ಅಂಗವಿಕಲತೆ, ಆರೋಗ್ಯ ಸಮಸ್ಯೆ ಇದ್ದರೆ ಮಾರ್ನೆಮಿಯ ದಿನಗಳಲ್ಲಿ ಮಕ್ಕಳಿಗೆ ಹುಲಿ ವೇಷ ಹಾಕುವ ಹರಕೆ ಹೊತ್ತರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ತುಳುನಾಡಿನಲ್ಲಿ ನವರಾತ್ರಿಯನ್ನು ‘ಶಾರದಾ ಮಹೋತ್ಸವ’ ಎಂದೂ ಕರೆಯುತ್ತಾರೆ. ಐದನೇ ದಿನದ ಲಲಿತ ಪಂಚಮಿಯಂದು ವಿದ್ಯೆಯ ಅಧಿದೇವತೆಯಾದ ಶಾರದೆಯ ಪ್ರತಿಷ್ಠಾಪನೆ ಮಾಡಿ ಪುಟ್ಟ ಮಕ್ಕಳನ್ನು ಶಾರದೆಯ ಮುಂದೆ ಕೂರಿಸಿ ಅಕ್ಷರಾಭ್ಯಾಸದ ಆರಂಭ ಮಾಡಲಾಗುತ್ತದೆ. ವಿದ್ಯೆಯೇ ಬದುಕಿನ ಮೂಲಾಧಾರ. ಉತ್ತಮ ಶಿಕ್ಷಣದಲ್ಲಿಯೇ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ.

    ಪ್ರಸ್ತುತ ಪ್ರಪಂಚವು ಎದುರಿಸುತ್ತಿರುವ ಅತ್ಯಾಚಾರ, ದುರಾಚಾರ, ಪೈಶಾಚಿಕತ್ವ ಎಲ್ಲದರ ಪರಿಹಾರಕ್ಕೆ ದುರ್ಗಾರಾಧನೆ ಪರಿಣಾಮಕಾರಿ ಎಂದು ನಂಬಲಾಗುತ್ತದೆ. ಈ ಮುಖೇನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ, ರಾಕ್ಷಸತನದ ದಮನಕ್ಕೆ ‘ದುರ್ಗತಿಹಾರಿಣಿ ದುರ್ಗಾಮಾತೆಯ’ ಆರಾಧನೆ ಮಹತ್ವದ್ದಾಗಿದೆ. ಅಧರ್ಮದ ವಿರುದ್ಧದ ಯುದ್ಧದಲ್ಲಿ ಕೊನೆಗೆ ಧರ್ಮ ವಿಜಯದ ಸಂದೇಶವೇ ‘ದುರ್ಗಾರಾಧನೆ’
    ಸುಜ್ಞಾನದ ದೀಪ ಬೆಳಗುವ ಹಬ್ಬ ‘ದೀಪಾವಳಿ’. ರಾಷ್ಟ್ರೀಯ ಹಬ್ಬವೆಂದು ಖ್ಯಾತಿ ಪಡೆದ ‘ದೀಪಾವಳಿ’ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ದೀಪಾವಳಿ ಇತರ ಹಬ್ಬಗಳಂತೆ ಕೇವಲ ಆರಾಧನೆಯನ್ನು ಕೇಂದ್ರೀಕರಿಸುವ ಹಬ್ಬವಲ್ಲ. ಮನುಷ್ಯನ ಮನಸ್ಸಿನ ಕತ್ತಲೆಯನ್ನು ನೀಗಿಸಿ, ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಬೆಳಕಿನ ಹಣತೆ ಹಚ್ಚುವ ಮೂಲಕ ಮಾನವೀಯ ಸಂತಸಗಳನ್ನು ಸಂಭ್ರಮಿಸುವ ಹಬ್ಬ. ಜ್ಞಾನದ ಬೆಳಕೆಂದರೆ ಗುರುವಿದ್ದಂತೆ. ‘ಅರಿವೇ ಗುರು’. ಒಳ್ಳೆಯತನವನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಲೌಕಿಕ ಬದುಕಿನ ಬೆಳಕೇ ಬೆಳಕು… ಸೊಗಸೇ ಸೊಗಸು… ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ, ದೀಪ ಮತ್ತು ಆವಳಿ ಎಂಬ ಎರಡು ಪದಗಳ ಸಂಯೋಜನೆಯಿಂದ ರೂಪುಗೊಂಡಿದೆ. ಆವಳಿ ಎಂದರೆ ಸಾಲು ಅಥವಾ ಗುಂಪು ಎಂದರ್ಥ.

    ದೀಪಾವಳಿಯೊಂದಿಗೆ ಹಲವು ಪೌರಾಣಿಕ ಕತೆಗಳು ಮಿಳಿತಗೊಂಡಿವೆ. ಶ್ರೀರಾಮಚಂದ್ರ ವಿಜಯದಶಮಿಯಂದು ರಾವಣ ಸಂಹಾರ ಮಾಡಿ ಸರಿಯಾಗಿ ಇಪ್ಪತ್ತು ದಿನಕ್ಕೆ ಲಂಕೆಯಿಂದ ಅಯೋಧ್ಯಾ ತಲುಪಿದ್ದಾನೆ ಎಂದೂ, 14 ವರ್ಷಗಳ ವನವಾಸದ ಬಳಿಕ ತಮ್ಮ ಪ್ರಭುವಿನ ಅಯೋಧ್ಯಾಗಮನದ ಸಂಭ್ರಮವಾಗಿ ಪ್ರಜೆಗಳು ಸುತ್ತಲೂ ದೀಪಗಳನ್ನು ಬೆಳಗಿ ಶ್ರೀರಾಮಚಂದ್ರನನ್ನು ಸ್ವಾಗತಿಸಿದರು ಎಂಬುದು ಪೌರಾಣಿಕ ಐತಿಹ್ಯ. ಉತ್ತರಭಾರತದ ಸುತ್ತಮುತ್ತಲಿನ ರಾಜ್ಯಗಳ ಜನರು ಇಂದಿಗೂ ಈ ನಂಬಿಕೆಯನ್ನು ಉಳಿಸಿಕೊಂಡು ಶ್ರದ್ಧಾಭಕ್ತಿಯಿಂದ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತದ ಪೂರ್ವಭಾಗಗಳಲ್ಲಿ ಮುಖ್ಯವಾಗಿ ಪಶ್ಚಿಮಬಂಗಾಳ, ಒಡಿಶಾ, ಅಸ್ಸಾಂನಲ್ಲಿ ದೀಪಾವಳಿ ಅಮವಾಸ್ಯೆಯಂದು ಕಾಳಿದೇವಿಯನ್ನು ಆರಾಧಿಸಲಾಗುತ್ತಿದ್ದು ಈ ಪೂಜೆಯನ್ನು ‘ಶ್ಯಾಮ ಪೂಜೆ’ಯೆಂದು ಕರೆಯಲಾಗುತ್ತದೆ.

    ಮಹಾರಾಷ್ಟ್ರದಲ್ಲಿ ಐದು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲಿ ಈ ಹಬ್ಬವನ್ನು ‘ದಿವಾಳಿ’ ಎಂದು ಕರೆಯುತ್ತಾರೆ. ಮೊದಲನೇ ದಿನ ‘ಧನ್ ತೇರಸ್’ ನಂದು ಮನೆಗೆ ಬೇಕಾದ ಹೊಸವಸ್ತುಗಳನ್ನು ಖರೀದಿಸಲು ಶುಭದಿನವೆಂದು ನಂಬಲಾಗುತ್ತಿದೆ. ಮಾರನೇ ದಿನ ಬರುವ ನರಕ ಚತುರ್ದಶಿಯನ್ನು ‘ಛೋಟಿ ದಿವಾಲಿ’ ಎಂದು ಕರೆಯುತ್ತಾರೆ. ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿ ಅವನ ಬಂಧನದಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧಮುಕ್ತಗೊಳಿಸಿದ ಸಂಭ್ರಮವನ್ನು ಲೋಕದ ಜನರು ಸೂರ್ಯೋದಯಕ್ಕೆ ಮೊದಲೇ ಎದ್ದು ಅಭ್ಯಂಜನ ಸ್ನಾನ ಮಾಡಿ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ, ಸಿಹಿ ಹಂಚುತ್ತಾರೆ. ಸಂಜೆ ಲಕ್ಷ್ಮೀ ಪೂಜೆ. ದೀಪಾವಳಿ ಅಮವಾಸ್ಯೆಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಶುಭದಾಯಕವೆಂದು ನಂಬಲಾಗುತ್ತದೆ. ದೇವಾಸುರರು ಅಮೃತ ಪ್ರಾಪ್ತಿಗಾಗಿ ಹಾಲ್ಗಡಲನ್ನು ಕಡೆವಾಗ ‘ಲಕ್ಷ್ಮೀ’ ಎಂಬ ಸಂಪತ್ತಿನ ದೇವತೆ ಉದ್ಭವವಾದ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆ ಆಚರಿಸಲಾಗುತ್ತದೆ.

    ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿ ಭಿನ್ನಭಿನ್ನವಾಗಿ ದೀಪಾವಳಿ ಆಚರಿಸಲಾಗುತ್ತದೆ. ಮೂರುದಿನಗಳ ದೀಪಾವಳಿ ಆಚರಣೆಯಲ್ಲಿ ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನ, ಲಕ್ಷ್ಮೀ ಪೂಜೆಯಂದು ಗಣೇಶ ಮತ್ತು ಲಕ್ಷ್ಮೀ ಪೂಜೆ, ಮೂರನೇ ದಿನ ಬಲಿಪಾಡ್ಯಮಿಯಂದು ಬಲೀಂದ್ರ ಪೂಜೆ ಮಾಡಲಾಗುತ್ತದೆ. ಅಂದು ರೈತರು ತಮ್ಮ ಗದ್ದೆ ಸುತ್ತಲೂ ದೀಪವಿಟ್ಟು ಬಲಿಚಕ್ರವರ್ತಿಯನ್ನು ಸ್ಮರಿಸುತ್ತಾರೆ. ಅಂದು ಶಿವಪಾರ್ವತಿಯರು ಪಗಡೆಯಾಟವಾಡಿದ ಸಂಕೇತವಾಗಿ ಬಹಳಷ್ಟು ಮನೆಗಳಲ್ಲಿ ಪಗಡೆಯಾಡುವುದು ವಾಡಿಕೆ.

    ತುಳುನಾಡಿನಲ್ಲಿ ನಾಲ್ಕು ದಿನಗಳ ಕಾಲ ದೀಪಾವಳಿ ಆಚರಿಸಲಾಗುತ್ತದೆ. ಮನೆಗಳ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಲಾಗುತ್ತದೆ. ಮೊದಲ ದಿನ ಸಂಧ್ಯಾಕಾಲದಲ್ಲಿ ನೀರು ತುಂಬುವ ಹಬ್ಬ, ಮಾರನೇ ದಿನ ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲೇ ಅಭ್ಯಂಜನ ಸ್ನಾನ, ಮೂರನೇ ದಿನ ಲಕ್ಷ್ಮೀ ಪೂಜೆಯಂದು ಮನೆಮನೆಗಳಲ್ಲಿ ಪೂಜಾ ಸಂಭ್ರಮ, ಅಂದು ವರ್ತಕರು ಲಕ್ಷ್ಮೀ ಪೂಜೆ ಮಾಡಿ ಹೊಸ ಲೆಕ್ಕಗಳನ್ನು ಪ್ರಾರಂಭಿಸುವ ಪರಿಪಾಠ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ನಾಲ್ಕನೆಯ ದಿನ ಗೋಪೂಜೆ ಮತ್ತು ಬಲೀಂದ್ರ ಪೂಜೆ. ಅಂದು ಹಸುಗಳನ್ನು ಮೀಯಿಸಿ ಅರತಿ ಬೆಳಗಿ ಸಿಹಿ ತಿನ್ನಿಸಲಾಗುತ್ತದೆ. ರೈತರು ಸಂಜೆ ಹೊತ್ತು ಗದ್ದೆತೋಟಗಳ ಅಂಚಿನಲ್ಲಿ ಸಾಲು ದೀಪಗಳನ್ನು ಬೆಳಗಿ ಬಲೀಂದ್ರನನ್ನು ಕರೆಯುತ್ತಾರೆ. ಈ ಪದ್ಧತಿ ಫಲವಂತಿಕೆಯನ್ನು ನೀಡುವ ಶಕ್ತಿಮಾತೆಯ ಆರಾಧನಾ ಕ್ರಮವಾಗಿದೆ.

    ಒಟ್ಟಿನಲ್ಲಿ ದೀಪಾವಳಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಮನೆಮಂದಿಗೆ ಹೊಸಬಟ್ಟೆ, ಹೊಸ ವಸ್ತುಗಳ ಖರೀದಿ, ಮಹಿಳೆಯರಿಗೆ ಬಗೆಬಗೆಯ ಸಿಹಿತಿನಿಸುಗಳ ತಯಾರಿಯ ಸಂಭ್ರಮ ಜೊತೆಗೆ ಬಣ್ಣಬಣ್ಣದ ಗೂಡುದೀಪಗಳ ತಯಾರಿ, ಮಕ್ಕಳಿಗೆ ಕಿವಿಗಡಚಿಕ್ಕುವ ಪಟಾಕಿ ಸುಡುವ ಸಂಭ್ರಮವೇ ಸಂಭ್ರಮ…. ವಿವಿಧ ಧರ್ಮಗಳ, ವೈವಿಧ್ಯಮಯ ಸಂಸ್ಕೃತಿಯ ಭಾರತದಲ್ಲಿ ದೀಪಾವಳಿ ಬರಿಯ ದೀಪಗಳ ಹಬ್ಬವಲ್ಲ. ನಂಬಿಕೆ-ಆಚರಣೆ, ಪುರಾಣ ಕಥನಗಳ ಮಿಳಿತದೊಂದಿಗೆ ಪ್ರಕೃತಿಯೊಂದಿಗಿನ ಅನುಸಂಧಾನದ ಪರ್ವ ದಿನವಾಗಿದೆ. ಮಾನವೀಯ ಸಂಬಂಧಗಳನ್ನು ಬೆಸೆದು ಚಿರನೂತನಗೊಳಿಸುವ ಸಂಭ್ರಮದ ಹಬ್ಬವಾಗಿದೆ.

    ಸುಖಲಾಕ್ಷಿ ವೈ. ಸುವರ್ಣ

  • ‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

    ‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ‘ಬುಕರ್‌’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

    ನಗರದ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ಉದ್ಘಾಟನೆಗೊಂಡ ನಾಡಹಬ್ಬ ದಸರಾ ಉತ್ಸವವು, ರಾಜ್ಯದಲ್ಲಿ ಕೋಮು ಸೌಹಾರ್ದ, ಧಾರ್ಮಿಕ ಸಹಿಷ್ಣತೆ ಮತ್ತು ಭಾಷಾ ಸಾಮರಸ್ಯದ ಅಗತ್ಯವನ್ನು ಮತ್ತೊಮ್ಮೆ ಸಾರಿ ಹೇಳಿತು. ‘ಜೈ ಹಿಂದ್ ,‌ ‘ಜೈ ಕರ್ನಾಟಕ’ ದ ಜೊತೆಗೆ ‘ಜೈ ಸಂವಿಧಾನ’ ಎಂಬ ಘೋಷಣೆಯೂ ಮೊಳಗಿತು.
    ಕುವೆಂಪು‌ ಅವರ ನಾಡಗೀತೆಯ ‘ಸರ್ವ ಜನಾಂಗದ ಶಾಂತಿಯ ತೋಟ’ ನುಡಿ ಸಾಲು ಕಾರ್ಯಕ್ರಮದ ಆರಂಭದಿಂದ ಕೊನೆವರೆಗೂ ಅನುರಣಿಸಿತು. ದಸರಾ ಎಲ್ಲ‌ ಜಾತಿ,‌ ಧರ್ಮಗಳ‌ ಜನರ‌ ಹಬ್ಬ ಎಂಬ ಸಂದೇಶವನ್ನೂ ಕೊಟ್ಟಿತು.

    ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಳಿಕ ದಸರಾ ಉದ್ಘಾಟಿಸಲು ಆಯ್ಕೆಯಾದ ದಿನದಿಂದಲೂ ನಾಡಿನಾದ್ಯಂತ ಗಮನ ಸೆಳೆದು, ವಿರೋಧಿಗಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ ನೆನಪಿಸುವ ಸನ್ನಿವೇಶಕ್ಕೂ ಕಾರಣವಾಗಿದ್ದ ಲೇಖಕಿ ಬಾನು ಮುಷ್ತಾಕ್‌, ಉತ್ಸವಕ್ಕೆ ಚಾಲನೆ ನೀಡಿದರು.

    ನವರಾತ್ರಿ ಆಚರಣೆಯ ಮೊದಲ‌ ದಿನದ ಬಣ್ಣವಾದ ಹಳದಿ ಸೀರೆಯನ್ನು ಉಟ್ಟಿದ್ದ ಅವರು ತಮ್ಮ ಪ್ರತಿ ಮಾತಿನಲ್ಲೂ ಸಾಮರಸ್ಯದ ಕುರಿತು ಒತ್ತಿ ಹೇಳಿದರು. ಮುಖ್ಯಮಂತ್ರಿ‌ ಸಿದ್ದರಾಮಯ್ಯ ಆದಿಯಾಗಿ ಮಾತನಾಡಿದ ಎಲ್ಲರೂ ಸೌಹಾರ್ದವನ್ನೇ ಪ್ರತಿಪಾದಿಸಿದರು.

    ಮಾತು ಆರಂಭಿಸಿದ‌ ಬಾನು ಮುಷ್ತಾಕ್, “ಸರ್ವ ಜನಾಂಗದ ತೋಟವಾದ ನಾಡಿನಲ್ಲಿ ಪ್ರತಿ ಹೂ ತನ್ನ‌ ಬಣ್ಣದಲ್ಲೆ ಅರಳಲಿ, ತನ್ನ ಸುವಾಸನೆಯನ್ನೇ ಬೀರಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಆದರೆ ಎಲ್ಲವೂ ಒಟ್ಟಾದಾಗ ಸೌಹಾರ್ದದ ಹಾಡಾಗಲಿ” ಎಂದು ಆಶಿಸಿದರು.

    “ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿಯು ಯಾರನ್ನೂ ಹೊರತಳ್ಳುವುದಿಲ್ಲ. ಆದರೆ ಮನುಷ್ಯರು ಮಾತ್ರ ಗಡಿಗಳನ್ನು ಸೃಷ್ಟಿಸುತ್ತಾರೆ” ಎಂದು‌ ವಿಷಾದಿಸಿದ ಅವರು, ಸೌಹಾರ್ದ, ಸಮಾನತೆಗಾಗಿ ಶ್ರಮಿಸಿದ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ ಗಮನ ಸೆಳೆದರು.

    “ದಸರೆ ಎಂದರೆ ಹಬ್ಬವಷ್ಟೇ ಅಲ್ಲ. ನಾಡಿನ ನಾಡಿ ಮಿಡಿತ, ಸಂಸ್ಕೃತಿಯ ಉತ್ಸವ. ಇದು ಎಲ್ಲರನ್ನೂ ಒಳಗೊಳ್ಳುವ ಘಳಿಗೆ.‌ ಸಮನ್ವಯ ಮೇಳ. ವಿವಿಧತೆಯಲ್ಲಿ ಏಕತೆ ಇರುವ ಸುಗಂಧ” ಎಂದು‌ ಬಣ್ಣಿಸಿದರು.
    “ನವರಾತ್ರಿಯಲ್ಲಿ ಉರ್ದು ಭಾಷಿಕರು ತಮ್ಮ ಗುರುತನ್ನು ಕೊಟ್ಟಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿ ವಾಸವಿದ್ದ ನನ್ನ ಆಪ್ತ ಸಂಬಂಧಿ ಮೊಹಮದ್ ಗೌಸ್ ಎಂಬುವವರು ಮೈಸೂರು ಮಹಾರಾಜರ ಅಂಗರಕ್ಷಕ‌ ಪಡೆಯ ಸೈನಿಕರಾಗಿದ್ದರು. ಅಂಥ ಹಲವರು ಅಂಗರಕ್ಷಕ ಪಡೆಯಲ್ಲಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿ ಅಂಗರಕ್ಷಕ ಪಡೆಗೆ ನೇಮಿಸಿಕೊಂಡಿದ್ದರು. ಇದು‌ ಅವಿಸ್ಮರಣೀಯವಾದ ಹೆಮ್ಮೆ” ಎಂದು ಸ್ಮರಿಸಿದರು.
    “ನಮ್ಮ ಸಂಸ್ಕೃತಿಯು ಹೃದಯಗಳನ್ನು ಒಂದುಗೂಡಿಸುವಂಥದ್ದು, ದ್ವೇಷಗಳನ್ನು ಬೆಳೆಸುವಂಥದ್ದಲ್ಲ, ಪ್ರೀತಿಯನ್ನು ಹರಡುವಂಥದ್ದು” ಎಂದು‌ ಪ್ರತಿಪಾದಿಸಿದರು.
    “ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಲ್ಲ.‌ ಅದೊಂದು ಮೌಲ್ಯ. ಅದನ್ನು ಗೌರವಿಸೋಣ. ಈ ನೆಲದಲ್ಲಿ ಸೌಹಾರ್ದದ ಕುರುಹುಗಳಿವೆ. ಇಲ್ಲಿನ‌ ಬಿಸಿಲು ಕೂಡ ಮಾನವೀಯತೆಯ ಪ್ರತೀಕವಾಗಿದೆ. ‌ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಯನ್ನು ನಾಶ ಮಾಡಲಿ” ಎಂದು ಆಶಿಸಿದರು.
    “ದಸರಾ ಮೈಸೂರು ನಗರ, ನಾಡು ಹಾಗೂ ದೇಶಕ್ಕಷ್ಟೇ ಸೀಮಿತವಾಗದೆ, ಇಡೀ ಜಗತ್ತಿನಾದ್ಯಂತ ಶಾಂತಿ, ಸೌಹಾರ್ದ, ಪ್ರೀತಿಯ ದೀಪವಾಗಿ ನೆಲೆ ಕಂಡುಕೊಳ್ಳಲಿ” ಎಂದರು.
    “ನನ್ನ ಬದುಕು ನನಗೆ ಹಲವು ಪಾಠಗಳನ್ನು ಕಲಿಸಿದೆ. ವ್ಯಷ್ಟಿಯಿಂದ ಸಮಷ್ಟಿಯತ್ತ ಸಾಗುವುದೇ ನಿಜವಾದ ದಾರಿ ಎಂಬುದು ಅದರಲ್ಲೊಂದು. ನನ್ನ ಧಾರ್ಮಿಕ ನಂಬಿಕೆ, ಜೀವನ‌ದರ್ಶನ ಜೀವಪರವಾಗಿದೆ.‌ ಅದು ಮರದ‌ ನೆರಳಂತೆ, ತಂಪಾದ ನದಿಯಂತೆ. ಅಸ್ತ್ರದ ಬದಲು ಅಕ್ಷರದಿಂದ, ಹಗೆಯ ಬದಲು ಪ್ರೀತಿಯಿಂದ ಗೆಲ್ಲುವಂಥದ್ದು” ಎಂದು ಪ್ರತಿಪಾದಿಸಿದರು.

    ಹತ್ತು‌ ವರ್ಷದ ಹಿಂದೆ ಬರೆದ ‘ಬಾಗಿನ’ ಕವಿತೆಯನ್ನು ಭಾಷಣದ ಕೊನೆಗೆ ಓದಿದ ಅವರು,‌ ಬಾಗಿನ ಪಡೆದ ಮುಸ್ಲಿಂ‌ ಮಹಿಳೆಯಲ್ಲಿ ಮೂಡುವ ಭಾವನೆಗಳನ್ನು ಬಣ್ಣಿಸಿದರು.

    ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ‌ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದವರ ಅರ್ಜಿಯನ್ನು ವಜಾಗೊಳಿಸುವ ವೇಳೆಯಲ್ಲಿ, ಸುಪ್ರೀಂ ಕೋರ್ಟ್ ಸಂವಿಧಾನದ ಪ್ರಸ್ತಾವನೆಯನ್ನು ಓದುವಂತೆ ಅರ್ಜಿದಾರರಿಗೆ ಹೇಳಿದ್ದನ್ನು ಉಲ್ಲೇಖಿಸಿದರು. “ರಾಜ್ಯ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಂವಿಧಾನದ ಪರವಾಗಿಯೇ ಇದೆ. ಎಲ್ಲರೂ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಗಳು ಎಂದು ಪ್ರತಿಪಾದಿಸಿದರು. ಶಾಸಕ ಜಿ.ಟಿ.ದೇವೇಗೌಡ ಅವರೂ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು.

    ‘ಓಲೈಕೆ ರಾಜಕಾರಣ ಬೇಡ; ಸಿದ್ದರಾಮಯ್ಯ
    “ಯಾರನ್ನೋ ಓಲೈಸಿ, ರಾಜಕಾರಣ ಮಾಡಲು ನಾಡಹಬ್ಬವನ್ನು ವಿರೋಧಿಸುವುದು ಸಂವಿಧಾನಕ್ಕೆ, ದೇಶಕ್ಕೆ ಮಾಡುವ ಅಪಚಾರ, ಅಕ್ಷಮ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

    ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಮಾತನಾಡಿ ಸಭಿಕರನ್ನು ಹಿಡಿದಿಟ್ಟ ಅವರು, “ರಾಜಕಾರಣ ಮಾಡಲು ಬೇರೆ ಸ್ಥಳ,‌ ಸಂದರ್ಭಗಳಿವೆ.‌ ಗೋಡಾ ಹೈ,‌ ಮೈದಾನ್ ಹೈ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಬೇಕೇ ಹೊರತು, ದಸರೆಯಂಥ ಉತ್ಸವದಲ್ಲಿ ಅಲ್ಲ” ಎಂದರು.
    “ಬಾನು ಮುಷ್ತಾಕ್‌ ಅವರು ದಸರೆ ಉದ್ಘಾಟಿಸಿದ್ದು ಸರಿಯಾಗಿಯೇ ಇದೆ” ಮತ್ತೊಮ್ಮೆ ಸಮರ್ಥಿಸಿಕೊಂಡರು. ಬಾನು ಅವರ ಕತೆಗಳ ಅನುವಾದಕಿ ದೀಪಾ ಭಾಸ್ತಿಯವರನ್ನೂ ಉಲ್ಲೇಖಿಸಿದರು.

    ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಕುರಿತು ಬಿಜೆಪಿ ಹಾಗೂ ಹಿಂದುತ್ವದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಸಮಯದಲ್ಲಿ ‘ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂಬ ಹೇಳಿಕೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬೆಟ್ಟಕ್ಕೆ ಹೆಚ್ಚುವರಿ ಭದ್ರತೆ ಒದಗಿಸಿದೆ. ಕ್ಷಿಪ್ರ ಕಾರ್ಯಾಚರಣಾ ಪಡೆಯನ್ನೂ ನಿಯೋಜಿಸಲಾಗಿದೆ.

  • ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಸುಲೈಮಾನ್ ಅಲ್-ಉಬೈದ್ – ಪ್ಯಾಲೆಸ್ಟೀನಿಯನ್ ಪೀಲೆ ಎಂಬ ಪ್ರಸಿದ್ಧಿ ಪಡೆದ ಹೆಮ್ಮೆಯ ಆಟಗಾರ. ಗಾಝಾ ಸಮುದ್ರ ಕಿನಾರೆಯ ಮರಳಿನ ಮೇಲೆ ಚೆಂಡನ್ನು ಒದೆಯಲು ಪ್ರಾರಂಭಿಸಿ, ನಂತರ ಬೀಚ್ ಸರ್ವೀಸಸ್ ಕ್ಲಬ್‌ನಲ್ಲಿ ಗಾಝಾ ಸ್ಪೋರ್ಟ್ಸ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು. ರಾಷ್ಟಿçÃಯ ತಂಡಕ್ಕಾಗಿ ನೂರಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಸುಲೈಮಾನ್, 2010ರ ಪಶ್ಚಿಮ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಯೆಮೆನ್ ವಿರುದ್ಧದ ತನ್ನ ಕತ್ತರಿ ಕಿಕ್ ಗೋಲಿನೊಂದಿಗೆ ಮತ್ತೆ ಸೆಲೆಬ್ರಿಟಿಯಾದರು. ಅವರು ಸ್ಥಳೀಯ ಮಕ್ಕಳಿಗೆ ತರಬೇತುದಾರರಾಗಿದ್ದಾರಲ್ಲದೆ 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಹೊತ್ತಿದ್ದರು.

    ಇಷ್ಟೆಲ್ಲಾ ಇದ್ದು ಕೊನೆಗೆ ಏನಾಯಿತು? ಅವರು ಹುಟ್ಟಿದ ಸ್ಥಳ ಗಾಝಾ ಆಗಿಹೋಯಿತು. ಕಲೆ/ಕ್ರೀಡೆಗಳ ಮೇಲಿನ ಪ್ರೀತಿಯು ಮಾನವೀಯತೆ ಹೊಂದಿರುವವರಿಗೆ ಮಾತ್ರ ಇರುವ ಗುಣಗಳಾಗಿವೆ. ಹಸಿವಿನ ಬೆಂಕಿಯ ವಿರುದ್ಧ ಹೋರಾಡುತ್ತಿರುವ ಗಾಝಾದ ಮಕ್ಕಳನ್ನು ಜನಾಂಗೀಯ ಬಾಣಲೆಯಲ್ಲಿ ಉರಿಯುವ ಪೈಶಾಚಿಕ ವೀರರಿಗೆ ಫುಟ್‌ಬಾಲ್ ಆದರೇನು? ಅದರ ಆಟಗಾರ ಆದರೇನು ಮುಗ್ಧ ಮಕ್ಕಳಾದರೇನು ಎಲ್ಲವೂ ಒಂದೇ, ಸುಲೈಮಾನ್ ಅಲ್-ಉಬೈದ್ ಅವರ ದೃಷ್ಟಿಯಲ್ಲಿ ಕೇವಲ ಮರಣ ಕೂಪಕ್ಕೆ ಒದೆಯಲ್ಪಡಬೇಕಾದ ಓರ್ವ ಗಾಝಾದ ವ್ಯಕ್ತಿ ಮಾತ್ರ. ಇತ್ತೀಚೆಗೆ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸಿದ ಶೆಲ್ ದಾಳಿಯಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ವಿಶ್ವವಿಖ್ಯಾತ ಆಟಗಾರ ಕೊಲ್ಲಲ್ಪಟ್ಟರು. ಫೆಲಸ್ತೀನ್‌ನಲ್ಲಿ ಕೊಲ್ಲಲ್ಪಟ್ಟ 61400 ಮನುಷ್ಯರ ಪೈಕಿ ಒಂದು ಅಂಕೆ ಆದರು.

    ಫೆಲೆಸ್ತೀನ್‌ನಲ್ಲಿ ಹುತಾತ್ಮರಾದ ಸಾವಿರಾರು ಫೆಲೆಸ್ತೀನಿಯನ್ನರಂತೆ, ಸುಲೇಮಾನ್ ಸುಂದರ ಜೀವನದ ಕನಸು ಕಂಡಿದ್ದರು. ಫುಟ್‌ಬಾಲ್ ಅವರ ಸರ್ವಸ್ವವಾಗಿತ್ತು. ಗಾಝಾ ಯುದ್ಧಭೂಮಿಯಲ್ಲಿ ಇಸ್ರೇಲಿ ಬೆಂಕಿಯ ಮಳೆ ಸುರಿಯುತ್ತಿದ್ದಾಗ ಫುಟ್‌ಬಾಲ್ ಆಡುತ್ತಿದ್ದ ಸುಲೇಮಾನ್‌ಗೆ, ಅವನ ಹೆಂಡತಿ ದುವಾ ಮತ್ತು ಐದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಜವಾಬ್ದಾರಿ ಇತ್ತು ಐವತ್ತು ವರ್ಷದವರೆಗೆ ಫುಟ್‌ಬಾಲ್ ಆಡುವುದು, ತನ್ನ ಮಕ್ಕಳನ್ನು ರಾಷ್ಟ್ರ ಹೆಮ್ಮೆಪಡುವಂತಹ ವ್ಯಕ್ತಿತ್ವಗಳಾಗಿ ಬೆಳೆಸುವುದು – ಇವು ನಲವತ್ತೊಂದು ವರ್ಷದ ಸುಲೇಮಾನ್ ಕನಸಾಗಿತ್ತು. ಕಲಾವಿದರು, ಕ್ರೀಡಾಪಟುಗಳು, ವಿವಿಧ ತಜ್ಞರು ಮತ್ತು ಮಾಧ್ಯಮ ಕಾರ್ಯಕರ್ತರು ಸೇರಿದಂತೆ ಫೆಲೆಸ್ತೀನಿಯನ್ನರು ಸಾವು ಬರುವವರೆಗೂ ಇಂತಹ ಸುಂದರ ಕನಸಿನೊಂದಿಗೆ ಬದುಕುತ್ತಿರುತ್ತಾರೆ.

    ಕುಟುಂಬದ ಹಸಿವು ತಣಿಸಲು ಸುಲೇಮಾನ್ ನಿರಾಶ್ರಿತರ ಶಿಬಿರದ ಬಳಿಯ ಆಹಾರ ವಿತರಣಾ ಕೇಂದ್ರದಲ್ಲಿ ಸರದಿಯಲ್ಲಿ ಕಾಯುತ್ತಿದ್ದರು. ಆಹಾರಕ್ಕಾಗಿ ಸರದಿ ಸಾಲಿನಲ್ಲಿ ನಿಂತವರ ಮೇಲೆ ಪ್ರಪಂಚದ ಮೌನ ಬೆಂಬಲದೊಂದಿಗೆ ಜಿಯೋನಿಸ್ಟ್ ಸೈನ್ಯವು ಕ್ಷಿಪಣಿಗಳ ಮಳೆ ಸುರಿಸಿದಾಗ ಕೊಲ್ಲಲ್ಪಟ್ಟ 1,500 ಜನರಲ್ಲಿ ಸುಲೇಮಾನ್ ಅಲ್-ಒಬೈದ್ ಒಬ್ಬರು. ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (UEFA) ಕಾಟಾಚಾರಕ್ಕೆ ಎರಡು ಗೆರೆಯ ಸಂತಾಪ ಸೂಚಿಸಿತು. “ಫೆಲಸ್ತೀನ್ ಪೀಲೆ ಸುಲೇಮಾನ್ ಅಲ್-ಒಬೈದ್‌ಗೆ ಭಾವಪೂರ್ಣ ವಿದಾಯ ಅವರು ಕತ್ತಲೆಯ ಕಾಲದಲ್ಲೂ ಅಸಂಖ್ಯಾತ ಮಕ್ಕಳಿಗೆ ಭರವಸೆಯ ಕಿರಣ ಮೂಡಿಸಿದ ಪ್ರತಿಭಾವಂತ” ಎಂದು UEFAಯ Xನಲ್ಲಿ ಬರೆಯಿತು. ಈ ಸಂದೇಶವು ಸುಲೇಮಾನ್, ಗಾಝಾವನ್ನು ಪ್ರೀತಿಸುವ ಮತ್ತು ಮಾನವೀಯತೆಯನ್ನು ಪ್ರೀತಿಸುವವರಿಗೆ ಅರಗಿಸಿಕೊಳ್ಳಲಾಗಲಿಲ್ಲ.

    ಸುಲೇಮಾನ್ ನಿವೃತ್ತರಾದದ್ದಲ್ಲ, ಅವರು ವೃದ್ಧಾಪ್ಯದಿಂದ ಸಾಯಲಿಲ್ಲ, ಅವರು ಮೈದಾನದಲ್ಲಿ ಆಘಾತದಿಂದ ಸತ್ತದ್ದಲ್ಲ. ಅವರನ್ನು ಇಸ್ರೇಲ್ ಎಂಬ ಕ್ರೂರ ಸೈನ್ಯವು ಕೊಂದು ಹಾಕಿದ್ದು ಎಂಬುದು ಹಾಡು ಹಗಲಿನಂತೆ ಸ್ಪಷ್ಟವಾಗಿದ್ದರೂ ಕೊಂದ ಹಂತಕರ ಹೆಸರನ್ನು ಉಲ್ಲೇಖಿಸಲು ಹಿಂಜರಿಕೆ ಏಕೆ ಎಂಬುದೇ ಎಲ್ಲರ ಪ್ರತಿಕ್ರಿಯೆಯಾಗಿತ್ತು. ಫೆಲೆಸ್ತೀನ್‌ನ ಎಲ್ಲಾ ಕಹಿ ಮತ್ತು ನೋವನ್ನು ತನ್ನ ಎದೆಗೆ ಹಾಕಿಕೊಂಡಿರುವ ಲಿವರ್‌ಪೂಲ್‌ನ ಈಜಿಪ್ಟ್ ತಾರೆ ಮೊಹಮ್ಮದ್ ಸಲಾಹ್, UEFA ಅಥವಾ ಅವರಂತೆಯೇ ನಿದ್ರಿಸುತ್ತಿರುವ ಇಡೀ ಜಗತ್ತನ್ನು ಕೇಳುತ್ತಿದ್ದಾರೆ, “ಅವರು ಎಲ್ಲಿ, ಹೇಗೆ ಮತ್ತು ಏಕೆ ಸತ್ತರು ಎಂದು ನೀವು ನಮಗೆ ಹೇಳಬಲ್ಲಿರಾ?” ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದ ಸಂದೇಶವಾಗಿತ್ತದು, ಇಸ್ರೇಲಿಗೆ ಮಾಮೂಲಿಯಾಗಿದ್ದ ಒಂದು ಹತ್ಯೆಯನ್ನು ಜಗತ್ತನ್ನು ನಡುಗಿಸುವ ಪ್ರಶ್ನೆಯನ್ನಾಗಿ ಪರಿವರ್ತಿಸಲು ಇದಕ್ಕೆ ಸಾಧ್ಯವಾಯಿತು.

    ಜಿಯೋನಿಸ್ಟ್ ಭಯೋತ್ಪಾದನೆಯ ವಿರುದ್ಧ ಮೊದಲ ದಿನದಿಂದಲೂ ಸಲಾಹ್ ಫೆಲಸ್ತೀನಿಯನ್ನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

    ಮುಗ್ಧ ಜೀವಗಳು ಸೇರಿದಂತೆ 62,000ಕ್ಕೂ ಹೆಚ್ಚು ಮಾನವ ಜೀವಗಳ ಸಾಮೂಹಿಕ ಹತ್ಯೆಯ ಹೊರತಾಗಿಯೂ ರಕ್ತಪಿಪಾಸು ಆಗಿಯೇ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವ ಇಸ್ರೇಲ್ ಅನ್ನು ತಹಬಂದಿಗೆ ತರಲು ಜಗತ್ತಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅವರ ಪ್ರಶ್ನೆ.

    ಅತ್ಯಂತ ಸಣ್ಣ ಪ್ರದೇಶದಲ್ಲಿ. ಯುದ್ಧ ಭೀತಿಯ ನಡುವೆ, ನಿರಂತರ ದಿಗ್ಬಂಧನದ ನಡುವೆಯೂ ಅದನ್ನು ಲೆಕ್ಕಿಸದೆ ತಾವು ಇಷ್ಟಪಟ್ಟ ರಂಗಗಳಲ್ಲಿ ಗಾಝಾದ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅತ್ಯುತ್ತಮ ವೈದ್ಯಕೀಯ ತಜ್ಞರು, ಪ್ರಸಿದ್ಧ ಶಿಕ್ಷಣ ತಜ್ಞರು, ಅಂತರಾಷ್ಟಿçÃಯವಾಗಿ ಗುರುತಿಸಲ್ಪಟ್ಟ ಕಲಾವಿದರು ಮತ್ತು ಪತ್ರಕರ್ತರು ಮರಣ ಭೀತಿಯ ನಡುವೆಯು ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ಗೆ ತಮ್ಮನ್ನು ಅರ್ಪಿಸಿಕೊಂಡ ಯುವಕರು… ಹೀಗೆ ಗಾಝಾದ ಜನತೆಯು ವಿಶ್ವದ ಅಸಾಧಾರಣ ಹಾಗೂ ಅದ್ಭುತವಾದ ಮಾನವ ಸಂಪನ್ಮೂಲವಾಗಿದೆ.

    ಇಸ್ರೇಲ್, ಕ್ಷಿಪಣಿಗಳು ಮತ್ತು ಹಸಿವಿನಿಂದ ಅವರನ್ನು ನಾಶಪಡಿಸುತ್ತಿದೆ ಅವರು ಇಲ್ಲಿಯವರೆಗೆ ಗಾಝಾದಲ್ಲಿ 103 ಮಕ್ಕಳು ಸೇರಿದಂತೆ 421 ಫುಟ್ಬಾಲ್ ಆಟಗಾರರನ್ನು ಕೊಂದಿದ್ದಾರೆ. ದೊಡ್ಡ ಕ್ರೀಡಾಂಗಣಗಳು ಮತ್ತು ಸಣ್ಣವುಗಳು ಸೇರಿದಂತೆ 268 ಕ್ರೀಡಾಂಗಣಗಳನ್ನು ಕೆಡವಿದ್ದಾರೆ. ಝಿಯೋನಿಸ್ಟ್ ನರಮೇಧವು ಗಾಝಾದಲ್ಲಿ ಹತ್ತಾರು ಸಾವಿರ ಮುಗ್ಧ ಜನರನ್ನು ಕೊಲ್ಲುತ್ತಿದೆ. ಹಸಿವು ಹಾಗೂ ಬಾಂಬುಗಳ ಭೀತಿಯ ನಡುವೆ ಅವರು ನಿರ್ಮಿಸಿರುವ ಮಹಾನ್ ಮಾನವ ನಾಗರಿಕತೆಯನ್ನು ಸಹ ನಾಶಪಡಿಸುತ್ತಿದೆ. ಮೊಹಮ್ಮದ್ ಸಲಾಹ್ ಅವರು ಎತ್ತಿರುವ ಪ್ರಶ್ನೆಯು ಒಂದು ಸಣ್ಣ ಬೆರಳನ್ನು ಎತ್ತಲೂ ಕೂಡ ಸಾಧ್ಯವಾಗದೇ ಲೋಕದಲ್ಲಿ ಮೆರೆದಾಡುತ್ತಿರುವ ಅಧಿಕಾರ ಶಾಹಿ ಜಗತ್ತಿನ ಮುಂದೆ, ಅದರ ಕಪಟತೆಯ ವಿರುದ್ಧ ಬೀಸಿದ ಚಾಟಿಯೇಟು ಆಗಿದೆ.
    ಮುರ್ಶಿದ್ ಅಲಿ