Category: ಸಾಧನೆ

  • ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ

    ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ

    ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡು ಕಾರ್ಯಾಚರಿಸುತ್ತಿರುವ ಕರಾವಳಿ ಲೇಖಕಿ -ವಾಚಕಿಯರ ಸಂಘದ ಮುರ್ತುಜಾ ಬೇಗಂ, ಸುಖಲಾಕ್ಷಿ ಸುವರ್ಣ ಹಾಗೂ ಕ್ಯಾಥರಿನ್ ರಾಡ್ರಿಗಸ್ ರಿಗೆ 2025-26ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

    ಡಾ। ಸುನೀತಾ ಶೆಟ್ಟಿ ಮುಂಬಯಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು ಮತ್ತು ಕನ್ನಡ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್ ರಾಡ್ರಿಗಸ್ ಆಯ್ಕೆಯಾಗಿದ್ದಾರೆ.

    ಕರಾವಳಿಯ ಮೊದಲ ತಲೆಮಾರಿನ ಲೇಖಕಿ ಚಂದ್ರಭಾಗಿ ರೈ ಅವರ ಹೆಸರಿನ ದತ್ತಿನಿಧಿ ಪುಸ್ತಕ ಬಹುಮಾನಕ್ಕೆ ಬಾಗಲಕೋಟೆಯ ಮುರ್ತುಜಾ ಬೇಗಂ ಅವರ ‘ಹಣತೆ ಹಚ್ಚಿ ಬಿಡಿ ಹೆಜ್ಜೆ ಹೆಜ್ಜೆಗೂ’ ಕೃತಿ ಬಹುಮಾನ ಪಡೆದಿದೆ. ಡಾ| ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿಗೆ ಲೇಖಕಿ, ಸಂಘಟಕಿ ಸುಖಲಾಕ್ಷಿ ವೈ. ಸುವರ್ಣ ಅವರ ‘ಮುಂಬಯಿ ಮತ್ತು ಮಹಿಳೆ’ ಸಂಶೋಧನಾತ್ಮಕ ಕೃತಿ ಆಯ್ಕೆಯಾಗಿದೆ.

    ಫೆ. 7ರಂದು ಅಪಾರಹ್ನ 2.30ಕ್ಕೆ ಉರ್ವಸ್ಟೋರ್‌ನಲ್ಲಿರುವ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ನಡೆಯುವ ಸಮಾರಂಭದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಡಾ| ಎ. ಸುಬ್ಬಣ್ಣ ರೈ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

  • ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…

    ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…

    ಹೊಳೆಯುವ ಚರ್ಮಕ್ಕೆ ದುಬಾರಿ ಕ್ರೀಮ್‌ಗಳು ಅಗತ್ಯವಿಲ್ಲ. ಸೆಲೆಬ್ರಿಟಿ ಪೌಷ್ಟಿಕತಜ್ಞೆ ರಹಸ್ಯವನ್ನು ಬಹಿರಂಗಪಡಿಸುತ್ತಾರೆ.

    ರುಜುತಾ ದಿವೇಕರ್ ನಾಲ್ಕು ಸರಳ ಚರ್ಮದ ಆರೈಕೆ ದಿನಚರಿಗಳನ್ನು ಹಂಚಿಕೊಂಡಿದ್ದಾರೆ. ಇಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಮದ ಆರೈಕೆ ವೀಡಿಯೊಗಳು ಹೆಚ್ಚು ವೀಕ್ಷಿಸಲ್ಪಡುವ ವೀಡಿಯೊಗಳಾಗಿವೆ. ನೀವು Instagram ಅನ್ನು ತೆರೆದರೆ, ಬೆಳಿಗ್ಗೆ ಮತ್ತು ರಾತ್ರಿ ಹಚ್ಚಬೇಕಾದ ಕ್ರೀಮ್‌ಗಳು, ಅವುಗಳ ಬಳಕೆಯ ಕ್ರಮ ಮತ್ತು ಪ್ರತಿಯೊಂದು ಚರ್ಮದ ಪ್ರಕಾರಕ್ಕೆ ಸೂಕ್ತವಾದ ಚರ್ಮದ ಆರೈಕೆ ಉತ್ಪನ್ನಗಳ ವಿವರಗಳನ್ನು ಒಳಗೊಂಡಿರುವ ಅನೇಕ ವೀಡಿಯೊಗಳನ್ನು ನೀವು ನೋಡುತ್ತೀರಿ. ಆದರೆ ಇವುಗಳ ಬೆಲೆ ನಿಜಕ್ಕೂ ಆಘಾತಕಾರಿಯಾಗಿದೆ. ಬಹಳ ಕಡಿಮೆ ಪ್ರಮಾಣದ ಉತ್ಪನ್ನಗಳಿಗೆ ಸಾವಿರಾರು ವೆಚ್ಚವಾಗಬಹುದು.ಆದರೆ ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಹೇಳುವಂತೆ ಹೊಳೆಯುವ ಚರ್ಮಕ್ಕೆ ದುಬಾರಿ ಉತ್ಪನ್ನಗಳು ಅಗತ್ಯವಿಲ್ಲ.

    ಬಾಲಿವುಡ್ ತಾರೆಯರೊಂದಿಗೆ ಕೆಲಸ ಮಾಡಿರುವ ರುಜುತಾ, ಹೊಳೆಯುವ ಚರ್ಮವನ್ನು ಪಡೆಯಲು ದುಬಾರಿ ಕ್ರೀಮ್‌ಗಳು ಅಥವಾ ಸೀರಮ್‌ಗಳು ಅಗತ್ಯವಿಲ್ಲ ಎಂದು ಹೇಳುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ರುಜುತಾ ನೀವು ಮನೆಯಲ್ಲಿಯೇ ಮಾಡಬಹುದಾದ ನಾಲ್ಕು ಸರಳ ಚರ್ಮದ ಆರೈಕೆ ದಿನಚರಿಗಳನ್ನು ಹಂಚಿಕೊಂಡಿದ್ದಾರೆ.

    ಸಾಕಷ್ಟು ನೀರು ಕುಡಿಯಿರಿ

    ಮೊದಲ ಹೆಜ್ಜೆ ನಿಮ್ಮ ದೇಹವನ್ನು ಹೈಡ್ರೀಕರಿಸುವುದು. ಇದನ್ನು ಮಾಡಲು, ಸಾಕಷ್ಟು ನೀರು ಕುಡಿಯಿರಿ. ನೀವು ಬಾಯಾರಿದಾಗ ಮಾತ್ರ ನೀರು ಕುಡಿಯಬೇಕು ಎಂದು ಭಾವಿಸಬೇಡಿ. ಯಾವಾಗಲೂ ನೀರಿನ ಬಾಟಲಿಯನ್ನು ಕಣ್ಣ ಮುಂದೆ ಇಟ್ಟುಕೊಳ್ಳಿ. ಅದನ್ನು ಹೊರಗೆ ತೆಗೆದುಕೊಂಡು ಸಾಂದರ್ಭಿಕವಾಗಿ ಕುಡಿಯಿರಿ.

    ಬೇಗನೆ ಮಲಗಿ

    ಹೊಳೆಯುವ ಚರ್ಮಕ್ಕೆ ವಿಶ್ರಾಂತಿ ಅತ್ಯಗತ್ಯ. ಚರ್ಮದ ಆರೈಕೆಯಲ್ಲಿ ದುಬಾರಿ ಸೀರಮ್‌ಗಳು ಮತ್ತು ಕ್ರೀಮ್‌ಗಳಿಗಿಂತ ಬೇಗ ಮಲಗುವುದು ಹೆಚ್ಚು ಮುಖ್ಯ. ದೇಹದ ಜೀವಕೋಶಗಳ ಆರೋಗ್ಯಕ್ಕೆ, ಕಾಲಜನ್ ಹೆಚ್ಚಿಸಲು ಮತ್ತು ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಕಣ್ಣುಗಳ ಕೆಳಗೆ ಊತವನ್ನು ಕಡಿಮೆ ಮಾಡಲು ನಿದ್ರೆ ಅತ್ಯಗತ್ಯ.

    ನಿಯಮಿತ ವ್ಯಾಯಾಮ

    ನಿಮ್ಮ ಚರ್ಮವನ್ನು ಹೊಳೆಯುವಂತೆ ಮತ್ತು ಆರೋಗ್ಯವಾಗಿಡಲು ಉತ್ತಮ ಮಾರ್ಗವೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುವುದು. ನಿಯಮಿತ ವ್ಯಾಯಾಮವು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಜಲಸಂಚಯನವನ್ನು ಸುಧಾರಿಸುತ್ತದೆ. ವ್ಯಾಯಾಮವನ್ನು ನಿಮ್ಮ ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಳ್ಳಿ. ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಿ.

    ಚರ್ಮದ ಆರೈಕೆ ವೀಡಿಯೊಗಳನ್ನು ನೋಡುವುದನ್ನು ನಿಲ್ಲಿಸಿ

    ಕೊನೆಯ ಹಂತವೆಂದರೆ ಚರ್ಮದ ಆರೈಕೆ ಮಾಡುವುದನ್ನು ತೋರಿಸುವ ವೀಡಿಯೊಗಳನ್ನು ನೋಡುವುದನ್ನು ನಿಲ್ಲಿಸುವುದು. ಅನೇಕ ವೀಡಿಯೊಗಳು ನಿಮ್ಮನ್ನು ದಾರಿ ತಪ್ಪಿಸಬಹುದು.

    ಅತಿಯಾಗಿ ಜಾಹೀರಾತು ಮಾಡಲಾದ ಉತ್ಪನ್ನಗಳಿಗೆ ಬಲಿಯಾಗಬೇಡಿ. ಅಗತ್ಯವಿದ್ದರೆ ಚರ್ಮರೋಗ ವೈದ್ಯರ ಸಹಾಯವನ್ನು ಪಡೆಯಿರಿ. ಚರ್ಮದ ಆರೈಕೆಯ ದಿನಚರಿಯ ಬಗ್ಗೆ ಹೇಳುವ ಯಾವುದೇ ವೀಡಿಯೊಗಳನ್ನು ತಾನು ನೋಡುವುದಿಲ್ಲ ಎಂದು ರುಜುತಾ ಹೇಳುತ್ತಾರೆ. ನೀವು ವಯಸ್ಸಾದಂತೆ ನಿಮ್ಮ ಚರ್ಮವೂ ಬದಲಾಗುತ್ತದೆ. ಆದರೆ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವುದು ಎಲ್ಲರೂ ಮಾಡಬೇಕಾದ ಕೆಲಸ. ಇದು ದುಬಾರಿ ಕ್ರೀಮ್‌ಗಳನ್ನು ಹಚ್ಚುವುದು ಅಥವಾ ಚರ್ಮದ ಆರೈಕೆಗಾಗಿ ಹಣ ಖರ್ಚು ಮಾಡುವ ಮೂಲಕ ಅಲ್ಲ, ನಿಮ್ಮ ನೋಟ ಮತ್ತು ಸೌಂದರ್ಯವನ್ನು ರೂಪಿಸುವುದು ನಿಮ್ಮ ಜೀವನಶೈಲಿಯ ಆಯ್ಕೆಗಳು.

  • ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಮಹಿಳೆಯರೇ ನಡೆಸುತ್ತಿರುವ ರಾಜ್ಯದ ಏಕೈಕ ಮಹಿಳಾ ಮಾಸಿಕ ಅನುಪಮ ಮಾಸಿಕಕ್ಕೆ 25 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ 25 ವರ್ಷಗಳ ಯಶಸ್ಸಿನ ಹಿನ್ನೋಟವಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಗುರುವಾರ ಬಿಡುಗಡೆ ಮಾಡಿದರು.

    ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಪತ್ರಿಕೋದ್ಯಮದಲ್ಲಿ ಮುಸ್ಲಿಂ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಈ ನಡುವೆ ಕೂಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ ಸಮುದಾಯದ ಮಹಿಳೆಯರೇ ನಡೆಸುತ್ತಿರುವ ಅನುಪಮ ಮಹಿಳಾ ಮಾಸಿಕವು 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ”ಎಂದು ಅಭಿನಂದನೆ ಸಲ್ಲಿಸಿದರು.

    ಬಳಿಕ ಮಾತನಾಡಿದ ಅನುಪಮ ಸಂಪಾದಕಿ ಶಹನಾಝ್ ಎಂ, “ರಾಜ್ಯದಲ್ಲಿ ಮಹಿಳೆಯರಿಗೆ ಗ್ಯಾರಂಟಿಗಳನ್ನು ಘೋಷಿಸಿ, ಅದನ್ನು ಅನುಷ್ಠಾನಕ್ಕೆ ತಂದ ನಂತರ ಮಹಿಳೆಯರ ಬದುಕಿನಲ್ಲಿ ಹಲವಾರು ಬದಲಾವಣೆ ಆಗಲು ನೆರವಾಗಿದೆ. ಮಹಿಳೆಯರ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನುಪಮ ಬಳಗ ಹಾಗೂ ಎಲ್ಲ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಎಂಟಿಸಿ ನಿಗಮದ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿಯರಾದ ಸಮೀನಾ ಉಪ್ಪಿನಂಗಡಿ, ಸಾಜಿದಾ ಮೂಮಿನ್, ಕುಲ್ಸುಮ್ ಅಬೂಬಕ್ಕರ್, ಎಸ್.ಎಂ. ಮುತ್ತಲಿಬ್, ಫೈಝಲ್ ಇಸ್ಮಾಯೀಲ್, ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.

    ಬಳಿಕ ಅನುಪಮ ಬಳಗವು ಈ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರಕಾರದಲ್ಲಿ ವಿವಿಧ ಸ್ಥಾನಗಳನ್ನುಅಲಂಕರಿಸಿರುವ ಹಾಗೂ ಸರಕಾರದ ಅಧಿಕಾರಿಗಳಾಗಿರುವ ಹೊಣೆಗಾರರನ್ನು ಭೇಟಿ ಮಾಡಿ ನೀಡಿತು.

    ಸನ್ಮಾನ್ಯ ನಿಕೇತ್ ರಾಜ್ ಮೌರ್ಯ [ಉಪಾಧ್ಯಕ್ಷರು, (BMTC) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ (KPYCC) ರಾಜ್ಯ ಪ್ರಧಾನ ಕಾರ್ಯದರ್ಶಿ]

    ಸನ್ಮಾನ್ಯ ರಿಜ್ವಾನ್ ಅರ್ಷದ್ [ಸದಸ್ಯರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಾಗೂ MLA ಶಿವಾಜಿ ನಗರ, ಬೆಂಗಳೂರು]

    ಸನ್ಮಾನ್ಯ ನಸೀರ್ ಅಹ್ಮದ್ [ವಿಧಾನ ಪರಿಷತ್ ಸದಸ್ಯ (MLC) ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ]

    ಸನ್ಮಾನ್ಯ ಅಬ್ದುಲ್ ಅಹದ್ [DIG, ಪೊಲೀಸ್ ಉಪ ಮಹಾನಿರೀಕ್ಷಕರು, ಕರ್ನಾಟಕ ಸರಕಾರ]

  • ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಮುಹಮ್ಮದರು(ಸ) ಪ್ರವಾದಿಯಾಗಿದ್ದರು. ದೇವನು ಇವರನ್ನು ಜನರಿಗೆ ದೇವನ ಆದೇಶ ಮತ್ತು ಸದ್ವಿವೇಕವನ್ನು ಕಲಿಸಿ ಕೊಡಲಿಕ್ಕಾಗಿ ಕಳುಹಿಸಿಕೊಟ್ಟರು. ಇವರು ಜಗತ್ತು ಕಂಡ ಅದ್ವಿತೀಯ ಶಿಕ್ಷಕರಾಗಿದ್ದರು. ಮುಹಮ್ಮದರು ಮೊತ್ತ ಮೊದಲು ಮದೀನಾದ ಮಸೀದಿಯ ಒಂದು ಭಾಗದಲ್ಲಿ ಶಿಕ್ಷಣ ಕೇಂದ್ರವನ್ನು ಆರಂಭಿಸಿದರು. ಅಲ್ಲಿ ಸರಿ ಸುಮಾರು 70ರಿಂದ 80 ವಿದ್ಯಾರ್ಥಿಗಳಿದ್ದರು. ಪ್ರವಾದಿಯವರಿಂದ ನೇರವಾಗಿ ಶಿಕ್ಷಣ ಮತ್ತು ತರಬೇತಿಯನ್ನು ಗಳಿಸಿದವರಿಗೆ ಅವರ ಪ್ರತಿಭೆ ಸಾಮರ್ಥ್ಯಗಳ ಆಧಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಅವರ ಪೈಕಿ ಕೆಲವರು ಶಿಕ್ಷಕರಾಗಿಯೇ ಮುಂದುವರಿದರು. ಕೇವಲ ಮದೀನಾದಲ್ಲಿ ಮಾತ್ರವಲ್ಲ ಜಗತ್ತಿನ ವಿವಿಧೆಡೆಗಳಲ್ಲಿ ಹೆಚ್ಚಾಗಿ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಮತ್ತು ದೊಡ್ಡ ಸಂಖ್ಯೆಯ ಶಿಕ್ಷಕ ವೃಂದವನ್ನು ಹೊಂದಿದ್ದರು.

    ಶಿಕ್ಷಕ ಎಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದರ(ಸ) ಜೀವನದಿಂದ ನಾವು ಗಳಿಸಬೇಕಾದ ಪಾಠಗಳು ಸಾಕಷ್ಟಿವೆ. ಇವುಗಳ ಪೈಕಿ ಮೊದಲನೆಯದು ಅವರ ಮಾದರಿ ಜೀವನ. ಪ್ರವಾದಿ ಮುಹಮ್ಮದರು(ಸ) ಸದಾ ಹೇಳುತ್ತಿದ್ದುದನ್ನು ಜೀವನದಲ್ಲಿಯೂ ಪಾಲಿಸಿ ತೋರಿಸುತ್ತಿದ್ದರು. ಇದರಿಂದಾಗಿ ಜನರಿಗೆ ಅವರನ್ನು ಅನುಸರಿಸಲು ಸುಲಭವಾಯಿತು. ಇತರರಿಗೆ ಬೋಧಿಸುತ್ತಾ ಎಲ್ಲ ವಿಷಯಗಳನ್ನು ಚಾಚು ತಪ್ಪದೆ ಸ್ವಂತ ಪಾಲಿಸಿದಾಗ ಜನರಿಗೆ ಅವರ ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಸುಲಭವಾಗುತ್ತದೆ. ಇದರ ಕಾರಣದಿಂದಾಗಿ ಅವರಿಂದ ಶಿಕ್ಷಣವನ್ನು ಗಳಿಸಿದವರ ಜೀವನದಲ್ಲಿಯೂ ಅವರ ಶಿಕ್ಷಣ ತರಬೇತಿಯ ಪ್ರತಿಫಲನವು ಕಂಡುಬರುತ್ತಿತ್ತು. ನಮ್ಮ ಶಿಕ್ಷಕ ವೃಂದವು ಈ ಆದರ್ಶವನ್ನು ಅಳವಡಿಸಿಕೊಂಡರೆ ಮಾದರಿ ಸಮಾಜವನ್ನು ಕಟ್ಟಿ ಬೆಳೆಸಲು ಖಂಡಿತ ಸಹಾಯಕವಾಗಬಹುದು.

    ಯಾರನ್ನು ಸುಶಿಕ್ಷಿತರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದರೋ ಅವರೊಂದಿಗೆ ಪ್ರವಾದಿಯವರು(ಸ) ಆತ್ಮೀಯವಾಗಿ ಒಡನಾಟ ಇಟ್ಟುಕೊಂಡಿದ್ದರು. ಪ್ರವಾದಿಯವರ ಒಡನಾಟದಿಂದಾಗಿ ಅನೇಕ ಜನರು ಶೂನ್ಯದಿಂದ ಎತ್ತರಕ್ಕೆ ಬೆಳೆದರು. ಜೀತದಾಳು ಆಗಿದ್ದ ಬಿಲಾಲ್ ಆಪ್ತ ಸಂಗಾತಿಯಾಗಿ ಮಾರ್ಪಟ್ಟರು. ಜಗಳಗಂಟಿಯಾಗಿದ್ದ ಝುಬೇರ್ ಸೇನಾನಿಯಾಗಿ ಮಾರ್ಪಟ್ಟರು. ಮಿತಬಾಷಿಯಾಗಿದ್ದ ಮಿಸ್‌ಅಬ್ ಬಿನ್ ಉಮೈರ್ ಪ್ರವಚನಕಾರರಾದರು. ಬೇಟೆಗಾರರಾಗಿದ್ದ ಹಂಝ ಸೇನಾ ಪಡೆಯ ನಾಯಕರಾದರು. ಮುಂಗೋಪಿಯಾಗಿದ್ದ ಉಮರ್ ನಾಯಕರಾಗಿ ಮಾರ್ಪಟ್ಟರು. ಗೃಹಿಣಿ ಯಾಗಿದ್ದ ಆಯಿಷ ಉಪದೇಶಕಿ ,ವೈದ್ಯಕೀಯ ಮತ್ತು ಸಂಖ್ಯಾಶಾಸ್ತ್ರದ ತಜ್ಞೆಯಾಗಿ ಬೆಳೆದು ನಿಂತರು. ನಮ್ಮ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅವರ ಆಗುಹೋಗುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವರೊಂದಿಗೆ ಒಡನಾಡಿದ್ದೆ ಆದರೆ ಖಂಡಿತವಾಗಿಯೂ ಮಕ್ಕಳ ಪ್ರತಿಭೆಗಳನ್ನು ಸಕಾರಾತ್ಮಕಾಗಿ ಬೆಳೆಸಬಹುದಾಗಿದೆ.

    ಪ್ರವಾದಿಯವರು(ಸ) ಶಿಕ್ಷಣ ನೀಡುತ್ತಿದ್ದ ವಿಧಾನವೇ ಬಹಳ ಸುಂದರ .ವಿವಿಧ ರೀತಿಯ ಪರಿಕಲ್ಪನೆಗಳನ್ನು ವಿವರಿಸಲು ಹಲವಾರು ಉದಾಹರಣೆಗಳನ್ನು ಅವರು ಬಳಸುತ್ತಿದ್ದರು. ಸಾಮಾನ್ಯ ಮನುಷ್ಯನ ಮೆದುಳು ವಿಷಯವನ್ನು ಅರ್ಥಮಾಡಿಕೊಳ್ಳಲು ಹಲವಾರು ಮಿತಿಗಳನ್ನು ಹೊಂದಿರುತ್ತದೆ .ಆದುದರಿಂದ ಉದಾಹರಣೆಗಳ ಮೂಲಕ ವಿಷಯಗಳನ್ನು ತುಂಬಾ ಸರಳವಾಗಿ ಅರ್ಥ ಮಾಡಿಸಿಕೊಡಬಹುದಾಗಿದೆ.
    ಪ್ರವಾದಿ ಮುಹಮ್ಮದರು(ಸ) ಹೇಳಿದರು: “ಯಾರ ಕೈಯಲ್ಲಿ ನನ್ನ ಆತ್ಮ ಇದೆಯೋ ಅವನ ಆಣೆ .ಸತ್ಯ ವಿಶ್ವಾಸಿಯ ಉದಾಹರಣೆಯು ಜೇನುನೊಣದಂತಿದೆ. ಅದು ಶುದ್ಧ ಮತ್ತು ಆರೋಗ್ಯಕರವಾದದನ್ನು ಮಾತ್ರ ತಿನ್ನುತ್ತದೆ. ಶುದ್ಧವಾದದನ್ನು ಮತ್ತು ಉಪಯುಕ್ತವಾದದ್ದನ್ನೇ ನೀಡುತ್ತದೆ.”

    “ಮರುಭೂಮಿಯಲ್ಲಿ ತನ್ನ ಒಂಟೆಯನ್ನು ಕಳೆದುಕೊಂಡು ವ್ಯಥೆಪಡುವಂತಹ ವ್ಯಕ್ತಿಗೆ ಅನಿರೀಕ್ಷಿತವಾಗಿ ಆ ಒಂಟೆ ಮರಳಿ ಸಿಗುವಾಗ ಆಗುವ ಖುಷಿಗಿಂತಲೂ ತನ್ನ ಪಾಪಗಳಿಗೆ ಪ್ರಾಯಶ್ಚಿತಪಟ್ಟು ಮರಳುವ ದಾಸನ ಬಗ್ಗೆ ದೇವನು ಹೆಚ್ಚು ಸಂತೋಷಗೊಳ್ಳುತ್ತಾನೆ” ಈ ರೀತಿಯ ಮನಮುಟ್ಟುವ ಉದಾಹರಣೆಗಳನ್ನು ಯಾರು ಸುಲಭದಲ್ಲಿ ಮರೆತುಬಿಡುವುದಿಲ್ಲ .ನಮ್ಮ ಶಿಕ್ಷಕರು ಈ ಉದಾಹರಣೆಗಳ ಮೂಲಕ ಮಕ್ಕಳಿಗೆ ಪಾಠ ಮನದಟ್ಟು ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.

    ಕೆಲವರಿಗೆ ತಮ್ಮ ವಿದ್ವತ್ತನ್ನು ಅತಿಯಾಗಿ ಪ್ರದರ್ಶಿಸುವ ಅಭ್ಯಾಸವಿರುತ್ತದೆ. ಅಂತಹವರು ಕಠಿಣ ಪದಗಳನ್ನು ಬಳಸುವ ಮೂಲಕ ವಿಷಯಗಳನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇದು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ವ್ಯಕ್ತಿಗೆ ವಿಷಯ ಅರ್ಥವಾಗಬೇಕೆಂದರೆ ಅದು ಸರಳವಾಗಿರಬೇಕು. ಸಂಕ್ಷಿಪ್ತವಾಗಿರಬೇಕು ಮತ್ತು ನೇರವಾದ ನುಡಿಯಾಗಿರಬೇಕು. ಪ್ರವಾದಿ ಮುಹಮ್ಮದರ(ಸ) ಜೀವನದುದ್ದಕ್ಕೂ ಅವರು ಬಳಸಿದಂತಹ ಕೆಲವು ವಚನಗಳು ನಮ್ಮ ಗಮನವನ್ನು ಸೆಳೆಯುತ್ತದೆ. ಎಷ್ಟು ಸಣ್ಣ ಮತ್ತು ನೇರವಾದ ನುಡಿಗಳ ಮೂಲಕ ಒಂದು ದೊಡ್ಡ ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬ ಕಲೆಯನ್ನು ನಾವು ಪ್ರವಾದಿಯವರ ಶಿಕ್ಷಣ ರೀತಿಯಿಂದ ಅರ್ಥಮಾಡಿಕೊಳ್ಳಬಹುದು. ಸ್ವಚ್ಛತೆಯು ವಿಶ್ವಾಸದ ಅರ್ಧಾಂಶವಾಗಿದೆ. ಕುಡಿಯುವ ನೀರನ್ನು ಮೊದಲು ಗಮನಿಸಿ ನೋಡಿ. ವಿನಮ್ರತೆಯು ವಿಶ್ವಾಸದ ಒಂದು ಭಾಗವಾಗಿದೆ .ಸ್ವರ್ಗವು ತಾಯಿಯ ಪಾದದಡಿಯಲ್ಲಿದೆ. ನಿಮ್ಮ ನೆರೆಹೊರೆಯವರಿಗೂ ನಿಮ್ಮ ಮೇಲೆ ಹಕ್ಕಿದೆ. ಸಭ್ಯತೆ ವಿಶ್ವಾಸದ ಅರ್ಧಾಂಶವಾಗಿದೆ. ಅನುಚಿತ ವರ್ತನೆಯು ಅನ್ಯಾಯವಾಗಿದೆ. ಈ ರೀತಿಯ ಸುಲಭವಾದ ನೇರವಾದ ಸಂದೇಶಗಳು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆನಪಿಟ್ಟುಕೊಳ್ಳಲು ಮತ್ತು ಅನುಸರಿಸಲು ಸಾಧ್ಯವಾಗುತ್ತದೆ.

    ಕಲಿಕೆಯ ಮಧ್ಯೆ ವಿರಾಮ ನೀಡುವುದು ಬಹಳ ಮುಖ್ಯ. ಪ್ರವಾದಿಯವರು ಇದನ್ನು ಚೆನ್ನಾಗಿ ಬಳಸುತ್ತಿದ್ದರು. ಜನರಿಗೆ ಬೇಸರವಾಗದಂತೆ ಸೂಕ್ತ ಸಮಯವನ್ನು ಉಪದೇಶ ನೀಡಲು ಆರಿಸಿಕೊಳ್ಳುತ್ತಿದ್ದರು. ಧರ್ಮೋಪದೇಶ ಮತ್ತು ಜ್ಞಾನ ಸಂಪಾದನೆ ಸಹಚರರಿಗೆ ಬೇಸರ ಮತ್ತು ಹೊರೆಯಾಗದಂತೆ ನೋಡಿಕೊಂಡರು. ಕೆಲವೊಮ್ಮೆ ಅವರು ಸಹಚರರಿಗೆ ಹೊಸದಾಗಿ ಏನನ್ನು ಕಲಿಸುತ್ತಿರಲಿಲ್ಲ. ಅದಕ್ಕೆ ಅವರೊಡನೆ ಕಾರಣವನ್ನು ಕೇಳಿದಾಗ ಹೆಚ್ಚು ಹೊರೆ ಮಾಡಲು ಬಯಸುವುದಿಲ್ಲ ಎಂದು ಉತ್ತರಿಸಿದರು. ಪ್ರವಾದಿಯವರು ತರಬೇತಿಗಳ ನಡುವೆ ಮನಸ್ಸನ್ನು ಉಲ್ಲಾಸಗೊಳಿಸುವಂತೆ ವಿರಾಮ ನೀಡುವುದರಲ್ಲಿ ನಂಬಿಕೆಯನ್ನು ಹೊಂದಿದ್ದರು. ಆಧುನಿಕ ಶಿಕ್ಷಣ ವ್ಯವಸ್ಥೆಯು ಕೇವಲ ಅಂಕಿಗಳ ಸುತ್ತ ಗಿರಕಿ ಹೊಡೆಯುತ್ತಿರುವುದರಿಂದ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿನ ಶಾಲೆಗಳು ಮರೆತಿವೆ. ಪಠ್ಯೇತರ ಚಟುವಟಿಕೆಗಳಿಗಾಗಿ ಆ ತೋಟಗಳಿಗಾಗಿ ಮೀಸಲಾಗಿರುವ ತರಗತಿಗಳನ್ನು ಇತರ ವಿಷಯಗಳನ್ನು ಕಲಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಈ ಮೂಲಕ ಮಕ್ಕಳಿಗೆ ವಿರಾಮ ಮತ್ತು ಮನಸ್ಸಿಗೆ ಉಲ್ಲಾಸ ಸಿಗುವ ಅವಕಾಶದಿಂದಲೂ ವಂಚಿತಗೊಳಿಸಲಾಗುತ್ತಿದೆ. ಈ ಬಗ್ಗೆ ಶಿಕ್ಷಕರು ವಿಶೇಷ ಗಮನವನ್ನು ಹರಿಸಬೇಕು.

    ಪ್ರವಾದಿಯವರು(ಸ) ಎಂದೂ ಸುದೀರ್ಘವಾಗಿ ವಿಷಯ ಮಂಡನೆ ಮಾಡುತ್ತಿರಲಿಲ್ಲ. ಕೇಳುಗರು ಆಲಿಸಲು ಬಯಸಿದ್ದಾರೆ ಎಂಬAತಹ ಪರಿಸ್ಥಿತಿ ಇದ್ದ ಸ್ಥಳದಲ್ಲಿ ಮಾತ್ರ ಅವರು ಮಾತನಾಡುತ್ತಿದ್ದರು. ಕೇಳುಗರನ್ನು ದಣಿಯುವಂತೆ ಮಾಡುವುದು ಪ್ರವಾದಿಯವರಿಗೆ ಇಷ್ಟವಿರಲಿಲ್ಲ .ಆದುದರಿಂದ ಕಲಿಯುವ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಹಂತ ತಲುಪದ ಹಾಗೆ ಶಿಕ್ಷಕರು ನೋಡಿಕೊಳ್ಳಬೇಕು ಮತ್ತು ಕಲಿಕೆಯನ್ನು ಮಕ್ಕಳು ಆಸ್ವಾದಿಸಿ ಕಲಿಯುವಂತಹ ವಾತಾವರಣವನ್ನು ತರಗತಿಯಲ್ಲಿ ಉಂಟು ಮಾಡಬೇಕು.

    ಪ್ರವಾದಿಯವರು(ಸ) ಯಾವುದಾದರೂ ಪ್ರಮುಖ ವಿಷಯವನ್ನು ಪ್ರಸ್ತಾಪಿಸುವಾಗ ಅದನ್ನು ಮೂರು ಬಾರಿ ಪುನರಾವರ್ತಿಸುತ್ತಿದ್ದರು. ಇದರಿಂದ ವಿಷಯವು ಸರಿಯಾಗಿ ಅರ್ಥವಾಗುತ್ತಿತ್ತು. ವಿವರಣೆಗಾಗಿ ಚಿತ್ರಗಳನ್ನು ಬಳಸುವುದು ಪ್ರವಾದಿಯವರ ಶಿಕ್ಷಣದ ಒಂದು ಪ್ರಮುಖ ಮಾಧ್ಯಮವಾಗಿತ್ತು. ಚಿಕ್ಕ ಆಕೃತಿಯ ಮೂಲಕ ವಿಷಯಕ್ಕೆ ಯಾವ ರೀತಿಯಲ್ಲಿ ಅದನ್ನು ಜೋಡಿಸಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ರಸಪ್ರಶ್ನೆಗಳನ್ನು ಕೇಳುವುದು ಪ್ರವಾದಿಯವರಿಗೆ ಇಷ್ಟವಾದಂತಹ ಒಂದು ವಿಧಾನವಾಗಿತ್ತು. ಜನರಿಗೆ ಪ್ರಶ್ನೆಯನ್ನು ಕೇಳಿ, ಅವರು ಯೋಚಿಸುವಂತೆ ಮಾಡಿ ಜೀವನಕ್ಕೆ ಸಂಬAಧಿಸಿದ ವಿವಿಧ ಅಂಶಗಳನ್ನು ಅವರು ಅರಿತುಕೊಳ್ಳುವಂತೆ ಮಾಡುತ್ತಿದ್ದರು. ಇದೇ ವಿಧಾನವನ್ನು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬಹುದು.
    ಕಥೆಗಳಿಗೆ ಎಲ್ಲ ಕಾಲಗಳಲ್ಲೂ ತನ್ನದೇ ಆದ ಮಹತ್ವವಿರುತ್ತದೆ.

    ಪ್ರವಾದಿಯವರು ಸಣ್ಣ ಸಣ್ಣ ಕಥೆಗಳನ್ನು ಹೇಳುವ ಮೂಲಕ ಸಂಗಾತಿಗಳಲ್ಲಿ ಜ್ಞಾನದ ಹಣತೆಯನ್ನು ಹಚ್ಚುತ್ತಿದ್ದರು. ಪ್ರವಾದಿಯವರು(ಸ) ಹೇಳಿದ ಕಥೆಯೊಂದು ಹೀಗಿದೆ: ನಾಯಿಯೊಂದು ಬಾವಿಯ ಸುತ್ತಲೂ ಓಡಾಡುತ್ತಿತ್ತು. ಅದು ಬಾಯಾರಿಕೆಯಿಂದ ಬಳಲಿತ್ತು. ಬನೀ ಇಸ್ರಾಈಲರಿಗೆ ಸೇರಿದ್ದ ದುರಾಚಾರಿ ಒಬ್ಬಳು ಈ ಸ್ಥಿತಿಯಲ್ಲಿ ನಾಯಿಯನ್ನು ನೋಡಿದಳು. ಅವಳು ತನ್ನ ಚರ್ಮದ ಕಾಲು ಚೀಲವನ್ನು ತೆಗೆದು ತಾನು ಧರಿಸಿದ್ದ ಮೇಲು ಹೊದಿಕೆಗೆ ಕಟ್ಟಿದಳು. ಅದನ್ನು ಇಳಿಬಿಟ್ಟು ಬಿಟ್ಟು ಬಾವಿಯಿಂದ ನೀರು ಸೇರಿದಳು. ನಂತರ ಅದನ್ನು ನಾಯಿಗೆ ಕುಡಿಯಲು ಕೊಟ್ಟಳು. ಈ ಕೃತ್ಯದಿಂದಾಗಿ ಆಕೆಯ ಹಿಂದಿನ ಪಾಪಗಳನ್ನು ಕ್ಷಮಿಸಲಾಯಿತು.

    ಆಧುನಿಕ ತಂತ್ರಜ್ಞಾನದ ಮಧ್ಯೆ ಬೆಳೆಯುತ್ತಿರುವ ಮಕ್ಕಳೂ, ನಮ್ಮ ಶಿಕ್ಷಕರ ಬಾಯಿಂದ ಕಥೆಗಳನ್ನು ಕೇಳುವುದನ್ನು ಇಷ್ಟಪಡುತ್ತಾರೆ. ಆದುದರಿಂದ ನೀತಿ ಬೋಧಕ ಕಥೆಗಳನ್ನು ಮಕ್ಕಳಿಗೆ ಹೇಳಲು ಶಿಕ್ಷಕರು ಆಸಕ್ತಿ ತೋರಬೇಕು.
    ಇತರರನ್ನು ತೆಗಳದಿರುವುದು ಅವಮಾನಿಸದಿರುವುದು ಪ್ರವಾದಿಯವರ(ಸ) ವಿಶೇಷ ಗುಣವಾಗಿತ್ತು. ತಪ್ಪುಗಳು ಯಾರಿಂದಲೂ ಸಂಭವಿಸಬಹುದು. ಆದರೆ ಸಾರ್ವಜನಿಕವಾಗಿ ವ್ಯಕ್ತಿಯನ್ನು ಅವನ ತಪ್ಪಿಗಾಗಿ ಅವಹೇಳನ ಮಾಡುವುದು ಸರಿಯಲ್ಲ. ಪ್ರವಾದಿಯವರು(ಸ) ಎಂದೂ ಈ ವಿಧಾನವನ್ನು ಬಳಸಲಿಲ್ಲ. ಅವರು ವೈಯಕ್ತಿಕವಾಗಿ ಅವರನ್ನು ಕರೆಸಿ ವಿಷಯವನ್ನು ಮನವರಿಕೆ ಮಾಡಿಸಿ ನಯವಾಗಿ ಇನ್ನು ಮುಂದೆ ಹೀಗೆ ಮಾಡಬಾರದು ಎಂದು ತಿಳಿಸುತ್ತಿದ್ದರು. ಸಹನೆಯಿಂದ ತಪ್ಪನ್ನು ತಿದ್ದಿ ಹೇಳುತ್ತಿದ್ದರು. ಈ ಅಭ್ಯಾಸವನ್ನು ಕೂಡ ನಮ್ಮ ಶಿಕ್ಷಕರು ತಮ್ಮ ಜೀವನದ ಭಾಗವಾಗಿಸಬೇಕು. ಸಣ್ಣಪುಟ್ಟ ವಿಷಯಗಳಿಗೂ ಜೀವನವನ್ನೇ ಮುಗಿಸಬೇಕು ಎಂಬ ಒತ್ತಡದೊಂದಿಗೆ ಬದುಕುತ್ತಿರುವ ಆಧುನಿಕ ಯುಗದ ಮಕ್ಕಳ ಮಧ್ಯೆ ಅವರಿಗೆ ಶಿಕ್ಷಣವನ್ನು ನೀಡುವ ಶಿಕ್ಷಕರು ಸಹನೆಯ ಮೂರ್ತಿಗಳಾಗಿ ವರ್ತಿಸಬೇಕು .ಎಂದೂ ಯಾವ ಮಕ್ಕಳನ್ನು ಅವಮಾನಿಸುವುದು ತೆಗಳುವುದು ಸಲ್ಲದು. ಒಂದು ವೇಳೆ ಈ ಅಭ್ಯಾಸ ನಮ್ಮಲ್ಲಿದ್ದರೆ ಅದನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು.

    ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಶಿಕ್ಷಣ ತರಬೇತಿ ನೀಡಲು ಪ್ರವಾದಿ ಮುಹಮ್ಮದರು(ಸ) ತಾಕೀತು ಮಾಡಿರುವರು. ನೀವು ನಿಮ್ಮ ಮಕ್ಕಳಿಗೆ ಕೊಡುವ ಅತ್ಯುತ್ತಮವಾದಂತಹ ಉಡುಗೊರೆ ಅದು ಉತ್ತಮ ತರಬೇತಿ ಮತ್ತು ಶಿಕ್ಷಣವಾಗಿದೆ ಎಂಬ ಪ್ರವಾದಿ ವಚನ ಬಹಳ ಮಾರ್ಮಿಕವಾದುದಾಗಿದೆ. ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುವ ಓಟದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ವಿಫಲರಾಗುವ ಹೆತ್ತವರು ಜೀವಿಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ .ಪ್ರವಾದಿ ಮುಹಮ್ಮದರ(ಸ) ಈ ಶಿಕ್ಷಣ ರೀತಿಯನ್ನು ಹೆತ್ತವರು ಮತ್ತು ಶಿಕ್ಷಕರು ಅಳವಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆ ಗೋಚರಿಸಬಹುದು.

    ಸಬೀಹ ಫಾತಿಮ, ಮಂಗಳೂರು

  • ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: 
ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ವಾರ್ತಾ ಮಾಧ್ಯಮಗಳಲ್ಲಿ ಒಂದು ಟ್ವೀಟ್ ಸಂದೇಶ ಬಹಳ ವೈರಲ್ ಆಗಿದೆ. ಅದು ಗಾಝ ನಗರದಾದ್ಯಂತ ಇಸ್ರೇಲ್ ಎಂಬ ನರಹಂತಕರ ಬಾಂಬರ್ ಮತ್ತು ಮಿಸೈಲ್ ಆಕ್ರಮಣದ ಲೈವ್ ರಿಪೋರ್ಟ್ ಮಾಡುತ್ತಿದ್ದ ಅಲ್ ಜಝೀರ ಚಾನೆಲ್‌ನ ಅನಸ್ ಅಲ್ ಶರೀಫ್ ಅವರ ಬರಹ.

    ನಿರೀಕ್ಷೆಯಂತೆ ಏಕದೇವೋಪಾಸನೆಯನ್ನು ಉಚ್ಚರಿಸುತ್ತಾ ರಕ್ತದಾಹಿಗಳ ಮಿಸೈಲ್‌ಗಳಿಗೆ ತಲೆಯೊಡ್ಡಿ ವೀರ ಮರಣವನ್ನಪ್ಪಿದ ಅನಸ್ ಅಲ್ ಶರೀಫ್ ಅವರ ಹುತಾತ್ಮತೆಯು ಕಸ್ತೂರಿಯ ಪರಿಮಳದಂತೆ ಜಗತ್ತಿನಾದ್ಯಂತ ಪಸರಿಸಿದೆ. ಗಾಝ ನಗರದಾದ್ಯಂತ (ವಂಶಹತ್ಯೆಯ ರಣಭೂಮಿ) ಓಡಾಡುತ್ತಾ ಅಲ್ ಜಝೀರಾದ ಕ್ಯಾಮರ ಮತ್ತು ಮೈಕ್ ನೊಂದಿಗೆ ವಂಶಹತ್ಯೆಯ ದೃಶ್ಯವನ್ನು ಹೊರಜಗತ್ತಿಗೆ ತಿಳಿಸುತ್ತಿದ್ದ ಆ ಧೀರ ಯೋಧ ತನ್ನ ಸಂದೇಶವನ್ನು ಉಯಿಲು ಬರೆದು ಇನ್ನಿಲ್ಲದ ಲೋಕಕ್ಕೆ ಮರಳಿದ್ದಾರೆ.

    ಇದು ಅವರ ಟ್ವೀಟ್ ಸಂದೇಶದ ಸಾರಾಂಶ
    ಇದು ನನ್ನ ಕೊನೆಯ ಉಯಿಲು ಮತ್ತು ಸಂದೇಶ. ನನ್ನ ಈ ಮಾತು ನಿಮಗೆ ತಲುಪುವುದಿದ್ದರೆ ನನ್ನ ಶಬ್ದವನ್ನಡಗಿಸುವುದರಲ್ಲಿ ಮತ್ತು ನನ್ನನ್ನು ವಧಿಸುವುದರಲ್ಲಿ ಇಸ್ರೇಲ್ ಯಶಸ್ಸಿಯಾಗಿದೆ ಎಂದು ತಿಳಿಯಿರಿ. ಸರ್ವಶಕ್ತನ ಶಾಂತಿ ಮತ್ತು ಕರುಣೆ ನಿಮ್ಮ ಮೇಲಿರಲಿ. ಜಬಾಲಿಯ ಅಭಯಾರ್ಥಿ ಶಿಬಿರದಲ್ಲಿ ಮತ್ತು ಪರಿಸರದಲ್ಲಿ ನಾನು ಬದುಕಿಗೆ ಕಣ್ಣು ತೆರೆದಂದಿನಿAದ ನಾನು ನನ್ನ ಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರ ಎಲ್ಲಾ ರೀತಿಯ ಕಠಿಣ ಪ್ರಯತ್ನ ಮತ್ತು ಸಹಕಾರ ನನ್ನ ಜನರಿಗೆ ನಾನು ನೀಡುತ್ತಾ ಬಂದಿದ್ದೇನೆ ಎಂದು ಸೃಷ್ಟಿಕರ್ತನಿಗೆ ಗೊತ್ತು. ನನ್ನ ಕುಟುಂಬ ಮತ್ತು ತಾಯ್ನಾಡಿನ ಜನತೆಯೊಂದಿಗೆ ನನ್ನ ಹುಟ್ಟೂರಾದ ಅಶ್ಕಲೋನಿಯಾಗೆ ಮರಳಲು ಸಾಧ್ಯವಾಗುವ ರೀತಿಯಲ್ಲಿ ನನ್ನ ಆಯಸ್ಸು ಹೆಚ್ಚಾಗಲಿ ಮತ್ತು ನನ್ನ ಮರಣ ಸಂಭವಿಸದಿರಲಿ ಎಂದು ನಾನು ಬಯಸಿದ್ದೆ. ಆದರೆ ವಿಧಿಯಾಟವನ್ನು ಬಲ್ಲವರಾರು. ಸೃಷ್ಟಿಕರ್ತನ ತೀರ್ಮಾನ ಬೇರೆಯೇ ಆಗಿತ್ತು. ಅವನ ಇಚ್ಛೆಯೇ ಅಂತಿಮ.

    ಬದುಕಿನ ಎಲ್ಲಾ ಸಂಕಟದಲ್ಲೂ ಮತ್ತು ಸಂಕಷ್ಟದಲ್ಲೂ ನಾನು ತುಂಬಾ ನೊಂದಿದ್ದೇನೆ. ಆದರೂ ನನ್ನ ವೃತ್ತಿಯಲ್ಲಿ ಯಾವುದೇ ಕಳಂಕ ಮತ್ತು ಅಸತ್ಯದ ಹಾದಿಯನ್ನು ನಾನು ಆಯ್ಕೆ ಮಾಡಿರಲಿಲ್ಲ. ಸತ್ಯವನ್ನು ಅದರ ನಿಜಾರ್ಥದಲ್ಲಿ ಜನರ ಮುಂದಿಡಲು ನಾನು ಹಿಂದೇಟು ಹಾಕಿರಲಿಲ್ಲ. ನಮ್ಮನ್ನು ನಿರ್ಮೂಲನ ಮಾಡಲು ಸಂಕಲ್ಪ ಮತ್ತು ಪ್ರತಿಜ್ಞೆ ಮಾಡಿದವರೊಂದಿಗೆ ಮೌನ ವಹಿಸಿದವರು, ಉಸಿರು ಬಿಗಿಹಿಡಿದವರು, ನಮ್ಮ ಮಕ್ಕಳು ಮತ್ತು ಸ್ತ್ರೀಯರ ಮಾರಣಹೋಮ ಮತ್ತು ಅವುಗಳ ಅವಶೇಷಗಳನ್ನು ನೋಡಿ ಹೃದಯ ಕಂಪಿಸದವರು, ಒಂದೂವರೆ ವರ್ಷಗಳಿಂದ ನಮ್ಮ ಜನತೆ ಅನುಭವಿಸುತ್ತಿರುವ ವಂಶಹತ್ಯೆಯನ್ನು ಮಾಡುವ ಮತ್ತು ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ಸೃಷ್ಟಿಕರ್ತನು ಸಾಕ್ಷಿಯಾಗಲಿ.

    ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮಿಡಿತವಾದ ಫೆಲೆಸ್ತೀನ್ ಅನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಸ್ವತಂತ್ರ ಫೆಲೆಸ್ತೀನಿನ ಕನಸು ಮತ್ತು ಸುರಕ್ಷಿತವಾಗಿ ಮತ್ತು ಶಾಂತಿ ಹಾಗೂ ಸಮಾಧಾನದಿಂದ ಬದುಕುವ ಅವಕಾಶವನ್ನು ನಿಷೇಧಿಸಲ್ಪಟ್ಟ ಫೆಲೆಸ್ತೀನ್ ಜನತೆಯ ಮತ್ತು ಪುಟ್ಟ ಮಕ್ಕಳ ಹಾಗೂ ಮರ್ದಿತರನ್ನು ನಾನು ನಿಮಗೆ ಬಿಟ್ಟು ಹೋಗುತ್ತಿದ್ದೇನೆ. ಅವರ ಪವಿತ್ರವಾದ ಶರೀರಗಳು ಮತ್ತು ಅವಶೇಷಗಳು ಗಾಝದ ಬಿರುಕುಬಿಟ್ಟ ಮತ್ತು ಹುಡಿ ಹುಡಿಯಾಗಿ ನೆಲಕ್ಕಪ್ಪಳಿಸಿದ ಕಟ್ಟಡಗಳ ರಾಶಿಗಳ ಮಧ್ಯೆ ಗುರುತು ಪತ್ತೆ ಹಚ್ಚಲ್ಪಡದ ರೀತಿಯಲ್ಲಿ ಅಪ್ಪಚ್ಚಿಯಾಗಿ ಬಿದ್ದುಹೋಗಿವೆ. ಗಡಿ ರೇಖೆಯಲ್ಲಿ ನಿರ್ಬಂಧಗಳ ಕಾರಣದಿಂದ ತಡೆಯಲ್ಪಡಬಾರದೆಂದೂ ನಿಯಂತ್ರಣದ ಕಾರಣದಿಂದ ಮೌನ ವಹಿಸಬಾರದೆಂದೂ ನಾನು ನಿಮಗೆ ಉಪದೇಶಿಸುತ್ತಿದ್ದೇನೆ.

    ನಮ್ಮ ಕೈಯಿಂದ ಕಿತ್ತು ತೆಗೆದ ಫೆಲೆಸ್ತೀನ್ ಎಂಬ ಮಾತೃಭೂಮಿಯ ಗೌರವ ಮತ್ತು ಅಭಿಮಾನ ಹಾಗೂ ಸ್ವಾತಂತ್ರ‍್ಯದ ಪ್ರಕಾಶವಾಗುವ ರೀತಿಯಲ್ಲಿ ನೀವು ಅದರ ವಿಮೋಚನೆಯ ವಾಹಕರಾಗಬೇಕು. ನನ್ನ ಕುಟುಂಬ ಮತ್ತು ನನ್ನ ಬದುಕಿನ ಕಣ್ಣು ಎಂದು ವಿಶ್ಲೇಷಿಸುವ ನನ್ನ ಮುದ್ದಿನ ಮಗಳು ಶಾಮ್ ಇದುವರೆಗೂ ಕನಸು ಕಾಣದಿದ್ದ ಅವಳನ್ನು ನಾನು ನಿಮ್ಮ ಕೈಗಿಡುತ್ತಿದ್ದೇನೆ. ನನ್ನ ಅಮ್ಮನನ್ನ ನಿಮಗೆ ವಹಿಸಿಕೊಡುತ್ತಿದ್ದೇನೆ. ಅವರ ಪ್ರಾರ್ಥನೆ ನನಗೆ ಅನುಗ್ರವಾದೀತು. ನನ್ನ ಪ್ರಿಯ ಪತ್ನಿ ಉಮ್ಮು ಸಲಾಹ್ ಬಯಾನ್ ಳನ್ನು ಕೂಡ ನಾನು ನಿಮಗೆ ವಹಿಸಿಕೊಡುತ್ತಿದ್ದೇನೆ. ಯುದ್ಧ ನಮ್ಮಿಬ್ಬರನ್ನು ತಿಂಗಳುಗಳ ಕಾಲ ಬೇರ್ಪಡಿಸಿತು. ಆದರೂ ಅವಳು ಸನ್ನಿವೇಶವನ್ನರಿತು ಓಲಿವ್ ವೃಕ್ಷದ ಹಾಗೆ ಗಟ್ಟಿಯಾಗಿ ನಿಂತಳು. ಸೃಷ್ಟಿಕರ್ತನ ಹೊರತಾಗಿ ನೀವು ಅವಳನ್ನು ಸುತ್ತುವರಿದು ಅವಳ ಸಂರಕ್ಷಣೆಯನ್ನು ವಹಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇನೆ.

    ನನಗೆ ತಪ್ಪು ಸಂಭವಿಸಿದ್ದರೆ ನೀವು ನನಗೆ ಕ್ಷಮಿಸಬೇಕು. ನಾನು ನನ್ನ ಕರಾರನ್ನು ಪಾಲಿಸಿದ್ದೇನೆ. ನಾನು ವಹಿಸಿರುವ ದೌತ್ಯವನ್ನು ಚೆನ್ನಾಗಿ ನಿಭಾಯಿಸಿದೆನೆಂಬ ಸಂತೃಪ್ತಿ ನನಗಿದೆ. ಗಾಝವನ್ನು ನೀವೆಂದೂ ಮರೆಯಬಾರದು. ಅದರ ವಿಮೋಚನೆಗಾಗಿ ಮತ್ತು ಸ್ವತಂತ್ರ ಫೆಲೆಸ್ತೀನ್ ಗಾಗಿ ಹಾಗೂ ಫೆಲೆಸ್ತೀನ್ ಜನತೆ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.

    ಸುಮಾರು ಒಂದುವರೆ ವರ್ಷದಿಂದ ಫೆಲೆಸ್ತೀನ್ ಜನತೆ ಇಸ್ರೇಲಿನ ವಂಶಹತ್ಯೆ, ಆಹಾರೋತ್ಪನ್ನಗಳ ತಡೆ, ನಿರಂತರ ಮರ್ದನ, ಲೈಂಗಿಕ ದೌರ್ಜನ್ಯಗಳಿಂದ ಕಂಗೆಟ್ಟು ಹೋಗಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವ ಮಾನವ ಹಕ್ಕು ಹೋರಾಟಗಾರರು ಅಸಾಹಾಯಕರಾಗಿದ್ದಾರೆ. ಇಸ್ರೇಲ್ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತ ಅಮೇರಿಕ ವಂಶಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವನ್ನೂ ಮೂಕವಾಗಿ ನೋಡುತ್ತಿರುವ ಜಗತ್ತಿನ ಇತರೆಲ್ಲಾ ಸ್ವತಂತ್ರ ರಾಷ್ತ್ರಗಳು ಮೌನವಹಿಸಿವೆ. ಗಾಝ ನಗರದಲ್ಲಿ ಇನ್ನು ಬಾಂಬ್ ವರ್ಷಿಸಲು ಸ್ಥಳವೇ ಇಲ್ಲ ಎಂಬಷ್ಟರ ಮಟ್ಟಿಗೆ ನಶಿಸಿ ಹೋಗಿವೆ.

    ಗಾಝದ ಜನರಿಗೆ ಪತ್ರಕರ್ತರೆಂದರೆ ಎಲ್ಲಿಲ್ಲದ ಸಿಟ್ಟು. ಆದಕ್ಕೆ ಕಾರಣವೂ ಇದೆ. ಸುಳ್ಳು ಸುದ್ಧಿ ಮತ್ತು ಇಸ್ರೇಲ್ ಕಿರಾತಕರು ನಿರಂತರವಾಗಿ ಸುರಿಸುವ ಬಾಂಬರ್‌ಗಳು ಮತ್ತು ಮಿಸೈಲ್‌ಗಳಿಂದ ಸಂಕಷ್ಟದಿAದ ಬದುಕು ಮುನ್ನಡೆಸುತ್ತಿರುವ ಫೆಲೆಸ್ತೀನಿಯರಿಗೆ ಆಹಾರದ ಅಲಭ್ಯತೆಯನ್ನು ಕೂಡ ಸರಿಯಾದ ರೀತಿಯಲ್ಲಿ ವಾರ್ತೆ ನೀಡದಿರುವುದೇ ಅದಕ್ಕೆ ಕಾರಣ. ಮಾತ್ರವಲ್ಲ ಅವರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಾ ಮಹಿಳೆಯರ ಮತ್ತು ಮಕ್ಕಳ ವಂಶ ಹತ್ಯೆಯನ್ನು ವಿಜೃಂಭಿಸುವ ಪತ್ರಕರ್ತರನ್ನು ಅವರಿಗೆ ಕಂಡರಾಗದು. ಆದರೆ ಅನಸ್ ಇವೆಲ್ಲದಕ್ಕಿಂತಲೂ ವಿಭಿನ್ನ. ಅವರು ಸತ್ಯದ ವಾಹಕರು. ಫೆಲೆಸ್ತೀನಿ ಜನತೆಯನ್ನು ಹತ್ತಿರದಿಂದ ತಿಳಿದವರು ಹಾಗೂ ತನ್ನವರಿಗಾಗಿ ಸದಾ ಮಿಡಿಯುವ ಹೃದಯವಂತರು.

    ಇತ್ತೀಚಿಗೆ ವರದಿ ಮಾಡುತ್ತಿದ್ದ ವೇಳೆ ಅನಸ್ ಬಳಲಿ ತನ್ನ ಕ್ಯಾಮಾರದೊಂದಿಗೆ ಕೆಳಗೆ ಬಿದ್ದಾಗ ಜನರು ಈ ರೀತಿ ಆಡುತ್ತಿದ್ದರು. ಅನಸ್ ಎದೆಗುಂದದಿರು, ಸ್ಥೆöÊರ್ಯದಿಂದಿರು. ಧೀರವಾಗಿ ಮುನ್ನುಗ್ಗಿ ದೌತ್ಯವನ್ನು ನಿರ್ವಹಿಸು. ಅನಸ್ ನಂತಹ ನೂರಾರು ಅನಸ್‌ಗಳು ಫೆಲೆಸ್ತೀನ್‌ನಲ್ಲಿ ಹುಟ್ಟಿ ಬರಬಹುದು ಆದರೆ ಅವರಾರು ಅನಸ್‌ಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅನಸ್‌ರ ವ್ಯಕ್ತಿತ್ವ, ಆತ್ಮ ಸ್ಥೆöÊರ್ಯ ಹಾಗೂ ವೀರಾವೇಶದಿಂದ ತನ್ನ ಕೆಲಸವನ್ನು ನಿರ್ವಹಿಸುವ ಶೈಲಿ ಅದ್ಭುತವಾಗಿತ್ತು.

    ಜನವರಿ ತಿಂಗಳಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. ಆದರೆ ಇಸ್ರೇಲ್ ಅದನ್ನು ಉಲ್ಲಂಘಿಸಿ ನಿರಂತರವಾಗಿ ಬಾಂಬ್ ಗಳನ್ನು ಸುರಿದ ಪರಿಣಾಮ ಅನಸ್ ಮತ್ತು ಅವರ ಸ್ನೇಹಿತರು ಸೇರಿದಂತೆ ಒಟ್ಟು ಐದು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ 28 ವರ್ಷ ಪ್ರಾಯದ ಅನಸ್ ಗಾಝದ ಹೆಸರಾಂತ ಪತ್ರಕರ್ತನಾಗಿದ್ದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ನಿಷೇಧ ಹೇರಿದ್ದರೂ ಬಹಳ ಅಚ್ಚುಕಟ್ಟಾಗಿ ಧೈರ್ಯದಿಂದ ಅನಸ್ ತನ್ನ ದೌತ್ಯವನ್ನು ನಿರ್ವಹಿಸುತ್ತಿದ್ದರು. ಅವರ ವಧೆ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಪ್ರತಿಭಟನೆಗೆ ಕಾರಣವಾಗಿದೆ.

    ಇಂದಿನ ಜಗತ್ತು ರಕ್ತದಾಹಿಗಳ ರಣಭೂಮಿಯಾಗಿದೆ, ಯುದ್ಧ ಸರಕು ಮತ್ತು ಆಯುಧ ವ್ಯಾಪಾರಿಗಳ ಮಾರುಕಟ್ಟೆಯಾಗಿದೆ. ಮಾನವೀಯತೆ ನಶಿಸಿ ಹೋದ, ವಂಶಹತ್ಯೆಯನ್ನೇ ಬಂಡವಾಳವಾಗಿಸಿದ ದುರುಳರು ಇಂದು ಜಗತ್ತನ್ನು ಆಳುತ್ತಿದ್ದಾರೆ. ಅದನ್ನು ನೋಡುತ್ತಾ ಮೌನ ಸಮ್ಮತಿಯನ್ನು ನೀಡುವವರು ಅದಕ್ಕಿಂತಲೂ ನೀಚರು. ಅಸಹಾಯಕರಾದ ಬಡಪಾಯಿಗಳನ್ನು ನಿಷ್ಕಾರುಣ್ಯವಾಗಿ ವಧಿಸುವ ವ್ಯಾಘ್ರರಿಗೆ ಗಾಝದ ಜನತೆ ತಕ್ಕ ಪಾಠ ಕಲಿಸುವಂತಾಗಲಿ ಮತ್ತು ಅದಕ್ಕಾಗಿ ಲಕ್ಷಾಂತರ ಅನಸ್‌ಗಳು ಜನ್ಮ ತಾಳಲಿ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿ ವೀರ ಮರಣವನ್ನಪ್ಪಿದ ಹುತಾತ್ಮತೆಯ ಉತ್ತುಂಗಕ್ಕೇರಿದ ಅನಸ್‌ರಂತಹ ಮುತ್ತುರತ್ನಗಳು ಸಮಾಜಕ್ಕೆ ಮಾದರಿಯಾಗಲಿ ಎಂಬ ಹಾರೈಕೆ.

    ಅಬ್ದುಸ್ಸಲಾಮ್ ದೇರಳಕಟ್ಟೆ

  • “ಇಸ್ರೇಲಿ ಪ್ರಧಾನಿ ನ್ಯೂಯಾರ್ಕ್ ಪ್ರವೇಶಿಸಿದರೆ ಬಂಧಿಸುವೆ” 
ಘೋಷಿಸಿದ್ದ ಈ ಝೊಹ್ರಾನ್ ಮಮ್ದಾನಿ ಯಾರು?

    “ಇಸ್ರೇಲಿ ಪ್ರಧಾನಿ ನ್ಯೂಯಾರ್ಕ್ ಪ್ರವೇಶಿಸಿದರೆ ಬಂಧಿಸುವೆ” ಘೋಷಿಸಿದ್ದ ಈ ಝೊಹ್ರಾನ್ ಮಮ್ದಾನಿ ಯಾರು?

    ಇತ್ತೀಚಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಚಾರ ಪಡೆದ ಮತ್ತು ವೈರಲ್ ಆದ ಒಂದು ಹೆಸರು ಝೊಹ್ರಾನ್ ಮಮ್ದಾನಿ, ಅವರ ಬಗ್ಗೆ ಒಂದಿಷ್ಟು ಚರ್ಚಿಸೋಣ. ಝೊಹ್ರಾನ್ ಮಮ್ದಾನಿ 33 ವರ್ಷದ ಗುಜರಾತ್ ಮೂಲದ ಸ್ಪುರದ್ರೂಪಿ ಯುವಕ ತನ್ನ ಧೀರ ಧೋರಣೆ, ಜನಪರ ಕಾರ್ಯಕ್ರಮಗಳು ಮತ್ತು ಶೋಷಿತರ ಪರವಾಗಿ ನಡೆಸುವ ಹೋರಾಟಗಳಿಂದ ಇಂದು ಜಗತ್ತಿನ ಗಮನ ಸೆಳೆದಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಜನಸಾಮಾನ್ಯರಿಗೆ ಝೊಹ್ರಾನ್ ಮಮ್ದಾನಿ ಒಂದು ಹೊಸ ಭರವಸೆಯ ಕಿರಣವಾಗಿದ್ದಾರೆ. ಝೊಹ್ರಾನ್ ಮಮ್ದಾನಿ ಮೂಲತಃ ಗುಜರಾತ್ ನವರಾಗಿದ್ದು ಉಗಾಂಡಾದಲ್ಲಿ ಜನಿಸಿ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಬೆಳೆದವರು. ಅವರು ಖ್ಯಾತ ಚಲನ ಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಗುಜರಾತಿನ ಶಿಕ್ಷಣ ತಜ್ಞ ಮುಹಮ್ಮದ್ ಮಮ್ದಾನಿಯವರ ಪುತ್ರ. ಆದರೆ ಜಗತ್ತಿಗೆ ಅವರ ಪರಿಚಯವಾಗುವುದು ಅವರ ಪೋಷಕರ ಕಾರಣದಿಂದಲ್ಲ ಬದಲಾಗಿ ಅವರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶೋಷಿತ ಮತ್ತು ಹಕ್ಕು ವಂಚನೆಗೊಳಗಾದವರ ಹಾಗೂ ದಮನಿತ ವರ್ಗದವರಿಗಾಗಿ ರೋಟಿ ಕಪ್ಡಾ ಮಕಾನ್ ಎಂಬ ಘೋಷಣೆಯೊಂದಿಗೆ ಹೋರಾಡಿ ಜನಪರ ಕೆಲಸ ಮಾಡುವವರಾಗಿದ್ದಾರೆ. ಅದು ಮಾತ್ರವಲ್ಲ ಸುಮಾರು ಅರವತ್ತು ಸಾವಿರ ಮಂದಿಯನ್ನು ಫೆಲೆಸ್ತೀನಿನಲ್ಲಿ ಮಾರಣ ಹೋಮಗೈದ ಕಿರಾತಕ ಇಸ್ರೇಲ್ ವಿರುದ್ಧ ಮಾತನಾಡಿದ ಧೈರ್ಯಶಾಲಿ ಯುವಕ. ಆದ್ದರಿಂದಲೇ ಅವರು ಸಾಮಾನ್ಯರ ಮತ್ತು ಯುವಜನರ ಹೃದಯಗಳಲ್ಲಿ ತರಂಗವನ್ನು ಸೃಷ್ಟಿಸಿದ್ದಾರೆ. ಅವರ ಈ ಖ್ಯಾತಿ ಇಂದು ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಮೊದಲ ಸುತ್ತಿನಲ್ಲಿ ಗೆಲುವನ್ನು ಕಂಡಿದ್ದಾರೆ.

    ಝೊಹ್ರಾನ್‌ನ ತಂದೆ ಗುಜರಾತ್ ಮೂಲದ ಶಿಕ್ಷಣ ತಜ್ಞ, ತಾಯಿ ಮೀರಾ ಒರಿಸ್ಸಾ ಮೂಲದ ಚಲನ ಚಿತ್ರ ನಿರ್ಮಾಪಕಿ. 1991 ಅವರು ಉಗಾಂಡದಲ್ಲಿ ಜನ್ಮ ತಾಳಿದರು. ತನ್ನ ಏಳನೆಯ ವಯಸ್ಸಿನಲ್ಲಿ ನ್ಯೂಯಾರ್ಕ್ಗೆ ವಲಸೆ ಬಂದ ಅವರು ಅಲ್ಲೇ ಬೆಳೆದು ಉನ್ನತ ಶಿಕ್ಷಣ ಪಡೆದು ತದ ನಂತರ ರಾಜಕೀಯಕ್ಕೆ ಧುಮುಕಿದರು. ಎಲ್ಲಾ ಕಾಲದಲ್ಲೂ ಜಗತ್ತಿನ ದೊಡ್ಡಣ್ಣನೆಂಬ ಹೆಸರನ್ನು ಉಳಿಸಿಕೊಂಡೇ ಜಗತ್ತನ್ನು ನಿಯಂತ್ರಿಸುವ ಅಮೇರಿಕ ಬಂಡವಾಳ ಶಾಹಿಗಳ ಕೂಪ. ಆದ್ದರಿಂದಲೇ ಜನಸಾಮಾನ್ಯರ ಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸುವ ಗೋಜಿಗೆ ಅಲ್ಲಿನ ದೊಡ್ಡಣ್ಣ ಪ್ರಯತ್ನಿಸುವುದೇ ಇಲ್ಲ. ನ್ಯೂಯಾರ್ಕ್ ನಗರದ ಜನರ ಕಷ್ಟಗಳು ಮತ್ತು ಸಮಸ್ಯೆಗಳನ್ನು ಅರಿತ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿ ನಂತರ 2020 ರಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಅವರು ಅದುವರೆಗೆ ನಾಲ್ಕು ಬಾರಿ ಸದಸ್ಯರಾಗಿದ್ದಂತಹ ಅರವಿಲ್ಲಾ ಸಿಮೋಟಸ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಆಯ್ಕೆಯಾದರು. ತಮ್ಮ ಜನಪರ ಆಡಳಿತ, ದಿಟ್ಟ ಎಡಪಂತೀಯ ನಿಲುವು ಮತ್ತು ಹೋರಾಟಗಳ ಮೂಲಕ 2024ರಲ್ಲಿ ಕೂಡ ಅವರು ಮರು ಆಯ್ಕೆಯಾದರು. ಆಗಲೇ ಅವರು ನ್ಯೂಯಾರ್ಕ್ ನ ಮೇಯರ್ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಘೋಷಿಸಿ ನ್ಯೂಯಾರ್ಕ್ನ ಮಾಜಿ ಗವರ್ನರ್ ಆಂಡ್ರೋವನ್ನು ಸೋಲಿಸಿ ನ್ಯೂಯಾರ್ಕ್ನ ನೂತನ ಮೇಯರ್ ಆಗುವ ನಿಟ್ಟಿನಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಅಧಿಕೃತ ಘೋಷಣೆ ಈ ವರ್ಷದ ಕೊನೆಯಲ್ಲಿ ಘೋಷಣೆಯಾಗಲಿದೆ.

    ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೇನೆAದರೆ ಇಡೀ ಜಗತ್ತು ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿರುವಾಗ ಅದರಲ್ಲೂ ಬಂಡವಾಳಶಾಹಿಗಳ ತವರೂರು ಎಂದೇ ಖ್ಯಾತಿಯಲ್ಲಿರುವ ನ್ಯೂಯಾರ್ಕ್ ಶೇಕಡಾ ಮೂರರಷ್ಟು ಮಾತ್ರ ಮುಸ್ಲಿಮ್ ಜನಸಂಖ್ಯೆ ಇರುವ ನಗರದಲ್ಲಿ ಓರ್ವ ಮುಸ್ಲಿಮ್ ಮಾತ್ರವಲ್ಲ ಎಡಪಂಥೀಯ ವಿಚಾರಧಾರೆಯ ಯುವಕ ಮೇಯರ್ ಸ್ಥಾನಕ್ಕೆ ಗೆಲುವು ಸಾಧಿಸಿದ್ದು ಹೇಗೆ ಎಂಬುದು ಒಂದು ವಿಚಿತ್ರ. ಮಮ್ದಾನಿಗೆ ಗೆಲುವು ತಂದು ಕೊಡಲು ಕಾರಣ ಅವರ ವಿಭಿನ್ನ ಶೈಲಿಯ ಹೋರಾಟದ ಮಾದರಿಯಾಗಿತ್ತು. ರೋಟಿ ಕಪ್ಡಾ ಔರ್ ಮಕಾನ್ ಎಂಬ ಘೋಷಣೆಯೊಂದಿಗೆ ಜನಸಾಮಾನ್ಯರನ್ನು ಒಟ್ಟು ಸೇರಿಸಿ ಮಾಡಿದ ಹೋರಾಟ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

    ಒಂದು ಕಡೆಯಲ್ಲಿ ಅವರ ಗೆಲುವಿನಲ್ಲಿ ಜನಸಾಮಾನ್ಯರು ಖುಷಿ ಪಟ್ಟರೆ, ಇನ್ನೊಂದು ಕಡೆ ಸೋಷಿಯಲಿಸ್ಟ್ ಮತ್ತು ಬಂಡವಾಳಶಾಹಿಗಳ ನಿದ್ರೆಗೆಡಿಸಿದೆ. ಏಕೆಂದರೆ ಅವರೊಬ್ಬ ಮುಸ್ಲಿಮ್, ಅವರು ಫೆಲೆಸ್ತೀನ್ ಪರ ಮಾತಾನಾಡುತ್ತಾರೆ, ನ್ಯೂಯಾರ್ಕ್ ನಗರಕ್ಕೆ ಬೆಂಜಮಿನ್ ನೆತನ್ಯಾಹು ಪ್ರವೇಶಿಸಿದರೆ ಅವರನ್ನು ಬಂಧಿಸುವೆ ಎಂದು ಎಚ್ಚರಿಸಿದ್ದಾರೆ, ಗುಜರಾತಿನಲ್ಲಿ ಗೋದ್ರಾ ಹತ್ಯಾಕಾಂಡದಲ್ಲಿ ನೇರ ಪಾತ್ರಧಾರಿಯಾದ ನರೇಂದ್ರ ಮೋದಿಯನ್ನು ದೂಷಿಸಿದ್ದಾರೆ ಮತ್ತು ಆರೆಸ್ಸೆಸ್ ಭಯೋತ್ಪಾದನೆಯನ್ನು ಖಂಡಿಸುತ್ತಾರೆ. ಆದಾಗ್ಯೂ ಅವರು ಮೇಯರ್ ಚುನಾವಣೆಯಲ್ಲಿ ಆಯ್ಕೆಯಾಗುವುದು ಒಂದು ವಿಶೇಷವೇ ಸರಿ. ಅದಕ್ಕೆ ಮುಖ್ಯ ಕಾರಣ ಅವರ ವಿಭಿನ್ನ ಶೈಲಿಯ ಚುನಾವಣಾ ಪ್ರಚಾರ.

    ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಡ ಮತ್ತು ಸಾಧಾರಣ ವರ್ಗದವರನ್ನು ಪರಿಗಣಿಸಿ ಅವರಿಗೆ ವಿಶೇಷ ಕೆಲವೊಂದು ಸ್ಕೀಮ್‌ಗಳನ್ನು ಮುಂದಿಡುತ್ತಾರೆ. ಅದರಲ್ಲಿ ಅಗ್ಗದ ದರದಲ್ಲಿ ಮನೆ ಮತ್ತು ಕಡಿಮೆ ಬಾಡಿಗೆಗೆ ಮನೆ ಸಿಗುವಂತೆ ಮಾಡುವುದು, ಜನರಿಗೆ ದಿನನಿತ್ಯ ಓಡಾಡುವ ನಿಟ್ಟಿನಲ್ಲಿ ಉಚಿತ ಸಾರಿಗೆ ಸೌಲಭ್ಯ, ಆರೋಗ್ಯ ಮತ್ತು ಸುರಕ್ಷತೆಯ ಭರವಸೆ, ದಿನಸಿ ಸಾಮಾಗ್ರಿಗಳನ್ನು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದು, ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ತೆರಿಗೆಯಲ್ಲಿ ಪರಿಷ್ಕರಣೆ ಅರ್ಥಾತ್ ಇದೆಲ್ಲವೂ ಹೇಗೆ ಸಾಧ್ಯ ಎಂದು ಕೇಳಿದರೆ ಶ್ರೀಮಂತರ ಮತ್ತು ವ್ಯಾಪಾರಿಗಳಿಗೆ ಹೆಚ್ಚು ತೆರಿಗೆ ವಿಧಿಸಿ ಅದರಿಂದ ಮಧ್ಯಮ ವರ್ಗದವರ ಜೀವನವನ್ನು ಉತ್ತಮಗೊಳಿಸುವುದು. ಮಾತ್ರವಲ್ಲ ನ್ಯೂಯಾರ್ಕ್ನಲ್ಲಿ ಅಧ್ಯಕ್ಷ ಟ್ರಂಪ್‌ನ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸುವುದು. ಹೀಗೆ ಶ್ರಮಿಕ ಮತ್ತು ಮಧ್ಯಮ ವರ್ಗಕ್ಕೆ ಚೇತರಿಸಿಕೊಂಡು ಬದುಕಲು ಸಾಧ್ಯವಾಗುವ ಎಲ್ಲಾ ರೀತಿಯ ಯೋಜನೆಗಳನ್ನು ಅವರು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಇದುವೇ ಅವರಿಗೆ ಗೆಲುವನ್ನು ತಂದುಕೊಟ್ಟಿತು.

    ಅವರು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಶ್ರೀಮಂತರನ್ನು ಭೇಟಿಯಾಗಿ ಅವರ ಮುಂದೆ ಮಂಡಿಯೂರುವ ಕೆಲಸಕ್ಕೆ ಕೈಹಾಕಲಿಲ್ಲ. ಏಕೆಂದರೆ ಅವರ ಚುನಾವಣಾ ಪ್ರಣಾಳಿಕೆ ಶ್ರೀಮಂತರ ವಿರುದ್ಧವಾಗಿತ್ತು. ಅವರು ಅದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕೆ ಬದಲಾಗಿ ಅವರು ಸೋಷಿಯಲ್ ಮೀಡಿಯಾದ ಮೊರೆ ಹೋಗಿ ಜನರಲ್ಲಿ ತನ್ನ ಪ್ರಣಾಳಿಕೆಯನ್ನು ವಿವರಿಸುವ ಮೂಲಕ ಹಣ ಸಂಗ್ರಹಕ್ಕೆ ಭಿನ್ನವಿಸಿದರು ಮತ್ತು ಆ ಮೂಲಕ ಅವರಿಗೆ ಹೆಚ್ಚು ಹಣ ಸಂಗ್ರಹ ಮಾಡಲು ಸಾಧ್ಯವಾಯಿತು. ಮಾತ್ರವಲ್ಲ ಇದರಿಂದ ಅವರು ಕೈಗೊಂಡ ಪ್ರಚಾರ ಎಷ್ಟು ಜನಪ್ರಿಯವಾಯಿತೆಂದರೆ ಕೇವಲ ನ್ಯೂಯಾರ್ಕ್ ಮಾತ್ರವಲ್ಲ ಇಡೀ ಜಗತ್ತೇ ಇಂದು ಅವರ ಭಾಷಣವನ್ನು ಆಲಿಸಲು ಮತ್ತು ಅವರ ಪ್ರಚಾರದ ರೀತಿಯನ್ನು ತದೇಕಚಿತ್ತದಿಂದ ಗಮನಿಸುವಂತೆ ಮಾಡಿದೆ.
    ಇವೆಲ್ಲದರ ನಡುವೆ ಮಮ್ದಾನಿಯ ವಿರುದ್ಧ ಪ್ರಚಾರ ಮಾಡುವ ವಿರೋಧ ಪಕ್ಷವೂ ತನ್ನ ಪ್ರಚಾರವನ್ನು ಮುಂದುವರಿಸಿದೆ. ಅವರೊಬ್ಬ ಆಂಟಿ ಸೆಮೆಟಿಕ್ (ಯಹೂದಿಯರ ವಿರೋಧಿ) ಏಕೆಂದರೆ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಹೂದಿಗಳೂ ಇದ್ದಾರೆ. ಅವರೊಬ್ಬ ಮೂಲಭೂತವಾದಿ ಮುಸ್ಲಿಮ್ ಮತ್ತು ಅವರೊಬ್ಬ ಎಡಪಂಥೀಯ ಎಂಬಿತ್ಯಾದಿ ಆಪಾದನೆಗಳನ್ನು ಹುಟ್ಟು ಹಾಕಿ ಪ್ರಚಾರ ಮಾಡುತ್ತಲೂ ಇದ್ದಾರೆ.

    ನಿಜವಾಗಿ ಅಮೇರಿಕ ಎಂಬ ಅಷ್ಟು ದೊಡ್ಡ ದೇಶದ ಒಂದು ಚಿಕ್ಕ ನಗರವಾದ ಆದರೆ ಅಷ್ಟೇ ಶ್ರೀಮಂತ ನಗರವಾದ ನ್ಯೂಯಾರ್ಕ್ನ ಮೇಯರ್ ಚುನಾವಣೆಯಲ್ಲಿ ಆಯ್ಕೆಯಾದ ಮುಮ್ದಾನಿಯ ವಿರುದ್ಧ ಅಧ್ಯಕರಾದ ಟ್ರಂಪ್ ತಲೆಕೆಡಿಸುವ ಅಗತ್ಯ ಖಂಡಿತಾ ಇಲ್ಲ. ಆದರೆ ಟ್ರಂಪ್ ನೇರವಾಗಿ ಮುಮ್ದಾನಿಯ ವಿರುದ್ಧ ವಾಗ್ದಾಳಿಗೆ ಇಳಿದಿದ್ದು ಅವರೊಬ್ಬ ಪಕ್ಕಾ ಹುಚ್ಚು ಕಮ್ಯೂನಿಸ್ಟ್ ಮತ್ತು ನೋಡಲು ಭಯಾನಕ ಜೀವಿಯಂತೆ ಕಾಣುತ್ತಿದ್ದಾರೆ ಮಾತ್ರವಲ್ಲ ಅವರೊಬ್ಬ ಆಡಳಿತಕ್ಕೆ ತಕ್ಕುದಾದ ವ್ಯಕ್ತಿಯಲ್ಲ ಎಂಬ ಹೇಳಿಕೆಯ ಮೂಲಕ ತನ್ನ ಅಸಹಿಷ್ಣುತೆ ಮತ್ತು ಅಸಹಾಯಕತೆಯನ್ನು ತೋಡಿ ಮತ್ತೊಮ್ಮೆ ಮುಸ್ಲಿಮರೊಂದಿಗಿನ ವೈರತ್ವವನ್ನು ಇಸ್ಲಾಮೊಫೋಬಿಯಾವನ್ನು ನಾಲಿಗೆಯ ಮೂಲಕ ಹರಿಯಬಿಟ್ಟಿದ್ದಾರೆ.

    ಟ್ರಂಪ್ ಸೇರಿದಂತೆ ವಿರೋಧ ಪಕ್ಷವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಮ್ದಾನಿಯ ಪೌರತ್ವನ್ನು ರದ್ಧುಗೊಳಿಸುವಂತೆ ಕೋರಿದ್ದಾರೆ. ಅದಕ್ಕಾಗಿ ಅಲ್ಲಿನ ರಿಪಬ್ಲಿಕ್ ಪಕ್ಷವು ಅಧ್ಯಕ್ಷ ಟ್ರಂಪ್‌ರೊAದಿಗೆ 1954 ರ ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಪುನಃಸ್ಥಾಪನೆಗೊಳಿಸಬೇಕೆಂದು ಕೂಡ ಕೋರಿದ್ದಾರೆ. 1954 ರಲ್ಲಿ ಅಂದಿನ ಸರಕಾರವು ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಜಾರಿಗೊಳಿಸಿತ್ತು. ಅದರಂತೆ ಸರಕಾರಿ ಮತ್ತು ಸರಕಾರೇತರ ಹುದ್ದೆಗಳಲ್ಲಿದ್ದ ಎಲ್ಲ ಎಡಪಂಥೀಯರನ್ನು ವಜಾಗೊಳಿಸಿ ಅವರ ಪೌರತ್ವನ್ನು ರದ್ಧುಗೊಳಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.

    ಅದಕ್ಕೆ ಕಾರಣವೂ ಇದೆ. ಮಮ್ದಾನಿ ಸ್ವೇಚ್ಛೆಯ ವಿರುದ್ಧ ಮತ್ತು ಬಂಡವಾಳಶಾಹಿಯ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಮಾತ್ರವಲ್ಲ ಟ್ರಂಪ್‌ನ ಆಪ್ತ ಮಿತ್ರರಾದ ನೆತನ್ಯಾಹು ಮತ್ತು ಅನೇಕ ಶ್ರೀಮಂತರಿಗೆ ಮಮ್ದಾನಿಯ ಯೋಜನೆ ನಿದ್ರೆಗೆಡಿಸುವುದಂತೂ ಸತ್ಯ. ಏಕೆಂದರೆ ನ್ಯೂಯಾರ್ಕ್ ನಗರ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ದರಿಂದಲೇ ಮಮ್ದಾನಿಯ ಯೋಜನೆ ಶ್ರೀಮಂತರ ಮತ್ತು ಉದ್ಯಮಿಗಳ ನೀತಿಯನ್ನು ತಲೆಕೆಳಗಾಗಿಸುವುದಂತೂ ಸತ್ಯ.

    ನಾವು 21 ನೇಯ ಶತಮಾನದಲ್ಲಿ ಬದುಕುತ್ತಿದ್ದೇವೆ. ಆದರೆ ನಮ್ಮ ದೇಶದಲ್ಲಿ 20 ನೆಯ ಶತಮಾನದ ರಾಜಕೀಯ ನೀತಿಯನ್ನು ಬಳಸಲಾಗುತ್ತೆ. ಆದ್ದರಿಂದಲೇ ಫ್ಯಾಸಿಸ್ಟ್ ಮತ್ತು ಕೋಮುವಾದಿಗಳು ಪದೇ ಪದೇ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತಿದ್ದಾರೆ. ಆದರೆ ಮಮ್ಡಾನಿ ಚುನಾವಣಾ ಪ್ರಚಾರಕ್ಕೆ ಅನುಸರಿಸಿದ ನೀತಿ ವಿಶಿಷ್ಟವಾದುದಾಗಿದೆ. ಅವರು ಹೊಸ ಬಗೆಯ ನೀತಿಯನ್ನು ಅನುಸರಿಸುವ ಮೂಲಕ ಜನ ಸಾಮಾನ್ಯರ ಹೃದಯವನ್ನು ಗೆಲ್ಲಲು ಸಾಧ್ಯವಾಗಿದೆ. ಇದೇ ನೀತಿಯನ್ನು ಅಥವಾ ಇದಕ್ಕೆ ಅನುರೂಪವಾದ ಹೊಸ ಬಗೆಯ ಯೋಜನೆ ಮತ್ತು ತಂತ್ರಗಾರಿಕೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿದರೆ ಕೋಮುವಾದಿ, ಕ್ರಿಮಿನಲ್ ಮತ್ತು ಫ್ಯಾಸಿಸ್ಟರನ್ನು ಸೋಲಿಸಲು ಸಾಧ್ಯವಿದೆ ಎಂದು ಮಮ್ದಾನಿ ತೋರಿಸಿಕೊಟ್ಟಿದ್ದಾರೆ.

    ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಇದ್ದೇ ಇದೆ. ಆದರೆ ಚುನಾವಣಾ ಪ್ರಚಾರದಲ್ಲಿ ಹತ್ತಾರು ಭರವಸೆಗಳನ್ನು ನೀಡುವ ಮೂಲಕ ಮತ ಗಳಿಸಿ ಅಧಿಕಾರಕ್ಕೆ ಬಂದರೆ ಅವೆಲ್ಲವನ್ನೂ ಮರೆತು ಬಿಡುವುದು ರಾಜಕಾರಣಿಗಳಿಗೆ ಅಭ್ಯಾಸವಾಗಿ ಬಿಟ್ಟಿದೆ. ಅಂತವರಿಗೆ ತಕ್ಕ ಪಾಠ ಕಲಿಸಲು ಇನ್ನಾದರೂ ಜನಸಾಮಾನ್ಯರು ಮುಂದಾಗಬೇಕು. ಮತೀಯವಾದಿಗಳನ್ನು ಮತ್ತು ಅಧಿಕಾರದಾಹಿಗಳನ್ನು ಸೋಲಿಸಿ ಮನೆಯಲ್ಲಿ ಕೂರಿಸಬೇಕು ಮತ್ತು ಜನಸಾಮಾನ್ಯರಿಗಾಗಿ ಮಿಡಿಯುವ, ಅವರ ಹಕ್ಕುಗಳಿಗಾಗಿ ಹೋರಾಡುವ ಹೊಸ ಯುವ ಸಮೂಹವು ರಾಜಕೀಯಕ್ಕೆ ಧುಮುಕುವ ಅಗತ್ಯ ಖಂಡಿತ ಇದೆ. ಅಂತಹ ಗುಣ ಮತ್ತು ವೈಶಿಷ್ಯತೆ ಮಮ್ದಾನಿಯವರಲ್ಲಿ ಇದೆ. ಅವರು ಬಳಸಿದ ತಂತ್ರಗಾರಿಕೆ ನಮ್ಮ ದೇಶದ ಜಾತ್ಯಾತೀತವಾದಿಗಳು ಅನುಸರಿಸಬೇಕಾಗಿದೆ. ಅಧಿಕಾರದ ಲಾಲಸೆಯಿಂದ ಹೊರಬಂದು ತನ್ನ ಸ್ವಾರ್ಥತೆಯನ್ನು ಬದಿಗಿಟ್ಟು ಜನರಿಗಾಗಿ ತನ್ನಿಂದೇನು ಮಾಡಲು ಸಾಧ್ಯ ಎಂಬ ಹೊಸ ಕಲ್ಪನೆಯನ್ನು ಹುಟ್ಟು ಹಾಕುವಲ್ಲಿ ಮಮ್ದಾನಿ ಒಂದು ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಅವರಂತಹ ಮುತ್ತು ರತ್ನಗಳು ಬೆಳೆದು ಬರಲಿ ಮತ್ತು ಅವರ ಕನಸು ನನಸಾಗಲಿ ಎಂದು ಹಾರೈಸೋಣ.

  • ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

    ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

    ಬದುಕಿನದ್ದಕ್ಕೂ ದೊಡ್ಡ ಕನಸುಗಳನ್ನು ಕಂಡ ಅಪಾರ ದೂರದರ್ಶಿತ್ವ ಮತ್ತು ಬದ್ಧತೆಯಿದ್ದ ಕೆಎಂ ಶರೀಫ್ ಸಾಹೇಬರು ಇತ್ತೀಚೆಗೆ ಸೃಷ್ಟಿಕರ್ತನೆಡೆಗೆ ಪ್ರಯಾಣ ಬೆಳೆಸಿದರು. ಇವರು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾಗಿದ್ದ ನನ್ನ ತಂದೆಯವರಾದ ಇಬ್ರಾಹಿಮ್ ಸಈದ್ ರವರ ಹಿರಿಯಣ್ಣ. ನನ್ನ ದೊಡ್ಡಪ್ಪನವರಲ್ಲಿ ನಾನು ಗುರುತಿಸಿದ ಅತಿ ವಿಶೇಷತೆ ಸಹಜವಾದ ನಾಯಕತ್ವದ ಗುಣ. ಕೆಲಸವನ್ನು ಹಂಚುವುದು, ಅದನ್ನು ಮಾಡಿಸುವುದು, ಅದರ ಮೇಲ್ನೋಟ ವಹಿಸುವುದು, ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಪ್ರೇರೇಪಿಸುವುದು ಇವರ ವಿಶೇಷತೆಯಾಗಿತ್ತು. ಎಲ್ಲ ವಿಷಯಗಳಲ್ಲಿಯೂ ಗುಣಮಟ್ಟಕ್ಕೆ ಮಹತ್ವವನ್ನು ನೀಡುವುದು. ಕೆಲಸದಲ್ಲಿ ಬದ್ಧತೆ ಮತ್ತು ಶಿಸ್ತು ಯುವಕರನ್ನು ನಾಚಿಸುವಂತಿತ್ತು.

    ತಮ್ಮ ಯುವ ಪ್ರಾಯದಲ್ಲಿಯೇ ಇಸ್ಲಾಮಿನ ಬಗ್ಗೆ ಸರಿಯಾಗಿ ಅರಿತುಕೊಂಡು ಅದೊಂದು ಜೀವನ ವ್ಯವಸ್ಥೆ ಎಂದು ಒಪ್ಪಿಕೊಂಡು ಪ್ರಾಯೋಗಿಕವಾಗಿ ಜೀವನದುದ್ದಕ್ಕೂ ನಡೆದು ತೋರಿಸಿದ ಮಹಾನುಭಾವರು. ನಮ್ಮ ಕುಟುಂಬದ ಹಿರಿಯ ಸ್ಥಾನದಲ್ಲಿದ್ದ ಅವರಿಗೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆಯೂ ಕಾಳಜಿ ಇತ್ತು. ಕೇವಲ ಕಣ್ಣುಗಳನ್ನು, ಮುಖಭಾವವನ್ನು ನೋಡಿ ವ್ಯಕ್ತಿಯ ಸಮಸ್ಯೆಯನ್ನು ಗುರುತಿಸುವ ಮತ್ತು ಅದಕ್ಕೆ ಸೂಕ್ತವಾದ ಪರಿಹಾರವನ್ನು ಸೂಚಿಸುವ ಜೊತೆಗೆ ಕೈಲಾದ ಸಹಾಯ ಮಾಡುವ ವಿಶಾಲ ಹೃದಯಿಯಾಗಿದ್ದರು.

    ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು, ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ಗಮನಿಸುತ್ತಿದ್ದರು. ಮಕ್ಕಳ ಸಣ್ಣ ಸಾಧನೆಯನ್ನು ಸಂಭ್ರಮಿಸುತ್ತಿದ್ದರು. ಅವರಿಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿ ನಿಲ್ಲುತ್ತಿದ್ದರು.

    ಹೆಣ್ಣು ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಅವರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದ ಕೇರಳಕ್ಕೆ ಮಂಗಳೂರಿನ ಆಸುಪಾಸಿನ ಹೆಣ್ಣು ಮಕ್ಕಳು ಹೋಗುತ್ತಿರುವುದನ್ನು ಕಂಡು ಇಲ್ಲಿಯೇ ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಯೋಜನೆಗೆ 25 ವರ್ಷಗಳ ಹಿಂದೆ ಅಡಿಪಾಯ ಹಾಕಿದರು.

    ಗುಡ್ಡದಂತಹ ಸ್ಥಳದಲ್ಲಿ ಹೆಚ್ಚು ಜನವಾಸವಿಲ್ಲದ ಪ್ರದೇಶದಲ್ಲಿ ಒಂದು ವಿಶಾಲ ಭೂಮಿಯನ್ನು ಸಮಾನ ಮನಸ್ಕರ ಜೊತೆಗೂಡಿ ಖರೀದಿಸಿ ಮೊದಲು ಅದರ ಅಡಿಪಾಯವನ್ನು ಹಾಕಿದಾಗ ಅಲ್ಲಿ ನಡೆದ ಒಂದು ಸಮಾರಂಭದಲ್ಲಿ ಗುಡ್ಡದಿಂದ ಕೂಡಿದಂತಹ ಪ್ರದೇಶವನ್ನು ತೋರಿಸಿ ಮುಂದೊAದು ದಿನ ಇಲ್ಲಿ ಹೆಣ್ಣು ಮಕ್ಕಳಿಗೆ ಪಿಯುಸಿ ಡಿಗ್ರಿ ಮತ್ತು ಬಿಎಡ್ ಕಾಲೇಜುಗಳು ಸ್ಥಾಪನೆಯಾಗುತ್ತದೆ. ಇದು ಹೆಣ್ಣು ಮಕ್ಕಳಿಗಾಗಿರುವ ಯುನಿವರ್ಸಿಟಿಯಾಗುತ್ತದೆ ಎಂದು ನಮ್ಮಲ್ಲಿ ಕನಸನ್ನು ಬಿತ್ತಿದ್ದರು. ಆ ಸಮಾರಂಭದಲ್ಲಿ ದೊಡ್ಡಪ್ಪನವರ ಕಣ್ಣುಗಳಲ್ಲಿದ್ದ ಹೊಳಪನ್ನು ನಾನಿಂದು ನೆನಪಿಸುತ್ತಿದ್ದೇನೆ.

    ಹಿರಾ ಶಿಕ್ಷಣ ಸಂಸ್ಥೆಯ ಹಿಂದೆ ಹೆಜ್ಜೆ ಹೆಜ್ಜೆಗೂ ಪ್ರಯಾಣಿಸಿದರು. ಇಂದು ಈ ಶಿಕ್ಷಣ ಸಂಸ್ಥೆಯ ಪ್ರತಿಯೊಂದು ಕಲ್ಲುಗಳು ಅವರ ಪರಿಶ್ರಮ ಮತ್ತು ದೂರದರ್ಶತ್ವಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ. ಅಪಾರ ಸಂಖ್ಯೆ ವಿದ್ಯಾರ್ಥಿಗಳು ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಾಂತ ರೀತಿಯಲ್ಲಿ ಶಿಕ್ಷಣವನ್ನು ಮುಗಿಸಿ ಜಗತ್ತಿನ ವಿವಿಧ ಭಾಗಗಳಲ್ಲಿ ಪಸರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

    ಹೆಣ್ಣು ಮಕ್ಕಳು ತಲೆಯ ಮೇಲೆ ವಸ್ತç ಹಾಕಿದರೆ ಅದು ಶಾಲಾ ವಸ್ತç ಸಂಹಿತೆಗೆ ಅಪವಾದವಾಗುತ್ತದೆ ಎಂದು ಅಪಪ್ರಚಾರ ನಡೆಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಳ್ಳು ನೀರು ಬಿಡಲು ಬಯಸುತ್ತಿರುವ ಸಮಾಜದಲ್ಲಿ, ಹೆಣ್ಣು ಮಕ್ಕಳ ಪರವಾಗಿ ಸದಾ ತುಡಿಯುತ್ತಿದ್ದ ಒಂದು ಆದರ್ಶ ವ್ಯಕ್ತಿತ್ವ ಕೆ.ಎಂ. ಶರೀಫ್ ಸಾಹೇಬರು. ಅವರ ಅಗಲಿಕೆಯು ಹೆಣ್ಣು ಮಕ್ಕಳ ಪರವಾಗಿ ನಿಂತಿದ್ದ ಓರ್ವ ಮಹಾನುಭಾವರ ನಿರ್ಗಮನವಾಗಿದೆ.

    ಅನುಪಮಾ ಮಹಿಳಾ ಮಾಸಿಕದ ಹುಟ್ಟು ಬೆಳವಣಿಗೆಯಲ್ಲಿ ನಮ್ಮೊಂದಿಗೆ ಸದಾ ಬೆಂಗಾವಲಾಗಿ ನಿಂತ ಮಹಾನುಭಾವರವರು. ನಮ್ಮ ಬಳಗದ ಪ್ರತಿಯೊಂದು ಏಳು ಬೀಳುಗಳಲ್ಲಿಯೂ ನಮ್ಮ ಜೊತೆಗಿದ್ದವರು. ನಮ್ಮ ಪತ್ರಿಕೆಯಲ್ಲಿ ಬರುವ ಪ್ರತಿಯೊಂದು ಲೇಖನದ ಬಗ್ಗೆಯೂ ಕೂಲಂಕುಶ ಪರಿಶೀಲನೆ ನಡೆಸುವವರು. ಉತ್ತಮ ವಿಮರ್ಶಕರು ಆಗಿದ್ದರು. ತಮ್ಮ ಅದ್ವಿತೀಯ ವರ್ಚಸ್ಸಿನಿಂದ, ಕಂಡ ಕನಸನ್ನು, ಕೈಗೆತ್ತಿಕೊಂಡ ಕೆಲಸವನ್ನು ಅರ್ಪಣಾ ಮನೋಭಾವದೊಂದಿಗೆ ಪೂರ್ತಿ ಗೊಳಿಸುವ ವಿಶಿಷ್ಟ ಛಲಗಾರ.

    ಮಂಗಳೂರಿನಲ್ಲಿ ಇಂದು ಇಸ್ಲಾಮಿನ ಕಂಪನ್ನು ಪಸರಿಸುತ್ತಿರುವ ಹತ್ತು ಹಲವು ಕೆಲಸಗಳ ರೂವಾರಿಯವರು. ಅನುಪಮ ಕಚೇರಿ ಇರುವ ಹಿದಾಯತ್ ಸೆಂಟರ್, ವಿಶಾಲವಾದ ಸುಸಜ್ಜಿತ ಶಾಂತಿ ಪ್ರಕಾಶನದ ಕಚೇರಿ, ಇಸ್ಲಾಮಿ ಪುಸ್ತಕಾಲಯ ವಿರಬಹುದು, ಬೋಳಾರದ ಇಸ್ಲಾಮಿಕ್-ಎ-ಎಜುಕೇಶನ್ ಸೆಂಟರ್ ಎಲ್ಲದರಲ್ಲಿಯೂ ಅವರ ಅಹರ್ನಿಸಿ ಪರಿಶ್ರಮವಿದೆ. ಒಂದು ಯೋಜನೆ ಮುಗಿದ ಕೂಡಲೇ ಇನ್ನೊಂದಕ್ಕೆ ಕೈ ಹಾಕುತ್ತಿದ್ದ, ಅದಕ್ಕಾಗಿ ರೂಪವೇಷಗಳನ್ನು ಸಿದ್ಧಪಡಿಸುತಿದ್ದ ಅವರು ಎಲ್ಲ ವಿಷಯಗಳಲ್ಲಿಯೂ ಮೇಧಾವಿ. ಯಾವ ವಸ್ತುಗಳು ಎಲ್ಲಿ ಚೆನ್ನಾಗಿರುತ್ತದೆ ಯಾರ ಬಳಿ ವಿಚಾರಿಸಿದರೆ ತಿಳಿಯುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ಕೆ.ಎಂ. ಶರೀಫ್ ಸಾಹೇಬರು ಯಾವುದೇ ಕೆಲಸದಲ್ಲಿ ಪಾಲ್ಗೊಂಡರು ಅದನ್ನು ಸುಂದರವಾಗಿ ಮತ್ತು ಗುಣಮಟ್ಟದೊಂದಿಗೆ ಮುಗಿಸುವುದರಲ್ಲಿ ಸಿದ್ದ ಹಸ್ತರು.

    ಯಾರಿಗೂ ಪುಕ್ಕಟೆ ಸಲಹೆ, ಉಪದೇಶ ನೀಡುವ ಜಾಯಮಾನ ಅವರದಾಗಿರಲಿಲ್ಲ. ಆದರೆ ತಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬಂದ ಪ್ರತಿಯೊಬ್ಬರ ಪಾಲಿಗೂ ಅವರು ಆಪ್ತ ಸಮಾಲೋಚಕರು. ಉಪದೇಶ ಬಯಸುವವರಿಗೆ ಹಿರಿಯ ಮಾರ್ಗದರ್ಶಿ. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಸುಂದರವಾಗಿ ಪೂರ್ತಿಗೊಳಿಸಿದರೂ ಅದರಲ್ಲಿ ಹೆಚ್ಚಿನ ಪ್ರಯತ್ನ, ಹೋರಾಟ ಕೆ.ಎಂ. ಶರೀಫ್ ಸಾಹೇಬರದ್ದಾಗಿತ್ತು. ಆದರೆ ಎಂದೂ ಅದನ್ನು ಅವರು ಹೇಳಿಕೊಂಡವರಲ್ಲ. ವಿನಯಶೀಲತೆ ಅವರ ಹೆಗ್ಗಳಿಕೆ. ಅಧಿಕಾರ, ಹೆಸರು, ಪದವಿಗಾಗಿ ಯಾವುದೇ ಕೆಲಸವನ್ನು ಮಾಡಲು ಮತ್ತು ತನ್ನನ್ನು ಸಮಾಜ ಗುರುತಿಸಬೇಕೆಂದು ಅವರು ಬಯಸಲಿಲ್ಲ. ನಿಸ್ವಾರ್ಥತೆಯಿಂದ ಕೂಡಿದ ಮಾದರಿ ಯೋಗ್ಯ ಜೀವನವದು.

    ಅಲ್ಲಾಹನ ಮೇಲಿನ ಅಪಾರ ಭರವಸೆಯೊಂದಿಗೆ ಸಣ್ಣ ಮೊತ್ತವಿದ್ದರೂ ಸರಿ ಕೆಲಸ ಆರಂಭಿಸಿ ಎಂದು ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಉನ್ನತ ಕನಸುಗಳನ್ನು ಹೊಂದಿ ಗುರಿಯಡಿಗೆ ಗಮನಹರಿಸಲು ಯುವ ತಲೆಮಾರನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದರು. ಪ್ರತಿಭಾವಂತರನ್ನು ಗುರುತಿಸುವುದು, ಅವರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಂದ ಸಮಾಜಕ್ಕೆ ಯಾವ ಪ್ರಯೋಜನವನ್ನು ಪಡೆಯಬಹುದು ಎಂದು ಯೋಚಿಸಿ ಅದಕ್ಕಾಗಿ ಅಹರ್ನಿಶಿ ಕೆಲಸ ಮಾಡುವುದು ಅವರಿಗೆ ಮೀಸಲಾದ ವಿಶೇಷತೆ.

    85 ವರ್ಷಗಳ ಜೀವನದುದ್ದಕ್ಕೂ ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅಪಾರ ಪ್ರೀತಿ ಕಾಳಜಿ ಮತ್ತು ನಗು ಮುಖದೊಂದಿಗೆ ಎಲ್ಲರನ್ನು ಭೇಟಿಯಾದ ನನ್ನ ಪ್ರೀತಿಯ ದೊಡ್ಡಪ್ಪನ ಅಗಲಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ .ವಿಶೇಷವಾಗಿ ಅನುಪಮಾ ಬಳಗ ಹಿರಿಯ ಮಾರ್ಗದರ್ಶಕನನ್ನು, ಕೈಹಿಡಿದು ಮುನ್ನಡೆಸುತ್ತಿದ್ದ ಊರುಗೋಲನ್ನು ಕಳೆದುಕೊಂಡು ತಬ್ಬಲಿಯಾಗಿದೆ.

    ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಉಂಟಾಗುವುದರ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸುತ್ತಿದ್ದ ಅವರು ಎಲ್ಲ ಧರ್ಮೀಯರೊಂದಿಗೂ ಸ್ನೇಹ ಪ್ರೀತಿಯ ಸಂಬಂಧವನ್ನು ಹೊಂದಿದ್ದರು. ಭಾರತದಂತಹ ಬಹುದರ್ಮಿಯ ಸಮಾಜದಲ್ಲಿ ಓರ್ವ ವ್ಯಕ್ತಿ ಯಾವ ರೀತಿಯಲ್ಲಿ ಬಾಳಬೇಕು ಎಂಬುದಕ್ಕೆ ಮಾದರಿಯಂತಿದ್ದರು. ಅವರ ಮರಣದ ವೇಳೆ ಆಗಮಿಸಿದ ಸುತ್ತಮುತ್ತಲಿನ ದೇಶ ಬಾಂಧವರು ಇಳಿಸಿದ ಕಣ್ಣೀರು ಅವರೊಂದಿಗಿದ್ದ ಪ್ರೀತಿಯ ಸ್ಪಷ್ಟ ನಿದರ್ಶನವಾಗಿತ್ತು. ಸೌಹಾರ್ದದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.

    ಮನುಷ್ಯ ಸಹಜವಾಗಿ ಅವರಿಂದ ಸಂಭವಿಸಿರಬಹುದಾದ ಎಲ್ಲ ತಪ್ಪುಗಳನ್ನು ದೇವನು ಮನ್ನಿಸಲಿ ಮತ್ತು ಅವರನ್ನು ಸ್ವರ್ಗಾನಗಳಲ್ಲಿ ಸೇರಿಸಲಿ ಎಂಬುದಾಗಿ ಹೃದಯವಂತರಾಳದಿಂದ ಪ್ರಾರ್ಥಿಸುತ್ತಿದ್ದೇನೆ.

    ಸಬೀಹ ಫಾತಿಮ