Category: ದಿನನಿತ್ಯದ ಸುದ್ದಿ

  • “School Fees ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ ರಚಿಸಿ” 
ಸಿದ್ದರಾಮಯ್ಯ ಸರಕಾರಕ್ಕೆ, ಶಿಕ್ಷಣ ನೀತಿ ಆಯೋಗ ಶಿಫಾರಸು

    “School Fees ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ ರಚಿಸಿ” ಸಿದ್ದರಾಮಯ್ಯ ಸರಕಾರಕ್ಕೆ, ಶಿಕ್ಷಣ ನೀತಿ ಆಯೋಗ ಶಿಫಾರಸು

    ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಶುಲ್ಕ ನಿಯಂತ್ರಿಸಲು ಸರ್ಕಾರ ಪ್ರತ್ಯೇಕ ಶುಲ್ಕ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಪ್ರೊ. ಸುಖದೇವ್‌ ಥೋರಟ್‌ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ ಆಯೋಗ ಶಿಫಾರಸು ಮಾಡಿದೆ.

    ಖಾಸಗಿ ಶಾಲೆಗಳ ಜತೆಗೆ, ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನೂ ನಿಯಂತ್ರಿಸಬೇಕು. ಅದಕ್ಕಾಗಿ ಪ್ರತ್ಯೇಕ ನಿಯಂತ್ರಣ ಚೌಕಟ್ಟು ರೂಪಿಸಬೇಕು. ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು. ಶಿಕ್ಷಣದ ಖಾಸಗೀಕರಣವನ್ನು ತಡೆಯಬೇಕು. ಪಠ್ಯಪುಸ್ತಕಗಳಿಗಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್‌ಸಿಇಆರ್‌ಟಿ) ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ಪಠ್ಯ ವಿಷಯಗಳನ್ನು ಸ್ಥಳೀಯವಾಗಿಸಬೇಕು. ಶಾಲಾ ಶಿಕ್ಷಣಕ್ಕೆ ಪ್ರತ್ಯೇಕವಾದ ಸಮಗ್ರ ಪಠ್ಯಪುಸ್ತಕಗಳನ್ನು ರಚಿಸಬೇಕು ಎಂದು ಹೇಳಿದೆ.

    ಎನ್‌ಇಪಿಯಲ್ಲಿ ತರಗತಿಗಳನ್ನು ಪೂರ್ವಪ್ರಾಥಮಿಕ ಒಳಗೊಂಡು 5ರವರೆಗೆ, 6ರಿಂದ 8, 9ರಿಂದ 12ನೇ ತರಗತಿ ಎಂದು ಮೂರು ಹಂತದ ವಿಂಗಡಣೆ ಮಾಡಲಾಗಿತ್ತು. ಎಸ್‌ಇಪಿ ಅದನ್ನು ಮಾರ್ಪಡಿಸಿ, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರತ್ಯೇಕಗೊಳಿಸಿದೆ. 1ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿಯನ್ನು ಎರಡು ಗುಂಪುಗಳಾಗಿ ವಿಂಗಡಿಸಿದೆ.

    ಪರಿಣಾಮಕಾರಿ ಶಿಕ್ಷಣದ ಅನುಷ್ಠಾನಕ್ಕೆ ಕ್ಷೇತ್ರ ಶಿಕ್ಷಣ ವಲಯಕ್ಕೆ ಹೆಚ್ಚು ಅಧಿಕಾರ ನೀಡಬೇಕು. ಸಮಾನಾಂತರ ವಿಭಾಗಗಳನ್ನು ಆಯುಕ್ತಾಲಯದಲ್ಲಿ ವಿಲೀನಗೊಳಿಸಬೇಕು. ಭಾರತೀಯ ಜ್ಞಾನ ವ್ಯವಸ್ಥೆ ಕೋರ್ಸ್‌ಗಾಗಿ ಸಮಿತಿ ರಚಿಸಬೇಕು. ಜೀವಮಾನ ಕಲಿಕೆ ನಿರ್ದೇಶನಾಲಯ ಸ್ಥಾಪಿಸಬೇಕು. ರಾಜ್ಯ ಬಜೆಟ್‌ನ ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ಶೇ 30ರಷ್ಟು ಮೀಸಲಿಡಬೇಕು. ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಹಣ ಮೀಸಲಿಡಬೇಕು. ಸಂವಿಧಾನ ಮೌಲ್ಯ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲೂ ಆರಂಭಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

  • ಚಿನ್ನ ಖರೀದಿಸುವ ಭರದಲ್ಲಿ, ಮಗುವನ್ನೇ ಕಳೆದುಕೊಂಡ ತಾಯಿ..! 
Complaint ಕೊಟ್ಟಾಗ ತಿಳಿದು ಬಂದದ್ದೇನು?

    ಚಿನ್ನ ಖರೀದಿಸುವ ಭರದಲ್ಲಿ, ಮಗುವನ್ನೇ ಕಳೆದುಕೊಂಡ ತಾಯಿ..! Complaint ಕೊಟ್ಟಾಗ ತಿಳಿದು ಬಂದದ್ದೇನು?

    ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದಲ್ಲಿ ಚಿನ್ನಾಭರಣ ಖರೀದಿಸುವ ಭರದಲ್ಲಿ ಉಷಾ ಎಂಬುವವರು ಅಂಗಡಿಯಲ್ಲೇ ಬಿಟ್ಟು ಹೋಗಿದ್ದ ಮಗುವನ್ನು ಸಿದ್ದಯ್ಯ ನಗರದ ಭವಾನಿ ಎಂಬುವವರು ರಕ್ಷಿಸಿ ಪೊಲೀಸ್‌ ಠಾಣೆಯಲ್ಲಿ ಮತ್ತೆ ಹಸ್ತಾಂತರಿಸಿದರು.

    ನಗರದ ಗಾಂಧಿ ಬಜಾರ್‌ನ ಮಳಿಗೆಗೆ ಬಂದಿದ್ದ ಉಷಾ, ಎರಡೂವರೆ ವರ್ಷದ ಮಗಳು ಸುಪ್ರಿಯಾಳನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಮರೆತು ನಿರ್ಗಮಿಸಿದ್ದರು. ಮಗುವು ಅಳುತ್ತಿರುವುದನ್ನು ಕಂಡ ಭವಾನಿ ಸಂತೈಸಿದರು. ಪೋಷಕರು ಪತ್ತೆಯಾಗದ್ದರಿಂದ ತಮ್ಮೊಂದಿಗೆ ಕರೆದೊಯ್ದಿದ್ದರು.

    ಮಗುವನ್ನು ಮಳಿಗೆಯಲ್ಲಿ ಮರೆತು ಬಂದಿರುವ ಸಂಗತಿಯನ್ನು ಮುಚ್ಚಿಟ್ಟ ತಾಯಿಯು, ಮಗು ಕಳುವಾಗಿದೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಡಿದಾಗ, ಮಗುವನ್ನು ಭವಾನಿ ಅವರು ಕರೆದೊಯ್ದಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಗಿತ್ತು. ಆಕೆಯೇ ಮಗುವನ್ನು ಅಪಹರಿಸಿದ್ದಾರೆಂದು ಭಾವಿಸಲಾಗಿತ್ತು.

    ಆದರೆ, ಅವರು ಮಗುವಿಗೆ ಊಟ ಮಾಡಿಸಿ, ನಂತರ ಪೊಲೀಸರಿಗೆ ಒಪ್ಪಿಸಲು ಠಾಣೆಗೆ ಬಂದರು. ಆಗ, ‘ಮಗು ಅಪಹರಣವಾಗಿಲ್ಲ. ಬದಲಿಗೆ ತಾಯಿಯೇ ಮರೆತು ಬಂದಿದ್ದಾರೆ’ ಎಂಬುದು ದೃಢವಾಯಿತು. ವಿಷಯ ಮನವರಿಕೆಯಾದ ಪೊಲೀಸರು ಮಗುವನ್ನು ತಾಯಿಯ ಸುಪರ್ದಿಗೆ ನೀಡಿದರು.

  • “ಕರ್ನಾಟಕದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಚುನಾವಣಾ ಆಯೋಗ ನೇರ ಕೈ ಜೋಡಿಸಿದೆ” 
ದಾಖಲೆ ಹಂಚಿಕೊಂಡ ರಾಹುಲ್ ಗಾಂಧಿ

    “ಕರ್ನಾಟಕದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಚುನಾವಣಾ ಆಯೋಗ ನೇರ ಕೈ ಜೋಡಿಸಿದೆ” ದಾಖಲೆ ಹಂಚಿಕೊಂಡ ರಾಹುಲ್ ಗಾಂಧಿ

    ನವದೆಹಲಿ: ಶುಕ್ರವಾರ ಬೆಂಗಳೂರಿಗೆ (Bengaluru) ಬರುವ ಮುನ್ನ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಆನ್‌ಲೈನ್ ಮೂಲಕ ದಾಖಲೆಗಳನ್ನು ಪ್ರಕಟಿಸಿದ ಅವರು, 2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರದ ದತ್ತಾಂಶಗಳನ್ನು ವಿಶ್ಲೇಷಿಸಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಅಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 16 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಅಚ್ಚರಿಯಾಗಿ ಸೋಲನ್ನು ಅನುಭವಿಸಿತು. ಹೀಗಾಗಿ ಕಡಿಮೆ ಅಂತರದಲ್ಲಿ ಸೋತ ಏಳು ಕ್ಷೇತ್ರಗಳ ಪೈಕಿ ಮಹಾದೇವಪುರ ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಈ ವೇಳೆ ಕಾಂಗ್ರೆಸ್ 1,15,586 ಮತಗಳನ್ನು ಪಡೆದರೆ, ಬಿಜೆಪಿ 2,29,632 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ಗಿಂತ ಬಿಜೆಪಿ 1,14,046 ಮತಗಳ ಬಹುಮತ ಪಡೆದುಕೊಂಡಿದೆ. ಈ ಮತಗಳಲ್ಲಿ 11,965 ನಕಲಿ ಮತದಾರರು, 40,009 ನಕಲಿ ವಿಳಾಸದ ಮತಗಳು, ಒಂದೇ ವಿಳಾಸದಲ್ಲಿ ಹತ್ತಾರು ಮತಗಳಿರುವಂತಹ 10,452 ಮತಗಳು, ಫೋಟೋ ಇಲ್ಲದಿರುವ 4,132 ಹಾಗೂ ಫಾರಂ 6 ದುರ್ಬಳಕೆಯಾದ 33,692 ಮತಗಳಿವೆ ಸ್ಫೋಟಕ ಆರೋಪ ಮಾಡಿದರು.

    ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಚುನಾವಣೆ ಸೇರಿ ಹಲವೆಡೆ ಮತಗಳ್ಳತನ ಆಗಿದೆ. ಇನ್ನೂ ಕಳೆದ ಐದು ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ. ಸಂಜೆ ಐದು ಗಂಟೆಯ ಬಳಿಕ ಅತಿ ಹೆಚ್ಚು ಮತದಾನವಾಗುತ್ತದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಿದರೆ ನಮಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಯೋಗ ನಮಗೆ ಮತದಾರರ ಪಟ್ಟಿ ನೀಡಲು ನಿರಾಕರಿಸಿದೆ. ಅದಲ್ಲದೇ ರಾಜಕೀಯ ಪಕ್ಷಗಳಿಗೂ ಕೂಡ ಮತದಾರರ ಪಟ್ಟಿ ನೀಡಿಲ್ಲ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಗ್ರಹಿಸಿದ್ದಾರೆ.

    ದೇಶದಾದ್ಯಂತ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ಪ್ರತಿಪಾದಿಸಿರುವ ರಾಹುಲ್, ಇದು ಸಂವಿಧಾನ ಹಾಗೂ ರಾಷ್ಟ್ರದ ಸಮಗ್ರತೆಯ ವಿರುದ್ಧದ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂಬುದನ್ನು ಆಯೋಗಕ್ಕೆ ನೆನಪಿಸಲು ಬಯಸುವುದಾಗಿಯೂ ಹೇಳಿದ್ದಾರೆ.

  • ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: 
ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ಬರೋಬ್ಬರಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ: ತಾಯಿಗೆ ಸಿಕ್ಕ ಸರ್ಟಿಫಿಕೇಟ್ ಏನು ಗೊತ್ತೇ..?

    ತಮಿಳುನಾಡಿನ ಮಹಿಳೆಯೊಬ್ಬರು ಸುಮಾರು 300 ಲೀಟರ್‌ ಎದೆಹಾಲನ್ನು ದಾನ ಮಾಡುವ ಮೂಲಕ ‘ಏಷ್ಯಾ ಬುಕ್ ಆಫ್ ರೆಕಾರ್ಡ್‌’ ಮತ್ತು ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ ಎರಡರಲ್ಲೂ ಸ್ಥಾನ ಪಡೆದಿದ್ದಾರೆ.

    ಎರಡು ಮಕ್ಕಳ ತಾಯಿಯಾದ ಸೆಲ್ವಾ ಬೃಂದಾ, 2023ರ ಏಪ್ರಿಲ್‌ನಿಂದ 2025ರ ಫೆಬ್ರುವರಿಯವರೆಗೆ 22 ತಿಂಗಳುಗಳಲ್ಲಿ ಒಟ್ಟು 300.17 ಲೀಟರ್‌ ಎದೆಹಾಲನ್ನು ಚಿರುಚಿರಾಪಳ್ಳಿ ಜಿಲ್ಲೆಯ ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯ (ಎಂಜಿಎಂಜಿಎಚ್‌) ಎದೆಹಾಲಿನ ಬ್ಯಾಂಕ್‌ಗೆ ದಾನ ಮಾಡಿದ್ದಾರೆ.

    ಈ ಮೂಲಕ ಅವರು ಸಾವಿರಾರು ಅಕಾಲಿಕ ಸಾವು ಮತ್ತು ಅಸ್ವಸ್ಥ ಶಿಶುಗಳ ಜೀವ ಉಳಿಸಲು ಸಹಾಯ ಮಾಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    2023-24ರ ಅವಧಿಯಲ್ಲಿ ಆಸ್ಪತ್ರೆಯ ಎದೆಹಾಲಿನ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಒಟ್ಟಾರೆ ಎದೆ ಹಾಲಿನಲ್ಲಿ ಪ್ರಮಾಣದಲ್ಲಿ ಬೃಂದಾ ಅವರ ಕೊಡುಗೆ ಅರ್ಧದಷ್ಟು ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬೃಂದಾ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಆಸ್ಪತ್ರೆಯ ಅಧಿಕಾರಿಗಳು ‘ವಿಶ್ವ ಸ್ತನ್ಯಪಾನ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿಲಿದ್ದಾರೆ.

  • ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! 
ಕಾರಣವೇನು ಗೊತ್ತೇ?

    ಮಗಳ ಕಣ್ಣೆದುರೇ ಗಂಡನನ್ನು ಕೊಂದ ತಂದೆ! ಕಾರಣವೇನು ಗೊತ್ತೇ?

    ಬಿಹಾರದ ದರ್ಭಾಂಗಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮಾವನೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಹುಲ್ ಕುಮಾರ್ ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇವರು ವ್ಯಾಸಂಗ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಅದೇ ಕಾಲೇಜಿನ ವಿದ್ಯಾರ್ಥಿನಿ ತನ್ನು ಪ್ರಿಯಾ ಅವರನ್ನು ಆಕೆಯ ಕುಟುಂಬದ ವಿರೋಧದ ನಡುವೆಯೇ ರಾಹುಲ್‌ ವಿವಾಹವಾಗಿದ್ದರು.

    ಹತ್ಯೆಯ ಬೆನ್ನಲ್ಲೇ ರಾಹುಲ್‌ನ ಸಹಪಾಠಿಗಳು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕರ್ ಝಾ ಅವರನ್ನು ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ‘ನಿನ್ನೆ ಸಂಜೆ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್‌ ಬಳಿಗೆ ಬಂದಿದ್ದರು. ಹತ್ತಿರ ಬಂದಾಗ ಅದು ನನ್ನ ತಂದೆ ಎಂದು ತಿಳಿಯಿತು. ಅವರು ಬಂದೂಕು ಹಿಡಿದುಕೊಂಡಿದ್ದರು. ನನ್ನ ಕಣ್ಣೆದುರೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು’ ಎಂದು ತನ್ನು ಪ್ರಿಯಾ ಕಣ್ಣೀರು ಸುರಿಸಿದ್ದಾರೆ.

    ‘ನನ್ನ ಇಡೀ ಕುಟುಂಬ ಈ ಪಿತೂರಿಯಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು’ ಎಂದು ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    “ರಸ್ತೆಗಿಳಿದು ಪ್ರತಿಭಟಿಸದ ಕಾರಣದಿಂದಾಗಿ ಕ್ರೈಸ್ತರ ಮೇಲೆ ದೌರ್ಜನ್ಯ” ಪ್ರತಿಭಟನೆ ವಿಡಿಯೋ

    ಛತ್ತೀಸ್‌ ಗಢದಲ್ಲಿ ಇಬ್ಬರು ಮಲಯಾಳಿ ಸನ್ಯಾಸಿನಿಯರನ್ನು ಬಂಧಿಸಲಾಗಿದ್ದು, ಇದಕ್ಕೆ ಕೇರಳದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಬಂಧನವನ್ನು ಖಂಡಿಸಿದ್ದಾರೆ. ಈ ಕುರಿತಂತೆ ಪ್ರತಿಭಟನೆಗಳು ನಡೆದಿವೆ. ಮುಖ್ಯಮಂತ್ರಿ ಪಿಣರಾಜಿ ವಿಜಯನ್, ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದು ಸಂಘ ಪರಿವಾರದ ಬೂಟಾಟಿಕೆಗಳ ಭಾಗವಾಗಿದೆ ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಹೇಳಿದ್ದಾರೆ.

    ಮಂಗಳೂರು : ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್‌ಗಢ ಸರಕಾರದ ಫ್ಯಾಸಿಸ್ಟ್ ಸರಕಾರದ ರಾಜಕಾರಣವನ್ನು ವಿರೋಧಿಸಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ನೇತೃತ್ವದಲ್ಲಿ ಸೋಮವಾರ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಧಾರ್ಮಿಕ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಫಾ. ಡೊಮಿನಿಕ್ ವಾಸ್ ಅವರು ಭಾರತದ ಕ್ರೈಸ್ತರು ಈ ಮಣ್ಣಿನ ಮಕ್ಕಳು, ದೇಶಭಕ್ತರು. ಮತಾಂಧರಲ್ಲ. ಒಂದು ಕೈಯಲ್ಲಿ ಬೈಬಲ್ ಹಿಡಿದುಕೊಂಡು ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದು ಈ ದೇಶವನ್ನು ಅಪಾರವಾಗಿ ಪ್ರೀತಿಸುವರು ಎಂದು ಹೇಳಿದರು.

  • “ಮೇಲು-ಕೀಳು ಜಾತಿ ರೂಢಿ ಪಾಲಿಸುತ್ತಿವೆ  ನ್ಯಾಯಾಲಯಗಳು”
ಮಧ್ಯಪ್ರದೇಶ ಹೈಕೋರ್ಟ್ ಹೇಳಲು ಕಾರಣವೇನು?

    “ಮೇಲು-ಕೀಳು ಜಾತಿ ರೂಢಿ ಪಾಲಿಸುತ್ತಿವೆ ನ್ಯಾಯಾಲಯಗಳು” ಮಧ್ಯಪ್ರದೇಶ ಹೈಕೋರ್ಟ್ ಹೇಳಲು ಕಾರಣವೇನು?

    ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಬಂಧವು ಊಳಿಗಮಾನ್ಯ ಪದ್ಧತಿಯ ಪ್ರಭು ಮತ್ತು ಸೇವಕರ ರೀತಿಯಲ್ಲಿ ಮೇಲು ಕೀಳು ಸೃಷ್ಟಿಸಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

    ಜಿಲ್ಲಾ ನ್ಯಾಯಾಲಯದಲ್ಲಿದ್ದ ವಿಶೇಷ ನ್ಯಾಯಾಧೀಶ (ಪರಿಶಿಷ್ಟ ಜಾತಿ/ ಪಂಗಡ) ಅವರನ್ನು ವಜಾಗೊಳಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅತುಲ್ ಶ್ರೀಧರನ್‌, ‘ಸದ್ಯ ಇರುವ ವ್ಯವಸ್ಥೆಯಲ್ಲಿ ಪರಸ್ಪರರ ನಡುವೆ ಗೌರವ ಭಾವ ಇರಬೇಕಾದ ಜಾಗದಲ್ಲಿ ಭಯ, ಅಧೀನತೆ ಮತ್ತು ಮಾನಸಿಕ ಅಧೀನತೆಗಳೇ ಆಳವಾಗಿ ಬೇರೂರಿವೆ’ ಎಂದಿದ್ದಾರೆ.

    ‘ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಶುಭಕೋರುವಾಗ ಜಿಲ್ಲಾ ನ್ಯಾಯಾಧೀಶರು ಸಂಪೂರ್ಣ ಊಳಿಗಮಾನ್ಯ ಪದ್ಧತಿಯ ಸೇವಕರಂತೆ ವರ್ತಿಸುತ್ತಾರೆ. ಅವರ ದೇಹ ಭಾಷೆಯೂ ಹಾಗೇ ಇರುತ್ತದೆ. ನ್ಯಾಯಾಧೀಶರ ಹಾವಭಾವವು ಬೆನ್ನುಮೂಳೆಯೇ ಇಲ್ಲದ ಸಸ್ತನಿಗಳ ಪ್ರಬೇಧದಂತೆ ಕಾಣಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ‘ಹೈಕೋರ್ಟ್‌ನ ನ್ಯಾಯಮೂರ್ತಿಗಳು ಬರುತ್ತಿದ್ದಾರೆ ಎಂದರೆ ಜಿಲ್ಲಾ ನ್ಯಾಯಾಧೀಶರು ರೈಲ್ವೆ ನಿಲ್ದಾಣಗಳಲ್ಲಿ ಅವರಿಗಾಗಿ ಉಪಾಹಾರ ಮತ್ತಿತರ ವಸ್ತುಗಳನ್ನು ಹಿಡಿದು ಕಾಯುವುದು ವಸಾಹತುಶಾಹಿ ವ್ಯವಸ್ಥೆ ಇಂದಿಗೂ ಬೇರೂರಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

    ‘ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಆದಾಗಲೂ ಅವರಿಗೆ ಆಸನವನ್ನು ನೀಡಲಾಗುವುದಿಲ್ಲ. ಒಂದೊಮ್ಮೆ ಆಸನ ನೀಡಿದರೂ ಅವರು ಕೂರಲು ಹಿಂಜರಿಯುತ್ತಾರೆ. ಇದು ವ್ಯವಸ್ಥಿತ ಅಸಮಾನತೆಯ ಸಂಪೂರ್ಣ ಮಾನಸಿಕ ದಾಸ್ಯದಂತೆ ಕಾಣಿಸುತ್ತದೆ. ಹೈಕೋರ್ಟ್ ಎಲ್ಲಿ ಅಸಮಾಧಾನಗೊಳ್ಳುತ್ತದೋ ಎಂಬ ಭಯದಲ್ಲೇ ಜಿಲ್ಲಾ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ’ ಎಂದು ನ್ಯಾ. ಶ್ರೀಧರನ್ ಆತಂಕ ವ್ಯಕ್ತಪಡಿಸಿದ್ದಾರೆ.
    ‘ಈ ಭಯವು ನ್ಯಾಯದ ಅಡಿಪಾಯದೊಂದಿಗೆ ರಾಜಿ ಮಾಡಿಕೊಳ್ಳಲು ನೂಕುತ್ತದೆ. ಹೀಗಾಗಿ ಅರ್ಹ ಪ್ರಕರಣಗಳಲ್ಲೂ ಜಾಮೀನು ನಿರಾಕರಿಸುವುದು, ಸಾಕಷ್ಟು ಸಾಕ್ಷಿಗಳಿಲ್ಲದಿದ್ದರೂ ದೋಷಾರೋಪಣೆ ದಾಖಲಿಸುವುದು ಮತ್ತು ಮೇಲಿನ ನ್ಯಾಯಾಲಯಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಾವನೆಯಿಂದ ಆರೋಪಿಗಳನ್ನು ಬಿಡುಗಡೆ ಮಾಡುವುದನ್ನು ಜಿಲ್ಲಾ ನ್ಯಾಯಾಲಯ ತಪ್ಪಿಸುತ್ತದೆ ಎಂಬುದನ್ನೂ ಕೆಲ ಆದೇಶಗಳಲ್ಲಿ ಗಮನಿಸಬಹುದು’ ಎಂದಿದ್ದಾರೆ.

    ‘ಇವು ಶ್ರೇಣೀಕೃತ ವ್ಯವಸ್ಥೆಗಷ್ಟೇ ಸೀಮಿತವಾಗದೆ, ಜಾತಿ ವ್ಯವಸ್ಥೆಯನ್ನೂ ರೂಪಕವಾಗಿ ಉಲ್ಲೇಖಿಸಿವೆ. ಒಂದು ಸೂಕ್ಷ್ಮ ಮಟ್ಟದಲ್ಲಿ ಜಾತಿ ವ್ಯವಸ್ಥೆಯ ನೆರಳು ರಾಜ್ಯದ ನ್ಯಾಯಾಂಗ ರಚನೆಯಲ್ಲಿ ಕಾಣಬಹುದು. ಇಲ್ಲಿ ಹೈಕೋರ್ಟ್‌ ಸವರ್ಣೀಯರಂತೆ ಹಾಗೂ ಜಿಲ್ಲಾ ನ್ಯಾಯಾಲಯ ಶೂದ್ರರಂತೆ ಗೋಚರಿಸುತ್ತದೆ’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

    ‘ಯಾವುದೇ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಸ್ವಾತಂತ್ರ್ಯವು ಸಾಮಾನ್ಯ ಜನರು ತಲುಪಲು ಸಾಧ್ಯವಾಗದ ಹೈಕೋರ್ಟ್‌ಗಿಂತ ನ್ಯಾಯಾಂಗ ವ್ಯವಸ್ಥೆಯ ಮೊದಲ ಹಂತವಾದ ಜಿಲ್ಲಾ ನ್ಯಾಯಾಲಯದ ನಿರ್ಭೀತಿ ವಾತಾವರಣದಲ್ಲಿರುತ್ತದೆ’
    ನ್ಯಾ. ಅತುಲ್ ಶ್ರೀಧರನ್, ನ್ಯಾಯಮೂರ್ತಿ, ಮಧ್ಯಪ್ರದೇಶ ಹೈಕೋರ್ಟ್

    ಭಯದ ವಾತಾವರಣದಿಂದ ನ್ಯಾಯಾಧೀಶರಲ್ಲಿ ಖಿನ್ನತೆಯ ಭಾವ:

    ‘ವ್ಯವಸ್ಥೆಯಲ್ಲಿನ ಈ ಭಯದ ಪರಿಣಾಮವು ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರ ಮನಸ್ಸಿನಲ್ಲಿ ಖಿನ್ನತೆಯ ಭಾವ ಹೆಚ್ಚಿಸುತ್ತಿದೆ. ಇದು ಅಂತಿಮವಾಗಿ ನ್ಯಾಯಾಂಗದ ಕಾರ್ಯವಿಧಾನ ಮತ್ತು ಕಾನೂನಿನ ನಿಯಮಗಳಿಗೇ ಬೆದರಿಕೆಯೊಡ್ಡುತ್ತಿದೆ’ ಎಂದು ಹೇಳಿದ್ದಾರೆ.

    ‘ಅಪಾಯಕಾರಿಯಲ್ಲದ ಬಹಳಷ್ಟು ತಪ್ಪುಗಳನ್ನು ನಿಂದಿಸಲು ಸದಾ ಸಿದ್ಧವಿರುವ ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳನ್ನು ಸದಾ ಭಯದಲ್ಲೇ ಇರಿಸುತ್ತದೆ. ಹೀಗಾಗಿ ಶಿಕ್ಷೆಯ ಭಯದಲ್ಲೇ ಅವರು ಕಾರ್ಯ ನಿರ್ವಹಿಸುವಂತಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೂ ಕುಟುಂಬವಿದೆ. ಮಕ್ಕಳಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ಪಾಲಕರು ಇರುತ್ತಾರೆ, ಆರ್ಥಿಕ ಜವಾಬ್ದಾರಿಗಳಿರುತ್ತವೆ. ಒಂದು ಆದೇಶಕ್ಕಾಗಿ ಅವರನ್ನು ಹಠಾತ್ತಾಗಿ ವಜಾಗೊಳಿಸಿದರೆ ಅವರು ಮತ್ತು ಅವರ ಕುಟುಂಬವನ್ನು ಬೀದಿಗೆ ನೂಕಿದಂತಾಗಲಿದೆ. ಅಷ್ಟು ಮಾತ್ರವಲ್ಲ, ಅವರ ಪ್ರಾಮಾಣಿಕತೆಯನ್ನೇ ಸಮಾಜ ಪ್ರಶ್ನಿಸುವಂತೆ ಮಾಡಿದಂತಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ಇಂಥ ಭಯದಲ್ಲೇ ಸದಾ ಕಾರ್ಯನಿರ್ವಹಿಸುವ ನ್ಯಾಯಾಂಗದಿಂದ ನ್ಯಾಯವನ್ನು ನಿರ್ವಹಿಸುವದನ್ನು ಬಿಟ್ಟರೆ, ನ್ಯಾಯದಾನ ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅಧಿಕಾರ ಸಮತೋಲನವನ್ನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನ್ಯಾ. ಶ್ರೀಧರನ್ ಹೇಳಿದ್ದಾರೆ.

    ಹೈ ಕೋರ್ಟಿನ ಹೇಳಿಕೆಗೆ ಕಾರಣವಾದ ಪ್ರಕರಣ ಹೀಗಿದೆ:

    ವ್ಯಾಪಂ ಪ್ರಕರಣದಲ್ಲಿ ಕೆಲ ಜಾಮೀನುಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, 2015ರ ಅ. 19ರಂದು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. 28 ವರ್ಷಗಳ ವೃತ್ತಿ ಜೀವನದಲ್ಲಿ ಕಳಂಕವಿಲ್ಲದ ದಾಖಲೆ ಇದ್ದರೂ ಕೆಲ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಆಧರಿಸಿ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಅವರ ನ್ಯಾಯಾಂಗ ವಿವೇಚನೆಯೊಂದಿಗೆ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳಿಂದ ವಜಾಗೊಳಿಸಿರುವುದು ನ್ಯಾಯಾಂಗ ವ್ಯವಸ್ಥೆಗೇ ಧಕ್ಕೆಯನ್ನುಂಟು ಮಾಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

    ಅಪ್ರಾಮಾಣಿಕತೆ ಅಥವಾ ಭ್ರಷ್ಟಾಚಾರದ ಪುರಾವೆ ಇಲ್ಲದಿದ್ದರೆ ನ್ಯಾಯಾಂಗ ಆದೇಶಗಳು ಶಿಸ್ತು ಕ್ರಮಕ್ಕೆ ಆಧಾರವಾಗುವುದಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ನ್ಯಾಯಾಧೀಶರ ವಿರುದ್ಧದ ವಜಾ ಆದೇಶವನ್ನು ಪೀಠ ವಜಾಗೊಳಿಸಿತು. ಅವರಿಗೆ ಸಿಗಬೇಕಾದ ಎಲ್ಲಾ ನಿವೃತ್ತಿ ಪ್ರಯೋಜನಗಳು, ಬಡ್ಡಿಯೊಂದಿಗೆ ಬಾಕಿ ವೇತನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಪೀಠ ಆದೇಶಿಸಿತು. ಅವರ ವಿರುದ್ಧದ ಕಾನೂನುಬಾಹಿರ ಕ್ರಮ, ಅವಮಾನ ಮತ್ತು ಆಘಾತಕ್ಕಾಗಿ ₹5 ಲಕ್ಷ ಪರಿಹಾರ ನೀಡುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿದೆ.

  • ಪ್ರವಾಹದಿಂದ ರಸ್ತೆಗೆ ಹರಿದು ಬಂತು 12 ಕೋಟಿಯ ಬಂಗಾರ: 
ಚಿನ್ನ ಹೆಕ್ಕುವರನ್ನು ನೋಡೋದೇ ಚೆನ್ನ..!

    ಪ್ರವಾಹದಿಂದ ರಸ್ತೆಗೆ ಹರಿದು ಬಂತು 12 ಕೋಟಿಯ ಬಂಗಾರ: ಚಿನ್ನ ಹೆಕ್ಕುವರನ್ನು ನೋಡೋದೇ ಚೆನ್ನ..!

    ಒಂದು ಆಭರಣ ಅಂಗಡಿಯಿಂದ 20 ಕಿಲೋಗ್ರಾಂ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ! ಅಂದ್ರೆ ನೀವೇನು ಮಾಡುತ್ತೀರಿ. ಹೌದು, ನೀವು ಯೋಚಿಸಿದಂತೆಯೇ ಇಲ್ಲಿಯೂ ಆಗಿದೆ. ಜನರು ಆಭರಣಗಳನ್ನು ಹುಡುಕಲು ಧಾವಿಸಿದ್ದಾರೆ , ನಾವು ಈ ಚಿನ್ನದ ಹಿಂದಿನ ಕಥೆಯನ್ನು ಅಗೆದು, ಬಗೆಯೋಣ ಬನ್ನಿ.

    ಇದು ಚೀನಾದಿಂದ ಬಂದ ವರದಿ, ಜುಲೈ 25, ರಂದು, ಶಾಂಕ್ಸಿ ಪ್ರಾಂತ್ಯದ ವುಕಿ ಕೌಂಟಿಯಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಹಠಾತ್ ಪ್ರವಾಹವು ಲಾವೊಫೆಂಗ್‌ಕ್ಸಿಯಾಂಗ್ ಎಂಬ ಆಭರಣ ಅಂಗಡಿಯನ್ನು ಕಬಳಿಸಿತು. ಕೇವಲ ಕೆಲವೇ ನಿಮಿಷಗಳಲ್ಲಿ, ಒಂದು ಮೀಟರ್‌ಗಿಂತಲೂ ಎತ್ತರದ ನೀರು ಅಂಗಡಿಯೊಳಗೆ ನುಗ್ಗಿ, ಚಿನ್ನದ ಹಾರಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ವಜ್ರದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳಿಂದ ಕೂಡಿದ ಕ್ಯಾಬಿನೆಟ್‌ ಕೊಚ್ಚಿಕೊಂಡು ಹೋಯಿತು. ಇದರ ಜೊತೆಗೆ, ದೊಡ್ಡ ಪ್ರಮಾಣದ ನಗದು ಮತ್ತು ಮರುಬಳಕೆಯ ಚಿನ್ನ ಇದ್ದ ತಿಜೋರಿಯೂ ಕಾಣೆಯಾಗಿದೆ. ಒಟ್ಟು ನಷ್ಟ? 12 ಕೋಟಿ ರೂಪಾಯಿಗಿಂತಲೂ ಹೆಚ್ಚು.

    ದೃಶ್ಯ: ಸ್ಥಳೀಯರು ಕೈಯಿಂದ ಮಣ್ಣು ಅಗೆಯುವುದು, ಲೋಹ ಶೋಧಕಗಳನ್ನು ಬಳಸುವ ದೃಶ್ಯಗಳು

    ಈ ಸುದ್ದಿ ಹರಡಿದ ಕೂಡಲೇ, ಸ್ಥಳೀಯರಲ್ಲಿ ಒಂದು ರೀತಿಯ “ಗೋಲ್ಡ್ ರಶ್” ಶುರುವಾಯಿತು! ಜನರು ಕಾಣೆಯಾದ ಆಭರಣಗಳನ್ನು ಹುಡುಕಲು ಧಾವಿಸಿದರು. ಕೆಲವರು ಕೈಯಿಂದ ಮಣ್ಣು ಅಗೆದರೆ, ಲೋಹ ಶೋಧಕಗಳನ್ನು ತಂದು ಚಿನ್ನ ಹುಡುಕಿದವರೂ ಇದ್ದಾರೆ.. ಈ ದೃಶ್ಯಗಳು ವೈರಲ್ ಆಗಿವೆ, ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಅಂಗಡಿಯವನಿಗೆ ಸಿಕ್ಕಿದ್ದು ಕೇವಲ 1 ಕಿಲೋಗ್ರಾಂ ಆಭರಣಗಳು ಮಾತ್ರ ಆದರೆ, ತಿಜೋರಿ ಇನ್ನೂ ಒಂದು ರಹಸ್ಯವಾಗಿಯೇ ಉಳಿದಿದೆ!

    ದೃಶ್ಯ: ಅಂಗಡಿ ಮಾಲೀಕ ಕ್ಸಿಯಾವೋಯ್ ಮಾತನಾಡುವ ಕ್ಲಿಪ್, ಜನರಿಗೆ ಮನವಿ ಮಾಡುವ ದೃಶ್ಯ

    ಅಂಗಡಿಯ ಮಾಲೀಕ ಕ್ಸಿಯಾವೋಯ್ ಆಭರಣಗಳನ್ನು ಹಿಂತಿರುಗಿಸಿದವರಿಗೆ ಬಹುಮಾನ ಘೋಷಿಸಿದ್ದಾರೆ, ಆದರೆ ಕೆಲವರು ಉದ್ದೇಶಪೂರ್ವಕವಾಗಿ ವಸ್ತುಗಳನ್ನು ಇಟ್ಟುಕೊಂಡರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಇಲ್ಲಿ ಒಂದು ದೊಡ್ಡ ತೊಡಕು ಇದೆ – ಅಂಗಡಿಯ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಮತ್ತು ಪ್ರವಾಹದ ಸಮಯದಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಇದರಿಂದ ತನಿಖೆಗೆ ದೊಡ್ಡ ಸವಾಲು ಎದುರಾಗಿದೆ.

    ಪ್ರವಾಹದ ಪ್ರಭಾವ ಒಂದು ಅಂಗಡಿಯ ನಷ್ಟಕ್ಕೆ ಸೀಮಿತವಾಗಿಲ್ಲ. ಶಾಂಕ್ಸಿ ಮತ್ತು ಹೆಬೈ ಪ್ರಾಂತ್ಯಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿವೆ, ಇದರಿಂದ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ. ಈ ಆಭರಣ ಅಂಗಡಿಯ ಕಥೆ, ತೀವ್ರ ಹವಾಮಾನದಿಂದ ಸ್ಥಳೀಯ ವ್ಯವಹಾರಗಳ ಮೇಲೆ ಆಗಿರುವ ಆರ್ಥಿಕ ಆಘಾತವನ್ನು ಎತ್ತಿ ತೋರಿಸುತ್ತದೆ.

    ಆಭರಣಗಳು ಎಲ್ಲಿಗೆ ಕೊಚ್ಚಿಹೋದವು?

    ತಿಜೋರಿಯ ರಹಸ್ಯ ಯಾವಾಗ ಬಿಚ್ಚಿಕೊಳ್ಳಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಾಯುತ್ತಾ, ಸ್ಥಳೀಯರು ಮತ್ತು ಅಧಿಕಾರಿಗಳು ತಮ್ಮ ಹುಡುಕಾಟವನ್ನು ಮುಂದುವರೆಸಿದ್ದಾರೆ.

  • ಧರ್ಮಸ್ಥಳ: 6ನೇ ಜಾಗದಲ್ಲಿ ಮೃತದೇಹದ ಕುರುಹು ಪತ್ತೆ

    ಧರ್ಮಸ್ಥಳ: 6ನೇ ಜಾಗದಲ್ಲಿ ಮೃತದೇಹದ ಕುರುಹು ಪತ್ತೆ

    ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳ ಸಂಬಂಧ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿದ ಆರನೇ ಜಾಗದಲ್ಲಿ ಗುರುವಾರ ಮೃತದೇಹದ ಕುರುಹು ಪತ್ತೆಯಾಗಿದೆ.

    ‘ಮೃತದೇಹದ ಕುರುಹು ಸಿಕ್ಕಿದೆ.‌ಅದು ಗಂಡಸಿನ ಮೃತದೇಹದ ಅವಶೇಷದಂತಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

    ವಿಧಿವಿಜ್ಞಾನ ತಜ್ಞರ ತಂಡವು ಸ್ಥಳದಲ್ಲೇ ಇದ್ದು, ಮೃತದೇಹದ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ.

  • ‘ನಿಸಾರ್’ ಉಪಗ್ರಹ ಉಡಾಯಿಸಲಿರುವ ಇಸ್ರೋ: 
ನಾಸಾ-ಇಸ್ರೋ ಜಂಟಿ ಕಾರ್ಯಾಚರಣೆ

    ‘ನಿಸಾರ್’ ಉಪಗ್ರಹ ಉಡಾಯಿಸಲಿರುವ ಇಸ್ರೋ: ನಾಸಾ-ಇಸ್ರೋ ಜಂಟಿ ಕಾರ್ಯಾಚರಣೆ

    ಬೆಂಗಳೂರು: ಇಸ್ರೋ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಜಂಟಿ ಕಾರ್ಯಾಚರಣೆಯಾದ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’ (ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್) ಬುಧವಾರ ಉಡಾವಣೆಗೊಳ್ಳಲಿದೆ.

    ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಪ್ಯಾಡ್‌ನಿಂದ ನಿಸಾರ್ ಸಂಜೆ 5.40 ಕ್ಕೆ GSLV-F-16 ರಾಕೆಟ್ ಮೂಲಕ ಉಡಾವಣೆಗೊಳ್ಳಲಿದೆ. ಇದು ಇಸ್ರೋ ಮತ್ತು ನಾಸಾದ ಮೊದಲ ಜಂಟಿ ಕಾರ್ಯಾಚರಣೆಯಾಗಿದೆ. ಭೂಮಿಯಿಂದ 743 ಕಿ.ಮೀ ದೂರದಲ್ಲಿರುವ ಸೂರ್ಯ-ಸ್ಥಾಯಿ ಕಕ್ಷೆಯಲ್ಲಿ ಪ್ರಯಾಣಿಸುವುದು ಮತ್ತು ಭೂಮಿಯ ಮೇಲ್ಮೈಯಲ್ಲಿನ ಸಣ್ಣ ಬದಲಾವಣೆಗಳನ್ನು ಸಹ ಗಮನಿಸುವುದು ಇದರ ಉದ್ದೇಶವಾಗಿದೆ.

    ಈ ಉಪಗ್ರಹವು 12 ದಿನಗಳ ಮಧ್ಯಂತರದಲ್ಲಿ ಭೂಮಿಯ ಪ್ರತಿಯೊಂದು ಪ್ರದೇಶದ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯು ನಾಸಾ ಮತ್ತು ರಾಷ್ಟ್ರೀಯ ದೂರಸ್ಥ ಸಂವೇದಿ ಕೇಂದ್ರದ (NRSC) ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಿರುತ್ತದೆ.

    2,392 ಕೆಜಿ ತೂಕದ NISAR, ನಾಸಾ ಮತ್ತು ಇಸ್ರೋ ಅಭಿವೃದ್ಧಿಪಡಿಸಿದ ವಿಭಿನ್ನ ಆವರ್ತನಗಳಲ್ಲಿ ಕಾರ್ಯನಿರ್ವಹಿಸುವ ಎರಡು ರಾಡಾರ್‌ಗಳನ್ನು ಹೊಂದಿದೆ. ಇದು ನೈಸರ್ಗಿಕ ವಿಕೋಪಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ಕಾರಣಗಳನ್ನು ನಿರ್ಣಯಿಸಲು ಮಾಹಿತಿಯನ್ನು ಒದಗಿಸುತ್ತದೆ. ವೀಕ್ಷಣಾ ದತ್ತಾಂಶವು ಎರಡು ಮೂರು ದಿನಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ.

    ಇಸ್ರೋದ ಮುಂದಿನ ಯೋಜನೆ:

    ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ ಬಾಹ್ಯಾಕಾಶ ನೌಕೆಯಲ್ಲಿ ಮೂರು ಪ್ರವಾಸಿಗರನ್ನು ಕರೆದೊಯ್ಯುವ ಗಗನಯಾನ ಕಾರ್ಯಾಚರಣೆಯ ಪ್ರಮುಖ ಉಡಾವಣೆಗಳಲ್ಲಿ ಒಂದು ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಘೋಷಿಸಿದರು. ಮಾನವರಹಿತ ಸಿಬ್ಬಂದಿ ಮಾಡ್ಯೂಲ್ ಅನ್ನು ಕಕ್ಷೆಗೆ ಸೇರಿಸಲಾಗುತ್ತದೆ. ಈ ಕಾರ್ಯಾಚರಣೆಯು ವ್ಯೋಮಿತ್ರ ಎಂಬ ರೋಬೋಟ್ ಅನ್ನು ಸಹ ಹೊತ್ತೊಯ್ಯುತ್ತದೆ. ಇದರ ನಂತರ, ಇನ್ನೂ ಎರಡು ಮಾನವರಹಿತ ಉಡಾವಣೆಗಳನ್ನು ಕೈಗೊಳ್ಳಲಾಗುವುದು ಮತ್ತು ಮಾನವರೊಂದಿಗೆ ಬಾಹ್ಯಾಕಾಶ ಹಾರಾಟವು ಮಾರ್ಚ್ 2027 ರಲ್ಲಿ ನಡೆಯಲಿದೆ.