Category: ಸಾಮಾಜಿಕ

  • “ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” 
ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

    “ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

    ವಿರಾಜಪೇಟೆ: “ಒಂದು ಪತ್ರಿಕೆಯು ತನ್ನ ಒಳಗಿನ ಗುಣಮಟ್ಟದ ಹೂರಣದಿಂದ ಮಾತ್ರ ಸಮಾಜಕ್ಕೆ ಅಗಾಧವಾದ ಸತ್ವವನ್ನು ನೀಡಲು ಸಾಧ್ಯ. ಕಳೆದ 25 ವರ್ಷಗಳಿಂದ ‘ಅನುಪಮ’ ಪತ್ರಿಕೆಯು ಹೆಣ್ಣುಮಕ್ಕಳ ಸೂಕ್ಷ್ಮ ಸಂವೇದನೆಗಳಿಗೆ ರೆಕ್ಕೆ ಕಟ್ಟಿ, ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಹತ್ತರ ಕಾರ್ಯ ಮಾಡುತ್ತಿದೆ” ಎಂದು ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

    ವಿರಾಜಪೇಟೆಯ ಬ್ರೈಟ್ ಪಬ್ಲಿಕ್ ಸ್ಕೂಲ್‌ನಲ್ಲಿ ದಿನಾಂಕ 11-02-2026ರ ಬುಧವಾರದಂದು ಜರುಗಿದ ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿಹಬ್ಬದ ಸಂಭ್ರಮ ಮತ್ತು ಓದುಗರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಅವರು, “ಸಮಾಜವನ್ನು ಮುನ್ನಡೆಸುವ ಅಪ್ರತಿಮ ಶಕ್ತಿ ತಾಯಂದಿರಿಗಿದೆ; ಈ ಮಣ್ಣಿನ ತಾಯಂದಿರು ಸಾತ್ವಿಕವಾದ ಆಲೋಚನೆ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮೃದ್ಧವಾದ ಸಮಾಜ ನಿರ್ಮಾಣ ಸಾಧ್ಯ” ಎಂದು ತಿಳಿಸಿದರು.

    “ಇಂದಿನ ರೀಲ್ಸ್ ಹಾಗೂ ಇಂಟರ್ನೆಟ್ ಲೋಕದಲ್ಲಿ ಮನೋವಿಕಾರಗಳೇ ಹೆಚ್ಚಾಗುತ್ತಿದ್ದು, ಇವುಗಳ ನಡುವೆ ಮಕ್ಕಳ ಮಾನಸಿಕತೆಯನ್ನು ಅರಿತು ಓದುಗರಲ್ಲಿ ಸಾತ್ವಿಕ ಭಾವನೆ ಮೂಡಿಸುವ ಕೆಲಸಕ್ಕೆ ನಿರಂತರ ಅಧ್ಯಯನಶೀಲತೆ ಅಗತ್ಯ” ಎಂದು ಸ್ವಾಮೀಜಿಯವರು ಮಾರ್ಗದರ್ಶನ ನೀಡಿದರು. “ಬದುಕಿನಲ್ಲಿ ‘ಕೇವಲ ಹಣ ಗಳಿಕೆಯೊಂದೇ ಮುಖ್ಯವಲ್ಲ, ಉತ್ತಮ ಆಲೋಚನೆಗಳು ಮುಖ್ಯ’ ಎಂಬ ಸಂದೇಶವನ್ನು ನೀಡುತ್ತಿರುವ ಅನುಪಮ ಪತ್ರಿಕೆಯು ಕೇವಲ ಓದಿನ ವಸ್ತುವಾಗದೆ ಪ್ರತಿಯೊಬ್ಬರ ಜೀವನದ ಹೃದಯದಲ್ಲಿ ಸ್ಥಾನ ಪಡೆಯಬೇಕು” ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಅವರು ಮಾತನಾಡಿ, “ಒಂದು ಮಹಿಳಾ ಪತ್ರಿಕೆಯನ್ನು ಯಾವುದೇ ಅಡೆತಡೆಗಳಿಗೆ ಬಗ್ಗದೆ ಇಷ್ಟು ವರ್ಷಗಳ ಕಾಲ ನಿರಂತರವಾಗಿ ನಡೆಸುವುದು ಒಂದು ಸಂಕಲ್ಪದ ಸುದೀರ್ಘ ಪಯಣ” ಎಂದು ಶ್ಲಾಘಿಸಿದರು.

    ವಕೀಲರಾದ ಸಿಂಧೂರ ಎನ್. ಸ್ವಾಮಿ ಅವರು ಮಾತನಾಡಿ, “ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆಯಲ್ಲಿ ‘ಕಾನೂನು ಅರಿವು’ ಮೂಡಿಸುವ ಲೇಖನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಇದು ಶೋಷಣೆ ಮುಕ್ತ ಬದುಕಿಗೆ ದಾರಿಯಾಗಬೇಕು” ಎಂದು ಸಲಹೆ ನೀಡಿದರು.

    ಪತ್ರಿಕೆಯ ಪ್ರಧಾನ ಸಂಪಾದಕಿ ಶಹನಾಝ್ ಎಂ. ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಅನುಪಮ ಪತ್ರಿಕೆಯು ಕಳೆದ 25 ವರ್ಷಗಳಿಂದ ನಡೆದು ಬಂದ ಸುದೀರ್ಘ ಹಾದಿಯನ್ನು ಸ್ಮರಿಸಿದರು. “ಒಂದು ಪತ್ರಿಕೆಗೆ ಓದುಗರೇ ನಿಜವಾದ ಬಂಡವಾಳ, ನಿಮ್ಮ ಬೆಂಬಲವೇ ನಮ್ಮ ಯಶಸ್ಸು” ಎಂದು ಅವರು ಕೃತಜ್ಞತೆ ಸಲ್ಲಿಸಿದರು.

    ವಿಶೇಷವಾಗಿ ನಾಲ್ವರು ಓದುಗರಾದ ಶ್ರೀಮತಿ ಜಯಶ್ರೀ ಶ್ರೀಮತಿ ಪುಷ್ಪ, ಶಿವರಾಂ ಮತ್ತು ಗುಲ್ನಾರ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು

    ಕಾರ್ಯಕ್ರಮವು ರಹಮತ್ ಟಿ.ಪಿ. ಅವರ ಕುರಾನ್ ಪಠಣದೊಂದಿಗೆ ಆರಂಭವಾಯಿತು. ನಂತರ ಮುಹೀನಾ ಮುಹಮ್ಮದ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಸಮಾರಂಭದ ವೇದಿಕೆಯಲ್ಲಿ ಲೇಖಕಿ ಸಾಜಿದಾ ಮೂಮಿನ್ ಉಪಸ್ಥಿತರಿದ್ದರು. ಪತ್ರಿಕೆಯ ಉಪಸಂಪಾದಕಿ ಸಮೀನಾ ಯು. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮೀರಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಅಬ್ದುಲ್ ರಹಮಾನ್ ಅವರು ಧನ್ಯವಾದ ಸಮರ್ಪಿಸಿದರು.

  • ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ

    ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ

    ಧಾರವಾಡ: ಅನುಪಮ ಮಹಿಳಾ ಮಾಸಿಕಕ್ಕೆ 25 ವರ್ಷ ಪೂರ್ಣಗೊಂಡ ಈ ಸುಸಂದರ್ಭದಲ್ಲಿ ಅನುಪಮ ಓದುಗರಿಂದ ಧಾರವಾಡದಲ್ಲಿ 25ನೇ ರಜತ ಮಹೋತ್ಸವ ಆಚರಣೆ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಮಾಡಲಾಯಿತು.

    ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ರಂಗಾಯಣದಲ್ಲಿ ಫೆಬ್ರವರಿ 7ಕ್ಕೆ ಕಾರ್ಯಕ್ರಮ ನಡೆಯಿತು.

    ಮುಖ್ಯ ಅತಿಥಿಗಳು:

    ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಹಲಗತ್ತಿ, ಸ್ನೇಹ ಶಿಕ್ಷಣ & ಅಭಿವೃದ್ಧಿ ಸಂಸ್ಥೆಯ ಯೋಜನಾ ಸಂಯೋಜಕಿ ಶ್ರೀಮತಿ ನಾಗರತ್ನ ಎಸ್. ಜಡೇದ, ಪರಿಸರ ರಕ್ಷಣೆ ಮತ್ತು ಸಾಮಾಜಿಕ ಕಾರ್ಯಕರ್ತೆ ಡಾ| ಪೂರ್ಣಿಮಾ ಗೌರೋಜಿ ಹಾಗೂ ಶಿಕ್ಷಕಿ ಶ್ರೀಮತಿ ಶೋಭಾ ಶಿರಿಯಣ್ಣವ‌ರ್ ಭಾಗವಹಿಸಿದ್ದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಪಮ ಉಪಸಂಪಾದಕಿ ಶ್ರೀಮತಿ ಕುಲ್ಸೂಮ್ ಅಬೂಬಕ್ಕರ್ ವಹಿಸಿದ್ದರು.

    ವಿಶೇಷ ಸಂಚಿಕೆ ಬಿಡುಗಡೆ:

    ಕಾರ್ಯಕ್ರಮದ ಪ್ರಾರಂಭದಲ್ಲಿ ರಜತ ಮಹೋತ್ಸವದ ನೆನಪಿಗಾಗಿ ಸಿದ್ಧಪಡಿಸಲಾದ ಅನುಪಮ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು

    ಮುಖ್ಯ ಅತಿಥಿಗಳ ನಲ್ನುಡಿಗಳು :

    ಮುಖ್ಯ ಅತಿಥಿ ​ಶ್ರೀ ಶಂಕರ ಹಲಗತ್ತಿ ಮಾತನಾಡಿ “ಮಾನವ ಸಂಬಂಧಗಳನ್ನು ಬೆಸೆಯುವಲ್ಲಿ ಭಾಷೆಯು ಒಂದು ಪ್ರಬಲ ಮಾಧ್ಯಮ” ಎಂದು ಅಭಿಪ್ರಾಯಪಟ್ಟರು.

    ​ಶ್ರೀಮತಿ ನಾಗರತ್ನ ಎಸ್. ಜಡೇದ: “ಹೆಣ್ಣಿನ ಸಬಲೀಕರಣಕ್ಕೆ ಶಿಕ್ಷಣವೇ ಮೂಲಾಧಾರ. ಹೆಣ್ಣಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ” ಎಂದು ಸ್ತ್ರೀಶಕ್ತಿಯ ಮಹತ್ವವನ್ನು ಸಾರಿದರು.

    ಶ್ರೀಮತಿ ಶೋಭಾ ಶಿರಯಣ್ಣನವರ್ ಅನುಪಮ ಪತ್ರಿಕೆಯ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, “ಇದು ಕೇವಲ ಬರವಣಿಗೆಯಲ್ಲ, ಜೀವನದ ಹಾದಿಯನ್ನು ಸುಗಮಗೊಳಿಸುವ ಮಾರ್ಗದರ್ಶಿ” ಎಂದು ಶ್ಲಾಘಿಸಿದರು.

    ಶ್ರೀಮತಿ ಪೂರ್ಣಿಮಾ ಗೌರೋಜಿ, ಪತ್ರಿಕೆಯ ಸಾಧನೆಯನ್ನು ಪ್ರಶಂಸಿಸಿ, “ಮುಂದಿನ ದಿನಗಳಲ್ಲಿ ಪತ್ರಿಕೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಶುಭ ಹಾರೈಸಿದರು.

    ಇನ್ಸ್‌ಪೆಕ್ಟ‌ರ್ ಎಂ.ಎಂ. ತಹಶೀಲ್ದಾರ್ ಅವರು ಮಾತನಾಡಿ, “ಪ್ರತಿಯೊಂದು ಕಾರ್ಯದಲ್ಲೂ ಶ್ರದ್ಧೆ ಇದ್ದಾಗ ಅದು ಪೂಜನೀಯವಾಗುತ್ತದೆ” ಎಂದರು.

    ಅಧ್ಯಕ್ಷೀಯ ನುಡಿ:

    ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಕುಲ್ಸೂಮ್ ಅಬೂಬಕರ್ ಅವರು ಮಾತನಾಡಿ, “ಓದುವ ಹವ್ಯಾಸವು ಮನೆಯಿಂದಲೇ ಆರಂಭವಾಗಬೇಕು. ಪಾಲಕರು ಓದಿದರೆ ಮಕ್ಕಳು ಅದನ್ನು ಅನುಕರಿಸಿ ಬೆಳೆಸಿಕೊಳ್ಳುತ್ತಾರೆ. ಭಗವಂತ ನೀಡಿದ ಈ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು” ಎಂದು ಕರೆ ನೀಡಿದರು.

    ಸಾಧನೆಗೈದ ಗಣ್ಯರಿಗೆ ಸನ್ಮಾನ:

    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.

    UNO Awardee ಶ್ರೀಮತಿ ಬೀಬಿಜಾನ್ ಮೌಲಾಸಾಬ ಹಳೆಮನಿ

    Human Right Activist & Educationist ಮಿಸ್ ಲಿನ್ನೆಟ್ ಡಿಸಿಲ್ವಾ,

    ರಾಷ್ಟ್ರಪತಿ ಪದಕ ಪಡೆದ ವಿದ್ಯಾಗಿರಿ ಪೊಲೀಸ್ ಸ್ಟೇಷನ್ ಇನ್ಸ್‌ಪೆಕ್ಟ‌ರ್ ಶ್ರೀ ಎಂ.ಎಂ. ತಹಶೀಲ್ದಾರ

    ವಕೀಲರು ಹಾಗೂ ಮಹಿಳಾ ಹೋರಾಟಗಾರರಾದ ಶ್ರೀಮತಿ ಪ್ರಭಾವತಿ ದೇಸಾಯಿ

    ಸನ್ಮಾನಿತರಾದ ಗಣ್ಯರು:

    ಕಾರ್ಯಕ್ರಮ ಸಂಚಾಲಕತ್ವವನ್ನು ಜಮಾಅತೆ ಇಸ್ಲಾಮೀ ಹಿಂದ್ ಧಾರವಾಡ ಶಾಖೆ ಅಧ್ಯಕ್ಷರಾದ ಜನಾಬ್ ಮುಸ್ತಾಕ್ ಅಹ್ಮದ್ ವಹಿಸಿದ್ದರು.

    ಧಾರವಾಡದ ನೂರಾರು ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದ ಈ ಕಾರ್ಯಕ್ರಮವು ಲಘು ಉಪಹಾರದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

  • ಮುಟ್ಟಿನ ಆರೈಕೆ ಸಾಂವಿಧಾನಿಕ ಹಕ್ಕು: 
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

    ಮುಟ್ಟಿನ ಆರೈಕೆ ಸಾಂವಿಧಾನಿಕ ಹಕ್ಕು: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

    ನವದೆಹಲಿ: ಮಹಿಳೆಯರ ಆರೋಗ್ಯ ಮತ್ತು ಘನತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪನ್ನು ನೀಡಿದೆ. ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯವು ಕೇವಲ ವೈಯಕ್ತಿಕ ವಿಷಯವಲ್ಲ, ಅದು ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ಮಹಿಳೆಯ “ಅಂತಸ್ಸಿನಿಂದ ಬದುಕುವ ಮೂಲಭೂತ ಹಕ್ಕು” ಎಂದು ನ್ಯಾಯಾಲಯ ಘೋಷಿಸಿದೆ.

    ಜಸ್ಟಿಸ್ ಜೆ.ಬಿ. ಪಾರ್ದಿವಾಲಾ ಮತ್ತು ಜಸ್ಟಿಸ್ ಆರ್. ಮಹದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

    ತೀರ್ಪಿನ ಪ್ರಮುಖ ಮುಖ್ಯಾಂಶಗಳು:

    ರಾಷ್ಟ್ರೀಯ ನೀತಿಯ ಅಗತ್ಯ: ದೇಶಾದ್ಯಂತ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲು ಮತ್ತು ಶಾಲೆಗಳಲ್ಲಿ ನೈರ್ಮಲ್ಯ ಕಾಪಾಡಲು ಸಮಗ್ರ ‘ರಾಷ್ಟ್ರೀಯ ಮಾದರಿ ನೀತಿ’ಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

    ಪ್ರತ್ಯೇಕ ಶೌಚಾಲಯ ವ್ಯವಸ್ಥೆ: ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಮತ್ತು ಸುರಕ್ಷಿತ ಶೌಚಾಲಯಗಳ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೀಠವು ನಿರ್ದೇಶಿಸಿದೆ.

    ಶಿಕ್ಷಣದ ಹಕ್ಕು: ಋತುಚಕ್ರದ ಸಮಯದಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ಅನೇಕ ಹೆಣ್ಣುಮಕ್ಕಳು ಶಾಲೆಗೆ ಗೈರುಹಾಜರಾಗುತ್ತಿದ್ದಾರೆ ಅಥವಾ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ. ಇದು ಅವರ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

    ಅರಿವು ಮೂಡಿಸುವಿಕೆ: ಋತುಚಕ್ರದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.: “ಋತುಚಕ್ರದ ನೈರ್ಮಲ್ಯವು ಕೇವಲ ವೈದ್ಯಕೀಯ ಅಗತ್ಯವಲ್ಲ, ಅದು ಮಹಿಳೆಯರ ಘನತೆಮತ್ತು ಸ್ವಾತಂತ್ರ್ಯದ ಪ್ರಶ್ನೆಯಾಗಿದೆ.”ಎಂದು ಅದು ತಿಳಿಸಿದೆ

    ಮಹಿಳಾ ಸಬಲೀಕರಣದ ಹಾದಿಯಲ್ಲಿ ಈ ತೀರ್ಪು ಒಂದು ಮೈಲಿಗಲ್ಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಆಶಿಸಲಾಗಿದೆ.

  • “ಬೆಳ್ಳಿ ಹಬ್ಬ ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” 
ಖ್ಯಾತ ಸಾಹಿತಿ ಡಾ| ಕೆ. ಶರೀಫಾ​

    “ಬೆಳ್ಳಿ ಹಬ್ಬ ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” ಖ್ಯಾತ ಸಾಹಿತಿ ಡಾ| ಕೆ. ಶರೀಫಾ​

    ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.

    “ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.


    “ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” ಎಂದು ಹಾರೈಸಿದರು.

    ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ಸಂಪಾದಕಿ ಶಹನಾಜ್ ಎಂ. “25 ವರ್ಷಗಳ ಹಾದಿಯನ್ನು ವಿವರಿಸಿದ, ಪತ್ರಿಕೆ ಒಂದು ಭಾರತವಾಗಿ ಬೆಳೆದಿದೆ. ಇದರಲ್ಲಿ ಎಲ್ಲಾ ವರ್ಗದ ಓದುಗರು, ಲೇಖಕರು ಮತ್ತು ಪ್ರೋತ್ಸಾಹಕರನ್ನು ಹೊಂದಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತವರನ್ನು ನೆನಪಿಸುತ್ತಾ, ನಾವು ನಮ್ಮ ನೈತಿಕತೆಯನ್ನು ಬಿಟ್ಟು ಜಾಹಿರಾತಿಗೆ ಕೈ ಒಡ್ಡಿಲ್ಲ ಎಂದರು. ಅನುಪಮ ಮಾಸಿಕ
    ಡಿಜಿಟಲ್ ರೂಪದಲ್ಲಿ ಯೂ ಬರಲಿದೆ”
    ಎಂದರು.

    ಬೆಥನಿ ಸಂತ ತೆರೇಸಾ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ಲೂರ್ಡ್ಸ್: “ಅನುಪಮ ಪತ್ರಿಕೆ ಒಂದು ನಂಬಿಕೆಯ ಅಡಿಗಲ್ಲಾಗಿದೆ. ಮೌಲ್ಯಗಳಿಗೆ ಬೆಲೆ ನೀಡಿ, ಜವಾಬ್ದಾರಿಯುತ ಪತ್ರಿಕೋದ್ಯಮ ನಡೆಸುತ್ತಿದೆ. ಹಲವಾರು ಮಹಿಳೆಯರ ಕನಸು ಗಳಿಗೆ ಆಧಾರವಾಗಿ, ನೋವು ನಲಿವುಗಳನ್ನು ಹಂಚುತ್ತಿದೆ. ಹೀಗಾಗಿ ಈ ಪತ್ರಿಕೆ ಮಹಿಳೆಯರ ಜೊತೆಗಾತಿಯಾಗಿದೆ” ಎಂದರು.

    ಆಪ್ತ ಸಮಾಲೋಚಕಿ ಡಾ। ರುಕ್ಸಾನ ಮಾತನಾಡುತ್ತಾ, “ವಿದ್ಯಾಭ್ಯಾಸ ಮಾಡಿದ ಹುಡುಗಿಯರನ್ನು ತಮಾಷೆ ಮಾಡುವ ಕಾಲದಲ್ಲಿ ಒಂದು ಯಶಸ್ವೀ ಪತ್ರಿಕೆ ನಡೆಸುತ್ತಿರುವುದು ದೊಡ್ಡಸಾಧನೆ” ಎಂದರು. “ಮಹಿಳೆಯೊಬ್ಬಳ ಸಹನೆ, ತಾಳ್ಮೆಯ ಎದುರು, ಯಾವ ಪುರುಷನೂ ಇಲ್ಲ. ಇಂದು ಮಹಿಳೆ ಎಷ್ಟೇ ದೊಡ್ಡ ಹುದ್ದೆಗೆ ಏರಿದರೂ, ಮಹಿಳೆಯ ಜವಾಬ್ದಾರಿಯನ್ನು ಮರೆತಿರುವುದು ಸಾಧ್ಯವಿಲ್ಲ” ಎಂದರು. “ಬರವಣಿಗೆ ಶಾಶ್ವತವಾಗಿದೆ. ಇಂದು ಮುದ್ರಣ ಮಾಧ್ಯಮ ಮಾಯವಾಗುವಂತಿದೆ. ಆದರೆ ಹಾಗಾಗುವುದು ಬೇಡ. ಇಂದು ಬರೆದಿರುವುದು ಮುಂದಿನ ಕಾಲಕ್ಕೂ ಉಳಿಯಲಿ” ಎಂದರು.

    ಮುಂಬೈನ ಹಿರಿಯ ವಕೀಲೆ, ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ತನ್ನ ಮನದಾಳದ ಮಾತು ಹಂಚಿಕೊಂಡರು
    ಹಿರಿಯ ಲೇಖಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ. ಅನುಪಮದ ಹಿರಿಯ ಓದುಗ ಬಳಗದ ಆಯೇಷಾ ಇಬ್ರಾಹಿಂ ಶಫಿರವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಅನುಪಮ ಓದುಗರಾದ ಶಿಹನಾ ಬಿ.ಮ್., ಶಮೀಮಾ ಕುತ್ತಾರ್ ಹಾಗೂ ಶ್ರೀಮತಿ ಸುಖಾಲಕ್ಷಿ ತಮ್ಮ ಅನಿಸಿಕೆಗಳನ್ನು ನೀಡಿದರು.

    ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣರನ್ನು, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ಚೇರ್ ಮೆನ್ ಅಶ್ಫಾಕ್ ಅಹಮದ್ ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.

    ಅನುಪಮ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡುತ್ತಾ “ಮಹಿಳೆ ಒಂದು ಶಕ್ತಿ. ಮಹಿಳೆಯರಿಗೆ ಇಂದು ಮನೆಯಲ್ಲಿ ಬಹಳಷ್ಟು ಮಾನಸಿಕ ಕಿರುಕುಳ, ಆರ್ಥಿಕ ಒತ್ತಡ, ನಿರ್ಬಂಧನೆ ಕಾಡುತ್ತಿದೆ. ಅವೆಲ್ಲವನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕಾಗಿದೆ. ಮನೆಯಲ್ಲಿ ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳೆದುರು ಗಂಡ-ಹೆಂಡತಿ ಜಗಳ ನಿಲ್ಲಿಸಬೇಕು” ಎಂದು ಕಿವಿಮಾತು ಹೇಳಿದರು.

    ಸಭೆಯ ಪ್ರಾರಂಭದಲ್ಲಿ ಬ್ರೈಟ್ ಮಾಡೆಲ್ ಸ್ಕೂಲ್ ವಿದ್ಯಾರ್ಥಿಗಳು ಸ್ತುತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

    “ಇತಿಹಾಸದ ಪ್ರತಿಯೊಂದು ಕ್ರಾಂತಿಯ ಹಿಂದೆ ಸಾಹಿತ್ಯದ ಪ್ರೇರಣೆ ಇದೆ. ಹಾಗೆಯೇ ಮಹಿಳೆಯರೇ ಸೇರಿ ಒಂದು ಪತ್ರಿಕೆನ್ನು 25ವರ್ಷ ನಡೆಸುತ್ತಿರುವುದು ಕೂಡಾ ಒಂದು ಕ್ರಾಂತಿ” ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಕೇಂದ್ರ ಸಮಿತಿ ಸದಸ್ಯೆ ಸಮೀನಾ ಅಫ್ಸಾನ್ ಹೇಳಿದರು. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    “ಬರವಣಿಗೆ ಎಲ್ಲಾ ಕಾಲಕ್ಕೂ ಒಂದು ಸಾಧನೆ. ಮಹಿಳೆಯರು ಬರವಣಿಗೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ವೇದಿಕೆ ಪಡೆದುಕೊಂಡಿರುವುದು ಒಂದು ಕ್ರಾಂತಿಯಾಗಿದೆ. ಮಹಿಳೆಯರು ವೇದಿಕೆಯನ್ನು ಇನ್ನಷ್ಟು ಬಳಸಿಕೊಳ್ಳಬೇಕು” ಎಂದರು. ಅನುಪಮ “ಪತ್ರಿಕೆ ಎಲೆ ಮರೆಯ ಕಾಯಿಗಳನ್ನು ಕೂಡಾ ಮುನ್ನೆಲೆಗೆ ತಂದು ಅವರಿಗೆ ಧ್ವನಿ ನೀಡಿದೆ. ಈ ಧ್ವನಿ ಇಂದು ಶಕ್ತಿಯಾಗಿ ಬೆಳೆದಿದೆ. ಇದು ಎಲ್ಲಾ ಮಹಿಳೆಯರಿಗೆ ಮಾರ್ಗದರ್ಶಿ” ಎಂದರು.

    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಾದ ನಿವೃತ್ತ ಶಿಕ್ಷಕಿ ಲೇಖಕಿ ಕೆ.ಎ., ಸಾಮಾಜಿಕ ಕಾರ್ಯಕರ್ತೆ ಹರಿಣಿ, ರೋಹಿಣಿ, ಸಮಾಜ ಸೇವಕಿ ಹಿರಿಯ ಓದುಗೆ ಆಯಿಶಾ ಈ. ಶಾಫಿ ಅವರನ್ನು ಸನ್ಮಾನಿಸಲಾಯಿತು.

    ಅನುಪಮ ಉಪಸಂಪಾದಕಿ ಸಬೀಹಾ ಫಾತಿಮಾ ಅತಿಥಿಗಳನ್ನು ಸ್ವಾಗತಿಸಿದರು. ಅಸ್ಮತ್ ವಗ್ಗ ಮತ್ತು ಲುಬ್ನಾ ಝಕೀಯ ಕಾರ್ಯಕ್ರಮ ನಿರೂಪಿಸಿದರು.

  • ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಮಹಿಳೆಯರೇ ನಡೆಸುತ್ತಿರುವ ರಾಜ್ಯದ ಏಕೈಕ ಮಹಿಳಾ ಮಾಸಿಕ ಅನುಪಮ ಮಾಸಿಕಕ್ಕೆ 25 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ 25 ವರ್ಷಗಳ ಯಶಸ್ಸಿನ ಹಿನ್ನೋಟವಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಗುರುವಾರ ಬಿಡುಗಡೆ ಮಾಡಿದರು.

    ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಪತ್ರಿಕೋದ್ಯಮದಲ್ಲಿ ಮುಸ್ಲಿಂ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಈ ನಡುವೆ ಕೂಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ ಸಮುದಾಯದ ಮಹಿಳೆಯರೇ ನಡೆಸುತ್ತಿರುವ ಅನುಪಮ ಮಹಿಳಾ ಮಾಸಿಕವು 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ”ಎಂದು ಅಭಿನಂದನೆ ಸಲ್ಲಿಸಿದರು.

    ಬಳಿಕ ಮಾತನಾಡಿದ ಅನುಪಮ ಸಂಪಾದಕಿ ಶಹನಾಝ್ ಎಂ, “ರಾಜ್ಯದಲ್ಲಿ ಮಹಿಳೆಯರಿಗೆ ಗ್ಯಾರಂಟಿಗಳನ್ನು ಘೋಷಿಸಿ, ಅದನ್ನು ಅನುಷ್ಠಾನಕ್ಕೆ ತಂದ ನಂತರ ಮಹಿಳೆಯರ ಬದುಕಿನಲ್ಲಿ ಹಲವಾರು ಬದಲಾವಣೆ ಆಗಲು ನೆರವಾಗಿದೆ. ಮಹಿಳೆಯರ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನುಪಮ ಬಳಗ ಹಾಗೂ ಎಲ್ಲ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಎಂಟಿಸಿ ನಿಗಮದ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿಯರಾದ ಸಮೀನಾ ಉಪ್ಪಿನಂಗಡಿ, ಸಾಜಿದಾ ಮೂಮಿನ್, ಕುಲ್ಸುಮ್ ಅಬೂಬಕ್ಕರ್, ಎಸ್.ಎಂ. ಮುತ್ತಲಿಬ್, ಫೈಝಲ್ ಇಸ್ಮಾಯೀಲ್, ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.

    ಬಳಿಕ ಅನುಪಮ ಬಳಗವು ಈ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರಕಾರದಲ್ಲಿ ವಿವಿಧ ಸ್ಥಾನಗಳನ್ನುಅಲಂಕರಿಸಿರುವ ಹಾಗೂ ಸರಕಾರದ ಅಧಿಕಾರಿಗಳಾಗಿರುವ ಹೊಣೆಗಾರರನ್ನು ಭೇಟಿ ಮಾಡಿ ನೀಡಿತು.

    ಸನ್ಮಾನ್ಯ ನಿಕೇತ್ ರಾಜ್ ಮೌರ್ಯ [ಉಪಾಧ್ಯಕ್ಷರು, (BMTC) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ (KPYCC) ರಾಜ್ಯ ಪ್ರಧಾನ ಕಾರ್ಯದರ್ಶಿ]

    ಸನ್ಮಾನ್ಯ ರಿಜ್ವಾನ್ ಅರ್ಷದ್ [ಸದಸ್ಯರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಾಗೂ MLA ಶಿವಾಜಿ ನಗರ, ಬೆಂಗಳೂರು]

    ಸನ್ಮಾನ್ಯ ನಸೀರ್ ಅಹ್ಮದ್ [ವಿಧಾನ ಪರಿಷತ್ ಸದಸ್ಯ (MLC) ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ]

    ಸನ್ಮಾನ್ಯ ಅಬ್ದುಲ್ ಅಹದ್ [DIG, ಪೊಲೀಸ್ ಉಪ ಮಹಾನಿರೀಕ್ಷಕರು, ಕರ್ನಾಟಕ ಸರಕಾರ]

  • ಎಚ್ಚರ! AI ಚಾಟ್‌ಬಾಟ್‌ಗಳೊಂದಿಗೆ ಈ 8 ವಿಷಯಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ..!

    ಎಚ್ಚರ! AI ಚಾಟ್‌ಬಾಟ್‌ಗಳೊಂದಿಗೆ ಈ 8 ವಿಷಯಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ..!

    ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಬಳಕೆದಾರರಿಗೆ AI (ಕೃತಕ ಬುದ್ಧಿಮತ್ತೆ) ಚಾಟ್‌ಬಾಟ್‌ಗಳು ಅತ್ಯಂತ ಆಪ್ತ ಗೆಳೆಯನಂತಾಗಿವೆ. ಕೆಲಸದ ಒತ್ತಡವಿರಲಿ ಅಥವಾ ಓದಿನ ಗೊಂದಲವಿರಲಿ, ನಾವು ತಕ್ಷಣ ಮೊರೆ ಹೋಗುವುದು ಈ ಚಾಟ್‌ಬಾಟ್‌ಗಳಿಗೇ. ಆದರೆ, ನಮಗೆ ಅರಿವಿಲ್ಲದಂತೆ ನಾವು ಇವುಗಳ ಮೇಲೆ ಅತಿಯಾಗಿ ಅವಲಂಬಿತರಾಗುತ್ತಿದ್ದೇವೆ.

    ​ಇತ್ತೀಚಿನ ವರದಿಗಳ ಪ್ರಕಾರ, ಚಾಟ್‌ಬಾಟ್‌ಗಳೊಂದಿಗೆ ಅತಿಯಾದ ಮಾಹಿತಿ ಹಂಚಿಕೊಳ್ಳುವುದು ನಿಮ್ಮ ಖಾಸಗಿ ಜೀವನಕ್ಕೆ ಸಂಚಕಾರ ತರಬಹುದು. ಹಾಗಾದರೆ, ಸುರಕ್ಷತೆಯ ದೃಷ್ಟಿಯಿಂದ ನೀವು ಯಾವ ವಿಷಯಗಳನ್ನು ಗೌಪ್ಯವಾಗಿಡಬೇಕು? ಇಲ್ಲಿದೆ ಮಾಹಿತಿ.

    1. ಪಾಸ್‌ವರ್ಡ್ ಮತ್ತು ವೈಯಕ್ತಿಕ ಮಾಹಿತಿ

    ಚಾಟ್‌ಬಾಟ್‌ಗಳನ್ನು ಎಂದಿಗೂ ನಿಮ್ಮ ಪಾಸ್‌ವರ್ಡ್‌ ಅಥವಾ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸುವ ಡೈರಿ ಎಂದು ಭಾವಿಸಬೇಡಿ. ನೀವು ರಸ್ತೆಯಲ್ಲಿ ನಿಂತು ಜೋರಾಗಿ ಕೂಗಲು ಇಷ್ಟಪಡದ ವೈಯಕ್ತಿಕ ಮಾಹಿತಿಯನ್ನು ಚಾಟ್‌ಬಾಟ್‌ನಲ್ಲಿ ಟೈಪ್ ಕೂಡ ಮಾಡಬೇಡಿ.

    2. ಬ್ಯಾಂಕಿಂಗ್ ಮತ್ತು ಹಣಕಾಸು ವಿವರಗಳು

    ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ವಿವರ ಅಥವಾ ಪಿನ್ (PIN) ಸಂಖ್ಯೆಗಳನ್ನು ಹಂಚಿಕೊಳ್ಳಬೇಡಿ. ಇದು ನಿಮ್ಮ ಜೀವಮಾನದ ಉಳಿತಾಯವನ್ನು ಅಪಾಯಕ್ಕೆ ದೂಡಬಹುದು.

    3. ನಿಮ್ಮ ಆಳದ ರಹಸ್ಯಗಳು

    ನಮ್ಮ ಮನಸ್ಸಿನ ರಹಸ್ಯಗಳನ್ನು ಯಾರೊಂದಿಗಾದರೂ ಹೇಳಿಕೊಂಡರೆ ಹಗುರಾಗುತ್ತದೆ ಎಂಬ ಭಾವನೆ ಇರುತ್ತದೆ. ಆದರೆ ಚಾಟ್‌ಬಾಟ್ ಮನುಷ್ಯನಲ್ಲ! ಅದಕ್ಕೆ ಭಾವನೆಗಳಿಲ್ಲ ಮತ್ತು ನಿಮ್ಮ ರಹಸ್ಯಗಳನ್ನು ಅದು ಸುರಕ್ಷಿತವಾಗಿರಿಸುತ್ತದೆ ಎಂಬ ಭರವಸೆಯೂ ಇಲ್ಲ.

    4. ತುರ್ತು ಸಂದರ್ಭದ ನಿರ್ಧಾರಗಳು

    ವಾಹನದ ಬ್ರೇಕ್ ಫೇಲ್ ಆದಾಗ ಅಥವಾ ಜೀವಕ್ಕೆ ಅಪಾಯವಿರುವ ತುರ್ತು ಪರಿಸ್ಥಿತಿಯಲ್ಲಿ ಚಾಟ್‌ಬಾಟ್ ಸಲಹೆಗಾಗಿ ಕಾಯಬೇಡಿ. ಅಂತಹ ಸಮಯದಲ್ಲಿ ನಿಮ್ಮ ಸ್ವಂತ ವಿವೇಚನೆ ಮತ್ತು ಸ್ಥಳೀಯ ಸಹಾಯವನ್ನು ಪಡೆಯುವುದು ಮುಖ್ಯ.

    5. ಬ್ರೇಕಿಂಗ್ ನ್ಯೂಸ್ ಮತ್ತು ಪ್ರಚಲಿತ ವಿದ್ಯಮಾನ

    ​AI ಚಾಟ್‌ಬಾಟ್‌ಗಳು ಪ್ರತಿ ಸೆಕೆಂಡಿನ ಸುದ್ದಿಯನ್ನು ಅಪ್‌ಡೇಟ್ ಮಾಡುವಂತೆ ನಿರ್ಮಿತವಾಗಿರುವುದಿಲ್ಲ. ಸ್ಟಾಕ್ ಮಾರುಕಟ್ಟೆ, ಪಂದ್ಯಗಳ ಸ್ಕೋರ್ ಅಥವಾ ಇತ್ತೀಚಿನ ಸುದ್ದಿಗಳಿಗಾಗಿ ಇವುಗಳನ್ನು ಅವಲಂಬಿಸುವ ಬದಲು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳನ್ನು ಗಮನಿಸಿ.

    6. ಆರೋಗ್ಯದ ಸಮಸ್ಯೆಗಳು

    ​ಚಾಟ್‌ಬಾಟ್ ನಿಮಗೆ ಆರೋಗ್ಯದ ಬಗ್ಗೆ ಸಾಮಾನ್ಯ ಮಾಹಿತಿ ನೀಡಬಹುದು, ಆದರೆ ಅದು ವೈದ್ಯರಲ್ಲ. ಮಾನಸಿಕ ಅಥವಾ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಅರ್ಹ ವೈದ್ಯರನ್ನೇ ಭೇಟಿ ಮಾಡಿ. ತಪ್ಪು ಮಾಹಿತಿ ನೀಡುವ ಚಿಕಿತ್ಸೆಗಳು ಅಪಾಯಕಾರಿಯಾಗಬಲ್ಲವು.

    7. ಭಾವನಾತ್ಮಕ ಸಂಬಂಧಗಳು

    ​ಚಾಟ್‌ಬಾಟ್ ಕೇವಲ ಸಾಫ್ಟ್‌ವೇರ್ ಪ್ರೋಗ್ರಾಂ ಆಗಿದೆ. ಅದಕ್ಕೆ ಮಾನವ ಸಂಬಂಧಗಳ ಸಂಕೀರ್ಣತೆ ಅರ್ಥವಾಗುವುದಿಲ್ಲ. ಭಾವನಾತ್ಮಕ ಬೆಂಬಲಕ್ಕಾಗಿ ಅಥವಾ ಸಂಬಂಧಗಳ ನಿರ್ಧಾರಕ್ಕಾಗಿ ಮನುಷ್ಯರನ್ನೇ ಅವಲಂಬಿಸಿ.

    8. ಲೋಕಕ್ಕೆ ತಿಳಿಯಬಾರದು ಎನ್ನುವ ವಿಷಯಗಳು

    ​”ಜಗತ್ತಿನಲ್ಲಿ ಯಾರಿಗೂ ತಿಳಿಯಬಾರದು” ಎಂದು ನೀವು ಬಯಸುವ ಯಾವುದೇ ವಿಷಯವಿದ್ದರೂ ಅದನ್ನು ಚಾಟ್‌ಬಾಟ್ ಬಳಿ ಹಂಚಿಕೊಳ್ಳಬೇಡಿ. ಚಾಟ್‌ಬಾಟ್‌ನಲ್ಲಿ ನೀವು ಹಂಚಿಕೊಳ್ಳುವ ಮಾಹಿತಿ ಸೈಬರ್ ಲೋಕದ ಭಾಗವಾಗಿ ಉಳಿದುಬಿಡುತ್ತದೆ ಎಂಬುದನ್ನು ನೆನಪಿಡಿ

  • ಗಾಝದ ಕರಾಳ ಬದುಕಿನಿಂದ ಹಿಡಿದು ಪ್ರವಾದಿ ಮುಹಮ್ಮದ್(ಸ) ಜೀವನ ಸಂದೇಶವರೆಗೆ…

    ಗಾಝದ ಕರಾಳ ಬದುಕಿನಿಂದ ಹಿಡಿದು ಪ್ರವಾದಿ ಮುಹಮ್ಮದ್(ಸ) ಜೀವನ ಸಂದೇಶವರೆಗೆ…

    ಇಂದು ನಮ್ಮನ್ನು ಹೆಚ್ಚು ದುಃಖಿತರನ್ನಾಗಿಸುವ ಸುದ್ಧಿಯೆಂದರೆ ಗಾಝಾ(ಫೆಲೆಸ್ತೀನ್) ಜನರ ಬದುಕಿನ ಕರಾಳ ದೃಶ್ಯ. ಶೈತಾನ್ ನೇತ್ಯಾನಾಹುವಿನ ರಕ್ತದಾಹ ಮಿತಿಮೀರುತ್ತಿದೆ. ಒಂದು ಸಮುದಾಯದ ವಂಶವನ್ನೇ ಭೂಮಿಯಿಂದ ಇಲ್ಲವಾಗಿಸುವ ಅವನ ಪ್ರಯತ್ನಕ್ಕೆ ವಿಶ್ವದಲ್ಲಿ ವಿರೋಧದ ಧ್ವನಿಯೂ ಹೆಚ್ಚುತ್ತಿದೆ. ಇಸ್ರೇಲಿನ ಯಹೂದಿಯರೇ ಯುದ್ಧ ನಿಲ್ಲಿಸಲು ಪ್ರತಿಭಟನೆಗೆ ಇಳಿದಿದ್ದಾರೆ. ಆದ್ರೆ… ಈ ರಾಕ್ಷಸ ಮತ್ತು ಆತನ ಝಿಯೋನಿಸ್ಟ್ ಸಮೂಹಕ್ಕೆ ಗಾಝವನ್ನು ಸ್ಮಶಾನ ಮಾಡುವ ಹುಚ್ಚು ಆವೇಶ ಮೈ ಮೇಲೆ ಉಕ್ಕಿದೆ. ಹಸಿವಿನಿಂದ ಬಳಲುತ್ತಿರುವ ಮಕ್ಕಳು, ಹಿರಿಯರು ಅಲ್ಲಿ ಸಾಯುತ್ತಿದ್ದಾರೆ. ನಮ್ಮ ಪ್ರತೀ ಪ್ರಾರ್ಥನೆಯಲ್ಲೂ ಅವರಿಗಾಗಿ ಪ್ರಾರ್ಥಿಸುತ್ತೇವೆ.

    ಮನುಷ್ಯತ್ವವೇ ಸತ್ತಿದೆ ಇಂದು. ಹಣ, ಅಧಿಕಾರವೇ ಗೆಲ್ಲುತ್ತಿದೆ. ನ್ಯಾಯ, ನೀತಿ ಸೋಲುತ್ತಿದೆ. ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಕಣ್ಮರೆಯ ವಿಷಯ ಎದೆಯನ್ನು ನಡುಗಿಸುವುದಿಲ್ಲ! ಪ್ರತಿಷ್ಠೆಯ ವ್ಯಕ್ತಿ ತನ್ನ ಹಣ ಬಲದಿಂದ ನಿರಪರಾಧಿ’ ಅನಿಸಿಕೊಳ್ಳುತ್ತಿದ್ದಾನೆ. ನ್ಯಾಯಧೀಶರು, ಪೊಲೀಸರು, ನ್ಯಾಯಾಲಯ, ಸುದ್ಧಿ ಮಾಧ್ಯಮಗಳು ಇಂದು ಹಣಕ್ಕೆ ತಲೆಬಾಗುತ್ತಿದೆ. ಮಾರಾಟಕ್ಕೆ ತಮ್ಮ ಆತ್ಮಸಾಕ್ಷಿಯನ್ನೂ ಅಡವಿಡುತ್ತಿದಾರೆ. ಪ್ರಾಮಾಣಿಕವಾಗಿ ನ್ಯಾಯದ ಪರ ಕೆಲಸ ಮಾಡಲು ಬಂದ ಸಜ್ಜನರನ್ನೂ ಈ ಅಧಿಕಾರದ ಭ್ರಷ್ಟಾಚಾರಿಗಳು ಬೆದರಿಸುತ್ತದೆ. ಅಭಿಸಾರ್ ಶರ್ಮಾ, ರವೀಶ್‌ರಂತಹ ಯೂಟ್ಯೂಬ್ ಪತ್ರಕರ್ತರಿಗೂ ಹಣದ ಆಮಿಷ ಹಾಗೂ ಬೆದರಿಕೆಯನ್ನು ನೀಡಲಾಗಿತ್ತು. ಆದ್ರೆ… ಪತ್ರಿಕಾಧರ್ಮ ಪಾಲಕರಾದ ಪ್ರಾಮಾಣಿಕತೆಯ ಈ ಸುದ್ಧಿ ನಿರ್ವಾಹಕರು ಬೆದರಿಕೆ, ಆಮಿಶಕ್ಕೆ ತಲೆಬಾಗಲಿಲ್ಲ. ಸುಳ್ಳು ಇಂದು ವಿಜಯಿಯಾಗಿತ್ತಿದೆ.

    ಈ ನಡುವೆ ರಾಹುಲ್‌ಗಾಂಧಿ ಎಂಬ ನಾಯಕನೂ ಚಕ್ರವ್ಯೂಹದ ಒಳಗೆ ನುಗ್ಗಿದ ಅಭಿಮನ್ಯುವಿನಂತೇ ಒಂಟಿಯಾಗಿ ತನ್ನ ವಿರೋಧಿಗಳೊಂದಿಗೆ ಕಾದಾಡುತ್ತಿದ್ದಾರೆ. ಚುನಾವಣಾ ಆಯೋಗವೂ ಇಂದು ಕುತಂತ್ರದಲ್ಲಿ ಭಾಗಿಯಾಗಿದೆ ಎಂಬ ಧ್ವನಿ ಎದ್ದಿದೆ. ಎಲ್ಲದರಲ್ಲೂ ಭ್ರಷ್ಟಾಚಾರವೇ ತುಂಬಿದೆ. ಆದರಿಂದಲೇ ಈ ದೇಶ ಉದ್ಧಾರ ಆಗಲಾರದು.

    ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಅತ್ಯಾಚಾರಿ, ಕೊಲೆಗಾರರು ಜೈಲಿನಲ್ಲಿಯೂ ಮಸ್ತ್ ಮಜಾದಲ್ಲಿದ್ದಾರೆ. ಬುದ್ಧಿ ಮಾಂದ್ಯ, ಮಾತು ಬಾರದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಎಲ್ಲಾಡ್ರಗ್ಸ್’ನ ಮಹಿಮೆ. ಅಪರಾಧಿಗಳು ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಕೊಲೆ ಮಾಡಿ ಮೆರೆದಾಡುವಂತಹ ಸ್ವಾತಂತ್ಯ್ರ ಈ ದೇಶದಲ್ಲಿದೆ. ರಾಜಕೀಯ ಪಕ್ಷದ ನಾಯಕರು ಪರಸ್ಪರ ಕಚ್ಚಾಡುವುದರಲ್ಲೇ ಕಾಲ ಕಳೆಯುತ್ತಾರೆ. ಜನರ ಸಮಸ್ಯೆ, ಪರಿಹಾರ, ಕಷ್ಟ ಈ ರಾಜಕಾರಿಣಿಗಳ ಮೆದುಳಿಗೇ ಹೋಗುವುದಿಲ್ಲ. ಜನರಿಗಾಗಿ ಈ ನಾಯಕರು ಇರುವುದಲ್ಲ, ಅವರ ಅಂತಸ್ತು, ಸ್ಥಾನ ಗಟ್ಟಿ ಮಾಡಲೆಂದೇ ಧರ್ಮ ವಿರೋಧಿ ಹೇಳಿಕೆ ಕೊಡುತ್ತಾರೆ.

    ಇಂದು ಧರ್ಮದ್ವೇಷದ ಹೇಳೀಕೆಯಲ್ಲಿ ಬಿಜೆಪಿಯ ಶಾಸಕ ಯತ್ನಾಳ್ ಸ್ವಲ್ಪ ಹೆಚ್ಚೇ ಮುಂದೆ ಹೋಗಿದ್ದಾರೆ. ಮುಸ್ಲಿಮ್ ಮಹಿಳೆಯರನ್ನು ಹಿಂದೂ ಪುರುಷರು ಮದ್ವೆ ಆಗಬೇಕೆಂದು ಹೇಳಿಕೆ ನೀಡಿದ್ದಾರೆ. ಯಾರನ್ನು ಯಾರು ಬೇಕಾದರೂ ಮದ್ವೆ ಆಗುವ ಹಕ್ಕು ಈ ದೇಶದ ಸಂವಿಧಾನವೇ ನೀಡಿದೆ. ಮೊದಲು ಈ ಯತ್ನಾಳ್‌ರವರು ದಲಿತ ಹೆಣ್ಣು ಮಕ್ಕಳನ್ನು ತಮ್ಮ ಸೊಸೆ ಆಗಿ ಮನೆ ತುಂಬಿಕೊಳ್ಳಲಿ. ಮುಸ್ಲಿಮ್ ಹುಡುಗಿಯರಿಗೆ ತಮ್ಮ ಸಮುದಾಯದಲ್ಲಿ ವರ’ಗಳ ಕೊರತೆ ಇಲ್ಲ. ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ, ಅಸ್ಪೃಶ್ಯತೆನೂ ಇಲ್ಲ.

    ಈ ತಿಂಗಳಲ್ಲಿ ಶಿಕ್ಷಕರ ದಿನಾಚಣೆಯೂ ಬರುತ್ತಿದೆ. ಒಡಿಶಾದ ವಿದ್ಯಾರ್ಥಿನಿಯೋವಳಿಗೆ ಶಿಕ್ಷಕರೋರ್ವರು ನೀಡಿದ ಲೈಂಗಿಕ ಹಿಂಸೆಯ ವಿರುದ್ಧ ದೂರ ನೀಡಿದ್ದರೂ ಆಕೆಗೆ ನ್ಯಾಯ ಸಿಗದೇ ಆಕೆಯ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕಿದಾಗ ಅವಳು ಆತ್ಮಹತ್ಯೆ ಮಾಡುತ್ತಾಳೆ. ಅವಳು ಬಿಜೆಪಿಯ ಎಲ್ಲಾ ಸಂಸದ, ಮುಖ್ಯಮಂತ್ರಿಯವರೆಗೂ ನ್ಯಾಯ’ ಬೇಡಿದ್ದಳು. ಆದ್ರೆ… ಆಕೆಯ ಮೊರೆ ಯಾರಿಗೂ ಕೇಳಿಸಲಿಲ್ಲ. ನಮ್ಮ ದ. ಕರಾವಳಿಯ ಕಾಲೇಜೊಂದರಲ್ಲಿ ಇಬ್ಬರು ಕಾಲೇಜ್ ಶಿಕ್ಷಕರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದರು. ಶಿಕ್ಷಕರು ಮಕ್ಕಳ ಭವಿಷ್ಯ ನಿರ್ಮಿಸುವ ಶಿಲ್ಪಿಗಳು ಎಂಬ ಗೌರವ, ಇಂದು ಉಳಿದಿದೆಯೇ?! ಗುರುವೇ ಶಿಷ್ಯರ ಪಾಲಿಗೆ `ಅಪಾಯಕಾರಿ’ ಆಗುತ್ತಿದ್ದಾರೆ. ಕೋಮುದ್ವೇಷವನ್ನು ಹೆಚ್ಚು ಪ್ರಚಾರ ಮಾಡುವಲ್ಲಿಯೂ ಶಿಕ್ಷಕರ ಪಾಲು ಇದೆ. ಅಮಾಯಕ ಮಕ್ಕಳ ಮನಸ್ಸಿಗೆ ಧರ್ಮದ್ವೇಷಿ ಪಾಠ ಮಾಡುವವರ ವರ್ಗ ಹೆಚ್ಚುತ್ತಿದೆ. ಸೌಹಾರ್ದತೆ ಮತ್ತು ಮಾನವೀಯತೆಯನ್ನು ಬೋಧಿಸಬೇಕಾದ ಶಿಕ್ಷಕರು ಇಂದು ಆರ್‌ಎಸ್‌ಎಸ್‌ನ ಮುಖವಾಣಿಯಂತೇ ವರ್ತಿಸುತ್ತಿದ್ದಾರೆ. ಇಂತಹವರಿಂದ ಉತ್ತಮ ಸಮಾಜ ನಿರ್ಮಾಣ ಹೇಗೆ ಸಾಧ್ಯ?

    ಶಿಸ್ತು, ಗೌರವ, ಸೇವೆ, ಮಾನವೀಯತೆಗೆ ಮಾದರೀಯಾಗಿ ನಾನು ಸದಾ ಕ್ರೈಸ್ತರನ್ನು ಅಭಿನಂದಿಸುತ್ತೇನೆ. ಕಾನ್ವೆಂಟ್ ಶಾಲೆಯಲ್ಲಿ ನಾನಂದು ಕಲಿತ ಪಾಠವನ್ನು ಜೀವನದಲ್ಲಿ ಇಂದೂ ಪಾಲಿಸುತ್ತಿದ್ದೇನೆ.

    ಇದು ಮಿಲಾದುನ್ನಬೀ ಪವಿತ್ರ ದಿನದ ತಿಂಗಳು. ನಾವು ಪ್ರವಾದಿಯವರನ್ನು(ಸ) ನಿಜವಾಗಿಯೂ ಪ್ರೀತಿಸುವುದಾದರೆ, ಗೌರವಿಸುವುದಾದರೆ ಅವರ ಜೀವನದ ಆದರ್ಶಗಳನ್ನು ಪಾಲಿಸುವಂತಾಗಬೇಕು. ಇತರ ಧರ್ಮೀಯರನ್ನು ಪ್ರೀತಿಸುವ, ಗೌರವಿಸುವ ವರ್ಗವಾಗಬೇಕು. ಅಶ್ಲೀಲ ಮಾತು, ಪದಗಳು ಉದುರಬಾರದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರಾಗಬೇಕು, ವ್ಯಭಿಚಾರ, ಮೋಸ, ಸುಳ್ಳಿನಿಂದ ಮುಕ್ತವಾಗಿರಬೇಕು.

    ಪ್ರವಾದಿಯವರು(ಸ) ಹೇಳಿದರು, “ವಿಧವೆಯ ಮುಂದೆ ನಿಮ್ಮ ಪತ್ನಿಯೊಂದಿಗೆ ಸರಸವಾಡಬೇಡಿ, ಅನಾಥ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಮುದ್ದಿಸ ಬೇಡಿರಿ, ಪರನಿಂದೆಯಿಂದ ದೂರವಿರಿ,” ಇಂತಹ ಮಾಣಿಕ್ಯದಂತಹ ಬೋಧನೆಯನ್ನು ಜನರು ಪಾಲಿಸಿದರೆ ಖಂಡಿತಾ ಒಳ್ಳೆಯವರಾಗಿ ಬದುಕಲು ಸಾಧ್ಯ. ಫೇಸ್‌ಬುಕ್, ವಾಟ್ಸ್ಅಪ್‌ಗಳಲ್ಲಿ ಅಶ್ಲೀಲ ಪದ, ಬೈದು ಕಮೆಂಟ್ ಹಾಕುವ ಯುವಕರಿಗೆ ಪ್ರವಾದಿವರ್ಯರ(ಸ) ಹೆಸರು ಹೇಳುವ ಯೋಗ್ಯತೆ ಕೂಡಾ ಇಲ್ಲ. ಸಮುದಾಯಕ್ಕೆ ಕಳಂಕ ತರುವ ವರ್ತನೆಗಳು ಸಲ್ಲದು. “ಯಾರದೇ ಧರ್ಮ, ಆಚರಣೆಯನ್ನು ಅಪಹಾಸ್ಯ ಮಾಡದಿರಿ” ಎಂದು ಪ್ರವಾದಿವರ್ಯರು(ಸ) ಹೇಳಿರುವುದನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು.

  • ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತಿ-ಪತ್ನಿಯರ ಸಂಬಂಧ ಕೇವಲ ಶಾರೀರಿಕ ಸುಖಕ್ಕೆ ಮಾತ್ರ ಮೀಸಲು ಎಂಬ ನಂಬಿಕೆ ಕೆಲವರಿಗೆ, ವಂಶ ಬೆಳೆಸುವುದೇ ಮದುವೆಯ ಉದ್ದೇಶ ಎಂದು ಭಾವಿಸುವವರೂ ಇದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಪತಿ-ಪತ್ನಿಯು ಪರಸ್ಪರರ ಹಿತಚಿಂತಕರಾಗಿರುತ್ತಾರೆ.

    ಆದ್ದರಿಂದಲೇ ಕುರ್‌ಆನ್‌ನಲ್ಲಿ ಪತಿ-ಪತ್ನಿಯನ್ನು ಪರಸ್ಪರರ ಉಡುಪು ಎನ್ನಲಾಗಿದೆ. ಅವರನ್ನು ಜೋಡಿ’ ಎನ್ನಲಾಗಿದೆ.ಉಡುಪು’ ಯಾವ ರೀತಿ ಒಂದು ಶರೀರದ ನಗ್ನತೆಯನ್ನು ಮರೆಮಾಡುವ ಮೂಲಕ ಗೌರವಕ್ಕೆ ಪಾತ್ರವಾಗಿರುತ್ತದೋ… ಅದೇ ರೀತಿ ದಂಪತಿಗಳು ಪರಸ್ಪರರ ಗೌರವ ಉಳಿಸುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಪತಿಯು ಆರ್ಥಿಕ ಸ್ತಂಭವಾಗಿದ್ದರೆ, ಪತ್ನಿಯು ಮನೆಯ ಜವಾಬ್ದಾರಿಯನ್ನು ಹೊರುವವಳಾಗಿರುತ್ತಾಳೆ. ಅಂತಹದರಲ್ಲಿ ಪತಿಯು ತನ್ನ ಎಲ್ಲಾ ವ್ಯವಹಾರಗಳ ಬಗ್ಗೆ ತನ್ನ ಸಂಗಾತಿಯೊAದಿಗೆ ಸಮಾಲೋಚನೆ ಮಾಡಬೇಕು. ಇಂದು ಕೆಲವು ಪುರುಷರು ಮಾಡುವ ತಪ್ಪು ಏನೆಂದರೆ ತನ್ನ ಕಾರುಬಾರು ವ್ಯವಹಾರದ ಬಗ್ಗೆ, ತನ್ನ ದುಡಿಮೆಯ ಸ್ಥಿತಿಗತಿ ಬಗ್ಗೆ ಹೆಂಡತಿಗೆ ಯಾವುದೇ ವಿಷಯ ತಿಳಿಸುವುದಿಲ್ಲ. ತಾನು ಸಂಪಾದಿಸುವ ಹಣ ಯಾವ ರೀತಿಯದು, ಹೇಗೆ ಸಂಪಾದಿಸುತ್ತಿದ್ದೇನೆAಬ ವಿವರವನ್ನು ರಹಸ್ಯ ಆಗಿ ಇಡುತ್ತಾರೆ.

    ಒಂದು ಘಟನೆ ಹೀಗಿದೆ. ಇಕ್ಬಾಲ್ ದೊಡ್ಡ ಉದ್ಯಮಿ. ನಗರದಲ್ಲಿ ಅವನು ಎಲ್ಲರ ಗೌರವಕ್ಕೆ ಪಾತ್ರನಾದ ದೊಡ್ಡ ಶ್ರೀಮಂತ ಸಾಲಿಗೆ ಸೇರಿದವನು. ಮನೆಯಲ್ಲಿ ಐದಾರು ಅದ್ಧೂರಿ ಕಾರುಗಳು, ಹೆಂಡತಿ ಮಕ್ಕಳೊಂದಿಗೆ ವಿದೇಶ ತಿರುಗಾಟ, ಹಲವು ಪಾರ್ಟಿಗಳನ್ನು ಅಯೋಜಿಸುತ್ತಾ ಆಡಂಬರದ ಜೀವನದಲ್ಲಿ ಮಜಾದಲ್ಲಿದ್ದ. ಹೆಂಡತಿಗೆ ತನ್ನ ಪತಿಯು ಇಷ್ಟೊಂದು ಹಣ ಎಲ್ಲಿಂದ ತರುತ್ತಿದ್ದಾನೆಂಬ ಚಿಂತೆ ಬಂದಾಗ ಆಕೆ ಪ್ರಶ್ನಿಸುತ್ತಾಳೆ. ಅವನು ಹೇಳಿದ ನನಗೆ ಈ ಸಲ ಉದ್ಯಮದಲ್ಲಿ ಕೋಟಿಗಟ್ಟಲೇ ಲಾಭ ಬಂತು… ನಿನಗೆ ಅದೆಲ್ಲಾ ವಿಷಯ ಬೇಡಾ, ನಿನಗೆ ಏನು ಬೇಕೋ ಅದನ್ನು ಖರೀದಿಸು, ಎಂಜಾಯ್ ಮಾಡು… ಎಂದ. ಒಂದಿನ ಪತಿಯನ್ನು ಪೊಲೀಸರು ಬಂದು ಕರೆದೊಯ್ದಾಗ ಹೆಂಡತಿಗೆ ಅರಿವಾಯಿತು ತಾನಿರುವ ಮನೆ, ತನ್ನ ಸಂಪತ್ತು ಎಲ್ಲವೂ ಮುಳುಗಿ ಹೋಗಿದೆ ಬ್ಯಾಂಕ್‌ನವರು ಅವರ ಅದ್ಧೂರಿ ಮನೆ, ಕಾರು ಎಲ್ಲವನ್ನೂ ಸೀಝ್’ ಮಾಡಿದ್ದರು. ವಿಷಯ ಏನೆಂದರೆ ಈ ಉದ್ಯಮಿ ಪತಿರಾಯ ಬ್ಯಾಂಕ್‌ನಿAದ ಕೋಟಿಗಟ್ಟಲೇ ಲೋನ್ ತೆಗೆದು, ಜನರಿಂದ ಲಕ್ಷಗಟ್ಟಲೇ ಹೂಡಿಕೆಯನ್ನು ಮಾಡಿಸಿ ಎಲ್ಲರಿಗೂ ಪಂಗನಾಮ ಹಾಕಿದ್ದ. ಜನರು ತಾವು ಈ ವ್ಯಕ್ತಿಯನ್ನು ನಂಬಿ ಕೊಟ್ಟ ಕೋಟಿಗಟ್ಟಲೇ ಹಣದಿಂದ ಆತ ಆಡಂಬರದ ಜೀವನ ನಡೆಸುತ್ತಿದ್ದ. ಜನರ ಬೆವರಿನ, ಶ್ರಮದ ಹಣದಲ್ಲಿ ಬೆಲೆಬಾಳುವ ಕಾರುಗಳಲ್ಲಿ ವಿದೇಶಿ ಪ್ರಯಾಣದಲ್ಲಿ ಮಜಾವಾಗಿದ್ದ. ಅರಮನೆಯಿಂದ ಸೀದಾ ಬೀದಿಗೆ ಬಿದ್ದ ಮನೆ ಒಡತಿಗೆ ಸತ್ಯ ತಿಳಿದಾಗ ಆಕೆ ಎಲ್ಲವನ್ನೂ ಕಳೆದುಕೊಂಡು ಬರಿಗೈ ಆಗಿದ್ದಳು. ಪತಿಯು ತನಗೆ ಹೆಚ್ಚು ಆದಾಯ ಬರುತ್ತಿದೆ, ತನ್ನ ಉದ್ಯಮದಲ್ಲಿ ತುಂಬಾ ಲಾಭ ಆಗಿದೆ ಎಂದು ಸದಾ ಅವಳ ಬಳಿ ಹೇಳುತ್ತಿದ್ದ. ಆಕೆ ಅದನ್ನು ನಂಬಿದ್ದಳು. ಇಂದು ಆ ಉದ್ಯಮಿ ಎಲ್ಲಾ ಸಂಪತ್ತು ಕಳೆದುಕಂಡು ಮೂಲೆ ಸೇರಿದ್ದಾನೆ. ಇಲ್ಲಿ ನಮಗೆ ತಿಳಿಯುವ ಒಂದು ಪಾಠ ಏನೆಂದರೆ… ಮನೆಯ ಯಜಮಾನಿ (ಪತ್ನಿ) ತನ್ನ ಪತಿಯ ಸಂಪಾದನೆಯ ಬಗ್ಗೆ ಅಲಕ್ಷö್ಯದಿಂದ ಇರುವುದು, ಅವಳಿಗೆ ಬೇಕಾದಷ್ಟು ಹಣ ಕೈಗೆ ನೀಡಿದಾಗ ಅವಳೂ ಖುಶಿಪಟ್ಟಳು. ಪತಿಯು ಯಾವ ರೀತಿ ಸಂಪಾದಿಸುತ್ತಿದ್ದಾನೆAಬ ಚಿಂತನೆ ಅವಳಿಗೆ ಇರಬೇಕಾಗಿತ್ತು. ಬೆಲೆಬಾಳುವ ವಸ್ತç, ಬಂಗಾರ, ಫರ್ನಿರ‍್ಸ್, ವಿದೇಶ ಯಾತ್ರೆ ಇತ್ಯಾದಿಗಳಲ್ಲಿ ಮೈಮರೆತ ಪತ್ನಿಗೆ ಒಂದು ದಿನ ಇದೆಲ್ಲಾ ನ್ಯಾಯದ ಹಣ ಅಲ್ಲ ಎಂದು ತಿಳಿದಾಗ ಆಕೆ ಕುಸಿದು ಬಿದ್ದಳು.

    ಇಂದು ಹೃದಯಾಘಾತ ಹೆಚ್ಚುತ್ತಿದೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನು ಅಪ್ಪುತ್ತಿದ್ದಾರೆ. ದಿಢೀರನೇ ಬಂದು ಎರಗುವ ಸಾವಿಗೆ ಪತಿಯನ್ನು ಕಳೆದುಕೊಂಡಾಗ ಪತಿಯು ಎಷ್ಟು ಜನರಿಗೆ ಸಾಲ’ ನೀಡಲು ಬಾಕಿ ಇದೆ? ಎಷ್ಟು ಕಡೆ ಅದನ್ನು ಬಿಸಿನೆಸ್‌ಗೆ ಹಣ ಹೂಡಿಕೆ ಮಾಡಿರುತ್ತಾನೇ ಎಷ್ಟು ಹಣ ಆತನಿಗೆ ಬರಬೇಕಾಗಿದೆ, ಆತನ ವ್ಯವಹಾರ ಏನೂ… ಇತ್ಯಾದಿ ಏನೂ ಪತ್ನಿಗೆ ತಿಳಿಯದೇ ಹೋದಾಗ ನಷ್ಟ’ ಉಂಟಾಗುತ್ತದೆ. ಆದರಿಂದಲೇ ಪತಿ-ಪತ್ನಿಯ ನಡುವೆ ಸಮಾಲೋಚನೆ ಇರಬೇಕು. ತಮ್ಮ ವ್ಯವಹಾರ, ಹಣ, ಬಿಸಿನೆಸ್ ವಿಷಯ ಇತ್ಯಾದಿ ವಿಷಯವನ್ನು ಪತ್ನಿಗೆ ತಿಳಿಸಬೇಕು. ಹೆಂಡತಿಗೆ ಹೇಳುವುದರಿಂದ ತಮ್ಮ ಗಂಡಸುತನಕ್ಕೆ ಪೆಟ್ಟಾಗುವುದಿಲ್ಲ. ಯಾಕೆ ಹೆಂಗಸರಿಗೆ ಹೇಳಬೇಕೆಂದು ಚಿಂತಿಸುವುದೇ ದೊಡ್ಡ ತಪ್ಪು. ಪ್ರತೀಯೊಬ್ಬರೂ ತಮ್ಮ ವ್ಯವಹಾರದ ಸಂಗತಿಯನ್ನು ಪತ್ನಿಗೆ ತಿಳಿಸಬೇಕು. ಅವಳು ನಿಮ್ಮ ಬಾಳಸಂಗಾತಿ. ಭವಿಷ್ಯದ ಲಾಭ, ನಷ್ಟಕ್ಕೆ ಅವಳೂ ಭಾಗಿಯಾಗುತ್ತಾಳೆ. ನನ್ನ ಪತಿ ಈ ರೀತಿ ಜನರಿಗೆ ಮೋಸ ಮಾಡಿ ಹಣ ಸಂಪಾದಿಸುತಿದ್ದ ಎಂದು ಗೊತ್ತಿದ್ದರೆ… ನಾನು ದುಂದುವೆಚ್ಚ ಮಾಡದೇ ಬದುಕುತ್ತಿದ್ದೆ. ನಾನು ಆತನನ್ನು ಅನ್ಯಾಯದ ಗಳಿಕೆಯಿಂದ ತಡೆಯುತ್ತಾ ಇದ್ದೆ… ಎಂದು ನಂತರ ಪಶ್ಚಾತ್ತಾಪ ಪಡುವುದು ಬೇಡ.

    ಇಂದು ಪತಿ ಸಾಲ ಮಾಡಿ ಮಕ್ಕಳ ಬರ್ತ್ಡೇ ಮಾಡುವುದು, ಸಾಲಮಾಡಿ ಪ್ರವಾಸಕ್ಕೆ ಹೋಗುವುದು, ಮದುವೆಗೆ ಗಿಫ್ಟ್ ಖರೀದಿಸುವುದು, ಬಸುರಿಯ ಸೀಮಂತ ಮಾಡುವುದೂ… ಎಲ್ಲವೂ ಮಹಿಳೆಯರ ಒತ್ತಾಯದಿಂದಲೇ ಆಗಿರುತ್ತದೆ. ಗಂಡಸರು ಹಣ ಸಾಲ ಮಾಡಿ ಖರ್ಚು ಮಾಡುವುದು ಕೇವಲ ಮಹಿಳೆಯರಿಗೆ ನೆಮ್ಮದಿ ಸಿಗಲಿ ಎಂದಾಗಿದೆ. ಒಡವೆ, ಸೀರೆ, ಪಾತ್ರೆ… ಸ್ಕೀಮ್‌ನಲ್ಲಿ ಖರೀದಿಸಿ, ತಿಂಗಳ ಹಣ ಕಟ್ಟಲು ಗಂಡಸರನ್ನು ಒತ್ತಾಯಿಸುವುದು ಅವರು ಎಲ್ಲಿಂದಲಾದರೂ ತರಲಿ ಎಂದು ಸುಮ್ಮನಿರುವುದು ತಪ್ಪು.ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿದೆ. ಪತಿಯು ತನ್ನ ಕುಟುಂಬದ ಖುಶಿಗಾಗಿ ಸಾಲಗಾರನಾಗುತ್ತಾನೆ.

    ಗಲ್ಫ್ನಲ್ಲಿ ಬೆವರು ಸುರಿಸಿ ಶ್ರಮವಹಿಸಿ ದುಡಿದು ಕಳಿಸುವ ಪತಿಯ ಹಣವನ್ನು ಇಲ್ಲಿ ಶಾಪಿಂಗ್‌ಗಾಗಿ, ಬಗೆ ಬಗೆಯ ತಿಂಡಿ, ಪಾರ್ಟಿಗಾಗಿ ಖರ್ಚು ಮಾಡುವ ಮಹಿಳೆಯರಿಗೆ ಭರವಿಲ್ಲ. ಹಣ ಇರುವಾಗ ಮಾತ್ರ ಪತಿಗೆ ಗೌರವ, ಮನ್ನಣೆ ನೀಡುವ ಆತನು ಬರಿಕೈಯವನಾದಾಗ ಆತನನ್ನು ದೂರ ಮಾಡುವ ಪತ್ನಿಯರೂ ಇದ್ದಾರೆ. ಇಂತಹ ಪತ್ನಿಯರನ್ನು ಕೃತಜ್ಞತೆ ಇಲ್ಲದ ವರ್ಗಕ್ಕೆ ಸೇರಿಸಬಹುದು. ಪತಿ-ಪತ್ನಿಯ ನಡುವೆ ಯಾವುದೇ ವಿಷಯಕ್ಕೂ ರಹಸ್ಯ ಇರಬಾರದು. ಅವರಿಬ್ಬರು ತೆರೆದ ಪುಸ್ತಕದಂತೇ ಪ್ರತೀ ಒಂದು ವ್ಯವಹಾರ, ವಿಷಯ ಪರಸ್ಪರರ ನಡುವೆ ಚರ್ಚೆ ಆಗಬೇಕು. ಪತಿಯನ್ನು ವಿನಾಶದಿಂದ ರಕ್ಷಿಸುವುದು ಪತ್ನಿಯ ಧರ್ಮವಾಗಿದೆ.

    ಕೆಲವು ಪತಿಯಂದಿರು ಊರಲ್ಲಿ ತುಂಬಾ ಸಾಲ ಮಾಡಿ ನಂತರ ವಿದೇಶಕ್ಕೆ ಪರಾರಿಯಾಗಿ ಬಿಡುತ್ತಾರೆ. ಊರಲ್ಲಿ ಸಾಲಗಾರರು ಪತ್ನಿಯನ್ನು ಬದುಕಲೂ ಬಿಡುವುದಿಲ್ಲ. ಅವಳಿಗೆ ಕಿರುಕುಳ ನೀಡುತ್ತಾರೆ. ಇಂತಹ ಹಲವು ಕೇಸ್‌ಗಳು ನಮ್ಮ ಕೌನ್ಸಿಲಿಂಗ್‌ಗೆ ಬಂದಿದೆ. ಇದರಿಂದ ಬಚಾವ್ ಆಗಲು ಹೆಂಡತಿ ಪತಿಗೆ ತಲಾಕ್ ಕೇಳುತ್ತಾಳೆ. ಆತನ ಹೆಂಡತಿ ಆಗಿ ತಾನು ಈಗ ಇಲ್ಲ ಎಂದು ಸಾಲಗಾರರಿಗೆ ಹೇಳಿ ಆಕೆ ಬಚಾವ್ ಆಗಲು ನೋಡುತ್ತಾಳೆ. ಸಾಲ ಮಾಡಿ ಪರಾರಿ ಆಗುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಅವರ ಕುಟುಂಬ ಜೀವನವೂ ನಷ್ಟ ಆಗುತ್ತದೆ. ಪತ್ನಿಯ ಆತಿ ಆಶೆ, ಬೇಕಾಬಿಟ್ಟಿ ಖರ್ಚು, ಪತಿಯನ್ನು ಸಾಲಗಾರನನ್ನಾಗಿ ಮಾಡುವುದೇ ಸತ್ಯ. ಆದುದರಿಂದ ಪತಿ-ಪತ್ನಿಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಸಾಲ' ಬದುಕನ್ನು ನರಕ ಮಾಡುತ್ತದೆ.ಸಾಲ’ ಬದುಕನ್ನೇ ಅಂತ್ಯ’ ಮಾಡುತ್ತದೆ. ಪತ್ನಿಯ ಬಳಿ ತಮ್ಮ ವ್ಯವಹಾರವನ್ನು, ಹಣಕಾಸು ವಿಷಯವನ್ನು ಹೇಳುವುದು ತಮ್ಮ ಪುರುಷತ್ವ(ಅಹಂಕಾರ)ಕ್ಕೆ ಅಡ್ಡಿ ಎಂದು ಭಾವಿಸುವುದು ಮೂರ್ಖತನ.

    ಪತ್ನಿಯು ಪತಿಯ ಹಿತವನ್ನೇ ಬಯಸುವವಳು. ಅವಳು ಪತಿಯನ್ನುಹರಾಮ್’ ದಾರಿಗೆ ಸಾಗಲು ಅವಕಾಶ ನೀಡಲಾರಳು. ಹರಾಮ್ ಅಥವಾ ವಂಚನೆಯ ಸಂಪಾದನೆಗೆ ಹೆಂಡತಿ, ಮಕ್ಕಳು ಭಾಗೀದಾರರಾಗಿರಲು ಆಶಿಸುವುದಿಲ್ಲ. ಜೀವನ ನ್ಯಾಯದ ಸಂಪಾದನೆಯಲ್ಲಿರಲಿ. ನಾಳೆ ದೇವನ ಬಳಿ ಅಪರಾಧಿ ಆಗಿ ನಿಲ್ಲುವ ಹೀನ ಸ್ಥಿತಿ ಬಾರದಿರಲಿ.

    ಶಮು

  • ಹೃದಯದ ಮಾತು: 
ಶಹನಾಝ್ ಎಂ.

    ಹೃದಯದ ಮಾತು: ಶಹನಾಝ್ ಎಂ.

    ಇಂದಿನ ಆಧುನಿಕ ಶೈಕ್ಷಣಿಕವಾಗಿ ಮುಂದುವರಿದ ಸಮಾಜದಲ್ಲೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮೌಢ್ಯಗಳು ನೆಲೆಸಿದೆ ಎಂದರೆ ನಾಚಿಗೆಕೇಡು. ನಮ್ಮ ಮಹಾರಾಷ್ಟçದಲ್ಲಿ ಶಾಲೆಯ ಶೌಚಾಲಯದಲ್ಲಿ ಹೆಣ್ಣಿನ ಮಾಸಿಕ ಮುಟ್ಟುವಿನ ರಕ್ತದ ಕಲೆಗಳು ಕಾಣಿಸಿದಕ್ಕಾಗಿ ಶಿಕ್ಷಕನೋರ್ವ ವಿದ್ಯಾರ್ಥಿನಿಯರ ವಸ್ತç ಬಿಚ್ಚಿಸಿ ತನಿಖೆ ಮಾಡಿದರಂತೆ! ಮಹಿಳಾ ಸಮೂಹಕ್ಕೇ ಇದು ಅವಮಾನದ ಸಂಗತಿ. ಹೆಣ್ಣಿಗೆ ತಾನು ಯಾವ ದಿನಕ್ಕೆ ಮುಟ್ಟಾಗುತ್ತೇನೆಂದು ಸರಿಯಾಗಿ ತಿಳಿಯದೇ ಇರುವ ಪರಿಸ್ಥಿತಿಯಲ್ಲಿರುವಾಗ ಶಾಲೆಯಲ್ಲಿ ರಕ್ತಸ್ರಾವ ಆದಾಗ ಏನು ಮಾಡಬೇಕು? ಹಾರ್ಮೋನಿನ ಏರುಪೇರಿನಿಂದ ಯಾವಾಗಬೇಕಾದರೂ ರಕ್ತ ಕಾಣಿಸಬಹುದು. ಅಂತಹ ಸಮಯದಲ್ಲಿ ಈ ಹೆಣ್ಣಿಗೆ ಸಾಂತ್ವನ, ನೆರವು ನೀಡಬೇಕಾದದ್ದು ಹತ್ತಿರ ಇರುವವರ ಧರ್ಮ. ಶಾಲೆಗಳಲ್ಲಿ, ಕಾಲೇಜಿನಲ್ಲಿ, ಆಫೀಸ್, ಕಚೇರಿಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ, ಬಸ್‌ಸ್ಟಾಂಡ್‌ಗಳಲ್ಲಿ ಇಂತಹ ತುರ್ತು ಸಮಯಕ್ಕಾಗಿ ಅಲ್ಪದರದಲ್ಲಿ ಕೈಗೆಟುಕುವಂತೆಪ್ಯಾಡ್’ಗಳು ಸುಲಭವಾಗಿ ಸಿಗುವಂತೆ ಏರ್ಪಾಡು ಇರಬೇಕು. ಶಾಲೆಯಲ್ಲಿ ಇದು ಬಹಳ ಮುಖ್ಯ. ಆ ಸಮಯದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಪಡುವ ಹದಿಹರೆಯದ ಹುಡುಗಿಯರಿಗೆ ಶಿಕ್ಷಕರಿಂದ ಸಾಂತ್ವನ ಮುಖ್ಯ. ಇಂತಹ ಮೂರ್ಖ ಶಿಕ್ಷಕನಿಗೆ ಅಮಾನತು ಮಾಡುವುದೇ ಉತ್ತಮ ಶಿಕ್ಷೆ.

    ಭಾರತದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ, ಅವಮಾನಗಳ ಬಗ್ಗೆ ಪತ್ರಿಕೆಯಲ್ಲಿ ಓದುವಾಗ ಮೈ ಉರಿಯುತ್ತದೆ. ಯಾಕೆ ದಲಿತರು ಇನ್ನೂ ಮೌನ ಆಗಿದ್ದಾರೆ! ಒಗ್ಗಟ್ಟಾಗಿ ಈ ಅನ್ಯಾಯ, ಅಸ್ಪೃಶ್ಯತೆಯ ವಿರುದ್ಧ ಬೀದಿಗೆ ಇಳಿದು ಹೋರಾಟ ನಡೆಸಬಾರದೇಕೆ! ಮೌನ'ವೇ ಇವರ ದುರಂತಕ್ಕೆ ಕಾರಣವಲ್ಲವೇ? ಮೈಸೂರಿನ ಶಾಲೆ ಒಂದರಲ್ಲಿ ಬಿಸಿ ಊಟಕ್ಕೆ ಓರ್ವ ದಲಿತ ಮಹಿಳೆಯನ್ನು ನೇಮಿಸಿದಕ್ಕೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಗೈರು ಹಾಜರಿಯಾಗಿ ಒಬ್ಬನೇ ವಿದ್ಯಾರ್ಥಿ ಉಳಿದನೆಂದು ಸುದ್ದಿ ಓದಿದೆ. ಇದೆಂತಹಾ ಮನಃಸ್ಥಿತಿ! ಕರುವನ್ನು ಮಾರಲು ಬಂದ ದಲಿತರಿಬ್ಬರ ತಲೆ ಬೋಳಿಸಿ ಅವರ ಬಾಯಲ್ಲಿ ಹುಲ್ಲು ತುಂಬಿ ಮೊಣಕಾಲಿನಲ್ಲಿ ತೆವಳಿಸಿಕೊಂಡು ದೌರ್ಜನ್ಯ ನಡೆಸಿದರು ಮೇಲು ಜಾತಿಯವರು. ದಲಿತರ ಓಟು ಈ ದೇಶದ ರಾಜಕೀಯ ಪಕ್ಷಕ್ಕೆ ಅತೀ ಮುಖ್ಯ. ಅವರ ಸಹವಾಸ ಬೇಡ. ಇವರನ್ನು ಉ. ಭಾರತದಲ್ಲಿ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆಂದರೆ ದಲಿತ ಯುವತಿಯರನ್ನು ಅತ್ಯಾಚಾರ ಮಾಡಿ ಕೊಂದು ಮರಗಳಲ್ಲಿ ನೇತು ಹಾಕುತ್ತಾರೆ. ಅವರೂ ಮನುಷ್ಯರೇ ಅಲ್ಲವೇ? ಮಾನವರೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳೆಂದು ಹೇಳುತ್ತದೆ ಧರ್ಮ. ಬಿಳಿಯನೂ-ಕರಿಯನೂ ಸಮಾನರೆಂದು, ಶ್ರೀಮಂತ-ಬಡನೂ ಸಮಾನರೆಂದೂ ಬೋಧಿಸುತ್ತದೆ ಇಸ್ಲಾಮ್. ಅನ್ಯಾಯವನ್ನು ಮೌನವಾಗಿ ಸಹಿಸುವುದೂ ಒಂದು ಅಪರಾಧವೇ ಆಗಿದೆ. ಇನ್ನಾದರೂ ದಲಿತರು ಧ್ವನಿ ಎತ್ತುವಂತಾಗಲಿ. ಭಾರತಕ್ಕೆ ಸ್ವಾತಂತ್ರö್ಯ ಲಭಿಸಿ ಎಪ್ಪತ್ತೆಂಟನೇ ವರ್ಷ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಸ್ವಾತಂತ್ರö್ಯ ಲಭಿಸಿದೆಯೇ?! ಕೋಮುದ್ವೇಷಿ ರಾಜಕೀಯ ನಮ್ಮನ್ನು ಇಂದು ಬ್ರಿಟಿಷರ ಕಾಲಕ್ಕೆ ದೂಡಿ ಬಿಟ್ಟಿದೆ. ನಾವಿಂದು ಹೋರಾಡ ಬೇಕಾಗಿದೆ ಈಶತ್ರು’ಗಳ ವಿರುದ್ಧ.