Tag: #anupama magazine

  • ಗ್ಯಾಸ್ಟ್ರಿಕ್ ಮತ್ತು ಹೃದಯಾಘಾತಕ್ಕಿರುವ ಲಕ್ಷಣಗಳೇನು?ಗಾಬರಿ ಬೇಡ, ಇಲ್ಲಿದೆ ಮುನ್ನೆಚ್ಚರಿಕೆ ಕ್ರಮಗಳು…

    ಗ್ಯಾಸ್ಟ್ರಿಕ್ ಮತ್ತು ಹೃದಯಾಘಾತಕ್ಕಿರುವ ಲಕ್ಷಣಗಳೇನು?ಗಾಬರಿ ಬೇಡ, ಇಲ್ಲಿದೆ ಮುನ್ನೆಚ್ಚರಿಕೆ ಕ್ರಮಗಳು…

    ಹೃದಯಾಘಾತದ ಪ್ರಕರಣಗಳು ಈಗ ಭಯದ ವಾತಾವರಣವನ್ನು ಸೃಷ್ಟಿಸಿವೆ. ಆಸ್ಪತ್ರೆಗೆ ಎದೆನೋವು ಎಂದು ಬರುವ ಸಾಕಷ್ಟು ಜನರು ತಮಗಾಗಿರುವುದು ಹೃದಯ ಸಂಬಂಧಿ ಸಮಸ್ಯೆಯೋ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಯೋ ಅರಿಯದೇ ಗೊಂದಲಕ್ಕೀಡಾಗುತ್ತಿದ್ದಾರೆ. ಹಾರ್ಟ್ ಅಟ್ಯಾಕ್‌ನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ನಿರ್ಲಕ್ಷಿಸಿದವರೂ ಹಲವರು. ಹೀಗಾಗಿ ಈ ಸಂದರ್ಭದಲ್ಲಿ ಇವೆರಡು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ.


    ಗ್ಯಾಸ್ಟ್ರಿಕ್‌ ಮತ್ತು ಹಾರ್ಟ್ ಅಟ್ಯಾಕ್‌ ನಡುವೆ ಗೊಂದಲವಾಗುವುದೇಕೆ?
    ಹೃದಯ, ಅನ್ನನಾಳ ಹಾಗೂ ಹೊಟ್ಟೆ ಇವು ಮೂರೂ ನಮ್ಮ ದೇಹದಲ್ಲಿ ಪರಸ್ಪರ ಸಮೀಪದಲ್ಲೇ ಇವೆ ಹಾಗೂ ಒಂದೇ ರೀತಿಯ ನರ ವ್ಯೂಹವನ್ನು ಹೊಂದಿರುತ್ತವೆ. ಈ ರೀತಿಯ ಅಂಗ ಹಾಗೂ ನರ ಮಂಡಲ ರಚನೆಯ ಕಾರಣಕ್ಕೆ ದೇಹದ ಮೇಲ್ಭಾಗದಲ್ಲಿ ನೋವುಂಟಾದಾಗ ಹೃದಯ ಸಂಬಂಧಿತ ಸಮಸ್ಯೆಯೋ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಯೋ ಅರ್ಥ ಮಾಡಿಕೊಳ್ಳುವುದು ಸಾಮಾನ್ಯ ಜನರಿಗೆ ಕಷ್ಟವಾಗುತ್ತದೆ. ಗಂಭೀರ ಗ್ಯಾಸ್ಟ್ರಿಕ್‌ ಸಮಸ್ಯೆ ಎದುರಿಸುತ್ತಿರುವ ರೋಗಿ ಎದೆನೋವು, ಉರಿ ಅನುಭವ ಪಡೆಯುವುದು ಸಾಮಾನ್ಯ. ಇದೇ ಹೃದಯಾಘಾತ ಎಂದು ತುರ್ತು ವೈದ್ಯಕೀಯ ನೆರವಿಗೆ ತೆರಳುತ್ತಾರೆ. ಅದೇ ರೀತಿ ಹೃದಯಾಘಾತ ಸಂಭವಿಸಿದ್ದರೂ ವಾಕರಿಕೆ, ವಾಂತಿ, ಹೊಟ್ಟೆ ನೋವನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ಕಡೆಗಣಿಸುವ ಸಾಧ್ಯತೆಯೂ ಇದೆ.


    ಗ್ಯಾಸ್ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಎರಡೂ ಒಂದೆಯೇ?
    ಗ್ಯಾಸ್‌ ಮತ್ತು ಗ್ಯಾಸ್ಟ್ರಿಕ್‌ ನಡುವೆ ವ್ಯತ್ಯಾಸವಿದೆಯೇ ಇಲ್ಲವೇ? ಎಂಬ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವಿದೆ. ವೈದ್ಯಕೀಯ ದೃಷ್ಟಿಯಲ್ಲಿ ಎರಡಕ್ಕೂ ಸಂಬಂಧ ಇದೆ. ಗ್ಯಾಸ್ಟ್ರಿಕ್‌ ಸಮಸ್ಯೆಗೆ ಗ್ಯಾಸ್ ಕಾರಣ. ಗ್ಯಾಸ್‌ ಎನ್ನುವುದು ಆಹಾರ ಜೀರ್ಣಕ್ರಿಯೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನಿಲ. ತೇಗಿನ ಮೂಲಕ ಗ್ಯಾಸನ್ನು ದೇಹದಿಂದ ಹೊರಹಾಕಬಹುದು. ಆದರೆ ದೇಹದಿಂದ ಹೊರ ಹೋಗದೇ ಉಳಿದ ಗ್ಯಾಸ್‌ ಜೀರ್ಣಾಂಗ ವ್ಯವಸ್ಥೆಯಲ್ಲಿ ಉಳಿದುಕೊಂಡು ಸಮಸ್ಯೆ ಸೃಷ್ಟಿಸಬಹುದು. ಇದನ್ನು ಗ್ಯಾಸ್ಟ್ರಿಕ್‌ ಸಮಸ್ಯೆ ಎಂದು ಹೇಳಬಹುದು.


    ಹೃದಯಾಘಾತದ ಲಕ್ಷಣಗಳೇನು?
    ಹೃದಯಾಘಾತ ಸಂಭವಿಸಿದಾಗ ಹೃದಯ ಹಿಂಡಿದಂತಹಾ ಅನುಭವ ಉಂಟಾಗುತ್ತದೆ. ಇದು ಯಾವುದೇ ಪೆಟ್ಟು ಅಥವಾ ಗಾಯದಿಂದ ಉಂಟಾದ ನೋವಲ್ಲ ಎಂಬುದು ತಿಳಿಯುತ್ತದೆ. ಎದೆಯ ಮೇಲೆ ಭಾರವಾದ ವಸ್ತು ಇಟ್ಟಂತಹ ಅನುಭವ. ದೇಹದ ಮಧ್ಯಭಾಗದಲ್ಲಿ ಆರಂಭವಾಗುವ ನೋವು ಕೈ, ಕುತ್ತಿಗೆ, ದವಡೆ ಹಾಗೂ ಬೆನ್ನಿಗೆ ಹರಡುತ್ತದೆ. ಸುಮಾರು 5 ನಿಮಿಷಗಳ ಕಾಲ ಸಾಕಷ್ಟು ನೋವು ಅನುಭವವಾಗುತ್ತದೆ. ಇದರ ಜೊತೆಗೆ ಉಸಿರಾಟದಲ್ಲಿ ಕಷ್ಟ, ಬೆವರು, ವಾಕರಿಕೆ, ತಲೆತಿರುಗಿದ ಅನುಭವ, ಅಶಕ್ತತೆ ಕೂಡ ಅನುಭವವಾಗಬಹುದು. ಡಯಾಬಿಟಿಸ್, ಹೈ ಬಿಪಿ, ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಳಲುತ್ತಿರುವವರು, ಧೂಮಪಾನ, ತಂಬಾಕು ಸೇವನೆ ಮಾಡುವವರು, ಕುಟುಂಬದಲ್ಲಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದವರಿದ್ದರೆ 30 ವರ್ಷ ಮೇಲ್ಪಟ್ಟವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ.


    ಗ್ಯಾಸ್ಟ್ರಿಕ್‌ ಸಮಸ್ಯೆ ಲಕ್ಷಣಗಳೇನು?
    ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುವ ಜೊತೆಗೆ ಚುಚ್ಚಿದಂತಹ, ಉರಿ ಅನುಭವ ಉಂಟಾಗುತ್ತದೆ. ಪ್ರತಿ ಬಾರಿ ಕೆಲವು ಸೆಕೆಂಡುಗಳ ಕಾಲ ಈ ನೋವು ಅನುಭವಕ್ಕೆ ಬಂದು ಮತ್ತೆ ಮುಂದುವರೆಯುತ್ತದೆ. ಇದು ನಿರಂತರ ನೋವಲ್ಲ. ಖಾರ ಮತ್ತು ಅತಿ ಹುಳಿ ಪದಾರ್ಥಗಳನ್ನು ಸೇವಿಸಿದಾಗ, ಮದ್ಯಪಾನ ಹಾಗೂ ಕೆಲ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ವಾಕರಿಕೆ, ಹೊಟ್ಟೆ ಉಬ್ಬರ, ವಾಂತಿ, ಬಾಯಲ್ಲಿ ಹುಳಿ ರುಚಿ ಅನುಭವ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳಾಗಿವೆ. ಇಲ್ಲಿ ದೇಹದ ವಿವಿಧ ಅಂಗಗಳಿಗೆ ನೋವು ಹರಡುವ ಸಾಧ್ಯತೆ ಇರುವುದಿಲ್ಲ. ಹಾಗೇ ಗ್ಯಾಸ್‌ ಪಾಸ್‌ ಮಾಡಿದ ಬಳಿಕ ಈ ನೋವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ.


    ಯಾವಾಗ ವೈದ್ಯರನ್ನು ಕಾಣಬೇಕು? ಗೊಂದಲವಿದ್ದಲ್ಲಿ ಏನು ಮಾಡಬೇಕು?
    ಹೊಟ್ಟೆ ಮತ್ತು ಹೃದಯಭಾಗದ ಮಧ್ಯದಲ್ಲಿ ನಿರಂತರ ನೋವು ಹಾಗೂ ಈ ನೋವು ದೇಹದ ವಿವಿಧ ಭಾಗಗಳಿಗೆ (ಕೈ, ಬೆನ್ನು, ದವಡೆ) ಹರಡುವ ಅನುಭವವಾಗುತ್ತಿದ್ದಲ್ಲಿ, ಜೊತೆಗೆ ಬೆವರುವುದು, ಉಸಿರಾಟದಲ್ಲಿ ಕಷ್ಟ ಉಂಟಾದರೆ ತಡ ಮಾಡದೇ ವೈದ್ಯರನ್ನು ಭೇಟಿಯಾಗಿ. ಇಸಿಜಿ, ಇಸಿಹೆಚ್‌ಒ, ಟಿಎಂಟಿ ಅಥವಾ ರಕ್ತ ಪರೀಕ್ಷೆಗಳಾದ ಸಿಕೆ ಎಮ್‌ಬಿ, ಟ್ರೊಪೊನೊನಿನ್‌ ಟಿ ಮತ್ತು ಎಂಜಿಯೊಗ್ರಾಮ್ ಮೂಲಕ ಹೃದಯಾಘಾತವನ್ನು ಪತ್ತೆ ಹಚ್ಚಿ ಸಾವಿನ ಸಂಭವವನ್ನು ತಡೆಯಬಹುದು. ಹೃದಯ ಸಮಸ್ಯೆಯ ಸಾಧ್ಯತೆ ಹೆಚ್ಚಿದೆ ಅನಿಸಿದ್ದಲ್ಲಿ ಟ್ರೆಡ್‌ಮಿಲ್‌ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಕಾರ್ಡಿಯಾಕ್‌ ಪರೀಕ್ಷೆ ನೆಗೆಟಿವ್‌ ಬಂದಲ್ಲಿ ಆಂಟಾಸಿಡ್ ಕೂಡ ನೀಡಬಹುದಾಗಿದೆ. ಗ್ಯಾಸ್ಟ್ರಿಕ್‌ ಸಂಶಯವಿದ್ದಲ್ಲಿ ಎಂಡೊಸ್ಕೊಪಿ, ಪಿಹೆಚ್‌-ಮೆಟ್ರಿ ಅಥವಾ ಮ್ಯಾನೊಮೆಟ್ರಿ ವಿಧಾನ (ಒತ್ತಡ ಮಾಪನ ವಿಧಾನ) ಅಗತ್ಯವಾಗಬಹುದು.
    ಒಟ್ಟಿನಲ್ಲಿ, ಹಾರ್ಟ್ ಅಟ್ಯಾಕ್‌ ಬಂದ ನಂತರ ಏನು ಮಾಡುವುದು ಎನ್ನುವುದಕ್ಕಿಂತ ಆಗದಂತೆ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯ. ಹೃದಯಾಘಾತದಂತಹ ಸಂದರ್ಭ ಎದುರಾದಾಗ ರೋಗಿಯ ಜೊತೆಗಿರುವವರು ಗಾಬರಿಯಾಗದೇ ತಕ್ಷಣ ವೈದ್ಯರ ನೆರವು ಪಡೆಯುವುದು ಅಗತ್ಯ. ಹಾಗೇ ಗ್ಯಾಸ್ಟ್ರಿಕ್‌ ಸಮಸ್ಯೆ ಎನಿಸಿದ್ದೂ ನೋವು ನಿರಂತರವಾಗಿದ್ದಲ್ಲಿ ನಿರ್ಲಕ್ಷಿಸದೇ ವೈದ್ಯರ ನೆರವು ಪಡೆಯಿರಿ.


    ಹೃದಯಾಘಾತ ತಡೆಗೆ ಮುನ್ನೆಚ್ಚರಿಕೆ ಕ್ರಮಗಳೇನು ?
    ಆರೋಗ್ಯಪೂರ್ಣ ಜೀವನಶೈಲಿ ಹಾಗೂ ಈಗಾಗಲೇ ಹೃದಯ ಸಂಬಂಧಿತ ಅಥವಾ ಡಯಾಬಿಟಿಸ್, ಹೈಪರ್‍‌ಟೆನ್ಷನ್, ಬೊಜ್ಜಿನಂತಹ ಸಮಸ್ಯೆಗಳಿದ್ದರೆ ಸೂಕ್ತ ಚಿಕಿತ್ಸೆ ಮತ್ತುನಿಯಮಿತ ತಪಾಸಣೆ ಪಡೆಯುವುದು, ನಿಯಮಿತ ವ್ಯಾಯಾಮ, ಒತ್ತಡ ರಹಿತ ಜೀವನ ರೂಪಿಸಿಕೊಳ್ಳುವುದು, ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರುವುದೇ ಹೃದಯಾಘಾತ ತಡೆಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು.


    ಡಾ. ಎಂ.ಎನ್‌.ಭಟ್‌, ಹಿರಿಯ ಇಂಟರ್ವೆನ್ಶನಲ್‌ ಕಾರ್ಡಿಯಾಲಾಜಿಸ್ಟ್‌ ಹಾಗೂ ಡಾ. ಅನುರಾಗ ಶೆಟ್ಟಿ, ಮೆಡಿಕಲ್ ಗ್ಯಾಸ್ಟ್ರೋಎಂಟಿರಾಲಜಿಸ್ಟ್‌, ಕೆಎಂಸಿ ಆಸ್ಪತ್ರೆ, ಮಂಗಳೂರು

  • ಚರ್ಚ್ ಮೇಲೆ ಇಸ್ರೇಲ್ ಮಿಸೈಲ್ ದಾಳಿ:ಸ್ಪಷ್ಟೀಕರಣ ನೀಡದಿರಲು ಕಾರಣವೇನು?

    ಚರ್ಚ್ ಮೇಲೆ ಇಸ್ರೇಲ್ ಮಿಸೈಲ್ ದಾಳಿ:ಸ್ಪಷ್ಟೀಕರಣ ನೀಡದಿರಲು ಕಾರಣವೇನು?

    ಗಾಝಾದಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್‌ ಮೇಲೆ ಗುರುವಾರ ಬೆಳಿಗ್ಗೆ ಇಸ್ರೇಲ್‌ ಶೆಲ್‌ ದಾಳಿ ಮಾಡಿದೆ. ದಾಳಿಯಲ್ಲಿ ಚರ್ಚ್‌ನ ಪಾದ್ರಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
    ಇತ್ತೀಚೆಗೆ ಮೃತಪಟ್ಟ ಪೋಪ್‌ ಫ್ರಾನ್ಸಿಸ್‌ ಅವರಿಗೆ ಈ ಚರ್ಚ್‌ನ ಪಾದ್ರಿ, ಫಾದರ್‌ ಗೇಬ್ರಿಯಲ್‌ ರೊಮಾನಿ ಅವರು ಅತ್ಯಂತ ಆಪ್ತರಾಗಿದ್ದರು. ಗಾಝಾ ಮೇಲೆ ಇಸ್ರೇಲ್‌ ದಾಳಿ ನಡೆಸಲು ಆರಂಭಿಸಿದಾಗಿನಿಂದಲೂ ಫ್ರಾನ್ಸಿನ್‌ ಅವರು ಗೇಬ್ರಿಯಲ್‌ ಅವರಿಗೆ ಪದೇ ಪದೇ ಕರೆ ಮಾಡಿ, ಜನರ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು.

    ದಾಳಿಯ ಬಗ್ಗೆ ಇಸ್ರೇಲ್‌ ಸೇನೆ ಈವರೆಗೂ ‍ಪ್ರತಿಕ್ರಿಯೆ ನೀಡಿಲ್ಲ. ಹಮಾಸ್ ಯೋಧರನ್ನು ಗುರಿಯಾಗಿಸುವ ನೆಪದಲ್ಲಿ ಇಸ್ರೇಲ್ ಗಾಝಾದ ಅಮಾಯಕರ ಹತ್ಯೆ ಮಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಗಾಝಾ ನಗರದ ಕಟ್ಟಡಗಳ ಮೇಲೆ ನಿರಂತರ ಮಿಸೈಲ್ ದಾಳಿ ಮಾಡುವ ಮೂಲಕ, ಇಸ್ರೇಲ್ ಗಾಝಾದ ಜನರಿಗೆ ಆಶ್ರಯ ಇಲ್ಲದಂತೆ ಮಾಡುತ್ತಿದೆ.

  • “ಮತಗಳನ್ನು ಕದಿಯುವಾಗಲೇ ಚುನಾವಣಾ ಆಯೋಗ ಸಿಕ್ಕಿಬಿದ್ದಿದೆ”:ರಾಹುಲ್ ಗಾಂಧಿ ಆರೋಪಿಸಿದ್ದೇಕೆ?

    “ಮತಗಳನ್ನು ಕದಿಯುವಾಗಲೇ ಚುನಾವಣಾ ಆಯೋಗ ಸಿಕ್ಕಿಬಿದ್ದಿದೆ”:ರಾಹುಲ್ ಗಾಂಧಿ ಆರೋಪಿಸಿದ್ದೇಕೆ?

    ‘ಬಿಹಾರದ ಚುನಾವಣೆ ಹೊಸ್ತಿಲಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ (SIR) ಹೆಸರಿನಲ್ಲಿ ಮತಗಳನ್ನು ಕದಿಯುವಾಗ ಚುನಾವಣಾ ಆಯೋಗ ಕೈಗೆ ಸಿಕ್ಕಿಬಿದ್ದಿದ್ದು, ಆಯೋಗವು ಬಿಜೆಪಿಯ ‘ಎಲೆಕ್ಷನ್‌ ಚೋರಿ ಬ್ರಾಂಚ್‌’ ಆಗಿ ಬದಲಾಗಿದೆಯೇ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಳಿದ್ದಾರೆ.
    22 ವರ್ಷಗಳ ನಂತರ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಇದರಲ್ಲಿ ಅನರ್ಹ, ಒಂದಕ್ಕಿಂತ ಹೆಚ್ಚು ಬಾರಿ ಹೆಸರಿರುವ ಹಾಗೂ ಕಾನೂನಿನ್ವಯ ಅರ್ಹ ಮತದಾರರ ಹೆಸರು ಸೇರಿಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಮುನ್ನುಡಿ ಬರೆದಿದೆ.
    ಯುಟ್ಯೂಬರ್‌ ಅಜಿತ್ ಅಂಜುಮ್ ಅವರು ಬಿಹಾರದಲ್ಲಿ ಕೈಗೊಂಡಿರುವ SIR ಕುರಿತು ಸರಣಿ ವರದಿಗಳನ್ನು ಪ್ರಸಾರ ಮಾಡಿದ್ದರು. ಇವುಗಳನ್ನು ರಾಹುಲ್ ಗಾಂಧಿ ಮರು ಹಂಚಿಕೊಂಡಿದ್ದು, ‘SIR ಹೆಸರಿನಲ್ಲಿ ಚುನಾವಣಾ ಆಯೋಗವು ಮತಗಳನ್ನು ಕದಿಯುವಾಗಲೇ ಸಿಕ್ಕಿಬಿದ್ದಿದೆ. ಈ ಸುದ್ದಿಯನ್ನು ಬಯಲಿಗೆ ತಂದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
    ‘ಚುನಾವಣಾ ಆಯೋಗವು ಈಗಲೂ ಪಾರದರ್ಶಕ ಚುನಾವಣೆ ನಡೆಸುವ ಸಂಸ್ಥೆಯಾಗಿಯೇ ಉಳಿದಿದೆಯೇ ಅಥವಾ ಸಂಪೂರ್ಣವಾಗಿ ಬಿಜೆಪಿಯ ‘ಚುನಾವಣಾ ಕಳ್ಳತನ ಶಾಖೆ’ಯಾಗಿ ಬದಲಾಗಿದೆಯೇ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
    ‘ಪೌರತ್ವ ದಾಖಲೆಗಳನ್ನೇ ಮುಂದಿಟ್ಟುಕೊಂಡು ಕೊಟ್ಯಂತರ ಅರ್ಹ ಭಾರತೀಯ ಮತದಾರರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡುವ ಹುನ್ನಾರ ನಡೆಸಲಾಗಿದೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
    ‘ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದೀರಿ’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇತ್ತೀಚೆಗೆ ಹೇಳಿದ್ದರು.

    ಬಿಹಾರ ವಿಧಾನಸಭೆಗೆ ಇದೇ ವರ್ಷ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇದರ ಭಾಗವಾಗಿ ನಡೆದ SIR ಪ್ರಶ್ನಿಸಿ ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಇದರ ಬೆನ್ನಲ್ಲೇ ಜ್ಞಾನೇಶ್ ಕುಮಾರ್‌ ಅವರು ಈ ಹೇಳಿಕೆ ನೀಡಿದ್ದರು.

  • ಧರ್ಮಸ್ಥಳ ಪ್ರಕರಣ: “ತನಿಖೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಲಿ”ವಕೀಲರು ಸಿದ್ದರಾಮಯ್ಯರಲ್ಲಿ ಆಗ್ರಹಿಸಲು ಕಾರಣವೇನು?

    ಧರ್ಮಸ್ಥಳ ಪ್ರಕರಣ: “ತನಿಖೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಲಿ”ವಕೀಲರು ಸಿದ್ದರಾಮಯ್ಯರಲ್ಲಿ ಆಗ್ರಹಿಸಲು ಕಾರಣವೇನು?

    ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹ ಕಚೇರಿ ಕೃಷ್ಣಾದಲ್ಲಿ, ಹಿರಿಯ ವಕೀಲರಾದ ಬಾಲನ್, ಡಾ.ಸಿ.ಎಸ್.ದ್ವಾರಕನಾಥ್, ಉಮಾಪತಿ, ಸುಧಾ ಕಟ್ಟಾ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿಯನ್ನೊಳಗೊಂಡ ನಿಯೋಗವು ಭೇಟಿಯಾಗಿ ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡುವುದು ಮಾತ್ರವಲ್ಲದೆ, ತನಿಖೆಯ ಹೊಣೆಯನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅಥವಾ ಎಡಿಜಿಪಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸಿ.ಎಸ್.ದ್ವಾರಕನಾಥ್, “ದಿನೇ ದಿನೇ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಇದರ ನಡುವೆ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಸಾಕ್ಷಿದಾರ ಬಂದಿದ್ದು, ಆತನಿಗೆ ಸೂಕ್ತ ರಕ್ಷಣೆ ನೀಡುವ ಜವಾಬ್ದಾರಿ ರಾಜ್ಯ ಸರಕಾರದ್ದು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲೆ ಮಾತ್ರ ದೌರ್ಜನ್ಯ ನಡೆದಿಲ್ಲ. ಬದಲಾಗಿ ಭಿಕ್ಷುಕರನ್ನು ಹತ್ಯೆ ಮಾಡಿರುವ ಆರೋಪಗಳು ಇವೆ” ಎಂದು ಹೇಳಿದರು.
    “ಇನ್ನೂ, ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸಾಕ್ಷಿ ದೂರುದಾರ ಜು.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದು, ತಾನು ಹೂತು ಹಾಕಿದ್ದ ಮೃತದೇಹವೊಂದನ್ನು ಹೊರತೆಗೆದಿರುವುದಾಗಿ ಹೇಳಿದ್ದಾನೆ. ಹೀಗಿರುವಾಗ ರಾಜ್ಯ ಸರಕಾರ ತುರ್ತು ಎಸ್‌ಐಟಿ ರಚನೆ ಮಾಡಬೇಕು. ಎಲ್ಲ ಸಾಕ್ಷ್ಯಗಳನ್ನು ರಕ್ಷಣೆ ಮಾಡಬೇಕು. ಜತೆಗೆ, ಉನ್ನತ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.

    “ಧರ್ಮಸ್ಥಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪ್ರಕರಣಗಳ ಬೆಳವಣಿಗೆಯ ತನಿಖೆ ಎಲ್ಲವೂ ಓರ್ವ ಸಾಮಾನ್ಯ ಇನ್‌ ಸ್ಪೆಕ್ಟರ್ ನೇತೃತ್ವದಲ್ಲಿ ನಡೆಯುತ್ತಿದೆ. ಈ ಇನ್‌ಸ್ಪೆಕ್ಟರ್ ಡಿವೈಎಸ್ಪಿ ಆದೇಶ ಪಾಲನೆ ಮಾಡಬೇಕು. ಆದರೆ, ವಾಸ್ತವ ಬೇರೆಯೇ ಇದ್ದು, ಅಲ್ಲಿನ ದೊಡ್ಡ ಯಜಮಾನರೇ ಡಿವೈಎಸ್ಪಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ಎಸ್‌ಐಟಿ ರಚನೆ ಮಾಡುವಂತೆ ಕೋರಿ ಸಲ್ಲಿಸಿದ ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಮಾತ್ರವಲ್ಲದೆ, ಗೃಹ ಇಲಾಖೆಯೊಂದಿಗೆ ಚರ್ಚೆ ನಡೆಸಿ ಆನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ” ಎಂದು ದ್ವಾರಕನಾಥ್ ಹೇಳಿದರು.

    ಮನವಿಯಲ್ಲೇನಿದೆ?
    ಎಡಿಜಿಪಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ ಐಟಿ ತನಿಖೆ ನಡೆಯಬೇಕು.
    ಸಾಕ್ಷ್ಯಗಳನ್ನು ರಕ್ಷಣೆ ಮಾಡಬೇಕು.
    ದಾಖಲಾಗಿರುವ ದೂರುಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
    ಸಾಕ್ಷಿದಾರರಿಗೆ ಸೂಕ್ತ ರಕ್ಷಣೆ ನೀಡಬೇಕು.
    ಕಳಂಕಿತ ಪೊಲೀಸ್ ಅಧಿಕಾರಿಗಳನ್ನು ತನಿಖೆಯಿಂದ ದೂರ ಇಡಬೇಕು.

  • ಮೂಡಬಿದ್ರೆ ಕಾಲೇಜೊಂದರ ವಿದ್ಯಾರ್ಥಿನಿಯ ಅತ್ಯಾಚಾರ:
ಉಪನ್ಯಾಸಕ ಸೇರಿ ಮೂವರ ಬಂಧನ

    ಮೂಡಬಿದ್ರೆ ಕಾಲೇಜೊಂದರ ವಿದ್ಯಾರ್ಥಿನಿಯ ಅತ್ಯಾಚಾರ: ಉಪನ್ಯಾಸಕ ಸೇರಿ ಮೂವರ ಬಂಧನ

    ಮಂಗಳೂರು: ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ ಮಾಡಿದ್ದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರೊಂದಿಗೆ ಸ್ನೇಹಿತನನ್ನು ಮಾರತ್‌ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
    19 ವರ್ಷದ ಸಂತ್ರಸ್ತೆ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    ಕಾಲೇಜಿನ ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ, ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್‌ ಹಾಗೂ ಅವರ ಸ್ನೇಹಿತ ಬೆಂಗಳೂರು ನಿವಾಸಿ ಅನೂಪ್‌ ಬಂಧಿತರು.
    ‘ಘಟನೆಯು ಕೆಲವು ತಿಂಗಳ ಹಿಂದೆ ನಡೆದಿತ್ತು. ಆರೋಪಿಗಳ ಬ್ಲ್ಯಾಕ್‌ಮೇಲ್‌ ಹೆಚ್ಚಾದ ಮೇಲೆ ಮಹಿಳಾ ಆಯೋಗಕ್ಕೆ ಕಳೆದ ವಾರ ಪೋಷಕರ ಜತೆಗೆ ಬಂದು ವಿದ್ಯಾರ್ಥಿನಿ ದೂರು ನೀಡಿದ್ದರು. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ದೂರನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿಗೆ ವರ್ಗಾಯಿಸಿ ತನಿಖೆಗೆ ಸೂಚನೆ

    ನೀಡಿದ್ದರು. ಮಾರತ್‌ಹಳ್ಳಿ ಠಾಣೆಯ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನೋಟ್ಸ್ ನೀಡುವ ನೆಪದಲ್ಲಿ ಕೃತ್ಯ:
    ‘ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಹತ್ತಿರವಾಗಿದ್ದ. ಬಳಿಕ ಆಕೆಯ ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡುವುದು, ನೋಟ್ಸ್ ಕಳುಹಿಸುವುದು ಮಾಡುತ್ತಿದ್ದ. ಅಲ್ಲಿ ಶಿಕ್ಷಣ ಪೂರೈಸಿ ಆಕೆ ಬೆಂಗಳೂರಿಗೆ ಬಂದ ನಂತರವೂ ಸಂದೇಶ ಕಳುಹಿಸುತ್ತಿದ್ದ. ನೋಟ್ಸ್ ನೀಡುವುದನ್ನೂ ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತ್‌ಹಳ್ಳಿಯ ಗೆಳೆಯನ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದ’ ಎಂದು ಮೂಲಗಳು ಹೇಳಿವೆ.

    ‘ಕೆಲವು ದಿನಗಳ ನಂತರ ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್‌ಗೂ ಈ ವಿಷಯ ಗೊತ್ತಾಗಿತ್ತು. ‘ನೀನು ನರೇಂದ್ರನ ಜೊತೆಗಿರುವ ಫೋಟೊ ಹಾಗೂ ವಿಡಿಯೊಗಳು ನನ್ನ ಬಳಿಯಿವೆ. ನನ್ನ ಜತೆಗೆ ಸಹಕಾರ ನೀಡದಿದ್ದರೆ ಕಾಲೇಜಿನ ಎಲ್ಲರಿಗೂ ವಿಷಯ ತಿಳಿಯುವಂತೆ ಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್​ಮೇಲ್ ಮಾಡಲು ಆರಂಭಿಸಿದ್ದ. ನಂತರ, ಸಂದೀಪ್‌ ಸಹ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಮೂಲಗಳು ತಿಳಿಸಿವೆ.

    ಸ್ನೇಹಿತನಿಂದಲೂ ಅತ್ಯಾಚಾರ:
    ವಿದ್ಯಾರ್ಥಿನಿ ಮೇಲೆ ನರೇಂದ್ರ ಹಾಗೂ ಸಂದೀಪ್ ಅತ್ಯಾಚಾರ ಎಸಗಿದ್ದ ಕೊಠಡಿ ಅನೂಪ್‌ಗೆ ಸೇರಿತ್ತು. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ‘ನೀನು ನನ್ನ ಕೊಠಡಿಗೆ ಬಂದು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನನ್ನ ಕೊಠಡಿಯಲ್ಲಿ ಕ್ಯಾಮೆರಾವಿದೆ. ನನ್ನ ಜತೆಗೂ ಸಹಕಾರ ನೀಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ‘ಭಯ ಪಡಬೇಡಿ ದೂರು ನೀಡಿ’
    ಸಂತ್ರಸ್ತೆಗೆ ಆಪ್ತಸಮಾಲೋಚನೆ ನಡೆಸಿ ಧೈರ್ಯ ತುಂಬಲಾಗಿದೆ. ‘ವಾರದ ಹಿಂದೆ ಹೆಣ್ಣು ಮಗಳೊಬ್ಬಳು ಪೋಷಕರ ಜತೆಗೆ ಬಂದು ದೂರು ನೀಡಿದ್ದಳು. ಆ ಮಗುವಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಾ ಶೋಷಣೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳನ್ನೂ ಬಳಸಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೂ ತನ್ನ ಹೇಳಿಕೆ ದಾಖಲಿಸಿದ್ದಾಳೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ‘ಹೆಣ್ಣು ಮಗಳು ಧೈರ್ಯ ತೋರಿ ದೂರು ನೀಡಿದ್ದಾಳೆ. ಬ್ಲ್ಯಾಕ್‌ಮೇಲ್‌ಗೆ ಒಳಗಾಗದೇ ದೂರು ನೀಡಬೇಕು. ಹೆದರಿಕೊಂಡರೆ ನೀವೇ ಬಲಿಪಶು ಆಗುತ್ತೀರಿ. ಆರೋಪಿಗಳು ಶೋಷಣೆ ಮಾಡುತ್ತಲೇ ಇರುತ್ತಾರೆ. ಯಾವುದಾದರೂ ತಪ್ಪುಗಳು ನಡೆದರೆ ತಂದೆ –ತಾಯಿಗೆ ಮೊದಲು ತಿಳಿಸಬೇಕು. ನಂತರ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕು. ಅದೂ ಸಾಧ್ಯವಾಗದಿದ್ದರೆ ಮಹಿಳಾ ಆಯೋಗಕ್ಕೆ ತಿಳಿಸಿ’ ಎಂದು ನಾಗಲಕ್ಷ್ಮೀ ಮನವಿ ಮಾಡಿದರು.

  • ಹುಲಿ ಸಾಗಿದ ದಾರಿ…

    ಹುಲಿ ಸಾಗಿದ ದಾರಿ…

    [ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ದಿನ. ಹುಲಿಗಳ ತವರೂರಾದ ಭಾರತದಲ್ಲಿ ಹುಲಿಗಳ ಸಂತತಿಯು ಕ್ಷೀಣಿಸುತ್ತಿರುವುದು ಕಳವಳಕಾರಿ ಸುದ್ದಿ. ಅವುಗಳ ಅಭಿವೃದ್ಧಿಗೆ ಐವತ್ತು ವರುಷಗಳ ಹಿಂದೆಯೇ ಪ್ರಾಜೆಕ್ಟ್ ಟೈಗರ್' ಅನ್ನುವ ಯೋಜನೆಯನ್ನು ಜಾರಿಗೆ ತಂದರೂ ಅವು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಮೂಲ ಕಾರಣ ಏನು ಅನ್ನುವುದನ್ನು ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ವ್ಯಾಘ್ರನ ಕಾಡಿನಲ್ಲಿ ಸುತ್ತಿ ಬರೋಣ- ಸಂಪಾದಕಿ]

    ಸುಮಾರು ಮುನ್ನೂರು ವರುಷಗಳ ಹಿಂದೆ, ನಮ್ಮ ದೇಶದ ದಟ್ಟ ಅಡವಿಗಳಲ್ಲಿ ಹುಲಿಗಳ ಸಂತತಿ ಸುಮಾರು 60 ಸಾವಿರಕ್ಕೂ ಮಿಕ್ಕಿ ಇದ್ದವು. ಆಗ ಈ ದೇಶದಲ್ಲಿ ಇರುವಷ್ಟು ಹುಲಿಗಳ ಸಂಖ್ಯೆ ಇನ್ನಾವುದೇ ರಾಷ್ಟ್ರಗಳಲ್ಲಿ ಇರಲಿಲ್ಲ. ಹಿಂದೆ ರಾಜ-ಮಹಾರಾಜರು, ಸುಲ್ತಾನ-ನವಾಬರು, ಈ ಹುಲಿ ಬೇಟೆಗೆ ಗುಂಪುಗೂಡಿ ಕಾಡಿಗೆ ಹೋಗುತ್ತಿದ್ದರು. ಅವರಿಗೆ ಈ ಹುಲಿಗಳ ಶಿಕಾರಿ ಅನ್ನುವುದು ಸಾಹಸ-ಪರಾಕ್ರಮದ ಸಂಕೇತ. ಭಾರತಕ್ಕೆ ನುಸುಳಿ ಬಂದ ಆಂಗ್ಲರಿಗೂ ಹುಲಿ ಬೇಟೆಯ ಹುಚ್ಚು. ಹತ್ಯೆ ಮಾಡಿದ ಹುಲಿಯ ಎದುರು ಬಂದೂಕು ಹಿಡಿದು ಫೋಟೋ ಕ್ಲಿಕ್ಕಿಸುವುದೆಂದರೆ ಅವರಿಗೆ ಶೌರ್ಯದ ಸಾಧನೆ. ಯಾರದೋ ಕಾಡು- ಯಾರದೋ ಜಂಗಲ್ ರಾಜ್! ಸ್ವಾತಂತ್ರ್ಯ ಪೂರ್ವದಲ್ಲಿ ಮಧ್ಯ ಪ್ರದೇಶದ ಒಂದು ಪ್ರಾಂತ್ಯವನ್ನು ಸರ್ಗೂಜ್ ಅನ್ನುವ ಮಹಾರಾಜ ಅಳುತ್ತಿದ್ದ. ಆತನಿಗೆ ಹುಲಿಗಳನ್ನು ಕೊಲ್ಲುವ ಮೋಜು. ಆತನ ಈ ಹವ್ಯಾಸಕ್ಕೆ ಅಂದು 1160 ಹುಲಿಗಳು ಕೈಯಾರೆ ಹತ್ಯೆಯಾದವು. ಇದು ಇತಿಹಾಸದ ಪುಟದಲ್ಲಿ ಅಚ್ಚಳಿಯದ ದಾಖಲೆ! ದಂತ ಪೋರ ವೀರಪ್ಪನ್‌ನಂತೆ! ಆತ ಕೊಂದ ಆನೆಗಳು ಇನ್ನೊಂದು ಕಪ್ಪು ಚರಿತ್ರೆ! ಮನುಷ್ಯರ ಈ ದುರಾಶೆಗೆ-ಸಾಹಸಕ್ಕೆ ಕಾಡಿನಲ್ಲಿ ವಾಸವಾಗಿದ್ದ ಸಾವಿರಾರು ಹುಲಿಗಳು ನಶಿಸಿ ಹೋದವು. 1970ರಲ್ಲಿ ಈ ಹುಲಿಗಳ ಗಣತಿ ಕಾರ್ಯ ಆರಂಭಿಸಿದಾಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸುದ್ದಿ ಬಹಿರಂಗವಾಯಿತು. ಆಗ ಕಾಡಿನಲ್ಲಿ ಉಳಿದುಕೊಂಡಿದ್ದ ಹುಲಿಗಳ ಸಂಖ್ಯೆ ಕೇವಲ 1780 ಮಾತ್ರ! ಈ ಕಳವಳಕಾರಿ ವರದಿಯನ್ನು ಅಂದಿನ ಕೇಂದ್ರ ಸರಕಾರವು ಬಹು ಗಂಭೀರವಾಗಿ ಪರಿಗಣಿಸಿತು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಹುಲಿಗಳ ಸಂರಕ್ಷಣೆಗೆಪ್ರಾಜೆಕ್ಟ್ ಟೈಗರ್’ ಅನ್ನುವ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದರು. ಬಹಳಷ್ಟು ದೂರಾದೃಷ್ಟಿಯ ಈ ಕಾರ್ಯ ಕ್ರಮವನ್ನು ಸ್ವಯಂ ಇಂದಿರಾ ಗಾಂಧಿಯವರು ಬಹು ಕಾಳಜಿಯಿಂದ ನಿರ್ವಹಿಸಿದರು. ಕಳ್ಳ ಬೇಟೆಯಾಡುವ ಶೋಕಿಗಳಾಗಲಿ, ಆದಿವಾಸಿ ಜನಾಂಗವಾಗಲಿ ಅಥವಾ ಅರಣ್ಯಾಧಿಕಾರಿಗಳೇ ಆಗಲಿ ಅವರಿಗೆ ಕಠಿಣವಾಗಿ ಶಿಕ್ಷಿಸುವ ಬಿಗಿ ಕಾನೂನನ್ನು ಜಾರಿಗೆ ತಂದರು. ಕಾಡು ಕಾಯುವ ವನ ಪಾಲಕರನ್ನು ಹೆಚ್ಚಿಸಲಾಯಿತು. ಈ ಯೋಜನೆಯನ್ನು ಮೆಚ್ಚಿಕೊಂಡ ವಿಶ್ವ ವನ್ಯ ಮೃಗ ನಿಧಿ'ಯು ಇದರ ಉತ್ತೇಜನಕ್ಕೆ ಒಂದು ಮಿಲಿಯನ್ ಡಾಲರ್ ಮೊತ್ತವನ್ನು ಅನುದಾನವಾಗಿ ನೀಡಿತು. ಒಂದು ದಶಕಗಳ ಬಳಿಕ ಮತ್ತೆ ಹುಲಿಗಳ ಗಣತಿ ಆರಂಭ ಮಾಡಿದರು. ಈ ಯೋಜನೆಯು ಪರಿಣಾಮ ಎಂಬAತೆ ಸುಮಾರು 4,334 ಹುಲಿಗಳು ಹೊಸತಾಗಿ ಕಂಡು ಬಂದವು. ಈ ಪ್ರಗತಿಯನ್ನು ಇಡೀ ವಿಶ್ವವೇ ಕೊಂಡಾಡಿತು. ಅಂತೂ ಈ ಯೋಜನೆಯು ಹುಲಿಗಳ ನಿರ್ಮೂಲವನ್ನು ತಡೆಗಟ್ಟುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿತು. ವಿಶ್ವಸಂಸ್ಥೆಯು ಈ ಸಾಧನೆಗೆ ಭಾರತದ ಬೆನ್ನು ತಟ್ಟಿತು. ಇದಕ್ಕೆ ಸೂಕ್ತ ಸಮಯದಲ್ಲಿ ಕಡಿವಾಣವನ್ನು ಹಾಕದೆ ಇದ್ದಿದ್ದರೆ, ನಮ್ಮ ಮುಂದಿನ ಪೀಳಿಗೆಯು ಇಂತಹ ಹುಲಿಗಳನ್ನು ಬರೇ ಚಿತ್ರಪಟಗಳಲ್ಲಿ ಕಾಣುವ ದಿನಗಳು ಎದುರಾಗುತ್ತಿತ್ತೆಂದು ಸಂತೋಷ ವ್ಯಕ್ತಪಡಿಸಿತು. ಇಂದಿಗೂ ಈ ಹುಲಿ ಯೋಜನೆಯ ಸಂರಕ್ಷಣಾ ಕಾರ್ಯಕ್ರಮವು ಜಾರಿಯಲ್ಲಿದೆ. ಜೊತೆಗೆ ಜುಲಾÊ 29ರ ದಿನವನ್ನು ಅದು ಅಂತರಾಷ್ಟ್ರೀಯ ಹುಲಿ ದಿನಾಚಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಹುಲಿಯು ನಿಸರ್ಗದ ಅತ್ಯುತ್ತಮ ಸುಂದರ ಹಾಗೂ ಕೆಚ್ಚದೆಯ ಮೃಗ. ಅದು ಭಾರತದ ರಾಷ್ಟಿçÃಯ ಪ್ರಾಣಿಯಾಗಿಯೂ ಗುರುತಿಸಿಕೊಂಡಿದೆ. ಅದರ ರಾಜ ಗಾಂಭೀರ್ಯದ ನಡಿಗೆ, ತೀಕ್ಷ÷್ಣವಾದ ನೋಟ, ವೇಗದ ಓಟ, ಅಸಾಧರಣ ಮೈ ಕಟ್ಟು, ಭೇಟೆಯಾಡುವ ಶೈಲಿ, ಹೆಣ್ಣು ಹುಲಿಯು ಮಕ್ಕಳನ್ನೂ ಪೋಷಣೆ ಮಾಡುವ ರೀತಿ, ಮಕ್ಕಳನ್ನು ಉಳಿಸಿಕೊಳ್ಳಲು ಅದು ನಡೆಸುವ ಹೋರಾಟ ಇತ್ಯಾದಿ ಅದನ್ನು ರಾಷ್ಟಿçÃಯ ಮೃಗವಾಗಿ ಆಯ್ಕೆ ಮಾಡಲಾಗಿದೆ. ಹುಲಿಗಳ ಗುಂಪು ಕಾಡಿನಲ್ಲಿ ತಮ್ಮದೇ ವ್ಯಾಪ್ತಿ ಪ್ರದೇಶವನ್ನು ಗುರುತಿಸಿಕೊಂಡು ಜೀವಿಸುತ್ತವೆ. ತನ್ನ ಕುಟುಂಬದ ಹೆಣ್ಣು ಹುಲಿಯು ಬೇರೆ ವ್ಯಾಪ್ತಿಗೆ ಹೋಗ ಕೂಡದೆಂದು ಅದು ಸದಾ ಕಟ್ಟೆಚ್ಚರ ವಹಿಸುತ್ತದೆ. ಮರಗಳ ತೊಗಟೆಗಳನ್ನು ತನ್ನ ಹರಿತವಾದ ಉಗುರಿನಿಂದ ಕೆರೆದು ಆಗಾಗ ಅದರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತದೆ. ತನ್ನ ಸರ ಹದ್ದಿಗೆ ಬರುವ ಅನೇಕ ಮರಗಳಿಗೆ ಅದು ಈ ರೀತಿಯ ಗುರುತುಗಳನ್ನು ಹಾಕಿಕೊಳ್ಳುತ್ತದೆ. ಇದು ಉಳಿದ ವ್ಯಾಪ್ತಿಯ ಹುಲಿಗಳು ಅತಿಕ್ರಮಣ ಮಾಡಬಾರದೆಂಬ ಸೂಚನೆ. ಈ ಎಚ್ಚರಿಕೆಯನ್ನು ಉಲ್ಲಂಘಿಸಿಯೂ ಕೆಲವು ಹುಲಿಗಳು ಲಕ್ಷö್ಮಣ ರೇಖೆಯನ್ನು ದಾಟುವುದಿದೆ. ಹೀಗೆ ಆಕ್ರಮವಾಗಿ ನುಸುಳಿದಾಗ ಅದು ತೀವ್ರವಾದ ಪ್ರತಿಭಟನೆ ಮಾಡುತ್ತದೆ. ಕಾದಾಟಕ್ಕೆ ನಿಂತು, ಇಡೀ ಕಾಡೇ ನಡುಗುವಂತೆ ಘರ್ಜಿಸುತ್ತದೆ. ತನ್ನ ಬಿಗಿ ಪಂಜದಲ್ಲಿ ಮುಖಮೂತಿಯನ್ನು ಗಮನಿಸದೆ ಹೊಡೆಯುತ್ತದೆ. ಇದನ್ನುಟೆರಿಟರಿ ಪೈಟ್’ ಅನ್ನುತ್ತಾರೆ. ಇಲ್ಲಿ ಒಂದೋ ಎದುರಾಳಿ ಹುಲಿ ತೀವ್ರವಾದ ಗಾಯಗೊಂಡು ಪರಾರಿಯಾಗುತ್ತದೆ ಅಥವಾ ಕಾದಾಟದಲ್ಲಿಯೇ ಹತವಾಗುತ್ತದೆ.
    ಮುಖ್ಯ ವಿಚಾರವೆಂದರೆ ಇಲ್ಲಿಯೇ ಹುಟ್ಟಿ ಬೆಳೆದ ಹುಲಿಯು ತನ್ನ ತವರು ಪ್ರದೇಶವನ್ನು ಯಾರಿಗೂ ಬಿಟ್ಟು ಕೊಡಲು ಸಿದ್ಧವಿರುವುದಿಲ್ಲ. ಅದು ತನ್ನ ವ್ಯಾಪ್ತಿ ಪ್ರದೇಶದಲ್ಲಿಯೇ ತನ್ನ ಜೀವಿತವನ್ನು ಕಳೆಯ ಬಯಸುತ್ತದೆ. ಹೀಗಾಗಿ ಕಾಡ್ಗಿಜ್ಜಿಗೂ, ಸರಕಾರದ ಯೋಜನೆಗಳಿಗೂ ಅಥವಾ ಬೇರೆ ರಾಜ್ಯದ ವಲಸೆಗೂ ಅವುಗಳನ್ನು ಸ್ಥಳಾಂತರ ಮಾಡಿದರೆ ಅವು ಬದುಕಿ ಉಳಿಯುವ ಆಯಸ್ಸು ಬಲು ಕಡಿಮೆಯಾಗಿರುತ್ತದೆ.
    ನಮ್ಮ ರಾಜ್ಯದ ನಾಗರ ಹೊಳೆಯಂತೆ, ಹುಲಿಗಳಿಗೆ ರಾಜಸ್ತಾನದ ಸರಿಸ್ಕಾ' ಮತ್ತು ಮಧ್ಯ ಪ್ರದೇಶದಪನ್ನಾ’ ಅರಣ್ಯಾಧಾಮಗಳು ಬಲು ಪ್ರಸಿದ್ಧ ತಾಣಗಳು. ಇಲ್ಲಿ ನೂರಾರು ಹುಲಿಗಳಿವೆ. ಆದರೆ ಈ ಪ್ರದೇಶದ ಹುಲಿಗಳನ್ನು ಇನ್ನೊಂದು ತಾಣಕ್ಕೆ ಸ್ಥಳಾಂತರ ಗೊಳಿಸಿದರೆ ಅವು ಹೊಸ ಪ್ರದೇಶವನ್ನು ಇಷ್ಟಪಡುವುದಿಲ್ಲ. ಹೇಗಾದರೂ ತಪ್ಪಿಸಿಕೊಂಡು ತಮ್ಮ ಮೂಲ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತವೆ. ಇದಕ್ಕಾಗಿಯೇ ಮೃಗಾಲಯಗಳಲ್ಲಿ ಹುಲಿಗಳ ಸಣ್ಣ ಮರಿಗಳನ್ನೇ ತಂದು, ಪೋಷಣೆ ಮಾಡುತ್ತಾರೆ. ಅವು ಅಲ್ಲೇ ಬೆಳೆದು, ಬಾಲ್ಯ ಸವೆದು ಯೌವನಕ್ಕೆ ಕಾಲಿಡುತ್ತವೆ. ಕೊನೆಗೆ ಮೃಗಾಲಯವನ್ನೇ ಮನೆ ಮಾಡಿಕೊಂಡು ಜೀವನ ಪೂರ್ತಿ ಕಳೆಯುತ್ತವೆ. ಇಲ್ಲದಿದ್ದರೆ, ಅದರ ಜಿನ್‌ನಲ್ಲಿ ಹರಿದು ಬಂದ ವಂಶವಾಹಿ ಗುಣವನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಿಲ್ಲ.
    ಇನ್ನು ಮನುಷ್ಯರಾದ ನಾವು ಪ್ರಾಣಿಗಳ ಕಾಡಿನ ವ್ಯಾಪ್ತಿ ಪ್ರದೇಶವನ್ನು ನಿರ್ಮೂಲನ ಮಾಡುತ್ತೇವೆ. ಅವರ ತವರು ಪ್ರದೇಶವನ್ನು ಕಡಿದು ರೈಲು ಮಾರ್ಗ ನಿರ್ಮಿಸುತ್ತೇವೆ. ದೊಡ್ಡ ದೊಡ್ಡ ರಾಷ್ಟಿçÃಯ ಹೆದ್ದಾರಿಗಳನ್ನು ಅಗೆದು ನಗರಗಳಿಗೆ ಜೋಡಿಸುತ್ತೇವೆ. ಸುರಂಗಗಳನ್ನು ಕೊರೆದು, ಹೊಸ ಹೊಸ ಹಾದಿಗಳನ್ನೂ ಹುಡುಕುತ್ತೇವೆ. ಕಾಡ್ಗಿಚ್ಚು' ಅನ್ನುವ ನಾಟಕವನ್ನು ಆಡಿ ಸಾವಿರಾರು ಪ್ರಾಣಿ-ಪಕ್ಷಿಗಳನ್ನು ದೂರಕ್ಕೆ ಅಟ್ಟಿ ಬಿಡುತ್ತೇವೆ. ಆಗ ಅಲ್ಲಿ ಲಕ್ಷಾಂತರ ಕ್ರಿಮಿ-ಕೀಟಗಳು, ಹುಳ-ಹುಪ್ಪಟೆಗಳು, ಹರಿದಾಡುವ ಸರಿಸೃಪಗಳು ಬೆಂಕಿಗೆ ಆಹುತಿಯಾಗುತ್ತವೆ. ಓಡಿ ಹೋಗಲು ಸಾಧ್ಯವಾಗದ ಅದೆಷ್ಟು ಮರಿಗಳು, ಗರ್ಭವತಿ ಪ್ರಾಣಿಗಳು ಸುಡುವ ಅಗ್ನಿಗೆ ಕರಟಿ ಹೋಗುತ್ತವೆ. ಇದರಿಂದ ಕಾಡಿನ ಇಡೀ ಪರಿಸರವೇ ಅಸಮತೋಲನಗೊಳ್ಳುತ್ತದೆ. ಅವು ಮುಂದೆ ಪರಿಸರದ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತವೆ. ಇದರಿಂದಲೇ ಪ್ರಕೃತಿ ವಿಕೋಪಗಳು ಸೃಷ್ಟಿಯಾಗುತ್ತವೆ. ಇಲ್ಲಿ ಹುಲಿಯ ಸಮಸ್ಯೆಯೂ ಇದೇ. ಅವು ವ್ಯಾಪ್ತಿ ಪ್ರದೇಶದಿಂದ ತಪ್ಪಿಹೋದರೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತವೆ. ತನ್ನ ಕ್ಷೇತ್ರವನ್ನು ಹುಡುಕಾಡಲು ಓಡಾಡುತ್ತವೆ. ಅದು ಸಿಗದೇ ಹೋದಾಗ ನೇರವಾಗಿ ಹತ್ತಿರದ ಹಳ್ಳಿಗೂ, ಊರಿಗೂ ನುಗ್ಗುತ್ತವೆ. ತಿನ್ನಲು ಆಹಾರವು ಸಿಗದೆ ಹೋದಾಗ ಮೇಯುವ ಜಾನುವಾರಗಳನ್ನೂ, ನಾಯಿಗಳನ್ನೂ ಹಿಡಿದು ಕೊಲ್ಲುತ್ತವೆ. ಮನುಷ್ಯರ ಮೇಲೆ ದಾಳಿ ಮಾಡಿದಾಗನರಭಕ್ಷಕ’ ಅನ್ನುವ ಹಣೆಪಟ್ಟಿಯನ್ನು ಪಡೆಯುತ್ತವೆ. ಈ ದುಷ್ಕೃತ್ಯಕ್ಕೆ ಇಲ್ಲಿ ಮನುಷ್ಯನೇ ಕಾರಣವೇ ಹೊರತು, ಹುಲಿಯಲ್ಲ. ಕಾಡಿನ ರಾಜನಾದ ಹುಲಿಯು ಯಾವತ್ತೂ ರಾಜ ಹುಲಿಯೇ. ಅದಕ್ಕೆ ಮನುಷ್ಯನ ಹಣ, ಬಂಗಾರ ಮನೆ-ಮಠಗಳು ಯಾವುದೂ ಬೇಕಿಲ್ಲ. ಮದ, ಮತ್ಸರ, ಅಸೂಯೆ, ಹಗೆತನ ತುಂಬಿಕೊAಡಿರುವ ಕೊಳಕು ಮನಸ್ಸಿನ ರಕ್ತವೂ ಬೇಕಿಲ್ಲ. ಅದಕ್ಕೆ ಬೇಕಾಗಿರುವುದು ತನ್ನ ವ್ಯಾಪ್ತಿ-ತನ್ನ ವಲಯ. ಅಲ್ಲೇ ಅದು ತನ್ನ ಸಂಸಾರದ ಜೊತೆಗೆ ಸಭ್ಯ ಗೃಹಸ್ಥನಾಗಿ ಸ್ವಚಂದವಾಗಿ ಬದುಕಬಲ್ಲದು. ಅದಕ್ಕೆ ನಾಡಿಗೆ ನುಸುಳಿ ಕಳ್ಳರಂತೆ ಅಡಗಿಕೊಳ್ಳಲು, ಭಯದಲ್ಲಿ ನಡುಗಿಕೊಳ್ಳಲು ಯಾವತ್ತೂ ಇಷ್ಟವಿಲ್ಲ. ಅದು ಸದಾ ಸ್ವಾತಂತ್ರ್ಯವನ್ನೇ ಬಯಸುತ್ತವೆ.
    ಇವತ್ತು ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷಗಳು ದಾಟಿದವು. ಆದರೆ ಅದು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ದುರಂತವೆAದರೆ ನಮ್ಮಲ್ಲಿ ಅದೆಷ್ಟು ಪ್ರಗತಿಪರ ಯೋಜನೆಗಳನ್ನು ರೂಪಿಸಿದರೂ, ಅದನ್ನು ಅಡ್ಡಹಾದಿಯಲ್ಲಿ ಕಬಳಿಸುವವರೇ ಹೆಚ್ಚು. ಇದಕ್ಕೆ ಈ ಪ್ರಾಜೆಕ್ಟ್ ಟೈಗರ್' ಕೂಡ ಹೊರತಲ್ಲ. ಇದರಲ್ಲಿ ಮುಖ್ಯವಾಗಿ ಆದಿವಾಸಿಗಳು, ಶ್ರೀಮಂತರು, ರಾಜಕಾರಣಿಗಳು ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಶಾಮೀಲಾಗಿರುತ್ತಾರೆ. ಇಲ್ಲಿ ಬೇಲಿಯೇ ಹೊಲವನ್ನು ಮೇಯಿದರೆ ಯಾರಿಗೆ ಕಾನೂನಿನ ಕುಣಿಕೆಯೊಳಗೆ ಸಿಕ್ಕಿಸುವುದು? ಮನುಷ್ಯನಿಗೆ ಹಣದ ದಾಹವು ಮಾಡಬಾರದ ಕೆಲಸಗಳನ್ನೂ ಮಾಡಿಸುತ್ತದೆ. ಇವರಿಂದಲೇ ತೆರೆಮರೆಯಲ್ಲಿ ಹುಲಿಗಳ ಮಾರಣ ಹೋಮಗಳು ಜರುಗುತ್ತಲೇ ಇರುತ್ತವೆ. ಇಂದಿಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಲಿಗಳ ಚರ್ಮ, ಮೂಳೆ, ಮಾಂಸ, ಕಣ್ಣುಗಳು, ಉಗುರುಗಳು ಇತ್ಯಾದಿಗಳಿಗೆ ಬಹು ಬೇಡಿಕೆ ಇದೆ. ಇದರಲ್ಲಿ ಅತ್ಯಧಿಕ. ಗ್ರಾಹಕರಿರುವುದು ಥೈಲ್ಯಾಂಡ್ ರಾಷ್ಟçದಲ್ಲಿ. ಹೀಗಾಗಿ ಭಾರತದಿಂದ ಚೀನಾ ಮೂಲಕವಾಗಿ ಹುಲಿಗಳ ದೇಹದ ಭಾಗಗಳು ಅಕ್ರಮವಾಗಿ ರವಾನೆಯಾಗುತ್ತಲೇ ಇರುತ್ತದೆ. ಈ ವ್ಯವಸ್ಥಿತ ಜಾಲದಲ್ಲಿ ಅನೇಕ ಕಾಣದ ಕೈಗಳಿವೆ. ಬಲವಾದ ರಾಜಕೀಯ ಕೈವಾಡವಿರುವ ಕಾರಣ ಅವರನ್ನು ಸುಲಭವಾಗಿ ಬಂಧಿಸುವುದು ಸುಲಭವಲ್ಲ. ಈ ರೀತಿ ಅವ್ಯಾಹಿತವಾಗಿ ಸಾಗುವ ಕಳ್ಳ ಸಾಗಣೆಯಿಂದ ಹುಲಿಗಳ ಸಂತತಿ ಕ್ಷೀಣಿಸುತ್ತಾ ಸಾಗುತ್ತಿದೆ. ದೇಶಕ್ಕೆ ದ್ರೋಹ ಬಗೆಯುವ ಇಂತಹ ನೀಚರೇ ಹುಲಿಗಳ ನಿಜವಾದ ಭಕ್ಷಕರು. ಇವರಿಗೆ ಹಣದಾಶೆಗೆ ಕುಮ್ಮಕ್ಕು ನೀಡುವ ಖಾಕಿ ಅಧಿಕಾರಿಗಳೇ ನಿಜವಾದ ಹುಲಿ ಹಂತಕರು! ಕಳೆದ ಬಾರಿಯ ಹುಲಿ ಗಣತಿಯ ಪಟ್ಟಿಯನ್ನು ಎತ್ತಿ ನೋಡಿದರೆ, ಈಗ ಭಾರತದಲ್ಲಿ ಬದುಕಿ ಉಳಿದಿರುವ ಹುಲಿಗಳ ಸಂಖ್ಯೆ ಕೇವಲ 3,167. ಎಲ್ಲಿಯ ವರೆಗೆ ಸರಕಾರದ ಕಾಯ್ದ-ಕಾನೂನುಗಳು ಸಡಿಲಗೊಳ್ಳುತ್ತವೋ ಅಲ್ಲಿಯವರೆಗೆ ಇಂತಹದ್ದೇ ಫಲಿತಾಂಶಗಳು ಕಾಣಸಿಗುತ್ತದೆ. ಹುಲಿ ಬೇಟೆಯಾಡುವ ಯಾವುದೇ ಹಂತಕನಿರಲಿ, ಆತ ಕಾಡಿಗೆ ಹೊಕ್ಕರೆಕಂಡಲ್ಲಿ ಗುಂಡು’ ಅನ್ನುವ ಕಾನೂನು ಜಾರಿಗೆ ತಂದರೆ ಹುಲಿಗಳ ಸಂತತಿ ಏರ ಬಹುದೋ ಏನೋ?
    ಇರ್ಶಾದ್ ಮೂಡಬಿದ್ರಿ

  • ಸಮೋಸ, ಪಿಜ್ಜಾಗಳಲ್ಲಿನ ಸಕ್ಕರೆ-ಎಣ್ಣೆ ಪ್ರಮಾಣ ಪ್ರದರ್ಶಿಸಿ:
 ಕೇಂದ್ರ ಆರೋಗ್ಯ ಇಲಾಖೆ ಆದೇಶಿಸಲು ಕಾರಣವೇನು?

    ಸಮೋಸ, ಪಿಜ್ಜಾಗಳಲ್ಲಿನ ಸಕ್ಕರೆ-ಎಣ್ಣೆ ಪ್ರಮಾಣ ಪ್ರದರ್ಶಿಸಿ: ಕೇಂದ್ರ ಆರೋಗ್ಯ ಇಲಾಖೆ ಆದೇಶಿಸಲು ಕಾರಣವೇನು?

    ನವದೆಹಲಿ: ಬೊಜ್ಜು ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸಿ, ಆರೋಗ್ಯಯುತ ಜೀವನಶೈಲಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮೋಸಾ, ಕಚೋರಿ ಹಾಗೂ ಪಿಜ್ಜಾ ಸೇರಿದಂತೆ ಎಲ್ಲ ಕುರುಕಲು ತಿಂಡಿಗಳಲ್ಲಿರುವ ‘ಎಣ್ಣೆ’ ಹಾಗೂ ‘ಸಕ್ಕರೆ’ ಪ್ರಮಾಣವನ್ನು ಪೊಟ್ಟಣಗಳ ಮೇಲೆ ಮುದ್ರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ಸಚಿವಾಲಯ ಹಾಗೂ ವಿಭಾಗಗಳಿಗೆ ಸೂಚನೆ ಕಳುಹಿಸಿದೆ.
    ಬೊಜ್ಜು ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಲೆಟರ್‌ಹೆಡ್‌, ನೋಟ್‌ಪ್ಯಾಡ್‌, ಪೋಲ್ಡರ್‌ಗಳಲ್ಲಿಯೂ ಆರೋಗ್ಯಕ್ಕೆ ಸಂಬಂಧಿಸಿದ ಸಂದೇಶಗಳನ್ನು ಪ್ರಕಟಿಸಬೇಕು ಎಂದು ಹೇಳಿದೆ.

  • 500 ಕೋಟಿ ಮಹಿಳೆಯರಿಂದ ಉಚಿತ ಬಸ್ ಪ್ರಯಾಣ: 
500ನೇ ಕೋಟಿಯ ಟಿಕೆಟ್ ನೀಡಿದ ಸಿದ್ದರಾಮಯ್ಯ

    500 ಕೋಟಿ ಮಹಿಳೆಯರಿಂದ ಉಚಿತ ಬಸ್ ಪ್ರಯಾಣ: 500ನೇ ಕೋಟಿಯ ಟಿಕೆಟ್ ನೀಡಿದ ಸಿದ್ದರಾಮಯ್ಯ

    ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಅಡಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟ್ ಅನ್ನು ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆ ಲತಾ ಅವರನ್ನು ಸನ್ಮಾನಿಸಿದರು. ಬಸ್ಸಿನಲ್ಲಿದ್ದ ಮಹಿಳೆಯರಿಗೆ ಇಳಕಲ್ ಸೀರೆ, ಸಿಹಿ ವಿತರಿಸಲಾಯಿತು. ಶಕ್ತಿ ಯೋಜನೆಯ ಫಲಾನುಭವಿಯೊಬ್ಬರು ಮುಖ್ಯಮಂತ್ರಿ ಮತ್ತು ಸಚಿವರಿಗೆ ಖಡಕ್ ರೊಟ್ಟಿ, ಶೇಂಗಾ ಹೋಳಿಗೆ ನೀಡಿ ಹಾರೈಸಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಹೆಚ್ ಸಿ. ಮಹದೇವಪ್ಪ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸೌಮ್ಯ ರೆಡ್ಡಿ ಉಪಸ್ಥಿತರಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿ 2023 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. 2023ರ ಮೇ 20ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

  • ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

    ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

    ಬೇಸಿಗೆಕಾಲ ಆರಂಭವಾಗುತ್ತಿದ್ದಂತೆಯೇ ಸುಡು ಬಿಸಿಲು. ಜೊತೆಗೆ ದೇಶದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಉಂಟಾಗುತ್ತದೆ. ವಾಸ್ತವದಲ್ಲಿ ಮಳೆಗಾಲದಲ್ಲಿ ಧಾರಾಳವಾಗಿ ಮಳೆ ಸುರಿಯುವ ಅನೇಕ ಪ್ರದೇಶಗಳು ನಮ್ಮಲ್ಲಿವೆ. ಮಳೆ ನೀರು ಹೆಚ್ಚಾಗಿ ಪ್ರವಾಹ. ನೆರೆ ಬರುವುದೂ ಇದೆ. ಈ ಮಳೆ ನೀರನ್ನು ಹೀಗೆ ಹಾಳಾಗುವುದನ್ನು ತಪ್ಪಿಸಿ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕ್ರಮವನ್ನು ಅಳವಡಿಸಿದರೆ ಖಂಡಿತವಾಗಿಯೂ ಇದರಿಂದ ಎಲ್ಲರಿಗೂ ಪ್ರಯೋಜನ ಪಡೆಯಬಹುದು.

    1000 ಚದರ ಅಡಿಗಳ ಪ್ರದೇಶದಿಂದ ವರ್ಷಕ್ಕೆ 3 ರಿಂದ 5 ಲಕ್ಷ ಲೀಟರ್ ಮಳೆ ನೀರು ಲಭ್ಯವಾಗುತ್ತದೆ ಎಂಬುದು ಲೆಕ್ಕಾಚಾರ. 10 ಸೆಂಟ್ ಹೊಲವು 1,60,000 ಲೀಟರ್ ಮಳೆ ನೀರನ್ನು ಭರಿಸುತ್ತದೆ. ಕಾಡು, ಹೊಲ, ಕೆರೆ, ಬಾವಿಗಳು ಮಳೆ ನೀರನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಡುತ್ತದೆ. ಆದುದರಿಂದ ಮಳೆ ನೀರನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಉಪಯೋಗಿಸಿ ನೆಲದೊಳಗೆ ಇಂಗಿಸಿ ಭೂಗರ್ಭ ಜಲಮಟ್ಟವನ್ನು ಹೆಚ್ಚಿಸಲು ಗಮನಹರಿಸಬೇಕು.

    ಮನೆ ಮಠಗಳಲ್ಲಿ ಜಲಸಂರಕ್ಷಣಾ ವಿಧಾನಗಳು

    ಹಿಂದಿನ ಅವಿಭಕ್ತ ಕುಟುಂಬಗಳು ಇಂದು ನ್ಯೂಕ್ಲಿಯರ್ ಕುಟುಂಬಗಳಾಗಿವೆ. ಒಂದು ಸಣ್ಣ ಮನೆ, ಗೋಡೆ, ಬೇಲಿ ನಿರ್ಮಿಸಿ ಗಡಿಯನ್ನು ಸೃಷ್ಟಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಮನೆಗಳ ನಾಲ್ಕೂ ಕಡೆ ಗೋಡೆಗಳಿರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಮುಂದಿನ ಬಾಗಿಲಿನ ಭಾಗದಲ್ಲಿ ಗೋಡೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಗೋಡೆಗಳ ಮೇಲೆ ದ್ವಾರ ಸೃಷ್ಟಿಸಿ ಮಳೆ ನೀರನ್ನು ಹೊರಗೆ ಹಾಕಲಾಗುತ್ತದೆ. ಇದರಿಂದ ಬಾವಿಯಲ್ಲಿ ನೀರಿನ ಸಂಗ್ರಹವು ಕಡಿಮೆಯಾಗುತ್ತದೆ. ಮಲಿನ ಜಲವು ಕೂಡಾ ಇದೇ ರೀತಿಯಲ್ಲಿ ಹರಿಸುವುದರಿಂದ ಪರಿಸರವೂ ಕಲುಷಿತವಾಗುತ್ತದೆ.

    ಹಳೆಯ ಕಾಲದಲ್ಲಿ ಸುರಿಯುವ ನೀರು ಅಡುಗೆ ಮನೆ, ತೊಟ್ಟಿಗೆ, ತೆಂಗಿನ ಮರದ ಬುಡಕ್ಕೆ ಹರಿಸುವ ವ್ಯವಸ್ಥೆ ಇತ್ತು. ಆದರೆ ಇಂದು ಎಲ್ಲ ನೀರನ್ನೂ ರಸ್ತೆಯ ಮೇಲೆ ಹರಿಯ ಬಿಡಲಾಗುತ್ತದೆ. ಇದರಿಂದ ನೀರು ಅಲ್ಲಲ್ಲಿ ಸಂಗ್ರಹವಾಗಿ ಸೊಳ್ಳೆಗಳು ಹೆಚ್ಚಾಗಿ ಬೆಳೆಯುತ್ತವೆ. ಹಲವು ರೀತಿಯ ಜ್ವರಗಳು ಬರಲು ಕಾರಣವಾಗುತ್ತದೆ. ಮನೆ ಮಠಗಳಿಂದ ಹರಿಯುವ ಮಳೆಯ ನೀರನ್ನು ಅಡ್ಡಗಟ್ಟಿದರೆ ಬಾವಿಯಲ್ಲಿ ನೀರು ಹೆಚ್ಚಾಗಿ ಸಂಗ್ರಹವಾಗಬಹುದು.

    ಮನೆಯ ಅಂಗಳ ಮತ್ತು ಹಿತ್ತಿಲನ್ನು ಕಾಂಕ್ರೀಟ್ ಮಾಡಿದರೆ ಮಾತ್ರ ಆಕರ್ಷಕವಾಗುತ್ತದೆ ಎಂಬ ಭಾವನೆ ಇಂದು ಸರ್ವೇ ಸಾಮಾನ್ಯವಾಗಿದೆ. ಮಳೆ ನೀರು ನಮ್ಮ ಹಿತ್ತಿಲಲ್ಲಿ ಇಂಗಬೇಕು. ಆಗ ಬಾವಿಯಲ್ಲಿ ನೀರು ಸಂಗ್ರಹವಾಗುತ್ತದೆ. ಇಲ್ಲದಿದ್ದರೆ ಕುಡಿಯುವ ಶುದ್ಧ ನೀರಿಗೂ ಕಷ್ಟಪಡಬೇಕಾಗಿ ಬರಬಹುದು.

    ಮನೆಯ ಸುತ್ತಲೂ ಜೈವಿಕ ಬೇಲಿಯನ್ನು ನಿರ್ಮಿಸಿದರೆ ಮಳೆಯ ನೀರನ್ನು ಸಂಗ್ರಹಿಸಬಹುದು. ಈ ಮೂಲಕ ಮಳೆ ನೀರನ್ನು ಸಂರಕ್ಷಿಸಬಹುದು. ಮಣ್ಣಿನ ಗೋಡೆಗಳನ್ನು ನಿರ್ಮಿಸಿ ಅವರಲ್ಲಿ ದಾಸವಾಳ, ಹನಿಗುಬ್ಬಿ, ರಾಮಪತ್ರೆಯಂತಹ ಗಿಡಗಳನ್ನು ನಾಟಿ ಮಾಡಿ ಬೆಳೆಸಬಹುದು. ಹಿತ್ತಲಲ್ಲಿ ಸುರಿಯುವ ಮಳೆ ನೀರು ಹೊರಗೆ ಹರಿಯದಂತೆ ಹಿತ್ತಲಿನಲ್ಲಿಯೇ ನೆನೆಸಲು ಅವಕಾಶ ನೀಡಬೇಕು. ಈ ವಿಧಾನವು ಮಣ್ಣಿನ ಗುಣಮಟ್ಟದ ಸುಧಾರಣೆಗೂ ಸಹಾಯಕವಾಗಿದೆ. ಮೇಲ್ಮಟ್ಟದ ಮಣ್ಣು ಫಲವತ್ತಾಗುತ್ತದೆ. ಇದರಿಂದ ಬೆಳೆಗಳಿಗೆಉತ್ತಮ ಮಣ್ಣು ಲಭ್ಯವಾಗುತ್ತದೆ. ಜೊತೆಗೆ ಬಾವಿಯಲ್ಲಿಯೂ ಧಾರಾಳ ನೀರು ಸಂಗ್ರಹವಾಗುತ್ತದೆ.

    ಮಣ್ಣಿನ ತಡೆಗೋಡೆ ಮತ್ತು ಗಿಡಗಳನ್ನು ಬೆಳೆಸುವುದರಿಂದ ಒಳ್ಳೆಯ ರೀತಿಯಲ್ಲಿ ಮಳೆ ನೀರು ಸಂರಕ್ಷಣೆ ಸಾಧ್ಯವಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಈ ರೀತಿಯ ಜೈವಿಕ ಬೇಲಿಗಳನ್ನು ನಿರ್ಮಿಸಬಹುದಾಗಿದೆ.

    ಮಳೆ ನೀರು ಮನೆಯ ಹಿತ್ತಲಿನಿಂದ ಹೊರಗೆ ಹರಿಯದಿದ್ದರೆ ಹಿತ್ತಲಿನಲ್ಲಿ ಹೆಚ್ಚು ನೀರು ಸಂಗ್ರಹವಾಗಬಹುದು. ಈ ನೀರಿನ ಜಮಾವಣೆಯನ್ನು ತಪ್ಪಿಸಲು ಇಂಗು ಗುಂಡಿಗಳನ್ನು ರಚಿಸಬಹುದು. ಬಾವಿ ಇರುವ ಸ್ಥಳ, ಮಣ್ಣಿನ ಗುಣಮಟ್ಟವನ್ನು ಗಮನದಲ್ಲಿರಿಸಿ ಇಂತಹ ವೇಳೆ ಕೊಯ್ಲು ಗುಂಡಿಗಳನ್ನು ರಚಿಸಬೇಕು. ಪ್ರತಿ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಿದರೆ ನಮ್ಮ ಮನೆಗಳಲ್ಲಿರುವ ಬಾವಿಗಳೇ ಶುದ್ಧ ನೀರಿನ ಮೂಲಗಳಾಗಿ ಮಾರ್ಪಾಟಾಗಬಲ್ಲದು.

    ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ

    ಮನೆಯ ಮೇಲ್ಛಾವಣೆಯಿಂದ ಬೀಳುವ ಮಳೆ ನೀರನ್ನು ಪೈಪುಗಳು ಮತ್ತು ತೊಟ್ಟಿಗಳ ಸಹಾಯದಿಂದ ನೇರವಾಗಿ ಸಂಗ್ರಹಿಸುವ ವಿಧಾನವನ್ನು ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ (Roof Top Rain Water Harvesting) ಎಂದು ಕರೆಯಲಾಗುತ್ತದೆ.

    ಈ ಪೈಪುಗಳು ಮತ್ತು ತೊಟ್ಟಿಗಳ ಮೂಲಕ ಹರಿದು ಬರುವ ಮಳೆ ನೀರನ್ನು ಫಿಲ್ಟರ್ ವ್ಯವಸ್ಥೆ ಮೂಲಕ ಶುದ್ಧೀಕರಿಸಬಹುದು.

    ಒಬ್ಬ ವ್ಯಕ್ತಿಗೆ ದಿನಕ್ಕೆ 20 ಲೀಟರ್ ನೀರಿನಂತೆ 5 ಜನರಿರುವ ಒಂದು ಕುಟುಂಬಕ್ಕೆ 100 ಲೀಟರ್ ನೀರು ಬೇಕಾಗುತ್ತದೆ ಎಂಬುದು ಸಾಮಾನ್ಯ ಲೆಕ್ಕಾಚಾರ. ಒಂದು ವರ್ಷದಲ್ಲಿ ಸುಮಾರು 100 ದಿನಗಳಷ್ಟು ಬೇಸಿಗೆ ಇರುತ್ತದೆ ಎಂದು ಲೆಕ್ಕ ಹಾಕಿದರೆ, ಪ್ರತಿದಿನ 40 ಲೀಟರ್‌ನಂತೆ 10,000 ಲೀಟರ್ ಸಾಮರ್ಥ್ಯವಿರುವ ಟ್ಯಾಂಕ್ ಬೇಕಾಗುತ್ತದೆ. ನೀರಿನ ಅಗತ್ಯ ಹೆಚ್ಚಾದರೆ ಟ್ಯಾಂಕಿನ ಸಾಮರ್ಥ್ಯವನ್ನು ಹೆಚ್ಚಿಸಬೇಕು.

    ಮೇಲ್ಛಾವಣೆಯಿಂದ ಸಂಗ್ರಹಿಸಿದ ಮಳೆ ನೀರನ್ನು ಶುದ್ಧಿಕರಿಸಿ ಟ್ಯಾಂಕುಗಳಲ್ಲಿ ಸಂಗ್ರಹಿಸಿಟ್ಟರೆ ಅದನ್ನು ಕುಡಿಯಲು ಉಪಯೋಗಿಸಬಹುದು. ಈ ಟ್ಯಾಂಕುಗಳನ್ನು ಸಿಮೆಂಟ್, ಫೈಬರ್ ಅಥವಾ ಫೆರೋ ಸಿಮೆಂಟ್‌ಗಳಿAದ ರಚಿಸಬಹುದಾಗಿದೆ. ಇದರಿಂದಲೇ ಬಾವಿಗೂ ನೀರನ್ನು ಹರಿಯಬಿಟ್ಟು ಬಾವಿಯ ನೀರಿನ ಪ್ರಮಾಣವನ್ನು ಹೆಚ್ಚಿಸಬಹುದು.

    ಭೂಮಟ್ಟದಲ್ಲಿ ಮಳೆ ನೀರು ಸಂರಕ್ಷಣೆ

    ಮಳೆ ನೀರನ್ನು ಮಣ್ಣಿನಲ್ಲಿ ಮತ್ತು ವಿವಿಧ ರೀತಿಯ ನೀರಿನ ಸಂರಕ್ಷಣೆಯ ವಿಧಾನದಲ್ಲಿ ಶೇಖರಿಸಿಡುವುದೇ ಭೂಮಟ್ಟದಲ್ಲಿ ಮಳೆ ನಿರು ಸಂಗ್ರಹಣೆ. ಮಹಾತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾವಿಗಳ ಪುನಶ್ಚೇತನ (ರೀಚಾರ್ಚ್) ಸಾಧ್ಯವಿದೆ. ಸರಾಸರಿ 10,000 ರೂಪಾಯಿ ಖರ್ಚಿನಲ್ಲಿ ಇದನ್ನು ಅಳವಡಿಸಬಹುದು.

    ಮಳೆ ನೀರು ಸಂರಕ್ಷಣೆಯ ಕೊಳಗಳು

    ಮಳೆ ನೀರನ್ನು ನೇರವಾಗಿ ಅಥವಾ ಹರಿದು ಹೋಗುತ್ತಿರುವ ನೀರನ್ನೂ ಸಂಗ್ರಹಿಸಿ ಕುಡಿಯುವ ಹೊರತಾಗಿ ಇತರ ಅಗತ್ಯಗಳಿಗೆ ಬಳಸಬಹುದು. ಇದಕ್ಕಾಗಿ ಕಡಿಮೆ ವೆಚ್ಚದ ಸಾಮಗ್ರಿಗಳನ್ನು, ಟರ್ಪಾಲನ್ನು ಬಳಸಿಯೂ ಸರಳ ನಿರ್ಮಾಣಗಳನ್ನು ಮಾಡಬಹುದು. ಬಾವಿಯ ಸುತ್ತಲೂ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಬಹುದು.

    ಮಳೆ ನೀರನ್ನು ಭೂಮಿಯೊಳಗೆ ಇಂಗಿಸಲು ಕಡಿಮೆ ವೆಚ್ಚದ ಗುಂಡಿಗಳನ್ನು ನಿರ್ಮಿಸಬೇಕು. ಮಳೆಯ ಸಮಯದಲ್ಲಿ ನೀರು ಸಂಗ್ರಹವಾಗಿ ನಿಧಾನವಾಗಿ ಭೂಮಿಯೊಳಗೆ ಇಂಗುವAತೆ ಮಾಡಬಹುದು. 0.6 ಮೀಟರ್ ಅಗಲ ಮತ್ತು ಆಳವಿರುವ ಗುಂಡಿಗಳ ನಿರ್ಮಾಣ ಉತ್ತಮ. ಇದರಿಂದ ಭೂಮಿಯೊಳಗಿನ ನೀರಿನ ಮಟ್ಟವೂ ಹೆಚ್ಚಾಗುತ್ತದೆ.

    ಕೆಂಪು ಕಲ್ಲುಗಳು ಮತ್ತು ಕಲ್ಲಿನ ಕ್ವಾರಿಗಳು

    ಬಳಕೆಯಾಗದ ಕೆಂಪು ಕಲ್ಲಿನ ಗುಂಡಿಗಳು. ಬಾವಿಗಳು ಇತ್ಯಾದಿಗಳನ್ನು ಜಲಾಶಯಗಳಾಗಿ ಪರಿವರ್ತಿಸಬಹುದಾಗಿದೆ. ಮನೆಗಳ ಛಾವಣೆ ಮತ್ತು ಅಂಗಳಗಳ ಮೇಲೆ ಬೀಳುವ ನೀರನ್ನು ಪೈಪ್‌ಗಳು ಅಥವಾ ಕಾಲುವೆಗಳ ಮೂಲಕ ಅಂತಹ ಹೊಂಡ ಮತ್ತು ಕ್ವಾರಿಗಳಿಗೆ ಹರಿಸಿದರೆ ಅದು ಮಣ್ಣಿನಲ್ಲಿ ಇಂಗಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಉಪಯುಕ್ತವಾಗುತ್ತದೆ.

    ತಡೆಗೋಡೆಗಳು

    ಹೊಳೆಗಳು ನದಿಗಳ ಕಿರಿದಾದ ಭಾಗಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರನ್ನು ಉಳಿಸಬಹುದು. ಮರಳು ಚೀಲಗಳು ಮತ್ತು ಇತರ ವಸ್ತುಗಳನ್ನು ಬಳಸುವ ಮೂಲಕ ಇದನ್ನು ಹೆಚ್ಚು ಖರ್ಚಿಲ್ಲದೆ ಪರಿಣಾಮಕಾರಿ ರೀತಿಯಲ್ಲಿ ಮಾಡಬಹದು.

    ಹೊದಿಕೆ ಮಾಡುವುದು

    ಮಣ್ಣನ್ನು ಹೊದಿಕೆ ಮಾಡುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ನೀವು ಒಣ ಎಲೆಗಳು, ಕಸ, ಒಣ ಹುಲ್ಲಿನ ಇತ್ಯಾದಿಗಳನ್ನು ಹೊದಿಕೆ ಮಾಡಲು ಬಳಸಬಹುದು. ಇದು ಮಣ್ಣಿನ ಸಾವಯವ ಪದಾರ್ಥವನ್ನು ಹೆಚ್ಚಿಸುತ್ತದೆ ಮತ್ತು ನೀರು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

    ಅಂತರ್ಜಲದ ಯೋಜನಾಬದ್ಧ ಬಳಕೆ

    ಅಂತರ್ಜಲವನ್ನು ನಾವೆಂದೂ ಅನಿಯಂತ್ರಿತವಾಗಿ ಬಳಸಬಾರದು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅದು ತನ್ನ ಮೂಲ ಅವಸ್ಥೆಗೆ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಅದನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.

    ಕೊಳವೆ ಬಾವಿಗಳನ್ನು ಕಡಿಮೆ ಮಾಡಬೇಕು

    ಭೂಗರ್ಭ ಜಲವು ನಿರಂತರವಾಗಿ ಕಡಿಮೆಯಾಗುತ್ತಿರುವುದಾಗಿ ಅಧ್ಯಯನಗಳು ತಿಳಿಸುತ್ತವೆ. ಅವೈಜ್ಞಾನಿಕವಾದ ಕೊಳವೆ ಬಾವಿಗಳ ನಿರ್ಮಾಣವು ಇದಕ್ಕೆ ಪ್ರಮುಖ ಕಾರಣವೆನ್ನಲಾಗುತ್ತಿದೆ.

    ಅನಿಯಂತ್ರಿತವಾಗಿ ಕೊಳವೆ ಬಾವಿ ಕೊರೆಯುವುದರ ಮೇಲೆ ನಿಯಂತ್ರಣ ಹೇರಬೇಕು.

    ವಿವಿಧ ಅಲರ್ಟುಗಳು

    ಮಳೆ ಬರುವುದಕ್ಕೆ ಮುಂಚೆಯೇ ಹವಾಮಾನ ವರದಿ ಕೇಂದ್ರವು ವಿವಿಧ ಅಲರ್ಟುಗಳನ್ನು ಘೋಷಿಸುತ್ತದೆ. ನಾಲ್ಕು ಬಣ್ಣಗಳ ಅಲರ್ಟುಗಳನ್ನು ಕೇಂದ್ರ ಹವಾಮಾನ ಇಲಾಖೆ ಹೊರಡಿಸುತ್ತದೆ. ಕೆಂಪು, ಆರೆಂಜ್, ಹಳದಿ ಮತ್ತು ಹಸಿರು. ಮಳೆ ಉಂಟಾಗುವ ಸಾಧ್ಯತೆಯನ್ನು ಗುರುತಿಸಿ ತಯಾರಿ ನಡೆಸಲಿಕ್ಕಾಗಿ ಮತ್ತು ಎಲ್ಲ ವಿಷಯಗಳಲ್ಲೂ ಸಿದ್ಧರಾಗಿರಲು ಈ ಅಲರ್ಟನ್ನು ಘೋಷಿಸಲಾಗುತ್ತದೆ. ಕೆಂಪು ಅಲರ್ಟ್ ಹೊರತುಪಡಿಸಿ ಉಳಿದವುಗಳ ಬಗ್ಗೆ ಹೆಚ್ಚು ಭೀತಿ ಪಡಬೇಕಾದ ಅಗತ್ಯವಿರುವುದಿಲ್ಲ. ಆರೆಂಜ್, ಹಳದಿ ಅಲರ್ಟ್ಗಳನ್ನು ಘೋಷಿಸಿದರೆ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಬೇಕು.

    ರೆಡ್ ಅಲರ್ಟ್

    ಅತಿಯಾದ ಮಳೆ ಉಂಟಾಗುವ ಸಾಧ್ಯತೆ ಇದ್ದರೆ ರೆಡ್ ಆಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 204.4 ಮಿಲಿ ಮೀಟರ್‌ಗಿಂತ ಹೆಚ್ಚಿದ್ದರೆ ಅತಿ ತೀವ್ರವಾದ ಮಳೆ ಬರುವ ಸಾಧ್ಯತೆ ಇರುತ್ತದೆ.

    ಆರೆಂಜ್ ಅಲರ್ಟ್

    ಭಾರಿ ಮಳೆ ಸಾಧ್ಯತೆ ಇದ್ದರೆ ಆರೆಂಜ್ ಅಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 115.6 ಮಿಲಿಮೀಟರ್‌ನಿಂದ 204.4 ಮಿಲಿ ಮೀಟರ್ ವರೆಗೆ ಮಳೆ ಲಭಿಸುವ ಅತಿಯಾದ ಮಳೆ ಎಂಬುದು ಇದರಿಂದ ಅರ್ಥವಾಗುತ್ತದೆ. ಆರೆಂಜ್ ಅಲರ್ಟ್ ಅತಿ ಗಂಭೀರವಾದ ಮುನ್ನೆಚ್ಚರಿಕೆ ನೀಡುತ್ತದೆ. ಸುರಕ್ಷಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.

    ಎಲ್ಲೋ ಅಲರ್ಟ್

    ಒಮ್ಮೆಲೆ ಸುರಿಯುವ ಸಾಧ್ಯತೆ ಇರುವ ಮಳೆ ಇದ್ದರೆ ಎಲ್ಲೋ ಅಲರ್ಟ್ ಘೋಷಿಸಲಾಗುತ್ತದೆ. 24 ಗಂಟೆಗಳೊಳಗೆ 64.5 ಮಿಲಿ ಲೀಟರ್‌ನಿಂದ 115.5 ಮಿಲಿ ಲೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಇದ್ದರೆ ಅದನ್ನು ಎಲ್ಲೋ ಅಲರ್ಟ್ ಎನ್ನಲಾಗುತ್ತದೆ. ಸುರಕ್ಷಾ ಕ್ರಮವನ್ನು ಜಾಗೃತಗೊಳಿಸಬೇಕು. ವಾತಾವರಣದ ಮೇಲೆ ನಿಗಾ ಇರಲಿ.

    ಗ್ರೀನ್ ಅಲರ್ಟ್

    ಇದು ಹೆಚ್ಚು ಭಯ ಪಡಬೇಕಾದ ಅವಸ್ಥೆಯಲ್ಲ.

    ಮುಹಮ್ಮದ್ ಮುರ್ಸಿ

  • ಇರಾನ್‌ನೊಂದಿಗೆ
ಸೆಣಸಲು 
ಶಕ್ತವಾಗಿದೆಯೇ
ಇಸ್ರೇಲ್?

    ಇರಾನ್‌ನೊಂದಿಗೆ ಸೆಣಸಲು ಶಕ್ತವಾಗಿದೆಯೇ ಇಸ್ರೇಲ್?

    ಇತ್ತೀಚೆಗೆ ಇರಾನಿನ ಸೇನಾ ಅಣ್ವಸ್ತ ಕೇಂದ್ರಗಳ ಮೇಲೆ ಇರಾನಿನ ನಾಯಕರನ್ನು ಗುರಿಯಾಗಿರಿಸಿ ಬಾಂಬ್ ದಾಳಿ ಮಾಡಿತು. ಈ ದಾಳಿಗೆ ಇರಾನಿನ ಸೇನಾ ಕಮಾಂಡರ್ ಹುಸೇನ್ ಸಲಾಮೀ ಬಲಿಯಾದರು. ಈ ದಾಳಿಯಲ್ಲಿ ಇನ್ನೂರು ಯುದ್ದ ವಿಮಾನಗಳು ಭಾಗಿಯಾಗಿತ್ತು ಎಂದು ಇಸ್ರೇಲ್ ಸ್ವತಹ ಹೇಳಿಕೊಂಡಿತ್ತು. “ಓಪರೇಶನ್ ರೈಸಿಂಗ್ ಲಯನ್” ಎಂಬ ಹೆಸರಿನಲ್ಲಿ ಇರಾನಿ ನಾಯಕರನ್ನು ಗುರಿಯಾಗಿಸಿಯೇ ದಾಳಿ ಸಂಘಟಿಸಲಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪಶ್ಚಿಮೇಶಿಯಾದಲ್ಲಿ ಇಸ್ರೇಲಿನ ಸದ್ದಡಗಿಸುವ ಅಣ್ವಸ್ತç ಹೊಂದಿರುವ ರಾಷ್ಟç ಇರಾನ್ ಆಗಿದೆ. ಇರಾನ್ ವಿರುದ್ಧ ಅದು ಹಗೆ ಸಾಧಿಸುತ್ತಲೇ ಬಂದಿದೆ. ಇರಾಕ್ ಮತ್ತಿತರ ರಾಷ್ಟçಗಳ ಪ್ರವಾಸದಲ್ಲಿದ್ದ ಇರಾನಿನ ಪ್ರಮುಖ ನಾಯಕರನ್ನು ಕೂಡಾ ಅದು ಕೊಂದು ಹಾಕಿದೆ. ಯಾಕೆಂದರೆ ಇಸ್ರೇಲ್‌ಗೆ ಇರಾನ್ ಬೆದರಿಕೆಯಾಗಿ ಪರಿಣಮಿಸಿದೆ.

    ಆ ಕಾರಣಕ್ಕಾಗಿಯೇ ಇರಾನ್ ಮೇಲೆ ಅದು ದಾಳಿ ಮಾಡಿ ಕಾಲು ಕೆರೆದು ಜಗಳಕ್ಕಿಳಿದಿವೆ. ಇರಾನ್‌ನ ಪ್ರತಿ ದಾಳಿ ಇಸ್ರೇಲಿನ ಮೇಲೆ ಪ್ರತ್ಯಾಘಾತ ಬೀರಿದೆ. ಈಗಾಗಲೇ ಇಸ್ರೇಲಿನ ನಾಶಕ್ಕೆ ಅದು ಪಣ ತೊಟ್ಟಂತೆ ಕಂಡುಬರುತ್ತಿದೆ. ಇಸ್ರೇಲಿನ ನಾಶದ ವರೆಗೆ ಸುಮ್ಮನಿರುವುದಿಲ್ಲ ಎಂದು ಇರಾನ್ ಹೇಳಿಕೊಂಡಿದೆ. ಯುದ್ಧದಾಹಿ ಇಸ್ರೇಲಿನ ಕಿಡಿಗೇಡಿತನದಿಂದ ವಿಶ್ವದಲ್ಲಿ ಅಶಾಂತಿ ನೆಲೆಸುವ ಸ್ಥಿತಿ ಸನ್ನಾಹವಾಗಿದೆ. ತೈಲಬೆಲೆಗಳು ಅನಿಯಂತ್ರಿತವಾಗಿ ಗಗನಕ್ಕೇರುವ ಸೂಚನೆಗಳು ಗೋಚರವಾಗುತ್ತಿದೆ. ಒಟ್ಟಿನಲ್ಲಿ ವಿಶ್ವದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಲಿದೆ. ಜನಸಾಮಾನ್ಯರ ಬದುಕಿನ ಮೇಲೆ ಇದರ ದುಷ್ಪರಿಣಾಮ ಬೀರಲಿದೆ. ಇಸ್ರೇಲಿನ ಕಿಡಿಗೇಡಿತನದ ಬಗ್ಗೆ ಮೌನವಾಗಿ ಮತ್ತು ಬಹಿರಂಗವಾಗಿ ಸಹಮತ ವ್ಯಕ್ತಪಡಿಸುವವರು ಚಿಂತಿಸಬೇಕಾಗಿದೆ.

    ಇಷ್ಟಕ್ಕೂ ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ವಾಯು ದಾಳಿಗೂ ನಮಗೂ ಯಾವುದೇ ಸಂಬAಧವಿಲ್ಲವೆAದು ಅಮೇರಿಕ ಹೇಳಿಕೊಂಡಿದೆ. ಆ ಹೆಸರಲ್ಲಿ ನಮ್ಮ ನೆಲೆಗಳ ಮೇಲೆ ಏನಾದರೂ ದಾಳಿಯಾದರೆ ನಾವು ಸುಮ್ಮನೆ ಕೂರಲಾರೆವು ಎಂದು ಅಮೇರಿಕಾ ಹೇಳಿಕೊಂಡಿದೆ. ಆದರೆ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆ ನಮಗೆ ಸಂಬAಧವಿಲ್ಲ ಎಂದು ಅಮೇರಿಕಾ ಹೇಳಿದ್ದನ್ನು ನಂಬುವAತಿಲ್ಲ. ಇಲ್ಲವೆಂದಾರೆ ಇರಾನ್ ಮೇಲಿನ ಇಸ್ರೇಲಿನ ಸೇನಾ ದಾಳಿಯನ್ನು ಅಮೇರಿಕಾ ಖಂಡಿಸದಿರುವುದೇಕೆ? ಯಾಕೆಂದರೆ ಅಮೇರಿಕ ಮತ್ತು ಇಸ್ರೇಲಿನ ನಡುವಿನ ಈ ವರೆಗಿನ ಮೈತ್ರಿಯ ಸಂಬAಧವೇ ಅದಕ್ಕೆ ಪುಷ್ಟಿ ನೀಡುತ್ತವೆ. ಇಸ್ರೇಲ್ ಈಗ ಅಮೇರಿಕಾದ ಪ್ರಭಾವದ ಮೇಲೆಯೇ ಕಿಡಿಗೇಡಿತನ ಮಾಡುತ್ತಿವೆ. ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅಮೇರಿಕಾ ಮತ್ತು ಬ್ರಿಟನ್ ಫ್ರಾನ್ಸ್ ದೇಶಗಳನ್ನು ಯುದ್ದ ರಂಗಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆ ಮೂಲಕ ಟ್ರಂಪ್ ಹತ್ಯೆಗೆ ಇರಾನ್ ಶ್ರಮಿಸುತ್ತಿದೆ ಎಂಬ ದಾಳವನ್ನು ಎಸೆದಿದ್ದಾರೆ. ನಿಜಕ್ಕೂ ಇಸ್ರೇಲ್ ಜಗತ್ತಿಗೆ ಮಾರಕವಾಗುತ್ತಿದೆ. ಜಗತ್ತಿನ ಸ್ವಾಸ್ಥö್ಯವನ್ನು ಕೆಡಿಸುತ್ತಿದೆ. ತಮ್ಮ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಫೆಲೆಸ್ತೀನಿಯರ ಮಾರಣ ಹೋಮ ನಡೆಸುತ್ತಿದೆ. ಮಹಿಳೆಯರು ಮಕ್ಕಳು ಸೇರಿ ಗಾಝಾದಲ್ಲಿ 54000 ಮಂದಿಯನ್ನು ಹತ್ಯೆಗೈದಿದ್ದಾರೆ. ಅಧಿಕೃತ ವರದಿಯನುಸಾರ 1,23,977 ಮಂದಿ ಗಾಯಾಳುಗಳಾಗಿದ್ದಾರೆ. ಗಾಝಾದ ಕೃಷಿ ಭೂಮಿಯಲ್ಲಿ ಶೇಕಡಾ 5ರಷ್ಟು ಮಾತ್ರ ಕೃಷಿ ನಡೆಸಲು ಯೋಗ್ಯವಾಗಿದೆ. ಶೇಕಡಾ 77.8 ರಷ್ಟು ಕೃಷಿ ಭೂಮಿನ್ನು ಸಂಪೂರ್ಣ ನಾಶಪಡಿಸಲಾಗಿದೆ. ಸಂತ್ರಸ್ತರಿಗೆ ಗಾಯಾಳುಗಳಿಗೆ ವಿಶ್ವಸಂಸ್ಥೆಯ ನಿಯಂತ್ರಣದಲ್ಲಿ ಔಷಧ, ಆಹಾರ ತಲುಪಿಸುವುದನ್ನು ತಡೆಯಿತು. ಮಕ್ಕಳು ಮರಿಗಳೆನ್ನದೆ, ವೃದ್ದರು ಮಹಿಳೆಯರು ಔಷಧವಿಲ್ಲದೆ, ಹೊಟ್ಟೆಗೆ ಅನ್ನ ಆಹಾರವಿಲ್ಲದೆ ಪ್ರಾಣ ಕಳಕೊಳ್ಳುವ ಸ್ಥಿತಿಯನ್ನು ಈ ಇಸ್ರೇಲ್ ಮಾಡಿದೆ. ಹೀಗೆ ಗಾಝಾದ ನೆಲದಲ್ಲಿ ಮಾರಣ ಹೋಮ ನಡೆಸಿ ನರಕ ಸದೃಶಗೊಳಿಸಿದ ಇಸ್ರೇಲ್ ಯಾವ ರೀತಿಯಲ್ಲಿಯೂ ಕ್ಷಮೆಗೆ ಅರ್ಹವಲ್ಲ. ಈ ಮಾರಣ ಹೋಮದ ಅಂತಿಮ ಹಂತಕ್ಕೆ ತಲುಪಿದಾಗ ಅಮೇರಿಕಾ ಬ್ರಿಟನ್ ಜರ್ಮನಿ, ಕೆನಡಾ ದೇಶಗಳು ಇಸ್ರೇಲ್ ಜೊತೆಗಿನ ಆರ್ಥಿಕ ವ್ಯವಹಾರಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿವೆ. ಫೆಲೆಸ್ತೀನ್ ಸದಸ್ಯತ್ವ ಹೊಂದಿರುವ ಅರಬ್ ಲೀಗ್, ಓಐಸಿ ಮುಂತಾದ ಒಕ್ಕೂಟದ ದೇಶಗಳು ಇಸ್ರೇಲ್ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಫೆಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸುವವರನ್ನು ಬೇಟೆಯಾಡುತ್ತಾ ಗಡಿಪಾರು ಮಾಡುವುದು ಜೈಲಿಗೆ ಹಾಕುವುದು ಇಂತಹಾ ಕೃತ್ಯದಲ್ಲಿ ಟ್ರಂಪ್ ನಿರತರಾಗಿದ್ದಾರೆ.

    ಈಗ ಇರಾನ್ ದೇಶವನ್ನು ಮೂಲಭೂತವಾದಿ ರಾಷ್ಟç ಎಂದು ಗೂಬೆ ಕೂರಿಸುವವರಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ಅಮೇರಿಕಾದಿಂದ ದಿಗ್ಬಂಧನ ಅನುಭವಿಸುತ್ತಿರುವ ಇರಾನಿನ ವಾಸ್ತವಿಕ ವಿಚಾರಗಳ ಕುರಿತು ಅರಿಯಬೇಕಾಗಿದೆ. ಇರಾನಿನಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದೆ ಮತ್ತು ಅದು ಸಾರ್ವತ್ರಿಕವಾಗಿ ಉಚಿತವಾಗಿ ದೊರೆಯುತ್ತಿದೆ. ಮೆಡಿಕಲ್ ಕೇರ್ ಕೂಡಾ ಉಚಿತವಾಗಿದೆ. ಶೈಕ್ಷಣಿಕ ರಂಗಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ವೈಜ್ಞಾನಿಕ ರಂಗದಲ್ಲಿ ಶೇಕಡಾ 59 ರಷ್ಟು ಮಹಿಳೆಯರಿದ್ದಾರೆ. ಪಶ್ಚಿಮದ ದೇಶಗಳಲ್ಲಿಯೂ ಹೀಗಿಲ್ಲ. ಅಮೇರಿಕಾ ಕೂರಿಸಿದ ದೊರೆ ಶಾ ಅಲ್ಲಿ ಮಹಿಳೆಯರು ಅರೆನಗ್ನಾವಸ್ಥೆಯ ವಸ್ತç ತೊಟ್ಟಿರುವುದನ್ನು ಕಾಣಬಹುದು. 1976 ರಲ್ಲಿ ಇರಾನಿನಲ್ಲಿ ಶೇಕಡಾ 24 ರಷ್ಟು ಮಹಿಳೆಯರು ಮಾತ್ರ ಸುಶಿಕ್ಷಿತರಾಗಿದ್ದರು. ಈಗ ಅದು ಶೇಕಡಾ ನೂರಕ್ಕೆ ತಲುಪಿದೆ. ಆಗ ಉನ್ನತ ಶಿಕ್ಷಣವನ್ನು ಶೇಕಡಾ ಮೂರರಷ್ಟು ಮಂದಿ ಪಡೆಯುತ್ತಿದ್ದರೆ ಈಗ ಅದು ಶೇಕಡಾ 59 ಕ್ಕೆ ತಲುಪಿದೆ. ಯುನಿವರ್ಸಿಟಿಗಳಲ್ಲಿ 1979 ರಲ್ಲಿ ಶೇಕಡಾ 1.4 ರಷ್ಟಿದ್ದರೆ ಇರಾನಿನಲ್ಲಿ ಇಂದು ಅದು ಶೇಕಡಾ 24 ಕ್ಕೆ ತಲುಪಿದೆ. (ಅಮೇರಿಕಾಗಿಂತಲೂ ಹೆಚ್ಚು). ಇರಾನಿನಲ್ಲಿ ಇಸ್ಲಾಮೀ ಮೂಲಭೂತವಾದಿಗಳಿಂದ ಮಹಿಳೆಯರ ಸ್ವಾತಂತ್ರö್ಯ ಹರಣ ಎಂದು ಅಂದುಕೊAಡವರು ಈ ವಾಸ್ತವವನ್ನು ಅರಿಯಬೇಕಾಗಿದೆ. ಯಾಕೆಂದರೆ ನಮ್ಮಲ್ಲಿ ಇರಾನ್ ದೇಶವನ್ನು ಮೂಲಭೂತವಾದಿ ರಾಷ್ಟç ಎಂದು ಚಿಂತಿಸುವವರಿದ್ದಾರೆ. ಇಸ್ರೇಲಿನ ಕಿಡಿಗೇಡಿತನವನ್ನು ಕಂಡು ಸಂಭ್ರಮಿಸುವವರೂ ಇದ್ದಾರೆ. ಮಾನವೀಯತೆಯ ದೃಷ್ಟಿಯಿಂದ ನಾವು ಚಿಂತಿಸಬೇಕಾಗಿದೆ. ಯಾರಿಂದ ವಿಶ್ವದ ಶಾಂತಿ ಸುವ್ಯವವಸ್ಥೆಗೆ ಹಾನಿಯಾಗುತ್ತಿದೆ ಎಂಬುದನ್ನು ಚಿಂತಿಸಬೇಕು. ಈ ಯುದ್ದದಿಂದಾಗಿ ತೈಲ ಬೆಲೆಗಳು ವಿಪರೀತವಾಗಿ ಏರಿಕೆಯಾಗಿ ಎಲ್ಲ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಲಿದೆ.

    ಸಲೀಮ್ ಬೋಳಂಗಡಿ