Tag: #anupama magazine

  • ಮನೆಯಾಕೆಯ ಆಸೆಗಳು…

    ಮನೆಯಾಕೆಯ ಆಸೆಗಳು…

    ಬೆಳ್ಳಂಬೆಳಗ್ಗೆ ಏಳುವ, ಮಕ್ಕಳ ಬುತ್ತಿ ಕಟ್ಟಿ
    ಶಾಲೆಗೆ ಹೊರಡಿಸುವ, ಪತಿ, ಅತ್ತೆ
    ಮಾವನ ಬೇಕು ಬೇಡಗಳನ್ನು ಗಮನಿಸುವ
    ಆಕೆಗೂ ಇದೆಯಲ್ಲವೇ ಚಿಕ್ಕಪುಟ್ಟ ಆಸೆಗಳು.

    ಬೆಳಗ್ಗಿನ ಚುಮುಚುಮು ಚಳಿಗೆ
    ಹೊದ್ದುಕೊಂಡ ಹೊದಿಕೆಯನ್ನು ಮತ್ತಷ್ಟು ಗಟ್ಟಿಯಾಗಿ ಅವುಚಿಕೊಂಡು
    ಆ ಸವಿನಿದ್ದೆಯನ್ನು ಸಂಪೂರ್ಣವಾಗಿ ಅನುಭವಿಸುವ ಆಸೆ.

    ಕಾವಲಿಯಿಂದ ಆಗಷ್ಟೇ ಎದ್ದ,
    ಕುರುಕುರು ಎನ್ನುವ ಬಿಸಿಬಿಸಿ ದೋಸೆಯನ್ನು ನೆಮ್ಮದಿಯಿಂದ
    ಸವಿಯುವ ಆಸೆ

    ಊಟದ ಮೇಜಿನಲ್ಲಿ ಮಧ್ಯದಲ್ಲಿ ಒಮ್ಮೆಯೂ ಏಳದೆ,
    ಬಿಸಿಬಿಸಿ ಅನ್ನವ ಸಂತೃಪ್ತಿಯಿಂದ ತಿನ್ನುವ ಆಸೆ

    ಬೆಳಗ್ಗೆ, ಮಧ್ಯಾಹ್ನ, ರಾತ್ರಿಯಡಿಗೆಗೆ
    ಏನು ಮಾಡಲಿ ಎಂಬ ಚಿಂತೆಯನ್ನು
    ಒಂದು ದಿನವಾದರೂ ಬಿಡುವ ಆಸೆ.

    ಅಮ್ಮಾ ಅದೆಲ್ಲಿ? ಇವಳೇ ಇದೆಲ್ಲಿ?
    ನನ್ನ ಔಷಧಿ ಕೊಡು, ನನ್ನ ಟವಲು ಕೊಡು, ಪುಸ್ತಕ ಕಾಣುತ್ತಿಲ್ಲ,
    ಈ ಎಲ್ಲ ದೈನಿಕ ಧಾವಂತದಿಂದ ಒಂದು ದಿನವಾದರೂ ವಿರಾಮ ದೊರೆತರೆ ಎಂಬ ಆಸೆ.

    ಬಿಸಿ ಕಾಫಿಯ ಜೊತೆಗೆ,
    ಬಾಲ್ಕನಿಯಲ್ಲಿ ಕೂತು ಒಂದರ್ಧ ಗಂಟೆ ಮಳೆ ವೀಕ್ಷಿಸುವ ಆಸೆ.

    ಒಂದಿಡೀ ಕಾದಂಬರಿಯನ್ನು ಕೈಯಿಂದ ಕೆಳಗಿಡದೆ
    ಸಂಪೂರ್ಣ ಓದಿ ಮುಗಿಸುವ ಆಸೆ.

    ದಿನವಿಡೀ ಮನೆ, ಮಕ್ಕಳನ್ನು ಸಂಭಾಳಿಸುವಳು ಆಕೆ
    ಒಂದು ಕೆಲಸ ಮುಗಿಯಿತು ಎನ್ನುವಾಗ ಮತ್ತೊಂದು ಧುತ್ತನೆ ಎದುರಾಗುವುದು,

    ಪಾತ್ರೆ ತೊಳೆ, ಬಟ್ಟೆ ಒಗೆ,
    ಒಣಗಿಸು, ಮಡಚಿಡು,
    ಅಲ್ಲಿ ಧೂಳಿದೆ, ಇಲ್ಲಿ ಕಲೆಯಿದೆ,
    ಸ್ವಲ್ಪ ಕೂತೊಡನೆ ಮತ್ತೇನೋ ಕೆಲಸ ಕಾಣುತ್ತದೆ.
    ಇವೆಲ್ಲವ ಮುಗಿಸಿದರೂ ಕೆಲವೊಮ್ಮೆ ಪ್ರಶ್ನೆ
    “ಮನೆಯಲ್ಲಿ ನಿನಗೇನು ಕೆಲಸವಿದೆ?”

    ಆಕೆಯೊಂದು ದಿನ ಸುಮ್ಮನೆ ಕುಳಿತರೆ,
    ಮೈಬಿಸಿಯೆಂದು ಹೊದ್ದು ಮಲಗಿದರೆ
    ತಿಳಿಯಬಹುದು ಆಕೆಯ ಹೊರೆ

    ನಗುನಗುತ್ತಾ, ಕೆಲವೊಮ್ಮೆ ಸಿಡುಕುತ್ತಾ ಎಲ್ಲ ನಿಭಾಯಿಸುವ ಆಕೆಗೂ ಬೇಕಿದೆ
    ತಿಂಗಳಿಗೆ ಒಂದು ದಿನವಾದರೂ ರಜೆ..

  • ‘ಬೂಕರ್ ಪ್ರಶಸ್ತಿ’ ಕನ್ನಡ ನಾಡಿಗೆ ತಂದ ಹೆಮ್ಮೆಯ ‘ಬಾನು ಮುಷ್ತಾಕ್’

    ‘ಬೂಕರ್ ಪ್ರಶಸ್ತಿ’ ಕನ್ನಡ ನಾಡಿಗೆ ತಂದ ಹೆಮ್ಮೆಯ ‘ಬಾನು ಮುಷ್ತಾಕ್’

    ಬಾನು ಮುಷ್ತಾಕ್‌ರ `ಹಾರ್ಟ್ಲ್ಯಾಂಪ್'(ಎದೆಯ ಹಣತೆ) ಬೂಕರ್ ಪ್ರಶಸ್ತಿಗೆ ಆಯ್ಕೆಯ ಪಟ್ಟಿಯಲ್ಲಿದೆ ಎಂಬ ಸುದ್ಧಿ ಬಂದಾಗಲೇ ಈ ಪ್ರಶಸ್ತಿ ಬಾನು ಅವರಿಗೇ ಸಿಗಲಿ ಎಂದು ಮನದಲ್ಲೇ ಪ್ರಾರ್ಥಿಸಿದ್ದೆ. ಅಂತಿಮವಾಗಿ ಬೂಕರ್’ ಬಾನು ಅವರಿಗೆ ಲಭಿಸಿದೆ ಎಂಬ ಸುದ್ಧಿ ಬಂದಾಗ ತುಂಬಾನೇ ಖುಶಿ ಆಯಿತು.

    ಲೇಖಕಿ ಬಾನು ಮುಷ್ತಾಕ್ ಮತ್ತು ಅನುಪಮದ ನಂಟು ಇಪ್ಪತ್ತು ವರ್ಷದ ಮೊದಲಿನದು. ಕನ್ನಡ ನಾಡಿನಲ್ಲಿ ಹೆಸರುವಾಸಿಯಾದ ಈ ಲೇಖಕಿಯನ್ನು ಭೇಟಿ ಮಾಡಲು ನಮ್ಮ ಬಳಗ ಹಾಸನ’ಕ್ಕೆ ಹೋದಾಗ ಅವರ ನೈಜ ವ್ಯಕ್ತಿತ್ವದ ಪರಿಚಯವಾಗಿತ್ತು. ಅವರು ನೀಡಿದ ಆತ್ಮೀಯವಾದ ಸ್ವಾಗತ, ಆತಿಥ್ಯ ಮರೆಯಲಾರದು. ಅವರ ಪತಿ ಮತ್ತು ಮಕ್ಕಳು ನಮ್ಮ ಒಟ್ಟಿಗೆ ಆತ್ಮೀಯವಾಗಿ ಕಾಲ ಕಳೆದರು. ಹಾಸನಕ್ಕೆ ಹೋಗುವ ಮೊದಲು ಈ ಲೇಖಕಿಯ ಬಗ್ಗೆ ಇದ್ದ ತಪ್ಪು ಭಾವನೆ ಎಲ್ಲವೂ ಅಳಿಸಿ ಹೋಗಿತ್ತು.

    `ಅನುಪಮ’ ಪತ್ರಿಕೆಯ ಬಳಗದ ಸಹೋದರಿಯರು ಹಿಜಾಬ್’ ಧರಿಸುವ ಸಂಪ್ರದಾಯವಾದಿಗಳಾಗಿದ್ದರಿAದ ಬಂಡಾಯ ಸಾಹಿತಿ ಎಂದು ಅಂದು ಕರೆಯಲ್ಪಡುತ್ತಿದ್ದ ಬಾನು ಅವರಿಗೆ ನಮ್ಮ ಭೇಟಿ ಹೆಚ್ಚು ಖುಶಿ ಕೊಡಲಿಕ್ಕೆ ಇಲ್ಲ ಎಂಬ ಭಾವನೆ ನನ್ನಲ್ಲಿ ಇತ್ತು. ಆದ್ರೆ… ಅವರ ಆತ್ಮೀಯತೆ, ಬಿಂಕ ಇಲ್ಲದ ಸರಳ ನಡವಳಿಕೆ, ವಿಶಾಲತೆಯು ನಮಗೆ ನಮ್ಮಲ್ಲಿದ್ದ ತಪ್ಪು ಭಾವನೆಯನ್ನು ತೊಳೆದು ಹಾಕಿತ್ತು. ಪತ್ರಿಕೆಗೆ ಅವರು ಕಥೆಯನ್ನೂ, ಲೇಖನಗಳನ್ನೂ ನೀಡುತ್ತಿದ್ದರು. ಮಂಗಳೂರಿಗೆ ಕುಟುಂಬ ಸಮೇತ ಬಂದು ನಮ್ಮ ಮನೆಯಲ್ಲಿ ಉಪಹಾರ ಸೇವಿಸಿ ಮಕ್ಕಳಿಂದ ಫೋಟೋ ತೆಗೆಸಿಕೊಂಡು ಹೋಗಿದ್ದರು. ಮೀನು ತಿನ್ನುವ ಆಶೆ ವ್ಯಕ್ತಪಡಿಸಿದಾಗ ಅವರನ್ನು ಓಶನ್ ಪರ್ಲ್ ಹೋಟೇಲಲ್ಲಿ (ಶಾಂತಿ ಪ್ರಕಾಶನ ಕಾರ್ಯಕ್ರಮಕ್ಕೆ ಬಂದಾಗ) ಅಂಜಲ್ ಫ್ರೈ ಮೀನನ್ನು ತಿನ್ನಿಸಿದ್ದೆವು. ಅಹಂಕಾರ ಇಲ್ಲದ ಅವರ ಆತ್ಮೀಯತೆಯು ನಮ್ಮನ್ನು ಸೆಳೆದಿತ್ತು.

    ಕತ್ತಿಗಿಂತಲೂ ಹರಿತವಾದದ್ದು ಲೇಖನಿ ಎಂಬುವುದು ಸತ್ಯನುಡಿ. ನಮ್ಮಲ್ಲಿ ಬಹಳಷ್ಟು ಬರಹಗಾರ್ತಿಯರಿದ್ದಾರೆ. ಕಥೆ, ಕಾದಂಬರಿಯಲ್ಲಿ ಸ್ತಿçÃಯರ ಎಲ್ಲಾ ತಲ್ಲಣಗಳನ್ನು ಸೊಗಸಾಗಿ ವಿವರಿಸುತ್ತಾರೆ. ಮಹಿಳೆಯ ಕಣ್ಣೀರಿನ ಬಗ್ಗೆ ಮರುಕ, ಅನುಕಂಪನೂ ಇರುತ್ತದೆ. ಅನ್ಯಾಯವನ್ನು ಎದುರಿಸುವ ಗಟ್ಟಿಗಿತ್ತಿ ನಾಯಕಿಯರ ಪಾತ್ರವನ್ನೂ ಬಹಳ ಸುಂದರವಾಗಿ ವರ್ಣಿಸುತ್ತಾರೆ. ಆದ್ರೆ… ವಾಸ್ತವದ ಬದುಕಿನಲ್ಲಿ ಈ ಬರಹದ ಒಂದಿಷ್ಟೂ ಧೈರ್ಯ, ಸಾಹಸ ಬರಹಗಾರ್ತಿಯರಲ್ಲಿ ಕಾಣಿಸದು. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಅನ್ಯಾಯ ನಡೆಯುವಾಗ ಇವರೆಲ್ಲಾ `ಮೂಕ’ರಾಗಿ ನಿಲ್ಲುತ್ತಾರೆ. ಕೊನೆ ಪಕ್ಷ ವಿರೋಧಿಸುವ ಒಂದು ವಾಕ್ಯದ ಬರಹವನ್ನೂ ಪತ್ರಿಕೆಗೆ ರವಾನಿಸುವುದಿಲ್ಲ. ಇಂತಹ ಲೇಖಕಿಯರ ಮಧ್ಯೆ ಬಾನು ಮುಷ್ತಾಕ್‌ರು ತುಸು ಭಿನ್ನವಾಗಿ ನಿಲ್ಲುತ್ತಾರೆ. ಬಹುಶಃ ಅವರ `ವಕೀಲ’ ವೃತ್ತಿ ಜೀವನದಲ್ಲಿ ಮಹಿಳೆಯರ ಶೋಷಣೆಯನ್ನು ಆಳವಾಗಿ ಹತ್ತಿರದಿಂದ ವೀಕ್ಷಿಸುವ ಅವಕಾಶ ಲೇಖಕಿಗೆ ಲಭಿಸಿದರಿಂದ ಬಾನು ತನ್ನ ಕತೆಯಲ್ಲಿ ಸ್ತಿçà ಸಂವೇದನೆಗೆ ಒತ್ತು ಕೊಡುತ್ತಾರೆ. ಅನ್ಯಾಯದ ವಿರುದ್ಧ ಲೇಖನಿ ಬಳಸುವುದರ ಒಟ್ಟಿಗೇ ಅವರು ಹೋರಾಟದ `ಧ್ವನಿ’ಯೂ ಆಗಿ ನಿಲ್ಲುತ್ತಾರೆ. ಮಹಿಳಾ ದೌರ್ಜನ್ಯದ ವಿರುದ್ಧದ ಹೋರಾಟಗಾರ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. `ಸತ್ಯ’ವನ್ನು ನೇರವಾಗಿ ಹೇಳಲು ಹಿಂಜರಿಯದ ಸ್ವಭಾವ ಅವರದು. ಅವರ ಕಥೆಯಲ್ಲೂ ಅದು ಕಾಣಿಸುತ್ತದೆ. ಧರ್ಮದೊಳಗೆ ಅಡಗಿರುವ ಅನಾಚಾರ, ಹಕ್ಕುಗಳ ದುರ್ಬಳಕೆ, ಪುರುಷ ಶೋಷಣೆಯ ವಿರುದ್ಧ ಅವರು ಧ್ವನಿ ಎತ್ತಿರುತ್ತಾರೆ. ಲೇಖಕಿಗಿಂತಲೂ ಅವರು ವಕೀಲೆಯಾಗಿ, ಹೋರಾಟಗಾರ್ತಿಯಾಗಿಯೇ ಹೆಚ್ಚು ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಜಾಬ್‌ನ ವಿಷಯದಲ್ಲಿ ಅವರ ದೃಷ್ಟಿಕೋನ ಬೇರೆಯೇ ಇದ್ದರೂ ಇಸ್ಲಾಮಿನ ಇತರ ಆರಾಧನಾ ಕರ್ಮಗಳ ಬಗ್ಗೆ ಅವರು ಅಪ್ಪಟ ಧರ್ಮ ಭಕ್ತೆಯಾಗಿದ್ದಾರೆ. ಬಾನು ಅವರು ಯಾವತ್ತೂ ಹಿಜಾಬ್ ಧಾರಿಗಳ ಬಗ್ಗೆ ಟೀಕಿಸಲಿಲ್ಲ. ವಸ್ತçಧಾರಣೆ ಅವರವರ ಇಷ್ಟ. ಅದು ಅವರ ವೈಯಕ್ತಿಕವಾದ ಸ್ವತಂತ್ರ ನಿಲುವು ಎನ್ನುವ ನೇರ ನುಡಿ ಅವರದು. ಇಸ್ಲಾಮ್ ಮಹಿಳೆಯರಿಗೆ ನೀಡಿದ ಅಧಿಕಾರ, ಹಕ್ಕು, ಸ್ವಾತಂತ್ರ್ಯದ ಬಗ್ಗೆ ಎಚ್ಚರಿಸುವ ಅವರು ಪುರುಷರು ಧರ್ಮ ನೀಡಿದ ಸೌಲಭ್ಯವನ್ನು ಕಸಿದು ಮಹಿಳೆಯರನ್ನು ಶೋಷಿಸುವ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸುತ್ತಾರೆ. ಸತ್ಯ ಎಂದಿಗೂ ಕಹಿ ತಾನೆ? ಮಹಿಳೆಯರು ಶಿಕ್ಷಣ ಪಡೆದಾಗ ಈ ಎಲ್ಲಾ ದಬ್ಬಾಳಿಕೆ ಕಡಿಮೆ ಆಗುತ್ತೆ ಎಂಬ ಉಪದೇಶ ಬಾನು ಅವರದು. ಆದ್ದರಿಂದಲೇ ಬರಹಗಾರ್ತಿ ಆಗಿ ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ ಕಥೆಯಲ್ಲಿ ತಾನು ಬರೆದಂತೇ ಸಮಾಜದಲ್ಲಿ ಗಟ್ಟಿ ಧ್ವನಿ ಎತ್ತುವ ಮೂಲಕ ಬಾನುರವರು ಗಮನ ಸೆಳೆಯುತ್ತಾರೆ.

    ಇಂದು ಬಾನು ಅವರಿಗೆ ವಿಶ್ವದ ಪ್ರತಿಷ್ಠಿತ `ಬೂಕರ್’ ಪ್ರಶಸ್ತಿ ಲಭಿಸಿದೆ. ಯಾವುದೇ ಗೌರವ, ಸ್ಥಾನಮಾನ, ಉಡುಗೊರೆ ದೇವನ `ಅನುಗ್ರಹ’ ಆಗಿರುತ್ತದೆ. ಅಹಂಕಾರ ಇಲ್ಲದ ಸರಳ ಸಜ್ಜನಿಕೆಯ ಈ ಲೇಖಕಿಗೆ ವಿಶ್ವದಲ್ಲೇ ಬೆಳಗುವ ಪ್ರಶಸ್ತಿಯೂ ಲಭಿಸಿದಾಗ ಅವರ ಮುಂದಿನ ಹೊಣೆಗಾರಿಕೆಯೂ ಅಧಿಕವಾಗುತ್ತದೆ. ಅವರ `ಹಸೀನಾ ಮತ್ತು ಇತರ ಕಥೆಗಳು’ ಕಥಾ ಸಂಕಲನ ಓದಿದವರಿಗೆ ಈ ಲೇಖಕಿಯ ಮಹಿಳಾ ಸಂವೇದನೆಯ ಆಳ ಅರ್ಥ ಆಗುತ್ತದೆ. 1990 ರಲ್ಲಿ `ಹೆಜ್ಜೆ ಮಾಡಿದ ಹಾದಿ’ 1999ರಲ್ಲಿ `ಬೆಂಕಿ ಮಳೆ’ 2004ರಲ್ಲಿ ಪ್ರಕಟವಾದ `ಎದೆಯ ಹಣತೆ’ (ಹಾರ್ಟ್ ಲ್ಯಾಂಪ್), 2007ರಲ್ಲಿ `ಸಫೀರಾ’ ಕಥಾ ಸಂಕಲನ, 2012ರಲ್ಲಿ `ಬಡವರ ಮಗಳು ಹೆಣ್ಣಲ್ಲ’, 2023ರಲ್ಲಿ ಪ್ರಕಟವಾದ `ಹೆಣ್ಣು ಹದ್ದಿನ ಸ್ವಯಂವರ’ ಮಹಿಳಾ ಬದುಕಿನ ವಿವಿಧ ತಲ್ಲಣಗಳ ಮುಖವಾಗಿ ಕಥೆಗಳು ರೂಪು ಪಡೆಯುತ್ತದೆ. ಬಾನು ಅವರ ಬರಹಗಳನ್ನು ಟೀಕಿಸುವ ವರ್ಗವೂ ಇದೆ. ಟೀಕೆಗಳನ್ನೂ ಆರೋಗ್ಯಕರವಾಗಿ ಸ್ವೀಕರಿಸಿದ ದಿಟ್ಟೆ ಅವರು.

    `ಬೂಕರ್ ಪ್ರಶಸ್ತಿ’ಯನ್ನು ಸಮಾನವಾಗಿ ಹಂಚಿಕೊAಡ ಇಬ್ಬರು ಸಹೋದರಿಯರು ಸಮಾಜಕ್ಕೆ ಸೌಹಾರ್ದತೆಯ ಜೋಡಿಯಾಗಿ ಮಿಂಚಿದ್ದಾರೆ. ಅಪ್ಪಟ ಭಾರತೀಯ ಸಂಸ್ಕೃತಿಯ ಸೀರೆಯಲ್ಲಿ ಈ ಪ್ರಶಸ್ತಿಯನ್ನು ಲಂಡನ್‌ನಲ್ಲಿ ಸ್ವೀಕರಿಸಿದ ಸೊಬಗು ಕಣ್ಣು ತುಂಬಿತು. ನಾನಂತೂ ಬಾನು ಅವರನ್ನು ಸಲ್ವಾರ್ ವಸ್ತçದಲ್ಲೇ ಹೆಚ್ಚು ನೋಡಿದ್ದು. ಪ್ರಶಸ್ತಿ ಪಡೆಯುವಾಗ ಭಾರತೀಯ ನಾರಿಯಂತೇ ಕಾಂಜೀವರA ಸೀರೆಯಲ್ಲಿ ಇಬ್ಬರನ್ನೂ ಕಂಡು ಖುಶಿ ಅನಿಸಿತು. `ಅನುಪಮ’ ಬಳಗದ ಓದುಗರ ಹಾಗೂ ಸಂಪಾದಕ ಬಳಗದಿಂದಲೂ ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿಯವರಿಗೆ ಹಾರ್ಧಿಕ ಶುಭಾಶಯಗಳನ್ನು ಕೋರುತ್ತಾ `ಎದೆಯ ಹಣತೆ’ಯಾಗಿ ಮಹಿಳಾ ವರ್ಗದ ಧ್ವನಿಯಾಗಿ ತಮ್ಮ ಲೇಖನದಿಂದ, ಧ್ವನಿಯಿಂದ ಮುನ್ನಡೆ ಸಾಧಿಸುವಂತಾಗಲಿ. ಯಾವುದೇ `ಪ್ರಶಸ್ತಿ’ ಪುರಸ್ಕಾರಗಳು `ಸ್ವಂತ’ಕ್ಕಾಗಿ ಇರುವುದಕ್ಕಿಂತಲೂ ಸಮಾಜದ ಏಳಿಗೆಗಾಗಿ, ಒಳಿತಾಗಿ ಲಭಿಸುವಂತಹದಾಗಿರುತ್ತದೆ ಎಂಬ ನನ್ನ ಪತಿಯವರ ಒಂದು ಉಪದೇಶ ನಾನು ಸದಾ ಕೇಳಿದ್ದೆ. ಮಹಿಳೆಯರ ಬಗ್ಗೆ `ನ್ಯಾಯ’ ಇಡುವಂತಾಗಲಿ ಎಂಬ ಆಶಯ ನಮ್ಮದು.

    ಪ್ರಶಸ್ತಿ ಬಗ್ಗೆ ಮಾತುಗಳು

    ಬೂಕರ್ ಪ್ರಶಸ್ತಿ ಸ್ವೀಕಾರದ ವೇಳೆ ಬಾನು ಮುಷ್ತಾಕ್ ಹೇಳಿದ ಮಾತು “ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಒಬ್ಬ ವ್ಯಕ್ತಿಯಾಗಿ ಸ್ವೀಕರಿಸುತ್ತಿಲ್ಲ. ಬದಲಾಗಿ ಅನೇಕರೊಂದಿಗೆ ಸೇರಿ ಎತ್ತಿದ ಧ್ವನಿಯಾಗಿ ಸ್ವೀಕರಿಸುತ್ತಿದ್ದೇನೆ. ನಾನು ಸಂತೋಷವಾಗಿದ್ದೇನೆ. ನನಗಾಗಿ ಮತ್ತು ವೈವಿಧ್ಯತೆಯ ಹಾಗೂ ಒಳಗೊಳ್ಳುವಿಕೆಯಿಂದ ತುಂಬಿರುವ ಇಡೀ ಜಗತ್ತಿಗಾಗಿ…” ಅಂದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೂಕರ್ ಪ್ರಶಸ್ತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ಸರಕಾರದ ವತಿಯಿಂದ ಅವರನ್ನೂ, ದೀಪಾ ಭಾಸ್ತಿಯವರನ್ನು ಅದ್ಧೂರಿಯಾಗಿ ಸನ್ಮಾನಿಸಿದ್ದು ಸ್ವಾಗತಾರ್ಹ. ಇದು ಕರ್ನಾಟಕಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅತ್ಯಂತ ಹೆಮ್ಮೆಯ ವಿಷಯ. ಬಾನು ಮುಷ್ತಾಕ್ ಬಂಡಾಯ ಸಾಹಿತ್ಯ ಚಳವಳಿಯ ಮೂಲಕ ಬದ್ಧತೆಯಿಂದ ಬೆಳೆದು ಬಂದ ಲೇಖಕಿ ಎಂಬ ಹೆಮ್ಮೆ ನನಗೆ ಎಂದು. ಪ್ರೊ. ಬರಗೂರು ರಾಮಚಂದ್ರಪ್ಪ ನಾಡೋಜ ಹಿರಿಯ ಸಾಹಿತಿ ಹೇಳಿದರು. ಅರವಿಂದ ಅಡಿಗ ಬಳಿಕ ಕರ್ನಾಟಕದ ಎರಡನೇ ಸಾಹಿತಿಗೆ ಕನ್ನಡದ ಮೊತ್ತ ಮೊದಲ ಕೃತಿಗೆ ಈ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ ಸಂದಿದೆ.

    ರಾಹುಲ್ ಗಾಂಧಿಯವರು ಈ ಬೂಕರ್ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಮತ್ತು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿ ಇಬ್ಬರು ಸಾಧಕಿಯರಾದ ಲೇಖಕಿಯರಿಗೆ ಅಭಿನಂದನೆ ಹೇಳಿದರು.

    ಕಥೆ ಬೂಕರ್ ಪ್ರಶಸ್ತಿ ಗೆದ್ದ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಕಥೆಯಲ್ಲಿ ಏನಿದೆ? ಕಥೆಯ ಸಾರಾಂಶ ಇಲ್ಲಿದೆ.

    ಓರ್ವ ಹೆಣ್ಣು ಮಗಳಿಗೆ ತಾನು ಇನ್ನೂ ಓದಬೇಕು ಎಂಬ ಆಶೆ ಇರುತ್ತದೆ. ಮದುವೆಗೆ ಮೊದಲು ತನ್ನಾಸೆಯನ್ನು ಮನೆಯವರಿಗೆ ಹೇಳಿದರೂ ಪಾಲಕರು ಅವಳಿಗೆ ಮದುವೆಯ ಒತ್ತಡ ಹಾಕುತ್ತಾರೆ. ವಿವಾಹದ ನಂತರ ಅವಳಿಗೆ ಮೂರು ಮಕ್ಕಳಾಗುತ್ತದೆ. ತನ್ನ ಗಂಡ ಬೇರೊಂದು ಮಹಿಳೆಯ ಸಂಪರ್ಕದಲ್ಲಿರುವುದು ಕಥಾ ನಾಯಕಿಗೆ ದುಃಖ, ನೋವು ತರುತ್ತದೆ. ಸಹಿಸಲು ಆಗುವುದಿಲ್ಲ ಪತಿಯ ಪರಸ್ತಿçÃಯ ಸಂಬAಧ. ತನ್ನ ಮಕ್ಕಳನ್ನು ಕರೆದುಕೊಂಡು ತವರಿಗೆ ಮರಳುತ್ತಾಳೆ. ತವರಿನಲ್ಲೂ ಅವಳಿಗೆ ಸಾಂತ್ವನ ಹೇಳುವವರಿಲ್ಲ. ಸಮಸ್ಯೆಯನ್ನು ಪರಿಹರಿಸುವವರಿಲ್ಲ. ತನ್ನ ದುಃಖಿತ ಬದುಕನ್ನು ಅವಳು ಅಂತ್ಯ ಮಾಡಲು ನಿರ್ಧರಿಸುತ್ತಾಳೆ. ಅಂತಿಮವಾಗಿ ಅವಳು `ಆತ್ಮಹತ್ಯೆ’ಗೆ ಸಿದ್ಧಳಾಗುತ್ತಾಳೆ. ತನ್ನ ಮೂರು ಮಕ್ಕಳ ಕಣ್ಣು ತಪ್ಪಿಸಿ ಆಕೆ ಸಾಯಲು ಮೈಗೆ ಬೆಂಕಿ ಹಚ್ಚುವ ಪ್ರಯತ್ನದಲ್ಲಿ ಇದ್ದಾಗ “ಅಮ್ಮೀ…” ಎಂಬ ಕರೆಗೆ ಕೈಯಲ್ಲಿದ್ದ ಬೆಂಕಿ ಪೊಟ್ಟಣ ಜಾರಿ ಕೆಳಗೆ ಬೀಳುತ್ತದೆ. ಅಪ್ಪನನ್ನು ಕಳೆದುಕಂಡ ನಮ್ಮನ್ನು ಪುನಃ ಅಮ್ಮನಿಲ್ಲದ ತಬ್ಬಲಿಯನಾಗಿಸಲು ಹೊರಟಿದ್ದೀಯಾ? ಅಪ್ಪನಿಗಾಗಿ ಸಾಯಲು ಸಿದ್ಧರಾದ ನೀನು ನಮಗಾಗಿ ಬದುಕಲು ಸಾಧ್ಯವಿಲ್ಲವೇ? ನಮಗೆ ನೀನು ಬೇಕು, ನಮ್ಮನ್ನು ತಬ್ಬಲಿ ಮಾಡಬೇಡಾ ಅಮ್ಮೀ… ಮಗಳು ಸಲ್ಮಾ ಮಾತಿನಿಂದ ವಿಚಲಿತಳಾದ ತಾಯಿ ಮೆಹರೂನ್ ಹೆಪ್ಪುಗಟ್ಟಿದ ದುಃಖವು ಒಮ್ಮೆಲೇ ಮಗಳ ಮಾತಿನಿಂದ ಕೊಚ್ಚಿಕೊಂಡು ಹೋದಂತೇ ನಡುಗಿ ಹೋದಳು. ದೊಡ್ಡ ಮಗಳು ಪುಟ್ಟ ಮಗುವನ್ನು ತಾಯಿಯ ಕಾಲಡಿಯಲ್ಲಿ ಹಾಕಿದ್ದಳು. ಆಳುತ್ತಿದ್ದ ಹಸುಗೂಸನ್ನು ತಾಯಿ ಎತ್ತಿಕೊಂಡು ಎದೆಗೆ ಅವುಚಿಕೊಳ್ಳುತ್ತಾಳೆ. ಎತ್ತರಕ್ಕೆ ಬೆಳೆದಿದ್ದ ದೊಡ್ಡ ಮಗಳು ಗೆಳತಿಯಂತೇ ಅಮ್ಮನಿಗೆ ಸಾಂತ್ವನ ಹೇಳಿದಾಗ ತಾಯಿ ಮೆಹರೂನ್ `ಕ್ಷಮಿಸು ಕಂದಾ’ ಎಂದು ಮಕ್ಕಳ ಮುಂದೆ ತಲೆತಗ್ಗಿಸುತ್ತಾಳೆ. ತಾಯಿಯ ಆರಿ ಹೋದ ಎದೆಯ ಹಣತೆಯನ್ನು ಮಕ್ಕಳ ಪ್ರೀತಿ ಪುನಃ ಬೆಳಗುವಂತೇ ಮಾಡುವ ಈ `ಹಾರ್ಟ್ ಲ್ಯಾಂಪ್’ ಕಥೆಯು ಅಸಹಾಯಕ ತಾಯಿ ಓರ್ವಳ ಪಾಲಿಗೆ ಮಕ್ಕಳೇ ದೀಪವಾಗಿ ಅಮ್ಮನನ್ನು ಮರು ಬದುಕಿಗೆ ಮರಳಿ ಕರೆದೊಯ್ಯುವುದೇ ಕಥೆಯ ಸಾರಾಂಶ. ಈ ಕಥೆಯನ್ನು ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಗೊಳಿಸಿ ಬೂಕರ್ ಪ್ರಶಸ್ತಿಯ ತನಕ ಕೊಂಡೊಯ್ಯಲು ಲೇಖಕಿ ದೀಪಾ ಭಾಸ್ತಿಯ ಸಹಕಾರ ಇಲ್ಲಿ ಹೆಚ್ಚು ಮಾನ್ಯತೆ ಪಡೆಯುತ್ತದೆ. ಬಹುಶಃ ಕನ್ನಡದ ಬರಹಗಾರರ ಕಥೆ, ಕಾದಂಬರಿಯನ್ನು ಹೀಗೆ ಇಂಗ್ಲಿಷ್‌ಗೆ ಅನುವಾದ ಮಾಡಿದರೆ ವಿಶ್ವದ ಶ್ರೇಷ್ಠವಾದ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಆಯ್ಕೆ ಆಗಲೂಬಹುದು. ಇನ್ನಾದರೂ ಬಾನು ಮುಷ್ತಾಕ್‌ರ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ಸಾಹಿತ್ಯ ಕ್ಷೇತ್ರದಲ್ಲಿ ಸಿಗುವಂತಾಗಲಿ.

    ಶಹನಾಝ್ ಎಂ.

  • ಋತು ಚಕ್ರಪೂರ್ವ (ಪ್ರಿಮೆನ್ಸ್ಟ್ರುವಲ್) ಸಿಂಡ್ರೋವ್

    ಋತು ಚಕ್ರಪೂರ್ವ (ಪ್ರಿಮೆನ್ಸ್ಟ್ರುವಲ್) ಸಿಂಡ್ರೋವ್

    ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಎನ್ನುವುದು ಅನೇಕ ಮಹಿಳೆಯರು ತಮ್ಮ ಮುಟ್ಟಿನ ಮೊದಲು ಅನುಭವಿಸುವ ದೈಹಿಕ ಮತ್ತು ಮಾನಸಿಕ ಲಕ್ಷಣಗಳ ಒಂದು ಗುಂಪು. ಇದು ಮುಟ್ಟಿನ ಸುಮಾರು ಒಂದು ಅಥವಾ ಎರಡು ವಾರಗಳ ಮೊದಲು ಪ್ರಾರಂಭವಾಗಿ, ಮುಟ್ಟು ಪ್ರಾರಂಭವಾದ ಕೂಡಲೇ ಅಥವಾ ಅದರ ನಂತರ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಸ್ಥಿತಿಯಾಗಿದ್ದು, ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಅನುಭವಿಸುತ್ತಾರೆ.

    ಪಿ.ಎಂ.ಎಸ್.ನ ಲಕ್ಷಣಗಳು
    ಪಿ.ಎಂ.ಎಸ್.ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ತೀವ್ರತೆಯೂ ಭಿನ್ನವಾಗಿರಬಹುದು. ಸಾಮಾನ್ಯ ದೈಹಿಕ ಲಕ್ಷಣಗಳೆಂದರೆ ಸ್ತನಗಳ ನೋವು, ಹೊಟ್ಟೆ ಉಬ್ಬುವುದು, ತಲೆನೋವು, ದೇಹದ ನೋವು, ಆಯಾಸ ಮತ್ತು ನಿದ್ರಾಹೀನತೆ ಸೇರಿವೆ. ಮಾನಸಿಕ ಲಕ್ಷಣಗಳಲ್ಲಿ ಮನಸ್ಥಿತಿ ಬದಲಾವಣೆಗಳು (Mood Swings)- ಒಂದು ಕ್ಷಣ ಸಂತೋಷ, ಇನ್ನೊಂದು ಕ್ಷಣ ದುಃಖ ಅಥವಾ ಕಿರಿಕಿರಿ, ಆತಂಕ, ಖಿನ್ನತೆ, ಅಸಮಾಧಾನ ಮತ್ತು ಏಕಾಗ್ರತೆಯ ಕೊರತೆ ಇತ್ಯಾದಿ ಸೇರಿವೆ. ಕೆಲವು ಮಹಿಳೆಯರು ಆಹಾರದ ಹಂಬಲ ಅಥವಾ ಹಸಿವಿನಲ್ಲಿ ಬದಲಾವಣೆಗಳನ್ನೂ ಸಹ ಅನುಭವಿಸಬಹುದು.

    ಪ್ರಿಮೆನ್ಸ್ಟ್ರುವಲ್ ಡಿಸ್ಪೂರಿಕ್ ಡಿಸಾರ್ಡರ್ (PMDD)
    ಇದು ಪಿ.ಎಂ.ಎಸ್.ನ ತೀವ್ರತರಹ ರೂಪ. ಪಿ.ಎಂ.ಡಿ.ಡಿ.ನಲ್ಲಿ ಪಿ.ಎಂ.ಎಸ್.ನ ಲಕ್ಷಣಗಳ ಜೊತೆಗೆ ತೀವ್ರತರಹದ ಕಿರಿಕಿರಿ, ಸಿಟ್ಟಾಗುವಿಕೆ, ಉದ್ವಿಗ್ನತೆ ಅಥವಾ ಖಿನ್ನತೆ ಕಾಣಿಸಿಕೊಳ್ಳಬಹುದು ಮತ್ತು ಈ ಲಕ್ಷಣಗಳು ಅವರ ದೈನಂದಿನ ಚಟುವಟಿಕೆಗಳನ್ನು ಭಾದಿಸಬಲ್ಲಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಬಹುದು.

    ಕಾರಣಗಳು
    ಪಿ.ಎಂ.ಎಸ್.ಗೆ ನಿಖರವಾದ ಕಾರಣ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಮುಟ್ಟಿನ ಚಕ್ರದ ಸಮಯದಲ್ಲಿ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಂಬಲಾಗಿದೆ. ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್‌ಗಳ ಬದಲಾವಣೆಗಳಿಗೆ ದೇಹದಲ್ಲಿ ಉಂಟಾಗುವ ಅಸಹಜ ಪ್ರತಿಸ್ಪಂದನೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಮಿದುಳಿನ ರಾಸಾಯನಿಕಗಳಲ್ಲಿ ಒಂದಾದ ಸೆರೆಟೊನಿನ್ ಮೇಲೆ ಉಂಟಾಗುವ ಪ್ರಭಾವವೂ ಪಿ.ಎಂ.ಎಸ್. ಹಾಗೂ ಪಿ.ಎಂ.ಡಿ.ಡಿ. ಉಂಟಾಗುವಲ್ಲಿ ಪಾತ್ರ ವಹಿಸಬಹುದಾಗಿದೆ. ಋತುಚಕ್ರದ ಅವಧಿಯುದ್ಧಕ್ಕೂ ಸೆರೆಟೊನಿನ್ ಮಟ್ಟದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಕೆಲವು ಮಹಿಳೆಯರು ಈ ಬದಲಾವಣೆಗಳಿಗೆ ಸೂಕ್ಷ್ಮಸಂವೇದಿಯಾಗಿರುತ್ತಾರೆ.

    PMS ನಿರ್ವಹಣೆ ಹೇಗೆ?
    PMS ಸಾಮಾನ್ಯವಾಗಿ ಗಂಭೀರ ಆರೋಗ್ಯ ಸಮಸ್ಯೆಯಲ್ಲವಾದರೂ, ಅದರ ಲಕ್ಷಣಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಈ ಲಕ್ಷಣಗಳನ್ನು ನಿರ್ವಹಿಸಲು ಹಲವಾರು ಮಾರ್ಗಗಳಿವೆ:

    • ಆರೋಗ್ಯಕರ ಜೀವನ ಶೈಲಿ: ಸಮತೋಲಿನ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಾಕಷ್ಟ ನಿದ್ರೆ ಮಾಡುವುದು ಪಿ.ಎಂ.ಎಸ್. ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    • ಒತ್ತಡ ನಿರ್ವಹಣೆ: ಯೋಗ, ಧ್ಯಾನ, ಉಸಿರಾಟದ ವ್ಯಾಯಮಗಳು ಅಥವಾ ವಿಶ್ರಾಂತಿ ತಂತ್ರಗಳು (Relaxation techniques) ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲು ಮತ್ತು ಮಾನಸಿಕ ಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡಬಹುದು.
      ಆಹಾರ ಪದ್ಧತಿ: ಕೆಫೇನ್, ಉಪ್ಪು, ಸಕ್ಕರೆ ಮಿತವಾಗಿ ಬಳಸಿ ಮತ್ತು ಮದ್ಯಪಾನದಿಂದ ದೂರವಿರಿ.
    • ವೈದ್ಯರ ಸಲಹೆ: ಲಕ್ಷಣಗಳು ತೀವ್ರವಾಗಿದ್ದರೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
    • ಹೋಮಿಯೋಪತಿ ಚಿಕಿತ್ಸೆ: ಹೋಮಿಯೋಪತಿ ಚಿಕಿತ್ಸಾ ವಿಧಾನದಲ್ಲಿ ಪಿ.ಎಂ.ಎಸ್. ಸಮಸ್ಯೆಯನ್ನು ನಿವಾರಿಸಲು ಅನೇಕ ಪರಿಣಾಮಕಾರಿ ಔಷಧಗಳು ಲಭ್ಯವಿದೆ. ಹಾಗೂ ಇತರೆ ಔಷಧಗಳಂತೆ ಇದನ್ನೂ ಸೇವಿಸುದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗೂ ಯಾವುದೇ ಬಗೆಯ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯವಿದೆ.

    • ಡಾ| ಅಲ್‌ಫ್ರೀಡಾ ಲವಿನ ಪಿಂಟೊ,
      ಹೋಮಿಯೋಪತಿ ತಜ್ಞೆ, ವೆಲ್‌ಕೇರ್ ಹೋಮಿಯೋಪತಿ, ಮಂಗಳೂರು
      ಮೊ: 9449300306
  • ಕನಸುಗಳು ಕರಟಿ ಭಸ್ಮವಾದ ದುರಂತ ಯಾತ್ರೆ!

    ಕನಸುಗಳು ಕರಟಿ ಭಸ್ಮವಾದ ದುರಂತ ಯಾತ್ರೆ!

    ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೊರಟ ಆ ವಿಮಾನದಲ್ಲಿ ನೂರಾರು ಕನಸುಗಳನ್ನು ಹೊತ್ತ ಪ್ರಯಾಣಿಕರಿದ್ದರು. ನಗು ನಗುತ್ತಾ ತಮ್ಮ ತವರಿನಿಂದ ಹೊರಟವರು, ತಮ್ಮ ಬಂಧುಗಳನ್ನು ಆಲಂಗಿಸಿಕೊಡು ಬಹುದೂರದ ಪ್ರದೇಶಕ್ಕೆ ಹೋಗುವಾಗ ಬಿಕ್ಕಿ ಬಿಕ್ಕಿ ಅತ್ತವರು, ನಗುತ್ತಾ ಟಾಟಾ ಹೇಳಿದವರು, ಭವಿಷ್ಯದ ಖುಶಿಯ ಕನಸನ್ನು ಹೊತ್ತು ಆ ವಿಮಾನವನ್ನು ಏರಿ ಸಂಭ್ರಮ ಪಟ್ಟವರು… ಮುಂದೆ ಏನಾಗುತ್ತೋ ಎಂಬ ಭೀತಿ ಇಲ್ಲದೇ ನಿರಾಳವಾಗಿ ಸೀಟಿನಲ್ಲಿ ಒರಗಿ ಸೆಲ್ಫಿ ತೆಗೆದವರು ಕೆಲವೇ ನಿಮಿಷದಲ್ಲಿ ಸುಟ್ಟು ಕರಕಲಾಗಿ ಭಸ್ಮವಾಗಿ ಬಿಟ್ಟರು!

    ತಾ. 12-6-25 ಒಂದು ಕರಾಳ ದಿನವಾಗಿತ್ತು ಭಾರತಕ್ಕೆ. ಟಿ.ವಿ. ನ್ಯೂಸ್‌ಗಳು, ಸೋಶಿಯಲ್ ನ್ಯೂಸ್‌ಗಳು ಈ ವಿಮಾನದ ಅಪಘಾತದ ಬಗ್ಗೆ ಹೇಳ ತೊಡಗಿದಾಗ, ದೃಶ್ಯಗಳನ್ನು ಕಂಡಾಗ ಕುಳಿತಲ್ಲೇ ಶಿಲೆಯಂತಾಗಿದ್ದೆ. ಅದೆಂತಹ ಭೀಕರ ದೃಶ್ಯ! ವಿಮಾನ ತನ್ನ ಒಡಲಿನವರ ಸಾವಿಗೆ ಕಾರಣವಾಗುವುದರ ಜೊತೆಗೆ ಈ ವಿಮಾನಕ್ಕೆ ಸಂಬAಧವೇ ಇಲ್ಲದೇ ತಮ್ಮ ಹಾಸ್ಟೆಲ್‌ನಲ್ಲಿ ಕುಳಿತು ಊಟ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಬಲಿ ಪಡೆದಿತ್ತು! ಹಾಸ್ಟೆಲ್ ಮೇಲೆ ಭಾರೀ ಶಬ್ಧದೊಂದಿಗೆ ಅಪ್ಪಳಿಸಿದ ಬೋಯಿಂಗ್ |7| ವಿಮಾನ ಕಟ್ಟಡದ ಮೇಲೆ ಬಿತ್ತು. ಬೆಂಕಿಯ ಗೋಲದಲ್ಲಿ ಆಕಾಶದತ್ತೆರಕ್ಕೆ ಕಪ್ಪು ಹೊಗೆ ಎದ್ದಿತ್ತು. 274 ಜನರು ಸಜೀವ ದಹನ ಆಯಿತು. ಪೈಲೆಟ್ ಕೊನೆಯ ಕ್ಷಣ ಅಸಹಾಯಕನಾಗಿ `ಮೇಡೇ’ ಎಂದು ಕೂಗುತ್ತಿದ್ದದ್ದು (ನಮಗೆ ನೆರವು ಬೇಕು) ಕೇಳಿ ಬಂತು. ವಿಮಾನದ ಪತನ ಇಡೀ ವಿಶ್ವದಲ್ಲೇ ಬೆರಗು ಹುಟ್ಟಿಸಿತ್ತು.

    2010ರಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ದುಬಾಯಿಯಿಂದ ಮುಂಜಾನೆಯಲ್ಲಿ ಬಂದ ವಿಮಾನ ಲ್ಯಾಂಡ್ ಆಗುವಾಗ ರನ್‌ವೇಯಿಂದ ಜಾರಿ ಆಳವಾದ ಕಂದಕಕ್ಕೆ ಬಿತ್ತು. ಆಗ ಬೆಂಕಿಯ ಜ್ವಾಲೆಯೊಂದಿಗೆ ಭೀಕರವಾದ ದೃಶ್ಯ ಕಂಡು ಬಂತು. ವಿಮಾನದಲ್ಲಿದ್ದ ಪ್ರಯಾಣಿಕರು ಬೆಂದು ಕರಟಿ ಹೋಗಿದ್ದರು. ಬೆರಳೆಣಿಕೆಯಷ್ಟು ಪ್ರಯಾಣಿಕರು ಬದುಕಿ ಉಳಿದಿದ್ದರು ಅಂದು. ಅದೇ ದೃಶ್ಯ ಬೆಂಕಿಯಲ್ಲಿ ಕರಟಿದ ಮಾನವರ ದೇಹಗಳು ಈಗಲೂ ಕಣ್ಣೆದುರು ಹಸಿಯಾಗಿ ಬಂತು. ಇಂತಹ ಭೀಕರ ಸಾವು ಯಾರಿಗೂ ಬಾರದಿರಲಿ. ಗೆಳತಿ ಶಾಹಿನ್ ಈ ಕರಾಳ ದಿನವನ್ನು ಹದಿನೈದು ವರ್ಷವಾದರೂ ಮರೆಯದೇ ದುಃಖಿಸುತ್ತಿರುತ್ತಾಳೆ. ಅವಳ ಪತಿ ಆ ನತದೃಷ್ಟ ವಿಮಾನದಲ್ಲಿದ್ದರು. ಅವರ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದ ಶಾಹಿನ್ ಮರುದಿನ ಮುಂಜಾವಿಗೆ ಬರುವ ತನ್ನ ಪತಿಯ ನಿರೀಕ್ಷೆಯಲ್ಲಿ ರಾತ್ರಿ ಕುಳಿತು ತನ್ನ ಎರಡೂ ಕೈಗೆ ಮೆಹಂದಿ ಹಚ್ಚಿದ್ದಳು. ಪತಿಯ ಪ್ರಿಯವಾದ ಬಸಲೆಪುಂಡಿಯನ್ನು ಬೆಳಗ್ಗಿನ ಉಪಹಾರಕ್ಕೆ ಸಿದ್ಧಪಡಿಸಿಟ್ಟಿದ್ದಳು. ಪತಿಯು ದುಬಾಯಿ ವಿಮಾನ ನಿಲ್ದಾಣದಲ್ಲಿದ್ದಾಗ ಹೇಳಿದ್ದ, “ಪ್ರಿಯೆ… ನೀನು ಪ್ರೀತಿಯಿಂದ ಕೊಟ್ಟ ಶರ್ಟ್ನ್ನೇ ನಾನು ಇಂದು ಧರಿಸಿದ್ದೇನೆ.” ಬಹುಶಃ ಆ ಮಾತೇ ಆತನ ಕೊನೆಯದಾಗಬಹುದು ಎಂದು ಶಾಹಿನ್‌ಗೆ ತಿಳಿದಿರಲಿಲ್ಲ. ತನ್ನ ಮಕ್ಕಳೊಂದಿಗೆ ಮುಂಜಾವಿಗೆ ವಿಮಾನ ನಿಲ್ದಾಣಕ್ಕೆ ಹೋದ ಶಾಹಿನ್‌ಗೆ ಅಲ್ಲಿಯ ವಾತಾವರಣ ನೋಡಿ ದಿಗಿಲಾಗಿತ್ತು. ಜನರು ಆಚೀಚೆ ಓಡಾಡುತ್ತಾ, “ವಿಮಾನ ಬಿತ್ತು” ಎನ್ನುವುದು ಮಾತ್ರ ಕೇಳಿಸಿತ್ತು. ಮತ್ತೆ ಆದದ್ದೆಲ್ಲಾ ಭೀಕರವಾದ ದುಃಸ್ವಪ್ನದಂತಾಗಿತ್ತು. ಕರಟಿ ಹೋದ ಶವಗಳನ್ನು ಒಂದಾಗಿ ತರುತ್ತಿರುವಾಗ ತನ್ನ ಪತಿಯ ಗುರುತನ್ನು ಪತ್ತೆ ಹಚ್ಚಲಾಗದಂತೇ ಎಲ್ಲವೂ ಕರಟಿ ಹೋಗಿತ್ತು. ಆಗ ಅವಳಿಗೆ ನೆನಪದಾದದ್ದು ತನ್ನ ಪತಿ ಅಂದು ಹಾಕಿದ್ದ ಶರ್ಟ್ ತಾನು ಪ್ರೆಸೆಂಟ್ ಮಾಡಿದ್ದು…! ಆಕೆಯ ಕಣ್ಣು ಒಂದು ಕರಟಿ ಹೋದ ಶರೀರದತ್ತ ನೆಟ್ಟಿತು. ಆ ಶರೀರದಲ್ಲಿ ಕೇವಲ ಒಂದು ಭಾಗದಲ್ಲಿ ಹಾಕಿದ್ದ ವಸ್ತç ಬೆಂಕಿ ಹಿಡಿಯದೇ ಉಳಿದಿತ್ತು. ಆ ತುಂಡು ವಸ್ತçದ ಗುರುತು ಹಿಡಿದ ಶಹೀನ್‌ಗೆ ಪತಿಯ ದೇಹ ದೊರಕಿತ್ತು! ಆಕೆಯು ಕುಸಿದು ಬಿದ್ದಳು. ಈ ಹದಿನೈದು ವರ್ಷದಲ್ಲಿ ಪ್ರತೀ ಮೇ ತಿಂಗಳು ಅವಳಿಗೆ ಈ ದೃಶ್ಯ ಹಸಿ ಹಸಿಯಾಗಿ ಕಾಡುತ್ತದೆ. ಅಹಮದಾಬಾದ್‌ನ ವಿಮಾನ ದುರಂತದ ದೃಶ್ಯಗಳನ್ನು ನೋಡುತ್ತಿದ್ದಾಗೇ ಶಾಹಿನ್ ಖಿನ್ನತೆಗೆ ಜಾರಿದ್ದಳು. ನನಗೆ ಕಾಲ್ ಮಾಡಿ ಬಹಳಷ್ಟು ಅತ್ತಳು. ಪತಿ ಇಲ್ಲದೇ ತನ್ನ ಮೂರು ಮಕ್ಕಳನ್ನು ಸಾಕಿ ಬೆಳೆಸಿ ವಿವಾಹ ಮಾಡಿದ ಆ ಕಷ್ಟಕರವಾದ ಸಮಯವನ್ನು ಮೆಲುಕು ಹಾಕಿಕೊಂಡಳು. ಮೂವತ್ತೆöÊದರ ಹರೆಯದಲ್ಲಿ ಆಕೆ ಪತಿಯನ್ನು ಕಳೆದುಕೊಂಡಿದ್ದಳು.

    ಅದೆಷ್ಟು ಕನಸುಗಳನ್ನು ಹೊತ್ತು ಲಂಡನ್‌ಗೆ ಹೊರಟಿರಬಹುದು ಜನರು. ಎಲ್ಲರದೂ ಒಂದೊAದು ದುಃಖಿತ ಕಥೆಗಳು. ಡಾಕ್ಟರ್ ಒಬ್ಬರು ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಲಂಡನ್‌ಗೆ ತಾನು ಖರೀದಿಸಿದ ಹೊಸ ಮನೆಗೆ ಶಾಶ್ವತವಾಗಿ ನೆಲೆಸಲು ಕರೆಯಲು ಬಂದು ಆ ಸುಂದರ ಕುಟುಂಬ ವಿಮಾನದಲ್ಲಿ ಕುಳಿತು ಸೆಲ್ಫಿ ತೆಗೆದು ತಮ್ಮವರಿಗೆ ಕಳಿಸಿದ್ದೇ ಕೊನೆಯ ಫೋಟೋ ಆಯಿತು. ನವವಧು ಒಬ್ಬಳು ತನ್ನ ಭಾವೀ ಕನಸನ್ನು ನನಸು ಮಾಡಲು ಪತಿಯನ್ನು ಸೇರಲು ಹೊರಟಿದ್ದಳು. ತನ್ನ ಪತ್ನಿಯ ಚಿತಾಭಸ್ಮವನ್ನು ಲಂಡನ್‌ನಿAದ ಭಾರತಕ್ಕೆ ತಂದು ಈ ನೆಲದಲ್ಲಿ ವಿಸರ್ಜಿಸಿ ಪುನಃ ಮರಳಿ ಲಂಡನ್‌ಗೆ ಹೋಗಲು ಈ ನತದೃಷ್ಟ ವಿಮಾನ ಹತ್ತಿದ್ದರು. ಲಂಡನ್‌ನಲ್ಲಿ ಅವರ ಎರಡು ಪುಟಾಣಿ ಮಕ್ಕಳನ್ನು ಬಿಟ್ಟು ಬಂದಿದ್ದರು. ಆ ಮುಗ್ಧ ಮಕ್ಕಳಿಗೆ ತಂದೆ ಶಾಶ್ವತವಾಗಿ ಬಾರದೇ ಹೋದದ್ದೂ ತಿಳಿಯಲಿಲ್ಲ! ಹೀಗೆ ನೂರಾರು ಹೃದಯ ಹಿಂಡುವ ಕಥೆಗಳು ಮಸಣ ಸೇರಿದೆ. ಗುಜರಾತಿನ ಮಾಜಿ ಸಿ.ಎಂ. ತನ್ನ ಪತ್ನಿಯನ್ನು ಕರೆತರಲು ಲಂಡನ್‌ಗೆ ಪ್ರಯಾಣಿಸಿದ್ದರು. ತಾಯಿ ಓರ್ವಳು ತನ್ನ ಮಕ್ಕಳನ್ನು ಕಾಣಲು ತೆರಳಿದ್ದಳು. ಬಕ್ರೀದ್ ಹಬ್ಬಕಾಗಿ ಊರಿಗೆ ಬಂದ ಒಂದೇ ಮನೆಯ ಐದು ಜನ ಗೋರಿ ಸೇರುವಂತಾಯಿತು!

    ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿಮಾನ ಅಪ್ಪಳಿಸಿದಾಗ `ಬಲಿ’ ಆದ ವಿದ್ಯಾರ್ಥಿಗಳ ಹಿಂದೆಯೂ ಹಲವು ಹೆತ್ತವರ ಭವಿಷ್ಯದ ಕನಸುಗಳಿವೆ. ಹೆತ್ತವರ ಈ ಕನಸು ಬೆಂಕಿಯ ಜ್ವಾಲೆಗೆ ಭಸ್ಮವಾದವು. ಎಷ್ಟೆಲ್ಲಾ `ಸಾಲ’ ಮಾಡಿ ಈ ಮಕ್ಕಳಿಗೆ ಮೆಡಿಕಲ್ ಕಲಿಸಲು ಹೆತ್ತವರು ತಮ್ಮ ಜೀವನವನ್ನು ಮುಡಿಪ್ಪಾಗಿಟ್ಟಿರಬಹುದು! ನನಸಾಗದ ಕನಸಿನ ಹೆಸರಿನಲ್ಲಿ `ಸಾಲ’ ತೀರಿಸಲು ಪುನಃ ದುಡಿಯುವ ಶ್ರಮ ಜೀವಿಗಳಾಗಿ ಆ ಹೆತ್ತವರು ಜೀವಂತ ಇರಬೇಕಾಗಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವುಗಳು! ಸಂಗಾತಿಯನ್ನು ಕಳೆದು ಕೊಂಡವರ ನೋವುಗಳು, ಹೆತ್ತವರನ್ನು, ಸಹೋದರ-ಸಹೋದರಿಯರನ್ನು ಕಳೆದುಕೊಂಡ ನೋವುಗಳು ಅದೆಷ್ಟು ಕುಟುಂಬದ ಆರ್ಥಿಕ ಸ್ತಂಭವೇ ಕುಸಿದು ಬಿದ್ದಿರಬಹುದು… ದುರಂತಗಳು ನಮ್ಮ ಕಣ್ಣ ಎದುರು ನಡೆಯುತ್ತಾ ಇದ್ದರೂ ನಾವು ಮಾನವರಾಗುವುದಿಲ್ಲ. ಸಾವಿನಲ್ಲೂ ರಾಜಕೀಯ ಮಾಡುವ ರಾಜಕಾರಣ ಇರುವ ದೇಶ ನಮ್ಮದು. ನೀಚ, ಕ್ರೂರ, ಮನಃಸ್ಥಿತಿ ಇರುವ ಮನುಷ್ಯರು ಸಾವನ್ನೂ ಸಂಭ್ರಮಿಸುತ್ತಾರೆ. “ಕೋಮು ದ್ವೇಷ” ಎಂಬುವುದು ಸಾವಿನಲ್ಲೂ ಪಾಠ ಕಲಿಯುವುದಿಲ್ಲ.

    ನಾವಿಂದು ಇಂತಹ ದುರಂತಗಳ ಹಿಂದಿನ ಕಾರಣಗಳನ್ನು ಅವಲೋಕಿಸಿದರೆ ಎಲ್ಲವೂ `ಭ್ರಷ್ಟಾಚಾರ’ದ ರಾಕ್ಷಸ ಕೈಗೆ ಒಳಪಟ್ಟಿರುವಂತಹದ್ದು. ನಮ್ಮ ವಿಮಾನಗಳ ಅವಸ್ಥೆ ಹೇಗಿದೆ ಎಂದರೆ ಲೇಖಕರಾದ ಇರ್ಶಾದ್‌ರವರು ನಮ್ಮ ಈ ಮಾಸಿಕದ ಲೇಖನದಲ್ಲಿ ಭಾರತದ ವಿಮಾನಗಳನ್ನು “ಹಾರಾಡುವ ಶವ ಪೆಟ್ಟಿಗೆಗಳು” ಎಂದು ಉಲ್ಲೇಖಿಸಿದ್ದಾರೆ. ನಿಜ… ಭಾರತದ ಹೆಚ್ಚಿನ ವಿಮಾನಗಳು ಯೋಗ್ಯವಾಗಿಲ್ಲ ಪ್ರಯಾಣಕ್ಕೆ. ಅಹಮದಾಬಾದ್‌ನ ವಿಮಾನದಲ್ಲಿದ್ದ ಓರ್ವ ಯುವಕ ಈ ದುರಂತದ ಕೆಲವೇ ನಿಮಿಷಕ್ಕೆ ಮೊದಲು ತಾನು ಲಂಡನ್‌ಗೆ ಪ್ರಯಾಣಿಸುವ ವಿಮಾನ ಬೋಯಿಂಗ್ ಎಐ 171ರ ಅಸ್ತವ್ಯವಸ್ಥೆಯ ಬಗ್ಗೆ ವೀಡಿಯೋ ಮಾಡಿದ್ದಾನೆ. ಎಸಿ ವರ್ಕ್ ಆಗ್ತಾ ಇಲ್ಲ ಎಂದು ಹಲವು ವಿಮಾನದಲ್ಲಿ ಆಸನಗಳೂ ಸರಿಯಾಗಿಲ್ಲ… ಕಳಪೆ ಗುಣಮಟ್ಟದ ಹಲವು ವಿಮಾನಗಳ ಬಗ್ಗೆ ಹಲವರು ದೂರಿ ಹೇಳಿರುತ್ತಾರೆ. ಪ್ಲಾಸ್ಟರ್ ಅಂಟಿಸಿದ ಕಿಟಕಿಗಳು, ಹಲವು ವಿಮಾಣಗಳ ಸ್ಥಿತಿಗತಿ ಉತ್ತಮವಾಗಿಲ್ಲ ಎಂದು ಪ್ರಯಾಣಿಕರು ದೂರುತ್ತಾ ಇರುತ್ತಾರೆ. ದುಬಾಯಿ, ಸೌದಿಯ ವಿಮಾನಗಳನ್ನು ಕಂಡವರಿಗೆ ಭಾರತದ ವಿಮಾನಗಳು `ಹಾರುವ ಶವ ಪೆಟ್ಟಿಗೆಗಳಾಗಿ’ ಕಾಣುವುದು ಸಹಜ.

    ಏರ್ ಇಂಡಿಯಾದ ಬೋಯಿಂಗ್ ಎಐ 171 ವಿಮಾನದಲ್ಲಿ 242 ಮಂದಿ ಪ್ರಯಾಣಿಕರಿದ್ದು ಒಬ್ಬನೇ ಒಬ್ಬ ಬದುಕಿ ಉಳಿದದ್ದು ಪವಾಡವೇ. ತಾಂತ್ರಿಕ ದೋಷವೇ ಕಾರಣ ಎಂದು ದುರಂತಕ್ಕೆ ಹೇಳಲಾಗುತ್ತಿದೆ. ಇಂತಹ ತಾಂತ್ರಿಕ ದೋಷಗಳಿರುವ ವಿಮಾನಗಳನ್ನು ಪ್ರಯಾಣಕ್ಕೆ ಸಜ್ಜುಗೊಳಿಸುವ ಮೂಲಕ ವಿಮಾನ ಸಂಸ್ಥೆಗಳು ಜನರ ಜೀವದೊಂದಿಗೆ ಆಟ ಆಡುತ್ತಿರುವುದು ನಮ್ಮ ದುರಂತ.

    “ಗುಡ್ ಬೈ ಇಂಡಿಯಾ” ಎಂದು ಹೇಳಿದ ಬ್ರಿಟಿಶ್ ಯುವಕರು ಶಾಶ್ವತವಾಗಿ ಇಡೀ ವಿಶ್ವಕ್ಕೇ ಗುಡ್ ಬೈ ಹೇಳಿದ್ದಾರೆ. ಅವರ ಸಂತಸದ ಮುಖ ವೀಡಿಯೋದಲ್ಲಿ ವೈರಲ್ ಆಗಿದೆ. ಯಾಕಾಗಿ ಭಾರತಕ್ಕೆ ತಮ್ಮ ಮಕ್ಕಳು ಹೋದರು ಎಂಬ ಸಂಕಟ ಅವರ ಹೆತ್ತವರಿಗೆ ಆಗಿರಬಹುದು. ಕ್ರಿಕೆಟ್ ಆಟಗಾರ ಒಬ್ಬರು ತಾನು ಇನ್ನು ಮುಂದೆ ಭಾರತದ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ್ದಾರೆ. ದುಬಾರಿ ಹಣ ಕೊಟ್ಟು ಟಿಕೇಟ್ ಖರೀದಿಸಿದರೂ ಒಂದು ಲಘು ಉಪಹಾರವನ್ನೂ ಕೊಡದ ದರಿದ್ರ ಸಂಸ್ಥೆ ಅಂದರೆ ಭಾರತದ ವಿಮಾನ ಸಂಸ್ಥೆ.

    ದುರAತ ಕಂಡ ವಿಮಾಣದಲ್ಲಿ ನತದೃಷ್ಟ ಎರಡು ಪೈಲಟ್‌ನಲ್ಲಿ ಒಬ್ಬರು ಮಂಗಳೂರು ಮೂಲದ ಕ್ಲೆöÊವ್ ಕುಂದರ್. ಅನುಭವೀ ಪೈಲಟ್‌ಗಳಿದ್ದರೂ ವಿಮಾಣವೇ ಕಳಪೆ ಸ್ಥಿತಿಯಲ್ಲಿದ್ದಾಗ ದುರಂತ ಸಂಭವಿಸುವುದು ಸತ್ಯ.

    ನಮ್ಮ ದೇಶದ ಶ್ರೀಮಂತ ಲಕ್ಷಾಧೀಶರಿಗೆಲ್ಲಾ ಹೆಚ್ಚಿನ ರಾಜಕಾರಣಿ, ಸೆಲೆಬ್ರಿಟಿಗಳಿಗೆಲ್ಲಾ ಏರ್‌ಜೆಟ್, ಹೆಲಿಕಾಫ್ಟರ್ ಇತ್ಯಾದಿ ಸುಸಜ್ಜಿತವಾದ ಖಾಸಗಿ ವಿಮಾನಗಳಿರುತ್ತದೆ. ಅಂತಹ ಸೌಲಭ್ಯ ಇರುವವರಿಗೆ ಜನಸಾಮಾನ್ಯರು ಸಂಚರಿಸುವ ಕಳಪೆ ವಿಮಾನದ ಪರಿಚಯವೂ ಇರುವುದಿಲ್ಲ. ಅದಾನಿ-ಅಂಬಾನಿ, ಟಾಟಾ ಮುಂತಾದ ಉದ್ಯಮಿಗಳ ಕುಟುಂಬ ಇಂತಹ ವಿಮಾನವನ್ನೂ ಹತ್ತುವುದಿಲ್ಲ. ದುರಂತದಲ್ಲಿ ಮಡಿದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಟಾಟಾ ಸಂಸ್ಥೆ ಘೋಷಿಸಿದೆ. ಒಂದು ದುಃಖಿತ ಕುಟುಂಬದ ಸದಸ್ಯರು ಹೇಳಿದರು. ನಾವು ನಿಮಗೆ ಎರಡು ಕೋಟಿ ಕೊಡುತ್ತೇವೆ, ನಾವು ಕಳೆದುಕೊಂಡ ಪ್ರೀತಿಪಾತ್ರರನ್ನು ನಮಗೆ ಮರಳಿಕೊಡುವಿರಾ?! ಎಂದು. ಸತ್ಯ… ಬೆಲೆ ಕಟ್ಟಲಾಗದ `ಜೀವ’ವನ್ನೇ ಕಳೆದುಕೊಂಡವರಿಗೆ `ಕೋಟಿ’ಯ ಪರಿಹಾರ ಅವರಿಗಾದ `ನಷ್ಟ’ ತುಂಬಲಾರದು.

    ವಿಮಾನದಲ್ಲಿದ್ದ ಪ್ರಯಾಣಿಕರು, ಗಗನ ಸಖಿಗಳು, ವಿಮಾನ ಬಿದ್ದ ಪ್ರದೇಶದಲ್ಲಿದ್ದ ಅಮಾಯಕ ನಾಗರಿಕರು, ವಿದ್ಯಾರ್ಥಿಗಳು ಎಲ್ಲಾ ಆ ಕರಾಳ ದಿನದ `ದುರಂತ’ದ ನತದೃಷ್ಟ ಮನುಷ್ಯರು. `ಸಾವು’ ಪರಮ ಸತ್ಯ. ಹುಟ್ಟಿದವರೆಲ್ಲಾ ಸಾಯಲೇಬೇಕು. ಆದ್ರೆ… ಈ ರೀತಿಯ ಭೀಕರತೆಯಲ್ಲಿ ನಮ್ಮ `ಅಂತ್ಯ’ ಆಗದಿರಲಿ. ದೇವನು ನಮ್ಮ ಸಾವಿನ ವಿಧಿ ಬರಹವನ್ನು ಉತ್ತಮವಾಗಿ ಬರೆದಿರಲಿ ಎಂದು ಪ್ರಾರ್ಥಿಸುತ್ತೇನೆ.

    ಶಮು

  • ಹೋದ ಜೀವ ಮರಳಿ ಬರುವುದೇ…?

    ಹೋದ ಜೀವ ಮರಳಿ ಬರುವುದೇ…?

    12ನೇ ಜೂನ್ 2025ರಂದು ಗುಜರಾತಿನ ಸರದಾರ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನಿಗೆ ಪ್ರಯಾಣಕ್ಕಾಗಿ ಹಾರಾಟ ನಡೆಸಿದ ವಿಮಾನ ದುರಂತ ಅಂತ್ಯ ಕಂಡಿದೆ. ದುರಂತದಲ್ಲಿ 265 ಜೀವಗಳು ಬಲಿಯಾಗಿವೆ ಎಂಬ ಮಾಹಿತಿ ಹೊರ ಬಂದಿದೆ. ಇದು ವಾಯು ಯಾನದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ.
    ಗುಜರಾತಿನ ಅಹಮದಾಬಾದಿನ ಸರದಾರ ವಲ್ಲಭಬಾಯಿ ಪಟೇಲ್ ಅಂತರಾಷ್ಟಿçÃಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಬೋಯಿಂದ್ 787 ಡ್ರೀಮ್ ಲೈನರ್ ಮಧ್ಯಾಹ್ನ 1.30ಕ್ಕೆ ಲಂಡನಿಗೆ ತನ್ನ ಹಾರಾಟ ಪ್ರಾರಂಭಿಸುತ್ತದೆ. 9 ಗಂಟೆಗಳ ಸುದೀರ್ಘ ಪ್ರಯಾಣಕ್ಕೆ ಅಗತ್ಯವಾದ ಇಂಧನವು ವಿಮಾನದಲ್ಲಿತ್ತು. 169 ಭಾರತೀಯರು, 53 ಬ್ರಿಟಿಷರು, 7 ಮಂದಿ ಪೋರ್ಚುಗೀಸರು ಹಾಗೂ ಓರ್ವ ಕೆನಡಾ ಪ್ರಜೆಯು ವಿಮಾನದಲ್ಲಿದ್ದರು. 12 ಮಂದಿ ಸಿಬ್ಬಂದಿಗಳೂ ಇದ್ದರು. 8,200 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಪೈಲಟ್ ಂI – 171 ವಿಮಾಣವನ್ನು ಚಲಾಯಿಸುತ್ತಿದ್ದರು. ಹಾರಾಟ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಸ್ವಲ್ಪವೇ ಎತ್ತರಕ್ಕೇರಿದ ವಿಮಾನವು ಕೆಳಗೆ ಬರುತ್ತದೆ. ಮೇಲ್ಮುಖವಾಗಿ ಹಾರಬೇಕಾಗಿದ್ದ ವಿಮಾನ ಕೆಳ ಮುಖವಾಗುತ್ತದೆ. ರನ್‌ವೇಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪೈಲಟ್ ನಿಲ್ದಾಣಕ್ಕೆ ವಿಪತ್ತಿನ ಕರೆಯಾದ ಮೇಡೇ'ಯನ್ನು ಮಾಡಿರುತ್ತಾರೆ. ಅದಕ್ಕೆ ಉತ್ತರಿಸಿದ ನಿಲ್ದಾಣದ ಸಿಬ್ಬಂದಿಗೆ ಪೈಲಟ್ ಸಂಪರ್ಕ ದೊರೆಯುವುದಿಲ್ಲ. ಮೇಡೇ’ ಎನ್ನುವುದು ತೀರಾ ವಿಪತ್ತಿನ ಸಂದರ್ಭದಲ್ಲಿ ಪೈಲಟ್ ಮಾಡುವ ಕರೆಯಾಗಿದೆ. ತನ್ನಿಂದ ನಿಯಂತ್ರಣ ತಪ್ಪುತ್ತಿದೆ ಹಾಗೂ ಅಪಾಯದ ಮುನ್ಸೂಚನೆ ದೊರೆತಾಗ ಪೈಲಟ್ ನಿಲ್ದಾಣಕ್ಕೆ ಈ ಕರೆಯನ್ನು ಮಾಡಿದ್ದರು. ಆದರೆ ಇದಕ್ಕೆ ಸಮರ್ಪಕ ಉತ್ತರ ದೊರೆಯುವ ಮೊದಲೇ ವಿಮಾನ ಪತನಗೊಂಡಿತ್ತು. ಸ್ಫೋಟಗೊಂಡು ದೊಡ್ಡ ಬೆಂಕಿಯುAಡೆಯಾಗಿ ಮಾರ್ಪಟ್ಟಿತ್ತು. ದೀರ್ಘ ಪ್ರಯಾಣಕ್ಕಾಗಿ ಶೇಖರಿಸಿದ್ದ ಇಂಧನ ಅತ್ಯಧಿಕ ಪ್ರಮಾಣದ ಪರಿಣಾಮ ಅಗ್ನಿಯ ಜ್ವಾಲೆಯು ಹೆಚ್ಚಾಗಿತ್ತು. 242 ಪ್ರಯಾಣಿಕರ ಪೈಕಿ ಓರ್ವ ಪವಾಡ ಸದೃಶರಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ವಿಮಾನ ಅಹಮದಾಬಾದಿನ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲಿನ ಊಟದ ಹಾಲಿಗೆ ಅಪ್ಪಳಿಸಿದ ಪರಿಣಾಮ ಅಲ್ಲಿ ಊಟ ಮಾಡುತ್ತಿದ್ದ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ದುರ್ಘಟನೆಗೆ ಬಲಿಯಾಗಿದಾರೆ. 4 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯಿದೆ. ಂI – 171 ವಿಮಾನ ದುರ್ಘಟನೆಯನ್ನು ಕೇವಲ ಒಂದು ದುರ್ಘಟನೆ ಎಂದು ತಳ್ಳಿ ಬಿಡುವಂತಿಲ್ಲ. ವಿಮಾನದ ಒಂದು ಇಂಜಿನ್ ಹಾಳಾದರೆ ಇನ್ನೊಂದು ಇಂಜಿನ್ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ಕ್ಷಮತೆಯನ್ನು ಹೊಂದಿರುತ್ತದೆ. ಈ ವಿಮಾನದಲ್ಲಿ ಎರಡೂ ಎಂಜಿನ್‌ಗಳೂ ಏಕಕಾಲಕ್ಕೆ ಹೇಗೆ ಹಾಳಾದವು? ಸಮಸ್ಯೆ ಎಲ್ಲಿತ್ತು? ವಿಮಾನದ ತಾಂತ್ರಿಕ ಸಮಸ್ಯೆಗಳಾ? ಅಥವಾ ನಿರ್ವಹಣಾ ದೋಷವಾ? ಅಥವಾ ಪೈಲೆಟಿನ ದೋಷವಾ? ಪ್ರಶ್ನೆಗಳಿಗೆ ಉತ್ತರ ದೊರಕಬೇಕಾಗಿದೆ.
    ವಿಶ್ವದಾದ್ಯಂತ ಟೇಕ್ ಆಫ್ ಸಂದರ್ಭ ವಿಮಾನಗಳು ದುರಂತಕ್ಕೆ ಈಡಾಗುವ ಹಲವು ಪ್ರಕರಣಗಳು ನಮ್ಮ ಮುಂದಿದೆ. ಅದೇ ರೀತಿ ವಿಮಾನ ಇಳಿಯುವ ಸಂದರ್ಭ ಕೂಡಾ ದುರ್ಘಟನೆಗಳು ಸಂಭವಿಸಬಹುದು. 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ವಿಮಾನ ದುರಂತಕ್ಕೀಡಾಗಿ 185 ಮಂದಿ ಮೃತಪಟ್ಟಿದ್ದರು. 8 ಮಂದಿ ಆ ದುರ್ಘಟನೆಯಲ್ಲಿ ಬದುಕುಳಿದಿದ್ದರು. ಇಂದಿನ ದುರ್ಘಟನೆಯಲ್ಲಿ ಬಲಿಯಾದವರದು ಒಬ್ಬೊಬ್ಬದು ಒಂದೊAದು ಕಥೆ. ಖುಶಿಯಿಂದ ಬೀಳ್ಕೊಂಡ ಮನೆ ಮಂದಿಯನ್ನು ದುರಂತ. ಕಣ್ಣೀರಿನಲ್ಲಿ ಮುಳುಗಿಸಿದೆ. ಒಂದೆಡೆ ಮನೆಯವರನ್ನು ಕಳೆದುಕೊಂಡ ದುಃಖ, ಅದರ ಜೊತೆಗೆ ಮೃತದೇಹ ದೊರಕದೇ ಪರದಾಡಬೇಕಾದ ಪರಿಸ್ಥಿತಿ. ಸುಟ್ಟು ಕರಕಲಾಗಿರುವ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗಳ ಮೂಲಕ ಪರಿಶೀಲಿಸಿ ಕೌಟುಂಬಿಕರಿಗೆ ಹಸ್ತಾಂತರಿಸಲಾಗುತ್ತದೆ. ಜೊತೆಗೆ ತೆರೆದು ನೋಡಬೇಡಿ, ನೋಡುವಂತೆ ಇಲ್ಲ ಎಂಬ ಭಿನ್ನಹವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.
    ದುರಂತದ ತನಿಖೆ ಪ್ರಗತಿಯಲ್ಲಿದೆ. ಕಪ್ಪು ಪೆಟ್ಟಿಗೆ ದೊರೆತ ಬಳಿಕ ಪರಿಶೀಲನೆಯ ನಂತರ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭಿಸಬಹುದು. ಮೃತರಿಗೆ ಸರಕಾರ ತಲಾ 1 ಕೋಟಿ ಪರಿಹಾರ ಘೋಷಿಸಿದೆ. ಆದರೆ ಹೋದ ಜೀವ ಮರಳಿ ಬರುವುದೇ…?

  • ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

    ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

    ಬದುಕಿನದ್ದಕ್ಕೂ ದೊಡ್ಡ ಕನಸುಗಳನ್ನು ಕಂಡ ಅಪಾರ ದೂರದರ್ಶಿತ್ವ ಮತ್ತು ಬದ್ಧತೆಯಿದ್ದ ಕೆಎಂ ಶರೀಫ್ ಸಾಹೇಬರು ಇತ್ತೀಚೆಗೆ ಸೃಷ್ಟಿಕರ್ತನೆಡೆಗೆ ಪ್ರಯಾಣ ಬೆಳೆಸಿದರು. ಇವರು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾಗಿದ್ದ ನನ್ನ ತಂದೆಯವರಾದ ಇಬ್ರಾಹಿಮ್ ಸಈದ್ ರವರ ಹಿರಿಯಣ್ಣ. ನನ್ನ ದೊಡ್ಡಪ್ಪನವರಲ್ಲಿ ನಾನು ಗುರುತಿಸಿದ ಅತಿ ವಿಶೇಷತೆ ಸಹಜವಾದ ನಾಯಕತ್ವದ ಗುಣ. ಕೆಲಸವನ್ನು ಹಂಚುವುದು, ಅದನ್ನು ಮಾಡಿಸುವುದು, ಅದರ ಮೇಲ್ನೋಟ ವಹಿಸುವುದು, ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಪ್ರೇರೇಪಿಸುವುದು ಇವರ ವಿಶೇಷತೆಯಾಗಿತ್ತು. ಎಲ್ಲ ವಿಷಯಗಳಲ್ಲಿಯೂ ಗುಣಮಟ್ಟಕ್ಕೆ ಮಹತ್ವವನ್ನು ನೀಡುವುದು. ಕೆಲಸದಲ್ಲಿ ಬದ್ಧತೆ ಮತ್ತು ಶಿಸ್ತು ಯುವಕರನ್ನು ನಾಚಿಸುವಂತಿತ್ತು.

    ತಮ್ಮ ಯುವ ಪ್ರಾಯದಲ್ಲಿಯೇ ಇಸ್ಲಾಮಿನ ಬಗ್ಗೆ ಸರಿಯಾಗಿ ಅರಿತುಕೊಂಡು ಅದೊಂದು ಜೀವನ ವ್ಯವಸ್ಥೆ ಎಂದು ಒಪ್ಪಿಕೊಂಡು ಪ್ರಾಯೋಗಿಕವಾಗಿ ಜೀವನದುದ್ದಕ್ಕೂ ನಡೆದು ತೋರಿಸಿದ ಮಹಾನುಭಾವರು. ನಮ್ಮ ಕುಟುಂಬದ ಹಿರಿಯ ಸ್ಥಾನದಲ್ಲಿದ್ದ ಅವರಿಗೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆಯೂ ಕಾಳಜಿ ಇತ್ತು. ಕೇವಲ ಕಣ್ಣುಗಳನ್ನು, ಮುಖಭಾವವನ್ನು ನೋಡಿ ವ್ಯಕ್ತಿಯ ಸಮಸ್ಯೆಯನ್ನು ಗುರುತಿಸುವ ಮತ್ತು ಅದಕ್ಕೆ ಸೂಕ್ತವಾದ ಪರಿಹಾರವನ್ನು ಸೂಚಿಸುವ ಜೊತೆಗೆ ಕೈಲಾದ ಸಹಾಯ ಮಾಡುವ ವಿಶಾಲ ಹೃದಯಿಯಾಗಿದ್ದರು.

    ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು, ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ಗಮನಿಸುತ್ತಿದ್ದರು. ಮಕ್ಕಳ ಸಣ್ಣ ಸಾಧನೆಯನ್ನು ಸಂಭ್ರಮಿಸುತ್ತಿದ್ದರು. ಅವರಿಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿ ನಿಲ್ಲುತ್ತಿದ್ದರು.

    ಹೆಣ್ಣು ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಅವರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದ ಕೇರಳಕ್ಕೆ ಮಂಗಳೂರಿನ ಆಸುಪಾಸಿನ ಹೆಣ್ಣು ಮಕ್ಕಳು ಹೋಗುತ್ತಿರುವುದನ್ನು ಕಂಡು ಇಲ್ಲಿಯೇ ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಯೋಜನೆಗೆ 25 ವರ್ಷಗಳ ಹಿಂದೆ ಅಡಿಪಾಯ ಹಾಕಿದರು.

    ಗುಡ್ಡದಂತಹ ಸ್ಥಳದಲ್ಲಿ ಹೆಚ್ಚು ಜನವಾಸವಿಲ್ಲದ ಪ್ರದೇಶದಲ್ಲಿ ಒಂದು ವಿಶಾಲ ಭೂಮಿಯನ್ನು ಸಮಾನ ಮನಸ್ಕರ ಜೊತೆಗೂಡಿ ಖರೀದಿಸಿ ಮೊದಲು ಅದರ ಅಡಿಪಾಯವನ್ನು ಹಾಕಿದಾಗ ಅಲ್ಲಿ ನಡೆದ ಒಂದು ಸಮಾರಂಭದಲ್ಲಿ ಗುಡ್ಡದಿಂದ ಕೂಡಿದಂತಹ ಪ್ರದೇಶವನ್ನು ತೋರಿಸಿ ಮುಂದೊAದು ದಿನ ಇಲ್ಲಿ ಹೆಣ್ಣು ಮಕ್ಕಳಿಗೆ ಪಿಯುಸಿ ಡಿಗ್ರಿ ಮತ್ತು ಬಿಎಡ್ ಕಾಲೇಜುಗಳು ಸ್ಥಾಪನೆಯಾಗುತ್ತದೆ. ಇದು ಹೆಣ್ಣು ಮಕ್ಕಳಿಗಾಗಿರುವ ಯುನಿವರ್ಸಿಟಿಯಾಗುತ್ತದೆ ಎಂದು ನಮ್ಮಲ್ಲಿ ಕನಸನ್ನು ಬಿತ್ತಿದ್ದರು. ಆ ಸಮಾರಂಭದಲ್ಲಿ ದೊಡ್ಡಪ್ಪನವರ ಕಣ್ಣುಗಳಲ್ಲಿದ್ದ ಹೊಳಪನ್ನು ನಾನಿಂದು ನೆನಪಿಸುತ್ತಿದ್ದೇನೆ.

    ಹಿರಾ ಶಿಕ್ಷಣ ಸಂಸ್ಥೆಯ ಹಿಂದೆ ಹೆಜ್ಜೆ ಹೆಜ್ಜೆಗೂ ಪ್ರಯಾಣಿಸಿದರು. ಇಂದು ಈ ಶಿಕ್ಷಣ ಸಂಸ್ಥೆಯ ಪ್ರತಿಯೊಂದು ಕಲ್ಲುಗಳು ಅವರ ಪರಿಶ್ರಮ ಮತ್ತು ದೂರದರ್ಶತ್ವಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ. ಅಪಾರ ಸಂಖ್ಯೆ ವಿದ್ಯಾರ್ಥಿಗಳು ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಾಂತ ರೀತಿಯಲ್ಲಿ ಶಿಕ್ಷಣವನ್ನು ಮುಗಿಸಿ ಜಗತ್ತಿನ ವಿವಿಧ ಭಾಗಗಳಲ್ಲಿ ಪಸರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

    ಹೆಣ್ಣು ಮಕ್ಕಳು ತಲೆಯ ಮೇಲೆ ವಸ್ತç ಹಾಕಿದರೆ ಅದು ಶಾಲಾ ವಸ್ತç ಸಂಹಿತೆಗೆ ಅಪವಾದವಾಗುತ್ತದೆ ಎಂದು ಅಪಪ್ರಚಾರ ನಡೆಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಳ್ಳು ನೀರು ಬಿಡಲು ಬಯಸುತ್ತಿರುವ ಸಮಾಜದಲ್ಲಿ, ಹೆಣ್ಣು ಮಕ್ಕಳ ಪರವಾಗಿ ಸದಾ ತುಡಿಯುತ್ತಿದ್ದ ಒಂದು ಆದರ್ಶ ವ್ಯಕ್ತಿತ್ವ ಕೆ.ಎಂ. ಶರೀಫ್ ಸಾಹೇಬರು. ಅವರ ಅಗಲಿಕೆಯು ಹೆಣ್ಣು ಮಕ್ಕಳ ಪರವಾಗಿ ನಿಂತಿದ್ದ ಓರ್ವ ಮಹಾನುಭಾವರ ನಿರ್ಗಮನವಾಗಿದೆ.

    ಅನುಪಮಾ ಮಹಿಳಾ ಮಾಸಿಕದ ಹುಟ್ಟು ಬೆಳವಣಿಗೆಯಲ್ಲಿ ನಮ್ಮೊಂದಿಗೆ ಸದಾ ಬೆಂಗಾವಲಾಗಿ ನಿಂತ ಮಹಾನುಭಾವರವರು. ನಮ್ಮ ಬಳಗದ ಪ್ರತಿಯೊಂದು ಏಳು ಬೀಳುಗಳಲ್ಲಿಯೂ ನಮ್ಮ ಜೊತೆಗಿದ್ದವರು. ನಮ್ಮ ಪತ್ರಿಕೆಯಲ್ಲಿ ಬರುವ ಪ್ರತಿಯೊಂದು ಲೇಖನದ ಬಗ್ಗೆಯೂ ಕೂಲಂಕುಶ ಪರಿಶೀಲನೆ ನಡೆಸುವವರು. ಉತ್ತಮ ವಿಮರ್ಶಕರು ಆಗಿದ್ದರು. ತಮ್ಮ ಅದ್ವಿತೀಯ ವರ್ಚಸ್ಸಿನಿಂದ, ಕಂಡ ಕನಸನ್ನು, ಕೈಗೆತ್ತಿಕೊಂಡ ಕೆಲಸವನ್ನು ಅರ್ಪಣಾ ಮನೋಭಾವದೊಂದಿಗೆ ಪೂರ್ತಿ ಗೊಳಿಸುವ ವಿಶಿಷ್ಟ ಛಲಗಾರ.

    ಮಂಗಳೂರಿನಲ್ಲಿ ಇಂದು ಇಸ್ಲಾಮಿನ ಕಂಪನ್ನು ಪಸರಿಸುತ್ತಿರುವ ಹತ್ತು ಹಲವು ಕೆಲಸಗಳ ರೂವಾರಿಯವರು. ಅನುಪಮ ಕಚೇರಿ ಇರುವ ಹಿದಾಯತ್ ಸೆಂಟರ್, ವಿಶಾಲವಾದ ಸುಸಜ್ಜಿತ ಶಾಂತಿ ಪ್ರಕಾಶನದ ಕಚೇರಿ, ಇಸ್ಲಾಮಿ ಪುಸ್ತಕಾಲಯ ವಿರಬಹುದು, ಬೋಳಾರದ ಇಸ್ಲಾಮಿಕ್-ಎ-ಎಜುಕೇಶನ್ ಸೆಂಟರ್ ಎಲ್ಲದರಲ್ಲಿಯೂ ಅವರ ಅಹರ್ನಿಸಿ ಪರಿಶ್ರಮವಿದೆ. ಒಂದು ಯೋಜನೆ ಮುಗಿದ ಕೂಡಲೇ ಇನ್ನೊಂದಕ್ಕೆ ಕೈ ಹಾಕುತ್ತಿದ್ದ, ಅದಕ್ಕಾಗಿ ರೂಪವೇಷಗಳನ್ನು ಸಿದ್ಧಪಡಿಸುತಿದ್ದ ಅವರು ಎಲ್ಲ ವಿಷಯಗಳಲ್ಲಿಯೂ ಮೇಧಾವಿ. ಯಾವ ವಸ್ತುಗಳು ಎಲ್ಲಿ ಚೆನ್ನಾಗಿರುತ್ತದೆ ಯಾರ ಬಳಿ ವಿಚಾರಿಸಿದರೆ ತಿಳಿಯುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ಕೆ.ಎಂ. ಶರೀಫ್ ಸಾಹೇಬರು ಯಾವುದೇ ಕೆಲಸದಲ್ಲಿ ಪಾಲ್ಗೊಂಡರು ಅದನ್ನು ಸುಂದರವಾಗಿ ಮತ್ತು ಗುಣಮಟ್ಟದೊಂದಿಗೆ ಮುಗಿಸುವುದರಲ್ಲಿ ಸಿದ್ದ ಹಸ್ತರು.

    ಯಾರಿಗೂ ಪುಕ್ಕಟೆ ಸಲಹೆ, ಉಪದೇಶ ನೀಡುವ ಜಾಯಮಾನ ಅವರದಾಗಿರಲಿಲ್ಲ. ಆದರೆ ತಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬಂದ ಪ್ರತಿಯೊಬ್ಬರ ಪಾಲಿಗೂ ಅವರು ಆಪ್ತ ಸಮಾಲೋಚಕರು. ಉಪದೇಶ ಬಯಸುವವರಿಗೆ ಹಿರಿಯ ಮಾರ್ಗದರ್ಶಿ. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಸುಂದರವಾಗಿ ಪೂರ್ತಿಗೊಳಿಸಿದರೂ ಅದರಲ್ಲಿ ಹೆಚ್ಚಿನ ಪ್ರಯತ್ನ, ಹೋರಾಟ ಕೆ.ಎಂ. ಶರೀಫ್ ಸಾಹೇಬರದ್ದಾಗಿತ್ತು. ಆದರೆ ಎಂದೂ ಅದನ್ನು ಅವರು ಹೇಳಿಕೊಂಡವರಲ್ಲ. ವಿನಯಶೀಲತೆ ಅವರ ಹೆಗ್ಗಳಿಕೆ. ಅಧಿಕಾರ, ಹೆಸರು, ಪದವಿಗಾಗಿ ಯಾವುದೇ ಕೆಲಸವನ್ನು ಮಾಡಲು ಮತ್ತು ತನ್ನನ್ನು ಸಮಾಜ ಗುರುತಿಸಬೇಕೆಂದು ಅವರು ಬಯಸಲಿಲ್ಲ. ನಿಸ್ವಾರ್ಥತೆಯಿಂದ ಕೂಡಿದ ಮಾದರಿ ಯೋಗ್ಯ ಜೀವನವದು.

    ಅಲ್ಲಾಹನ ಮೇಲಿನ ಅಪಾರ ಭರವಸೆಯೊಂದಿಗೆ ಸಣ್ಣ ಮೊತ್ತವಿದ್ದರೂ ಸರಿ ಕೆಲಸ ಆರಂಭಿಸಿ ಎಂದು ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಉನ್ನತ ಕನಸುಗಳನ್ನು ಹೊಂದಿ ಗುರಿಯಡಿಗೆ ಗಮನಹರಿಸಲು ಯುವ ತಲೆಮಾರನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದರು. ಪ್ರತಿಭಾವಂತರನ್ನು ಗುರುತಿಸುವುದು, ಅವರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಂದ ಸಮಾಜಕ್ಕೆ ಯಾವ ಪ್ರಯೋಜನವನ್ನು ಪಡೆಯಬಹುದು ಎಂದು ಯೋಚಿಸಿ ಅದಕ್ಕಾಗಿ ಅಹರ್ನಿಶಿ ಕೆಲಸ ಮಾಡುವುದು ಅವರಿಗೆ ಮೀಸಲಾದ ವಿಶೇಷತೆ.

    85 ವರ್ಷಗಳ ಜೀವನದುದ್ದಕ್ಕೂ ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅಪಾರ ಪ್ರೀತಿ ಕಾಳಜಿ ಮತ್ತು ನಗು ಮುಖದೊಂದಿಗೆ ಎಲ್ಲರನ್ನು ಭೇಟಿಯಾದ ನನ್ನ ಪ್ರೀತಿಯ ದೊಡ್ಡಪ್ಪನ ಅಗಲಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ .ವಿಶೇಷವಾಗಿ ಅನುಪಮಾ ಬಳಗ ಹಿರಿಯ ಮಾರ್ಗದರ್ಶಕನನ್ನು, ಕೈಹಿಡಿದು ಮುನ್ನಡೆಸುತ್ತಿದ್ದ ಊರುಗೋಲನ್ನು ಕಳೆದುಕೊಂಡು ತಬ್ಬಲಿಯಾಗಿದೆ.

    ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಉಂಟಾಗುವುದರ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸುತ್ತಿದ್ದ ಅವರು ಎಲ್ಲ ಧರ್ಮೀಯರೊಂದಿಗೂ ಸ್ನೇಹ ಪ್ರೀತಿಯ ಸಂಬಂಧವನ್ನು ಹೊಂದಿದ್ದರು. ಭಾರತದಂತಹ ಬಹುದರ್ಮಿಯ ಸಮಾಜದಲ್ಲಿ ಓರ್ವ ವ್ಯಕ್ತಿ ಯಾವ ರೀತಿಯಲ್ಲಿ ಬಾಳಬೇಕು ಎಂಬುದಕ್ಕೆ ಮಾದರಿಯಂತಿದ್ದರು. ಅವರ ಮರಣದ ವೇಳೆ ಆಗಮಿಸಿದ ಸುತ್ತಮುತ್ತಲಿನ ದೇಶ ಬಾಂಧವರು ಇಳಿಸಿದ ಕಣ್ಣೀರು ಅವರೊಂದಿಗಿದ್ದ ಪ್ರೀತಿಯ ಸ್ಪಷ್ಟ ನಿದರ್ಶನವಾಗಿತ್ತು. ಸೌಹಾರ್ದದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.

    ಮನುಷ್ಯ ಸಹಜವಾಗಿ ಅವರಿಂದ ಸಂಭವಿಸಿರಬಹುದಾದ ಎಲ್ಲ ತಪ್ಪುಗಳನ್ನು ದೇವನು ಮನ್ನಿಸಲಿ ಮತ್ತು ಅವರನ್ನು ಸ್ವರ್ಗಾನಗಳಲ್ಲಿ ಸೇರಿಸಲಿ ಎಂಬುದಾಗಿ ಹೃದಯವಂತರಾಳದಿಂದ ಪ್ರಾರ್ಥಿಸುತ್ತಿದ್ದೇನೆ.

    ಸಬೀಹ ಫಾತಿಮ