ಪುತ್ತೂರು (ದಕ್ಷಿಣ ಕನ್ನಡ): ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್ ಆನ್ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್ಲ ಇಸ್ಮಾಯಿಲ್ ಅವರು ಪವಿತ್ರ ಕುರ್ಆನ್ನ 30 ಕಾಂಡಗಳನ್ನು ಕೈಯಲ್ಲಿ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಸಾಧನೆಯ ಹಿಂದೆ ಸುಮಾರು 5 ವರ್ಷಗಳ ನಿರಂತರ ಪರಿಶ್ರಮವಿದೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಹ್ರಾ ಜಾಸ್ಮಿನ್ ದಂಪತಿಯ ಪುತ್ರಿಯಾಗಿರುವ ಸಜ್ಲ ಅವರು ಕುರ್ಆನ್ ಬರವಣಿಗೆಯನ್ನು 2021ರ ಜನವರಿಯಲ್ಲಿ ಆರಂಭಿಸಿದ್ದರು. ಆಗ ಅವರು ಇದೇ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಹಳೆವಿದ್ಯಾರ್ಥಿಯಾಗಿದ್ದು, 2025ರ ಆಗಸ್ಟ್ನಲ್ಲಿ ಬರವಣಿಗೆ ಪೂರ್ಣಗೊಂಡಿದೆ.
ಪ್ರವಾದಿ ಕಾಲದಲ್ಲಿ ಅವತೀರ್ಣಗೊಂಡ ಕುರ್ಆನ್ ಅನ್ನು ಆ ಕಾಲದ ಪಂಡಿತ ಶಿರೋಮಣಿಗಳು ಕೈ ಬರಹದ ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಪ್ರಸ್ತುತ ಮುದ್ರಣ ಸೌಲಭ್ಯ ಇದ್ದರೂ ಸಜ್ಲ ಅವರು ಕೈಯಲ್ಲಿ ಸ್ಫುಟವಾಗಿ ಬರೆದಿರುವುದು ಸಾಧನೆ ಎನಿಸಿದೆ. ಈ ಕೃತಿಯನ್ನು ಶನಿವಾರ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಕೇರಳದ ಮರ್ಕಝ್ ನಾಲೇಜ್ ಸಿಟಿಯ ಮುರ್ ರಿಸ್ ಯಾಸೀನ್ ಸಖಾಫಿ ಅಲ್ ಅಝ್ಹರಿ ಅವರು ಲೋಕಾರ್ಪಣೆಗೊಳಿಸಿದರು.
ಮರ್ಕಝುಲ್ ಹುದಾ ಮಹಿಳಾ ಕಾಲೇಜು ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಷರೀಅತ್ ವಿಭಾಗದ ಪ್ರಾಂಶುಪಾಲ ವಳವೂರು ಮುಹಮ್ಮದ್ ಸಅದಿ, ಪದವಿ ವಿಭಾಗದ ಪ್ರಾಂಶುಪಾಲ ಮಹಮ್ಮದ್ ಮನ್ಸೂರ್ ಕಡಬ, ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.
ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸುರು ಬಣ್ಣದ ಕಾಗದವನ್ನು ಬಳಸಿಕೊಳ್ಳಲಾಗಿದೆ. ಅಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದೆ ಸಲಾಗಿದೆ. ಬರೆದು ಮುಗಿಸಲು ಅವರು ಒಟ್ಟು 303 ದಿನಗಳನ್ನು ತೆಗೆದುಕೊಂಡಿದ್ದಾರೆ. ಒಂದು ಪುಟ ಬರೆಯಲು 4 ಗಂಟೆ ಬೇಕಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ 2 ಪುಟಗಳನ್ನು ಬರೆದಿದ್ದಾರೆ. ಒಟ್ಟಾರೆ ಬರೆದು ಮುಗಿಸಲು 2,416 ಗಂಟೆ ಬಳಕೆಯಾಗಿದೆ ಎಂದು ಸಜ್ಲ ತಿಳಿಸಿದ್ದಾರೆ.
ಬೀ ಅಮ್ಮ ಆಬಾದಿ ಬೇಗಮ್ (1852-1924) ಮೌಲಾನಾ ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿಯವರ ತಾಯಿ .ಬೀಅಮ್ಮರ ನೈಜ ಹೆಸರು ಆಬಾದಿ ಬೇಗಮ್ ಆಗಿತ್ತು. ಅವರ ಮೊಮ್ಮಕ್ಕಳೂ ಸೇರಿದಂತೆ ಎಲ್ಲರೂ ಅವರನ್ನು ಬೀಅಮ್ಮ ಎಂದೇ ಕರೆಯುತ್ತಿದ್ದರು.
ಬೀಅಮ್ಮರ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬೀಅಮ್ಮರವರ 5ನೆಯ ವಯಸ್ಸಿನಲ್ಲಿ ಅವರ ತಂದೆ ನಿಧನ ಹೊಂದಿದರು. 28ನೆಯ ವಯಸ್ಸಿನಲ್ಲಿ, ಅವರ ಪತಿ ಅಬ್ದುಲ್ ಅಲಿ ಖಾನ್ ಪ್ಲೇಗ್ ರೋಗದಿಂದ ನಿಧನ ಹೊಂದಿದರು. ಚಿಕ್ಕ ವಯಸ್ಸಿ ನಲ್ಲಿಯೇ ಆಬಾದಿ ಬೇಗಮ್ ವಿಧವೆಯಾದರು. ಆರು ಗಂಡು ಮತ್ತು ಒಂದು ಹೆಣ್ಣು ಹೀಗೆ ಏಳು ಮಕ್ಕಳು ಇದ್ದರು.
ಅವರು ಅಷ್ಟು ಸ್ಥಿತಿವಂತರೇನೂ ಆಗಿರಲಿಲ್ಲ. ಆದರೆ ಬೀ ಅಮ್ಮ ಧೃತಿಗೆಡಲಿಲ್ಲ. ಈ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿದರು. ತಮ್ಮ ಸರ್ವಸ್ವವನ್ನೂ ಮಕ್ಕಳ ಪಾಲನೆ, ಪೋಷಣೆಗಾಗಿ ಧಾರೆ ಎರೆದರು. ಇದ್ದ ದುಡ್ಡಿನಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರು. ಉನ್ನತ ಶಿಕ್ಷಣಕ್ಕಾಗಿ ಮುಹಮ್ಮದಲಿ ಮತ್ತು ಶೌಕತ್ ಅಲಿಯವರನ್ನು ಅಲೀಗಢದ ಎಮ್.ವಿ.ಓ. ಕಾಲೇಜಿಗೆ ಕಳುಹಿಸ ಬಯಸಿದಾಗ, ಸ್ವಲ್ಪ ಆರ್ಥಿಕ ಸಹಾಯ ನೀಡುತ್ತಿದ್ದ ಮಕ್ಕಳ ಚಿಕ್ಕಪ್ಪ, ಮಕ್ಕಳಿಗೆ “ಇಂಗ್ಲಿಷ್ ಶಿಕ್ಷಣ”ಕ್ಕಾಗಿ ಧನ ಸಹಾಯ ನೀಡಲು ನಿರಾಕರಿಸಿದರು. ಆದರೆ ಬೀ ಅಮ್ಮ ಇದಕ್ಕೆಲ್ಲಾ ಸೊಪ್ಪು ಹಾಕುವವರಾಗಿರಲಿಲ್ಲ. ತಮ್ಮ ಒಡವೆಗಳನ್ನು ಮಾರಿ ಮಕ್ಕಳ ಶಿಕ್ಷಣವನ್ನು ಮುಂದುವರಿಸಿದರು.
1898ರಲ್ಲಿ ಮುಹಮ್ಮದಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡ್ಗೆ ತೆರಳಿದರು. ಮುಹಮ್ಮದ್ ಅಲಿ ತಮ್ಮ ತಾಯಿಯವರ ಬಗ್ಗೆ ಈ ರೀತಿ ಹೇಳುತ್ತಿದ್ದರು: “ನನ್ನ ತಾಯಿ ವಿದ್ಯಾಭ್ಯಾಸ ಪಡೆದವರಾಗಿರಲಿಲ್ಲ. ಆದರೆ ಅವರಷ್ಟು ವ್ಯವಹಾರ ಚತುರೆಯನ್ನು ನಾನೆಲ್ಲೂ ಕಂಡಿಲ್ಲ.”
ಒಂದು ಘಟನೆ ಇಲ್ಲಿ ಸ್ಮರಣೀಯವಾಗಿದೆ. ಗುಪ್ತಚರ ವಿಭಾಗದ ನಿರ್ದೇಶಕರಾಗಿದ್ದ ಸರ್ ಚಾರ್ಲ್ಸ್ ಕ್ಲೈವ್ ಲೆಂಡ್ (Sir Charles Clive Lend) ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಬ್ದುಲ್ ಮಜೀದ್ರ ಮುಖಾಂತರ ಅಲಿ ಸಹೋದರರಿಗೆ ಒಂದು ಪತ್ರವನ್ನು ರವಾನಿಸಿದರು. ಈ ಪತ್ರದಲ್ಲಿ ಬ್ರಿಟಿಷ್ ಸರಕಾರದ ಶರತ್ತುಗಳನ್ನು ಒಪ್ಪಿಕೊಂಡರೆ ಎರಡೂವರೆ ವರ್ಷಗಳ ಕಠಿಣ ಸೆರೆಮನೆಯ ಶಿಕ್ಷೆಯನ್ನು ಕೊನೆಗೊಳಿಸುವ ಪ್ರಸ್ತಾವನೆ ಇತ್ತು. ಮುಹಮ್ಮದಲಿ ಪತ್ರವನ್ನು ಓದಿದ ನಂತರ, ಕಾಗದದ ಮೇಲೆ ಏನೋ ಬರೆಯಲಾರಂಭಿಸಿದರು. ಅಲ್ಲಿಯೇ ಅಡ್ಡಾಡುತ್ತಿದ್ದ ಬೀಅಮ್ಮ ಡಿ.ಎಸ್.ಪಿ.ಯವರನ್ನು ಉದ್ದೇಶಿಸಿ ಹೇಳಿದರು: “ಸರಕಾರ ನನ್ನ ಮಕ್ಕಳನ್ನು ಬಿಡುಗಡೆಗೊಳಿಸಿ ಅವರಿಗೆ ನ್ಯಾಯ ಒದಗಿಸಲು ಮುಂದೆ ಬಂದಿರುವುದು ಸಂತೋಷದ ವಿಷಯ. ಕಳೆದ 30 ತಿಂಗಳಿನಿಂದ ಜೈಲಿನಲ್ಲಿ ಅವರು ಎಷ್ಟು ಸಂಕಷ್ಟಗಳಿಗೆ ಈಡಾಗಿದ್ದಾರೆ ಮತ್ತು ಎಷ್ಟು ಸಹನೆಯಿಂದ ಅವುಗಳನ್ನು ಎದುರಿಸಿದ್ದಾರೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಸರಕಾರ ಅವರೊಂದಿಗೆ ಕರಾರು ಮಾಡಿಕೊಳ್ಳ ಬಯಸಿದೆಯೆಂದು ನನ್ನ ಗಮನಕ್ಕೆ ಬಂದಿದೆ. ಮುಹಮ್ಮದಲಿ ಮತ್ತು ಶೌಕತ್ಅಲಿ ಇಸ್ಲಾಮಿನ ಸಿಪಾಯಿಗಳು, ಖಂಡಿತವಾಗಿ ಇಸ್ಲಾಮಿನ ಮತ್ತು ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಅವರು ಮಾಡಲಾರರು ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಜೈಲಿನಿಂದ ಬಿಡುಗಡೆ ಹೊಂದಲಿಕ್ಕಾಗಿ ಇಂತಹ ಕಾರ್ಯ ಮಾಡಲು ಅವರು ಮುಂದಾಗಿರುವರು ಎಂದು ನನಗೆ ತಿಳಿದು ಬಂದಲ್ಲಿ, ಅವರ ಕತ್ತು ಹಿಸುಕಿ ಕೊಲ್ಲುವಷ್ಟು ಶಕ್ತಿ ನನ್ನ ರಟ್ಟೆಗಳಲ್ಲಿ ಇನ್ನೂ ಇದೆ.”
ಸ್ವಾತಂತ್ರ್ಯವೆಂಬುದು ಅಮೂಲ್ಯ ಸಂಪತ್ತು. ಅದನ್ನು ಪಡೆಯಲು ಮನುಷ್ಯನು ಯಾವುದೇ ಮಟ್ಟಕ್ಕೆ ಇಳಿಯಬಲ್ಲನು. ಅತ್ಯಂತ ಧೈರ್ಯ ಶಾಲಿಗಳ ಕಾಲುಗಳು ಕೆಲವೊಮ್ಮೆ ನಡುಗಿ ಹೋಗುತ್ತವೆ. ಬ್ರಿಟಿಷ್ ಸರಕಾರದ ಉನ್ನತ ಅಧಿಕಾರಿಯ ಎದುರು ಮೇಲಿನ ಮಾತುಗಳನ್ನು ಹೇಳಿದ ಬೀಅಮ್ಮನವರ ನಿಸ್ವಾರ್ಥ ದೇಶಪ್ರೇಮ ಎಂತಹವರನ್ನೂ ನಾಚಿಸುವಂತಿದೆ!
ಸ್ವಾತಂತ್ರ್ಯ ಸಂಗ್ರಾಮದ ಕಾರ್ಯಕರ್ತರ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಈ ಬಗ್ಗೆ ಅವರು ಬರೆದಿದ್ದ ಪತ್ರ, ಅವರ ಮಾನವ ಪ್ರೇಮವನ್ನು ಎತ್ತಿ ತೋರಿಸುತ್ತದೆ. “ನನ್ನ ಮನಸ್ಸು ಜೈಲಿನಲ್ಲಿ ಕೊಳೆಯುತ್ತಿರುವ ಸಹಸ್ರಾರು ನಿರಪರಾಧಿ ಯುವಕರ ಬಗ್ಗೆ ರೋಧಿಸುತ್ತದೆ. ಜೀವನದ ಅವಶ್ಯಕತೆಳಿಗಾಗಿ ಸಂಪಾದನೆ ಮಾಡುವ ಸ್ವಾತಂತ್ರ್ಯವನ್ನು ಅವರು ಕಳೆದುಕೊಂಡಿದ್ದಾರೆ. ಹೋಂ ರೂಲ್ ಲೀಗ್ ಸಂಘಟನೆಯು ಪ್ರಮುಖ ಕೈದಿಗಳಲ್ಲದೇ, ಇತರ ಸುಮಾನ್ಯ ಕೈದಿಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿದೆಯೇ? ಅವರು ಮತ್ತು ಅವರ ಸಂಬಂಧಿಕರು ಹಸಿವೆಯಿಂದ ಏಕೆ ನರಳಬೇಕು? ಅವರ ಸಹಾಯಾರ್ಥ ಮನವಿ ಮಾಡಿದಲ್ಲಿ, ಭಾರತದ ಪ್ರತಿಯೊಂದು ಮನೆಯಿಂದಲೂ ಏನಾದರೂ ಸಹಾಯ, ಖಂಡಿತ ಒದಗಿ ಬರುತ್ತದೆಂಬ ವಿಶ್ವಾಸ ನನಗಿದೆ.”
1917 ಡಿಸೆಂಬರ್ 18ರಂದು ಮಾಂಟಿಗೋರನ್ನು ಭೇಟಿ ಮಾಡಲು ನಿಯುಕ್ತಗೊಂಡಿದ್ದ ಭಾರತೀಯ ಮಹಿಳಾ ತಂಡದ ಸದಸ್ಯರಾಗಿದ್ದರು. 1917 ಡಿಸೆಂಬರ್ 12ರಂದು ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಎರಡನೆಯ ಸಮ್ಮೇಳನದಲ್ಲಿ ಬೀಅಮ್ಮ ಉಪಸ್ಥಿತರಿದ್ದರು. ಬಿಳಿಯ ಬುರ್ಖಾ ಧರಿಸಿ, ಕೋಲು ಹಿಡಿದು ಸಭಾಂಗಣಕ್ಕೆ ಬಂದಾಗ, ಅವರ ಸಹಾಯಕ್ಕೆ ಶ್ರೀಮತಿ ಅನ್ನಿ ಬೆಸೆಂಟ್ ಧಾವಿಸಿದರು.
ಅನ್ನಿ ಬೆಸೆಂಟ್ ಭಾಷಣ ಮಾಡುತ್ತಾ ಹೇಳಿದರು: ” ಮುಹಮ್ಮದಲಿ ಮತ್ತು ಶೌಕತ್ ಅಲಿಯವರ ಮಾತೆ ನಮ್ಮೊಂದಿಗೆ ಇದ್ದಾರೆ. ಅವರು ನೈಜ ಮುಸ್ಲಿಮರೂ, ನಿಷ್ಟಾವಂತ ದೇಶಪ್ರೇಮಿಯೂ ಆಗಿರುವರು, ಅವರಲ್ಲಿ ಮಾತೃ ವಾತ್ಸಲ್ಯವಿದ್ದರೂ, ಅವರ ಹೃದಯ ಸಿಂಹದ ಹೃದಯ. ಅವರಿಗೆ ದುಃಖ ಮತ್ತು ಸಂಕಟ ಬಾಧಿಸುವುದಿಲ್ಲ, ಅವರ ಮಕ್ಕಳು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವುದು ಅವರಿಗೆ ಹರ್ಷವನ್ನೊದಗಿಸಿದೆ…”
1921 ಡಿಸೆಂಬರ್ 30ರಂದು ಅಹ್ಮದಾಬಾದ್ನಲ್ಲಿ ನಡೆದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷತೆಯನ್ನು ಬೀಅಮ್ಮ ವಹಿಸಿದ್ದರು. ಈ ಸಮ್ಮೇಳನದಲ್ಲಿ ಶ್ರೀಮತಿ ಕಸ್ತೂರ್ಬಾ ಗಾಂಧಿ, ಸರೋಜಿನಿ ನಾಯ್ಡು, ಬೇಗಮ್ ಹಝ್ರತ್ ಮೋಹಾನಿ, ಅನುಸೂಯ ಬಾಯಿ, ಬೇಗಮ್ ಸೈಫುದ್ದೀನ್ ಕೀಚಲು, ಶ್ರೀಮತಿ ಸರಳಾದೇವಿ ಮೊದಲಾದವರು ಇದ್ದರು.
ಖಿಲಾಫತ್ ಚಳವಳಿಯಲ್ಲಿ ಬೀಅಮ್ಮ ವಹಿಸಿದ ಪಾತ್ರದ ಕುರಿತು ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದರು: “… ಅವರು ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಶ್ರಮವಹಿಸುತ್ತಿದ್ದರು. ಖಿಲಾಫತ್ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ದೇಶದಾದ್ಯಂತ ಸಂಚರಿಸಿದರು. ಬೀ ಅಮ್ಮ ಇಸ್ಲಾಮಿನ ಕಟ್ಟಾ ಅನುಯಾಯಿಗಳಾಗಿದ್ದರು. ಹಿಂದೂ-ಮುಸ್ಲಿಮ್ ಐಕ್ಯತೆ ಅವರಿಲ್ಲದೇ ಸಾಧ್ಯವಿರಲಿಲ್ಲ. ಇದಕ್ಕಾಗಿ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ…” 1921ರಲ್ಲಿ ಅಲಿ ಸಹೋದರರ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಒಬ್ಬರು ‘ಸದಾಯ ಖಾತೂನ್'(ಮಹಿಳೆಯ ಧ್ವನಿ) ಎಂಬ ಶೀರ್ಷಿಕೆಯಡಿಯಲ್ಲಿ ಕವನವನ್ನು ರಚಿಸಿದರು. ಕೆಲವೇ ದಿನಗಳಲ್ಲಿ ಈ ಕವನ ಎಲ್ಲಾ ಜನರಿಗೂ ಸುಪರಿಚಿತವಾಯಿತು. ಇಂದಿಗೂ ಈ ಕವನ ಉರ್ದುವಲಯದಲ್ಲಿ ಪ್ರಸಿದ್ಧವಾಗಿದೆ. ಕವನ ಹೀಗಿದೆ: ಬೋಲಿ ಅಮ್ಮ ಮುಹಮ್ಮದಲಿ ಕೀ ಸಾಥ್ ತೇರೇ ಹೈ ಶೌಕತ್ ಅಲಿ ಭೀ ಜಾನ್ ಬೇಟಾ ಖಿಲಾಫತ್ ಪೆ ದೇ ದೋ ಜಾನ್ ಬೇಟಾ ಖಿಲಾಫತ್ ಪೆ ದೇದೋ. ಸಬರ್ಸೆ ಜೈಲ್ ಖಾನೆಮೆ ರಹನಾ ಕುಚ್ ಯೂ ಅಪ್ನಿ ಅಮ್ಮಾ ಕಾ ಕಹನಾ ಜೋ ಮುಸೀಬತ್ ಪಡೇ ಉಸ್ಕೋ ಸಹನಾ ಜಾನ್ ಬೇಟಾ ಖಿಲಾಫತ್ ದೇದೋ ಫಾಂಸಿ ಆಯೆ ಅಗರ್ ತುಮ್ ಕೋ ಜಾನಿ ಕಲಿಮಾ ಪಡ್ಪಡ್ಕೆ ಫಾಂಸಿ ಪೆ ಚಡ್ ನಾ ಮಾಂಗನಾ ಮತ್ ಹುಕೂಮತ್ ಸೆ ಪಾನಿ ಜಾನ್ ಬೇಟಾ ಖಿಲಾಫತ್ ಪೆ ದೇ ದೋ
ಆಬಾದಿ ಬೇಗಮ್ರವರು ನವೆಂಬರ್ 1924ರಲ್ಲಿ ನಿಧನ ಹೊಂದಿದರು. ಅವರ ನಿಧನದ ಕುರಿತು ಗಾಂಧೀಜಿ ‘ಯಂಗ್ ಇಂಡಿಯಾ’ದಲ್ಲಿ ಈ ರೀತಿ ಬರೆದರು: “ಬೀ ಅಮ್ಮ ಇನ್ನಿಲ್ಲವೆಂದು ನಂಬುವುದು ಕಷ್ಟಕರವಾಗಿದೆ. ಅವರ ವ್ಯಕ್ತಿತ್ವದಿಂದ ಮತ್ತು ಸಾರ್ವಜನಿಕ ಸಭೆಗಳಲ್ಲಿ ಅವರ ಪ್ರಭಾವ ಪೂರ್ಣ ಭಾಷಣಗಳಿಂದ ಪ್ರಭಾವಿತರಾಗದೇ ಉಳಿದವರಾರೂ ಇಲ್ಲ. ಅವರ ನಿಧನದ ವೇಳೆ ಅವರ ಸನಿಹವಿದ್ದುದು ನನ್ನ ಅದೃಷ್ಟವಾಗಿತ್ತು…” ಸ್ವಾಮಿ ಶ್ರದ್ಧಾನಂದ ಸರಸ್ವತಿಯವರು ದೆಹಲಿಯ ಪಟೌಡಿ ಹೌಸ್ನಲ್ಲಿ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಪಾಲ್ಗೊಳ್ಳುತ್ತಾ ಈ ರೀತಿ ಹೇಳಿದ್ದರು.”… ಹಿಂದೂ-ಮುಸ್ಲಿಮ್ ಐಕ್ಯತೆಗಾಗಿ ಯಾರಲ್ಲಿಯಾದರೂ ಉತ್ಕಟ ಅಭಿಲಾಷೆ ಇದ್ದರೆ, ಅದು ಬೀ ಅಮ್ಮರವರಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಅವರು ಮೆರೆದ ಸಾಹಸ ಮತ್ತು ಧೈರ್ಯಗಳನ್ನು ರಾಜಕೀಯ ಮುಖಂಡರೂ ಸಹ ತೋರಲು ಸಾಧ್ಯವಿರಲಿಲ್ಲ.”
ಸ್ವಾತಂತ್ರ ಸಂಗ್ರಾಮದ ಚಳವಳಿಯಲ್ಲಿದ್ದ ಇನ್ನೊಂದು ಪ್ರಮುಖ ಹೆಸರು ‘ಅಮ್ಜದೀ ಬೇಗಮ್’- ಇವರು ಬೀಅಮ್ಮನ ಸೊಸೆ, ಮುಹಮ್ಮದಾಲೀ ಅವರ ಪತ್ನಿ.
ಇನ್ನೊ ಬ್ಬರು, ‘ಬೇಗಮ್ ಹರ್ಝತ್ ಮಹಲ್’. ಇವರನ್ನು ಬ್ರಿಟಿಷರು ಝಾನ್ಸಿ ರಾಣಿಗೆ ಹೋಲಿಸಿದ್ದರು. ಅಷ್ಟು ಧೈರ್ಯಶಾಲಿ ಮಹಿಳೆಯಾಗಿದ್ದರು ಮಹಲ್ ಅವರು. ಅಸ್ಟರಿ ಬೇಗಮ್,
ಮಾಜಿದಾ ಬಾನು, ಹಾಜಿರಾ ಬೇಗಮ್, ಹಮೀದಾ ತಯ್ಯಬ್ಜೀ, ಫಾತಿಮಾ, ಸಫೀಯಾ ಖಾನ್, ಮರ್ಯಮ್ ಸಾದತ್, ಬಾನು ಕಿಚಲು, ಖುರ್ಶಿದಾ ಬೇಗಮ್, ಸಯೀದಾ ಬೇಗಮ್, ರೆಹನಾ ತಯ್ಯಬ್ಜೀ, ಮೆಹರ್ ತಾಜ್… ಮುಂತಾದ ಮುಸ್ಲಿಮ್ ಮಹಿಳೆ ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದವರು ಮತ್ತು ಹುತಾತ್ಮರಾದವರೂ ಇದ್ದಾರೆ. ಬಿಳಿಯರಿಂದ ಈ ದೇಶ ಸ್ವತಂತ್ರ ಪಡೆಯುವಲ್ಲಿ ಪುರುಷರೂ ಬಹಳ ಸಂಖ್ಯೆಯಲ್ಲಿ ತ್ಯಾಗ ಮಾಡಿದ್ದಾರೆ.
ಇವರ ಸ್ಟೋರಿಯು ಶಾಂತಿ ಪ್ರಕಾಶನ ಪ್ರಕಟಿಸಿದ ‘ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು” ಎಂಬ ಪುಸ್ತಕದಲ್ಲಿ ವಿವರಿಸಲಾಗಿದೆ.
ಕಾಣೆಯಾಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಸಂಬಂಧಿಗಳೇ ಕೊಲೆ ಮಾಡಿ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದ ಪ್ರಕರಣವನ್ನು ಮಹಾರಾಷ್ಟ್ರದ ರಾಯಗಢ ಪೊಲೀಸರು ಒಂದು ವರ್ಷಗಳ ಬಳಿಕ ಭೇದಿಸಿದ್ದಾರೆ.
ಸದ್ಯ ಮೃತ ಬಾಲಕಿಯ ತಲೆಬುರುಡೆಯನ್ನು ಪತ್ತೆ ಮಾಡಿರುವ ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವರ್ಷ ಮೃತ ಬಾಲಕಿಯ ತಂದೆ ರಾಹುಲ್ ಘಡ್ಜೆ ಜೈಲು ಸೇರಿದ್ದರು. ಆ ಬಳಿಕ ಬಾಲಕಿಯನ್ನು ಪೋಷಣೆ ಮಾಡಲು ಯಾರೂ ಇಲ್ಲದ ಪರಿಸ್ಥಿತಿಯಲ್ಲಿ, ಚಿಂಚವಾಲಿ ಗ್ರಾಮದಲ್ಲಿದ್ದ ಬಾಲಕಿಯ ಚಿಕ್ಕಮ್ಮ ಅಪರ್ಣಾ ಅನಿಲ್ ಮಕ್ವಾನಾ ಅಲಿಯಾಸ್ ಅಪರ್ಣಾ ಪ್ರಥಮೇಶ್ ಕಂಬ್ರಿ ಮತ್ತು ಆಕೆಯ ಪತಿ ಪ್ರಥಮೇಶ್ ಪ್ರವೀಣ್ ಕಂಬ್ರಿ ನೋಡಿಕೊಳ್ಳುತ್ತಿದ್ದರು.
ಬಾಲಕಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೆವು ಎಂದು ದಂಪತಿ ಹೇಳಿದ್ದರು. ಆದರೆ ವಾಸ್ತವವಾಗಿ ಬಾಲಕಿಗೆ ಹಿಂಸೆ ಮಾಡುತ್ತಿದ್ದರು, ಆಕೆ ಮಾಡಿದ ಸಣ್ಣ ತಪ್ಪಿಗಾಗಿ ಚಿಕ್ಕಪ್ಪ ಥಳಿಸಿದ್ದ. ಇದರಿಂದಾಗಿ ಬಾಲಕಿ ಮೃತಪಟ್ಟಿದ್ದಳು.
ಕಳೆದ ವರ್ಷ ಬಾಲಕಿಯ ಸಂಬಂಧಿ ಜ್ಯೋತಿ ಎನ್ನುವವರು ಬಾಲಕಿಯನ್ನು ಅಪರ್ಣಾ ದಂಪತಿ ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. 2024ರ ಅಕ್ಟೋಬರ್ 06ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದರು. ಅಪರ್ಣಾ ದಂಪತಿಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಕಳೆದ ಸೋಮವಾರ ಚಿಂಚವಾಲಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿ ಅವರನ್ನು ವಶಕ್ಕೆ ಪಡೆದಿದ್ದರು, ಬಳಿಕ ತೀವ್ರವಾದ ವಿಚಾರಣೆ ನಡೆಸಿದಾಗ ದಂಪತಿ ಬಾಲಕಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಚಿಕ್ಕಪ್ಪ ಹೊಡೆದ ಪೆಟ್ಟಿನಿಂದಾಗಿ ಬಾಲಕಿ ಮೃತಪಟ್ಟಿದ್ದು, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದಿರುವುದಾಗಿ ಹೇಳಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಝೆಂಡೆ ತಿಳಿಸಿದ್ದಾರೆ. ಸದ್ಯ ಪತ್ತೆ ಮಾಡಿದ ತಲಬುರುಡೆಯನ್ನು ವಿಧಿವಿಜ್ಞಾನ ಕೇಂದ್ರಕ್ಕೆ ರವಾನಿಸಲಾಗಿದ್ದು, ದಂಪತಿಯನ್ನು ನ್ಯಾಯಾಲಯದ ಆದೇಶದಂತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
‘ಮುಸ್ಲಿಂ ಹೆಣ್ಣು ಮಕ್ಕಳ ವಿವಾಹದ ಬಗ್ಗೆ ಅವರ ಅಪ್ಪ ಅಮ್ಮ, ಜಮಾತ್ನವರು ಚಿಂತಿಸುತ್ತಾರೆ. ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಈ ಚಿಂತೆ ಬೇಡ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ತಿರುಗೇಟು ನೀಡಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅಶ್ರಫ್ ಕಲ್ಲೇಗ, ಮುಸ್ಲಿಂ ಯುವತಿಯನ್ನು ವಿವಾಹವಾದ ಹಿಂದೂ ಯುವಕನಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿರುವುದು. ಮುಸ್ಲಿಂ ಸಮುದಾಯದ ಖಬರ್ಸ್ಥಾನಗಳ ಬಗ್ಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.
‘ಧರ್ಮಸ್ಥಳ ಪ್ರಕರಣದಲ್ಲಿ ದೂರು ನೀಡಿರುವ ಸಾಕ್ಷಿ ದೂರುದಾರ ಮುಸ್ಲಿಂ ಸಮಾಜಕ್ಕೆ ಸೇರಿದವನು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡದ ಬಗ್ಗೆ ಮಾಹಿತಿ ಇದ್ದರೆ ಅವರದೇ ಕೇಂದ್ರ ಸರ್ಕಾರದ ಮೂಲಕ ತನಿಖೆ ಕೈಗೊಳ್ಳಲಿ’ ಎಂದು ಸವಾಲು ಹಾಕಿದರು.
‘ಧರ್ಮಸ್ಥಳ ವಿಚಾರವಾಗಿ ಮುಸ್ಲಿಂ ಸಮುದಾಯ ಯಾವೊಬ್ಬ ಪ್ರಮುಖರು ಮಾತನಾಡಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಹೆಗ್ಗಡೆಯವರಿಗೆ ಪ್ರೀತಿ ಇದೆ. ಅಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಆದರೆ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಈ ಹಿಂದೆ ಯತ್ನಿಸಿ ಅದಕ್ಕೆ ಪರ್ಯಾಯವಾಗಿ ಕನ್ಯಾಡಿ ಕ್ಷೇತ್ರದ ಆರಂಭಕ್ಕೆ ಕಾರಣರಾದ ಜನಾರ್ದನ ಪೂಜಾರಿ ಅವರಿಗೆ ಈಗ ಧರ್ಮಸ್ಥಳದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅದಕ್ಕಾಗಿ ಅವರು ಈ ರೀತಿಯ ಹೇಳಿಕೆ ನೀಡಲು ಆರಂಭಿಸಿದ್ದಾರೆ’ ಎಂದು ಅವರು ದೂರಿದರು.
ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಪ್ರಧಾನ ಕಾರ್ಯದರ್ಶಿ ನೌಷದ್ ಬೊಳುವಾರು, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಮುಖಂಡ ಹಂಝ ಕಬಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗೆ ಆಮೆ ನಡಿಗೆ ಗತಿ ಹಲವು ವಲಯಗಳಿಗೆ ಪೆಟ್ಟು ಊರುಗಳಿಗೆ ಮರಳಿರುವ ಕೂಲಿ ಕೆಲಸಗಾರರು
ಕೆಂಪು ಕಲ್ಲು ಸಿಗದ ಕಾರಣ ಅರ್ಧಕ್ಕೆ ನಿಂತಿರುವ ಕೆಲಸ
ಮಂಗಳೂರು: ನಗರ ಹೊರವಲಯದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಿಸಲು ಅಡಿಗಲ್ಲು ಹಾಕಿದ್ದು ಕಳೆದ ವರ್ಷ ಮಾರ್ಚ್ನಲ್ಲಿ. ಹಳೆಯ ಮನೆಯ ಸಮೀಪದಲ್ಲೇ ಹೊಸ ಮನೆ ನಿರ್ಮಿಸುವ ಉದ್ದೇಶ. ತುರ್ತು ಏನೂ ಇರಲಿಲ್ಲ. ಆದ್ದರಿಂದ ಅಳೆದು– ತೂಗಿ ಒಂದೊಂದೇ ಹಂತದ ಕೆಲಸಗಳನ್ನು ಮುಗಿಸುತ್ತಿದ್ದರು. ಮುಂದಿನ ವರ್ಷ ಜನವರಿಯಲ್ಲಿ ಗೃಹಪ್ರವೇಶ ಮಾಡಲು ದಿನವೂ ನಿಗದಿ ಆಗಿದೆ. ಜೂನ್ ಅರಂಭದ ವರೆಗೂ ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತು. ನಂತರ ಯೋಜನೆ ತಲೆಕಳೆಗಾಯಿತು. ಕಲ್ಲು ಮತ್ತು ಮರಳು ಸಾಕಷ್ಟು ಪ್ರಮಾಣದಲ್ಲಿ ಸಿಗದೇ ಇದ್ದ ಕಾರಣ ಕೆಲಸ ನಿಧಾನವಾಯಿತು. ಅಲ್ಲಿಲ್ಲಿ ಬಿದ್ದದ್ದ 20ರಷ್ಟು ಕಲ್ಲುಗಳನ್ನು ತಂದು ಅರ್ಧ ದಿನದ ಕೆಲಸ ಮಾಡಿಸಲಾಯಿತು. ನಂತರ ಕಲ್ಲುಗಳಿಗೆ ಕಾದಿದ್ದೇ ಬಂತು.
ಉಳ್ಳಾಲ ತಾಲ್ಲೂಕಿನ ಕುಂಪಲದಲ್ಲಿ ಮನೆಯೊಂದರ ನಿರ್ಮಾಣ ಅರಂಭವಾಗಿತ್ತು. ಎರಡು ತಿಂಗಳಿಂದ ಕೆಲಸ ಸಂಪೂರ್ಣ ನಿಂತಿದೆ. ಬಂಟ್ವಾಳ ತಾಲ್ಲೂಕಿನ ಫರಿಂಗಿಪೇಟೆಯಲ್ಲಿ ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭವಾದ ಎರಡು ಮಹಡಿಯ ಮನೆಯ ಕೆಲಸ ಒಂದೂವರೆ ತಿಂಗಳಿಂದ ಮುಂದುವರಿಯುತ್ತಿಲ್ಲ. ಉಳ್ಳಾಲ ತಾಲ್ಲೂಕಿನ ನಾಟೆಕಲ್ಲಿನಲ್ಲಿ 5 ಸಾವಿರ ಚದರ ಅಡಿಯ ಕಟ್ಟದ ನಿರ್ಮಾಣ ಆರಂಭಿಸುವಾಗಲೇ ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ ನೆಲಮಹಡಿಯ ಸೆಂಟ್ರಿಂಗ್ ಕೆಲಸ ಮುಗಿದ ನಂತರ ಕಲ್ಲು– ಮರಳು ಸಿಗದ್ದರಿಂದ ಅದರ ಮಾಲೀಕರ ಯೋಜನೆಗಳೆಲ್ಲ ಉಲ್ಟಾ– ಪಲ್ಟ ಆಗಿವೆ.
ಇವು ಕೆಲವೇ ಉದಾಹರಣೆಗಳು. ಕಲ್ಲು ಮತ್ತು ಮರಳು ಸಿಗದ ಕಾರಣ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಬಹುತೇಕ ನಿಂತೇ ಹೋಗಿವೆ. ಇದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಎದುರಿಸುತ್ತಿರುವವರ ಸಂಖ್ಯೆ ಸಾವಿರಾರು. ಗುತ್ತಿಗೆದಾರರಿಂದ ಹಿಡಿದು ಕೆಲಸಗಾರರವರೆಗೆ, ನಿರ್ಮಾಣ ಸಾಮಗ್ರಿ ಮಾರಾಟಗಾರರಿಂದ ಹಿಡಿದು ಸಣ್ಣ ಹೋಟೆಲ್, ಬೀಡಿ ಅಂಗಡಿಯವರ ವರೆಗೆ, ಸಾಮಗ್ರಿಗಳನ್ನು ಸಾಗಿಸುವ ಟೆಂಪೊದವರಿಂದ ಹಿಡಿದು ಫರ್ನಿಚರ್ ಅಂಗಡಿಯವರ ವರೆಗೆ ವ್ಯವಹಾರ, ಕೆಲಸ, ವ್ಯಾಪಾರ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವವರು ಇಂದು– ನಾಳೆ ಎಂದು ಕಾಯುತ್ತ ದಿನದೂಡುತ್ತಿದ್ದಾರೆ. ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬಂದಿದ್ದ ಕೂಲಿಕಾರ್ಮಿಕರ ಪೈಕಿ ಬಹುತೇಕರು ಮಂಗಳೂರು ಬಿಟ್ಟು ಹೋಗಿದ್ದಾರೆ ಎಂದು ಗುತ್ತಿಗೆದಾರರನೇಕರು ತಿಳಿಸಿದರು.
ಅಕ್ರಮವಾಗಿ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ತಡೆಯಲು ಕೈಗೊಂಡಿರುವ ಕ್ರಮದ ಬಗ್ಗೆ ಎಲ್ಲರಿಗೂ ಸಹಮತವಿದೆ. ಆದರೆ ಅದರಿಂದಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು, ಬದಲಿ ವ್ಯವಸ್ಥೆ ಮಾಡಬೇಕಿತ್ತು ಎಂಬುದು ಬಹುತೇಕರ ಅನಿಸಿಕೆ. ಮರಳು ಗಣಿಗಾರಿಕೆಗೆ ನಿಷೇಧ ಇರುವುದು ನಿಜ. ಆದರೆ ಈಗಾಗಲೇ ಸಂಗ್ರಹಿಸಿರುವ ಮರಳನ್ನು ವ್ಯವಸ್ಥಿತವಾಗಿ ವಿತರಿಸಬೇಕೆಂದೂ ಪರವಾನಗಿ ಪಡೆದುಕೊಂಡು ಕಲ್ಲು ಗಣಿಗಾರಿಕೆ ನಡೆಸುವವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದೂ ಅಭಿಪ್ರಾಯಪಡುತ್ತಾರೆ ಹೆಚ್ಚಿನವರು. ಎಂ– ಸ್ಯಾಂಡ್ ಇಲ್ಲಿನ ಹವಾಮಾನಕ್ಕೆ ಸೂಕ್ತವಲ್ಲ ಎಂಬ ಅನಿಸಿಕೆಯಿಂದಾಗಿ ಯಾರೂ ಅದನ್ನು ಬಳಸಲು ಮುಂದಾಗುತ್ತಿಲ್ಲ. ಕಲ್ಲಿಗೆ ಬದಲಾಗಿ ಇಟ್ಟಿಗೆ, ಬ್ಲಾಕ್ಗಳನ್ನು ಬಳಸುವ ಪದ್ಧತಿ ಇನ್ನೂ ಇಲ್ಲಿ ಶುರುವಾಗಲಿಲ್ಲ. ಹೀಗಿರುವಾಗ ಮರಳಿಗೆ ಮರಳೇ ಬೇಕು, ಕೆಂಪುಕಲ್ಲಿಗೆ ಬದಲು ಕೆಂಪುಕಲ್ಲೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
‘ಎರಡು ತಿಂಗಳಿಂದ ಕೆಲಸ ಇಲ್ಲ. ನನ್ನ ಕೈಕೆಳಗೆ ಏಳೆಂಟು ಜನರು ಕೆಲಸ ಮಾಡುತ್ತಿದ್ದರು. ಕೆಲವರು ಊರಿಗೆ ಹೋದರು. ಇನ್ನು ಕೆಲವರು ಬೇರೆ ಯಾವುದೋ ಕೆಲಸ ಹುಡುಕಿಕೊಂಡು ಹೋಗಿದ್ದಾರೆ. ಕಲ್ಲು ಸಿಗುತ್ತಿದ್ದಾಗ ಕೆಲಸ ಇತ್ತು. ಜೀವನ ಸರಿಯಾಗಿ ನಡೀತಿತ್ತು. ಒಂದಿಷ್ಟು ಉಳಿತಾಯವೂ ಆಗುತ್ತಿತ್ತು. ಹಾಗೆ ಉಳಿಸಿದ ಹಣದಲ್ಲಿ ಈಗ ಜೀವನ ಸಾಗುತ್ತಿದೆ. ಅದು ಮುಗಿದ ನಂತರ ರಾಜಕಾರಣಿಗಳ ಮನೆ ಮುಂದೆ ಹೋಗಿ ಕುಳಿತುಕೊಳ್ಳಬೇಕಾದೀತೇನೋ…’ ಎಂದರು ದಾವಣಗೆರೆಯಿಂದ ಬಂದು ಮಂಗಳೂರಿನಲ್ಲಿ ಗುತ್ತಿಗೆದಾರರಾಗಿರುವ ದುರ್ಗೇಶ್.
‘ಅಕ್ರಮ ತಡೆಯಲೇಬೇಕು. ಅದರಿಂದ ಎಲ್ಲರಿಗೂ ಒಳಿತು. ಆದರೆ ನಿಯಮಗಳನ್ನು ಪಾಲಿಸಿಕೊಂಡು ಮಾಡುವವರಿಗೆ ಪರವಾನಗಿ ಕೊಡಬೇಕು. ಸಮಸ್ಯೆಗೆ ಪರಿಹಾರ ಹುಡುಕುವುದು ಬಿಟ್ಟು ಎಲ್ಲವನ್ನೂ ಒಮ್ಮೆಲೇ ನಿಲ್ಲಿಸಿಬಿಟ್ಟರೆ ಹೇಗೆ’ ಎಂದು ಪ್ರಶ್ನಿಸುವ ದುರ್ಗೇಶ್ ‘ಎಂ–ಸ್ಯಾಂಡ್ ಬಳಸಲು 10 ಶೇಕಡ ಮಂದಿ ಒಪ್ಪಬಹುದು, ಅದು ಕೂಡ ಒಲ್ಲದ ಮನಸ್ಸಿನಿಂದ. ಮರಳು ಸಂಗ್ರಹ ಮಾಡಿಟ್ಟುಕೊಳ್ಳಲು ಆಗುವುದರಿಂದ ಸ್ವಲ್ಪ ಹೆಚ್ಚು ಹಣ ಕೊಟ್ಟರೂ ಸಿಗಬಹುದು. ಆದರೆ ಕಲ್ಲು ಸಂಗ್ರಹ ಮಾಡಿ ಇಡಲು ಆಗುವುದಿಲ್ಲ. ಅದಕ್ಕೆ ಜಾಗ ತುಂಬ ಬೇಕು. ಆದ್ದರಿಂದ ಒಂದೆರಡು ಲೋಡ್ ಕಲ್ಲು ತಂದು ಅಷ್ಟು ಕೆಲಸ ಮುಗಿದ ನಂತರವೇ ಮತ್ತೊಮ್ಮೆ ತರುವುದು. ಹೀಗಾಗಿ ಕಲ್ಲು ಇಲ್ಲದೆ ಈಗ ಎಲ್ಲ ಕೆಲಸವೂ ನಿಂತಿದೆ’ ಎನ್ನುತ್ತಾರೆ.
‘ಎಂ–ಸ್ಯಾಂಡ್, ಬ್ಲಾಕ್, ಇಟ್ಟಿಗೆ ಇತ್ಯಾದಿಗಳನ್ನು ಬಳಸಲು ಇಲ್ಲಿ ಯಾರೂ ಒಪ್ಪುವುದಿಲ್ಲ. ಬ್ಲಾಕ್ಗಳನ್ನು ಬಳಸಿ ನಿರ್ಮಿಸಿದ ನಗರದ ಪ್ರಮುಖ ಅಪಾರ್ಟ್ಮೆಂಟ್ ಒಂದರಲ್ಲಿ ನೀರು ಜಿನುಗುತ್ತಿರುವುದರಿಂದ ಐದನೇ ಮಹಡಿಯಿಂದ ವಾಟರ್ ಪ್ರೂಫ್ ಹಾಕುತ್ತಿದ್ದಾರೆ. ಇಲ್ಲಿ ಕಟ್ಟಡಗಳಿಗೆ ಕೆಂಪು ಕಲ್ಲು ಬಳಸುವುದೇ ಸಂಪ್ರದಾಯವಾಗಿ ಮುಂದುವರಿದಿದೆ. ಅದು ಬೇಸಿಗೆಗೂ ಮಳೆಗಾಲಕ್ಕೂ ಸೂಕ್ತ ಎಂಬ ಭಾವನೆ ಎಲ್ಲರಲ್ಲೂ ಇದೆ. ಎಷ್ಟು ಭಾರವನ್ನಾದರೂ ತಡೆದುಕೊಳ್ಳುವ ಸಾಮರ್ಥ್ಯ ಇರುವುದರಿಂದ ಗುತ್ತಿಗೆದಾರರು ಕೂಡ ಅದಕ್ಕೇ ಮೊರೆ ಹೋಗುತ್ತಾರೆ. ಕಲ್ಲನ್ನು ಅಕ್ರಮವಾಗಿ ತಂದು ಕಟ್ಟಡ ನಿರ್ಮಿಸಿ ಕೊಡು ಎಂದು ಯಾರೂ ಹೇಳುವುದಿಲ್ಲ. ನಿಯಮಗಳನ್ನು ಪಾಲಿಸಿಕೊಂಡೇ ಗಣಿಗಾರಿಕೆ ಮಾಡಿ ಕಲ್ಲು ಸಿಗುವಂತೆ ಮಾಡಲಿ. ಅದಕ್ಕೆ ವೆಚ್ಚ ಸ್ವಲ್ಪ ಹೆಚ್ಚಾದರೂ ಕೊಡಲು ಜನರು ಹಿಂಜರಿಯುವುದಿಲ್ಲ’ ಎಂಬುದು ಗುತ್ತಿಗೆದಾರ ದಯಾನಂದ ಅವರ ಅಭಿಪ್ರಾಯ.ಅನೇಕ ಮೇಸ್ತ್ರಿಗಳು ಸೆಂಟ್ರಿಂಗ್ ಮತ್ತು ಇತರ ಕೆಲಸದ ಸಾಮಗ್ರಿಗಳನ್ನು ನನ್ನ ವಾಹನದಲ್ಲೇ ಸಾಗಿಸುತ್ತಿದ್ದರು. ಈಗ ಬಾಡಿಗೆಗೆ ಕರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೆಲಸವೇ ಇಲ್ಲ. ಬೇರೆ ಕೆಲಸ ಗೊತ್ತೂ ಇಲ್ಲ. ಸಚಿನ್ ಟೆಂಪೊ ಚಾಲಕ ಪಾಣೆಮಂಗಳೂರುಸ್ಯಾಂಡ್ ಬಜಾರ್ ಅ್ಯಾಪ್ ಮೂಲಕ ತರಿಸಿದ ಮರಳನ್ನು ಗಾಳಿಸಿಯೇ ಬಳಸಬೇಕಾದ ಪರಿಸ್ಥಿತಿ ಎಂದು ದೂರಲಾಗಿದೆ
ಎಲ್ಲವನ್ನೂ ಕಾನೂನುಬದ್ಧಗೊಳಿಸಲು ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಮಟ್ಟದಲ್ಲೇ ಇದು ಆಗಬೇಕು. ಹೀಗಾಗಿ ಇನ್ನೂ ಸುಮಾರು ಒಂದು ತಿಂಗಳ ವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ. ರಾಜು ಹೆಚ್ಚುವರಿ ಜಿಲ್ಲಾಧಿಕಾರಿ
ಸ್ಯಾಂಡ್ ಬಜಾರ್ನಲ್ಲಿ ಸಿಗುವ ಮರಳಿನ ಗುಣಮಟ್ಟ ಚೆನ್ನಾಗಿಲ್ಲ. ಆದ್ದರಿಂದ ಗಾಳಿಸಿದ ನಂತರ ಸಿಗುವುದು ಅಲ್ಪಪ್ರಮಾಣ. ಗಾಳಿಸಲು ಎರಡು ದಿನ ಇಬ್ಬರಿಗೆ ಕೂಲಿ ಕೊಡಬೇಕು. ನಾವು ಹೇಳಿದ ಸಮಯದಲ್ಲಿ ತಂದು ಹಾಕುವುದೂ ಇಲ್ಲ. ಲತೀಫ್ ಗುತ್ತಿಗೆದಾರ ತುಂಬೆ
ಅನೇಕ ಮೇಸ್ತ್ರಿಗಳು ಸೆಂಟ್ರಿಂಗ್ ಮತ್ತು ಇತರ ಕೆಲಸದ ಸಾಮಗ್ರಿಗಳನ್ನು ನನ್ನ ವಾಹನದಲ್ಲೇ ಸಾಗಿಸುತ್ತಿದ್ದರು. ಈಗ ಬಾಡಿಗೆಗೆ ಕರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೆಲಸವೇ ಇಲ್ಲ. ಬೇರೆ ಕೆಲಸ ಗೊತ್ತೂ ಇಲ್ಲ. ಸಚಿನ್ ಟೆಂಪೊ ಚಾಲಕ, ಪಾಣೆಮಂಗಳೂರು
ವಾಸ್ತವದಲ್ಲಿ ಹಣ ಮಾಡಿಕೊಂಡರು ಈಗ ಖುಷಿಯಲ್ಲಿದ್ದಾರೆ. ಹಲವರು ಈಗಾಗಲೇ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗಿದ್ದಾರೆ. ನಿತ್ಯ ದುಡಿದು ತಿನ್ನುವವರಿಗೆ ಮತ್ತು ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ. ದಯಾನಂದ ಗುತ್ತಿಗೆದಾರ ಮಂಗಳೂರು
ಒಂದೆಡೆ ನಿರ್ಬಂಧ ಮತ್ತೊಂದೆಡೆ ನಿಷೇಧ
ಕರಾವಳಿ ನಿರ್ಬಂಧಿತ ಪ್ರದೇಶದಲ್ಲಿ (ಸಿಆರ್ಝಡ್) 2022ರಿಂದ ಮರಳು ಗಣಿಗಾರಿಕೆಗೆ ನಿಷೇಧವಿದೆ. ನಾನ್ ಸಿಆರ್ಝಡ್ನಲ್ಲಿ ಜೂನ್ 5ರಿಂದ ಅಕ್ಟೋಬರ್ 15ರ ವರೆಗೆ ಮರಳು ಗಣಿಗಾರಿಕೆಗೆ ನಿಷೇಧವಿದೆ. ಆದ್ದರಿಂದ ಈಗ ಸಂಗ್ರಹ ಮಾಡಿಟ್ಟಿರುವ ಮರಳನ್ನೇ ಆಶ್ರಯಿಸಬೇಕಾಗಿದೆ. ಅಂಥ ಮರಳು ಪ್ರತಿ ವರ್ಷ ಸಾಕಷ್ಟು ಸಿಗುತ್ತದೆ. ಇದಲ್ಲದೆ ಜಿಲ್ಲಾಡಳಿತದ ಬ್ಲಾಕ್ಗಳಲ್ಲಿ ಇರುವ ಮರಳು ಸ್ಯಾಂಡ್ ಬಜಾರ್ ಆ್ಯಪ್ನಲ್ಲಿ ಲಭ್ಯವಿದೆ. ಅಕ್ರಮವಾಗಿ ಬ್ಲ್ಯಾಕ್ಮಾರ್ಕೆಟ್ನಲ್ಲೂ ಮರಳು ಸಿಗತ್ತಿದೆ. ಆದ್ದರಿಂದ ಸಮಸ್ಯೆ ಇರುವುದು ಕಲ್ಲಿನದೇ. ಸಿಆರ್ಝಡ್ನಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಇಲ್ಲ. ಸಾಂಪ್ರದಾಯಿಕ ಸಮುದಾಯಗಳಿಗೆ ಇದರಿಂದ ದೋಣಿ ನಡೆಸಲು ಸಮಸ್ಯೆಯಾಗುತ್ತದೆ ಎಂಬ ದೂರಿನ ನಂತರ 2011ರಲ್ಲಿ ಈ ನಿಷೇಧವನ್ನು ತೆಗೆದು ಹಾಕಲಾಗಿತ್ತು. ಆದರೆ 2022ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯ ನೀಡಿದ ಆದೇಶದಂತೆ ಈಗ ಮೂರು ಜಿಲ್ಲೆಗಳ ಸಿಆರ್ಝಡ್ನಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿದೆ. ಇದರ ವಿರುದ್ಧ ಹೋರಾಟಗಳು ನಡೆಯುತ್ತಿವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್ತಿ ತಿಳಿಸಿದರು.
ಮರಳು ಸಾಕಷ್ಟು ಇದೆ
ನಾನ್ ಸಿಆರ್ಝಡ್ನಲ್ಲಿ ಸಾಕಷ್ಟು ಮರಳು ಸಂಗ್ರಹ ಇದೆ. ಒಟ್ಟು 29 ಬ್ಲಾಕ್ಗಳ ಪೈಕಿ 16 ಕಾರ್ಯನಿರ್ವಹಿಸುತ್ತಿದ್ದು 3 ಲಕ್ಷ 34 ಸಾವಿರ ಟನ್ ಮರಳು ಇದೆ. ಮೀನುಗಳ ವಂಶಾಭಿವೃದ್ಧಿಗಾಗಿ ಈಗ ಮರಳು ಗಣಿಗಾರಿಕೆ ಮೇಲೆ ನಿಷೇಧವಿದೆ. ಮಳೆಗಾಲದಲ್ಲಿ ಹೆಚ್ಚು ನೀರು ಇರುವಾಗ ಮರಳು ತೆಗೆಯಬಾರದು ಎಂಬ ನಿಯಮವೂ ಜಾರಿಯಲ್ಲಿದೆ. ಆದರೆ 11 ಸಾವಿರ ಟನ್ ಮರಳು ದಾಸ್ತಾನು ಇದೆ. ಅದನ್ನು ಸ್ಯಾಂಡ್ ಬಜಾರ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ವಿವಿಧ ಸಂದರ್ಭಗಳಲ್ಲಿ ವಶಪಡಿಸಿಕೊಂಡ ಮರಳೂ ಇದೆ. ಅದನ್ನು ಹರಾಜು ಹಾಕಬೇಕಾದರೆ ತುಂಬ ಸಮಯ ಕಾಯಬೇಕು. ಆದ್ದರಿಂದ ಸುಲಭವಾಗಿ ಜನರಿಗೆ ಒದಗಿಸುವ ಕುರಿತು ನಿರ್ಧಾರ ಕೈಗೊಳ್ಳಲು ಮರಳು ನಿರ್ವಹಣಾ ಸಮಿತಿಯ ನಿರ್ಧಾರಕ್ಕೆ ಬಿಡಲಾಗಿದೆ.
ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಇರಬಹುದಾದ ಗ್ರಹವನ್ನು ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಇತ್ತೀಚೆಗೆ ಪತ್ತೆ ಹಚ್ಚಿದೆ.
ಈ ವಿಷಯವನ್ನು ನಾಸಾದ ವೆಬ್ಸೈಟ್ science.nasa.gov ದಲ್ಲಿ ಪ್ರಕಟಿಸಲಾಗಿದೆ. ಭೂಮಿಯಿಂದ ಕೇವಲ 4 ಜ್ಯೋತಿರ್ವಷ್ರಗಳ (light-years) ಅಂತರದಲ್ಲಿರುವ ‘ಆಲ್ಫಾ ಸೆಂಟೌರಿ’ ಎಂಬ ನಕ್ಷತ್ರ ಸಮೂಹದಲ್ಲಿನ ಸೂರ್ಯನಂತ ನಕ್ಷತ್ರವೊಂದನ್ನು ಭೂಮಿಯಂಥಹ ಗ್ರಹವೊಂದು ಸುತ್ತುತ್ತಿದೆ ಎಂದು ದೂರದರ್ಶಕ ಕಂಡುಕೊಂಡಿದೆ.
ಆಲ್ಫಾ ಸೆಂಟೌರಿ ನಕ್ಷತ್ರ ಸಮೂಹದಲ್ಲಿ ಕೇವಲ ಮೂರು ನಕ್ಷತ್ರಗಳಿವೆ. ಆ ಸಮೂದಲ್ಲಿ ‘ಆಲ್ಫಾ ಸೆಂಟೌರಿ-ಎ’, ‘ಆಲ್ಫಾ ಸೆಂಟೌರಿ– ಬಿ’ ಮತ್ತು ‘ಪ್ರಾಕ್ಸಿಮಾ ಸೆಂಟೌರಿ’ ಎಂಬ ಮೂರು ನಕ್ಷತ್ರಗಳಿವೆ. ಸದ್ಯ ಸೂರ್ಯನಿಗೆ ಅತಿ ಹತ್ತಿರದ ನಕ್ಷತ್ರ ಎಂದು ‘ಪ್ರಾಕ್ಸಿಮಾ ಸೆಂಟೌರಿ’ಯನ್ನು ಗುರುತಿಸಲಾಗುತ್ತದೆ. ಇದು ಒಂದು ಕೆಂಪು ಕುಬ್ಬ ನಕ್ಷತ್ರವಾಗಿದ್ದು ಇಷ್ಟು ದಿನ ನಡೆದ ಸಂಶೋಧನೆಗಳು ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಮೂರು ಗ್ರಹಗಳು ಇರಬಹುದು ಎಂಬುದನ್ನು ಕಂಡುಕೊಂಡಿವೆಯಾದರೂ ಅವು ವಾಸಯೋಗ್ಯ ಎಂಬುದನ್ನು ಪತ್ತೆಹಚ್ಚಲಾಗಿಲ್ಲ.
ಆದರೆ, ವಿಜ್ಞಾನಿಗಳಿಗೆ ಅಭೂತಪೂರ್ವ ಯಶಸ್ಸು ಎಂಬಂತೆ JWST ಈಗ ಫಲಿತಾಂಶ ನೀಡಿದೆ. ದೂರದರ್ಶಕದ ಇತ್ತೀಚಿನ ಫಲಿತಾಂಶಗಳ ಪ್ರಕಾರ, ‘ಆಲ್ಫಾ ಸೆಂಟೌರಿ-ಎ’ ನಕ್ಷತ್ರದ ಗ್ರಹವಾಗಿ ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಗ್ರಹ ಕಂಡು ಬಂದಿದೆ. ಸದ್ಯ ಆ ಗ್ರಹಕ್ಕೆ ‘ಎಸ್ 1’ ಎಂದು ಹೆಸರಿಡಲಾಗಿದೆ. ಅದು ಒಂದು ಅನಿಲ ದೈತ್ಯ ಎಂದು ತಿಳಿದು ಬಂದಿದೆ. JWST ಮಿಡ್-ಇನ್ಸಾರೆಡ್ ಇಸ್ಟ್ಯುಮೆಂಟ್ (MIRI) ನಿಂದ ತಿಳಿದು ಬಂದಿರುವ ಸಂಗತಿ ಏನೆಂದರೆ, ಎಸ್1 ಗ್ರಹದಲ್ಲಿ ಸದ್ಯ ಜೀವಿಗಳು ಇರಬಹುದಾದ ಅನುಮಾನಗಳು ಮೂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು ಅತ್ಯಾಧುನಿಕವಾದ ಹಾಗೂ ವಿಶ್ವದ ಶಕ್ತಿಶಾಲಿ ದೂರದರ್ಶಕ ಎಂದು ಕರೆಯಲಾಗುತ್ತದೆ. ಗ್ಯಾಲಕ್ಸಿ, ನಕ್ಷತ್ರಗಳು ಹಾಗೂ ಹೊಸ ವಾಸಯೋಗ್ಯ ಗ್ರಹಗಳು ಇರಬಹುದಾದ ಅವಕಾಶಗಳನ್ನು ಪರಿಶೀಲಿಸಲು ಈ ದೊಡ್ಡ ದೂರದರ್ಶಕ ಬಳಕೆಯಾಗುತ್ತಿದೆ. JWST ಅನ್ನು 2021 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಇನ್ನೂ 15 ವರ್ಷ ಅಧ್ಯಯನ ಮಾಡಲಿದೆ.
ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಇರಬಹುದಾದ ಗ್ರಹವನ್ನು ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಇತ್ತೀಚೆಗೆ ಪತ್ತೆ ಹಚ್ಚಿದೆ.
ಈ ವಿಷಯವನ್ನು ನಾಸಾದ ವೆಬ್ಸೈಟ್ science.nasa.gov ದಲ್ಲಿ ಪ್ರಕಟಿಸಲಾಗಿದೆ. ಭೂಮಿಯಿಂದ ಕೇವಲ 4 ಜ್ಯೋತಿರ್ವಷ್ರಗಳ (light-years) ಅಂತರದಲ್ಲಿರುವ ‘ಆಲ್ಫಾ ಸೆಂಟೌರಿ’ ಎಂಬ ನಕ್ಷತ್ರ ಸಮೂಹದಲ್ಲಿನ ಸೂರ್ಯನಂತ ನಕ್ಷತ್ರವೊಂದನ್ನು ಭೂಮಿಯಂಥಹ ಗ್ರಹವೊಂದು ಸುತ್ತುತ್ತಿದೆ ಎಂದು ದೂರದರ್ಶಕ ಕಂಡುಕೊಂಡಿದೆ.
ಆಲ್ಫಾ ಸೆಂಟೌರಿ ನಕ್ಷತ್ರ ಸಮೂಹದಲ್ಲಿ ಕೇವಲ ಮೂರು ನಕ್ಷತ್ರಗಳಿವೆ. ಆ ಸಮೂದಲ್ಲಿ ‘ಆಲ್ಫಾ ಸೆಂಟೌರಿ-ಎ’, ‘ಆಲ್ಫಾ ಸೆಂಟೌರಿ– ಬಿ’ ಮತ್ತು ‘ಪ್ರಾಕ್ಸಿಮಾ ಸೆಂಟೌರಿ’ ಎಂಬ ಮೂರು ನಕ್ಷತ್ರಗಳಿವೆ.
ಸದ್ಯ ಸೂರ್ಯನಿಗೆ ಅತಿ ಹತ್ತಿರದ ನಕ್ಷತ್ರ ಎಂದು ‘ಪ್ರಾಕ್ಸಿಮಾ ಸೆಂಟೌರಿ’ಯನ್ನು ಗುರುತಿಸಲಾಗುತ್ತದೆ. ಇದು ಒಂದು ಕೆಂಪು ಕುಬ್ಬ ನಕ್ಷತ್ರವಾಗಿದ್ದು ಇಷ್ಟು ದಿನ ನಡೆದ ಸಂಶೋಧನೆಗಳು ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಮೂರು ಗ್ರಹಗಳು ಇರಬಹುದು ಎಂಬುದನ್ನು ಕಂಡುಕೊಂಡಿವೆಯಾದರೂ ಅವು ವಾಸಯೋಗ್ಯ ಎಂಬುದನ್ನು ಪತ್ತೆಹಚ್ಚಲಾಗಿಲ್ಲ. ಆದರೆ, ವಿಜ್ಞಾನಿಗಳಿಗೆ ಅಭೂತಪೂರ್ವ ಯಶಸ್ಸು ಎಂಬಂತೆ JWST ಈಗ ಫಲಿತಾಂಶ ನೀಡಿದೆ.
ದೂರದರ್ಶಕದ ಇತ್ತೀಚಿನ ಫಲಿತಾಂಶಗಳ ಪ್ರಕಾರ, ‘ಆಲ್ಫಾ ಸೆಂಟೌರಿ-ಎ’ ನಕ್ಷತ್ರದ ಗ್ರಹವಾಗಿ ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಗ್ರಹ ಕಂಡು ಬಂದಿದೆ. ಸದ್ಯ ಆ ಗ್ರಹಕ್ಕೆ ‘ಎಸ್ 1’ ಎಂದು ಹೆಸರಿಡಲಾಗಿದೆ. ಅದು ಒಂದು ಅನಿಲ ದೈತ್ಯ ಎಂದು ತಿಳಿದು ಬಂದಿದೆ.
JWST ಮಿಡ್-ಇನ್ಸಾರೆಡ್ ಇಸ್ಟ್ಯುಮೆಂಟ್ (MIRI) ನಿಂದ ತಿಳಿದು ಬಂದಿರುವ ಸಂಗತಿ ಏನೆಂದರೆ, ಎಸ್1 ಗ್ರಹದಲ್ಲಿ ಸದ್ಯ ಜೀವಿಗಳು ಇರಬಹುದಾದ ಅನುಮಾನಗಳು ಮೂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು ಅತ್ಯಾಧುನಿಕವಾದ ಹಾಗೂ ವಿಶ್ವದ ಶಕ್ತಿಶಾಲಿ ದೂರದರ್ಶಕ ಎಂದು ಕರೆಯಲಾಗುತ್ತದೆ. ಗ್ಯಾಲಕ್ಸಿ, ನಕ್ಷತ್ರಗಳು ಹಾಗೂ ಹೊಸ ವಾಸಯೋಗ್ಯ ಗ್ರಹಗಳು ಇರಬಹುದಾದ ಅವಕಾಶಗಳನ್ನು ಪರಿಶೀಲಿಸಲು ಈ ದೊಡ್ಡ ದೂರದರ್ಶಕ ಬಳಕೆಯಾಗುತ್ತಿದೆ.
JWST ಅನ್ನು 2021 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಇನ್ನೂ 15 ವರ್ಷ ಅಧ್ಯಯನ ಮಾಡಲಿದೆ.
ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಶುಲ್ಕ ನಿಯಂತ್ರಿಸಲು ಸರ್ಕಾರ ಪ್ರತ್ಯೇಕ ಶುಲ್ಕ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ ಆಯೋಗ ಶಿಫಾರಸು ಮಾಡಿದೆ.
ಖಾಸಗಿ ಶಾಲೆಗಳ ಜತೆಗೆ, ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನೂ ನಿಯಂತ್ರಿಸಬೇಕು. ಅದಕ್ಕಾಗಿ ಪ್ರತ್ಯೇಕ ನಿಯಂತ್ರಣ ಚೌಕಟ್ಟು ರೂಪಿಸಬೇಕು. ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು. ಶಿಕ್ಷಣದ ಖಾಸಗೀಕರಣವನ್ನು ತಡೆಯಬೇಕು. ಪಠ್ಯಪುಸ್ತಕಗಳಿಗಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್ಸಿಇಆರ್ಟಿ) ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ಪಠ್ಯ ವಿಷಯಗಳನ್ನು ಸ್ಥಳೀಯವಾಗಿಸಬೇಕು. ಶಾಲಾ ಶಿಕ್ಷಣಕ್ಕೆ ಪ್ರತ್ಯೇಕವಾದ ಸಮಗ್ರ ಪಠ್ಯಪುಸ್ತಕಗಳನ್ನು ರಚಿಸಬೇಕು ಎಂದು ಹೇಳಿದೆ.
ಎನ್ಇಪಿಯಲ್ಲಿ ತರಗತಿಗಳನ್ನು ಪೂರ್ವಪ್ರಾಥಮಿಕ ಒಳಗೊಂಡು 5ರವರೆಗೆ, 6ರಿಂದ 8, 9ರಿಂದ 12ನೇ ತರಗತಿ ಎಂದು ಮೂರು ಹಂತದ ವಿಂಗಡಣೆ ಮಾಡಲಾಗಿತ್ತು. ಎಸ್ಇಪಿ ಅದನ್ನು ಮಾರ್ಪಡಿಸಿ, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರತ್ಯೇಕಗೊಳಿಸಿದೆ. 1ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿಯನ್ನು ಎರಡು ಗುಂಪುಗಳಾಗಿ ವಿಂಗಡಿಸಿದೆ.
ಪರಿಣಾಮಕಾರಿ ಶಿಕ್ಷಣದ ಅನುಷ್ಠಾನಕ್ಕೆ ಕ್ಷೇತ್ರ ಶಿಕ್ಷಣ ವಲಯಕ್ಕೆ ಹೆಚ್ಚು ಅಧಿಕಾರ ನೀಡಬೇಕು. ಸಮಾನಾಂತರ ವಿಭಾಗಗಳನ್ನು ಆಯುಕ್ತಾಲಯದಲ್ಲಿ ವಿಲೀನಗೊಳಿಸಬೇಕು. ಭಾರತೀಯ ಜ್ಞಾನ ವ್ಯವಸ್ಥೆ ಕೋರ್ಸ್ಗಾಗಿ ಸಮಿತಿ ರಚಿಸಬೇಕು. ಜೀವಮಾನ ಕಲಿಕೆ ನಿರ್ದೇಶನಾಲಯ ಸ್ಥಾಪಿಸಬೇಕು. ರಾಜ್ಯ ಬಜೆಟ್ನ ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ಶೇ 30ರಷ್ಟು ಮೀಸಲಿಡಬೇಕು. ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಹಣ ಮೀಸಲಿಡಬೇಕು. ಸಂವಿಧಾನ ಮೌಲ್ಯ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲೂ ಆರಂಭಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದಲ್ಲಿ ಚಿನ್ನಾಭರಣ ಖರೀದಿಸುವ ಭರದಲ್ಲಿ ಉಷಾ ಎಂಬುವವರು ಅಂಗಡಿಯಲ್ಲೇ ಬಿಟ್ಟು ಹೋಗಿದ್ದ ಮಗುವನ್ನು ಸಿದ್ದಯ್ಯ ನಗರದ ಭವಾನಿ ಎಂಬುವವರು ರಕ್ಷಿಸಿ ಪೊಲೀಸ್ ಠಾಣೆಯಲ್ಲಿ ಮತ್ತೆ ಹಸ್ತಾಂತರಿಸಿದರು.
ನಗರದ ಗಾಂಧಿ ಬಜಾರ್ನ ಮಳಿಗೆಗೆ ಬಂದಿದ್ದ ಉಷಾ, ಎರಡೂವರೆ ವರ್ಷದ ಮಗಳು ಸುಪ್ರಿಯಾಳನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಮರೆತು ನಿರ್ಗಮಿಸಿದ್ದರು. ಮಗುವು ಅಳುತ್ತಿರುವುದನ್ನು ಕಂಡ ಭವಾನಿ ಸಂತೈಸಿದರು. ಪೋಷಕರು ಪತ್ತೆಯಾಗದ್ದರಿಂದ ತಮ್ಮೊಂದಿಗೆ ಕರೆದೊಯ್ದಿದ್ದರು.
ಮಗುವನ್ನು ಮಳಿಗೆಯಲ್ಲಿ ಮರೆತು ಬಂದಿರುವ ಸಂಗತಿಯನ್ನು ಮುಚ್ಚಿಟ್ಟ ತಾಯಿಯು, ಮಗು ಕಳುವಾಗಿದೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಡಿದಾಗ, ಮಗುವನ್ನು ಭವಾನಿ ಅವರು ಕರೆದೊಯ್ದಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಗಿತ್ತು. ಆಕೆಯೇ ಮಗುವನ್ನು ಅಪಹರಿಸಿದ್ದಾರೆಂದು ಭಾವಿಸಲಾಗಿತ್ತು.
ಆದರೆ, ಅವರು ಮಗುವಿಗೆ ಊಟ ಮಾಡಿಸಿ, ನಂತರ ಪೊಲೀಸರಿಗೆ ಒಪ್ಪಿಸಲು ಠಾಣೆಗೆ ಬಂದರು. ಆಗ, ‘ಮಗು ಅಪಹರಣವಾಗಿಲ್ಲ. ಬದಲಿಗೆ ತಾಯಿಯೇ ಮರೆತು ಬಂದಿದ್ದಾರೆ’ ಎಂಬುದು ದೃಢವಾಯಿತು. ವಿಷಯ ಮನವರಿಕೆಯಾದ ಪೊಲೀಸರು ಮಗುವನ್ನು ತಾಯಿಯ ಸುಪರ್ದಿಗೆ ನೀಡಿದರು.
ನವದೆಹಲಿ: ಶುಕ್ರವಾರ ಬೆಂಗಳೂರಿಗೆ (Bengaluru) ಬರುವ ಮುನ್ನ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆನ್ಲೈನ್ ಮೂಲಕ ದಾಖಲೆಗಳನ್ನು ಪ್ರಕಟಿಸಿದ ಅವರು, 2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರದ ದತ್ತಾಂಶಗಳನ್ನು ವಿಶ್ಲೇಷಿಸಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಅಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 16 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಅಚ್ಚರಿಯಾಗಿ ಸೋಲನ್ನು ಅನುಭವಿಸಿತು. ಹೀಗಾಗಿ ಕಡಿಮೆ ಅಂತರದಲ್ಲಿ ಸೋತ ಏಳು ಕ್ಷೇತ್ರಗಳ ಪೈಕಿ ಮಹಾದೇವಪುರ ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಈ ವೇಳೆ ಕಾಂಗ್ರೆಸ್ 1,15,586 ಮತಗಳನ್ನು ಪಡೆದರೆ, ಬಿಜೆಪಿ 2,29,632 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ಗಿಂತ ಬಿಜೆಪಿ 1,14,046 ಮತಗಳ ಬಹುಮತ ಪಡೆದುಕೊಂಡಿದೆ. ಈ ಮತಗಳಲ್ಲಿ 11,965 ನಕಲಿ ಮತದಾರರು, 40,009 ನಕಲಿ ವಿಳಾಸದ ಮತಗಳು, ಒಂದೇ ವಿಳಾಸದಲ್ಲಿ ಹತ್ತಾರು ಮತಗಳಿರುವಂತಹ 10,452 ಮತಗಳು, ಫೋಟೋ ಇಲ್ಲದಿರುವ 4,132 ಹಾಗೂ ಫಾರಂ 6 ದುರ್ಬಳಕೆಯಾದ 33,692 ಮತಗಳಿವೆ ಸ್ಫೋಟಕ ಆರೋಪ ಮಾಡಿದರು.
ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಚುನಾವಣೆ ಸೇರಿ ಹಲವೆಡೆ ಮತಗಳ್ಳತನ ಆಗಿದೆ. ಇನ್ನೂ ಕಳೆದ ಐದು ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ. ಸಂಜೆ ಐದು ಗಂಟೆಯ ಬಳಿಕ ಅತಿ ಹೆಚ್ಚು ಮತದಾನವಾಗುತ್ತದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಿದರೆ ನಮಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಯೋಗ ನಮಗೆ ಮತದಾರರ ಪಟ್ಟಿ ನೀಡಲು ನಿರಾಕರಿಸಿದೆ. ಅದಲ್ಲದೇ ರಾಜಕೀಯ ಪಕ್ಷಗಳಿಗೂ ಕೂಡ ಮತದಾರರ ಪಟ್ಟಿ ನೀಡಿಲ್ಲ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಗ್ರಹಿಸಿದ್ದಾರೆ.
ದೇಶದಾದ್ಯಂತ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ಪ್ರತಿಪಾದಿಸಿರುವ ರಾಹುಲ್, ಇದು ಸಂವಿಧಾನ ಹಾಗೂ ರಾಷ್ಟ್ರದ ಸಮಗ್ರತೆಯ ವಿರುದ್ಧದ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂಬುದನ್ನು ಆಯೋಗಕ್ಕೆ ನೆನಪಿಸಲು ಬಯಸುವುದಾಗಿಯೂ ಹೇಳಿದ್ದಾರೆ.