Tag: ಮುಖ್ಯ ಸುದ್ದಿ

  • ಶೀಘ್ರ ತೂಕ ಇಳಿಸುವ ಡಯೆಟ್ ಆರೋಗ್ಯಕ್ಕೆ ಅಪಾಯಕಾರಿ: 
ಅಡ್ಡ ಪರಿಣಾಮಗಳೇನು? 
ಡಾ। ಲೀನಾ ಸಾಜು

    ಶೀಘ್ರ ತೂಕ ಇಳಿಸುವ ಡಯೆಟ್ ಆರೋಗ್ಯಕ್ಕೆ ಅಪಾಯಕಾರಿ: ಅಡ್ಡ ಪರಿಣಾಮಗಳೇನು? ಡಾ। ಲೀನಾ ಸಾಜು

    ಸಮೀಕೃತ ಆಹಾರವನ್ನು ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳು

    ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗುತ್ತದೆ.

    ಶರೀರ ಭಾರವನ್ನು ನಿಯಂತ್ರಿಸುವುದಕ್ಕೆ ಹೆಚ್ಚು ಸುಲಭವಾಗುತ್ತದೆ.

    ಮಧುಮೇಹ, ಹೃದ್ರೋಗ ಮುಂತಾದ ಜೀವನಶೈಲಿ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.

    ಮನಸ್ಸಿಗೆ ಹೆಚ್ಚು ಉಲ್ಲಾಸ ಉಂಟಾಗುತ್ತದೆ.

    ಪಥ್ಯದ (ಡಯಟ್) ಅಡ್ಡಪರಿಣಾಮಗಳು:

    ಅನಾರೋಗ್ಯಕರವಾದ ಆಹಾರಕ್ರಮಗಳು ಅಥವಾ ಕೊಬ್ಬಿರುವ ಆಹಾರವು ದೇಹಭಾರವು ಹೆಚ್ಚಾಗಲು ಮತ್ತು ದೀರ್ಘಕಾಲ ರೋಗಗಳಿಗೆ ಕಾರಣವಾಗುತ್ತದೆ. ಜನರು ತ್ವರಿತ. ಫಲಿತಾಂಶ ಬಯಸುವವರಾಗಿರುತ್ತಾರೆ. ಹೊಸ ಡಯಟ್ ಪ್ಲಾನ್‌ಗಳು ಅವರನ್ನು ಶೀಘ್ರ ಆಕರ್ಷಿಸುತ್ತದೆ. ಅವರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುವುದಿಲ್ಲ. ಆದುದರಿಂದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳಲ್ಲಿ, ಆನ್‌ಲೈನ್ ಫ್ಲಾಟ್‌ಫಾರ್ಮ್ಗಳಲ್ಲಿ ಕಾಣಿಸುವ ಆಹಾರ ಪಥ್ಯಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇದು ಪ್ರಯೋಜನಕ್ಕಿಂತ ಹೆಚ್ಚು ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.

    ವೇಗವಾಗಿ ಶರೀರ ಭಾರತವನ್ನು ಇಳಿಸಲಿಕ್ಕಿರುವ ಪಥ್ಯಗಳು ದೇಹದ ಆರೋಗ್ಯಕ್ಕೆ ಬಹಳ ಹಾನಿಕರ. ವೇಗವಾಗಿ ಶರೀರ ಭಾರವನ್ನು ಕಡಿಮೆ ಮಾಡಲು ಹೊರಟರೆ ಪಿತ್ತಕೋಶದಲ್ಲಿ ಕಲ್ಲುಗಳುಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಧಾನ್ಯಗಳು, ಹಸಿರು ತರಕಾರಿಗಳು, ಹಣ್ಣುಗಳು, ಹಾಲು ಮುಂತಾದ ಕಾರ್ಬೋ ಹೈಡ್ರೇಡ್‌ಗಳು ಇರುವ ಆಹಾರವನ್ನು ಬಿಟ್ಟು ಬಿಟ್ಟರೆ ಮಲಬದ್ಧತೆ, ಬಲಹೀನತೆ, ಆಯಾಸ, ಕೂದಲು ಉದುರುವುದು, ಎಲುಬಿನ ಸಾಂಧ್ಯತೆಯು ಕಡಿಮೆಯಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮುಂತಾದವುಗಳ ಸಾಧ್ಯತೆ ಹೆಚ್ಚುತ್ತದೆ.

    ಒಬ್ಬರಿಗೆ ಸೂಕ್ತವಾದ ಆಹಾರ ಪದ್ಧತಿ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ದೇಹ ಪ್ರಕೃತಿ ಮತ್ತು ರೋಗಗಳಿಗೆ ಅನುಗುಣವಾಗಿ ಯಾವ ರೀತಿಯ ಆಹಾರವನ್ನು ತಿನ್ನಬೇಕೆಂದು ಡಯಟೀಶಿಯನ್‌ಗಳನ್ನು ಸಮೀಪಿಸಿ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

    ಸಸ್ಯಾಹಾರಿ ಮತ್ತು ಮಾಂಸಹಾರಿ ಡಯಟ್‌ಗಳು (ಪಥ್ಯ)

    ಶರೀರದ ತೂಕ ಕಡಿಮೆ ಮಾಡಲು ಏನು ಒಳ್ಳೆಯದು?

    ಸಸ್ಯಾಹಾರವಾದರೂ, ಮಾಂಸಾಹಾರವಾದರೂ ಎಲ್ಲರ ಮುಖ್ಯ ಉದ್ದೇಶ ದೇಹದ ತೂಕವನ್ನು ಕಡಿಮೆ ಮಾಡುವುದೇ ಆಗಿರುತ್ತದೆ. ಸಸ್ಯಾಹಾರ ಮಾಂಸಾಹಾರ ಮನುಷ್ಯನ ವೈಯಕ್ತಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯಿಂದ ಬರುತ್ತದೆ. ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

    ಸಸ್ಯಾಹಾರದ ಪ್ರಯೋಜನ ಮತ್ತು ಕೆಡುಕುಗಳು

    ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ ಲಭ್ಯವಾಗುವುದರಿಂದ ಸಸ್ಯಾಹಾರ ಸೇವಿಸುವುದರಿಂದ ಪೋಷಕಾಂಶಗಳು ಲಭಿಸಲು ಮತ್ತು ಹಸಿವು ನೀಗಲು, ಸಂತೃಪ್ತಿ ಸಿಗಲು ಕಾರಣವಾಗುತ್ತದೆ. ವಿಟಮಿನ್ ಸಿ. ವಿಟಮಿನ್ ಇ. ಫಾರಿಕ್ ಆಸಿಡ್, ಪೊಟಾಶಿಯಮ್, ಮೆಗ್ನೇಶಯಿಮ್, ಕಾರೇಡಿನೋಯ್ಡಾ, ಫ್ಲೋವನೋಯ್ಡ್ ಮುಂತಾದವುಗಳು ಸಸ್ಯಾಹಾರದಿಂದಲೇ ಲಭಿಸುತ್ತವೆ.

    ಬೇಳೆಕಾಳುಗಳು, ದಾನ್ಯಗಳು, ಕಡಲೆ ಅಪೂರ್ಣವಾದುದಾಗಿದೆ. ಇದರಲ್ಲಿ ಒಂದೋ ಅದಕ್ಕಿಂತ ಹೆಚ್ಚು ಅಮಿನೊ ಆ್ಯಸಿಡ್‌ಗಳು ಇರುವುದಿಲ್ಲ. ಧಾನ್ಯಗಳಲ್ಲಿ ಲೈಸಿನ್, ಪ್ರೆಯೋನಿಸ್, ಟ್ರಿಸ್ಟೋಪೆನ್ ಮುಂತಾದವುಗಳ ಕೊರತೆ ಇದೆ. ಬೇಳೆಕಾಳುಗಳಲ್ಲಿ ಮೆಥಿಯೋನಿಲ್, ಲೈಸಿಲ್ ಮುಂತಾದ ಅಮಿನೋ ಆಸಿಡ್‌ಗಳು ಇರುವುದಿಲ್ಲ. ಸಸ್ಯಾಹಾರಿಗಳಲ್ಲಿ ವಿಟಮಿನ್ ಬಿ12 ಕೊರತೆ ಮತ್ತು ಒಮೆಗಾ- 3ರ ಕೊರತೆಯು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

    ಮಾಂಸಾಹಾರದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು

    ಬಿ12, ಕಬ್ಬಿಣ, ಸತು ಮತ್ತು ಒಮೆಗಾ- 3 ಕೊಲ್ಸಿನಾಮ್ಲಗಳಂತಹ ಜೈವಿಕ ಮೂಲಕ ಪ್ರೊಟೀನ್‌ಗಳು ಪ್ರಾಣಿ ಉತ್ಪನ್ನಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಈ ಪೋಷಕಾಂಶಗಳು ಸ್ನಾಯುಗಳ ಚಟುವಟಿಕೆ, ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಒಟ್ಟು ಆರೋಗ್ಯವನ್ನು ಉತ್ತಮಪಡಿಸುತ್ತದೆ. ಜೊತೆಗೆ ಲೀನ್ ಮಾಂಸವನ್ನು ಸೇವಿಸುವುದರಿಂದ ಶರೀರ ಭಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಆದರೆ ಮಾಂಸಹಾರದಲ್ಲಿ ಸೇರಿಕೊಂಡಿರುವ ಕೊಬ್ಬಿನಾಂಶ ದೇಹತೂಕವನ್ನು ಹೆಚ್ಚಿಸುತ್ತದೆ. ಹೃದ್ರೋಗ ಸಾಧ್ಯತೆಗಳು, ಬೊಜ್ಜು, ರಕ್ತದೊತ್ತಡ ಹೆಚ್ಚಲು, ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆರೋಗ್ಯವನ್ನು ಚೆನ್ನಾಗಿರಿಸಲು ಸಸ್ಯಾಹಾರಿಗಳಾದರೂ, ಮಾಂಸಾಹಾರಿಗಳಾದರೂ ನಿಯಂತ್ರಿತ ರೀತಿಯಲ್ಲಿ ಆಹಾರವನ್ನು ಕ್ರಮಬದ್ಧಗೊಳಿಸುವುದು ಬಹಳ ಮುಖ್ಯ.

    ಅತ್ಯುತ್ತಮ ಆಹಾರ ಯೋಜನೆಯನ್ನು ಆರಿಸುವುದು ಹೇಗೆ?

    ನಿಮ್ಮ ಆಹಾರದಲ್ಲಿ ಈ ಕೆಳಗಿನ ಆಹಾರಗಳು ಸೇರಿವೆಯೇ ಎಂದು ನಿರ್ಣಯಿಸಿ.

    ಸ್ಥಿರವಾಗಿ ಸೇವಿಸಲು ಮತ್ತು ರೂಢಿಗೊಳಿಸಲು ಸಾಧ್ಯವಾಗುವ ಆಹಾರ ಕ್ರಮ.

    ದೈಹಿಕ ಸ್ಥಿತಿ ಮತ್ತು ಆದ್ಯತೆಯ ಆಹಾರ ಪದಾರ್ಥಗಳನ್ನು ಪರಿಗಣಿಸಿ ಆಹಾರ ಪದ್ಧತಿ ರೂಪಿಸುವುದು.

    ಆಹಾರ ಗುಂಪುಗಳು (ತರಕಾರಿ, ಹಣ್ಣುಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಮಾಂಸ, ಮೀನು ಮತ್ತು ಡೈರಿ

    ಉತ್ಪನ್ನಗಳು ಮತ್ತು ಬೀಜಗಳು) ಸೇರಿದಂತೆ ಸಮತೋಲಿತ ಮತ್ತು ವೈವಿದ್ಯಮಯ ಆಹಾರ

    ಶರೀರಕ್ಕೆ ಅಗತ್ಯವಾದ ಶಕ್ತಿಗೆ ಬೇಕಾದ ಪ್ರೊಟೀನ್, ಪಿಷ್ಠ ಮತ್ತು ಉತ್ತಮ ಕೊಬ್ಬುಗಳು ಇರುವಂತಹ ಆಹಾರ.

    ಆರೋಗ್ಯಪೂರ್ಣವಾದ ಆಹಾರ ಕ್ರಮವನ್ನು ಕರಾರುವಾಕ್ಕಾಗಿ ಸೂಚಿಸುವ ಶಿಫಾರಸುಗಳನ್ನು ಆಧರಿಸಿದ ಆಹಾರ

    ಕ್ರಮ.

    ಶರೀರವನ್ನು ಆರೋಗ್ಯದಿಂದಿರಿಸಲು ಕೆಲವು ಸಲಹೆಗಳು

    ನೀವು ಸೇವಿಸುತ್ತಿರುವ ಆಹಾರದಲ್ಲಿ ಯಾವ ಪೋಷಕಾಂಶಗಳಿವೆ ಎಂಬುವುದರ ಬಗ್ಗೆ ಅರಿವಿರಲಿ.

    ಆಸ್ವಾದಿಸುತ್ತಾ ತಿನ್ನುವುದು ಮುಖ್ಯ. ಆಹಾರ ಪದ್ಧತಿ ಶಿಕ್ಷೆಯಂತೆ ಭಾಸವಾದರೆ ಅದನ್ನು ಹೆಚ್ಚು ಕಾಲ

    ಮುಂದುವರಿಸಿಕೊAಡು ಹೋಗಲು ಸಾಧ್ಯವಾಗುವುದಿಲ್ಲ.

    ಯಾವುದೇ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದಕ್ಕಿಂತ ಮಿತವಾದ ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು

    ಅನುಸರಿಸುವುದು ಉತ್ತಮ.

    ಉಗುರು ಬೆಚ್ಚಗಿನ ನೀರಿನಿಂದ ದಿನವನ್ನು ಆರಂಭಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

    ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಬೆಳಿಗ್ಗೆ 9 ಗಂಟೆಯ ಮೊದಲು ಉಪಹಾರ. ಮಧ್ಯಾಹ್ನ 1.30ಕ್ಕೆ ಮೊದಲು

    ಮಧ್ಯಾಹ್ನದ ಊಟ ಮತ್ತು ರಾತ್ರಿ 8.30ಕ್ಕಿಂತ ಮೊದಲು ರಾತ್ರಿಯ ಊಟ ಮುಗಿಸಲು ಪ್ರಯತ್ನಿಸಿ.

    ಮಲಗುವುದಕ್ಕಿಂತ ಕನಿಷ್ಟ ಎರಡು ಗಂಟೆಗಳ ಮೊದಲು ಊಟ ಮುಗಿಸಿ.

    ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿರಿ.

    ವ್ಯಾಯಾಮ, ನಿದ್ರೆ ಮತ್ತು ನೀರಿನ ಸೇವನೆಯನ್ನು ಸರಿಯಾದ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಟ

    8-12 ಗ್ಲಾಸ್ ನೀರು ಕುಡಿಯಬೇಕು.

    ಹೊರಗಿನ ಆಹಾರವನ್ನು ಸಾಧ್ಯವಾದಷ್ಟು ತಪ್ಪಿಸಿ.

    ಆಹಾರವನ್ನು ನಿಧಾನವಾಗಿ ಸೇವಿಸಬೇಕು ಮತ್ತು ಚೆನ್ನಾಗಿ ಅಗಿಯಬೇಕು. ಇದು ಹೆಚ್ಚು ತಿನ್ನುವುದರಿಂದ

    ತಡೆಯುತ್ತದೆ ಮತ್ತು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.

    ಟಿ.ವಿ. ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸವನ್ನು ತೊರೆಯಿರಿ.

    ಇಂದು ಪ್ರಚಾರದಲ್ಲಿರುವ ವಿವಿಧ ರೀತಿಯ ಡಯಟ್ ಪ್ಲಾನ್‌ಗಳು

    1. ಕಿಟೋ ಡಯಟ್‌

    ಇದು ಕಡಿಮೆ ಪ್ರಮಾಣದಲ್ಲಿ ಪಿಷ್ಟ ಸೇವಿಸುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಹೊಂದಿರುವ ಆಹಾರ ಕ್ರಮ.

    ಕೀಟೋ ಡಯಟ್‌ನ ಪ್ರಯೋಜನಗಳು:

    ಔಷಧಗಳಿಗೆ ಪ್ರತಿಕ್ರಿಯಿಸದ ಅಪಸ್ಮಾರ ರೋಗಿಗಳಿಗೆ ಅನುಕೂಲಕರ ಡಯಟ್.

    ಹಸಿವನ್ನು ನಿಯಂತ್ರಿಸುತ್ತದೆ.

    ಶೀಘ್ರವಾಗಿ ದೇಹತೂಕ ಕಡಿಮೆ ಮಾಡಲು ಸಹಾಯಕ.

    ಕಿಟೋ ಡಯಟ್‌ನ ದುಷ್ಪರಿಣಾಮಗಳು

    ಯೂರಿಕ್ ಆ್ಯಸಿಡ್, ಎಲ್.ಡಿ.ಎಲ್. ಕೊಲೆಸ್ಟಾçಲ್, ಹೃದ್ರೋಗದ ಹೆಚ್ಚಳಕ್ಕೆ ಕಾರಣವಾಗುತ್ತದೆ.

    ಆಸ್ಟಿಯೇ ಪೊರೋಸಿಸ್, ಮೂತ್ರಪಿಂಡದ ಕಾಯಿಲೆಗಳಂತಹ ರೋಗಗಳಿಗೆ ಕಾರಣವಾಗುತ್ತದೆ.

    ದೀರ್ಘಕಾಲ ಇದನ್ನು ಅನುಸರಿಸುವುದು ಒಳ್ಳೆಯದಲ್ಲ.

    2. ಮೆಡಿಟರೇನಿಯನ್ ಡಯಟ್:

    ನ್ಯಾಚುರೇಟೆಡ್ ಕೊಬ್ಬುಗಳ (ಕೆಂಪು ಮಾಂಸ, ಬೆಣ್ಣೆ) ಬದಲಾಗಿ ಅಪರ್ಯಾಪ್ತ ಕೊಬ್ಬುಗಳನ್ನು (ಆಲಿವ್ ಎಣ್ಣೆ, ಬೀಜಗಳು, ಮೀನುಗಳು) ಬಳಸಲಾಗುತ್ತದೆ. ಹಣ್ಣುಗಳು, ಹಸಿರು ತರಕಾರಿಗಳು, ದಾನ್ಯಗಳು, ಬೀಜಗಳು ಮುಂತಾದವುಗಳನ್ನು ಒಳಗೊಂಡ ಪೋಷಕಾಂಶಗಳಿರುವ ಆಹಾರ ಕ್ರಮ.

    ಮೆಡಿಟರೇನಿಯನ್ ಡಯಟ್‌ನ ಪ್ರಯೋಜನಗಳು:

    ಎದೆಯುರಿ ಕಡಿಮೆ ಮಾಡುತ್ತದೆ.

    ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

    ಹೃದ್ರೋಗ, ಪಾರ್ಶ್ವವಾಯು ಮುಂತಾದವುಗಳನ್ನು ತಡೆಯುತ್ತದೆ.

    ಬೊಜ್ಜು, ಮಧುಮೇಹ, ಕೊಲೆಸ್ಟಾçಲ್ ಹೆಚ್ಚುವುದು, ರಕ್ತದೊತ್ತಡ ಹೆಚ್ಚುವುದು ಮುಂತಾದವುಗಳ ಸಾಧ್ಯತೆಯನ್ನು

    ಕಡಿಮೆ ಮಾಡುತ್ತದೆ.

    ಇದರ ದುಷ್ಪರಿಣಾಮಗಳು

    ಪ್ಯಾಂಕ್ರಿಯಾಟೈಸಿಸ್, ಗ್ಯಾಸ್ಟೊçÃ, ಈಸೋ ಫೇಜಿಯಲ್ ರಿಫ್ಲೆಕ್ಟ್ ಡಿಸೀಸ್ ಮುಂತಾದ ಕಾಯಿಲೆಗಳು ಇರುವವರಿಗೆ ಸೂಕ್ತವಲ್ಲ.

    3. ವೀಗನ್ ಡಯಟ್: ಮಾಂಸದ

    ಜೊತೆಗೆ ಡೈರಿ ಉತ್ಪನ್ನಗಳು, ಮೊಟ್ಟೆಗಳು, ಜಿಲಾಟಿನ್ ಮತ್ತು ಜೇನು ತುಪ್ಪಂದAತಹ ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣ ತ್ಯಜಿಸಲಾಗುತ್ತದೆ. ಇದಕ್ಕೆ ಬದಲಾಗಿ ಸೋಯಾ ಉತ್ಪನ್ನಗಳು, ಬೀಜಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಹಣ್ಣುಗಳನ್ನು ಈ ಆಹಾರದಲ್ಲಿ ಸೇರಿಸಲಾಗುತ್ತದೆ.

    ವೀಗನ್ ಡಯಟ್‌ನ ಪ್ರಯೋಜನಗಳು:

    ಸಸ್ಯಾಹಾರಿ ಆಹಾರ ಕ್ರಮವು ಹೃದ್ರೋಗ ಮತ್ತು ಮಧುಮೇಹದ ಟೈಪ್ 2 ಅಪಾಯವನ್ನು ಕಡಿಮೆ ಮಾಡುತ್ತದೆ.

    ವೀಗನ್ ಡಯಟ್‌ನ ದುಷ್ಪರಿಣಾಮಗಳು

    ವಿಟಮಿನ್ ಬಿ12 ಮತ್ತು ಕಬ್ಬಿಣಾಂಶದAತಹ ಪೋಷಕಾಂಶಗಳ ಕೊರತೆ ಸಂಭವಿಸಬಹುದು.

    4. ಮಧ್ಯಂತರ ಉಪವಾಸ (ಇಂಟರ್ ಮೀಡಿಯೇಟ್ ಫಾಸ್ಟಿಂಗ್).

    ಇದು ನಿರ್ದಿಷ್ಟ ಸಮಯದಲ್ಲಿ ಊಟ ಮಾಡಿ ಉಳಿದ ಸಮಯವನ್ನು ಉಪವಾಸದಲ್ಲಿ ಕಳೆಯುವ ವಿಧಾನವಾಗಿದೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದು. ಪ್ರತಿದಿನ ಸಮಯ ನಿರ್ಬಂಧಿತ ಆಹಾರ ಸೇವನೆ. ನಿದ್ರೆ ಸೇರಿದಂತೆ ದಿನಕ್ಕೆ 16-18 ಗಂಟೆಗಳ ಕಾಲ ಉಪವಾಸ. ಉಳಿದ 6-8 ಗಂಟೆಗಳ ಕಾಲ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಪ್ರೋಟೀನ್ ಒಳಗೊಂಡ ಆಹಾರವನ್ನು ಸೇವಿಸಲಾಗುತ್ತದೆ. ವಾರದಲ್ಲಿ ಕೆಲವು ದಿನ ಉಪವಾಸ. ವಾರದಲ್ಲಿ ಎರಡು ದಿನ ಉಪವಾಸ. ಉಳಿದ 5 ದಿನ ಸಾಮಾನ್ಯ ಆಹಾರ ಸೇವನೆ.

    ಇದರ ಪ್ರಯೋಜನಗಳು:

    ದೇಹದ ತೂಕ ಕಡಿಮೆ ಮಾಡಲು ಸಹಾಯಕ

    ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.

    ಉರಿಯೂತವನ್ನು ಕಡಿಮೆ ಮಾಡುತ್ತದೆ.

    ಇನ್ಸುಲಿನ್, ಸಂವೇದನಾಶೀಲತೆ, ಜೀರ್ಣಕ್ರಿಯೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

    ಇದರ ದುಷ್ಪರಿಣಾಮಗಳು:

    ಇದು ಉತ್ತಮ ಪೋಷಣೆ ಮತ್ತು ಆರೋಗ್ಯವಂತ ಜನರಿಗೆ ಸುರಕ್ಷಿತವಾಗಿದ್ದರೂ ಎಲ್ಲರಿಗೂ ಸೂಕ್ತವಲ್ಲ. ಇದು ತಲೆನೋವು ಮತ್ತು ಆಯಾಸ ನಿದ್ರಾಹೀನತೆಗೆ ಕಾರಣವಾಗಬಲ್ಲದು.

  • “ಅಪ್ಪಾ ನನ್ನನ್ನು ಕ್ಷಮಿಸಿ” 
Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ ನನ್ನನ್ನು ಕ್ಷಮಿಸಿ” Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಬದುಕು ಮುಂದುವರಿಸಲು ಸಾಧ್ಯವಿಲ್ಲ” ಇದು ನವ ವಿವಾಹಿತೆ ರಿಧನ್ಯಾ ತನ್ನ ಸಾವಿನ ಮೊದಲು ತಂದೆಗೆ ಕಳಿಸಿದ ಧ್ವನಿ ಸಂದೇಶದ ಚುಟುಕು.

    ತಮಿಳುನಾಡಿನ ತಿರುಪುರ ಜಿಲ್ಲೆಯ 27 ವರ್ಷದ ನವವಿವಾಹಿತೆ ರಿಧನ್ಯಾ ಜೂನ್ 28 ರಂದು ದಾಂಪತ್ಯದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಘಟನೆ ತಮಿಳುನಾಡಿನೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಅವಳು ತನ್ನ ಸಾವಿಗೆ ಮೊದಲು ತಂದೆಗೆ ಕಳಿಸಿದ್ದ ಹೃದಯವೇ ಒಡೆಯುವಂತಹ ಧ್ವನಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಮೃತರಾದ ರಿಧನ್ಯಾ, 2025ರ ಏಪ್ರಿಲ್ 11ರಂದು ಕವಿನ್ ಕುಮಾರ್ (28) ಎಂಬವರೊಂದಿಗೆ ವಿವಾಹವಾಗಿದ್ದರು. ವಿವಾಹಕ್ಕಾಗಿ ಅವರ ಕುಟುಂಬವು ಸುಮಾರು 100 ಪವನ್ ಚಿನ್ನ (800 ಗ್ರಾಂ) ಹಾಗೂ 70 ಲಕ್ಷ ಮೌಲ್ಯದ ವೋಲ್ವೋ ಕಾರ್ ವರದಕ್ಷಿಣೆ ರೂಪದಲ್ಲಿ ನೀಡಿದ್ದರೂ, ಪುನಹ 500 ಪವನ್ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಅವರ ಪತಿಯ ಕುಟುಂಬದವರು ನಿರಂತರ ಕಿರುಕುಳಗಳು ನೀಡುತ್ತಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ.

    “ಅವಳನ್ನು ಗಂಟೆಗಟ್ಟಲೇ ನಿಲ್ಲಿಸಿಟ್ಟು, ಊಟ ಕೊಡದೆ ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.” “ವಿವಾಹವು ಅವಳಿಗೆ ಸಂತೋಷ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಅವಳಿಗೆ ಹಿಂಸೆಯೊಂದಿಗೆ ಅಂತ್ಯಕ್ಕೆ ಕಾರಣವಾಯಿತು” ಎಂದು ಆಕೆಯ ತಂದೆ ದಿ ಇಂಡಿಯನ್ ಎಕ್ಸ್ಪ್ರೆಸ್‌ಗೆ ತಿಳಿಸಿದ್ದಾರೆ.
    ಜೂನ್ 28ರಂದು ರಿಧನ್ಯಾ ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಹೇಳಿ ಹೊರಟು, ಕಾರನ್ನು ಮಂಡಿಪಾಳ್ಯಮ್ನಲ್ಲಿ ನಿಲ್ಲಿಸಿ ಸಾಮಾನ್ಯವಾಗಿ ಗ್ರಾಮೀಣ ಜನರು ಆತ್ಮಹತ್ಯೆಗೆ ಬಳಸುವ ವಿಷ ಪದಾರ್ಥವನ್ನು ಖರೀದಿಸಿದಳು ಎಂದು
    ದಿ ನ್ಯೂಸ್ ಮಿನಿಟ್‌ನಲ್ಲಿ ವರದಿಯಾಗಿದೆ.

    ವಿಷ ಸೇವಿಸಿ ಅರೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಆಕೆಯನ್ನು ದಾರಿಹೋಕರು ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಮೃತಪಟ್ಟಿದ್ದಳು.
    ಸಾವಿಗೆ ಮುನ್ನ ಆ ಹೆಣ್ಣು ಮಗಳು ತಂದೆಗೆ ವಾಟ್ಸಾಪ್ ಮೂಲಕ ಏಳು ಧ್ವನಿಸಂದೇಶಗಳನ್ನು ಕಳಿಸಿದ್ದಳು.. ಅವುಗಳಲ್ಲಿ ಒಂದು
    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಮುಂದುವರಿಸಿ ಬದುಕುವುದು ಸಾಧ್ಯವಿಲ್ಲ” ಎಂದು ರಿಧನ್ಯಾಳ ರೋದನ.”

    ಸಾರ್ವಜನಿಕರ ಪ್ರತಿಭಟನೆ ಹಾಗೂ ಮಾಧ್ಯಮದ ಒತ್ತಡದಿಂದಾಗಿ, ಸೇವೂರು ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿ ಅವರ ಮೇಲೆ IPಅ ಸೆಕ್ಷನ್ 498 A, 304 B ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (ಹಿಂದುಸ್ತಾನ್ ಟೈಮ್ಸ್).ವಿವಾಹದ ಸಮಯದಲ್ಲಿ ನಡೆದ ಹಣಕಾಸು ಮತ್ತು ವಸ್ತು ವಿನಿಮಯಗಳ ಕುರಿತು ಆದಾಯ ವಿಭಾಗ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ವರದಕ್ಷಿಣೆ ನಿಷೇಧ ಕಾನೂನು 1961ರಲ್ಲಿ ಜಾರಿಗೆ ಬಂದರೂ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 6,500 ವರದಕ್ಷಿಣೆ ಸಂಬಂಧಿತ ಸಾವುಗಳ ವರದಿಯಾಗುತ್ತಿವೆ. (ದಿ ನ್ಯೂಸ್ ಮಿನಿಟ್). 2022ರಲ್ಲಿ ಕೇವಲ ತಮಿಳುನಾಡಿನಲ್ಲಿ ಮಾತ್ರ 29 ಪ್ರಕರಣಗಳು ದಾಖಲಾಗಿವೆ (The CSR Journal)

    “ಇದು ಬರೇ ಚಿನ್ನ ಅಥವಾ ಐಶಾರಾಮಿ ಕಾರಿನ ವಿಷಯವಲ್ಲ” ಎನ್ನುತ್ತಾರೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ರಾಜನ್. “ಎಷ್ಟೇ ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳಿಗಾದರೂ ಶೋಷಣೆಯಿಂದ ರಕ್ಷಣೆ ಸಿಗುವುದಿಲ್ಲ. ರಿಧನ್ಯಾಳ ಅಂತಿಮ ಧ್ವನಿ ಸಂದೇಶಗಳು- ಕ್ಷಮಾಪಣೆಯ ನೋವಿನ ಧ್ವನಿ- ಈ ರಾಷ್ಟ್ರವನ್ನು ಎಚ್ಚರಿಸಬೇಕು” (ದಿ ಇಂಡಿಯನ್ ಎಕ್ಸ್ಪ್ರೆಸ್).

    ಮಹಿಳಾ ಹಕ್ಕು ಹೋರಾಟಗಾರರು ಅಧಿಕಾರಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ವಿಧಿಸಬೇಕೆಂದು ಹಾಗೂ ಮಹಿಳೆಯರಿಗಾಗಿ ಜಿಲ್ಲಾಮಟ್ಟದ ದೂರು ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ..
    ಈ ಘಟನೆ ಭಾರತದೆಲ್ಲೆಡೆ ಭಾವನಾತ್ಮಕ, ನೋವಿನ ಹಾಗೂ ಚೀತ್ಕಾರದ ಪ್ರತಿಧ್ವನಿಯನ್ನು ಉಂಟುಮಾಡಿದೆ. ಹಣವಿರುವ ಕುಟುಂಬದಿಂದ ಬಂದಿದ್ದರೂ ರಿಧನ್ಯಾಳಿಗೆ ವರದಕ್ಷಿಣೆಯ ಶಾಪದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಪ್ರಕರಣವು ಎಲ್ಲ ವರ್ಗಗಳಲ್ಲಿಯೂ ಶೋಷಣೆಯ ಆಳವನ್ನು ತೋರಿಸುವ ಸಂಕೇತವಾಗಿದೆ.

    ಸಾಮಾಜಿಕ ಮಾಧ್ಯಮಗಳಲ್ಲಿ Justice For Ridhanya ಮತ್ತು End Dowry Deaths ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ನಟರು, ಹಕ್ಕು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಎಲ್ಲರೂ ನ್ಯಾಯ ಮತ್ತು ಸಕಾರಾತ್ಮಕ ಬದಲಾವಣೆಗೆ ಬೊಬ್ಬಿಡುತ್ತಿದ್ದಾರೆ.

    ವರದಕ್ಷಿಣೆ ಸಂಬಂಧಿಸಿದ ಸಾವುಗಳು ಭಾರತದಲ್ಲಿ ಬೃಹತ್ ಸಮಸ್ಯೆಯಾಗಿ ಉಳಿದಿವೆ. ಪಿತೃಪ್ರಧಾನ ರೂಢಿಗಳು, ಕಳಪೆ ಕಾನೂನು ಜಾರಿ ಮತ್ತು ಆಳವಾಗಿ ಬೇರೂರಿರುವ ದುರಾಸೆಯಿಂದಾಗಿ ಇದಕ್ಕೆ ಕಾರಣವಾಗಿವೆ
    ಅವಿನಾಶಿಯಲ್ಲಿ ರಿಧನ್ಯಾಳ ಅಂತ್ಯಕ್ರಿಯೆಯ ವೇಳೆ ತಂದೆ ಕಣ್ಣೀರಿಡುತ್ತಾ ಹೇಳಿದರು: “ನಮಗೆ ಅವಳ ಸಂತೋಷ ಬೇಕಿತ್ತು. ಆದರೆ ನಮ್ಮ ಹೃದಯದಲ್ಲಿ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳೊಂದಿಗೆ ಸಹಿಸಲಾಗದ ನೋವಿನೊಂದಿಗೆ ಈಗ ಅವಳ ಸಮಾಧಿಯ ಮುಂದೆ ನಿಂತಿದ್ದೇವೆ.”

    ಭವಿಷ್ಯದಲ್ಲಿ ಆಶೆ ಮತ್ತು ಆಕಾಂಕ್ಷೆಗಳೊಂದಿಗೆ ಪತಿಯ ಮನೆಯಲ್ಲಿ ಬದುಕಬೇಕು ಎಂಬ ಮಗಳ ಕನಸುಗಳು ಬಾಲ್ಯದಿಂದ ಯೌವನದವರೆಗೆ ಯಾವುದೆ ನೋವೂ ಸಂಕಷ್ಟವೂ ಆಗದಂತೆ ತೊಟ್ಟಿಲಿನಿಂದ ಜೀವರಕ್ಷೆ ಮಾಡಿದ ತಂದೆ-ತಾಯಿಯ ಮಮತೆಯನ್ನೂ ಕೊನೆಗೆ ಬೆಂಕಿಗೆ ಆಹುತಿಯಾಗುತ್ತವೆಂದರೆ, ಅದನ್ನು ಹೇಗೆ ಸಹಿಸಬೇಕು?
    ನಮ್ಮ ಕಾನೂನು ವ್ಯವಸ್ಥೆ ಎಲ್ಲಿ ತಪ್ಪುತ್ತಿದೆ? ಮಾನವೀಯ ಮೌಲ್ಯಗಳು ಎಲ್ಲಿ ಕುಸಿದುಹೋಗಿವೆ? ಇವು ಚಿಂತನೆಗೆ ಗಂಭೀರ ಕಾರಣಗಳಾಗಿವೆ.

    ಉತ್ತಮ ನಾಗರಿಕರೆಂಬ ನಿಟ್ಟಿನಲ್ಲಿ, ಗೃಹಹಿಂಸೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಯಾರಾದರೂ ಕಂಡಾಗ, ತಕ್ಷಣವೇ ಸಂಬAಧಿತ ಸಹಾಯವಾಣಿಗೆ ಕರೆಮಾಡುವುದು ಅಥವಾ ಸ್ಥಳೀಯ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
    ಕುಲ್ಸೂಮ್ ಅಬೂಬಕರ್

  • ಗಾಝಾ ಮಕ್ಕಳ ಬಾಲ್ಯ ಭೀಕರ: 
ಗುಟುಕು ನೀರಿಗೂ ಹಾಹಾಕಾರ

    ಗಾಝಾ ಮಕ್ಕಳ ಬಾಲ್ಯ ಭೀಕರ: ಗುಟುಕು ನೀರಿಗೂ ಹಾಹಾಕಾರ

    ಸುಮಾರು ಎರಡು ವರ್ಷದಿಂದ ನಡೆಯುತ್ತಿರುವ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಿಂದ ಗಾಜಾ ಪಟ್ಟಿಯ ಲಕ್ಷಾಂತರ ಮಕ್ಕಳ ಬದುಕು ಜರ್ಜರಿತವಾಗಿದೆ; ಸ್ವಲ್ಪ ಆಹಾರ, ಗುಟುಕು ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಅವರ ಪೋಷಕರೇ ಉಳಿದಿಲ್ಲ. ಕಣ್ಣ ಮುಂದೆ ಪ್ರೀತಿಪಾತ್ರರ ಸಾವು, ಹಿಂಸಾಚಾರ, ಬಾಂಬ್, ಕ್ಷಿಪಣಿಗಳ ನಿರಂತರ ದಾಳಿ, ಯಾವ ಕ್ಷಣ ಏನಾಗುವುದೋ ಎನ್ನುವ ಭಯ, ಶಿಬಿರದಿಂದ ಶಿಬಿರಕ್ಕೆ ಅಲೆಯುವ ಬದುಕು; ಭೂಮಿಯ ಮೇಲೆ ಮನುಷ್ಯನಿಗೆ ಎದುರಾಗಬಹುದಾದ ಸಕಲ ಸವಾಲುಗಳನ್ನೂ, ಸಂಕಷ್ಟಗಳನ್ನೂ ಬಾಲ್ಯದಲ್ಲೇ ಅನುಭವಿಸುತ್ತಿರುವ, ಯುದ್ಧದ ಆತ್ಯಂತಿಕ ಪರಿಣಾಮಗಳಿಗೆ ಒಳಗಾಗಿರುವ ಗಾಜಾ ‍ಪಟ್ಟಿಯ ಮಕ್ಕಳ ದುರ್ಭರ ಪರಿಸ್ಥಿತಿಯನ್ನು ವಿವರಿಸಲು ಪದಗಳೇ ಲಭ್ಯವಿಲ್ಲ.

    ನಿನಗೆ ಕ್ರೆಯಾನ್‌ಗಳು ಬೇಕೋ, ಬ್ರೆಡ್ ಬೇಕೋ ಎಂದು ಕೇಳಿದರೆ, ನನ್ನ ಆಯ್ಕೆ ಬ್ರೆಡ್’ –

    ಇದು ಗಾಜಾ ಪಟ್ಟಿಯ 12 ವರ್ಷದ ರಹ್ಮಾ ಅಬು ಅಬೆದ್‌ಳ ಮಾತು. ಆಟ ಎಂದರೆ ಊಟ, ನಿದ್ದೆ ಎಲ್ಲವನ್ನೂ ಮರೆಯುವ ಮಕ್ಕಳ ನಡುವೆ ರಹ್ಮಾಳ ಉತ್ತರ ವಿಚಿತ್ರ ಅನ್ನಿಸಬಹುದು. ಆದರೆ, ರಹ್ಮಾಳ ಮಾತಿನಲ್ಲಿ ಗಾಜಾ ಪಟ್ಟಿಯ ಮಕ್ಕಳ ಭೀಕರ ಚಿತ್ರಣವಿದೆ.

    ಇಸ್ರೇಲ್–ಪ್ಯಾಲೆಸ್ಟೀನ್ ನಡುವಿನ ಸಂಘರ್ಷದಲ್ಲಿ ದಕ್ಷಿಣ ಗಾಜಾದಲ್ಲಿದ್ದ ರಹ್ಮಾಳ ಮನೆ ನೆಲಕಚ್ಚಿದೆ. ತನ್ನ ಐವರು ಒಡಹುಟ್ಟಿದವರು ಮತ್ತು ಪೋಷಕರೊಂದಿಗೆ ಆಕೆ ಮೀನುಗಾರಿಕಾ ಉಪಕರಣಗಳ ಶೆಡ್‌ನಲ್ಲಿ ವಾಸವಾಗಿದ್ದಾಳೆ. ರಹ್ಮಾ ಅವರಂತೆಯೇ ಅನೇಕ ನಿರಾಶ್ರಿತ ಕುಟುಂಬಗಳೂ ಅಲ್ಲಿ ಆಶ್ರಯ ಪಡೆದಿವೆ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವ ರಹ್ಮಾ, ದಿನದ ಬಹುಸಮಯವನ್ನು ಹತ್ತಿರದ ಸಮುದ್ರತೀರದಲ್ಲಿ ಕಳೆಯುತ್ತಾಳೆ. ಒಳ್ಳೆಯ ಬಟ್ಟೆ, ಒಳ್ಳೆಯ ಊಟ ಎಂದರೆ ಹೇಗಿರುತ್ತವೆ ಎನ್ನುವುದರ ನೆನಪೂ ಆಕೆಗೆ ಉಳಿದಿಲ್ಲ. ಮಾಂಸ ತಿನ್ನುವುದು ಅವಳಿಗೀಗ ಒಂದು ಕನಸು.

    ಇದು ರಹ್ಮಾ ಒಬ್ಬಳ ಸ್ಥಿತಿ ಅಲ್ಲ; ಗಾಜಾ ಪಟ್ಟಿಯಲ್ಲಿರುವ 11 ಲಕ್ಷ ಮಕ್ಕಳ ದಾರುಣ ಪರಿಸ್ಥಿತಿ. 22 ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಗಾಜಾದಲ್ಲಿ ಬಾಲ್ಯ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಇಲ್ಲಿನ ಬಹುತೇಕ ಮಕ್ಕಳು ಎರಡು ವರ್ಷದಿಂದ ಶಾಲೆಯ ಮುಖವನ್ನೇ ಕಂಡಿಲ್ಲ. ಈ ಭಾಗದ ಶೇ 90ರಷ್ಟು ಶಾಲೆಗಳು ನೆಲಕ್ಕುರುಳಿದ್ದರೆ, ಅಳಿದುಳಿದ ಶಾಲೆಗಳು ನಿರಾಶ್ರಿತ ಶಿಬಿರಗಳಾಗಿ ಮಾರ್ಪಟ್ಟಿವೆ.

    ಮಕ್ಕಳಿಗೆ ಹೊಟ್ಟೆತುಂಬ ಊಟ, ಮೈಮುಚ್ಚುವಷ್ಟು ಬಟ್ಟೆ, ದಾಹ ತೀರುವಷ್ಟು ಕುಡಿಯುವ ನೀರು ಕೂಡ ದುರ್ಲಭವಾಗಿವೆ; ಹಸಿವು, ಪದೇ ಪದೇ ಆಶ್ರಯ ಶಿಬಿರಗಳ ಬದಲಾವಣೆ, ಬಾಂಬ್, ಕ್ಷಿಪಣಿ ದಾಳಿಗಳಿಂದ ಅವರು ತೀವ್ರ ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಗಾಗಿದ್ದು, ಅವರಿಗೆ ತಕ್ಷಣ ವೈದ್ಯಕೀಯ ನೆರವು ಬೇಕಾಗಿದೆ. ಯುದ್ಧದ ಭೀಕರತೆ, ‌ಹಿಂಸಾಚಾರ, ಪ್ರೀತಿಪಾತ್ರರ ಸಾವು, ಭಯ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಇಲ್ಲಿನ ಮಕ್ಕಳು ಜೀವಚ್ಛವಗಳಾಗಿದ್ದಾರೆ.

    ಮಹಿಳೆಯರು, ಅದರಲ್ಲೂ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಗಾಜಾ ಪಟ್ಟಿಯಲ್ಲಿ ನಿರ್ಮಾಣವಾಗಿರುವ ಮಾನವೀಯ ಬಿಕ್ಕಟ್ಟಿನ ಮೊದಲ ಬಲಿಪಶುಗಳಾಗಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಅದಕ್ಕಿಂತ ಹೆಚ್ಚು ಮಂದಿ ಗಾಯಾಳುಗಳಾಗಿ ಸರಿಯಾದ ಚಿಕಿತ್ಸೆಯೂ ಸಿಗದೇ ನರಳುತ್ತಿದ್ದಾರೆ. ಯುದ್ಧದಿಂದ ನೇರವಾಗಿ ಸತ್ತವರಂತೆಯೇ ಊಟ ಸಿಗದೇ ಸತ್ತವರು, ಕಾಯಿಲೆಗಳಿಂದ ಸತ್ತ ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ. ಏರುತ್ತಿರುವ ಉಷ್ಣಾಂಶ ಕೂಡ ಅವರಿಗೆ ಶಾ‍ಪವಾಗಿ ಪರಿಣಮಿಸಿದೆ. ಸುಮಾರು 17 ಸಾವಿರ ಮಕ್ಕಳು ತಮ್ಮ ಪೋಷಕರಿಂದ ದೂರವಾಗಿದ್ದಾರೆ. ಇಸ್ರೇಲ್ 11 ತಿಂಗಳು ಆಹಾರ ಪದಾರ್ಥಗಳ ಸಾಗಣೆಯನ್ನು ನಿರ್ಬಂಧಿಸಿದ್ದರಿಂದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತೀವ್ರ ಅಪೌಷ್ಟಿಕತೆಯ ಅಪಾಯ ಎದುರಿಸುತ್ತಿದ್ದಾರೆ.

    ಆಹಾರ ಪದಾರ್ಥಗಳ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ. ಬೇಕರಿಗಳನ್ನು ಮುಚ್ಚಲಾಗಿದೆ. ಆಹಾರ ಧಾನ್ಯಗಳ ಬೆಲೆ ಶೇ 700ರಷ್ಟು ಹೆಚ್ಚಾಗಿದ್ದು, ಹಸಿವಿನ ವಿರಾಟ್ ಸ್ವರೂಪವು ಇಲ್ಲಿ ಕಂಡುಬರುತ್ತಿದೆ. ದಿನಕ್ಕೆ ಒಂದು ಹೊತ್ತು ಕೂಡ ಊಟ ಸಿಗದವರ ಸಂಖ್ಯೆ ದೊಡ್ಡದಿದೆ. ಹಸಿವು ತಾಳಲಾಗದೇ ಮಕ್ಕಳು ಆಕ್ರಂದನ ಮಾಡುವುದು, ‍ಪೋಷಕರು ತಮ್ಮ ಮಕ್ಕಳಿಗಾಗಿ ಹಿಡಿ ಅನ್ನ ನೀಡುವಂತೆ ಅಧಿಕಾರಿಗಳನ್ನು ಬೇಡಿಕೊಳ್ಳುವುದು ಇಲ್ಲಿ ಸಾಮಾನ್ಯ ದೃಶ್ಯಗಳಾಗಿವೆ.

    ಕೆಲವು ಸ್ವಯಂ ಸೇವಾ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ಇಲ್ಲಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ಶಮನ ಮಾಡಲು ಒಂದಿಷ್ಟು ಪ್ರಯತ್ನ ನಡೆಸುತ್ತಿವೆ. ಅದಕ್ಕಾಗಿ ಹಲವು ದೇಶಗಳು ಧನಸಹಾಯ ಮಾಡುತ್ತಿವೆ. ಆದರೆ, ಇಲ್ಲಿನ ಪರಿಸ್ಥಿತಿಯ ತೀವ್ರತೆಗೆ ತಕ್ಕಂತೆ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ರಕ್ಷಣಾ ಕಾರ್ಯದಲ್ಲಿ, ಆರೋಗ್ಯ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿಯೂ ಹಸಿದ ಹೊಟ್ಟೆಯಲ್ಲಿಯೇ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆಹಾರ ಪದಾರ್ಥ, ಪರಿಹಾರ ಸಾಮಗ್ರಿಯನ್ನು ಹೊತ್ತ ಟ್ರಕ್‌ಗಳು ಆಗಮಿಸುತ್ತಿದ್ದಂತೆಯೇ ಜನ ಅವುಗಳನ್ನು ಮುತ್ತಿಕೊಳ್ಳುವ, ನಿರಾಶ್ರಿತರಿಗೆ ಪೂರೈಸಲಾಗುವ ಆಹಾರಕ್ಕಾಗಿ ಪೈಪೋಟಿ ನಡೆಸುವ ಚಿತ್ರಗಳು, ವಿಡಿಯೊಗಳು ಅಲ್ಲಿನ ಪರಿಸ್ಥಿತಿಯ ತೀವ್ರತೆಯನ್ನು ಹೇಳುತ್ತಿವೆ.

    ಆಹಾರಕ್ಕಾಗಿ, ಜೀವ ಉಳಿಸುವಂಥ ಮಾನವೀಯ ನೆರವಿಗಾಗಿ ಆಸೆಯಿಂದ ಎದುರುನೋಡುತ್ತಿರುವ, ಎಲುಬಿನ ಹಂದರವಾಗಿರುವ ಮಕ್ಕಳ ದೈನ್ಯ, ನೋವು ತುಂಬಿದ ಕಣ್ಣುಗಳು ಗಾಜಾ ಪಟ್ಟಿಯ ಪರಿಸ್ಥಿತಿಗೆ, ಮನುಷ್ಯ ನಿರ್ಮಿತ ಬಿಕ್ಕಟ್ಟಿನ ತೀವ್ರತೆಗೆ, ದೇಶ–ದೇಶಗಳ ನಡುವಿನ ಯುದ್ಧ, ಅಸಹನೆ, ಆಕ್ರಮಣಗಳಿಂದ ಉಂಟಾಗುವ ಪರಿಣಾಮಗಳಿಗೆ ಸಂಕೇತದಂತಿವೆ.

    ನೆರವು ತಡೆಯುತ್ತಿರುವ ಇಸ್ರೇಲ್‌

    ಗಾಜಾ ಪಟ್ಟಿಯ ಶೇ 86ರಷ್ಟು ಭೂಭಾಗದ ಮೇಲೆ ನಿಯಂತ್ರಣ ಹೊಂದಿರುವ ಇಸ್ರೇಲ್‌, ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತ ಪ್ಯಾಲೆಸ್ಟೀನಿಯನ್ನರಿಗೆ ಆಹಾರ ವಸ್ತುಗಳು ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಪೂರೈಸುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕ ಆರೋಪಿಸಿದೆ. ಕಳೆದ ಕೆಲವು ವಾರಗಳಿಂದ ಗಾಜಾ ಪಟ್ಟಿಗೆ ಸ್ವಲ್ಪ ಪ್ರಮಾಣದಲ್ಲಿ ನೆರವು ತಲುಪುವುದಕ್ಕೆ ಮಾತ್ರ ಇಸ್ರೇಲ್‌ ಅವಕಾಶ ನೀಡಿದೆ. ಆದರೆ, ಅಲ್ಲಿ ಹೆಚ್ಚುತ್ತಿರುವ ಹಸಿವನ್ನು ತಡೆಯಲು ಇದು ಸಾಕಾಗುತ್ತಿಲ್ಲ ಎಂದು ಅದು ಹೇಳಿದೆ. ಯುದ್ಧ ಆರಂಭವಾದ, 2023ರ ಅಕ್ಟೋಬರ್‌ 7ಕ್ಕೂ ಮೊದಲು ಪ್ರತಿ ದಿನ 500 ಟ್ರಕ್‌ಗಳು ಗಾಜಾವನ್ನು ಪ್ರವೇಶಿಸುತ್ತಿದ್ದವು. ಅಂದರೆ ಪ್ರತಿ ತಿಂಗಳು 15 ಸಾವಿರದಷ್ಟು ಟ್ರಕ್‌ಗಳು ನೆರವಿನ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದವು. ಯುದ್ಧದ ನಂತರ ಇದಕ್ಕೆ ಇಸ್ರೇಲ್‌ ತಡೆಯೊಡ್ಡಿತ್ತು. ಕಡಿಮೆ ಸಂಖ್ಯೆಯ ಟ್ರಕ್‌ಗಳಿಗಷ್ಟೇ ಅವಕಾಶ ನೀಡುತ್ತಿತ್ತು.

    ಈಗ ಅಂತರರಾಷ್ಟ್ರೀಯ ಒತ್ತಡದ ಬಳಿಕ ಆಹಾರ ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳಿಗೆ ಗಾಜಾದತ್ತ ತೆರಳಲು ಮತ್ತು ವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಅಗತ್ಯ ವಸ್ತುಗಳನ್ನು ನಿರಾಶ್ರಿತ ಶಿಬಿರಗಳ ವ್ಯಾಪ್ತಿಯಲ್ಲಿ ಹಾಕಲು ಇಸ್ರೇಲ್‌ ಅವಕಾಶ ನೀಡಿದೆ ಎಂದು ವರದಿಯಾಗಿದೆ.

    ಚಿಕಿತ್ಸೆಗಾಗಿ ಬ್ರಿಟನ್‌ಗೆ

    ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮತ್ತು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 30ರಿಂದ 50 ಮಕ್ಕಳನ್ನು ಮುಂದಿನ ವಾರಗಳಲ್ಲಿ ಗಾಜಾದಿಂದ ಬ್ರಿಟನ್‌ಗೆ ಕರೆದುಕೊಂಡು ಬಂದು ಸರ್ಕಾರ ಚಿಕಿತ್ಸೆ ನೀಡಲಿದೆ ಎಂದು ಬಿಬಿಸಿ ವರದಿ ಮಾಡಿದೆ.

    ಹಮಾಸ್‌ ನೇತೃತ್ವದ ಆರೋಗ್ಯ ಸಚಿವಾಲಯದ ವೈದ್ಯರು ಆಯ್ಕೆ ಮಾಡಿದ ಮಕ್ಕಳನ್ನು ಕರೆದುಕೊಂಡು ಬಂದು ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ಪ್ರಯಾಣದ ಸಮನ್ವಯವನ್ನು ವಿಶ್ವ ಆರೋಗ್ಯ ಸಂಸ್ಥೆ ಮಾಡಲಿದೆ. 

    ಅಮೆರಿಕದ ಮೌನಕ್ಕೆ ಅತೃಪ್ತಿ

    ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಉಕ್ರೇನ್‌ ಸೈನಿಕರು ಹಾಗೂ ಜನರು ಸಾಯುತ್ತಿರುವುದರ ಬಗ್ಗೆ ಮಾತನಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೌನ ತಾಳಿದ್ದಾರೆ. ಬದಲಿಗೆ, ಅಮೆರಿಕ ಸರ್ಕಾರ ಇಸ್ರೇಲ್‌ ಅನ್ನು ಬೆಂಬಲಿಸುತ್ತಿರುವುದು ಪ್ಯಾಲೆಸ್ಟೀನ್‌ನ ಬೆಂಬಲಕ್ಕೆ ನಿಂತಿರುವ ರಾಷ್ಟ್ರಗಳು ಹಾಗೂ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

    ಆಧಾರ: ಇಂಟರ್‌ನ್ಯಾಷನಲ್ ರೆಸ್ಕ್ಯೂಕಮಿಟಿ, ಬಿಬಿಸಿ, ರಾಯಿಟರ್ಸ್‌, ವಿಶ್ವಸಂಸ್ಥೆಯ ವರದಿಗಳು, ದಿ ನ್ಯೂಯಾರ್ಕ್‌ ಟೈಮ್ಸ್‌

  • ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: 
ಇವರ ಮಧ್ಯವಿರುವ ಸಂಬಂಧವೇನು..?

    ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: ಇವರ ಮಧ್ಯವಿರುವ ಸಂಬಂಧವೇನು..?

    ಓದುಗರೇ! ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಧರ್ಮ ಎಂದು ಕಚ್ಚಾಡುತ್ತಿರುವ ಈ ಸಮಾಜದಲ್ಲಿ ಎರಡು ಬೇರೆ ಧರ್ಮಗಳಿಗೆ ಸೇರಿದ ಕುಟುಂಬಗಳು ಅನ್ಯೋನ್ಯವಾಗಿ ಬಾಳುತ್ತಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚುತ್ತಿದ್ದೇನೆ. ಬಳಗವು ಜಸಿಂತ ಮತ್ತು ನಸೀಮ್ ಎಂಬ ಇಬ್ಬರು ಮಹಿಳೆಯರಿಗೆ ಭೇಟಿ ಮಾಡಿತು.

    ಬಳಗ : ಜಸಿಂತ, ನೀವು ಮತ್ತು ನಸೀಮ್ ಬೇರೆ ಧರ್ಮಕ್ಕೆ ಸೇರಿದವರಾಗಿ ಇಷ್ಟು ಪ್ರೀತಿ ಮತ್ತು ಅನ್ಯೋನ್ಯವಾಗಿ ಬಾಳಲು ಹೇಗೆ ಸಾಧ್ಯ?

    ಜಸಿಂತ : ನನ್ನ ಅತ್ತಿಗೆ ನಸೀಮ ತುಂಬ ಒಳ್ಳೆಯವರು. ಅವರು ಅತ್ತಿಗೆ ಮಾತ್ರವಾಗಿರದೆ ನನ್ನ ತಂಗಿಯೂ ಆಗಿದ್ದಾರೆ. ತಂಗಿಗಿಂತಲೂ ಆಪ್ತಳು ಎಂದು ಹೇಳಿದರೆ ತಪ್ಪಾಗಲಾರದು. ಅವಳ ಒಳ್ಳೆಯತನ ನಮಗೆ ಪ್ರೀತಿ ಮತ್ತು ಅನ್ಯೋನ್ಯವಾಗಿರಲು ಸಹಕರಿಸುತ್ತದೆ.

    ಬಳಗ : ನಿಮ್ಮ ಅಣ್ಣ ಬೇರೆ ಧರ್ಮದ ಹುಡುಗಿಯನ್ನು ವಿವಾಹ ಆದಾಗ ಮನೆಯಲ್ಲಿ ಸಮಸ್ಯೆ ಆಗಲಿಲ್ಲವೇ?

    ಜಸಿಂತ : ಅಪ್ಪ-ಅಮ್ಮ ಮತ್ತು ನಮಗೆಲ್ಲರಿಗೂ ವಿರೋಧವಿತ್ತು. ಇಂತಹ ವಿವಾಹಕ್ಕೆ ಯಾರು ಒಪ್ಪುತ್ತಾರೆ? ಆದರೆ ಅಣ್ಣ ತನ್ನಿಷ್ಟದಿಂದ ತನ್ನ ಧರ್ಮವನ್ನು ಬದಲಿಸಿರುವುದರಿಂದ ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಮಾತನಾಡಿದರೆ ಎಲ್ಲರೂ ಬೇಸರ ಪಡುತ್ತಾರೆ ಎಂದು ಅಮ್ಮ ವಿರೋಧಿಸಿದಾಗ, ನಾವು ಯಾರು ವಿರೋಧಿಸಲಿಲ್ಲ. ಆದರೆ ಅಪ್ಪನಿಗೆ ಬಹಳ ಸಮಯದ ತನಕ ಬೇಸರವಿತ್ತು.

    ಬಳಗ : ಅಣ್ಣ ತನ್ನ ಧರ್ಮ ಬದಲಾಯಿಸಿದ ನಂತರ ಮೊದಲಿನಂತೆಯೇ ಇದ್ದಾರೆಯೆ? ಅಥವಾ ಬದಲಾಗಿದ್ದಾರೆಯೇ?

    ಜಸಿಂತ : ಇಲ್ಲಿ ಅಣ್ಣನು ಸ್ವಲ್ಪವೂ ಬದಲಾಗಲಿಲ್ಲ. ಮೊದಲಿಗಿಂತಲೂ ಹೆಚ್ಚು ನಿಕಟವಾದರು. ಅಪ್ಪ-ಅಮ್ಮನನ್ನು ನೋಡುವುದರಲ್ಲಿರಲಿ ಅಥವಾ ನಮ್ಮೊಂದಿಗಿನ ಸಂಬಂಧವು ಮೊದಲಿಗಿಂತ ಗಟ್ಟಿಯಾಯಿತು.

    ಬಳಗ : ನಸೀಮ, ನೀವು ಮತ್ತು ಬಿಲಾಲ್ ಪ್ರೀತಿಸಿ ಮದುವೆಯಾದದ್ದೇ?

    ನಸೀಮ : ಇಲ್ಲ. ನಮ್ಮದು ಅರೆಂಜ್ ಮ್ಯಾರೇಜ್. ನನ್ನ ಸಂಬಂಧಿಕರೊಬ್ಬರು ಬಿಲಾಲ್‌ರ ಸ್ನೇಹಿತರಾಗಿದ್ದರು. ಅವರು ಈ ಸಂಬಂಧವನ್ನು ಮಾಡಿಸಿದರು. ಅಮ್ಮ ಹುಡುಗಿಯನ್ನು ನೋಡಿ ಒಪ್ಪಿದರೆ, ನಾನು ವಿವಾಹ ಆಗುವುದು ಎಂದು ಬಿಲಾಲ್ ಹೇಳಿದರಿಂದ, ಅಮ್ಮ ನನ್ನನ್ನು ನೋಡಲು ಬಂದಿದ್ದರು.

    ಬಳಗ : ವಿವಾಹದ ನಂತರ ಅತ್ತೆ ಮನೆಗೆ ಹೋಗಿದ್ದೀರಾ?

    ನಸೀಮ : ಹೌದು, ಅಪ್ಪ-ಅಮ್ಮ ಮತ್ತು ಮನೆವರೆಲ್ಲರು ಬಹಳ ಸಂತೋಷದಿಂದ ಬರಮಾಡಿಕೊಂಡರು. ನಾನು ಅಮ್ಮನಿಲ್ಲದ ಹೆಣ್ಣು ಎಂದು ಅತ್ತೆ ನನ್ನನ್ನು, ನನ್ನ ಸಹೋದರ, ಸಹೋದರಿಯರನ್ನೂ ಪ್ರೀತಿಸುತ್ತಿದ್ದರು.

    ಬಳಗ: ನಿಮ್ಮ ಮತ್ತು ನಿಮ್ಮ ಅತ್ತೆ ಮನೆಯವರ ಸಂಬಂಧ ಹೇಗಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿಗಳು) ಬಹಳ ಉತ್ತಮ ಸಂಬಂಧ. ನಾದಿನಿ ಮೈದುನನವರೊಂದಿಗೂ ಉತ್ತಮ ಸಂಬಂಧindu ವಿದೆ. ನನ್ನ ಮನೆಯವರೊಂದಿಗೂ ಅವರ ಸಂಬಂಧ ಒಳ್ಳೆದಿದೆ. ನಮ್ಮ ಧರ್ಮ ಯಾವುತ್ತೂ ನಮ್ಮ ಅನ್ಯೋನ್ಯತೆಗೆ ಅಡ್ಡಿ ಬರಲಿಲ್ಲ.

    ಬಳಗ : ಜಸಿಂತ, ನಿಮ್ಮ ಅಣ್ಣ ಹಾಗೂ ಅತ್ತಿಗೆಯ ಸಂಬಂಧ ನಿಮ್ಮೊಂದಿಗೆ ಹೇಗಿದೆ?

    ಜಸಿಂತ : ಪ್ರೀತಿಯ ಸಂಬಂಧ. ಅಮ್ಮ ಜೀವಂತವಾಗಿರುವ ವರೆಗೆ ಅಮ್ಮನಿಗೆ ಎಲ್ಲ ರೀತಿಯಲ್ಲಿ ಸಹಕರಿಸಿದ್ದಾರೆ. ಅಮ್ಮನ ಯಾವುದೇ ಅಗತ್ಯದ ವಿಷಯದಲ್ಲಿ ಬೇಸರ ಪಡಿಸಲಿಲ್ಲ. ಮಾತ್ರವಲ್ಲದೇ ನಮ್ಮೆಲ್ಲರ ಅಗತ್ಯವನ್ನು ಕೇಳುವ ಮೊದಲೇ ಪೂರೈಸುತ್ತಾರೆ. ನನ್ನ ಆರೋಗ್ಯ ಸರಿ ಇಲ್ಲದಾಗಲೂ ಅಣ್ಣ ಅತ್ತಿಗೆ ನನ್ನನ್ನು ಬಿಡಲಿಲ್ಲ. ಈ ವಿಷಯದಲ್ಲಿ ನಸೀಮ ಎತ್ತಿದ ಕೈ. ನಸೀಮ ನಮಗೆ ಯಾರಿಗೂ ದೂರ ಮಾಡಲಿಲ್ಲ. ನಾವು, ಅವರು ಪರಸ್ಪರ ನಮ್ಮ ಮನೆಗಳಿಗೆ ಭೇಟಿ ಕೊಡುತ್ತೇವೆ.

    ಬಳಗ : ನಸೀಮ, ಬಿಲಾಲ್‌ರ ಸಹೋದರ ಸಹೋದರಿಯರೊಂದಿಗೆ ನಿಮ್ಮ ಸಂಬಂಧ ಹೇಗಿದೆ?

    ನಸೀಮ : ಒಂದು ಕುಟುಂಬ ಹೇಗಿರಬೇಕೋ ಹಾಗೆಯೇ ಇದೆ. ಕೆಲವು ತಿಂಗಳ ಹಿಂದೆ, ಅವರ ಓರ್ವ ಹಿರಿಯ ಸಹೋದರಿ ಗಲ್ಫ್ನಲ್ಲಿ 15 ದಿನ ನಮ್ಮೊಂದಿಗೆ ನಿಲ್ಲಲು ಬಂದವರು ಒಂದೂವರೆ ತಿಂಗಳು ನಮ್ಮೊಂದಿಗೆ ಇದ್ದು ಹೋದರು. ನಮ್ಮ ಮಕ್ಕಳು ಮತ್ತು ಅವರೆಲ್ಲರ ಮಕ್ಕಳೊಂದಿಗೆ ಉತ್ತಮ ಸಂಬಂಧ ಇದೆ. ಸುಖ-ದುಃಖಗಳಲ್ಲೆಲ್ಲ ಇಡೀ ಕುಟುಂಬ ಸೇರುತ್ತೇವೆ. ಪರಸ್ಪರ ಉಡುಗೊರೆ ಹಂಚುತ್ತೇವೆ ಮತ್ತು ಪರಸ್ಪರ ಸಹಕರಿಸುತ್ತೇವೆ ಕೂಡ.

    ಬಳಗ :ವಿವಾಹದ ಮೊದ ಮೊದಲು ಬಿಲಾಲ್ ತನ್ನ ಮನೆಯವರಿಗೆ ಸಹಕರಿಸುವಾಗ ನಿಮಗೆ ಬೇಸರ ಆಗುತ್ತಿತ್ತೇ

    ನಸೀಮ : ಇಲ್ಲ. ಸ್ವಲ್ಪನೂ ಇಲ್ಲ. ಕೆಲಸದ ನಿಬಿಢತೆಯಿಂದ ಬಿಲಾಲ್‌ಗೆ ಕೆಲವೊಮ್ಮೆ ಅಮ್ಮನಿಗೆ ಫೋನಾಯಿಸಲು ಅಥವಾ ಹಣ ಕಳುಹಿಸಲು ನೆನಪಿಲ್ಲದಾಗ, ನಾನು ಅವರಿಗೆ ನೆನಪಿಸುತ್ತೇನೆ. ಬಿಲಾಲ್ ಫೋನಾಯಿಸದಿದ್ದರೂ ನಾನು ಫೋನಾಯಿಸುತ್ತಾ ಇರುತ್ತೇನೆ. ಹಣ ಕಳುಹಿಸಲು ಬಿಲಾಲ್‌ಗೆ ಸಮಯ ಇರುವುದಿಲ್ಲವೆಂದು ನಾನೇ ಕಳುಹಿಸಲು ಆರಂಭಿಸಿದೆ. ಕ್ರಮೇಣ ಆ ಜವಾಬ್ದಾರಿಯನ್ನು ಬಿಲಾಲ್ ನನಗೆನೇ ವಹಿಸಿಕೊಟ್ಟರು. ಅವರ ಸಹೋದರ ಸಹೋದರಿಯರಿಗೆ ಹಣದ ಅಗತ್ಯ ಇದ್ದರೆ, ಅವರ ಮೊಬೈಲ್ ನೋಡಿ ನಾನೇ ಕಳುಹಿಸಿಕೊಡುತ್ತೇನೆ. ಅಮ್ಮನಿಗೆ ಕಳುಹಿಸುವ ಹಣ ನಾನು ವಹಿಸಿಕೊಂಡ ನಂತರ ಒಂದು ದಿನ ಕೂಡ ಲೇಟ್ ಮಾಡಲಿಲ್ಲ.

    ಬಳಗ : ಅಮ್ಮನ ನಿಧನದ ಸಮಯ ಅಣ್ಣ ಅತ್ತಿಗೆ ಬಂದಿದ್ದರೆ?

    ಜಸಿಂತ : ಅಮ್ಮ ಅನಾರೋಗ್ಯಗೊಂಡಾಗ ಅಣ್ಣ ಮತ್ತು ಅತ್ತಿಗೆಯನ್ನೇ ನೆನೆಯುತ್ತಿದ್ದರು. ಅಣ್ಣನಿಗೆ ಕೆಲಸದ ನಿಬಿಢತೆಯಿಂದ ಬರಲು ಆಗುತ್ತಿರದಿದ್ದರೂ ಅತ್ತಿಗೆ ಬರುತ್ತಿದ್ದರು. ನಿಧನದ ಸಮಯ ಕೂಡ ಅಮ್ಮ ಇವರಿಬ್ಬರನ್ನು ಕಾಯುತ್ತಿದ್ದರು. ನಸೀಮ- ಅಮ್ಮನ ಆರೋಗ್ಯ ಸರಿಯಿಲ್ಲ ಎಂದು ಕೇಳಿದ ತಕ್ಷಣ ನಾವು ಹೊರಟೆವು. ಆದರೆ… ಪ್ರಯಾಣ… ನಾವು ಮುಟ್ಟುವಷ್ಟರಲ್ಲಿ ಅಮ್ಮ ನಿಧನ ಹೊಂದಿದ್ದರು. ಬಿಲಾಲ್ ಹೆಚ್ಚಾಗಿ ಗಲ್ಫ್ನಲ್ಲಿರುವುದರಿಂದ ಇಲ್ಲಿಯ ವಿಷಯ ಅವರಿಗೆ ಗೊತ್ತಿಲ್ಲ. ಆದ್ದರಿಂದ ಅಮ್ಮನ ದೇಹವನ್ನು ಶವಾಗಾರದಲ್ಲಿಡುವ ವ್ಯವಸ್ಥೆ, ಅವರಿಗೆ ಉಡಿಸಲು ಸೀರೆ ಮತ್ತು ಹೂವು ಎಲ್ಲದರ ವ್ಯವಸ್ಥೆ ನಾನು ಮಾಡಿಕೊಂಡು ಮರುದಿನ ಮರಣವನ್ನು ಊರಿಗೆ ಕಳುಹಿಸಿದೆ. ಮತ್ತು ಹಿಂದಿನಿಂದ ನಾವು ಕೂಡ ಹೋದೆವು. ಜಸಿಂತ- ಅಮ್ಮ ಮರಣದ ತನಕ ನಮ್ಮೆಲ್ಲರೊಂದಿಗೆ ಹೇಳುತ್ತಿದ್ದರು ಏನೆಂದರೆ ನೀವೆಲ್ಲ ಸಹೋದರ-ಸಹೋದರಿಯರು ಒಂದಾಗಿ ಇರಬೇಕು. ಬೇರೆ ಬೇರೆ ಆಗಬಾರದು. ಈ ಅಣ್ಣ ಅತ್ತಿಗೆಯನ್ನು ದೂರ ಮಾಡಬಾರದು. ನಸೀಮ- ಬಿಲಾಲ್‌ರ ತಮ್ಮ ಜೋಸೆಫ್ ಅಂದರೆ ನಮ್ಮ ಮಕ್ಕಳಿಗೆ ಪಂಚ ಪ್ರಾಣ. ಅವರಿಗೂ ನಮ್ಮ ಮಕ್ಕಳೊಂದಿಗೆ ತುಂಬಾ ಪ್ರೀತಿ. ನಮ್ಮ ಊರಿಗೆ ಬಂದಾಗ, ನಮ್ಮ ಹೆಚ್ಚಿನ ಕೆಲಸ ಕಾರ್ಯಗಳಿಗೆ ಅವರು ನಮಗೆ ಸಹಕರಿಸುತ್ತಾರೆ. ಬಿಲಾಲ್ ನಮ್ಮೊಂದಿಗೆ ಬಾರದಿದ್ದರೂ ಅವರು ನಮ್ಮೊಂದಿಗೆ ಇರುತ್ತಾರೆ.

    ಬಳಗ : ಬಿಲಾಲ್‌ರೊಂದಿಗೆ ವಿವಾಹದ ನಂತರ ನಿಮ್ಮ ಜೀವನ ಹೇಗೆ ಸಾಗುತ್ತಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿ) ತುಂಬ ಒಳ್ಳೆಯ ಜೀವನ ಸಾಗಿಸುತ್ತಿದ್ದೇವೆ. ಅವರು ತುಂಬ ಶ್ರಮ ಜೀವಿ. ವಿವಾಹದ ಮೊದಲು ಇದ್ದ ಜೀವನ, ವಿವಾಹದ ನಂತರ ಸಂಪೂರ್ಣ ಬದಲಾಗಿದೆ. ನಾವು ಮಾತ್ರವಲ್ಲಿ ನಮ್ಮೊಂದಿಗೆ ನನ್ನ ಕುಟುಂಬ ಹಾಗೂ ಬಿಲಾಲ್‌ರ ಕುಟುಂಬವು ಉತ್ತಮ ಜೀವನ ಜೀವಿಸುತ್ತಿದ್ದೇವೆ.ind

  • ಕೈಬರಹದ ಕುರ್‌ಆನ್ ಅನಾವರಣಗೊಳಿಸಿದ ಪುತ್ತೂರಿನ ವಿದ್ಯಾರ್ಥಿನಿ: 
ಪೂರ್ಣಗೊಳಿಸಲು ತೆಗೆದುಕೊಂಡ ವರ್ಷಗಳೆಷ್ಟು..?

    ಕೈಬರಹದ ಕುರ್‌ಆನ್ ಅನಾವರಣಗೊಳಿಸಿದ ಪುತ್ತೂರಿನ ವಿದ್ಯಾರ್ಥಿನಿ: ಪೂರ್ಣಗೊಳಿಸಲು ತೆಗೆದುಕೊಂಡ ವರ್ಷಗಳೆಷ್ಟು..?

    ಪುತ್ತೂರು (ದಕ್ಷಿಣ ಕನ್ನಡ): ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್‌ ಆನ್‌ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.

    ಕುಂಬ್ರ ಮರ್ಕಝುಲ್‌ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್‌ ಅವರು ಪವಿತ್ರ ಕುರ್‌ಆನ್‌ನ 30 ಕಾಂಡಗಳನ್ನು ಕೈಯಲ್ಲಿ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಈ ಸಾಧನೆಯ ಹಿಂದೆ ಸುಮಾರು 5 ವರ್ಷಗಳ ನಿರಂತರ ಪರಿಶ್ರಮವಿದೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್‌ ಹಾಜಿ ಮತ್ತು ಝಹ್‌ರಾ ಜಾಸ್ಮಿನ್‌ ದಂಪತಿಯ ಪುತ್ರಿಯಾಗಿರುವ ಸಜ್‌ಲ ಅವರು ಕುರ್‌ಆನ್‌ ಬರವಣಿಗೆಯನ್ನು 2021ರ ಜನವರಿಯಲ್ಲಿ ಆರಂಭಿಸಿದ್ದರು. ಆಗ ಅವರು ಇದೇ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಹಳೆವಿದ್ಯಾರ್ಥಿಯಾಗಿದ್ದು, 2025ರ ಆಗಸ್ಟ್‌ನಲ್ಲಿ ಬರವಣಿಗೆ ಪೂರ್ಣಗೊಂಡಿದೆ.

    ಪ್ರವಾದಿ ಕಾಲದಲ್ಲಿ ಅವತೀರ್ಣಗೊಂಡ ಕುರ್‌ಆನ್‌ ಅನ್ನು ಆ ಕಾಲದ ಪಂಡಿತ ಶಿರೋಮಣಿಗಳು ಕೈ ಬರಹದ ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಪ್ರಸ್ತುತ ಮುದ್ರಣ ಸೌಲಭ್ಯ ಇದ್ದರೂ ಸಜ್‌ಲ ಅವರು ಕೈಯಲ್ಲಿ ಸ್ಫುಟವಾಗಿ ಬರೆದಿರುವುದು ಸಾಧನೆ ಎನಿಸಿದೆ. ಈ ಕೃತಿಯನ್ನು ಶನಿವಾರ ಕುಂಬ್ರದ ಮರ್ಕಝುಲ್‌ ಹುದಾ ಮಹಿಳಾ ಕಾಲೇಜಿನಲ್ಲಿ ಕೇರಳದ ಮರ್ಕಝ್ ನಾಲೇಜ್‌ ಸಿಟಿಯ ಮುರ್‌ ರಿಸ್‌ ಯಾಸೀನ್‌ ಸಖಾಫಿ ಅಲ್‌ ಅಝ್ಹರಿ ಅವರು ಲೋಕಾರ್ಪಣೆಗೊಳಿಸಿದರು.

    ಮರ್ಕಝುಲ್‌ ಹುದಾ ಮಹಿಳಾ ಕಾಲೇಜು ಅಧ್ಯಕ್ಷ ಅರಿಯಡ್ಕ ಅಬ್ದುಲ್‌ ರಹಿಮಾನ್‌ ಹಾಜಿ, ಷರೀಅತ್‌ ವಿಭಾಗದ ಪ್ರಾಂಶುಪಾಲ ವಳವೂರು ಮುಹಮ್ಮದ್‌ ಸಅದಿ, ಪದವಿ ವಿಭಾಗದ ಪ್ರಾಂಶುಪಾಲ ಮಹಮ್ಮದ್‌ ಮನ್ಸೂರ್‌ ಕಡಬ, ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.

    ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸುರು ಬಣ್ಣದ ಕಾಗದವನ್ನು ಬಳಸಿಕೊಳ್ಳಲಾಗಿದೆ. ಅಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದೆ ಸಲಾಗಿದೆ. ಬರೆದು ಮುಗಿಸಲು ಅವರು ಒಟ್ಟು 303 ದಿನಗಳನ್ನು ತೆಗೆದುಕೊಂಡಿದ್ದಾರೆ. ಒಂದು ಪುಟ ಬರೆಯಲು 4 ಗಂಟೆ ಬೇಕಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ 2 ಪುಟಗಳನ್ನು ಬರೆದಿದ್ದಾರೆ. ಒಟ್ಟಾರೆ ಬರೆದು ಮುಗಿಸಲು 2,416 ಗಂಟೆ ಬಳಕೆಯಾಗಿದೆ ಎಂದು ಸಜ್‌ಲ ತಿಳಿಸಿದ್ದಾರೆ.

  • “ಬ್ರಿಟಿಷರ ಆಮಿಷಕ್ಕೆ ಒಪ್ಪಿದರೆ ಮಕ್ಕಳ ಕತ್ತು ಹಿಸುಕಿ ಕೊಲ್ಲುವೆ” 
ಪುತ್ರರನ್ನು ದೇಶಕ್ಕಾಗಿ ಸಮರ್ಪಿಸಿದ ಬೀಅಮ್ಮರನ್ನು ನಾವು ಅರಿಯಲೇಬೇಕು

    “ಬ್ರಿಟಿಷರ ಆಮಿಷಕ್ಕೆ ಒಪ್ಪಿದರೆ ಮಕ್ಕಳ ಕತ್ತು ಹಿಸುಕಿ ಕೊಲ್ಲುವೆ” ಪುತ್ರರನ್ನು ದೇಶಕ್ಕಾಗಿ ಸಮರ್ಪಿಸಿದ ಬೀಅಮ್ಮರನ್ನು ನಾವು ಅರಿಯಲೇಬೇಕು

    ಬೀ ಅಮ್ಮ ಆಬಾದಿ ಬೇಗಮ್ (1852-1924)
    ಮೌಲಾನಾ ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿಯವರ ತಾಯಿ .ಬೀಅಮ್ಮರ ನೈಜ ಹೆಸರು ಆಬಾದಿ ಬೇಗಮ್ ಆಗಿತ್ತು. ಅವರ ಮೊಮ್ಮಕ್ಕಳೂ ಸೇರಿದಂತೆ ಎಲ್ಲರೂ ಅವರನ್ನು ಬೀಅಮ್ಮ ಎಂದೇ ಕರೆಯುತ್ತಿದ್ದರು.

    ಬೀಅಮ್ಮರ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬೀಅಮ್ಮರವರ 5ನೆಯ ವಯಸ್ಸಿನಲ್ಲಿ ಅವರ ತಂದೆ ನಿಧನ ಹೊಂದಿದರು. 28ನೆಯ ವಯಸ್ಸಿನಲ್ಲಿ, ಅವರ ಪತಿ ಅಬ್ದುಲ್ ಅಲಿ ಖಾನ್ ಪ್ಲೇಗ್ ರೋಗದಿಂದ ನಿಧನ ಹೊಂದಿದರು. ಚಿಕ್ಕ ವಯಸ್ಸಿ ನಲ್ಲಿಯೇ ಆಬಾದಿ ಬೇಗಮ್ ವಿಧವೆಯಾದರು. ಆರು ಗಂಡು ಮತ್ತು ಒಂದು ಹೆಣ್ಣು ಹೀಗೆ ಏಳು ಮಕ್ಕಳು ಇದ್ದರು.

    ಅವರು ಅಷ್ಟು ಸ್ಥಿತಿವಂತರೇನೂ ಆಗಿರಲಿಲ್ಲ. ಆದರೆ ಬೀ ಅಮ್ಮ ಧೃತಿಗೆಡಲಿಲ್ಲ. ಈ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿದರು. ತಮ್ಮ ಸರ್ವಸ್ವವನ್ನೂ ಮಕ್ಕಳ ಪಾಲನೆ, ಪೋಷಣೆಗಾಗಿ ಧಾರೆ ಎರೆದರು. ಇದ್ದ ದುಡ್ಡಿನಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರು. ಉನ್ನತ ಶಿಕ್ಷಣಕ್ಕಾಗಿ ಮುಹಮ್ಮದಲಿ ಮತ್ತು ಶೌಕತ್ ಅಲಿಯವರನ್ನು ಅಲೀಗಢದ ಎಮ್.ವಿ.ಓ. ಕಾಲೇಜಿಗೆ ಕಳುಹಿಸ ಬಯಸಿದಾಗ, ಸ್ವಲ್ಪ ಆರ್ಥಿಕ ಸಹಾಯ ನೀಡುತ್ತಿದ್ದ ಮಕ್ಕಳ ಚಿಕ್ಕಪ್ಪ, ಮಕ್ಕಳಿಗೆ “ಇಂಗ್ಲಿಷ್ ಶಿಕ್ಷಣ”ಕ್ಕಾಗಿ ಧನ ಸಹಾಯ ನೀಡಲು ನಿರಾಕರಿಸಿದರು. ಆದರೆ ಬೀ ಅಮ್ಮ ಇದಕ್ಕೆಲ್ಲಾ ಸೊಪ್ಪು ಹಾಕುವವರಾಗಿರಲಿಲ್ಲ. ತಮ್ಮ ಒಡವೆಗಳನ್ನು ಮಾರಿ ಮಕ್ಕಳ ಶಿಕ್ಷಣವನ್ನು ಮುಂದುವರಿಸಿದರು.

    1898ರಲ್ಲಿ ಮುಹಮ್ಮದಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಮುಹಮ್ಮದ್ ಅಲಿ ತಮ್ಮ ತಾಯಿಯವರ ಬಗ್ಗೆ ಈ ರೀತಿ ಹೇಳುತ್ತಿದ್ದರು: “ನನ್ನ ತಾಯಿ ವಿದ್ಯಾಭ್ಯಾಸ ಪಡೆದವರಾಗಿರಲಿಲ್ಲ. ಆದರೆ ಅವರಷ್ಟು ವ್ಯವಹಾರ ಚತುರೆಯನ್ನು ನಾನೆಲ್ಲೂ ಕಂಡಿಲ್ಲ.”

    ಒಂದು ಘಟನೆ ಇಲ್ಲಿ ಸ್ಮರಣೀಯವಾಗಿದೆ. ಗುಪ್ತಚರ ವಿಭಾಗದ ನಿರ್ದೇಶಕರಾಗಿದ್ದ ಸರ್ ಚಾರ್ಲ್ಸ್ ಕ್ಲೈವ್ ಲೆಂಡ್ (Sir Charles Clive Lend) ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಬ್ದುಲ್ ಮಜೀದ್‌ರ ಮುಖಾಂತರ ಅಲಿ ಸಹೋದರರಿಗೆ ಒಂದು ಪತ್ರವನ್ನು ರವಾನಿಸಿದರು. ಈ ಪತ್ರದಲ್ಲಿ ಬ್ರಿಟಿಷ್ ಸರಕಾರದ ಶರತ್ತುಗಳನ್ನು ಒಪ್ಪಿಕೊಂಡರೆ ಎರಡೂವರೆ ವರ್ಷಗಳ ಕಠಿಣ ಸೆರೆಮನೆಯ ಶಿಕ್ಷೆಯನ್ನು ಕೊನೆಗೊಳಿಸುವ ಪ್ರಸ್ತಾವನೆ ಇತ್ತು. ಮುಹಮ್ಮದಲಿ ಪತ್ರವನ್ನು ಓದಿದ ನಂತರ, ಕಾಗದದ ಮೇಲೆ ಏನೋ ಬರೆಯಲಾರಂಭಿಸಿದರು. ಅಲ್ಲಿಯೇ ಅಡ್ಡಾಡುತ್ತಿದ್ದ ಬೀಅಮ್ಮ ಡಿ.ಎಸ್.ಪಿ.ಯವರನ್ನು ಉದ್ದೇಶಿಸಿ ಹೇಳಿದರು: “ಸರಕಾರ ನನ್ನ ಮಕ್ಕಳನ್ನು ಬಿಡುಗಡೆಗೊಳಿಸಿ ಅವರಿಗೆ ನ್ಯಾಯ ಒದಗಿಸಲು ಮುಂದೆ ಬಂದಿರುವುದು ಸಂತೋಷದ ವಿಷಯ. ಕಳೆದ 30 ತಿಂಗಳಿನಿಂದ ಜೈಲಿನಲ್ಲಿ ಅವರು ಎಷ್ಟು ಸಂಕಷ್ಟಗಳಿಗೆ ಈಡಾಗಿದ್ದಾರೆ ಮತ್ತು ಎಷ್ಟು ಸಹನೆಯಿಂದ ಅವುಗಳನ್ನು ಎದುರಿಸಿದ್ದಾರೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಸರಕಾರ ಅವರೊಂದಿಗೆ ಕರಾರು ಮಾಡಿಕೊಳ್ಳ ಬಯಸಿದೆಯೆಂದು ನನ್ನ ಗಮನಕ್ಕೆ ಬಂದಿದೆ. ಮುಹಮ್ಮದಲಿ ಮತ್ತು ಶೌಕತ್‌ಅಲಿ ಇಸ್ಲಾಮಿನ ಸಿಪಾಯಿಗಳು, ಖಂಡಿತವಾಗಿ ಇಸ್ಲಾಮಿನ ಮತ್ತು ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಅವರು ಮಾಡಲಾರರು ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಜೈಲಿನಿಂದ ಬಿಡುಗಡೆ ಹೊಂದಲಿಕ್ಕಾಗಿ ಇಂತಹ ಕಾರ್ಯ ಮಾಡಲು ಅವರು ಮುಂದಾಗಿರುವರು ಎಂದು ನನಗೆ ತಿಳಿದು ಬಂದಲ್ಲಿ, ಅವರ ಕತ್ತು ಹಿಸುಕಿ ಕೊಲ್ಲುವಷ್ಟು ಶಕ್ತಿ ನನ್ನ ರಟ್ಟೆಗಳಲ್ಲಿ ಇನ್ನೂ ಇದೆ.”

    ಸ್ವಾತಂತ್ರ್ಯವೆಂಬುದು ಅಮೂಲ್ಯ ಸಂಪತ್ತು. ಅದನ್ನು ಪಡೆಯಲು ಮನುಷ್ಯನು ಯಾವುದೇ ಮಟ್ಟಕ್ಕೆ ಇಳಿಯಬಲ್ಲನು. ಅತ್ಯಂತ ಧೈರ್ಯ ಶಾಲಿಗಳ ಕಾಲುಗಳು ಕೆಲವೊಮ್ಮೆ ನಡುಗಿ ಹೋಗುತ್ತವೆ. ಬ್ರಿಟಿಷ್ ಸರಕಾರದ ಉನ್ನತ ಅಧಿಕಾರಿಯ ಎದುರು ಮೇಲಿನ ಮಾತುಗಳನ್ನು ಹೇಳಿದ ಬೀಅಮ್ಮನವರ ನಿಸ್ವಾರ್ಥ ದೇಶಪ್ರೇಮ ಎಂತಹವರನ್ನೂ ನಾಚಿಸುವಂತಿದೆ!

    ಸ್ವಾತಂತ್ರ್ಯ ಸಂಗ್ರಾಮದ ಕಾರ್ಯಕರ್ತರ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಈ ಬಗ್ಗೆ ಅವರು ಬರೆದಿದ್ದ ಪತ್ರ, ಅವರ ಮಾನವ ಪ್ರೇಮವನ್ನು ಎತ್ತಿ ತೋರಿಸುತ್ತದೆ. “ನನ್ನ ಮನಸ್ಸು ಜೈಲಿನಲ್ಲಿ ಕೊಳೆಯುತ್ತಿರುವ ಸಹಸ್ರಾರು ನಿರಪರಾಧಿ ಯುವಕರ ಬಗ್ಗೆ ರೋಧಿಸುತ್ತದೆ. ಜೀವನದ ಅವಶ್ಯಕತೆಳಿಗಾಗಿ ಸಂಪಾದನೆ ಮಾಡುವ ಸ್ವಾತಂತ್ರ್ಯವನ್ನು ಅವರು ಕಳೆದುಕೊಂಡಿದ್ದಾರೆ. ಹೋಂ ರೂಲ್ ಲೀಗ್ ಸಂಘಟನೆಯು ಪ್ರಮುಖ ಕೈದಿಗಳಲ್ಲದೇ, ಇತರ ಸುಮಾನ್ಯ ಕೈದಿಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿದೆಯೇ? ಅವರು ಮತ್ತು ಅವರ ಸಂಬಂಧಿಕರು ಹಸಿವೆಯಿಂದ ಏಕೆ ನರಳಬೇಕು? ಅವರ ಸಹಾಯಾರ್ಥ ಮನವಿ ಮಾಡಿದಲ್ಲಿ, ಭಾರತದ ಪ್ರತಿಯೊಂದು ಮನೆಯಿಂದಲೂ ಏನಾದರೂ ಸಹಾಯ, ಖಂಡಿತ ಒದಗಿ ಬರುತ್ತದೆಂಬ ವಿಶ್ವಾಸ ನನಗಿದೆ.”

    1917 ಡಿಸೆಂಬರ್ 18ರಂದು ಮಾಂಟಿಗೋರನ್ನು ಭೇಟಿ ಮಾಡಲು ನಿಯುಕ್ತಗೊಂಡಿದ್ದ ಭಾರತೀಯ ಮಹಿಳಾ ತಂಡದ ಸದಸ್ಯರಾಗಿದ್ದರು. 1917 ಡಿಸೆಂಬರ್ 12ರಂದು ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್‌ ಎರಡನೆಯ ಸಮ್ಮೇಳನದಲ್ಲಿ ಬೀಅಮ್ಮ ಉಪಸ್ಥಿತರಿದ್ದರು. ಬಿಳಿಯ ಬುರ್ಖಾ ಧರಿಸಿ, ಕೋಲು ಹಿಡಿದು ಸಭಾಂಗಣಕ್ಕೆ ಬಂದಾಗ, ಅವರ ಸಹಾಯಕ್ಕೆ ಶ್ರೀಮತಿ ಅನ್ನಿ ಬೆಸೆಂಟ್ ಧಾವಿಸಿದರು.

    ಅನ್ನಿ ಬೆಸೆಂಟ್ ಭಾಷಣ ಮಾಡುತ್ತಾ ಹೇಳಿದರು: ” ಮುಹಮ್ಮದಲಿ ಮತ್ತು ಶೌಕತ್ ಅಲಿಯವರ ಮಾತೆ ನಮ್ಮೊಂದಿಗೆ ಇದ್ದಾರೆ. ಅವರು ನೈಜ ಮುಸ್ಲಿಮರೂ, ನಿಷ್ಟಾವಂತ ದೇಶಪ್ರೇಮಿಯೂ ಆಗಿರುವರು, ಅವರಲ್ಲಿ ಮಾತೃ ವಾತ್ಸಲ್ಯವಿದ್ದರೂ, ಅವರ ಹೃದಯ ಸಿಂಹದ ಹೃದಯ. ಅವರಿಗೆ ದುಃಖ ಮತ್ತು ಸಂಕಟ ಬಾಧಿಸುವುದಿಲ್ಲ, ಅವರ ಮಕ್ಕಳು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವುದು ಅವರಿಗೆ ಹರ್ಷವನ್ನೊದಗಿಸಿದೆ…”

    1921 ಡಿಸೆಂಬರ್ 30ರಂದು ಅಹ್ಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ಬೀಅಮ್ಮ ವಹಿಸಿದ್ದರು. ಈ ಸಮ್ಮೇಳನದಲ್ಲಿ ಶ್ರೀಮತಿ ಕಸ್ತೂರ್‌ಬಾ ಗಾಂಧಿ, ಸರೋಜಿನಿ ನಾಯ್ಡು, ಬೇಗಮ್ ಹಝ್ರತ್ ಮೋಹಾನಿ, ಅನುಸೂಯ ಬಾಯಿ, ಬೇಗಮ್ ಸೈಫುದ್ದೀನ್ ಕೀಚಲು, ಶ್ರೀಮತಿ ಸರಳಾದೇವಿ ಮೊದಲಾದವರು ಇದ್ದರು.

    ಖಿಲಾಫತ್ ಚಳವಳಿಯಲ್ಲಿ ಬೀಅಮ್ಮ ವಹಿಸಿದ ಪಾತ್ರದ ಕುರಿತು ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದರು: “… ಅವರು ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಶ್ರಮವಹಿಸುತ್ತಿದ್ದರು. ಖಿಲಾಫತ್ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ದೇಶದಾದ್ಯಂತ ಸಂಚರಿಸಿದರು. ಬೀ ಅಮ್ಮ ಇಸ್ಲಾಮಿನ ಕಟ್ಟಾ ಅನುಯಾಯಿಗಳಾಗಿದ್ದರು. ಹಿಂದೂ-ಮುಸ್ಲಿಮ್ ಐಕ್ಯತೆ ಅವರಿಲ್ಲದೇ ಸಾಧ್ಯವಿರಲಿಲ್ಲ. ಇದಕ್ಕಾಗಿ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ…”
    1921ರಲ್ಲಿ ಅಲಿ ಸಹೋದರರ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಒಬ್ಬರು ‘ಸದಾಯ ಖಾತೂನ್'(ಮಹಿಳೆಯ ಧ್ವನಿ) ಎಂಬ ಶೀರ್ಷಿಕೆಯಡಿಯಲ್ಲಿ ಕವನವನ್ನು ರಚಿಸಿದರು. ಕೆಲವೇ ದಿನಗಳಲ್ಲಿ ಈ ಕವನ ಎಲ್ಲಾ ಜನರಿಗೂ ಸುಪರಿಚಿತವಾಯಿತು. ಇಂದಿಗೂ ಈ ಕವನ ಉರ್ದುವಲಯದಲ್ಲಿ ಪ್ರಸಿದ್ಧವಾಗಿದೆ. ಕವನ ಹೀಗಿದೆ:
    ಬೋಲಿ ಅಮ್ಮ ಮುಹಮ್ಮದಲಿ ಕೀ
    ಸಾಥ್ ತೇರೇ ಹೈ ಶೌಕತ್ ಅಲಿ ಭೀ
    ಜಾನ್ ಬೇಟಾ ಖಿಲಾಫತ್ ಪೆ ದೇ ದೋ
    ಜಾನ್ ಬೇಟಾ ಖಿಲಾಫತ್ ಪೆ ದೇದೋ.
    ಸಬರ್‌ಸೆ ಜೈಲ್ ಖಾನೆಮೆ ರಹನಾ
    ಕುಚ್ ಯೂ ಅಪ್ನಿ ಅಮ್ಮಾ ಕಾ ಕಹನಾ
    ಜೋ ಮುಸೀಬತ್ ಪಡೇ ಉಸ್‌ಕೋ ಸಹನಾ
    ಜಾನ್ ಬೇಟಾ ಖಿಲಾಫತ್ ದೇದೋ
    ಫಾಂಸಿ ಆಯೆ ಅಗರ್ ತುಮ್ ಕೋ ಜಾನಿ
    ಕಲಿಮಾ ಪಡ್‌ಪಡ್‌ಕೆ ಫಾಂಸಿ ಪೆ ಚಡ್ ನಾ
    ಮಾಂಗನಾ ಮತ್ ಹುಕೂಮತ್ ಸೆ ಪಾನಿ
    ಜಾನ್ ಬೇಟಾ ಖಿಲಾಫತ್ ಪೆ ದೇ ದೋ

    ಆಬಾದಿ ಬೇಗಮ್‌ರವರು ನವೆಂಬರ್ 1924ರಲ್ಲಿ ನಿಧನ ಹೊಂದಿದರು. ಅವರ ನಿಧನದ ಕುರಿತು ಗಾಂಧೀಜಿ ‘ಯಂಗ್ ಇಂಡಿಯಾ’ದಲ್ಲಿ ಈ ರೀತಿ ಬರೆದರು: “ಬೀ ಅಮ್ಮ ಇನ್ನಿಲ್ಲವೆಂದು ನಂಬುವುದು ಕಷ್ಟಕರವಾಗಿದೆ. ಅವರ ವ್ಯಕ್ತಿತ್ವದಿಂದ ಮತ್ತು ಸಾರ್ವಜನಿಕ ಸಭೆಗಳಲ್ಲಿ ಅವರ ಪ್ರಭಾವ ಪೂರ್ಣ ಭಾಷಣಗಳಿಂದ ಪ್ರಭಾವಿತರಾಗದೇ ಉಳಿದವರಾರೂ ಇಲ್ಲ. ಅವರ ನಿಧನದ ವೇಳೆ ಅವರ ಸನಿಹವಿದ್ದುದು ನನ್ನ ಅದೃಷ್ಟವಾಗಿತ್ತು…”
    ಸ್ವಾಮಿ ಶ್ರದ್ಧಾನಂದ ಸರಸ್ವತಿಯವರು ದೆಹಲಿಯ ಪಟೌಡಿ ಹೌಸ್‌ನಲ್ಲಿ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಪಾಲ್ಗೊಳ್ಳುತ್ತಾ ಈ ರೀತಿ ಹೇಳಿದ್ದರು.”… ಹಿಂದೂ-ಮುಸ್ಲಿಮ್ ಐಕ್ಯತೆಗಾಗಿ ಯಾರಲ್ಲಿಯಾದರೂ ಉತ್ಕಟ ಅಭಿಲಾಷೆ ಇದ್ದರೆ, ಅದು ಬೀ ಅಮ್ಮರವರಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಅವರು ಮೆರೆದ ಸಾಹಸ ಮತ್ತು ಧೈರ್ಯಗಳನ್ನು ರಾಜಕೀಯ ಮುಖಂಡರೂ ಸಹ ತೋರಲು ಸಾಧ್ಯವಿರಲಿಲ್ಲ.”

    ಸ್ವಾತಂತ್ರ ಸಂಗ್ರಾಮದ ಚಳವಳಿಯಲ್ಲಿದ್ದ ಇನ್ನೊಂದು ಪ್ರಮುಖ ಹೆಸರು ‘ಅಮ್‌ಜದೀ ಬೇಗಮ್’- ಇವರು ಬೀಅಮ್ಮನ ಸೊಸೆ, ಮುಹಮ್ಮದಾಲೀ ಅವರ ಪತ್ನಿ.

    ಇನ್ನೊ ಬ್ಬರು, ‘ಬೇಗಮ್ ಹರ್ಝತ್ ಮಹಲ್’. ಇವರನ್ನು ಬ್ರಿಟಿಷರು ಝಾನ್ಸಿ ರಾಣಿಗೆ ಹೋಲಿಸಿದ್ದರು. ಅಷ್ಟು ಧೈರ್ಯಶಾಲಿ ಮಹಿಳೆಯಾಗಿದ್ದರು ಮಹಲ್ ಅವರು. ಅಸ್ಟರಿ ಬೇಗಮ್,

    ಮಾಜಿದಾ ಬಾನು, ಹಾಜಿರಾ ಬೇಗಮ್, ಹಮೀದಾ ತಯ್ಯಬ್‌ಜೀ, ಫಾತಿಮಾ, ಸಫೀಯಾ ಖಾನ್, ಮರ್ಯಮ್ ಸಾದತ್, ಬಾನು ಕಿಚಲು, ಖುರ್ಶಿದಾ ಬೇಗಮ್, ಸಯೀದಾ ಬೇಗಮ್, ರೆಹನಾ ತಯ್ಯಬ್‌ಜೀ, ಮೆಹ‌ರ್ ತಾಜ್… ಮುಂತಾದ ಮುಸ್ಲಿಮ್ ಮಹಿಳೆ ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದವರು ಮತ್ತು ಹುತಾತ್ಮರಾದವರೂ ಇದ್ದಾರೆ. ಬಿಳಿಯರಿಂದ ಈ ದೇಶ ಸ್ವತಂತ್ರ ಪಡೆಯುವಲ್ಲಿ ಪುರುಷರೂ ಬಹಳ ಸಂಖ್ಯೆಯಲ್ಲಿ ತ್ಯಾಗ ಮಾಡಿದ್ದಾರೆ.

    ಇವರ ಸ್ಟೋರಿಯು ಶಾಂತಿ ಪ್ರಕಾಶನ ಪ್ರಕಟಿಸಿದ ‘ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು” ಎಂಬ ಪುಸ್ತಕದಲ್ಲಿ ವಿವರಿಸಲಾಗಿದೆ.

    ಲೇಖಕ: ಆಸಿಫ್ ಅಲಿ

    ಕೃತಿ: ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು

  • ನಾಲ್ಕು ವರ್ಷದ ಬಾಲಕಿಯನ್ನು ಹಿಂಸಿಸಿ ಕೊಂದ ಚಿಕ್ಕಪ್ಪ-ಚಿಕ್ಕಮ್ಮ.! 
ವರ್ಷಗಳ ಬಳಿಕ ತಿಳಿದು ಬಂದದ್ದು ಹೇಗೆ..?

    ನಾಲ್ಕು ವರ್ಷದ ಬಾಲಕಿಯನ್ನು ಹಿಂಸಿಸಿ ಕೊಂದ ಚಿಕ್ಕಪ್ಪ-ಚಿಕ್ಕಮ್ಮ.! ವರ್ಷಗಳ ಬಳಿಕ ತಿಳಿದು ಬಂದದ್ದು ಹೇಗೆ..?

    ಕಾಣೆಯಾಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಸಂಬಂಧಿಗಳೇ ಕೊಲೆ ಮಾಡಿ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದ ಪ್ರಕರಣವನ್ನು ಮಹಾರಾಷ್ಟ್ರದ ರಾಯಗಢ ಪೊಲೀಸರು ಒಂದು ವರ್ಷಗಳ ಬಳಿಕ ಭೇದಿಸಿದ್ದಾರೆ.

    ಸದ್ಯ ಮೃತ ಬಾಲಕಿಯ ತಲೆಬುರುಡೆಯನ್ನು ಪತ್ತೆ ಮಾಡಿರುವ ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವರ್ಷ ಮೃತ ಬಾಲಕಿಯ ತಂದೆ ರಾಹುಲ್‌ ಘಡ್ಜೆ ಜೈಲು ಸೇರಿದ್ದರು. ಆ ಬಳಿಕ ಬಾಲಕಿಯನ್ನು ಪೋಷಣೆ ಮಾಡಲು ಯಾರೂ ಇಲ್ಲದ ಪರಿಸ್ಥಿತಿಯಲ್ಲಿ, ಚಿಂಚವಾಲಿ ಗ್ರಾಮದಲ್ಲಿದ್ದ ಬಾಲಕಿಯ ಚಿಕ್ಕಮ್ಮ ಅಪರ್ಣಾ ಅನಿಲ್‌ ಮಕ್ವಾನಾ ಅಲಿಯಾಸ್‌ ಅಪರ್ಣಾ ಪ್ರಥಮೇಶ್ ಕಂಬ್ರಿ ಮತ್ತು ಆಕೆಯ ಪತಿ ಪ್ರಥಮೇಶ್ ಪ್ರವೀಣ್ ಕಂಬ್ರಿ ನೋಡಿಕೊಳ್ಳುತ್ತಿದ್ದರು.

    ಬಾಲಕಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೆವು ಎಂದು ದಂಪತಿ ಹೇಳಿದ್ದರು. ಆದರೆ ವಾಸ್ತವವಾಗಿ ಬಾಲಕಿಗೆ ಹಿಂಸೆ ಮಾಡುತ್ತಿದ್ದರು, ಆಕೆ ಮಾಡಿದ ಸಣ್ಣ ತಪ್ಪಿಗಾಗಿ ಚಿಕ್ಕಪ್ಪ ಥಳಿಸಿದ್ದ. ಇದರಿಂದಾಗಿ ಬಾಲಕಿ ಮೃತಪಟ್ಟಿದ್ದಳು.

    ಕಳೆದ ವರ್ಷ ಬಾಲಕಿಯ ಸಂಬಂಧಿ ಜ್ಯೋತಿ ಎನ್ನುವವರು ಬಾಲಕಿಯನ್ನು ಅಪರ್ಣಾ ದಂಪತಿ ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. 2024ರ ಅಕ್ಟೋಬರ್‌ 06ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದರು. ಅಪರ್ಣಾ ದಂಪತಿಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಕಳೆದ ಸೋಮವಾರ ಚಿಂಚವಾಲಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿ ಅವರನ್ನು ವಶಕ್ಕೆ ಪಡೆದಿದ್ದರು, ಬಳಿಕ ತೀವ್ರವಾದ ವಿಚಾರಣೆ ನಡೆಸಿದಾಗ ದಂಪತಿ ಬಾಲಕಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

    ಚಿಕ್ಕಪ್ಪ ಹೊಡೆದ ಪೆಟ್ಟಿನಿಂದಾಗಿ ಬಾಲಕಿ ಮೃತಪಟ್ಟಿದ್ದು, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದಿರುವುದಾಗಿ ಹೇಳಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್‌ ಝೆಂಡೆ ತಿಳಿಸಿದ್ದಾರೆ. ಸದ್ಯ ಪತ್ತೆ ಮಾಡಿದ ತಲಬುರುಡೆಯನ್ನು ವಿಧಿವಿಜ್ಞಾನ ಕೇಂದ್ರಕ್ಕೆ ರವಾನಿಸಲಾಗಿದ್ದು, ದಂಪತಿಯನ್ನು ನ್ಯಾಯಾಲಯದ ಆದೇಶದಂತೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • “ಯತ್ನಾಳರೇ, ಮುಸ್ಲಿಮ್ ಹೆಣ್ಣು ಮಕ್ಕಳ ವಿಷಯಕ್ಕೆ ಬರಬೇಡಿ” 
‘ಮುಸ್ಲಿಮ್ ಯುವಜನ ಪರಿಷತ್’ ತಾಕೀತು ಮಾಡಲು ಕಾರಣವೇನು?

    “ಯತ್ನಾಳರೇ, ಮುಸ್ಲಿಮ್ ಹೆಣ್ಣು ಮಕ್ಕಳ ವಿಷಯಕ್ಕೆ ಬರಬೇಡಿ” ‘ಮುಸ್ಲಿಮ್ ಯುವಜನ ಪರಿಷತ್’ ತಾಕೀತು ಮಾಡಲು ಕಾರಣವೇನು?

    ‘ಮುಸ್ಲಿಂ ಹೆಣ್ಣು ಮಕ್ಕಳ ವಿವಾಹದ ಬಗ್ಗೆ ಅವರ ಅಪ್ಪ ಅಮ್ಮ, ಜಮಾತ್‌ನವರು ಚಿಂತಿಸುತ್ತಾರೆ. ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಈ ಚಿಂತೆ ಬೇಡ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ ತಿರುಗೇಟು ನೀಡಿದೆ.

    ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅಶ್ರಫ್ ಕಲ್ಲೇಗ, ಮುಸ್ಲಿಂ ಯುವತಿಯನ್ನು ವಿವಾಹವಾದ ಹಿಂದೂ ಯುವಕನಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿರುವುದು. ಮುಸ್ಲಿಂ ಸಮುದಾಯದ ಖಬರ್‌ಸ್ಥಾನಗಳ ಬಗ್ಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.

    ‘ಧರ್ಮಸ್ಥಳ ಪ್ರಕರಣದಲ್ಲಿ ದೂರು ನೀಡಿರುವ ಸಾಕ್ಷಿ ದೂರುದಾರ ಮುಸ್ಲಿಂ ಸಮಾಜಕ್ಕೆ ಸೇರಿದವನು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡದ ಬಗ್ಗೆ ಮಾಹಿತಿ ಇದ್ದರೆ ಅವರದೇ ಕೇಂದ್ರ ಸರ್ಕಾರದ ಮೂಲಕ ತನಿಖೆ ಕೈಗೊಳ್ಳಲಿ’ ಎಂದು ಸವಾಲು ಹಾಕಿದರು.

    ‘ಧರ್ಮಸ್ಥಳ ವಿಚಾರವಾಗಿ ಮುಸ್ಲಿಂ ಸಮುದಾಯ ಯಾವೊಬ್ಬ ಪ್ರಮುಖರು ಮಾತನಾಡಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಹೆಗ್ಗಡೆಯವರಿಗೆ ಪ್ರೀತಿ ಇದೆ. ಅಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಆದರೆ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಈ ಹಿಂದೆ ಯತ್ನಿಸಿ ಅದಕ್ಕೆ ಪರ್ಯಾಯವಾಗಿ ಕನ್ಯಾಡಿ ಕ್ಷೇತ್ರದ ಆರಂಭಕ್ಕೆ ಕಾರಣರಾದ ಜನಾರ್ದನ ಪೂಜಾರಿ ಅವರಿಗೆ ಈಗ ಧರ್ಮಸ್ಥಳದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅದಕ್ಕಾಗಿ ಅವರು ಈ ರೀತಿಯ ಹೇಳಿಕೆ ನೀಡಲು ಆರಂಭಿಸಿದ್ದಾರೆ’ ಎಂದು ಅವರು ದೂರಿದರು.

    ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಪ್ರಧಾನ ಕಾರ್ಯದರ್ಶಿ ನೌಷದ್ ಬೊಳುವಾರು, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಮುಖಂಡ ಹಂಝ ಕಬಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

  • ಲಭ್ಯವಾಗದ ಕಲ್ಲು-ಮರಳು, ದುಡಿಮೆಯಿಲ್ಲದ ಮೇಸ್ತ್ರಿಗಳು: 
ಹೀಗಾಗಲು ಸರಕಾರದ ನಿರ್ಬಂಧವೇನು ಗೊತ್ತೇ?

    ಲಭ್ಯವಾಗದ ಕಲ್ಲು-ಮರಳು, ದುಡಿಮೆಯಿಲ್ಲದ ಮೇಸ್ತ್ರಿಗಳು: ಹೀಗಾಗಲು ಸರಕಾರದ ನಿರ್ಬಂಧವೇನು ಗೊತ್ತೇ?

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗೆ ಆಮೆ ನಡಿಗೆ ಗತಿ
    ಹಲವು ವಲಯಗಳಿಗೆ ಪೆಟ್ಟು
    ಊರುಗಳಿಗೆ ಮರಳಿರುವ ಕೂಲಿ ಕೆಲಸಗಾರರು

    ಕೆಂಪು ಕಲ್ಲು ಸಿಗದ ಕಾರಣ ಅರ್ಧಕ್ಕೆ ನಿಂತಿರುವ ಕೆಲಸ

    ಮಂಗಳೂರು: ನಗರ ಹೊರವಲಯದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಿಸಲು ಅಡಿಗಲ್ಲು ಹಾಕಿದ್ದು ಕಳೆದ ವರ್ಷ ಮಾರ್ಚ್‌ನಲ್ಲಿ. ಹಳೆಯ ಮನೆಯ ಸಮೀಪದಲ್ಲೇ ಹೊಸ ಮನೆ ನಿರ್ಮಿಸುವ ಉದ್ದೇಶ. ತುರ್ತು ಏನೂ ಇರಲಿಲ್ಲ. ಆದ್ದರಿಂದ ಅಳೆದು– ತೂಗಿ ಒಂದೊಂದೇ ಹಂತದ ಕೆಲಸಗಳನ್ನು ಮುಗಿಸುತ್ತಿದ್ದರು. ಮುಂದಿನ ವರ್ಷ ಜನವರಿಯಲ್ಲಿ ಗೃಹಪ್ರವೇಶ ಮಾಡಲು ದಿನವೂ ನಿಗದಿ ಆಗಿದೆ. ಜೂನ್ ಅರಂಭದ ವರೆಗೂ ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತು. ನಂತರ ಯೋಜನೆ ತಲೆಕಳೆಗಾಯಿತು. ಕಲ್ಲು ಮತ್ತು ಮರಳು ಸಾಕಷ್ಟು ಪ್ರಮಾಣದಲ್ಲಿ ಸಿಗದೇ ಇದ್ದ ಕಾರಣ ಕೆಲಸ ನಿಧಾನವಾಯಿತು. ಅಲ್ಲಿಲ್ಲಿ ಬಿದ್ದದ್ದ 20ರಷ್ಟು ಕಲ್ಲುಗಳನ್ನು ತಂದು ಅರ್ಧ ದಿನದ ಕೆಲಸ ಮಾಡಿಸಲಾಯಿತು. ನಂತರ ಕಲ್ಲುಗಳಿಗೆ ಕಾದಿದ್ದೇ ಬಂತು.

    ಉಳ್ಳಾಲ ತಾಲ್ಲೂಕಿನ ಕುಂಪಲದಲ್ಲಿ ಮನೆಯೊಂದರ ನಿರ್ಮಾಣ ಅರಂಭವಾಗಿತ್ತು. ಎರಡು ತಿಂಗಳಿಂದ ಕೆಲಸ ಸಂಪೂರ್ಣ ನಿಂತಿದೆ. ಬಂಟ್ವಾಳ ತಾಲ್ಲೂಕಿನ ಫರಿಂಗಿಪೇಟೆಯಲ್ಲಿ ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭವಾದ ಎರಡು ಮಹಡಿಯ ಮನೆಯ ಕೆಲಸ ಒಂದೂವರೆ ತಿಂಗಳಿಂದ ಮುಂದುವರಿಯುತ್ತಿಲ್ಲ. ಉಳ್ಳಾಲ ತಾಲ್ಲೂಕಿನ ನಾಟೆಕಲ್ಲಿನಲ್ಲಿ 5 ಸಾವಿರ ಚದರ ಅಡಿಯ ಕಟ್ಟದ ನಿರ್ಮಾಣ ಆರಂಭಿಸುವಾಗಲೇ ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ ನೆಲಮಹಡಿಯ ಸೆಂಟ್ರಿಂಗ್ ಕೆಲಸ ಮುಗಿದ ನಂತರ ಕಲ್ಲು– ಮರಳು ಸಿಗದ್ದರಿಂದ ಅದರ ಮಾಲೀಕರ ಯೋಜನೆಗಳೆಲ್ಲ ಉಲ್ಟಾ– ಪಲ್ಟ ಆಗಿವೆ.

    ಇವು ಕೆಲವೇ ಉದಾಹರಣೆಗಳು. ಕಲ್ಲು ಮತ್ತು ಮರಳು ಸಿಗದ ಕಾರಣ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಬಹುತೇಕ ನಿಂತೇ ಹೋಗಿವೆ. ಇದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಎದುರಿಸುತ್ತಿರುವವರ ಸಂಖ್ಯೆ ಸಾವಿರಾರು. ಗುತ್ತಿಗೆದಾರರಿಂದ ಹಿಡಿದು ಕೆಲಸಗಾರರವರೆಗೆ, ನಿರ್ಮಾಣ ಸಾಮಗ್ರಿ ಮಾರಾಟಗಾರರಿಂದ ಹಿಡಿದು ಸಣ್ಣ ಹೋಟೆಲ್, ಬೀಡಿ ಅಂಗಡಿಯವರ ವರೆಗೆ, ಸಾಮಗ್ರಿಗಳನ್ನು ಸಾಗಿಸುವ ಟೆಂಪೊದವರಿಂದ ಹಿಡಿದು ಫರ್ನಿಚರ್ ಅಂಗಡಿಯವರ ವರೆಗೆ ವ್ಯವಹಾರ, ಕೆಲಸ, ವ್ಯಾಪಾರ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವವರು ಇಂದು– ನಾಳೆ ಎಂದು ಕಾಯುತ್ತ ದಿನದೂಡುತ್ತಿದ್ದಾರೆ. ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬಂದಿದ್ದ ಕೂಲಿಕಾರ್ಮಿಕರ ಪೈಕಿ ಬಹುತೇಕರು ಮಂಗಳೂರು ಬಿಟ್ಟು ಹೋಗಿದ್ದಾರೆ ಎಂದು ಗುತ್ತಿಗೆದಾರರನೇಕರು ತಿಳಿಸಿದರು.

    ಅಕ್ರಮವಾಗಿ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ತಡೆಯಲು ಕೈಗೊಂಡಿರುವ ಕ್ರಮದ ಬಗ್ಗೆ ಎಲ್ಲರಿಗೂ ಸಹಮತವಿದೆ. ಆದರೆ ಅದರಿಂದಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು, ಬದಲಿ ವ್ಯವಸ್ಥೆ ಮಾಡಬೇಕಿತ್ತು ಎಂಬುದು ಬಹುತೇಕರ ಅನಿಸಿಕೆ. ಮರಳು ಗಣಿಗಾರಿಕೆಗೆ ನಿಷೇಧ ಇರುವುದು ನಿಜ. ಆದರೆ ಈಗಾಗಲೇ ಸಂಗ್ರಹಿಸಿರುವ ಮರಳನ್ನು ವ್ಯವಸ್ಥಿತವಾಗಿ ವಿತರಿಸಬೇಕೆಂದೂ ಪರವಾನಗಿ ಪಡೆದುಕೊಂಡು ಕಲ್ಲು ಗಣಿಗಾರಿಕೆ ನಡೆಸುವವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದೂ ಅಭಿಪ್ರಾಯಪಡುತ್ತಾರೆ ಹೆಚ್ಚಿನವರು. ಎಂ– ಸ್ಯಾಂಡ್‌ ಇಲ್ಲಿನ ಹವಾಮಾನಕ್ಕೆ ಸೂಕ್ತವಲ್ಲ ಎಂಬ ಅನಿಸಿಕೆಯಿಂದಾಗಿ ಯಾರೂ ಅದನ್ನು ಬಳಸಲು ಮುಂದಾಗುತ್ತಿಲ್ಲ. ಕಲ್ಲಿಗೆ ಬದಲಾಗಿ ಇಟ್ಟಿಗೆ, ಬ್ಲಾಕ್‌ಗಳನ್ನು ಬಳಸುವ ಪದ್ಧತಿ ಇನ್ನೂ ಇಲ್ಲಿ ಶುರುವಾಗಲಿಲ್ಲ. ಹೀಗಿರುವಾಗ ಮರಳಿಗೆ ಮರಳೇ ಬೇಕು, ಕೆಂಪುಕಲ್ಲಿಗೆ ಬದಲು ಕೆಂಪುಕಲ್ಲೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

    ‘ಎರಡು ತಿಂಗಳಿಂದ ಕೆಲಸ ಇಲ್ಲ. ನನ್ನ ಕೈಕೆಳಗೆ ಏಳೆಂಟು ಜನರು ಕೆಲಸ ಮಾಡುತ್ತಿದ್ದರು. ಕೆಲವರು ಊರಿಗೆ ಹೋದರು. ಇನ್ನು ಕೆಲವರು ಬೇರೆ ಯಾವುದೋ ಕೆಲಸ ಹುಡುಕಿಕೊಂಡು ಹೋಗಿದ್ದಾರೆ. ಕಲ್ಲು ಸಿಗುತ್ತಿದ್ದಾಗ ಕೆಲಸ ಇತ್ತು. ಜೀವನ ಸರಿಯಾಗಿ ನಡೀತಿತ್ತು. ಒಂದಿಷ್ಟು ಉಳಿತಾಯವೂ ಆಗುತ್ತಿತ್ತು. ಹಾಗೆ ಉಳಿಸಿದ ಹಣದಲ್ಲಿ ಈಗ ಜೀವನ ಸಾಗುತ್ತಿದೆ. ಅದು ಮುಗಿದ ನಂತರ ರಾಜಕಾರಣಿಗಳ ಮನೆ ಮುಂದೆ ಹೋಗಿ ಕುಳಿತುಕೊಳ್ಳಬೇಕಾದೀತೇನೋ…’ ಎಂದರು ದಾವಣಗೆರೆಯಿಂದ ಬಂದು ಮಂಗಳೂರಿನಲ್ಲಿ ಗುತ್ತಿಗೆದಾರರಾಗಿರುವ ದುರ್ಗೇಶ್.

    ‘ಅಕ್ರಮ ತಡೆಯಲೇಬೇಕು. ಅದರಿಂದ ಎಲ್ಲರಿಗೂ ಒಳಿತು. ಆದರೆ ನಿಯಮಗಳನ್ನು ಪಾಲಿಸಿಕೊಂಡು ಮಾಡುವವರಿಗೆ ಪರವಾನಗಿ ಕೊಡಬೇಕು. ಸಮಸ್ಯೆಗೆ ಪರಿಹಾರ ಹುಡುಕುವುದು ಬಿಟ್ಟು ಎಲ್ಲವನ್ನೂ ಒಮ್ಮೆಲೇ ನಿಲ್ಲಿಸಿಬಿಟ್ಟರೆ ಹೇಗೆ’ ಎಂದು ಪ್ರಶ್ನಿಸುವ ದುರ್ಗೇಶ್‌ ‘ಎಂ–ಸ್ಯಾಂಡ್ ಬಳಸಲು 10 ಶೇಕಡ ಮಂದಿ ಒಪ್ಪಬಹುದು, ಅದು ಕೂಡ ಒಲ್ಲದ ಮನಸ್ಸಿನಿಂದ. ಮರಳು ಸಂಗ್ರಹ ಮಾಡಿಟ್ಟುಕೊಳ್ಳಲು ಆಗುವುದರಿಂದ ಸ್ವಲ್ಪ ಹೆಚ್ಚು ಹಣ ಕೊಟ್ಟರೂ ಸಿಗಬಹುದು. ಆದರೆ ಕಲ್ಲು ಸಂಗ್ರಹ ಮಾಡಿ ಇಡಲು ಆಗುವುದಿಲ್ಲ. ಅದಕ್ಕೆ ಜಾಗ ತುಂಬ ಬೇಕು. ಆದ್ದರಿಂದ ಒಂದೆರಡು ಲೋಡ್ ಕಲ್ಲು ತಂದು ಅಷ್ಟು ಕೆಲಸ ಮುಗಿದ ನಂತರವೇ ಮತ್ತೊಮ್ಮೆ ತರುವುದು. ಹೀಗಾಗಿ ಕಲ್ಲು ಇಲ್ಲದೆ ಈಗ ಎಲ್ಲ ಕೆಲಸವೂ ನಿಂತಿದೆ’ ಎನ್ನುತ್ತಾರೆ.

    ‘ಎಂ–ಸ್ಯಾಂಡ್‌, ಬ್ಲಾಕ್‌, ಇಟ್ಟಿಗೆ ಇತ್ಯಾದಿಗಳನ್ನು ಬಳಸಲು ಇಲ್ಲಿ ಯಾರೂ ಒಪ್ಪುವುದಿಲ್ಲ. ಬ್ಲಾಕ್‌ಗಳನ್ನು ಬಳಸಿ ನಿರ್ಮಿಸಿದ ನಗರದ ಪ್ರಮುಖ ಅಪಾರ್ಟ್‌ಮೆಂಟ್ ಒಂದರಲ್ಲಿ ನೀರು ಜಿನುಗುತ್ತಿರುವುದರಿಂದ ಐದನೇ ಮಹಡಿಯಿಂದ ವಾಟರ್ ಪ್ರೂಫ್ ಹಾಕುತ್ತಿದ್ದಾರೆ. ಇಲ್ಲಿ ಕಟ್ಟಡಗಳಿಗೆ ಕೆಂಪು ಕಲ್ಲು ಬಳಸುವುದೇ ಸಂಪ್ರದಾಯವಾಗಿ ಮುಂದುವರಿದಿದೆ. ಅದು ಬೇಸಿಗೆಗೂ ಮಳೆಗಾಲಕ್ಕೂ ಸೂಕ್ತ ಎಂಬ ಭಾವನೆ ಎಲ್ಲರಲ್ಲೂ ಇದೆ. ಎಷ್ಟು ಭಾರವನ್ನಾದರೂ ತಡೆದುಕೊಳ್ಳುವ ಸಾಮರ್ಥ್ಯ ಇರುವುದರಿಂದ ಗುತ್ತಿಗೆದಾರರು ಕೂಡ ಅದಕ್ಕೇ ಮೊರೆ ಹೋಗುತ್ತಾರೆ. ಕಲ್ಲನ್ನು ಅಕ್ರಮವಾಗಿ ತಂದು ಕಟ್ಟಡ ನಿರ್ಮಿಸಿ ಕೊಡು ಎಂದು ಯಾರೂ ಹೇಳುವುದಿಲ್ಲ. ನಿಯಮಗಳನ್ನು ಪಾಲಿಸಿಕೊಂಡೇ ಗಣಿಗಾರಿಕೆ ಮಾಡಿ ಕಲ್ಲು ಸಿಗುವಂತೆ ಮಾಡಲಿ. ಅದಕ್ಕೆ ವೆಚ್ಚ ಸ್ವಲ್ಪ ಹೆಚ್ಚಾದರೂ ಕೊಡಲು ಜನರು ಹಿಂಜರಿಯುವುದಿಲ್ಲ’ ಎಂಬುದು ಗುತ್ತಿಗೆದಾರ ದಯಾನಂದ ಅವರ ಅಭಿಪ್ರಾಯ.ಅನೇಕ ಮೇಸ್ತ್ರಿಗಳು ಸೆಂಟ್ರಿಂಗ್‌ ಮತ್ತು ಇತರ ಕೆಲಸದ ಸಾಮಗ್ರಿಗಳನ್ನು ನನ್ನ ವಾಹನದಲ್ಲೇ ಸಾಗಿಸುತ್ತಿದ್ದರು. ಈಗ ಬಾಡಿಗೆಗೆ ಕರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೆಲಸವೇ ಇಲ್ಲ. ಬೇರೆ ಕೆಲಸ ಗೊತ್ತೂ ಇಲ್ಲ. ಸಚಿನ್ ಟೆಂಪೊ ಚಾಲಕ ಪಾಣೆಮಂಗಳೂರುಸ್ಯಾಂಡ್ ಬಜಾರ್ ಅ್ಯಾಪ್‌ ಮೂಲಕ ತರಿಸಿದ ಮರಳನ್ನು ಗಾಳಿಸಿಯೇ ಬಳಸಬೇಕಾದ ಪರಿಸ್ಥಿತಿ ಎಂದು ದೂರಲಾಗಿದೆ

    ಎಲ್ಲವನ್ನೂ ಕಾನೂನುಬದ್ಧಗೊಳಿಸಲು ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಮಟ್ಟದಲ್ಲೇ ಇದು ಆಗಬೇಕು. ಹೀಗಾಗಿ ಇನ್ನೂ ಸುಮಾರು ಒಂದು ತಿಂಗಳ ವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ.
    ರಾಜು ಹೆಚ್ಚುವರಿ ಜಿಲ್ಲಾಧಿಕಾರಿ

    ಸ್ಯಾಂಡ್ ಬಜಾರ್‌ನಲ್ಲಿ ಸಿಗುವ ಮರಳಿನ ಗುಣಮಟ್ಟ ಚೆನ್ನಾಗಿಲ್ಲ. ಆದ್ದರಿಂದ ಗಾಳಿಸಿದ ನಂತರ ಸಿಗುವುದು ಅಲ್ಪಪ್ರಮಾಣ. ಗಾಳಿಸಲು ಎರಡು ದಿನ ಇಬ್ಬರಿಗೆ ಕೂಲಿ ಕೊಡಬೇಕು. ನಾವು ಹೇಳಿದ ಸಮಯದಲ್ಲಿ ತಂದು ಹಾಕುವುದೂ ಇಲ್ಲ.
    ಲತೀಫ್‌ ಗುತ್ತಿಗೆದಾರ ತುಂಬೆ

    ಅನೇಕ ಮೇಸ್ತ್ರಿಗಳು ಸೆಂಟ್ರಿಂಗ್‌ ಮತ್ತು ಇತರ ಕೆಲಸದ ಸಾಮಗ್ರಿಗಳನ್ನು ನನ್ನ ವಾಹನದಲ್ಲೇ ಸಾಗಿಸುತ್ತಿದ್ದರು. ಈಗ ಬಾಡಿಗೆಗೆ ಕರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೆಲಸವೇ ಇಲ್ಲ. ಬೇರೆ ಕೆಲಸ ಗೊತ್ತೂ ಇಲ್ಲ.
    ಸಚಿನ್ ಟೆಂಪೊ ಚಾಲಕ, ಪಾಣೆಮಂಗಳೂರು

    ವಾಸ್ತವದಲ್ಲಿ ಹಣ ಮಾಡಿಕೊಂಡರು ಈಗ ಖುಷಿಯಲ್ಲಿದ್ದಾರೆ. ಹಲವರು ಈಗಾಗಲೇ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗಿದ್ದಾರೆ. ನಿತ್ಯ ದುಡಿದು ತಿನ್ನುವವರಿಗೆ ಮತ್ತು ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ.
    ದಯಾನಂದ ಗುತ್ತಿಗೆದಾರ ಮಂಗಳೂರು

    ಒಂದೆಡೆ ನಿರ್ಬಂಧ ಮತ್ತೊಂದೆಡೆ ನಿಷೇಧ

    ಕರಾವಳಿ ನಿರ್ಬಂಧಿತ ಪ್ರದೇಶದಲ್ಲಿ (ಸಿಆರ್‌ಝಡ್‌) 2022ರಿಂದ ಮರಳು ಗಣಿಗಾರಿಕೆಗೆ ನಿಷೇಧವಿದೆ. ನಾನ್‌ ಸಿಆರ್‌ಝಡ್‌ನಲ್ಲಿ ಜೂನ್ 5ರಿಂದ ಅಕ್ಟೋಬರ್‌ 15ರ ವರೆಗೆ ಮರಳು ಗಣಿಗಾರಿಕೆಗೆ ನಿಷೇಧವಿದೆ. ಆದ್ದರಿಂದ ಈಗ ಸಂಗ್ರಹ ಮಾಡಿಟ್ಟಿರುವ ಮರಳನ್ನೇ ಆಶ್ರಯಿಸಬೇಕಾಗಿದೆ. ಅಂಥ ಮರಳು ಪ್ರತಿ ವರ್ಷ ಸಾಕಷ್ಟು ಸಿಗುತ್ತದೆ. ಇದಲ್ಲದೆ ಜಿಲ್ಲಾಡಳಿತದ ಬ್ಲಾಕ್‌ಗಳಲ್ಲಿ ಇರುವ ಮರಳು ಸ್ಯಾಂಡ್ ಬಜಾರ್ ಆ್ಯಪ್‌ನಲ್ಲಿ ಲಭ್ಯವಿದೆ. ಅಕ್ರಮವಾಗಿ ಬ್ಲ್ಯಾಕ್‌ಮಾರ್ಕೆಟ್‌ನಲ್ಲೂ ಮರಳು ಸಿಗತ್ತಿದೆ. ಆದ್ದರಿಂದ ಸಮಸ್ಯೆ ಇರುವುದು ಕಲ್ಲಿನದೇ. ಸಿಆರ್‌ಝಡ್‌ನಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಇಲ್ಲ. ಸಾಂಪ್ರದಾಯಿಕ ಸಮುದಾಯಗಳಿಗೆ ಇದರಿಂದ ದೋಣಿ ನಡೆಸಲು ಸಮಸ್ಯೆಯಾಗುತ್ತದೆ ಎಂಬ ದೂರಿನ ನಂತರ 2011ರಲ್ಲಿ ಈ ನಿಷೇಧವನ್ನು ತೆಗೆದು ಹಾಕಲಾಗಿತ್ತು. ಆದರೆ 2022ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯ ನೀಡಿದ ಆದೇಶದಂತೆ ಈಗ ಮೂರು ಜಿಲ್ಲೆಗಳ ಸಿಆರ್‌ಝಡ್‌ನಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿದೆ. ಇದರ ವಿರುದ್ಧ ಹೋರಾಟಗಳು ನಡೆಯುತ್ತಿವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್ತಿ ತಿಳಿಸಿದರು.

    ಮರಳು ಸಾಕಷ್ಟು ಇದೆ

    ನಾನ್ ಸಿಆರ್‌ಝಡ್‌ನಲ್ಲಿ ಸಾಕಷ್ಟು ಮರಳು ಸಂಗ್ರಹ ಇದೆ. ಒಟ್ಟು 29 ಬ್ಲಾಕ್‌ಗಳ ಪೈಕಿ 16 ಕಾರ್ಯನಿರ್ವಹಿಸುತ್ತಿದ್ದು 3 ಲಕ್ಷ 34 ಸಾವಿರ ಟನ್ ಮರಳು ಇದೆ. ಮೀನುಗಳ ವಂಶಾಭಿವೃದ್ಧಿಗಾಗಿ ಈಗ ಮರಳು ಗಣಿಗಾರಿಕೆ ಮೇಲೆ ನಿಷೇಧವಿದೆ. ಮಳೆಗಾಲದಲ್ಲಿ ಹೆಚ್ಚು ನೀರು ಇರುವಾಗ ಮರಳು ತೆಗೆಯಬಾರದು ಎಂಬ ನಿಯಮವೂ ಜಾರಿಯಲ್ಲಿದೆ. ಆದರೆ 11 ಸಾವಿರ ಟನ್ ಮರಳು ದಾಸ್ತಾನು ಇದೆ. ಅದನ್ನು ಸ್ಯಾಂಡ್ ಬಜಾರ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ವಿವಿಧ ಸಂದರ್ಭಗಳಲ್ಲಿ ವಶಪಡಿಸಿಕೊಂಡ ಮರಳೂ ಇದೆ. ಅದನ್ನು ಹರಾಜು ಹಾಕಬೇಕಾದರೆ ತುಂಬ ಸಮಯ ಕಾಯಬೇಕು. ಆದ್ದರಿಂದ ಸುಲಭವಾಗಿ ಜನರಿಗೆ ಒದಗಿಸುವ ಕುರಿತು ನಿರ್ಧಾರ ಕೈಗೊಳ್ಳಲು ಮರಳು ನಿರ್ವಹಣಾ ಸಮಿತಿಯ ನಿರ್ಧಾರಕ್ಕೆ ಬಿಡಲಾಗಿದೆ.

    ಸಂದೀಪ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ

  • ಭೂಮಿಯಂತೆ ವಾಸಯೋಗ್ಯ ಗ್ರಹ ಪತ್ತೆ ಹಚ್ಚಿದ ನಾಸಾ..! 
ನಮ್ಮಿಂದ ಎಷ್ಟು ದೂರದಲ್ಲಿದೆ ಗೊತ್ತೇ..?

    ಭೂಮಿಯಂತೆ ವಾಸಯೋಗ್ಯ ಗ್ರಹ ಪತ್ತೆ ಹಚ್ಚಿದ ನಾಸಾ..! ನಮ್ಮಿಂದ ಎಷ್ಟು ದೂರದಲ್ಲಿದೆ ಗೊತ್ತೇ..?

    ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಇರಬಹುದಾದ ಗ್ರಹವನ್ನು ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಇತ್ತೀಚೆಗೆ ಪತ್ತೆ ಹಚ್ಚಿದೆ.

    ಈ ವಿಷಯವನ್ನು ನಾಸಾದ ವೆಬ್‌ಸೈಟ್‌ science.nasa.gov ದಲ್ಲಿ ಪ್ರಕಟಿಸಲಾಗಿದೆ.
    ಭೂಮಿಯಿಂದ ಕೇವಲ 4 ಜ್ಯೋತಿರ್ವಷ್ರಗಳ (light-years) ಅಂತರದಲ್ಲಿರುವ ‘ಆಲ್ಫಾ ಸೆಂಟೌರಿ’ ಎಂಬ ನಕ್ಷತ್ರ ಸಮೂಹದಲ್ಲಿನ ಸೂರ್ಯನಂತ ನಕ್ಷತ್ರವೊಂದನ್ನು ಭೂಮಿಯಂಥಹ ಗ್ರಹವೊಂದು ಸುತ್ತುತ್ತಿದೆ ಎಂದು ದೂರದರ್ಶಕ ಕಂಡುಕೊಂಡಿದೆ.

    ಆಲ್ಫಾ ಸೆಂಟೌರಿ ನಕ್ಷತ್ರ ಸಮೂಹದಲ್ಲಿ ಕೇವಲ ಮೂರು ನಕ್ಷತ್ರಗಳಿವೆ. ಆ ಸಮೂದಲ್ಲಿ ‘ಆಲ್ಫಾ ಸೆಂಟೌರಿ-ಎ’, ‘ಆಲ್ಫಾ ಸೆಂಟೌರಿ– ಬಿ’ ಮತ್ತು ‘ಪ್ರಾಕ್ಸಿಮಾ ಸೆಂಟೌರಿ’ ಎಂಬ ಮೂರು ನಕ್ಷತ್ರಗಳಿವೆ.

    ಸದ್ಯ ಸೂರ್ಯನಿಗೆ ಅತಿ ಹತ್ತಿರದ ನಕ್ಷತ್ರ ಎಂದು ‘ಪ್ರಾಕ್ಸಿಮಾ ಸೆಂಟೌರಿ’ಯನ್ನು ಗುರುತಿಸಲಾಗುತ್ತದೆ. ಇದು ಒಂದು ಕೆಂಪು ಕುಬ್ಬ ನಕ್ಷತ್ರವಾಗಿದ್ದು ಇಷ್ಟು ದಿನ ನಡೆದ ಸಂಶೋಧನೆಗಳು ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಮೂರು ಗ್ರಹಗಳು ಇರಬಹುದು ಎಂಬುದನ್ನು ಕಂಡುಕೊಂಡಿವೆಯಾದರೂ ಅವು ವಾಸಯೋಗ್ಯ ಎಂಬುದನ್ನು ಪತ್ತೆಹಚ್ಚಲಾಗಿಲ್ಲ.
    ಆದರೆ, ವಿಜ್ಞಾನಿಗಳಿಗೆ ಅಭೂತಪೂರ್ವ ಯಶಸ್ಸು ಎಂಬಂತೆ JWST ಈಗ ಫಲಿತಾಂಶ ನೀಡಿದೆ.

    ದೂರದರ್ಶಕದ ಇತ್ತೀಚಿನ ಫಲಿತಾಂಶಗಳ ಪ್ರಕಾರ, ‘ಆಲ್ಫಾ ಸೆಂಟೌರಿ-ಎ’ ನಕ್ಷತ್ರದ ಗ್ರಹವಾಗಿ ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಗ್ರಹ ಕಂಡು ಬಂದಿದೆ. ಸದ್ಯ ಆ ಗ್ರಹಕ್ಕೆ ‘ಎಸ್ 1’ ಎಂದು ಹೆಸರಿಡಲಾಗಿದೆ. ಅದು ಒಂದು ಅನಿಲ ದೈತ್ಯ ಎಂದು ತಿಳಿದು ಬಂದಿದೆ.

    JWST ಮಿಡ್-ಇನ್ಸಾರೆಡ್ ಇಸ್ಟ್ಯುಮೆಂಟ್ (MIRI) ನಿಂದ ತಿಳಿದು ಬಂದಿರುವ ಸಂಗತಿ ಏನೆಂದರೆ, ಎಸ್1 ಗ್ರಹದಲ್ಲಿ ಸದ್ಯ ಜೀವಿಗಳು ಇರಬಹುದಾದ ಅನುಮಾನಗಳು ಮೂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು ಅತ್ಯಾಧುನಿಕವಾದ ಹಾಗೂ ವಿಶ್ವದ ಶಕ್ತಿಶಾಲಿ ದೂರದರ್ಶಕ ಎಂದು ಕರೆಯಲಾಗುತ್ತದೆ. ಗ್ಯಾಲಕ್ಸಿ, ನಕ್ಷತ್ರಗಳು ಹಾಗೂ ಹೊಸ ವಾಸಯೋಗ್ಯ ಗ್ರಹಗಳು ಇರಬಹುದಾದ ಅವಕಾಶಗಳನ್ನು ಪರಿಶೀಲಿಸಲು ಈ ದೊಡ್ಡ ದೂರದರ್ಶಕ ಬಳಕೆಯಾಗುತ್ತಿದೆ.

    JWST ಅನ್ನು 2021 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.
    ಇನ್ನೂ 15 ವರ್ಷ ಅಧ್ಯಯನ ಮಾಡಲಿದೆ.