Tag: israel war

  • ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಸುಲೈಮಾನ್ ಅಲ್-ಉಬೈದ್ – ಪ್ಯಾಲೆಸ್ಟೀನಿಯನ್ ಪೀಲೆ ಎಂಬ ಪ್ರಸಿದ್ಧಿ ಪಡೆದ ಹೆಮ್ಮೆಯ ಆಟಗಾರ. ಗಾಝಾ ಸಮುದ್ರ ಕಿನಾರೆಯ ಮರಳಿನ ಮೇಲೆ ಚೆಂಡನ್ನು ಒದೆಯಲು ಪ್ರಾರಂಭಿಸಿ, ನಂತರ ಬೀಚ್ ಸರ್ವೀಸಸ್ ಕ್ಲಬ್‌ನಲ್ಲಿ ಗಾಝಾ ಸ್ಪೋರ್ಟ್ಸ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು. ರಾಷ್ಟಿçÃಯ ತಂಡಕ್ಕಾಗಿ ನೂರಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಸುಲೈಮಾನ್, 2010ರ ಪಶ್ಚಿಮ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಯೆಮೆನ್ ವಿರುದ್ಧದ ತನ್ನ ಕತ್ತರಿ ಕಿಕ್ ಗೋಲಿನೊಂದಿಗೆ ಮತ್ತೆ ಸೆಲೆಬ್ರಿಟಿಯಾದರು. ಅವರು ಸ್ಥಳೀಯ ಮಕ್ಕಳಿಗೆ ತರಬೇತುದಾರರಾಗಿದ್ದಾರಲ್ಲದೆ 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಹೊತ್ತಿದ್ದರು.

    ಇಷ್ಟೆಲ್ಲಾ ಇದ್ದು ಕೊನೆಗೆ ಏನಾಯಿತು? ಅವರು ಹುಟ್ಟಿದ ಸ್ಥಳ ಗಾಝಾ ಆಗಿಹೋಯಿತು. ಕಲೆ/ಕ್ರೀಡೆಗಳ ಮೇಲಿನ ಪ್ರೀತಿಯು ಮಾನವೀಯತೆ ಹೊಂದಿರುವವರಿಗೆ ಮಾತ್ರ ಇರುವ ಗುಣಗಳಾಗಿವೆ. ಹಸಿವಿನ ಬೆಂಕಿಯ ವಿರುದ್ಧ ಹೋರಾಡುತ್ತಿರುವ ಗಾಝಾದ ಮಕ್ಕಳನ್ನು ಜನಾಂಗೀಯ ಬಾಣಲೆಯಲ್ಲಿ ಉರಿಯುವ ಪೈಶಾಚಿಕ ವೀರರಿಗೆ ಫುಟ್‌ಬಾಲ್ ಆದರೇನು? ಅದರ ಆಟಗಾರ ಆದರೇನು ಮುಗ್ಧ ಮಕ್ಕಳಾದರೇನು ಎಲ್ಲವೂ ಒಂದೇ, ಸುಲೈಮಾನ್ ಅಲ್-ಉಬೈದ್ ಅವರ ದೃಷ್ಟಿಯಲ್ಲಿ ಕೇವಲ ಮರಣ ಕೂಪಕ್ಕೆ ಒದೆಯಲ್ಪಡಬೇಕಾದ ಓರ್ವ ಗಾಝಾದ ವ್ಯಕ್ತಿ ಮಾತ್ರ. ಇತ್ತೀಚೆಗೆ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸಿದ ಶೆಲ್ ದಾಳಿಯಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ವಿಶ್ವವಿಖ್ಯಾತ ಆಟಗಾರ ಕೊಲ್ಲಲ್ಪಟ್ಟರು. ಫೆಲಸ್ತೀನ್‌ನಲ್ಲಿ ಕೊಲ್ಲಲ್ಪಟ್ಟ 61400 ಮನುಷ್ಯರ ಪೈಕಿ ಒಂದು ಅಂಕೆ ಆದರು.

    ಫೆಲೆಸ್ತೀನ್‌ನಲ್ಲಿ ಹುತಾತ್ಮರಾದ ಸಾವಿರಾರು ಫೆಲೆಸ್ತೀನಿಯನ್ನರಂತೆ, ಸುಲೇಮಾನ್ ಸುಂದರ ಜೀವನದ ಕನಸು ಕಂಡಿದ್ದರು. ಫುಟ್‌ಬಾಲ್ ಅವರ ಸರ್ವಸ್ವವಾಗಿತ್ತು. ಗಾಝಾ ಯುದ್ಧಭೂಮಿಯಲ್ಲಿ ಇಸ್ರೇಲಿ ಬೆಂಕಿಯ ಮಳೆ ಸುರಿಯುತ್ತಿದ್ದಾಗ ಫುಟ್‌ಬಾಲ್ ಆಡುತ್ತಿದ್ದ ಸುಲೇಮಾನ್‌ಗೆ, ಅವನ ಹೆಂಡತಿ ದುವಾ ಮತ್ತು ಐದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಜವಾಬ್ದಾರಿ ಇತ್ತು ಐವತ್ತು ವರ್ಷದವರೆಗೆ ಫುಟ್‌ಬಾಲ್ ಆಡುವುದು, ತನ್ನ ಮಕ್ಕಳನ್ನು ರಾಷ್ಟ್ರ ಹೆಮ್ಮೆಪಡುವಂತಹ ವ್ಯಕ್ತಿತ್ವಗಳಾಗಿ ಬೆಳೆಸುವುದು – ಇವು ನಲವತ್ತೊಂದು ವರ್ಷದ ಸುಲೇಮಾನ್ ಕನಸಾಗಿತ್ತು. ಕಲಾವಿದರು, ಕ್ರೀಡಾಪಟುಗಳು, ವಿವಿಧ ತಜ್ಞರು ಮತ್ತು ಮಾಧ್ಯಮ ಕಾರ್ಯಕರ್ತರು ಸೇರಿದಂತೆ ಫೆಲೆಸ್ತೀನಿಯನ್ನರು ಸಾವು ಬರುವವರೆಗೂ ಇಂತಹ ಸುಂದರ ಕನಸಿನೊಂದಿಗೆ ಬದುಕುತ್ತಿರುತ್ತಾರೆ.

    ಕುಟುಂಬದ ಹಸಿವು ತಣಿಸಲು ಸುಲೇಮಾನ್ ನಿರಾಶ್ರಿತರ ಶಿಬಿರದ ಬಳಿಯ ಆಹಾರ ವಿತರಣಾ ಕೇಂದ್ರದಲ್ಲಿ ಸರದಿಯಲ್ಲಿ ಕಾಯುತ್ತಿದ್ದರು. ಆಹಾರಕ್ಕಾಗಿ ಸರದಿ ಸಾಲಿನಲ್ಲಿ ನಿಂತವರ ಮೇಲೆ ಪ್ರಪಂಚದ ಮೌನ ಬೆಂಬಲದೊಂದಿಗೆ ಜಿಯೋನಿಸ್ಟ್ ಸೈನ್ಯವು ಕ್ಷಿಪಣಿಗಳ ಮಳೆ ಸುರಿಸಿದಾಗ ಕೊಲ್ಲಲ್ಪಟ್ಟ 1,500 ಜನರಲ್ಲಿ ಸುಲೇಮಾನ್ ಅಲ್-ಒಬೈದ್ ಒಬ್ಬರು. ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (UEFA) ಕಾಟಾಚಾರಕ್ಕೆ ಎರಡು ಗೆರೆಯ ಸಂತಾಪ ಸೂಚಿಸಿತು. “ಫೆಲಸ್ತೀನ್ ಪೀಲೆ ಸುಲೇಮಾನ್ ಅಲ್-ಒಬೈದ್‌ಗೆ ಭಾವಪೂರ್ಣ ವಿದಾಯ ಅವರು ಕತ್ತಲೆಯ ಕಾಲದಲ್ಲೂ ಅಸಂಖ್ಯಾತ ಮಕ್ಕಳಿಗೆ ಭರವಸೆಯ ಕಿರಣ ಮೂಡಿಸಿದ ಪ್ರತಿಭಾವಂತ” ಎಂದು UEFAಯ Xನಲ್ಲಿ ಬರೆಯಿತು. ಈ ಸಂದೇಶವು ಸುಲೇಮಾನ್, ಗಾಝಾವನ್ನು ಪ್ರೀತಿಸುವ ಮತ್ತು ಮಾನವೀಯತೆಯನ್ನು ಪ್ರೀತಿಸುವವರಿಗೆ ಅರಗಿಸಿಕೊಳ್ಳಲಾಗಲಿಲ್ಲ.

    ಸುಲೇಮಾನ್ ನಿವೃತ್ತರಾದದ್ದಲ್ಲ, ಅವರು ವೃದ್ಧಾಪ್ಯದಿಂದ ಸಾಯಲಿಲ್ಲ, ಅವರು ಮೈದಾನದಲ್ಲಿ ಆಘಾತದಿಂದ ಸತ್ತದ್ದಲ್ಲ. ಅವರನ್ನು ಇಸ್ರೇಲ್ ಎಂಬ ಕ್ರೂರ ಸೈನ್ಯವು ಕೊಂದು ಹಾಕಿದ್ದು ಎಂಬುದು ಹಾಡು ಹಗಲಿನಂತೆ ಸ್ಪಷ್ಟವಾಗಿದ್ದರೂ ಕೊಂದ ಹಂತಕರ ಹೆಸರನ್ನು ಉಲ್ಲೇಖಿಸಲು ಹಿಂಜರಿಕೆ ಏಕೆ ಎಂಬುದೇ ಎಲ್ಲರ ಪ್ರತಿಕ್ರಿಯೆಯಾಗಿತ್ತು. ಫೆಲೆಸ್ತೀನ್‌ನ ಎಲ್ಲಾ ಕಹಿ ಮತ್ತು ನೋವನ್ನು ತನ್ನ ಎದೆಗೆ ಹಾಕಿಕೊಂಡಿರುವ ಲಿವರ್‌ಪೂಲ್‌ನ ಈಜಿಪ್ಟ್ ತಾರೆ ಮೊಹಮ್ಮದ್ ಸಲಾಹ್, UEFA ಅಥವಾ ಅವರಂತೆಯೇ ನಿದ್ರಿಸುತ್ತಿರುವ ಇಡೀ ಜಗತ್ತನ್ನು ಕೇಳುತ್ತಿದ್ದಾರೆ, “ಅವರು ಎಲ್ಲಿ, ಹೇಗೆ ಮತ್ತು ಏಕೆ ಸತ್ತರು ಎಂದು ನೀವು ನಮಗೆ ಹೇಳಬಲ್ಲಿರಾ?” ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದ ಸಂದೇಶವಾಗಿತ್ತದು, ಇಸ್ರೇಲಿಗೆ ಮಾಮೂಲಿಯಾಗಿದ್ದ ಒಂದು ಹತ್ಯೆಯನ್ನು ಜಗತ್ತನ್ನು ನಡುಗಿಸುವ ಪ್ರಶ್ನೆಯನ್ನಾಗಿ ಪರಿವರ್ತಿಸಲು ಇದಕ್ಕೆ ಸಾಧ್ಯವಾಯಿತು.

    ಜಿಯೋನಿಸ್ಟ್ ಭಯೋತ್ಪಾದನೆಯ ವಿರುದ್ಧ ಮೊದಲ ದಿನದಿಂದಲೂ ಸಲಾಹ್ ಫೆಲಸ್ತೀನಿಯನ್ನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

    ಮುಗ್ಧ ಜೀವಗಳು ಸೇರಿದಂತೆ 62,000ಕ್ಕೂ ಹೆಚ್ಚು ಮಾನವ ಜೀವಗಳ ಸಾಮೂಹಿಕ ಹತ್ಯೆಯ ಹೊರತಾಗಿಯೂ ರಕ್ತಪಿಪಾಸು ಆಗಿಯೇ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವ ಇಸ್ರೇಲ್ ಅನ್ನು ತಹಬಂದಿಗೆ ತರಲು ಜಗತ್ತಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅವರ ಪ್ರಶ್ನೆ.

    ಅತ್ಯಂತ ಸಣ್ಣ ಪ್ರದೇಶದಲ್ಲಿ. ಯುದ್ಧ ಭೀತಿಯ ನಡುವೆ, ನಿರಂತರ ದಿಗ್ಬಂಧನದ ನಡುವೆಯೂ ಅದನ್ನು ಲೆಕ್ಕಿಸದೆ ತಾವು ಇಷ್ಟಪಟ್ಟ ರಂಗಗಳಲ್ಲಿ ಗಾಝಾದ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅತ್ಯುತ್ತಮ ವೈದ್ಯಕೀಯ ತಜ್ಞರು, ಪ್ರಸಿದ್ಧ ಶಿಕ್ಷಣ ತಜ್ಞರು, ಅಂತರಾಷ್ಟಿçÃಯವಾಗಿ ಗುರುತಿಸಲ್ಪಟ್ಟ ಕಲಾವಿದರು ಮತ್ತು ಪತ್ರಕರ್ತರು ಮರಣ ಭೀತಿಯ ನಡುವೆಯು ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ಗೆ ತಮ್ಮನ್ನು ಅರ್ಪಿಸಿಕೊಂಡ ಯುವಕರು… ಹೀಗೆ ಗಾಝಾದ ಜನತೆಯು ವಿಶ್ವದ ಅಸಾಧಾರಣ ಹಾಗೂ ಅದ್ಭುತವಾದ ಮಾನವ ಸಂಪನ್ಮೂಲವಾಗಿದೆ.

    ಇಸ್ರೇಲ್, ಕ್ಷಿಪಣಿಗಳು ಮತ್ತು ಹಸಿವಿನಿಂದ ಅವರನ್ನು ನಾಶಪಡಿಸುತ್ತಿದೆ ಅವರು ಇಲ್ಲಿಯವರೆಗೆ ಗಾಝಾದಲ್ಲಿ 103 ಮಕ್ಕಳು ಸೇರಿದಂತೆ 421 ಫುಟ್ಬಾಲ್ ಆಟಗಾರರನ್ನು ಕೊಂದಿದ್ದಾರೆ. ದೊಡ್ಡ ಕ್ರೀಡಾಂಗಣಗಳು ಮತ್ತು ಸಣ್ಣವುಗಳು ಸೇರಿದಂತೆ 268 ಕ್ರೀಡಾಂಗಣಗಳನ್ನು ಕೆಡವಿದ್ದಾರೆ. ಝಿಯೋನಿಸ್ಟ್ ನರಮೇಧವು ಗಾಝಾದಲ್ಲಿ ಹತ್ತಾರು ಸಾವಿರ ಮುಗ್ಧ ಜನರನ್ನು ಕೊಲ್ಲುತ್ತಿದೆ. ಹಸಿವು ಹಾಗೂ ಬಾಂಬುಗಳ ಭೀತಿಯ ನಡುವೆ ಅವರು ನಿರ್ಮಿಸಿರುವ ಮಹಾನ್ ಮಾನವ ನಾಗರಿಕತೆಯನ್ನು ಸಹ ನಾಶಪಡಿಸುತ್ತಿದೆ. ಮೊಹಮ್ಮದ್ ಸಲಾಹ್ ಅವರು ಎತ್ತಿರುವ ಪ್ರಶ್ನೆಯು ಒಂದು ಸಣ್ಣ ಬೆರಳನ್ನು ಎತ್ತಲೂ ಕೂಡ ಸಾಧ್ಯವಾಗದೇ ಲೋಕದಲ್ಲಿ ಮೆರೆದಾಡುತ್ತಿರುವ ಅಧಿಕಾರ ಶಾಹಿ ಜಗತ್ತಿನ ಮುಂದೆ, ಅದರ ಕಪಟತೆಯ ವಿರುದ್ಧ ಬೀಸಿದ ಚಾಟಿಯೇಟು ಆಗಿದೆ.
    ಮುರ್ಶಿದ್ ಅಲಿ

  • ಗಾಝಾ ಮಕ್ಕಳ ಬಾಲ್ಯ ಭೀಕರ: 
ಗುಟುಕು ನೀರಿಗೂ ಹಾಹಾಕಾರ

    ಗಾಝಾ ಮಕ್ಕಳ ಬಾಲ್ಯ ಭೀಕರ: ಗುಟುಕು ನೀರಿಗೂ ಹಾಹಾಕಾರ

    ಸುಮಾರು ಎರಡು ವರ್ಷದಿಂದ ನಡೆಯುತ್ತಿರುವ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಿಂದ ಗಾಜಾ ಪಟ್ಟಿಯ ಲಕ್ಷಾಂತರ ಮಕ್ಕಳ ಬದುಕು ಜರ್ಜರಿತವಾಗಿದೆ; ಸ್ವಲ್ಪ ಆಹಾರ, ಗುಟುಕು ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಅವರ ಪೋಷಕರೇ ಉಳಿದಿಲ್ಲ. ಕಣ್ಣ ಮುಂದೆ ಪ್ರೀತಿಪಾತ್ರರ ಸಾವು, ಹಿಂಸಾಚಾರ, ಬಾಂಬ್, ಕ್ಷಿಪಣಿಗಳ ನಿರಂತರ ದಾಳಿ, ಯಾವ ಕ್ಷಣ ಏನಾಗುವುದೋ ಎನ್ನುವ ಭಯ, ಶಿಬಿರದಿಂದ ಶಿಬಿರಕ್ಕೆ ಅಲೆಯುವ ಬದುಕು; ಭೂಮಿಯ ಮೇಲೆ ಮನುಷ್ಯನಿಗೆ ಎದುರಾಗಬಹುದಾದ ಸಕಲ ಸವಾಲುಗಳನ್ನೂ, ಸಂಕಷ್ಟಗಳನ್ನೂ ಬಾಲ್ಯದಲ್ಲೇ ಅನುಭವಿಸುತ್ತಿರುವ, ಯುದ್ಧದ ಆತ್ಯಂತಿಕ ಪರಿಣಾಮಗಳಿಗೆ ಒಳಗಾಗಿರುವ ಗಾಜಾ ‍ಪಟ್ಟಿಯ ಮಕ್ಕಳ ದುರ್ಭರ ಪರಿಸ್ಥಿತಿಯನ್ನು ವಿವರಿಸಲು ಪದಗಳೇ ಲಭ್ಯವಿಲ್ಲ.

    ನಿನಗೆ ಕ್ರೆಯಾನ್‌ಗಳು ಬೇಕೋ, ಬ್ರೆಡ್ ಬೇಕೋ ಎಂದು ಕೇಳಿದರೆ, ನನ್ನ ಆಯ್ಕೆ ಬ್ರೆಡ್’ –

    ಇದು ಗಾಜಾ ಪಟ್ಟಿಯ 12 ವರ್ಷದ ರಹ್ಮಾ ಅಬು ಅಬೆದ್‌ಳ ಮಾತು. ಆಟ ಎಂದರೆ ಊಟ, ನಿದ್ದೆ ಎಲ್ಲವನ್ನೂ ಮರೆಯುವ ಮಕ್ಕಳ ನಡುವೆ ರಹ್ಮಾಳ ಉತ್ತರ ವಿಚಿತ್ರ ಅನ್ನಿಸಬಹುದು. ಆದರೆ, ರಹ್ಮಾಳ ಮಾತಿನಲ್ಲಿ ಗಾಜಾ ಪಟ್ಟಿಯ ಮಕ್ಕಳ ಭೀಕರ ಚಿತ್ರಣವಿದೆ.

    ಇಸ್ರೇಲ್–ಪ್ಯಾಲೆಸ್ಟೀನ್ ನಡುವಿನ ಸಂಘರ್ಷದಲ್ಲಿ ದಕ್ಷಿಣ ಗಾಜಾದಲ್ಲಿದ್ದ ರಹ್ಮಾಳ ಮನೆ ನೆಲಕಚ್ಚಿದೆ. ತನ್ನ ಐವರು ಒಡಹುಟ್ಟಿದವರು ಮತ್ತು ಪೋಷಕರೊಂದಿಗೆ ಆಕೆ ಮೀನುಗಾರಿಕಾ ಉಪಕರಣಗಳ ಶೆಡ್‌ನಲ್ಲಿ ವಾಸವಾಗಿದ್ದಾಳೆ. ರಹ್ಮಾ ಅವರಂತೆಯೇ ಅನೇಕ ನಿರಾಶ್ರಿತ ಕುಟುಂಬಗಳೂ ಅಲ್ಲಿ ಆಶ್ರಯ ಪಡೆದಿವೆ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವ ರಹ್ಮಾ, ದಿನದ ಬಹುಸಮಯವನ್ನು ಹತ್ತಿರದ ಸಮುದ್ರತೀರದಲ್ಲಿ ಕಳೆಯುತ್ತಾಳೆ. ಒಳ್ಳೆಯ ಬಟ್ಟೆ, ಒಳ್ಳೆಯ ಊಟ ಎಂದರೆ ಹೇಗಿರುತ್ತವೆ ಎನ್ನುವುದರ ನೆನಪೂ ಆಕೆಗೆ ಉಳಿದಿಲ್ಲ. ಮಾಂಸ ತಿನ್ನುವುದು ಅವಳಿಗೀಗ ಒಂದು ಕನಸು.

    ಇದು ರಹ್ಮಾ ಒಬ್ಬಳ ಸ್ಥಿತಿ ಅಲ್ಲ; ಗಾಜಾ ಪಟ್ಟಿಯಲ್ಲಿರುವ 11 ಲಕ್ಷ ಮಕ್ಕಳ ದಾರುಣ ಪರಿಸ್ಥಿತಿ. 22 ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಗಾಜಾದಲ್ಲಿ ಬಾಲ್ಯ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಇಲ್ಲಿನ ಬಹುತೇಕ ಮಕ್ಕಳು ಎರಡು ವರ್ಷದಿಂದ ಶಾಲೆಯ ಮುಖವನ್ನೇ ಕಂಡಿಲ್ಲ. ಈ ಭಾಗದ ಶೇ 90ರಷ್ಟು ಶಾಲೆಗಳು ನೆಲಕ್ಕುರುಳಿದ್ದರೆ, ಅಳಿದುಳಿದ ಶಾಲೆಗಳು ನಿರಾಶ್ರಿತ ಶಿಬಿರಗಳಾಗಿ ಮಾರ್ಪಟ್ಟಿವೆ.

    ಮಕ್ಕಳಿಗೆ ಹೊಟ್ಟೆತುಂಬ ಊಟ, ಮೈಮುಚ್ಚುವಷ್ಟು ಬಟ್ಟೆ, ದಾಹ ತೀರುವಷ್ಟು ಕುಡಿಯುವ ನೀರು ಕೂಡ ದುರ್ಲಭವಾಗಿವೆ; ಹಸಿವು, ಪದೇ ಪದೇ ಆಶ್ರಯ ಶಿಬಿರಗಳ ಬದಲಾವಣೆ, ಬಾಂಬ್, ಕ್ಷಿಪಣಿ ದಾಳಿಗಳಿಂದ ಅವರು ತೀವ್ರ ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಗಾಗಿದ್ದು, ಅವರಿಗೆ ತಕ್ಷಣ ವೈದ್ಯಕೀಯ ನೆರವು ಬೇಕಾಗಿದೆ. ಯುದ್ಧದ ಭೀಕರತೆ, ‌ಹಿಂಸಾಚಾರ, ಪ್ರೀತಿಪಾತ್ರರ ಸಾವು, ಭಯ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಇಲ್ಲಿನ ಮಕ್ಕಳು ಜೀವಚ್ಛವಗಳಾಗಿದ್ದಾರೆ.

    ಮಹಿಳೆಯರು, ಅದರಲ್ಲೂ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಗಾಜಾ ಪಟ್ಟಿಯಲ್ಲಿ ನಿರ್ಮಾಣವಾಗಿರುವ ಮಾನವೀಯ ಬಿಕ್ಕಟ್ಟಿನ ಮೊದಲ ಬಲಿಪಶುಗಳಾಗಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಅದಕ್ಕಿಂತ ಹೆಚ್ಚು ಮಂದಿ ಗಾಯಾಳುಗಳಾಗಿ ಸರಿಯಾದ ಚಿಕಿತ್ಸೆಯೂ ಸಿಗದೇ ನರಳುತ್ತಿದ್ದಾರೆ. ಯುದ್ಧದಿಂದ ನೇರವಾಗಿ ಸತ್ತವರಂತೆಯೇ ಊಟ ಸಿಗದೇ ಸತ್ತವರು, ಕಾಯಿಲೆಗಳಿಂದ ಸತ್ತ ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ. ಏರುತ್ತಿರುವ ಉಷ್ಣಾಂಶ ಕೂಡ ಅವರಿಗೆ ಶಾ‍ಪವಾಗಿ ಪರಿಣಮಿಸಿದೆ. ಸುಮಾರು 17 ಸಾವಿರ ಮಕ್ಕಳು ತಮ್ಮ ಪೋಷಕರಿಂದ ದೂರವಾಗಿದ್ದಾರೆ. ಇಸ್ರೇಲ್ 11 ತಿಂಗಳು ಆಹಾರ ಪದಾರ್ಥಗಳ ಸಾಗಣೆಯನ್ನು ನಿರ್ಬಂಧಿಸಿದ್ದರಿಂದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತೀವ್ರ ಅಪೌಷ್ಟಿಕತೆಯ ಅಪಾಯ ಎದುರಿಸುತ್ತಿದ್ದಾರೆ.

    ಆಹಾರ ಪದಾರ್ಥಗಳ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ. ಬೇಕರಿಗಳನ್ನು ಮುಚ್ಚಲಾಗಿದೆ. ಆಹಾರ ಧಾನ್ಯಗಳ ಬೆಲೆ ಶೇ 700ರಷ್ಟು ಹೆಚ್ಚಾಗಿದ್ದು, ಹಸಿವಿನ ವಿರಾಟ್ ಸ್ವರೂಪವು ಇಲ್ಲಿ ಕಂಡುಬರುತ್ತಿದೆ. ದಿನಕ್ಕೆ ಒಂದು ಹೊತ್ತು ಕೂಡ ಊಟ ಸಿಗದವರ ಸಂಖ್ಯೆ ದೊಡ್ಡದಿದೆ. ಹಸಿವು ತಾಳಲಾಗದೇ ಮಕ್ಕಳು ಆಕ್ರಂದನ ಮಾಡುವುದು, ‍ಪೋಷಕರು ತಮ್ಮ ಮಕ್ಕಳಿಗಾಗಿ ಹಿಡಿ ಅನ್ನ ನೀಡುವಂತೆ ಅಧಿಕಾರಿಗಳನ್ನು ಬೇಡಿಕೊಳ್ಳುವುದು ಇಲ್ಲಿ ಸಾಮಾನ್ಯ ದೃಶ್ಯಗಳಾಗಿವೆ.

    ಕೆಲವು ಸ್ವಯಂ ಸೇವಾ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ಇಲ್ಲಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ಶಮನ ಮಾಡಲು ಒಂದಿಷ್ಟು ಪ್ರಯತ್ನ ನಡೆಸುತ್ತಿವೆ. ಅದಕ್ಕಾಗಿ ಹಲವು ದೇಶಗಳು ಧನಸಹಾಯ ಮಾಡುತ್ತಿವೆ. ಆದರೆ, ಇಲ್ಲಿನ ಪರಿಸ್ಥಿತಿಯ ತೀವ್ರತೆಗೆ ತಕ್ಕಂತೆ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ರಕ್ಷಣಾ ಕಾರ್ಯದಲ್ಲಿ, ಆರೋಗ್ಯ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿಯೂ ಹಸಿದ ಹೊಟ್ಟೆಯಲ್ಲಿಯೇ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆಹಾರ ಪದಾರ್ಥ, ಪರಿಹಾರ ಸಾಮಗ್ರಿಯನ್ನು ಹೊತ್ತ ಟ್ರಕ್‌ಗಳು ಆಗಮಿಸುತ್ತಿದ್ದಂತೆಯೇ ಜನ ಅವುಗಳನ್ನು ಮುತ್ತಿಕೊಳ್ಳುವ, ನಿರಾಶ್ರಿತರಿಗೆ ಪೂರೈಸಲಾಗುವ ಆಹಾರಕ್ಕಾಗಿ ಪೈಪೋಟಿ ನಡೆಸುವ ಚಿತ್ರಗಳು, ವಿಡಿಯೊಗಳು ಅಲ್ಲಿನ ಪರಿಸ್ಥಿತಿಯ ತೀವ್ರತೆಯನ್ನು ಹೇಳುತ್ತಿವೆ.

    ಆಹಾರಕ್ಕಾಗಿ, ಜೀವ ಉಳಿಸುವಂಥ ಮಾನವೀಯ ನೆರವಿಗಾಗಿ ಆಸೆಯಿಂದ ಎದುರುನೋಡುತ್ತಿರುವ, ಎಲುಬಿನ ಹಂದರವಾಗಿರುವ ಮಕ್ಕಳ ದೈನ್ಯ, ನೋವು ತುಂಬಿದ ಕಣ್ಣುಗಳು ಗಾಜಾ ಪಟ್ಟಿಯ ಪರಿಸ್ಥಿತಿಗೆ, ಮನುಷ್ಯ ನಿರ್ಮಿತ ಬಿಕ್ಕಟ್ಟಿನ ತೀವ್ರತೆಗೆ, ದೇಶ–ದೇಶಗಳ ನಡುವಿನ ಯುದ್ಧ, ಅಸಹನೆ, ಆಕ್ರಮಣಗಳಿಂದ ಉಂಟಾಗುವ ಪರಿಣಾಮಗಳಿಗೆ ಸಂಕೇತದಂತಿವೆ.

    ನೆರವು ತಡೆಯುತ್ತಿರುವ ಇಸ್ರೇಲ್‌

    ಗಾಜಾ ಪಟ್ಟಿಯ ಶೇ 86ರಷ್ಟು ಭೂಭಾಗದ ಮೇಲೆ ನಿಯಂತ್ರಣ ಹೊಂದಿರುವ ಇಸ್ರೇಲ್‌, ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತ ಪ್ಯಾಲೆಸ್ಟೀನಿಯನ್ನರಿಗೆ ಆಹಾರ ವಸ್ತುಗಳು ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಪೂರೈಸುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕ ಆರೋಪಿಸಿದೆ. ಕಳೆದ ಕೆಲವು ವಾರಗಳಿಂದ ಗಾಜಾ ಪಟ್ಟಿಗೆ ಸ್ವಲ್ಪ ಪ್ರಮಾಣದಲ್ಲಿ ನೆರವು ತಲುಪುವುದಕ್ಕೆ ಮಾತ್ರ ಇಸ್ರೇಲ್‌ ಅವಕಾಶ ನೀಡಿದೆ. ಆದರೆ, ಅಲ್ಲಿ ಹೆಚ್ಚುತ್ತಿರುವ ಹಸಿವನ್ನು ತಡೆಯಲು ಇದು ಸಾಕಾಗುತ್ತಿಲ್ಲ ಎಂದು ಅದು ಹೇಳಿದೆ. ಯುದ್ಧ ಆರಂಭವಾದ, 2023ರ ಅಕ್ಟೋಬರ್‌ 7ಕ್ಕೂ ಮೊದಲು ಪ್ರತಿ ದಿನ 500 ಟ್ರಕ್‌ಗಳು ಗಾಜಾವನ್ನು ಪ್ರವೇಶಿಸುತ್ತಿದ್ದವು. ಅಂದರೆ ಪ್ರತಿ ತಿಂಗಳು 15 ಸಾವಿರದಷ್ಟು ಟ್ರಕ್‌ಗಳು ನೆರವಿನ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದವು. ಯುದ್ಧದ ನಂತರ ಇದಕ್ಕೆ ಇಸ್ರೇಲ್‌ ತಡೆಯೊಡ್ಡಿತ್ತು. ಕಡಿಮೆ ಸಂಖ್ಯೆಯ ಟ್ರಕ್‌ಗಳಿಗಷ್ಟೇ ಅವಕಾಶ ನೀಡುತ್ತಿತ್ತು.

    ಈಗ ಅಂತರರಾಷ್ಟ್ರೀಯ ಒತ್ತಡದ ಬಳಿಕ ಆಹಾರ ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳಿಗೆ ಗಾಜಾದತ್ತ ತೆರಳಲು ಮತ್ತು ವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಅಗತ್ಯ ವಸ್ತುಗಳನ್ನು ನಿರಾಶ್ರಿತ ಶಿಬಿರಗಳ ವ್ಯಾಪ್ತಿಯಲ್ಲಿ ಹಾಕಲು ಇಸ್ರೇಲ್‌ ಅವಕಾಶ ನೀಡಿದೆ ಎಂದು ವರದಿಯಾಗಿದೆ.

    ಚಿಕಿತ್ಸೆಗಾಗಿ ಬ್ರಿಟನ್‌ಗೆ

    ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮತ್ತು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 30ರಿಂದ 50 ಮಕ್ಕಳನ್ನು ಮುಂದಿನ ವಾರಗಳಲ್ಲಿ ಗಾಜಾದಿಂದ ಬ್ರಿಟನ್‌ಗೆ ಕರೆದುಕೊಂಡು ಬಂದು ಸರ್ಕಾರ ಚಿಕಿತ್ಸೆ ನೀಡಲಿದೆ ಎಂದು ಬಿಬಿಸಿ ವರದಿ ಮಾಡಿದೆ.

    ಹಮಾಸ್‌ ನೇತೃತ್ವದ ಆರೋಗ್ಯ ಸಚಿವಾಲಯದ ವೈದ್ಯರು ಆಯ್ಕೆ ಮಾಡಿದ ಮಕ್ಕಳನ್ನು ಕರೆದುಕೊಂಡು ಬಂದು ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ಪ್ರಯಾಣದ ಸಮನ್ವಯವನ್ನು ವಿಶ್ವ ಆರೋಗ್ಯ ಸಂಸ್ಥೆ ಮಾಡಲಿದೆ. 

    ಅಮೆರಿಕದ ಮೌನಕ್ಕೆ ಅತೃಪ್ತಿ

    ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಉಕ್ರೇನ್‌ ಸೈನಿಕರು ಹಾಗೂ ಜನರು ಸಾಯುತ್ತಿರುವುದರ ಬಗ್ಗೆ ಮಾತನಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೌನ ತಾಳಿದ್ದಾರೆ. ಬದಲಿಗೆ, ಅಮೆರಿಕ ಸರ್ಕಾರ ಇಸ್ರೇಲ್‌ ಅನ್ನು ಬೆಂಬಲಿಸುತ್ತಿರುವುದು ಪ್ಯಾಲೆಸ್ಟೀನ್‌ನ ಬೆಂಬಲಕ್ಕೆ ನಿಂತಿರುವ ರಾಷ್ಟ್ರಗಳು ಹಾಗೂ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

    ಆಧಾರ: ಇಂಟರ್‌ನ್ಯಾಷನಲ್ ರೆಸ್ಕ್ಯೂಕಮಿಟಿ, ಬಿಬಿಸಿ, ರಾಯಿಟರ್ಸ್‌, ವಿಶ್ವಸಂಸ್ಥೆಯ ವರದಿಗಳು, ದಿ ನ್ಯೂಯಾರ್ಕ್‌ ಟೈಮ್ಸ್‌

  • ಚರ್ಚ್ ಮೇಲೆ ಇಸ್ರೇಲ್ ಮಿಸೈಲ್ ದಾಳಿ:ಸ್ಪಷ್ಟೀಕರಣ ನೀಡದಿರಲು ಕಾರಣವೇನು?

    ಚರ್ಚ್ ಮೇಲೆ ಇಸ್ರೇಲ್ ಮಿಸೈಲ್ ದಾಳಿ:ಸ್ಪಷ್ಟೀಕರಣ ನೀಡದಿರಲು ಕಾರಣವೇನು?

    ಗಾಝಾದಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್‌ ಮೇಲೆ ಗುರುವಾರ ಬೆಳಿಗ್ಗೆ ಇಸ್ರೇಲ್‌ ಶೆಲ್‌ ದಾಳಿ ಮಾಡಿದೆ. ದಾಳಿಯಲ್ಲಿ ಚರ್ಚ್‌ನ ಪಾದ್ರಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
    ಇತ್ತೀಚೆಗೆ ಮೃತಪಟ್ಟ ಪೋಪ್‌ ಫ್ರಾನ್ಸಿಸ್‌ ಅವರಿಗೆ ಈ ಚರ್ಚ್‌ನ ಪಾದ್ರಿ, ಫಾದರ್‌ ಗೇಬ್ರಿಯಲ್‌ ರೊಮಾನಿ ಅವರು ಅತ್ಯಂತ ಆಪ್ತರಾಗಿದ್ದರು. ಗಾಝಾ ಮೇಲೆ ಇಸ್ರೇಲ್‌ ದಾಳಿ ನಡೆಸಲು ಆರಂಭಿಸಿದಾಗಿನಿಂದಲೂ ಫ್ರಾನ್ಸಿನ್‌ ಅವರು ಗೇಬ್ರಿಯಲ್‌ ಅವರಿಗೆ ಪದೇ ಪದೇ ಕರೆ ಮಾಡಿ, ಜನರ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು.

    ದಾಳಿಯ ಬಗ್ಗೆ ಇಸ್ರೇಲ್‌ ಸೇನೆ ಈವರೆಗೂ ‍ಪ್ರತಿಕ್ರಿಯೆ ನೀಡಿಲ್ಲ. ಹಮಾಸ್ ಯೋಧರನ್ನು ಗುರಿಯಾಗಿಸುವ ನೆಪದಲ್ಲಿ ಇಸ್ರೇಲ್ ಗಾಝಾದ ಅಮಾಯಕರ ಹತ್ಯೆ ಮಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಗಾಝಾ ನಗರದ ಕಟ್ಟಡಗಳ ಮೇಲೆ ನಿರಂತರ ಮಿಸೈಲ್ ದಾಳಿ ಮಾಡುವ ಮೂಲಕ, ಇಸ್ರೇಲ್ ಗಾಝಾದ ಜನರಿಗೆ ಆಶ್ರಯ ಇಲ್ಲದಂತೆ ಮಾಡುತ್ತಿದೆ.