Tag: palestine war

  • ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: 
ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ವಾರ್ತಾ ಮಾಧ್ಯಮಗಳಲ್ಲಿ ಒಂದು ಟ್ವೀಟ್ ಸಂದೇಶ ಬಹಳ ವೈರಲ್ ಆಗಿದೆ. ಅದು ಗಾಝ ನಗರದಾದ್ಯಂತ ಇಸ್ರೇಲ್ ಎಂಬ ನರಹಂತಕರ ಬಾಂಬರ್ ಮತ್ತು ಮಿಸೈಲ್ ಆಕ್ರಮಣದ ಲೈವ್ ರಿಪೋರ್ಟ್ ಮಾಡುತ್ತಿದ್ದ ಅಲ್ ಜಝೀರ ಚಾನೆಲ್‌ನ ಅನಸ್ ಅಲ್ ಶರೀಫ್ ಅವರ ಬರಹ.

    ನಿರೀಕ್ಷೆಯಂತೆ ಏಕದೇವೋಪಾಸನೆಯನ್ನು ಉಚ್ಚರಿಸುತ್ತಾ ರಕ್ತದಾಹಿಗಳ ಮಿಸೈಲ್‌ಗಳಿಗೆ ತಲೆಯೊಡ್ಡಿ ವೀರ ಮರಣವನ್ನಪ್ಪಿದ ಅನಸ್ ಅಲ್ ಶರೀಫ್ ಅವರ ಹುತಾತ್ಮತೆಯು ಕಸ್ತೂರಿಯ ಪರಿಮಳದಂತೆ ಜಗತ್ತಿನಾದ್ಯಂತ ಪಸರಿಸಿದೆ. ಗಾಝ ನಗರದಾದ್ಯಂತ (ವಂಶಹತ್ಯೆಯ ರಣಭೂಮಿ) ಓಡಾಡುತ್ತಾ ಅಲ್ ಜಝೀರಾದ ಕ್ಯಾಮರ ಮತ್ತು ಮೈಕ್ ನೊಂದಿಗೆ ವಂಶಹತ್ಯೆಯ ದೃಶ್ಯವನ್ನು ಹೊರಜಗತ್ತಿಗೆ ತಿಳಿಸುತ್ತಿದ್ದ ಆ ಧೀರ ಯೋಧ ತನ್ನ ಸಂದೇಶವನ್ನು ಉಯಿಲು ಬರೆದು ಇನ್ನಿಲ್ಲದ ಲೋಕಕ್ಕೆ ಮರಳಿದ್ದಾರೆ.

    ಇದು ಅವರ ಟ್ವೀಟ್ ಸಂದೇಶದ ಸಾರಾಂಶ
    ಇದು ನನ್ನ ಕೊನೆಯ ಉಯಿಲು ಮತ್ತು ಸಂದೇಶ. ನನ್ನ ಈ ಮಾತು ನಿಮಗೆ ತಲುಪುವುದಿದ್ದರೆ ನನ್ನ ಶಬ್ದವನ್ನಡಗಿಸುವುದರಲ್ಲಿ ಮತ್ತು ನನ್ನನ್ನು ವಧಿಸುವುದರಲ್ಲಿ ಇಸ್ರೇಲ್ ಯಶಸ್ಸಿಯಾಗಿದೆ ಎಂದು ತಿಳಿಯಿರಿ. ಸರ್ವಶಕ್ತನ ಶಾಂತಿ ಮತ್ತು ಕರುಣೆ ನಿಮ್ಮ ಮೇಲಿರಲಿ. ಜಬಾಲಿಯ ಅಭಯಾರ್ಥಿ ಶಿಬಿರದಲ್ಲಿ ಮತ್ತು ಪರಿಸರದಲ್ಲಿ ನಾನು ಬದುಕಿಗೆ ಕಣ್ಣು ತೆರೆದಂದಿನಿAದ ನಾನು ನನ್ನ ಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರ ಎಲ್ಲಾ ರೀತಿಯ ಕಠಿಣ ಪ್ರಯತ್ನ ಮತ್ತು ಸಹಕಾರ ನನ್ನ ಜನರಿಗೆ ನಾನು ನೀಡುತ್ತಾ ಬಂದಿದ್ದೇನೆ ಎಂದು ಸೃಷ್ಟಿಕರ್ತನಿಗೆ ಗೊತ್ತು. ನನ್ನ ಕುಟುಂಬ ಮತ್ತು ತಾಯ್ನಾಡಿನ ಜನತೆಯೊಂದಿಗೆ ನನ್ನ ಹುಟ್ಟೂರಾದ ಅಶ್ಕಲೋನಿಯಾಗೆ ಮರಳಲು ಸಾಧ್ಯವಾಗುವ ರೀತಿಯಲ್ಲಿ ನನ್ನ ಆಯಸ್ಸು ಹೆಚ್ಚಾಗಲಿ ಮತ್ತು ನನ್ನ ಮರಣ ಸಂಭವಿಸದಿರಲಿ ಎಂದು ನಾನು ಬಯಸಿದ್ದೆ. ಆದರೆ ವಿಧಿಯಾಟವನ್ನು ಬಲ್ಲವರಾರು. ಸೃಷ್ಟಿಕರ್ತನ ತೀರ್ಮಾನ ಬೇರೆಯೇ ಆಗಿತ್ತು. ಅವನ ಇಚ್ಛೆಯೇ ಅಂತಿಮ.

    ಬದುಕಿನ ಎಲ್ಲಾ ಸಂಕಟದಲ್ಲೂ ಮತ್ತು ಸಂಕಷ್ಟದಲ್ಲೂ ನಾನು ತುಂಬಾ ನೊಂದಿದ್ದೇನೆ. ಆದರೂ ನನ್ನ ವೃತ್ತಿಯಲ್ಲಿ ಯಾವುದೇ ಕಳಂಕ ಮತ್ತು ಅಸತ್ಯದ ಹಾದಿಯನ್ನು ನಾನು ಆಯ್ಕೆ ಮಾಡಿರಲಿಲ್ಲ. ಸತ್ಯವನ್ನು ಅದರ ನಿಜಾರ್ಥದಲ್ಲಿ ಜನರ ಮುಂದಿಡಲು ನಾನು ಹಿಂದೇಟು ಹಾಕಿರಲಿಲ್ಲ. ನಮ್ಮನ್ನು ನಿರ್ಮೂಲನ ಮಾಡಲು ಸಂಕಲ್ಪ ಮತ್ತು ಪ್ರತಿಜ್ಞೆ ಮಾಡಿದವರೊಂದಿಗೆ ಮೌನ ವಹಿಸಿದವರು, ಉಸಿರು ಬಿಗಿಹಿಡಿದವರು, ನಮ್ಮ ಮಕ್ಕಳು ಮತ್ತು ಸ್ತ್ರೀಯರ ಮಾರಣಹೋಮ ಮತ್ತು ಅವುಗಳ ಅವಶೇಷಗಳನ್ನು ನೋಡಿ ಹೃದಯ ಕಂಪಿಸದವರು, ಒಂದೂವರೆ ವರ್ಷಗಳಿಂದ ನಮ್ಮ ಜನತೆ ಅನುಭವಿಸುತ್ತಿರುವ ವಂಶಹತ್ಯೆಯನ್ನು ಮಾಡುವ ಮತ್ತು ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ಸೃಷ್ಟಿಕರ್ತನು ಸಾಕ್ಷಿಯಾಗಲಿ.

    ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮಿಡಿತವಾದ ಫೆಲೆಸ್ತೀನ್ ಅನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಸ್ವತಂತ್ರ ಫೆಲೆಸ್ತೀನಿನ ಕನಸು ಮತ್ತು ಸುರಕ್ಷಿತವಾಗಿ ಮತ್ತು ಶಾಂತಿ ಹಾಗೂ ಸಮಾಧಾನದಿಂದ ಬದುಕುವ ಅವಕಾಶವನ್ನು ನಿಷೇಧಿಸಲ್ಪಟ್ಟ ಫೆಲೆಸ್ತೀನ್ ಜನತೆಯ ಮತ್ತು ಪುಟ್ಟ ಮಕ್ಕಳ ಹಾಗೂ ಮರ್ದಿತರನ್ನು ನಾನು ನಿಮಗೆ ಬಿಟ್ಟು ಹೋಗುತ್ತಿದ್ದೇನೆ. ಅವರ ಪವಿತ್ರವಾದ ಶರೀರಗಳು ಮತ್ತು ಅವಶೇಷಗಳು ಗಾಝದ ಬಿರುಕುಬಿಟ್ಟ ಮತ್ತು ಹುಡಿ ಹುಡಿಯಾಗಿ ನೆಲಕ್ಕಪ್ಪಳಿಸಿದ ಕಟ್ಟಡಗಳ ರಾಶಿಗಳ ಮಧ್ಯೆ ಗುರುತು ಪತ್ತೆ ಹಚ್ಚಲ್ಪಡದ ರೀತಿಯಲ್ಲಿ ಅಪ್ಪಚ್ಚಿಯಾಗಿ ಬಿದ್ದುಹೋಗಿವೆ. ಗಡಿ ರೇಖೆಯಲ್ಲಿ ನಿರ್ಬಂಧಗಳ ಕಾರಣದಿಂದ ತಡೆಯಲ್ಪಡಬಾರದೆಂದೂ ನಿಯಂತ್ರಣದ ಕಾರಣದಿಂದ ಮೌನ ವಹಿಸಬಾರದೆಂದೂ ನಾನು ನಿಮಗೆ ಉಪದೇಶಿಸುತ್ತಿದ್ದೇನೆ.

    ನಮ್ಮ ಕೈಯಿಂದ ಕಿತ್ತು ತೆಗೆದ ಫೆಲೆಸ್ತೀನ್ ಎಂಬ ಮಾತೃಭೂಮಿಯ ಗೌರವ ಮತ್ತು ಅಭಿಮಾನ ಹಾಗೂ ಸ್ವಾತಂತ್ರ‍್ಯದ ಪ್ರಕಾಶವಾಗುವ ರೀತಿಯಲ್ಲಿ ನೀವು ಅದರ ವಿಮೋಚನೆಯ ವಾಹಕರಾಗಬೇಕು. ನನ್ನ ಕುಟುಂಬ ಮತ್ತು ನನ್ನ ಬದುಕಿನ ಕಣ್ಣು ಎಂದು ವಿಶ್ಲೇಷಿಸುವ ನನ್ನ ಮುದ್ದಿನ ಮಗಳು ಶಾಮ್ ಇದುವರೆಗೂ ಕನಸು ಕಾಣದಿದ್ದ ಅವಳನ್ನು ನಾನು ನಿಮ್ಮ ಕೈಗಿಡುತ್ತಿದ್ದೇನೆ. ನನ್ನ ಅಮ್ಮನನ್ನ ನಿಮಗೆ ವಹಿಸಿಕೊಡುತ್ತಿದ್ದೇನೆ. ಅವರ ಪ್ರಾರ್ಥನೆ ನನಗೆ ಅನುಗ್ರವಾದೀತು. ನನ್ನ ಪ್ರಿಯ ಪತ್ನಿ ಉಮ್ಮು ಸಲಾಹ್ ಬಯಾನ್ ಳನ್ನು ಕೂಡ ನಾನು ನಿಮಗೆ ವಹಿಸಿಕೊಡುತ್ತಿದ್ದೇನೆ. ಯುದ್ಧ ನಮ್ಮಿಬ್ಬರನ್ನು ತಿಂಗಳುಗಳ ಕಾಲ ಬೇರ್ಪಡಿಸಿತು. ಆದರೂ ಅವಳು ಸನ್ನಿವೇಶವನ್ನರಿತು ಓಲಿವ್ ವೃಕ್ಷದ ಹಾಗೆ ಗಟ್ಟಿಯಾಗಿ ನಿಂತಳು. ಸೃಷ್ಟಿಕರ್ತನ ಹೊರತಾಗಿ ನೀವು ಅವಳನ್ನು ಸುತ್ತುವರಿದು ಅವಳ ಸಂರಕ್ಷಣೆಯನ್ನು ವಹಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇನೆ.

    ನನಗೆ ತಪ್ಪು ಸಂಭವಿಸಿದ್ದರೆ ನೀವು ನನಗೆ ಕ್ಷಮಿಸಬೇಕು. ನಾನು ನನ್ನ ಕರಾರನ್ನು ಪಾಲಿಸಿದ್ದೇನೆ. ನಾನು ವಹಿಸಿರುವ ದೌತ್ಯವನ್ನು ಚೆನ್ನಾಗಿ ನಿಭಾಯಿಸಿದೆನೆಂಬ ಸಂತೃಪ್ತಿ ನನಗಿದೆ. ಗಾಝವನ್ನು ನೀವೆಂದೂ ಮರೆಯಬಾರದು. ಅದರ ವಿಮೋಚನೆಗಾಗಿ ಮತ್ತು ಸ್ವತಂತ್ರ ಫೆಲೆಸ್ತೀನ್ ಗಾಗಿ ಹಾಗೂ ಫೆಲೆಸ್ತೀನ್ ಜನತೆ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.

    ಸುಮಾರು ಒಂದುವರೆ ವರ್ಷದಿಂದ ಫೆಲೆಸ್ತೀನ್ ಜನತೆ ಇಸ್ರೇಲಿನ ವಂಶಹತ್ಯೆ, ಆಹಾರೋತ್ಪನ್ನಗಳ ತಡೆ, ನಿರಂತರ ಮರ್ದನ, ಲೈಂಗಿಕ ದೌರ್ಜನ್ಯಗಳಿಂದ ಕಂಗೆಟ್ಟು ಹೋಗಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವ ಮಾನವ ಹಕ್ಕು ಹೋರಾಟಗಾರರು ಅಸಾಹಾಯಕರಾಗಿದ್ದಾರೆ. ಇಸ್ರೇಲ್ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತ ಅಮೇರಿಕ ವಂಶಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವನ್ನೂ ಮೂಕವಾಗಿ ನೋಡುತ್ತಿರುವ ಜಗತ್ತಿನ ಇತರೆಲ್ಲಾ ಸ್ವತಂತ್ರ ರಾಷ್ತ್ರಗಳು ಮೌನವಹಿಸಿವೆ. ಗಾಝ ನಗರದಲ್ಲಿ ಇನ್ನು ಬಾಂಬ್ ವರ್ಷಿಸಲು ಸ್ಥಳವೇ ಇಲ್ಲ ಎಂಬಷ್ಟರ ಮಟ್ಟಿಗೆ ನಶಿಸಿ ಹೋಗಿವೆ.

    ಗಾಝದ ಜನರಿಗೆ ಪತ್ರಕರ್ತರೆಂದರೆ ಎಲ್ಲಿಲ್ಲದ ಸಿಟ್ಟು. ಆದಕ್ಕೆ ಕಾರಣವೂ ಇದೆ. ಸುಳ್ಳು ಸುದ್ಧಿ ಮತ್ತು ಇಸ್ರೇಲ್ ಕಿರಾತಕರು ನಿರಂತರವಾಗಿ ಸುರಿಸುವ ಬಾಂಬರ್‌ಗಳು ಮತ್ತು ಮಿಸೈಲ್‌ಗಳಿಂದ ಸಂಕಷ್ಟದಿAದ ಬದುಕು ಮುನ್ನಡೆಸುತ್ತಿರುವ ಫೆಲೆಸ್ತೀನಿಯರಿಗೆ ಆಹಾರದ ಅಲಭ್ಯತೆಯನ್ನು ಕೂಡ ಸರಿಯಾದ ರೀತಿಯಲ್ಲಿ ವಾರ್ತೆ ನೀಡದಿರುವುದೇ ಅದಕ್ಕೆ ಕಾರಣ. ಮಾತ್ರವಲ್ಲ ಅವರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಾ ಮಹಿಳೆಯರ ಮತ್ತು ಮಕ್ಕಳ ವಂಶ ಹತ್ಯೆಯನ್ನು ವಿಜೃಂಭಿಸುವ ಪತ್ರಕರ್ತರನ್ನು ಅವರಿಗೆ ಕಂಡರಾಗದು. ಆದರೆ ಅನಸ್ ಇವೆಲ್ಲದಕ್ಕಿಂತಲೂ ವಿಭಿನ್ನ. ಅವರು ಸತ್ಯದ ವಾಹಕರು. ಫೆಲೆಸ್ತೀನಿ ಜನತೆಯನ್ನು ಹತ್ತಿರದಿಂದ ತಿಳಿದವರು ಹಾಗೂ ತನ್ನವರಿಗಾಗಿ ಸದಾ ಮಿಡಿಯುವ ಹೃದಯವಂತರು.

    ಇತ್ತೀಚಿಗೆ ವರದಿ ಮಾಡುತ್ತಿದ್ದ ವೇಳೆ ಅನಸ್ ಬಳಲಿ ತನ್ನ ಕ್ಯಾಮಾರದೊಂದಿಗೆ ಕೆಳಗೆ ಬಿದ್ದಾಗ ಜನರು ಈ ರೀತಿ ಆಡುತ್ತಿದ್ದರು. ಅನಸ್ ಎದೆಗುಂದದಿರು, ಸ್ಥೆöÊರ್ಯದಿಂದಿರು. ಧೀರವಾಗಿ ಮುನ್ನುಗ್ಗಿ ದೌತ್ಯವನ್ನು ನಿರ್ವಹಿಸು. ಅನಸ್ ನಂತಹ ನೂರಾರು ಅನಸ್‌ಗಳು ಫೆಲೆಸ್ತೀನ್‌ನಲ್ಲಿ ಹುಟ್ಟಿ ಬರಬಹುದು ಆದರೆ ಅವರಾರು ಅನಸ್‌ಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅನಸ್‌ರ ವ್ಯಕ್ತಿತ್ವ, ಆತ್ಮ ಸ್ಥೆöÊರ್ಯ ಹಾಗೂ ವೀರಾವೇಶದಿಂದ ತನ್ನ ಕೆಲಸವನ್ನು ನಿರ್ವಹಿಸುವ ಶೈಲಿ ಅದ್ಭುತವಾಗಿತ್ತು.

    ಜನವರಿ ತಿಂಗಳಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. ಆದರೆ ಇಸ್ರೇಲ್ ಅದನ್ನು ಉಲ್ಲಂಘಿಸಿ ನಿರಂತರವಾಗಿ ಬಾಂಬ್ ಗಳನ್ನು ಸುರಿದ ಪರಿಣಾಮ ಅನಸ್ ಮತ್ತು ಅವರ ಸ್ನೇಹಿತರು ಸೇರಿದಂತೆ ಒಟ್ಟು ಐದು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ 28 ವರ್ಷ ಪ್ರಾಯದ ಅನಸ್ ಗಾಝದ ಹೆಸರಾಂತ ಪತ್ರಕರ್ತನಾಗಿದ್ದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ನಿಷೇಧ ಹೇರಿದ್ದರೂ ಬಹಳ ಅಚ್ಚುಕಟ್ಟಾಗಿ ಧೈರ್ಯದಿಂದ ಅನಸ್ ತನ್ನ ದೌತ್ಯವನ್ನು ನಿರ್ವಹಿಸುತ್ತಿದ್ದರು. ಅವರ ವಧೆ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಪ್ರತಿಭಟನೆಗೆ ಕಾರಣವಾಗಿದೆ.

    ಇಂದಿನ ಜಗತ್ತು ರಕ್ತದಾಹಿಗಳ ರಣಭೂಮಿಯಾಗಿದೆ, ಯುದ್ಧ ಸರಕು ಮತ್ತು ಆಯುಧ ವ್ಯಾಪಾರಿಗಳ ಮಾರುಕಟ್ಟೆಯಾಗಿದೆ. ಮಾನವೀಯತೆ ನಶಿಸಿ ಹೋದ, ವಂಶಹತ್ಯೆಯನ್ನೇ ಬಂಡವಾಳವಾಗಿಸಿದ ದುರುಳರು ಇಂದು ಜಗತ್ತನ್ನು ಆಳುತ್ತಿದ್ದಾರೆ. ಅದನ್ನು ನೋಡುತ್ತಾ ಮೌನ ಸಮ್ಮತಿಯನ್ನು ನೀಡುವವರು ಅದಕ್ಕಿಂತಲೂ ನೀಚರು. ಅಸಹಾಯಕರಾದ ಬಡಪಾಯಿಗಳನ್ನು ನಿಷ್ಕಾರುಣ್ಯವಾಗಿ ವಧಿಸುವ ವ್ಯಾಘ್ರರಿಗೆ ಗಾಝದ ಜನತೆ ತಕ್ಕ ಪಾಠ ಕಲಿಸುವಂತಾಗಲಿ ಮತ್ತು ಅದಕ್ಕಾಗಿ ಲಕ್ಷಾಂತರ ಅನಸ್‌ಗಳು ಜನ್ಮ ತಾಳಲಿ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿ ವೀರ ಮರಣವನ್ನಪ್ಪಿದ ಹುತಾತ್ಮತೆಯ ಉತ್ತುಂಗಕ್ಕೇರಿದ ಅನಸ್‌ರಂತಹ ಮುತ್ತುರತ್ನಗಳು ಸಮಾಜಕ್ಕೆ ಮಾದರಿಯಾಗಲಿ ಎಂಬ ಹಾರೈಕೆ.

    ಅಬ್ದುಸ್ಸಲಾಮ್ ದೇರಳಕಟ್ಟೆ

  • ಗಾಝಾ ಮಕ್ಕಳ ಬಾಲ್ಯ ಭೀಕರ: 
ಗುಟುಕು ನೀರಿಗೂ ಹಾಹಾಕಾರ

    ಗಾಝಾ ಮಕ್ಕಳ ಬಾಲ್ಯ ಭೀಕರ: ಗುಟುಕು ನೀರಿಗೂ ಹಾಹಾಕಾರ

    ಸುಮಾರು ಎರಡು ವರ್ಷದಿಂದ ನಡೆಯುತ್ತಿರುವ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಿಂದ ಗಾಜಾ ಪಟ್ಟಿಯ ಲಕ್ಷಾಂತರ ಮಕ್ಕಳ ಬದುಕು ಜರ್ಜರಿತವಾಗಿದೆ; ಸ್ವಲ್ಪ ಆಹಾರ, ಗುಟುಕು ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಅನೇಕ ಮಕ್ಕಳಿಗೆ ಅವರ ಪೋಷಕರೇ ಉಳಿದಿಲ್ಲ. ಕಣ್ಣ ಮುಂದೆ ಪ್ರೀತಿಪಾತ್ರರ ಸಾವು, ಹಿಂಸಾಚಾರ, ಬಾಂಬ್, ಕ್ಷಿಪಣಿಗಳ ನಿರಂತರ ದಾಳಿ, ಯಾವ ಕ್ಷಣ ಏನಾಗುವುದೋ ಎನ್ನುವ ಭಯ, ಶಿಬಿರದಿಂದ ಶಿಬಿರಕ್ಕೆ ಅಲೆಯುವ ಬದುಕು; ಭೂಮಿಯ ಮೇಲೆ ಮನುಷ್ಯನಿಗೆ ಎದುರಾಗಬಹುದಾದ ಸಕಲ ಸವಾಲುಗಳನ್ನೂ, ಸಂಕಷ್ಟಗಳನ್ನೂ ಬಾಲ್ಯದಲ್ಲೇ ಅನುಭವಿಸುತ್ತಿರುವ, ಯುದ್ಧದ ಆತ್ಯಂತಿಕ ಪರಿಣಾಮಗಳಿಗೆ ಒಳಗಾಗಿರುವ ಗಾಜಾ ‍ಪಟ್ಟಿಯ ಮಕ್ಕಳ ದುರ್ಭರ ಪರಿಸ್ಥಿತಿಯನ್ನು ವಿವರಿಸಲು ಪದಗಳೇ ಲಭ್ಯವಿಲ್ಲ.

    ನಿನಗೆ ಕ್ರೆಯಾನ್‌ಗಳು ಬೇಕೋ, ಬ್ರೆಡ್ ಬೇಕೋ ಎಂದು ಕೇಳಿದರೆ, ನನ್ನ ಆಯ್ಕೆ ಬ್ರೆಡ್’ –

    ಇದು ಗಾಜಾ ಪಟ್ಟಿಯ 12 ವರ್ಷದ ರಹ್ಮಾ ಅಬು ಅಬೆದ್‌ಳ ಮಾತು. ಆಟ ಎಂದರೆ ಊಟ, ನಿದ್ದೆ ಎಲ್ಲವನ್ನೂ ಮರೆಯುವ ಮಕ್ಕಳ ನಡುವೆ ರಹ್ಮಾಳ ಉತ್ತರ ವಿಚಿತ್ರ ಅನ್ನಿಸಬಹುದು. ಆದರೆ, ರಹ್ಮಾಳ ಮಾತಿನಲ್ಲಿ ಗಾಜಾ ಪಟ್ಟಿಯ ಮಕ್ಕಳ ಭೀಕರ ಚಿತ್ರಣವಿದೆ.

    ಇಸ್ರೇಲ್–ಪ್ಯಾಲೆಸ್ಟೀನ್ ನಡುವಿನ ಸಂಘರ್ಷದಲ್ಲಿ ದಕ್ಷಿಣ ಗಾಜಾದಲ್ಲಿದ್ದ ರಹ್ಮಾಳ ಮನೆ ನೆಲಕಚ್ಚಿದೆ. ತನ್ನ ಐವರು ಒಡಹುಟ್ಟಿದವರು ಮತ್ತು ಪೋಷಕರೊಂದಿಗೆ ಆಕೆ ಮೀನುಗಾರಿಕಾ ಉಪಕರಣಗಳ ಶೆಡ್‌ನಲ್ಲಿ ವಾಸವಾಗಿದ್ದಾಳೆ. ರಹ್ಮಾ ಅವರಂತೆಯೇ ಅನೇಕ ನಿರಾಶ್ರಿತ ಕುಟುಂಬಗಳೂ ಅಲ್ಲಿ ಆಶ್ರಯ ಪಡೆದಿವೆ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವ ರಹ್ಮಾ, ದಿನದ ಬಹುಸಮಯವನ್ನು ಹತ್ತಿರದ ಸಮುದ್ರತೀರದಲ್ಲಿ ಕಳೆಯುತ್ತಾಳೆ. ಒಳ್ಳೆಯ ಬಟ್ಟೆ, ಒಳ್ಳೆಯ ಊಟ ಎಂದರೆ ಹೇಗಿರುತ್ತವೆ ಎನ್ನುವುದರ ನೆನಪೂ ಆಕೆಗೆ ಉಳಿದಿಲ್ಲ. ಮಾಂಸ ತಿನ್ನುವುದು ಅವಳಿಗೀಗ ಒಂದು ಕನಸು.

    ಇದು ರಹ್ಮಾ ಒಬ್ಬಳ ಸ್ಥಿತಿ ಅಲ್ಲ; ಗಾಜಾ ಪಟ್ಟಿಯಲ್ಲಿರುವ 11 ಲಕ್ಷ ಮಕ್ಕಳ ದಾರುಣ ಪರಿಸ್ಥಿತಿ. 22 ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಗಾಜಾದಲ್ಲಿ ಬಾಲ್ಯ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಇಲ್ಲಿನ ಬಹುತೇಕ ಮಕ್ಕಳು ಎರಡು ವರ್ಷದಿಂದ ಶಾಲೆಯ ಮುಖವನ್ನೇ ಕಂಡಿಲ್ಲ. ಈ ಭಾಗದ ಶೇ 90ರಷ್ಟು ಶಾಲೆಗಳು ನೆಲಕ್ಕುರುಳಿದ್ದರೆ, ಅಳಿದುಳಿದ ಶಾಲೆಗಳು ನಿರಾಶ್ರಿತ ಶಿಬಿರಗಳಾಗಿ ಮಾರ್ಪಟ್ಟಿವೆ.

    ಮಕ್ಕಳಿಗೆ ಹೊಟ್ಟೆತುಂಬ ಊಟ, ಮೈಮುಚ್ಚುವಷ್ಟು ಬಟ್ಟೆ, ದಾಹ ತೀರುವಷ್ಟು ಕುಡಿಯುವ ನೀರು ಕೂಡ ದುರ್ಲಭವಾಗಿವೆ; ಹಸಿವು, ಪದೇ ಪದೇ ಆಶ್ರಯ ಶಿಬಿರಗಳ ಬದಲಾವಣೆ, ಬಾಂಬ್, ಕ್ಷಿಪಣಿ ದಾಳಿಗಳಿಂದ ಅವರು ತೀವ್ರ ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಗಾಗಿದ್ದು, ಅವರಿಗೆ ತಕ್ಷಣ ವೈದ್ಯಕೀಯ ನೆರವು ಬೇಕಾಗಿದೆ. ಯುದ್ಧದ ಭೀಕರತೆ, ‌ಹಿಂಸಾಚಾರ, ಪ್ರೀತಿಪಾತ್ರರ ಸಾವು, ಭಯ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಇಲ್ಲಿನ ಮಕ್ಕಳು ಜೀವಚ್ಛವಗಳಾಗಿದ್ದಾರೆ.

    ಮಹಿಳೆಯರು, ಅದರಲ್ಲೂ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಗಾಜಾ ಪಟ್ಟಿಯಲ್ಲಿ ನಿರ್ಮಾಣವಾಗಿರುವ ಮಾನವೀಯ ಬಿಕ್ಕಟ್ಟಿನ ಮೊದಲ ಬಲಿಪಶುಗಳಾಗಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಅದಕ್ಕಿಂತ ಹೆಚ್ಚು ಮಂದಿ ಗಾಯಾಳುಗಳಾಗಿ ಸರಿಯಾದ ಚಿಕಿತ್ಸೆಯೂ ಸಿಗದೇ ನರಳುತ್ತಿದ್ದಾರೆ. ಯುದ್ಧದಿಂದ ನೇರವಾಗಿ ಸತ್ತವರಂತೆಯೇ ಊಟ ಸಿಗದೇ ಸತ್ತವರು, ಕಾಯಿಲೆಗಳಿಂದ ಸತ್ತ ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ. ಏರುತ್ತಿರುವ ಉಷ್ಣಾಂಶ ಕೂಡ ಅವರಿಗೆ ಶಾ‍ಪವಾಗಿ ಪರಿಣಮಿಸಿದೆ. ಸುಮಾರು 17 ಸಾವಿರ ಮಕ್ಕಳು ತಮ್ಮ ಪೋಷಕರಿಂದ ದೂರವಾಗಿದ್ದಾರೆ. ಇಸ್ರೇಲ್ 11 ತಿಂಗಳು ಆಹಾರ ಪದಾರ್ಥಗಳ ಸಾಗಣೆಯನ್ನು ನಿರ್ಬಂಧಿಸಿದ್ದರಿಂದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತೀವ್ರ ಅಪೌಷ್ಟಿಕತೆಯ ಅಪಾಯ ಎದುರಿಸುತ್ತಿದ್ದಾರೆ.

    ಆಹಾರ ಪದಾರ್ಥಗಳ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ. ಬೇಕರಿಗಳನ್ನು ಮುಚ್ಚಲಾಗಿದೆ. ಆಹಾರ ಧಾನ್ಯಗಳ ಬೆಲೆ ಶೇ 700ರಷ್ಟು ಹೆಚ್ಚಾಗಿದ್ದು, ಹಸಿವಿನ ವಿರಾಟ್ ಸ್ವರೂಪವು ಇಲ್ಲಿ ಕಂಡುಬರುತ್ತಿದೆ. ದಿನಕ್ಕೆ ಒಂದು ಹೊತ್ತು ಕೂಡ ಊಟ ಸಿಗದವರ ಸಂಖ್ಯೆ ದೊಡ್ಡದಿದೆ. ಹಸಿವು ತಾಳಲಾಗದೇ ಮಕ್ಕಳು ಆಕ್ರಂದನ ಮಾಡುವುದು, ‍ಪೋಷಕರು ತಮ್ಮ ಮಕ್ಕಳಿಗಾಗಿ ಹಿಡಿ ಅನ್ನ ನೀಡುವಂತೆ ಅಧಿಕಾರಿಗಳನ್ನು ಬೇಡಿಕೊಳ್ಳುವುದು ಇಲ್ಲಿ ಸಾಮಾನ್ಯ ದೃಶ್ಯಗಳಾಗಿವೆ.

    ಕೆಲವು ಸ್ವಯಂ ಸೇವಾ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ಇಲ್ಲಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ಶಮನ ಮಾಡಲು ಒಂದಿಷ್ಟು ಪ್ರಯತ್ನ ನಡೆಸುತ್ತಿವೆ. ಅದಕ್ಕಾಗಿ ಹಲವು ದೇಶಗಳು ಧನಸಹಾಯ ಮಾಡುತ್ತಿವೆ. ಆದರೆ, ಇಲ್ಲಿನ ಪರಿಸ್ಥಿತಿಯ ತೀವ್ರತೆಗೆ ತಕ್ಕಂತೆ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ರಕ್ಷಣಾ ಕಾರ್ಯದಲ್ಲಿ, ಆರೋಗ್ಯ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿಯೂ ಹಸಿದ ಹೊಟ್ಟೆಯಲ್ಲಿಯೇ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆಹಾರ ಪದಾರ್ಥ, ಪರಿಹಾರ ಸಾಮಗ್ರಿಯನ್ನು ಹೊತ್ತ ಟ್ರಕ್‌ಗಳು ಆಗಮಿಸುತ್ತಿದ್ದಂತೆಯೇ ಜನ ಅವುಗಳನ್ನು ಮುತ್ತಿಕೊಳ್ಳುವ, ನಿರಾಶ್ರಿತರಿಗೆ ಪೂರೈಸಲಾಗುವ ಆಹಾರಕ್ಕಾಗಿ ಪೈಪೋಟಿ ನಡೆಸುವ ಚಿತ್ರಗಳು, ವಿಡಿಯೊಗಳು ಅಲ್ಲಿನ ಪರಿಸ್ಥಿತಿಯ ತೀವ್ರತೆಯನ್ನು ಹೇಳುತ್ತಿವೆ.

    ಆಹಾರಕ್ಕಾಗಿ, ಜೀವ ಉಳಿಸುವಂಥ ಮಾನವೀಯ ನೆರವಿಗಾಗಿ ಆಸೆಯಿಂದ ಎದುರುನೋಡುತ್ತಿರುವ, ಎಲುಬಿನ ಹಂದರವಾಗಿರುವ ಮಕ್ಕಳ ದೈನ್ಯ, ನೋವು ತುಂಬಿದ ಕಣ್ಣುಗಳು ಗಾಜಾ ಪಟ್ಟಿಯ ಪರಿಸ್ಥಿತಿಗೆ, ಮನುಷ್ಯ ನಿರ್ಮಿತ ಬಿಕ್ಕಟ್ಟಿನ ತೀವ್ರತೆಗೆ, ದೇಶ–ದೇಶಗಳ ನಡುವಿನ ಯುದ್ಧ, ಅಸಹನೆ, ಆಕ್ರಮಣಗಳಿಂದ ಉಂಟಾಗುವ ಪರಿಣಾಮಗಳಿಗೆ ಸಂಕೇತದಂತಿವೆ.

    ನೆರವು ತಡೆಯುತ್ತಿರುವ ಇಸ್ರೇಲ್‌

    ಗಾಜಾ ಪಟ್ಟಿಯ ಶೇ 86ರಷ್ಟು ಭೂಭಾಗದ ಮೇಲೆ ನಿಯಂತ್ರಣ ಹೊಂದಿರುವ ಇಸ್ರೇಲ್‌, ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತ ಪ್ಯಾಲೆಸ್ಟೀನಿಯನ್ನರಿಗೆ ಆಹಾರ ವಸ್ತುಗಳು ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಪೂರೈಸುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕ ಆರೋಪಿಸಿದೆ. ಕಳೆದ ಕೆಲವು ವಾರಗಳಿಂದ ಗಾಜಾ ಪಟ್ಟಿಗೆ ಸ್ವಲ್ಪ ಪ್ರಮಾಣದಲ್ಲಿ ನೆರವು ತಲುಪುವುದಕ್ಕೆ ಮಾತ್ರ ಇಸ್ರೇಲ್‌ ಅವಕಾಶ ನೀಡಿದೆ. ಆದರೆ, ಅಲ್ಲಿ ಹೆಚ್ಚುತ್ತಿರುವ ಹಸಿವನ್ನು ತಡೆಯಲು ಇದು ಸಾಕಾಗುತ್ತಿಲ್ಲ ಎಂದು ಅದು ಹೇಳಿದೆ. ಯುದ್ಧ ಆರಂಭವಾದ, 2023ರ ಅಕ್ಟೋಬರ್‌ 7ಕ್ಕೂ ಮೊದಲು ಪ್ರತಿ ದಿನ 500 ಟ್ರಕ್‌ಗಳು ಗಾಜಾವನ್ನು ಪ್ರವೇಶಿಸುತ್ತಿದ್ದವು. ಅಂದರೆ ಪ್ರತಿ ತಿಂಗಳು 15 ಸಾವಿರದಷ್ಟು ಟ್ರಕ್‌ಗಳು ನೆರವಿನ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದವು. ಯುದ್ಧದ ನಂತರ ಇದಕ್ಕೆ ಇಸ್ರೇಲ್‌ ತಡೆಯೊಡ್ಡಿತ್ತು. ಕಡಿಮೆ ಸಂಖ್ಯೆಯ ಟ್ರಕ್‌ಗಳಿಗಷ್ಟೇ ಅವಕಾಶ ನೀಡುತ್ತಿತ್ತು.

    ಈಗ ಅಂತರರಾಷ್ಟ್ರೀಯ ಒತ್ತಡದ ಬಳಿಕ ಆಹಾರ ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳಿಗೆ ಗಾಜಾದತ್ತ ತೆರಳಲು ಮತ್ತು ವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಅಗತ್ಯ ವಸ್ತುಗಳನ್ನು ನಿರಾಶ್ರಿತ ಶಿಬಿರಗಳ ವ್ಯಾಪ್ತಿಯಲ್ಲಿ ಹಾಕಲು ಇಸ್ರೇಲ್‌ ಅವಕಾಶ ನೀಡಿದೆ ಎಂದು ವರದಿಯಾಗಿದೆ.

    ಚಿಕಿತ್ಸೆಗಾಗಿ ಬ್ರಿಟನ್‌ಗೆ

    ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮತ್ತು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 30ರಿಂದ 50 ಮಕ್ಕಳನ್ನು ಮುಂದಿನ ವಾರಗಳಲ್ಲಿ ಗಾಜಾದಿಂದ ಬ್ರಿಟನ್‌ಗೆ ಕರೆದುಕೊಂಡು ಬಂದು ಸರ್ಕಾರ ಚಿಕಿತ್ಸೆ ನೀಡಲಿದೆ ಎಂದು ಬಿಬಿಸಿ ವರದಿ ಮಾಡಿದೆ.

    ಹಮಾಸ್‌ ನೇತೃತ್ವದ ಆರೋಗ್ಯ ಸಚಿವಾಲಯದ ವೈದ್ಯರು ಆಯ್ಕೆ ಮಾಡಿದ ಮಕ್ಕಳನ್ನು ಕರೆದುಕೊಂಡು ಬಂದು ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ಪ್ರಯಾಣದ ಸಮನ್ವಯವನ್ನು ವಿಶ್ವ ಆರೋಗ್ಯ ಸಂಸ್ಥೆ ಮಾಡಲಿದೆ. 

    ಅಮೆರಿಕದ ಮೌನಕ್ಕೆ ಅತೃಪ್ತಿ

    ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಉಕ್ರೇನ್‌ ಸೈನಿಕರು ಹಾಗೂ ಜನರು ಸಾಯುತ್ತಿರುವುದರ ಬಗ್ಗೆ ಮಾತನಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮೌನ ತಾಳಿದ್ದಾರೆ. ಬದಲಿಗೆ, ಅಮೆರಿಕ ಸರ್ಕಾರ ಇಸ್ರೇಲ್‌ ಅನ್ನು ಬೆಂಬಲಿಸುತ್ತಿರುವುದು ಪ್ಯಾಲೆಸ್ಟೀನ್‌ನ ಬೆಂಬಲಕ್ಕೆ ನಿಂತಿರುವ ರಾಷ್ಟ್ರಗಳು ಹಾಗೂ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

    ಆಧಾರ: ಇಂಟರ್‌ನ್ಯಾಷನಲ್ ರೆಸ್ಕ್ಯೂಕಮಿಟಿ, ಬಿಬಿಸಿ, ರಾಯಿಟರ್ಸ್‌, ವಿಶ್ವಸಂಸ್ಥೆಯ ವರದಿಗಳು, ದಿ ನ್ಯೂಯಾರ್ಕ್‌ ಟೈಮ್ಸ್‌