ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದಲ್ಲಿ ಚಿನ್ನಾಭರಣ ಖರೀದಿಸುವ ಭರದಲ್ಲಿ ಉಷಾ ಎಂಬುವವರು ಅಂಗಡಿಯಲ್ಲೇ ಬಿಟ್ಟು ಹೋಗಿದ್ದ ಮಗುವನ್ನು ಸಿದ್ದಯ್ಯ ನಗರದ ಭವಾನಿ ಎಂಬುವವರು ರಕ್ಷಿಸಿ ಪೊಲೀಸ್ ಠಾಣೆಯಲ್ಲಿ ಮತ್ತೆ ಹಸ್ತಾಂತರಿಸಿದರು.
ನಗರದ ಗಾಂಧಿ ಬಜಾರ್ನ ಮಳಿಗೆಗೆ ಬಂದಿದ್ದ ಉಷಾ, ಎರಡೂವರೆ ವರ್ಷದ ಮಗಳು ಸುಪ್ರಿಯಾಳನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಮರೆತು ನಿರ್ಗಮಿಸಿದ್ದರು. ಮಗುವು ಅಳುತ್ತಿರುವುದನ್ನು ಕಂಡ ಭವಾನಿ ಸಂತೈಸಿದರು. ಪೋಷಕರು ಪತ್ತೆಯಾಗದ್ದರಿಂದ ತಮ್ಮೊಂದಿಗೆ ಕರೆದೊಯ್ದಿದ್ದರು.
ಮಗುವನ್ನು ಮಳಿಗೆಯಲ್ಲಿ ಮರೆತು ಬಂದಿರುವ ಸಂಗತಿಯನ್ನು ಮುಚ್ಚಿಟ್ಟ ತಾಯಿಯು, ಮಗು ಕಳುವಾಗಿದೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಡಿದಾಗ, ಮಗುವನ್ನು ಭವಾನಿ ಅವರು ಕರೆದೊಯ್ದಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಗಿತ್ತು. ಆಕೆಯೇ ಮಗುವನ್ನು ಅಪಹರಿಸಿದ್ದಾರೆಂದು ಭಾವಿಸಲಾಗಿತ್ತು.
ಆದರೆ, ಅವರು ಮಗುವಿಗೆ ಊಟ ಮಾಡಿಸಿ, ನಂತರ ಪೊಲೀಸರಿಗೆ ಒಪ್ಪಿಸಲು ಠಾಣೆಗೆ ಬಂದರು. ಆಗ, ‘ಮಗು ಅಪಹರಣವಾಗಿಲ್ಲ. ಬದಲಿಗೆ ತಾಯಿಯೇ ಮರೆತು ಬಂದಿದ್ದಾರೆ’ ಎಂಬುದು ದೃಢವಾಯಿತು. ವಿಷಯ ಮನವರಿಕೆಯಾದ ಪೊಲೀಸರು ಮಗುವನ್ನು ತಾಯಿಯ ಸುಪರ್ದಿಗೆ ನೀಡಿದರು.

Leave a Reply to Lokesh Cancel reply