Tag: anupama womens monthly

  • “ಬೆಳ್ಳಿ ಹಬ್ಬ ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” 
ಖ್ಯಾತ ಸಾಹಿತಿ ಡಾ| ಕೆ. ಶರೀಫಾ​

    “ಬೆಳ್ಳಿ ಹಬ್ಬ ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” ಖ್ಯಾತ ಸಾಹಿತಿ ಡಾ| ಕೆ. ಶರೀಫಾ​

    ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.

    “ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.


    “ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” ಎಂದು ಹಾರೈಸಿದರು.

    ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ಸಂಪಾದಕಿ ಶಹನಾಜ್ ಎಂ. “25 ವರ್ಷಗಳ ಹಾದಿಯನ್ನು ವಿವರಿಸಿದ, ಪತ್ರಿಕೆ ಒಂದು ಭಾರತವಾಗಿ ಬೆಳೆದಿದೆ. ಇದರಲ್ಲಿ ಎಲ್ಲಾ ವರ್ಗದ ಓದುಗರು, ಲೇಖಕರು ಮತ್ತು ಪ್ರೋತ್ಸಾಹಕರನ್ನು ಹೊಂದಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತವರನ್ನು ನೆನಪಿಸುತ್ತಾ, ನಾವು ನಮ್ಮ ನೈತಿಕತೆಯನ್ನು ಬಿಟ್ಟು ಜಾಹಿರಾತಿಗೆ ಕೈ ಒಡ್ಡಿಲ್ಲ ಎಂದರು. ಅನುಪಮ ಮಾಸಿಕ
    ಡಿಜಿಟಲ್ ರೂಪದಲ್ಲಿ ಯೂ ಬರಲಿದೆ”
    ಎಂದರು.

    ಬೆಥನಿ ಸಂತ ತೆರೇಸಾ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ಲೂರ್ಡ್ಸ್: “ಅನುಪಮ ಪತ್ರಿಕೆ ಒಂದು ನಂಬಿಕೆಯ ಅಡಿಗಲ್ಲಾಗಿದೆ. ಮೌಲ್ಯಗಳಿಗೆ ಬೆಲೆ ನೀಡಿ, ಜವಾಬ್ದಾರಿಯುತ ಪತ್ರಿಕೋದ್ಯಮ ನಡೆಸುತ್ತಿದೆ. ಹಲವಾರು ಮಹಿಳೆಯರ ಕನಸು ಗಳಿಗೆ ಆಧಾರವಾಗಿ, ನೋವು ನಲಿವುಗಳನ್ನು ಹಂಚುತ್ತಿದೆ. ಹೀಗಾಗಿ ಈ ಪತ್ರಿಕೆ ಮಹಿಳೆಯರ ಜೊತೆಗಾತಿಯಾಗಿದೆ” ಎಂದರು.

    ಆಪ್ತ ಸಮಾಲೋಚಕಿ ಡಾ। ರುಕ್ಸಾನ ಮಾತನಾಡುತ್ತಾ, “ವಿದ್ಯಾಭ್ಯಾಸ ಮಾಡಿದ ಹುಡುಗಿಯರನ್ನು ತಮಾಷೆ ಮಾಡುವ ಕಾಲದಲ್ಲಿ ಒಂದು ಯಶಸ್ವೀ ಪತ್ರಿಕೆ ನಡೆಸುತ್ತಿರುವುದು ದೊಡ್ಡಸಾಧನೆ” ಎಂದರು. “ಮಹಿಳೆಯೊಬ್ಬಳ ಸಹನೆ, ತಾಳ್ಮೆಯ ಎದುರು, ಯಾವ ಪುರುಷನೂ ಇಲ್ಲ. ಇಂದು ಮಹಿಳೆ ಎಷ್ಟೇ ದೊಡ್ಡ ಹುದ್ದೆಗೆ ಏರಿದರೂ, ಮಹಿಳೆಯ ಜವಾಬ್ದಾರಿಯನ್ನು ಮರೆತಿರುವುದು ಸಾಧ್ಯವಿಲ್ಲ” ಎಂದರು. “ಬರವಣಿಗೆ ಶಾಶ್ವತವಾಗಿದೆ. ಇಂದು ಮುದ್ರಣ ಮಾಧ್ಯಮ ಮಾಯವಾಗುವಂತಿದೆ. ಆದರೆ ಹಾಗಾಗುವುದು ಬೇಡ. ಇಂದು ಬರೆದಿರುವುದು ಮುಂದಿನ ಕಾಲಕ್ಕೂ ಉಳಿಯಲಿ” ಎಂದರು.

    ಮುಂಬೈನ ಹಿರಿಯ ವಕೀಲೆ, ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ತನ್ನ ಮನದಾಳದ ಮಾತು ಹಂಚಿಕೊಂಡರು
    ಹಿರಿಯ ಲೇಖಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ. ಅನುಪಮದ ಹಿರಿಯ ಓದುಗ ಬಳಗದ ಆಯೇಷಾ ಇಬ್ರಾಹಿಂ ಶಫಿರವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಅನುಪಮ ಓದುಗರಾದ ಶಿಹನಾ ಬಿ.ಮ್., ಶಮೀಮಾ ಕುತ್ತಾರ್ ಹಾಗೂ ಶ್ರೀಮತಿ ಸುಖಾಲಕ್ಷಿ ತಮ್ಮ ಅನಿಸಿಕೆಗಳನ್ನು ನೀಡಿದರು.

    ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣರನ್ನು, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ಚೇರ್ ಮೆನ್ ಅಶ್ಫಾಕ್ ಅಹಮದ್ ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.

    ಅನುಪಮ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡುತ್ತಾ “ಮಹಿಳೆ ಒಂದು ಶಕ್ತಿ. ಮಹಿಳೆಯರಿಗೆ ಇಂದು ಮನೆಯಲ್ಲಿ ಬಹಳಷ್ಟು ಮಾನಸಿಕ ಕಿರುಕುಳ, ಆರ್ಥಿಕ ಒತ್ತಡ, ನಿರ್ಬಂಧನೆ ಕಾಡುತ್ತಿದೆ. ಅವೆಲ್ಲವನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕಾಗಿದೆ. ಮನೆಯಲ್ಲಿ ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳೆದುರು ಗಂಡ-ಹೆಂಡತಿ ಜಗಳ ನಿಲ್ಲಿಸಬೇಕು” ಎಂದು ಕಿವಿಮಾತು ಹೇಳಿದರು.

    ಸಭೆಯ ಪ್ರಾರಂಭದಲ್ಲಿ ಬ್ರೈಟ್ ಮಾಡೆಲ್ ಸ್ಕೂಲ್ ವಿದ್ಯಾರ್ಥಿಗಳು ಸ್ತುತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

    “ಇತಿಹಾಸದ ಪ್ರತಿಯೊಂದು ಕ್ರಾಂತಿಯ ಹಿಂದೆ ಸಾಹಿತ್ಯದ ಪ್ರೇರಣೆ ಇದೆ. ಹಾಗೆಯೇ ಮಹಿಳೆಯರೇ ಸೇರಿ ಒಂದು ಪತ್ರಿಕೆನ್ನು 25ವರ್ಷ ನಡೆಸುತ್ತಿರುವುದು ಕೂಡಾ ಒಂದು ಕ್ರಾಂತಿ” ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಕೇಂದ್ರ ಸಮಿತಿ ಸದಸ್ಯೆ ಸಮೀನಾ ಅಫ್ಸಾನ್ ಹೇಳಿದರು. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    “ಬರವಣಿಗೆ ಎಲ್ಲಾ ಕಾಲಕ್ಕೂ ಒಂದು ಸಾಧನೆ. ಮಹಿಳೆಯರು ಬರವಣಿಗೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ವೇದಿಕೆ ಪಡೆದುಕೊಂಡಿರುವುದು ಒಂದು ಕ್ರಾಂತಿಯಾಗಿದೆ. ಮಹಿಳೆಯರು ವೇದಿಕೆಯನ್ನು ಇನ್ನಷ್ಟು ಬಳಸಿಕೊಳ್ಳಬೇಕು” ಎಂದರು. ಅನುಪಮ “ಪತ್ರಿಕೆ ಎಲೆ ಮರೆಯ ಕಾಯಿಗಳನ್ನು ಕೂಡಾ ಮುನ್ನೆಲೆಗೆ ತಂದು ಅವರಿಗೆ ಧ್ವನಿ ನೀಡಿದೆ. ಈ ಧ್ವನಿ ಇಂದು ಶಕ್ತಿಯಾಗಿ ಬೆಳೆದಿದೆ. ಇದು ಎಲ್ಲಾ ಮಹಿಳೆಯರಿಗೆ ಮಾರ್ಗದರ್ಶಿ” ಎಂದರು.

    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಾದ ನಿವೃತ್ತ ಶಿಕ್ಷಕಿ ಲೇಖಕಿ ಕೆ.ಎ., ಸಾಮಾಜಿಕ ಕಾರ್ಯಕರ್ತೆ ಹರಿಣಿ, ರೋಹಿಣಿ, ಸಮಾಜ ಸೇವಕಿ ಹಿರಿಯ ಓದುಗೆ ಆಯಿಶಾ ಈ. ಶಾಫಿ ಅವರನ್ನು ಸನ್ಮಾನಿಸಲಾಯಿತು.

    ಅನುಪಮ ಉಪಸಂಪಾದಕಿ ಸಬೀಹಾ ಫಾತಿಮಾ ಅತಿಥಿಗಳನ್ನು ಸ್ವಾಗತಿಸಿದರು. ಅಸ್ಮತ್ ವಗ್ಗ ಮತ್ತು ಲುಬ್ನಾ ಝಕೀಯ ಕಾರ್ಯಕ್ರಮ ನಿರೂಪಿಸಿದರು.

  • ಮಂಗಳೂರು ಪುರಭವನದಲ್ಲಿ ನಡೆಯಲಿದೆ ಅನುಪಮ ಓದುಗರ 
“ಬೆಳ್ಳಿ ಹಬ್ಬ ಸಮಾವೇಶ”

    ಮಂಗಳೂರು ಪುರಭವನದಲ್ಲಿ ನಡೆಯಲಿದೆ ಅನುಪಮ ಓದುಗರ “ಬೆಳ್ಳಿ ಹಬ್ಬ ಸಮಾವೇಶ”

    ಅನುಪಮ ಮಹಿಳಾ ಮಾಸಿಕಕ್ಕೆ 25 ವರ್ಷ ಪೂರ್ಣಗೊಂಡ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದೆ. ಈ ವಿಶೇಷಾಂಕವನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಕಾವೇರಿ ನಿವಾಸದಲ್ಲಿ ಇದೀಗಾಗಲೇ ಬಿಡುಗಡೆಗೊಳಿಸಿದ್ದಾರೆ.

    ಈ ಬೆಳ್ಳಿ ಹಬ್ಬದ ಪ್ರಯುಕ್ತ ಮಂಗಳೂರಿನ ಪುರಭವನದಲ್ಲಿ ಜನವರಿ 15ರ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಅನುಪಮ ಮಹಿಳಾ ಓದುಗರ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಮತ್ತು ಬೆಳ್ಳಿ ಹಬ್ಬದ ಸಂಭ್ರಮವನ್ನು ಖ್ಯಾತ ಸಾಹಿತಿಗಳಾದ ಶ್ರೀಮತಿ ಡಾ| ಕೆ. ಶರೀಫಾ ಉದ್ಘಾಟಿಸಲಿದ್ದಾರೆ.

    ಗೌರವ ಅತಿಥಿಗಳಾಗಿ, ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಡಾ| ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಮಂಗಳೂರು ನಗರ ಪೊಲೀಸ್ (ಸಂಚಾರ ವಿಭಾಗ) ACP ನಜ್ಮಾ ಫಾರೂಕಿ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷೆ ಮತ್ತು ಮಾಜಿ ವಿಧಾನಸಭೆ ಸದಸ್ಯೆ ಒಐಂ ಶಕುಂತಲಾ ಶೆಟ್ಟಿ, ಬೆಥನಿ ಸೈಂಟ್ ತೆರೇಸಾ ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಲೂರ್ಡ್ಸ್, ಅಂತರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ, ಆಪ್ತ ಸಮಾಲೋಚಕಿ ಡಾ| ರುಕ್ಸಾನ ಭಾಗವಹಿಸಲಿದ್ದಾರೆ.


    ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಕೆ.ಎ. ರೋಹಿಣಿ, ಸರಸ ಬಿ. ಕೃಷ್ಣ ಕಮ್ಮರಡಿ, ಸಮಾಜ ಸೇವಕಿ ಹರಿಣಿ ಕೆ., ಆಯಿಶಾ ಇ. ಶಾಫಿ ಅವರನ್ನು ಸನ್ಮಾನಿಸಲಾಗುವುದು. ಅದರೊಂದಿಗೆ ಕಾರ್ಯಕ್ರಮದಲ್ಲಿ ಓದುಗರು ತಮ್ಮ ಅನಿಸಿಕೆಯನ್ನು ನೀಡಲಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ.

    ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್, ಮಹಿಳಾ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಶಾನ್ ವಹಿಸಲಿದ್ದಾರೆ.

    ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶಹನಾಝ್ ಎಂ. ಮಾತನಾಡಿದ್ದು, ಉಪ ಸಂಪಾದಕಿ ಸಬೀಹಾ ಫಾತಿಮಾ ಸ್ವಾಗತಿಸಿದ್ದಾರೆ. ಉಳಿದಂತೆ ಕಾರ್ಯಕ್ರಮದ ಸ್ವಾಗತ ಸಮತಿ ಸದಸ್ಯರುಗಳಾದ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಸದಸ್ಯೆ ಲೇಖಕಿ ಶ್ರೀಮತಿ ಸುಖಾಲಾಕ್ಷಿ, ಹಿದಾಯ ಫೌಂಡೇಶನ್ ಅಧ್ಯಕ್ಷೆ ಖುರ್ಷಿದಾ ಹಾಗೂ ಸಾಮಾಜಿಕ ಕಾರ್ಯಕರ್ತೆ ಹರಿಣಿ ಕೆ. ಉಪಸ್ಥಿತರಿದ್ದರು.

    ಅನುಪಮ ಕಿರು ಪರಿಚಯ: ಪತ್ರಿಕೋದ್ಯಮವು ಪುರುಷರ ಕ್ಷೇತ್ರವೆಂಬ ಮಾತು ತುಂಬಾ ಪುರಾತನವಾಗಿದೆ. ಈಗ ಮಹಿಳೆಯರು ಈ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ನೂರಾರು ಮಹಿಳಾ ಪತ್ರಕರ್ತೆಯರು ತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿಯೂ ಸ್ತ್ರೀಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ಹೀಗಿದ್ದರೂ ಮುಸ್ಲಿಮ್ ಮಹಿಳೆಯರ ಪಾಲುದಾರಿಕೆ ತೀರಾ ನಗಣ್ಯವೆನ್ನಬಹುದು.

    ಇಂತಹ ಸಂದರ್ಭದಲ್ಲಿ 2000 ಇಸವಿಯಲ್ಲಿ ಮಂಗಳೂರಿನಿಂದ ಮುಸ್ಲಿಮ್ ಸ್ತ್ರೀಯರಿಂದಲೇ ಅನುಪಮ’ ಎಂಬ ಮಾಸ ಪತ್ರಿಕೆ ಆರಂಭಗೊಂಡಿತು. ಇದು ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟವಾಗುತ್ತಿರುವ ಕೌಟುಂಬಿಕ ಪತ್ರಿಕೆ. ಅನುಪಮ’ ಜಾತಿ, ಜನಾಂಗ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಪ್ರತಿಭಾವಂತರಿಗೆ ಧ್ವನಿ ನೀಡಿದೆ.

    ಇಂದು, ಹೆಚ್ಚಿನ ಪತ್ರಿಕೆಗಳು ವಿಷಯ ಲಂಪಟತನ, ಸ್ತ್ರೀ ಸೌಂದರ್ಯ, ನಗ್ನ ಪ್ರಿಯತೆಯನ್ನು ನೆಚ್ಚಿನ ಸುದ್ದಿಯಾಗಿಸಿರುವುದು ಎಲ್ಲರೂ ಬಲ್ಲರು. ಆದರೆ ಅನುಪಮ' ಶುದ್ಧ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡಿದೆ. ಹಿಂಸೆ, ಕಲಹ, ಒಡಕು, ಕೋಮು ಪಕ್ಷಪಾತ ಇತ್ಯಾದಿ ಕೆಡುಕುಗಳುಅನುಪಮ’ಕ್ಕೆ ಅಪರಿಚಿತವಾಗಿವೆ. ಇಂದು ಮಹಿಳೆಯರ ಸುಧಾರಣೆಯ ಹೆಸರಲ್ಲಿ ಶೋಷಣೆ ನಡೆಯುವುದೇ ಹೆಚ್ಚು. ಮನರಂಜನೆಯ ಹೆಸರಿನಲ್ಲಿ ಅಶ್ಲೀಲತೆ ದರ್ಶನವಾಗುವುದು ಜಾಸ್ತಿ.

  • ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ 
ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಮಹಿಳೆಯರೇ ನಡೆಸುತ್ತಿರುವ ರಾಜ್ಯದ ಏಕೈಕ ಮಹಿಳಾ ಮಾಸಿಕ ಅನುಪಮ ಮಾಸಿಕಕ್ಕೆ 25 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ 25 ವರ್ಷಗಳ ಯಶಸ್ಸಿನ ಹಿನ್ನೋಟವಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಗುರುವಾರ ಬಿಡುಗಡೆ ಮಾಡಿದರು.

    ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಪತ್ರಿಕೋದ್ಯಮದಲ್ಲಿ ಮುಸ್ಲಿಂ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಈ ನಡುವೆ ಕೂಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ ಸಮುದಾಯದ ಮಹಿಳೆಯರೇ ನಡೆಸುತ್ತಿರುವ ಅನುಪಮ ಮಹಿಳಾ ಮಾಸಿಕವು 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ”ಎಂದು ಅಭಿನಂದನೆ ಸಲ್ಲಿಸಿದರು.

    ಬಳಿಕ ಮಾತನಾಡಿದ ಅನುಪಮ ಸಂಪಾದಕಿ ಶಹನಾಝ್ ಎಂ, “ರಾಜ್ಯದಲ್ಲಿ ಮಹಿಳೆಯರಿಗೆ ಗ್ಯಾರಂಟಿಗಳನ್ನು ಘೋಷಿಸಿ, ಅದನ್ನು ಅನುಷ್ಠಾನಕ್ಕೆ ತಂದ ನಂತರ ಮಹಿಳೆಯರ ಬದುಕಿನಲ್ಲಿ ಹಲವಾರು ಬದಲಾವಣೆ ಆಗಲು ನೆರವಾಗಿದೆ. ಮಹಿಳೆಯರ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನುಪಮ ಬಳಗ ಹಾಗೂ ಎಲ್ಲ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಎಂಟಿಸಿ ನಿಗಮದ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿಯರಾದ ಸಮೀನಾ ಉಪ್ಪಿನಂಗಡಿ, ಸಾಜಿದಾ ಮೂಮಿನ್, ಕುಲ್ಸುಮ್ ಅಬೂಬಕ್ಕರ್, ಎಸ್.ಎಂ. ಮುತ್ತಲಿಬ್, ಫೈಝಲ್ ಇಸ್ಮಾಯೀಲ್, ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.

    ಬಳಿಕ ಅನುಪಮ ಬಳಗವು ಈ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರಕಾರದಲ್ಲಿ ವಿವಿಧ ಸ್ಥಾನಗಳನ್ನುಅಲಂಕರಿಸಿರುವ ಹಾಗೂ ಸರಕಾರದ ಅಧಿಕಾರಿಗಳಾಗಿರುವ ಹೊಣೆಗಾರರನ್ನು ಭೇಟಿ ಮಾಡಿ ನೀಡಿತು.

    ಸನ್ಮಾನ್ಯ ನಿಕೇತ್ ರಾಜ್ ಮೌರ್ಯ [ಉಪಾಧ್ಯಕ್ಷರು, (BMTC) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ (KPYCC) ರಾಜ್ಯ ಪ್ರಧಾನ ಕಾರ್ಯದರ್ಶಿ]

    ಸನ್ಮಾನ್ಯ ರಿಜ್ವಾನ್ ಅರ್ಷದ್ [ಸದಸ್ಯರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಾಗೂ MLA ಶಿವಾಜಿ ನಗರ, ಬೆಂಗಳೂರು]

    ಸನ್ಮಾನ್ಯ ನಸೀರ್ ಅಹ್ಮದ್ [ವಿಧಾನ ಪರಿಷತ್ ಸದಸ್ಯ (MLC) ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ]

    ಸನ್ಮಾನ್ಯ ಅಬ್ದುಲ್ ಅಹದ್ [DIG, ಪೊಲೀಸ್ ಉಪ ಮಹಾನಿರೀಕ್ಷಕರು, ಕರ್ನಾಟಕ ಸರಕಾರ]